ನಮಸ್ಕಾರ, ಕಾಲಿಸ್ಪೆರಾ(ಶುಭ ಮಧ್ಯಾಹ್ನ), ಸತ್ ಶ್ರೀ ಅಕಾಲ್, ಜೈ ಗುರುದೇವ್, ಹೇಳಿ "ಧನ್ ಗುರುದೇವ್",

ಸಂಭ್ರಮದ ವಾತಾವರಣ, ಹಬ್ಬದ ಉತ್ಸಾಹ ಇದ್ದಾಗ, ಥಟ್ಟನೆ ಯಾರೊಬ್ಬರೂ ತಮ್ಮ ಕುಟುಂಬ ಸದಸ್ಯರ ನಡುವೆ ಇರಲು ಬಯಸುತ್ತಾರೆ. ನಾನು ಕೂಡ ಇಂದು ನನ್ನ ಕುಟುಂಬ ಸದಸ್ಯರ ನಡುವೆ ಬಂದಿದ್ದೇನೆ. ಇದು ಶ್ರಾವಣ ಮಾಸ. ಒಂದು ರೀತಿಯಲ್ಲಿ ಶಿವನ ತಿಂಗಳು ಎಂದು ಪರಿಗಣಿಸಲಾಗಿದೆ, ಮತ್ತು ನಮ್ಮ ದೇಶವು ಈ ಪವಿತ್ರ ತಿಂಗಳಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ಕತ್ತಲ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ, ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ. ಪ್ರಪಂಚದಾದ್ಯಂತ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ಜನರು ತಮ್ಮ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದಾರೆ. ಜನರು ನಿಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ, ಹೌದಲ್ಲವೇ? ನೀವು ಸಹ ಅನೇಕ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದೀರಿ, ಅಲ್ಲವೇ? ಪ್ರತಿಯೊಬ್ಬ ಭಾರತೀಯನಿಗೂ ಅಭಿನಂದನೆಗಳು ಹರಿದುಬರುತ್ತಿವೆ. ಇಡೀ ಸಾಮಾಜಿಕ ಮಾಧ್ಯಮವು ಅಭಿನಂದನಾ ಸಂದೇಶಗಳಿಂದ ತುಂಬಿ ಹೋಗಿದೆ. ಯಶಸ್ಸು ತುಂಬಾ ಮಹತ್ವದ್ದಾಗಿದ್ದಾಗ, ಆ ಯಶಸ್ಸಿನ ಉತ್ಸಾಹವು ಎಲ್ಲೆಡೆ ಸಮಾನವಾಗಿರುತ್ತದೆ. ನೀವು ವಿಶ್ವದ ಯಾವ ಮೂಲೆಯಲ್ಲಾದರೂ ವಾಸಿಸಬಹುದು, ಆದರೆ ಭಾರತವು ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ ಎಂದು ನಿಮ್ಮ ಮುಖವೇ ನನಗೆ ಹೇಳುತ್ತಿದೆ. ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಮನದಲ್ಲಿ ಮಿಡಿಯುತ್ತದೆ. ಇಂದು, ನಾನು ನಿಮ್ಮೆಲ್ಲರ ನಡುವೆ ಗ್ರೀಸ್‌ನಲ್ಲಿದ್ದೇನೆ, ಮತ್ತೊಮ್ಮೆ, ಚಂದ್ರಯಾನದ ಅದ್ಭುತ ಯಶಸ್ಸಿಗಾಗಿ ನಾನು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಚಂದ್ರನನ್ನು "ಚಂದ ಮಾಮಾ" ಎಂದು ಕರೆಯುವುದನ್ನು ಎಂದು ನಾವು ಬಾಲ್ಯದಿಂದಲೂ ಕೇಳುತ್ತಿದ್ದೇವೆ. ಏನು ಹೇಳುತ್ತಿದ್ದರೂ? ಚಂದಾ ಮಾಮಾ! ಚಂದ್ರಯಾನಕ್ಕೆ ಸಂಬಂಧಿಸಿದಂತೆ ಕೆಲವರು ಚಿತ್ರಗಳನ್ನು ಹಂಚಿಕೊಳ್ಳುತ್ತಿರುವುದನ್ನು ನೀವು ನೋಡಿರಬಹುದು. ನಮ್ಮ ಭೂಮಿ ತಾಯಿಯು ʻಚಂದ್ರಯಾನʼವನ್ನು ತನ್ನ ಸಹೋದರ ಚಂದ್ರನಿಗೆ ರಾಖಿಯಂತೆ  ಕಳುಹಿಸಿದ್ದಾಳೆ. ಚಂದ್ರನು ಆ ರಾಖಿಯ ಘನತೆಯನ್ನು ಎಷ್ಟು ಸುಂದರವಾಗಿ ಗೌರವಿಸಿದ್ದಾನೆ ನೋಡಿ ಎಂಬಂತೆ ಬಿಂಬಿಸುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ರಾಖಿ ಹಬ್ಬವೂ ಸಮೀಪಿಸುತ್ತಿದೆ. ನಾನು ನಿಮ್ಮೆಲ್ಲರಿಗೂ ಮುಂಚಿತವಾಗಿ ರಕ್ಷಾಬಂಧನಕ್ಕಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ನನ್ನ ಕುಟುಂಬ ಸದಸ್ಯರೇ,

ನಾನು ಪ್ರಪಂಚದಾದ್ಯಂತದ ಅನೇಕ ದೇಶಗಳಿಗೆ ಪ್ರಯಾಣಿಸಿದ್ದೇನೆ, ಆದರೆ ಗ್ರೀಸ್‌ಗೆ, ಅಥೆನ್ಸ್‌ಗೆ ಭೇಟಿಯು ನನ್ನ ಪಾಲಿಗೆ ಬಹಳ ವಿಶೇಷವಾದುದು. ಮೊದಲನೆಯದಾಗಿ, ಅಥೆನ್ಸ್ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಎರಡನೆಯದಾಗಿ, ನಾನು ವಿಶ್ವದ ಅತ್ಯಂತ ಹಳೆಯ ಜೀವಂತ ನಗರಗಳಲ್ಲಿ ಒಂದಾದ ಕಾಶಿಯನ್ನು ಪ್ರತಿನಿಧಿಸುವ ಸಂಸತ್ ಸದಸ್ಯನಾಗಿದ್ದೇನೆ. ಮೂರನೆಯದಾಗಿ, ಕೆಲವೇ ಜನರಿಗೆ ತಿಳಿದಿರುವ ಮತ್ತೊಂದು ಅಂಶವಿದೆ - ನಾನು ಹುಟ್ಟಿದ ಸ್ಥಳ ಗುಜರಾತ್‌ನ ವಡ್ನಗರ್, ಇದು ಅಥೆನ್ಸ್‌ನಂತೆಯೇ ರೋಮಾಂಚಕ ನಗರವಾಗಿದೆ. ಅಲ್ಲಿಯೂ ಸಹ, ಸಾವಿರಾರು ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ಅವಶೇಷಗಳು ಕಂಡುಬಂದಿವೆ. ಆದ್ದರಿಂದ, ಅಥೆಮನ್ಸ್‌ಗೆ ಭೇಟಿಯು ನನ್ನಲ್ಲಿ ವಿಶೇಷ ಭಾವನೆಯನ್ನು ಮೂಡಿಸಿದೆ. ಜೊತೆಗೆ, ಗ್ರೀಸ್ ಸರ್ಕಾರವು ನನಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದನ್ನು ಎಂದು ನೀವು ನೋಡಿದ್ದೀರಿ. ನೀವೆಲ್ಲರೂ ಈ ಗೌರವಕ್ಕೆ ಅರ್ಹರು; 1.4 ಶತಕೋಟಿ ಭಾರತೀಯರು ಈ ಗೌರವಕ್ಕೆ ಅರ್ಹರು. ನಾನು ಈ ಗೌರವವನ್ನು ಭಾರತ ಮಾತೆಯ ಎಲ್ಲಾ ಮಕ್ಕಳಿಗೆ ಅರ್ಪಿಸುತ್ತೇನೆ.

ಸ್ನೇಹಿತರೇ,

ಇಂದು, ನಾನು ಗ್ರೀಸ್ ಜನರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಲ್ಲಿನ ಕಾಡುಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಾಗ, ಬಹಳ ದೊಡ್ಡ ಸವಾಲು ಎದುರಾಯಿತು. ಈ ದುರಂತದಿಂದಾಗಿ ಗ್ರೀಸ್‌ನಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಗ್ರೀಸ್ ಜನರೊಂದಿಗೆ ನಿಲ್ಲುತ್ತದೆ.

ಸ್ನೇಹಿತರೇ,

ಗ್ರೀಸ್ ಮತ್ತು ಭಾರತದ ನಡುವಿನ ಸಂಬಂಧವು ಶತಮಾನಗಳಷ್ಟು ಹಳೆಯದು. ಈ ಸಂಬಂಧಗಳು ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಬೇರೂರಿವೆ. ಗ್ರೀಕ್ ಇತಿಹಾಸಕಾರರು ಭಾರತೀಯ ನಾಗರಿಕತೆಯ ಬಗ್ಗೆ ವಿಸ್ತಾರವಾದ ವಿವರಣೆಗಳನ್ನು ನೀಡಿದ್ದಾರೆ. ಗ್ರೀಸ್ ಮತ್ತು ಮೌರ್ಯ ಸಾಮ್ರಾಜ್ಯದ ನಡುವೆ ಸ್ನೇಹ ಸಂಬಂಧವಿದೆ. ಚಕ್ರವರ್ತಿ ಅಶೋಕನು ಗ್ರೀಸ್‌ನೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದನು. ವಿಶ್ವದ ಮಹತ್ವದ ಭಾಗದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಗಳು ವ್ಯಾಪಕವಾಗಿ ನಡೆಯದ ಸಮಯದಲ್ಲಿ, ನಮ್ಮ ಎರಡೂ ನಾಗರಿಕತೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಹೊಂದಿದ್ದವು. ಖಗೋಳಶಾಸ್ತ್ರ, ಗಣಿತ, ಕಲೆ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ, ನಮ್ಮ ಎರಡೂ ನಾಗರಿಕತೆಗಳು ಪರಸ್ಪರ ಬಹಳಷ್ಟು ಕಲಿತಿವೆ ಮತ್ತು ಪರಸ್ಪರ ಸಾಕಷ್ಟು ಕಲಿಸಿವೆ.

ನನ್ನ ಕುಟುಂಬ ಸದಸ್ಯರೇ,

ಪ್ರತಿಯೊಂದು ನಾಗರಿಕತೆ ಮತ್ತು ಸಂಸ್ಕೃತಿಯು ಒಂದು ವಿಶಿಷ್ಟ ಗುರುತನ್ನು ಹೊಂದಿದೆ. ಜಗತ್ತನ್ನು ಸಂಪರ್ಕಿಸುವುದೇ ಭಾರತೀಯ ನಾಗರಿಕತೆಯ ಅಸ್ಮಿತೆಯಾಗಿದೆ. ನಮ್ಮ ಗುರುಗಳು ಈ ಭಾವನೆಯನ್ನು ಹೆಚ್ಚು ಬಲಪಡಿಸಿದ್ದಾರೆ. "ಉದಾಸಿಸ್‌" (ಪ್ರಯಾಣಗಳು) ಎಂದು ಕರೆಯಲ್ಪಡುವ ಗುರುನಾನಕ್ ದೇವ್ ಜೀ ಅವರ ವಿಶ್ವ ಪ್ರಯಾಣದ ಉದ್ದೇಶವೇನು? ಈ ಪ್ರಯಾಣಗಳ ಉದ್ದೇಶವು ಮಾನವೀಯತೆಯನ್ನು ಒಂದುಗೂಡಿಸುವ, ಮಾನವ ಕಲ್ಯಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿತ್ತು. ಗುರುನಾನಕ್ ದೇವ್ ಜೀ ಗ್ರೀಸ್‌ನ ವಿವಿಧ ಸ್ಥಳಗಳಿಗೆ ಪ್ರಯಾಣ ಬೆಳೆಸಿದರು. ಗುರುನಾನಕ್ ದೇವ್ ಜೀ ಅವರ ಬೋಧನೆಗಳ ಸಾರವು "ನಾನಕ್ ನಾಮ್ ಚಾರ್ಡಿ ಕಲಾ, ತೇರೆ ಭಾನೆ ಸರ್ಬತ್ ದಾ ಭಾಲಾ" (ನಿಮ್ಮ ಕೃಪೆಯಿಂದ ಎಲ್ಲರೂ ಏಳಿಗೆ ಹೊಂದಲಿ ಮತ್ತು ಆಶೀರ್ವದಿಸಲ್ಪಡಲಿ) ಎನ್ನುವ ಸಂದೇಶದಲ್ಲಿ ಅಡಗಿದೆ. ಸರ್ವರ ಯೋಗಕ್ಷೇಮದ ಈ ಆಕಾಂಕ್ಷೆಯು ಆಗಲೂ ಮುಂದುವರಿಯಿತು ಮತ್ತು ಭಾರತವು ಇದೇ ಮೌಲ್ಯಗಳೊಂದಿಗೆ ಇಂದಿಗೂ ಪ್ರಗತಿ ಸಾಧಿಸುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ತನ್ನ ಔಷಧಗಳ ಪೂರೈಕೆ ಸರಪಳಿಯನ್ನು ಹೇಗೆ ನಿರ್ವಹಿಸಿತು ಎಂಬುದನ್ನು ನೀವು ನೋಡಿದ್ದೀರಿ. ಅಲ್ಲಿ ಅಡೆತಡೆಗಳಿಗೆ ಅವಕಾಶ ಇರಲಿಲ್ಲ. "ಮೇಡ್ ಇನ್ ಇಂಡಿಯಾ" ಕೋವಿಡ್ ಲಸಿಕೆಗಳು ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವವನ್ನು ಉಳಿಸಿವೆ. ಸಾಂಕ್ರಾಮಿಕ ಸಮಯದಲ್ಲಿ, ನಮ್ಮ ಗುರುದ್ವಾರಗಳು (ಸಿಖ್ ದೇವಾಲಯಗಳು) ಲಂಗರ್ (ಸಮುದಾಯ ಭೋಜನ) ಬಡಿಸಿದವು, ದೇವಾಲಯಗಳು ಆಹಾರವನ್ನು ಒದಗಿಸಿದವು ಮತ್ತು ಸಿಖ್ ಯುವಕರು ಮಾನವೀಯತೆಯ ದೀಪಗಳಾದರು. ಒಂದು ರಾಷ್ಟ್ರವಾಗಿ, ಒಂದು ಸಮಾಜವಾಗಿ, ಈ ಕ್ರಿಯೆಗಳು ನಮ್ಮ ಭಾರತೀಯ ಮೌಲ್ಯಗಳ ಸಾರವನ್ನು ಪ್ರತಿಬಿಂಬಿಸುತ್ತವೆ.

ಸ್ನೇಹಿತರೇ,

ಇಂದು, ಜಗತ್ತು ಹೊಸ ವಿಶ್ವ ಪ್ರವೃತ್ತಿಯತ್ತ ಸಾಗುತ್ತಿದೆ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳ ಜೊತೆಗೆ, ಜಾಗತಿಕ ರಂಗದಲ್ಲಿ ಅದರ ಪಾತ್ರವೂ ವೇಗವಾಗಿ ವಿಕಸನಗೊಳ್ಳುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ʻಬ್ರಿಕ್ಸ್ʼ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ನಾನು ಇಲ್ಲಿಗೆ ಬಂದಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಜಿ-20 ಶೃಂಗಸಭೆ ಭಾರತದಲ್ಲಿ ನಡೆಯಲಿದೆ. ಜಿ-20 ಶೃಂಗಸಭೆಯ ಆತಿಥ್ಯ ವಹಿಸಿ, ಭಾರತ ಆಯ್ಕೆ ಮಾಡಿದ ವಿಷಯವು ಜಾಗತಿಕ ಸಹೋದರತ್ವದ ಮನೋಭಾವವನ್ನು ಒಳಗೊಂಡಿದೆ. "ವಸುದೈವ ಕುಟುಂಬಕಂ" -"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ", ಎಂಬ ಭಾರತದ ಜಿ-20 ಅಧ್ಯಕ್ಷತೆಯ ಥೀಮ್, ಇಡೀ ಪ್ರಪಂಚದ ಭವಿಷ್ಯವು ಪರಸ್ಪರ ಹಂಚಲ್ಪಟ್ಟಿದೆ ಮತ್ತು ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ, ನಮ್ಮ ನಿರ್ಧಾರಗಳು ಮತ್ತು ಜವಾಬ್ದಾರಿಗಳು ಆ ದೃಷ್ಟಿಯಿಂದಲೂ ಹೊಂದಿಕೆಯಾಗುತ್ತವೆ.

ಸ್ನೇಹಿತರೇ,

ಭಾರತೀಯರಾದ ನಾವು ಒಂದು ವಿಶಿಷ್ಟ ಗುಣಲಕ್ಷಣವನ್ನು ಹೊಂದಿದ್ದೇವೆ, ನಾವು ಎಲ್ಲಿ ವಾಸಿಸುತ್ತಿದ್ದರೂ, ನಾವು ಹಾಲಿನಲ್ಲಿ ಸಕ್ಕರೆಯಂತೆ ಹೊಂದಿಕೊಳ್ಳುತ್ತೇವೆ ಮತ್ತು ನೀರಿನಲ್ಲಿ ಕರಗುವ ಸಕ್ಕರೆಯಂತೆ ಬೆರೆಯುತ್ತೇವೆ. ನೀವು ಗ್ರೀಸ್‌ನ ಆರ್ಥಿಕತೆಗೆ, ವಿಶೇಷವಾಗಿ ಗ್ರಾಮೀಣ ಆರ್ಥಿಕತೆಗೆ ಮಾಧುರ್ಯವನ್ನು ಸೇರಿಸುತ್ತಿದ್ದೀರಿ. ಗ್ರೀಸ್‌ನ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದೀರಿ. ಅಂತೆಯೇ, ಭಾರತದಲ್ಲಿ, ನಿಮ್ಮ ವಿಸ್ತೃತ ಕುಟುಂಬ ಸದಸ್ಯರು ರಾಷ್ಟ್ರದ ಪ್ರಗತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಿಮ್ಮ ಕುಟುಂಬ ಸದಸ್ಯರು ಭಾರತವನ್ನು ವಿಶ್ವದ ನಂಬರ್ ಒನ್ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿದ್ದಾರೆ. ನಿಮ್ಮ ಕುಟುಂಬದ ಸದಸ್ಯರು ಜಾಗತಿಕ ಮಟ್ಟದಲ್ಲಿ ಅಕ್ಕಿ, ಗೋಧಿ, ಕಬ್ಬು, ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ. ಇಂದು, ಭಾರತವು 10-15 ವರ್ಷಗಳ ಹಿಂದೆ ಊಹಿಸಲಾಗದ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತವು ಸ್ಮಾರ್ಟ್‌ಫೋನ್‌ ಡೇಟಾದ ವಿಶ್ವದ ನಂಬರ್ ಒನ್ ಗ್ರಾಹಕ ದೇಶವಾಗಿದೆ, ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ದೇಶವಾಗಿದೆ, ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ, ಭಾರತವು ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿರುವ ದೇಶವಾಗಿದೆ. ಮತ್ತು ಭಾರತವು ವಿಶ್ವದ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿ ನಿಂತಿರುವ ದೇಶವಾಗಿದೆ.

ಸ್ನೇಹಿತರೇ,

ಇಂದು, ʻಐಎಂಎಫ್ʼ ಮತ್ತು ʻವಿಶ್ವ ಬ್ಯಾಂಕ್ʼನಂತಹ ಸಂಸ್ಥೆಗಳು ಭಾರತದ ಬಲವಾದ ಆರ್ಥಿಕತೆಯನ್ನು ಶ್ಲಾಘಿಸುತ್ತಿವೆ. ಪ್ರಪಂಚದಾದ್ಯಂತದ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ. ಪ್ರಸ್ತುತ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ನಿಂತಿದೆ, ಮತ್ತು ಮುಂಬರುವ ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿರಲಿದೆ ಎಂದು ಪ್ರತಿಯೊಬ್ಬ ಪ್ರಮುಖ ತಜ್ಞರು ಭವಿಷ್ಯ ನುಡಿಯುತ್ತಿದ್ದಾರೆ.

ಸ್ನೇಹಿತರೇ,

ಆರ್ಥಿಕತೆಯು ವೇಗವಾಗಿ ಬೆಳೆದಾಗ, ದೇಶವು ಬಡತನದಿಂದ ಬೇಗನೆ ಹೊರಬರುತ್ತದೆ. ಕೇವಲ ಐದು ವರ್ಷಗಳಲ್ಲಿ, ಭಾರತದಲ್ಲಿ 13.5 ಕೋಟಿಗೂ ಹೆಚ್ಚು ನಾಗರಿಕರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಭಾರತದ ಆರ್ಥಿಕತೆಯು ವಿಸ್ತರಿಸುತ್ತಿದ್ದಂತೆ, ಪ್ರತಿಯೊಬ್ಬ ಭಾರತೀಯ ಮತ್ತು ಪ್ರತಿ ಕುಟುಂಬದ ಆದಾಯವು ಹೆಚ್ಚುತ್ತಿದೆ, ಇದು ಜನರು ಹೆಚ್ಚು ಸಂಪಾದಿಸಲು ಮತ್ತು ಹೂಡಿಕೆ ಮಾಡಲು ಕಾರಣವಾಗುತ್ತದೆ. ಒಂದು ದಶಕದ ಹಿಂದೆ, ಭಾರತೀಯರು ಮ್ಯೂಚುವಲ್ ಫಂಡ್‌ಗಳಲ್ಲಿ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಇಂದು, ಭಾರತೀಯರು ಮ್ಯೂಚುವಲ್ ಫಂಡ್‌ಗಳಲ್ಲಿ ಸುಮಾರು 40 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಈ ಪರಿವರ್ತನೆಗೆ ಕಾರಣವೇನೆಂದರೆ ಪ್ರತಿಯೊಬ್ಬ ಭಾರತೀಯರಲ್ಲೂ ಆತ್ಮವಿಶ್ವಾಸ ತುಂಬಿದೆ ಮತ್ತು ಭಾರತವು ಒಂದು ರಾಷ್ಟ್ರವಾಗಿ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.

ಸ್ನೇಹಿತರೇ,

ಇಂದಿನ ಭಾರತವು ತನ್ನ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಂದ ವಿಶ್ವ ವೇದಿಕೆಯಲ್ಲಿ ತನ್ನ ಛಾಪು ಮೂಡಿಸುತ್ತಿದೆ. 2014 ರಿಂದ, ಭಾರತವು 25 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಅನ್ನು ಹಾಕಿದೆ, ಈ ಸಂಖ್ಯೆ ಸ್ವಲ್ಪ ದೊಡ್ಡದೇ. ಈ 25 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಎಂದರೆ ಇದು ಭೂಮಿ ಮತ್ತು ಚಂದ್ರನ ನಡುವಿನ ದೂರಕ್ಕಿಂತ 6 ಪಟ್ಟು ಹೆಚ್ಚು! ದಾಖಲೆಯ ಸಮಯದಲ್ಲಿ 700 ಕ್ಕೂ ಹೆಚ್ಚು ಜಿಲ್ಲೆಗಳಿಗೆ ʻ5 ಜಿʼ ಸೇವೆಗಳನ್ನು ತಲುಪಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ ವಿಶ್ವದ ದೇಶ ಭಾರತ. ಈ ʻ5 ಜಿʼ ತಂತ್ರಜ್ಞಾನವು ಎರವಲು ಪಡೆದಿದ್ದಲ್ಲ ಅಥವಾ ಆಮದು ಮಾಡಿಕೊಂಡದ್ದಲ್ಲ. ಅದು ಸಂಪೂರ್ಣವಾಗಿ "ಮೇಡ್ ಇನ್ ಇಂಡಿಯಾ". ಭಾರತದಾದ್ಯಂತ ಪ್ರತಿ ಹಳ್ಳಿ ಮತ್ತು ಗಲ್ಲಿಗಳಲ್ಲಿ ಡಿಜಿಟಲ್ ವಹಿವಾಟು ಈಗ ಸಾಮಾನ್ಯವಾಗಿದೆ. ಅಮೃತಸರದಿಂದ ಐಜ್ವಾಲ್ ವರೆಗೆ, ಹತ್ತು ರೂಪಾಯಿಗಳ ಸಣ್ಣ ಖರೀದಿಗಳನ್ನು ಸಹ ಡಿಜಿಟಲ್ ಪಾವತಿಗಳ ಮೂಲಕ ಸಲೀಸಾಗಿ ಮಾಡಬಹುದು. ನೀವು ಇತ್ತೀಚೆಗೆ ಭಾರತಕ್ಕೆ ಪ್ರಯಾಣಿಸಿದ್ದರೆ, ಇದು ನಿಮಗೆ ಖುದ್ದಾಗಿ ಅನುಭವಕ್ಕೆ ಬಂದಿರಬಹುದು. ನಿಮಗೆ ಅಂತಹ ಅನುಭವ ಆಗಿದೆಯೇ? ಇದು ನಿಜವಲ್ಲವೇ? ವಹಿವಾಟುಗಳಿಗಾಗಿ ಈಗ ಜೇಬಿನಲ್ಲಿ ನೋಟುಗಳನ್ನು ಇರಿಸಿಕೊಳ್ಳುವ ಅಗತ್ಯವಿಲ್ಲ,  ಮೊಬೈಲ್ ಫೋನ್‌ಗಳೇ ಸಾಕು.

ಸ್ನೇಹಿತರೇ,

ಇಂದು, ಭಾರತವು ಪ್ರಗತಿ ಸಾಧಿಸುತ್ತಿರುವ ವೇಗ ಮತ್ತು ಪ್ರಮಾಣವು ನಿಮ್ಮನ್ನೂ ಒಳಗೊಂಡಂತೆ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಪ್ರೇರೇಪಿಸುತ್ತಿದೆ. ಇಂದು ವಿಶ್ವದ ಅತಿ ಎತ್ತರದ ರೈಲು ಸೇತುವೆ ಭಾರತದಲ್ಲಿದೆ ಎಂದು ತಿಳಿದರೆ ನಿಮಗೆ ಹೆಮ್ಮೆಯಾಗುತ್ತದೆ. ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಕೂಡ ಭಾರತದಲ್ಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಇಂದು ಭಾರತದಲ್ಲಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯೂ ಭಾರತದಲ್ಲಿದೆ. ವಿಶ್ವದ ಅತಿದೊಡ್ಡ ಸೌರ ವಿಂಡ್ ಪಾರ್ಕ್ ಭಾರತದಲ್ಲಿ ನಿರ್ಮಾಣ ಹಂತದಲ್ಲಿದೆ. ಈ ದಿನಗಳಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿರುವ ಚಂದ್ರನ ಬಗ್ಗೆ ಮಾತನಾಡುತ್ತಾ, ಚಂದ್ರನಿಗೆ ಸಂಬಂಧಿಸಿದ ಮತ್ತೊಂದು ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. ಕಳೆದ 9 ವರ್ಷಗಳಲ್ಲಿ, ಭಾರತವು ತನ್ನ ಹಳ್ಳಿಗಳಲ್ಲಿ ಅನೇಕ ರಸ್ತೆಗಳನ್ನು ನಿರ್ಮಿಸಿದೆ, ಮತ್ತು ನಾನು ಹಳ್ಳಿಗಳಲ್ಲಿನ ರಸ್ತೆಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ, ಈ ರಸ್ತೆಗಳ ಒಟ್ಟು ಉದ್ದ ಅಥವಾ ದೂರವು ಎಷ್ಟಿದೆಯೆಂದರೆ ಭೂಮಿ ಮತ್ತು ಚಂದ್ರನ ನಡುವಿನ ದೂರಕ್ಕೆ ಸಮನಾಗಿದೆ. ಈ ಅನೇಕ ಹಳ್ಳಿಯ ರಸ್ತೆಗಳನ್ನು 9 ವರ್ಷಗಳಲ್ಲಿ ನಿರ್ಮಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ಭಾರತವು ಹಾಕಿದ ರೈಲ್ವೆ ಮಾರ್ಗಗಳ ಉದ್ದವು 25 ಸಾವಿರ ಕಿಲೋಮೀಟರ್‌ಗಿಂತ ಹೆಚ್ಚಾಗಿದೆ. ನಾನು 25 ಸಾವಿರ ಕಿಲೋಮೀಟರ್ ಎಂದು ಹೇಳಿದಾಗ, ಅದು ಕೇವಲ ಅಂಕಿಯಂತೆ ತೋರಬಹುದು. ಇಟಲಿ, ದಕ್ಷಿಣ ಆಫ್ರಿಕಾ, ಉಕ್ರೇನ್, ಪೋಲೆಂಡ್ ಮತ್ತು ಬ್ರಿಟನ್ ನಂತಹ ದೇಶಗಳಲ್ಲಿನ ರೈಲ್ವೆ ಮಾರ್ಗಗಳ ಜಾಲವನ್ನು ಮೀರಿ ಭಾರತವು ಕಳೆದ 9 ವರ್ಷಗಳಲ್ಲಿ ಹೆಚ್ಚಿನ ರೈಲ್ವೆ ಮಾರ್ಗಗಳನ್ನು ಹಾಕಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಭಾರತವು ಇಂದು ತನ್ನ ಮೂಲಸೌಕರ್ಯದಲ್ಲಿ ಮಾಡುತ್ತಿರುವ ಹೂಡಿಕೆಯ ಪ್ರಮಾಣವು ಅಭೂತಪೂರ್ವವಾಗಿದೆ.

ಸ್ನೇಹಿತರೇ,

ಇಂದು, ಭಾರತವು ʻಜೈ ಜವಾನ್-ಜೈ ಕಿಸಾನ್ʼ, ʻಜೈ ವಿಜ್ಞಾನ್ʼ ಮತ್ತು ʻಜೈ ಅನುಸಂಧಾನ್ʼ ಮಂತ್ರದೊಂದಿಗೆ ಮುಂದುವರಿಯುತ್ತಿದೆ. ಪ್ರತಿ ವಲಯವನ್ನು ಬಲಪಡಿಸುತ್ತಿದೆ. ಇಲ್ಲಿ ಗ್ರೀಸ್‌ನಲ್ಲಿ, ನಮ್ಮ ಅನೇಕ ಸ್ನೇಹಿತರು ಪಂಜಾಬ್‌ನಿಂದ ಬಂದಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ, ನಾವು ರೈತರಿಗಾಗಿ ಒಂದು ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಇದರಲ್ಲಿ ಸರ್ಕಾರವು ಕೃಷಿ ವೆಚ್ಚಗಳಿಗಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯಡಿ, 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಕೆಲವು ದಿನಗಳ ಹಿಂದೆ, ನಾನು ಕೆಂಪು ಕೋಟೆಯಿಂದ ಒಂದು ಘೋಷಣೆ ಮಾಡಿದ್ದೇನೆ, ಮತ್ತು ಅದನ್ನು ನಾನು ಮತ್ತೊಮ್ಮೆ ಇಲ್ಲಿ ಒತ್ತಿಹೇಳಲು ಬಯಸುತ್ತೇನೆ, ನಮ್ಮ ಹಳ್ಳಿಗಳ ಸಹೋದರಿಯರಿಗೆ ಡ್ರೋನ್ ಪೈಲಟ್‌ಗಳಾಗಿ ತರಬೇತಿ ನೀಡಲು ಭಾರತವು ಪ್ರಮುಖ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಡ್ರೋನ್ ಪೈಲಟ್ ಗಳಾಗುವುದನ್ನು ಮತ್ತು ಆಧುನಿಕ ಕೃಷಿಗೆ ಸಹಾಯ ಮಾಡುವುದನ್ನು ಕಲ್ಪಿಸಿಕೊಳ್ಳಿ. ಡ್ರೋನ್‌ಗಳ ಸಹಾಯದಿಂದ, ಅವರು ಹೊಲಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು ಮತ್ತು ಅಗತ್ಯ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಭಾರತದಲ್ಲಿ, ನಾವು ರೈತರಿಗೆ 20 ಕೋಟಿಗೂ ಹೆಚ್ಚು ʻಮಣ್ಣಿನ ಆರೋಗ್ಯ ಕಾರ್ಡ್ʼಗಳನ್ನು ಒದಗಿಸಿದ್ದೇವೆ. ಈಗ ಅವರಿಗೆ ತಮ್ಮ ಹೊಲಗಳಿಗೆ ಯಾವ ರೀತಿಯ ರಸಗೊಬ್ಬರಗಳು ಬೇಕಾಗುತ್ತವೆ, ಎಷ್ಟು ರಸಗೊಬ್ಬರ ಬೇಕು ಮತ್ತು ಯಾವ ಬೆಳೆಗಳು ತಮ್ಮ ಭೂಮಿಗೆ ಸೂಕ್ತವಾಗಿವೆ ಎಂದು ತಿಳಿದಿದೆ. ಈ ಕಾರಣದಿಂದಾಗಿ, ಅವರು ಈಗ ಸೀಮಿತ ಸ್ಥಳಗಳಲ್ಲಿ ಹೆಚ್ಚಿನ ಇಳುವರಿಯನ್ನು ಸಾಧಿಸುತ್ತಿದ್ದಾರೆ. ನಮ್ಮ ಕೃಷಿಕ ಸಹೋದರ -ಸಹೋದರಿಯರು ಸಹ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ಕೃಷಿಯತ್ತ ಸಾಗುತ್ತಿದ್ದಾರೆ. ಸರ್ಕಾರವು ಮತ್ತೊಂದು ಯೋಜನೆಯನ್ನು ಪ್ರಾರಂಭಿಸಿದೆ, ಅದು ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ. ಅದೆಂದರೆ "ಒಂದು ಜಿಲ್ಲೆ, ಒಂದು ಉತ್ಪನ್ನ" ಯೋಜನೆ. ನಿಮಗೆ ತಿಳಿದಿರುವಂತೆ, ಪ್ರತಿ ಜಿಲ್ಲೆಯೂ ತನ್ನದೇ ಆದ ವಿಶಿಷ್ಟ ವಿಶೇಷತೆಯನ್ನು ಹೊಂದಿದೆ. ಉದಾಹರಣೆಗೆ, ಕರ್ನಾಟಕದ ಕೊಡಗು ಕಾಫಿಗೆ ಹೆಸರುವಾಸಿಯಾಗಿದೆ, ಅಮೃತಸರ ಉಪ್ಪಿನಕಾಯಿ ಮತ್ತು ಸಂರಕ್ಷಕಕ್ಕೆ, ಭಿಲ್ವಾರಾ ಮೆಕ್ಕೆಜೋಳದ ಉತ್ಪನ್ನಗಳಿಗೆ, ಫತೇಘರ್ ಸಾಹಿಬ್, ಹೋಶಿಯಾರ್ಪುರ್ ಮತ್ತು ಗುರುದಾಸ್ಪುರ ಬೆಲ್ಲಕ್ಕೆ, ನಿಜಾಮಾಬಾದ್ ಅರಿಶಿನಕ್ಕೆ ಹೆಸರುವಾಸಿಯಾಗಿದೆ. ಪ್ರತಿ ಜಿಲ್ಲೆಯಿಂದ ಒಂದು ವಿಶೇಷ ಉತ್ಪನ್ನದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ನಾವು ಅದರ ರಫ್ತು ಹೆಚ್ಚಿಸುತ್ತಿದ್ದೇವೆ. ಇದು ಹೊಸ ಗುರಿಗಳಿಗಾಗಿ ಹೊಸ ವಿಧಾನಗಳೊಂದಿಗೆ ಕೆಲಸ ಮಾಡುತ್ತಿರುವ ಇಂದಿನ ಭಾರತವಾಗಿದೆ.

ಸ್ನೇಹಿತರೇ,

ಗ್ರೀಸ್ ದೇಶವು ಒಲಿಂಪಿಕ್ಸ್ ಹುಟ್ಟಿದ ಸ್ಥಳವಾಗಿದೆ. ಭಾರತದ ಯುವಕರಲ್ಲಿ ಕ್ರೀಡೆಯ ಉತ್ಸಾಹ ನಿರಂತರವಾಗಿ ಬೆಳೆಯುತ್ತಿದೆ. ಭಾರತದ ನಮ್ಮ ಸಣ್ಣ ಪಟ್ಟಣಗಳು ಮತ್ತು ನಗರಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ನಿಂದ ವಿಶ್ವವಿದ್ಯಾಲಯ ಕ್ರೀಡಾಕೂಟದವರೆಗೆ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಪದಕ ಗೆದ್ದಾಗ, ಅದು ಎಲ್ಲರಲ್ಲೂ ಹೆಮ್ಮೆಯನ್ನು ತುಂಬಿತು. ಕೆಲವು ದಿನಗಳ ಹಿಂದೆ, ಭಾರತೀಯ ಯುವಕರು ʻವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟʼದಲ್ಲಿ ಅಸಾಧಾರಣ, ಅದ್ಭುತ  ಪ್ರದರ್ಶನ ನೀಡಿದರು. ಈ ಬಾರಿ ಭಾರತವು ಈ ಸ್ಪರ್ಧೆಯ ಇತಿಹಾಸದಲ್ಲಿ, ಪ್ರಾರಂಭದಿಂದಲೂ, ಹಿಂದಿನ ಎಲ್ಲಾ ಆವೃತ್ತಿಗಳಲ್ಲಿ ಗೆದ್ದ ಒಟ್ಟು ಪದಕಗಳಿಗಿಂತ ಹೆಚ್ಚಿನ ಪದಕಗಳನ್ನು ಮರಳಿ ತಂದಿದೆ.

ಸ್ನೇಹಿತರೇ,

ಅವರು ತಮ್ಮ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಯನ್ನು ಹೇಗೆ ಸಂರಕ್ಷಿಸುತ್ತಾರೆ ಎಂಬುದಕ್ಕೆ ನೀವು ಗ್ರೀಸ್‌ನಲ್ಲಿ ಸಾಕ್ಷಿಯಾಗಿದ್ದೀರಿ. ಇಂದಿನ ಭಾರತವು ಅಭಿವೃದ್ಧಿಯೊಂದಿಗೆ ತನ್ನ ಪರಂಪರೆಯನ್ನು ಸಂಯೋಜಿಸಿ  ಆಚರಿಸುತ್ತಿದೆ. ವಿಶ್ವದ ಅತಿದೊಡ್ಡ ಮ್ಯೂಸಿಯಂ ʻಯುಗ್‌ ಯುಗೀನ್‌ ಭಾರತ್ʼ ಅನ್ನು ದೆಹಲಿಯಲ್ಲಿ ನಿರ್ಮಿಸಲಾಗುತ್ತಿದೆ. ನಿಮಗೆ ಇದು ಕೇಳಿಸಿತಲ್ಲವೇ? ಇತ್ತೀಚೆಗೆ ಮಧ್ಯಪ್ರದೇಶದ ಸಾಗರದಲ್ಲಿ ಸಂತ ರವಿದಾಸ್ ಸ್ಮಾರಕದ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಸಂತ ರವಿದಾಸರ ಬೋಧನೆಗಳಿಂದ ಪ್ರೇರಿತವಾದ ಈ ಪ್ರದೇಶವನ್ನು 50,000ಕ್ಕೂ ಹೆಚ್ಚು ಹಳ್ಳಿಗಳಿಂದ ಸಂಗ್ರಹಿಸಿದ ಮಣ್ಣು ಮತ್ತು 300ಕ್ಕೂ ಹೆಚ್ಚು ನದಿಗಳಿಂದ ಪಡೆದ ಜೇಡಿಮಣ್ಣಿನಿಂದ ನಿರ್ಮಿಸಲಾಗುತ್ತಿದೆ. ಈ ಅಭಿಯಾನದ ಪ್ರಮಾಣವನ್ನು ಊಹಿಸಿ. ಸಂತ ರವಿದಾಸರು ಕಾಶಿಯಲ್ಲಿ ಜನಿಸಿದರು. ಕಾಶಿಯಲ್ಲಿ ಅವರ ಜನ್ಮಸ್ಥಳದಲ್ಲಿ ವಿವಿಧ ಸೌಲಭ್ಯಗಳ ವಿಸ್ತರಣೆಗೆ ಸಾಕ್ಷಿಯಾಗುವ ಅದೃಷ್ಟ ನನ್ನದಾಗಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ, ನಮ್ಮ ಗುರುಗಳ ಪವಿತ್ರ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಕರ್ತಾರ್‌ಪುರ ಸಾಹಿಬ್ ಅನ್ನು ನೋಡಲು ದೂರದ ಸ್ಥಳಗಳಿಂದ ಜನರು ಬೈನಾಕ್ಯುಲರ್ ಬಳಸುತ್ತಿದ್ದ ಸಮಯವಿತ್ತು. ನಮ್ಮ ಸರ್ಕಾರ ಕರ್ತಾರ್‌ಪುರ ಸಾಹಿಬ್‌ಗೆ ಪ್ರಯಾಣವನ್ನು ಸುಲಭಗೊಳಿಸಿದೆ. ಗುರುನಾನಕ್ ದೇವ್ ಜೀ ಅವರ 550ನೇ ʻಪ್ರಕಾಶ್ ಪರ್ವ್ʼ, ಗುರು ತೇಜ್ ಬಹದ್ದೂರ್ ಜೀ ಅವರ 400ನೇ ʻಪ್ರಕಾಶ್ ಪರ್ವ್ʼ ಮತ್ತು ಗುರು ಗೋವಿಂದ್ ಸಿಂಗ್ ಜೀ ಅವರ 350ನೇ ʻಪ್ರಕಾಶ್ ಪರ್ವ್ʼ ಸಂದರ್ಭದಲ್ಲಿ, ನಮ್ಮ ಸರ್ಕಾರವು ಈ ಶುಭ ಸಂದರ್ಭಗಳನ್ನು ಜಾಗತಿಕವಾಗಿ ಆಚರಿಸಲು ತುಂಬು ಹೃದಯದಿಂದ ಕೆಲಸ ಮಾಡಿದೆ. ಭಾರತದಲ್ಲಿ ಸಹಬ್ಜಾದಾಸ್‌ ನೆನಪಿಗಾಗಿ ನಾವು ಪ್ರತಿವರ್ಷ ಡಿಸೆಂಬರ್ 26ರಂದು 'ವೀರ ಬಾಲ ದಿವಸ್' ಆಚರಿಸುತ್ತೇವೆ.

ಸ್ನೇಹಿತರೇ,

ಭೌತಿಕ, ಡಿಜಿಟಲ್ ಮತ್ತು ಸಾಂಸ್ಕೃತಿಕ ಸಂಪರ್ಕದ 'ಅಮೃತ ಕಾಲ' ಭಾರತದಲ್ಲಿ ಪ್ರಾರಂಭವಾಗಿದೆ. ಗ್ರೀಸ್‌ನ ಪರಂಪರೆಯನ್ನು ನೋಡಲು ಭಾರತವೂ ಸೇರಿದಂತೆ ಪ್ರಪಂಚದಾದ್ಯಂತದ ಜನರು ಹೇಗೆ ಬರುತ್ತಾರೋ ಅದೇ ರೀತಿ ಯುರೋಪ್‌ನಿಂದ, ವಿಶೇಷವಾಗಿ ಗ್ರೀಸ್‌ನಿಂದ ಜನರು ಹೆಚ್ಚು ಹೆಚ್ಚು ಭಾರತಕ್ಕೆ ಬರುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಿಮ್ಮ ಅಧಿಕಾರಾವಧಿಯಲ್ಲಿ ಆ ದಿನಗಳಿಗೆ ನೀವು ಸಾಕ್ಷಿಯಾಗುತ್ತೀರಿ. ಆದರೆ ನಾನು ಇಲ್ಲಿ ಭಾರತದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಂಡಂತೆ, ಅದೇ ರೀತಿ, ನೀವು ನಿಮ್ಮ ಗ್ರೀಕ್ ಸ್ನೇಹಿತರೊಂದಿಗೆ ಭಾರತದ ಕಥೆಯನ್ನು ಹಂಚಿಕೊಳ್ಳಬೇಕಾಗುತ್ತದೆ. ನೀವು ಅವರಿಗೆ ಹೇಳುತ್ತೀರಾ? ಇದು ಕೂಡ ಭಾರತ ಮಾತೆಗೆ ಮಹತ್ವದ ಸೇವೆಯಾಗಿದೆ ಎಂಬುದನ್ನು ಮರೆಯಬೇಡಿ.

ಸ್ನೇಹಿತರೇ,

ನಿಮ್ಮ ಗ್ರೀಕ್ ಸ್ನೇಹಿತರಿಗೆ ಐತಿಹಾಸಿಕ ತಾಣಗಳನ್ನು ಮೀರಿ ಭಾರತದಲ್ಲಿ ಅನ್ವೇಷಿಸಲು ಇನ್ನೂ ಹೆಚ್ಚಿನ ಅಂಶಗಳಿವೆ. ಇಲ್ಲಿನ ಜನರು ವನ್ಯಜೀವಿ ಉತ್ಸಾಹಿಗಳು ಮತ್ತು ಪರಿಸರ ಸಂರಕ್ಷಣೆಗೆ ಆಳವಾಗಿ ಬದ್ಧರಾಗಿದ್ದಾರೆ. ನೀವು ಪ್ರದೇಶವಾರು ನೋಡಿದರೆ, ವಿಶ್ವದ 2.5%ಕ್ಕಿಂತ ಕಡಿಮೆ ಭೂಪ್ರದೇಶವನ್ನು ಹೊಂದಿದ್ದರೂ ಭಾರತವು ವಿಶ್ವದ 8% ಗಿಂತಲೂ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿದೆ. ವಿಶ್ವದ ಶೇ.75ರಷ್ಟು ಹುಲಿಗಳು ಭಾರತದಲ್ಲಿವೆ. ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯ ಹುಲಿಗಳು, ಏಷ್ಯಾಟಿಕ್ ಆನೆಗಳು ಮತ್ತು ಒಂದು ಕೊಂಬಿನ ಖಡ್ಗಮೃಗಗಳು ಕಂಡುಬರುತ್ತವೆ. ಏಷ್ಯಾಟಿಕ್ ಸಿಂಹಗಳು ಕಂಡುಬರುವ ವಿಶ್ವದ ಏಕೈಕ ದೇಶ ಭಾರತ. ಇಂದು, ಭಾರತವು 100ಕ್ಕೂ ಹೆಚ್ಚು ಸಮುದಾಯ ಮೀಸಲು ಪ್ರದೇಶಗಳನ್ನು ಮತ್ತು 400ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ.

ನನ್ನ ಕುಟುಂಬ ಸದಸ್ಯರೇ,

ಇಂದಿನ ಭಾರತವು ಭಾರತ ಮಾತೆಯ ಯಾವುದೇ ಮಗುವನ್ನು ನಿರ್ಲಕ್ಷಿಸುವುದಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿ, ಯಾವುದೇ ಭಾರತೀಯ  ಕಷ್ಟದ ಸಮಯವನ್ನು ಎದುರಿಸಿದಾಗ, ಭಾರತವು ತನ್ನ ಜನರನ್ನು ಎಂದಿಗೂ ಕೈಬಿಡುವುದಿಲ್ಲ, ಅವರನ್ನು ಒಂಟಿಯಾಗಿ ಬಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಿಮ್ಮನ್ನು ನನ್ನ ಕುಟುಂಬ ಸದಸ್ಯರು ಎಂದು ನಾನು ಹೇಳುತ್ತಿದ್ದೇನೆ. ಉಕ್ರೇನ್‌ನಲ್ಲಿ ಸಂಘರ್ಷ ಉಂಟಾದಾಗ, ನಾವು ನಮ್ಮ ಸಾವಿರಾರು ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದನ್ನು ನೀವು ನೋಡಿದ್ದೀರಿ. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಾಗ, ಗಮನಾರ್ಹ ಸಂಖ್ಯೆಯ ನಮ್ಮ ಸಿಖ್ ಸಹೋದರ-ಸಹೋದರಿಯರು ಸೇರಿದಂತೆ ತನ್ನ ನಾಗರಿಕರನ್ನು ಭಾರತವು ಸುರಕ್ಷಿತವಾಗಿ ಮರಳಿ ತವರಿಗೆ ಕರೆತಂದಿತು. ಅಷ್ಟೇ ಅಲ್ಲ, ನಾವು ಗುರು ಗ್ರಂಥ ಸಾಹಿಬ್ ಅವರ 'ಸ್ವರೂಪ್' (ಧಾರ್ಮಿಕ ಗ್ರಂಥ) ಅನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಅತ್ಯಂತ ಗೌರವದಿಂದ ತಂದಿದ್ದೇವೆ. ಪ್ರಪಂಚದಾದ್ಯಂತ ಹರಡಿರುವ ಭಾರತೀಯ ರಾಯಭಾರ ಕಚೇರಿಗಳು ಈಗ ಕೇವಲ ಸರ್ಕಾರಿ ಕಚೇರಿಗಳೊಂದಿಗೆ ಸಂಬಂಧ ಹೊಂದಿಲ್ಲ, ಆದರೆ ನಿಮ್ಮ ಸ್ವಂತ ಮನೆಗಳ ವಿಸ್ತರಣೆಯಂತೆ ಆಗುತ್ತಿವೆ. ಇಲ್ಲಿ, ಗ್ರೀಸ್‌ನಲ್ಲಿಯೂ ಸಹ, ಭಾರತೀಯ ರಾಯಭಾರ ಕಚೇರಿಯು ನಿಮಗೆ 24/7 ಸೇವೆ ಸಲ್ಲಿಸಲು ಬದ್ಧವಾಗಿದೆ. ಭಾರತ ಮತ್ತು ಗ್ರೀಸ್ ನಡುವಿನ ಬಂಧವು ಬಲಗೊಳ್ಳುತ್ತಿದ್ದಂತೆ, ಪರಸ್ಪರರ ದೇಶಗಳಿಗೆ ಭೇಟಿ ನೀಡುವುದು ಹಾಗೂ ವಾಣಿಜ್ಯ ಮತ್ತು ವ್ಯಾಪಾರದಲ್ಲಿ ತೊಡಗುವುದು ಸರಳವಾಗುತ್ತಿದೆ, ಹೆಚ್ಚು ಅನುಕೂಲಕರವಾಗುತ್ತದೆ. ನಮ್ಮ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸಲು ನಾವೆಲ್ಲರೂ ಎಲ್ಲ ಪ್ರಯತ್ನಗಳನ್ನು ಮಾಡಬೇಕು.

ಸ್ನೇಹಿತರೇ,

ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿಮ್ಮ ಉಪಸ್ಥಿತಿಯು ಪ್ರತಿಯೊಬ್ಬ ಭಾರತೀಯನ ಹೃದಯಕ್ಕೆ ತೃಪ್ತಿಯ ಭಾವ ಮೂಡಿಸುತ್ತದೆ. ಮತ್ತೊಮ್ಮೆ, ನಾನು ಇಲ್ಲಿ ಕಷ್ಟಪಟ್ಟು ದುಡಿಯುವ ಎಲ್ಲ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಮೇಲೆ ಇಷ್ಟೊಂದು ಪ್ರೀತಿಯನ್ನು ತೋರಿದ್ದಕ್ಕಾಗಿ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಎರಡೂ ಕೈಗಳನ್ನು ಮೇಲೆತ್ತಿ ಜೋರಾಗಿ, ಒಕ್ಕೊರಲಿನಿಂದ  "ಭಾರತ್ ಮಾತಾ ಕಿ - ಜೈ" ಎಂದು ಹೇಳೋಣ. ಈ ಘೋಷಣೆ ಭಾರತದವರೆಗೆ ತಲುಪಬೇಕು. ಭಾರತ್ ಮಾತಾ ಕಿ - ಜೈ, ಭಾರತ್ ಮಾತಾ ಕಿ - ಜೈ, ಭಾರತ್ ಮಾತಾ ಕಿ – ಜೈ; ವಂದೇ - ಮಾತರಂ, ವಂದೇ - ಮಾತರಂ, ವಂದೇ - ಮಾತರಂ, ವಂದೇ - ಮಾತರಂ, ವಂದೇ - ಮಾತರಂ, ವಂದೇ – ಮಾತರಂ. 

ಅನಂತ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Total Urea stocks currently at 61.14 LMT, up from 55.22 LMT in March 2025

Media Coverage

Total Urea stocks currently at 61.14 LMT, up from 55.22 LMT in March 2025
NM on the go

Nm on the go

Always be the first to hear from the PM. Get the App Now!
...
Prime Minister pays tribute to Dr. Ram Manohar Lohia on his birth anniversary
March 23, 2026

Prime Minister Shri Narendra Modi today paid rich tributes to the legendary socialist leader and thinker, Dr. Ram Manohar Lohia, on the occasion of his birth anniversary.

Describing Dr. Lohia as a multifaceted personality, Shri Modi highlighted his pivotal role in mobilizing the masses against colonial rule and his subsequent contributions to India’s progress after 1947. The Prime Minister remarked that Dr. Lohia was an outstanding thinker and one of the foremost voices of social justice in the country. Shri Modi affirmed that Dr. Lohia’s unwavering commitment to empowering the poor and the marginalized continues to inspire generations, noting that his thoughts on gender equality and participatory governance remain equally relevant today.

The Prime Minister wrote on X:

"Tributes to Dr. Ram Manohar Lohia Ji on his birth anniversary. He was a multifaceted personality who played a pivotal role in mobilising people against colonial rule and subsequently contributing to the progress of India after 1947. He was an outstanding thinker and one of the foremost voices of social justice. His unwavering commitment to the cause of empowering the poor and the marginalised continues to inspire generations. Equally noteworthy are his thoughts on gender equality and participatory governance."