"ಕಠಿಣ ಪರಿಶ್ರಮ ನಮ್ಮ ಏಕೈಕ ಮಾರ್ಗವಾಗಿದ್ದು, ಗೆಲುವು ನಮ್ಮ ಏಕೈಕ ಆಯ್ಕೆಯಾಗಿದೆ"
"ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಿದ್ದ ಪೂರ್ವಭಾವಿ, ಸಕ್ರಿಯ ಮತ್ತು ಸಂಘಟಿತ ಧೋರಣೆಯೇ, ಈ ಬಾರಿಯೂ ವಿಜಯದ ಮಂತ್ರವಾಗಿದೆ"
“ಭಾರತವು ವಯಸ್ಕ ಜನಸಂಖ್ಯೆಯ ಸುಮಾರು ಶೇ.92ರಷ್ಟು ಮಂದಿಗೆ ಮೊದಲ ಡೋಸ್ ನೀಡಿದೆ. ಎರಡನೇ ಡೋಸ್‌ ನ ವ್ಯಾಪ್ತಿಯು ಸುಮಾರು ಶೇ.70 ತಲುಪಿದೆ”
“ಆರ್ಥಿಕತೆಯ ವೇಗವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಸ್ಥಳೀಯ ನಿಯಂತ್ರಣದ ಮೇಲೆ ಹೆಚ್ಚು ಗಮನ ಹರಿಸುವುದು ಉತ್ತಮ”
"ವ್ಯತ್ಯಯಗಳ ಹೊರತಾಗಿಯೂ, ಲಸಿಕೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಅತ್ಯಂತ ಪ್ರಬಲವಾದ ಮಾರ್ಗವಾಗಿದೆ".
“ಕರೋನಾವನ್ನು ಮಣಿಸಲು ನಾವು ಪ್ರತಿ ರೂಪಾಂತರಿಗೂ ನಮ್ಮ ಸನ್ನದ್ಧತೆಯನ್ನು ಮಾಡಿಕೊಳ್ಳಬೇಕು. ಒಮಿಕ್ರಾನ್ ಅನ್ನು ನಿಭಾಯಿಸುವುದರ ಜೊತೆಗೆ, ನಾವು ಭವಿಷ್ಯದ ಯಾವುದೇ ರೂಪಾಂತರಿಗಾಗಿ ಈಗಿನಿಂದಲೇ ಸಿದ್ಧತೆಯನ್ನು ಪ್ರಾರಂಭಿಸಬೇಕು”.
ಕೋವಿಡ್-19ರ ನಿರಂತರ ಅಲೆಗಳ ಸಮಯದಲ್ಲಿ ನಾಯಕತ್ವಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿಗಳು

ಕೋವಿಡ್-19ಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯದ ಸನ್ನದ್ಧತೆ ಮತ್ತು ರಾಷ್ಟ್ರೀಯ ಕೋವಿಡ್ -19 ಲಸಿಕೆ ಪ್ರಗತಿಯನ್ನು ಪರಾಮರ್ಶಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ ಗಳು/ ಆಡಳಿತಾಧಿಕಾರಿಗಳೊಂದಿಗೆ ಸಮಗ್ರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ವಹಿಸಿದ್ದರು. ಕೇಂದ್ರ ಸಚಿವರುಗಳಾದ ಶ್ರೀ ಅಮಿತ್ ಶಾ, ಡಾ. ಮನ್ಸುಖ್ ಮಾಂಡವಿಯಾ, ರಾಜ್ಯ ಸಚಿವ ಡಾ ಭಾರತಿ ಪ್ರವೀಣ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾಂಕ್ರಾಮಿಕ ಪರಿಸ್ಥಿತಿಯ ಇತ್ತೀಚಿನ ಮಾಹಿತಿಗಳ ಬಗ್ಗೆ ಅಧಿಕಾರಿಗಳು ಸಭೆಗೆ ವಿವರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 100 ವರ್ಷಗಳ ಅತಿದೊಡ್ಡ ಸಾಂಕ್ರಾಮಿಕ ರೋಗದೊಂದಿಗೆ ಭಾರತದ ಸಮರವು ಈಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ ಎಂಬುದನ್ನು ಉಲ್ಲೇಖಿಸಿದರು. "ಕಠಿಣ ಪರಿಶ್ರಮವು ನಮ್ಮ ಏಕೈಕ ಮಾರ್ಗವಾಗಿದ್ದು, ಗೆಲುವು ನಮ್ಮ ಏಕೈಕ ಆಯ್ಕೆಯಾಗಿದೆ. ನಾವು, ಭಾರತದ 130 ಕೋಟಿ ಜನರು, ನಮ್ಮ ಪ್ರಯತ್ನದಿಂದ ಕರೋನಾ ವಿರುದ್ಧ ಖಂಡಿತವಾಗಿಯೂ ವಿಜಯಶಾಲಿಗಳಾಗುತ್ತೇವೆ" ಎಂದು ಅವರು ಹೇಳಿದರು.

ಓಮಿಕ್ರಾನ್ ಬಗ್ಗೆ ಮೊದಲಿದ್ದ ಗೊಂದಲ ಈಗ ಕ್ರಮೇಣವಾಗಿ ನಿವಾರಣೆಯಾಗುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಓಮಿಕ್ರಾನ್ ರೂಪಾಂತರಿಯು ಹಿಂದಿನ ರೂಪಾಂತರಿಗಳಿಗಿಂತ ಅನೇಕ ಪಟ್ಟು ಹೆಚ್ಚು ವೇಗವಾಗಿ ಸಾಮಾನ್ಯ ಜನರಿಗೆ ಸೋಂಕು ಹರಡುತ್ತಿದೆ ಎಂದರು. “ನಾವು ಜಾಗರೂಕರಾಗಿರಬೇಕು, ಎಚ್ಚರಿಕೆಯಿಂದ ಇರಬೇಕು, ಆದರೆ ಯಾವುದೇ ರೀತಿ ಆತಂಕದ ಪರಿಸ್ಥಿತಿ ಎದುರಾಗದಂತೆ ನಾವು ಕಾಳಜಿ ವಹಿಸಬೇಕು. ಈ ಹಬ್ಬಗಳ ಪರ್ವದಲ್ಲಿ ಜನರು, ಆಡಳಿತಗಳ ಎಚ್ಚರ ಎಲ್ಲಿಯೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ರೀತಿ ಪೂರ್ವಭಾವಿ, ಸಕ್ರಿಯ ಮತ್ತು ಸಾಮೂಹಿಕ ಧೋರಣೆ ಅಳವಡಿಸಿಕೊಂಡವೋ ಅದೇ ಈ ಬಾರಿಯೂ ಗೆಲುವಿನ ಮಂತ್ರವಾಗಿದೆ. ನಾವು ಕರೋನಾ ಸೋಂಕನ್ನು ಎಷ್ಟು ಮಿತಿಗೊಳಿಸುತ್ತೇವೆಯೋ, ಸಮಸ್ಯೆ ಅಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

 

ಯಾವುದೇ ರೂಪಾಂತರಿಯ ಹೊರತಾಗಿಯೂ, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಬೀತಾಗಿರುವ ಮಾರ್ಗವೆಂದರೆ ಲಸಿಕೆ ಮಾತ್ರ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ತಯಾರಾದ ಲಸಿಕೆಗಳು ಪ್ರಪಂಚದಾದ್ಯಂತ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿವೆ ಎಂದು ಅವರು ತಿಳಿಸಿದರು. ಇಂದು ಭಾರತವು ವಯಸ್ಕ ಜನಸಂಖ್ಯೆಯ ಸುಮಾರು ಶೇ.92ರಷ್ಟು ಜನರಿಗೆ ಮೊದಲ ಡೋಸ್ ಅನ್ನು ನೀಡಿದೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಎರಡನೇ ಡೋಸ್‌ ನ ವ್ಯಾಪ್ತಿಯು ದೇಶದಲ್ಲಿ ಸುಮಾರು ಶೇ. 70ರಷ್ಟು ಜನರಿಗೆ ತಲುಪಿದೆ ಎಂದು ಅವರು ಮಾಹಿತಿ ನೀಡಿದರು. 10 ದಿನಗಳಲ್ಲಿ ಭಾರತವು ತನ್ನ ಸುಮಾರು 3 ಕೋಟಿ ಹದಿಹರೆಯದವರಿಗೆ ಲಸಿಕೆ ಹಾಕಿದೆ ಎಂದು ಪ್ರಧಾನ ಮಂತ್ರಿ ಒತ್ತಿ ಹೇಳಿದರು. ಮುಂಚೂಣಿಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಎಷ್ಟು ಬೇಗ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತದೆಯೋ, ಅಷ್ಟು ಬೇಗ ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವು ಹೆಚ್ಚಾಗುತ್ತದೆ. "ಶೇ.100 ಲಸಿಕೆಗಾಗಿ ನಾವು ಹರ್ ಘರ್ ದಸ್ತಕ್ ಅಭಿಯಾನವನ್ನು ತೀವ್ರಗೊಳಿಸಬೇಕಾಗಿದೆ" ಎಂದು ಅವರು ಹೇಳಿದರು. ಲಸಿಕೆಗಳು ಅಥವಾ ಮಾಸ್ಕ್ ಗಳನ್ನು ಧರಿಸುವ ರೂಢಿಯ ಬಗ್ಗೆ  ಇರುವ ಯಾವುದೇ ತಪ್ಪು ಮಾಹಿತಿಯನ್ನು ನಿವಾರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಯಾವುದೇ ಕಾರ್ಯತಂತ್ರವನ್ನು ರೂಪಿಸುವಾಗ, ಸಾಮಾನ್ಯ ಜನರ ಜೀವನೋಪಾಯಕ್ಕೆ ಕನಿಷ್ಠ ಹಾನಿಯಷ್ಟೇ ಆಗಬೇಕು, ಆರ್ಥಿಕ ಚಟುವಟಿಕೆಗಳು ಮತ್ತು ಆರ್ಥಿಕತೆಯ ವೇಗವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಹಾಗಾಗಿ ಸ್ಥಳೀಯ ನಿಯಂತ್ರಣದತ್ತ ಹೆಚ್ಚು ಗಮನ ಹರಿಸುವುದು ಉತ್ತಮ. ಮನೆಯಲ್ಲಿ ಪ್ರತ್ಯೇಕೀಕರಣ ಸಂದರ್ಭಗಳಲ್ಲಿ ನಾವು ಗರಿಷ್ಠ ಚಿಕಿತ್ಸೆಯನ್ನು ಒದಗಿಸುವ ಸ್ಥಾನದಲ್ಲಿರಬೇಕು ಮತ್ತು ಅದಕ್ಕಾಗಿ ಮನೆ ಪ್ರತ್ಯೇಕೀಕರಣದ ಮಾರ್ಗಸೂಚಿಗಳಲ್ಲಿ ಸುಧಾರಣೆ ಆಗುತ್ತಲೇ ಇರಬೇಕು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಒತ್ತಿ ಹೇಳಿದರು. ಚಿಕಿತ್ಸೆಯಲ್ಲಿ ಟೆಲಿ ಮೆಡಿಸಿನ್ ಸೌಲಭ್ಯಗಳ ಬಳಕೆಯು ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ಆರೋಗ್ಯ ಮೂಲಸೌಕರ್ಯಗಳನ್ನು ನವೀಕರಿಸಲು ಈ ಹಿಂದೆ ನೀಡಲಾದ 23,000 ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಬಳಸಿಕೊಂಡಿರುವುದಕ್ಕಾಗಿ ಪ್ರಧಾನಮಂತ್ರಿಗಳು ರಾಜ್ಯಗಳನ್ನು ಶ್ಲಾಘಿಸಿದರು. ಇದರ ಅಡಿಯಲ್ಲಿ ದೇಶಾದ್ಯಂತ 800ಕ್ಕೂ ಹೆಚ್ಚು ಮಕ್ಕಳ ಘಟಕಗಳು, 1.5 ಲಕ್ಷ ಹೊಸ ಐಸಿಯು ಮತ್ತು ಎಚ್‌.ಡಿ.ಯು ಹಾಸಿಗೆಗಳು, 5 ಸಾವಿರಕ್ಕೂ ಹೆಚ್ಚು ವಿಶೇಷ ಆಂಬ್ಯುಲೆನ್ಸ್‌ ಗಳು, 950ಕ್ಕೂ ಹೆಚ್ಚು ದ್ರವರೂಪಿ ವೈದ್ಯಕೀಯ ಆಮ್ಲಜನಕ ಸಂಗ್ರಹಣಾ ಟ್ಯಾಂಕ್ ಸಾಮರ್ಥ್ಯವನ್ನು ಸೇರಿಸಲಾಗಿದೆ ಎಂದರು. ಮೂಲಸೌಕರ್ಯಗಳನ್ನು ವಿಸ್ತರಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. “ಕರೋನಾವನ್ನು ಮಣಿಸಲು ನಾವು ಪ್ರತಿ ರೂಪಾಂತರಿಗೂ ನಮ್ಮ ಸನ್ನದ್ಧತೆಯನ್ನು ಮುಂಚಿತವಾಗಿ ಅಣಿ ಮಾಡಿಕೊಳ್ಳಬೇಕು. ಒಮಿಕ್ರಾನ್ ಅನ್ನು ನಿಭಾಯಿಸುವುದರ ಜೊತೆಗೆ, ನಾವು ಭವಿಷ್ಯದ ಯಾವುದೇ ರೂಪಾಂತರಿಗಾಗಿ ಈಗಿನಿಂದಲೇ ತಯಾರಿಯನ್ನೂ ಪ್ರಾರಂಭಿಸಬೇಕಾಗಿದೆ”, ಎಂದು ಪ್ರಧಾನಮಂತ್ರಿ ಹೇಳಿದರು.

ಕೋವಿಡ್ -19ರ ಸತತ ಅಲೆಗಳ ಸಮಯದಲ್ಲಿ ಅವರ ನಾಯಕತ್ವಕ್ಕಾಗಿ ಪ್ರಧಾನಮಂತ್ರಿಗಳಿಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು. ಅವರು ವಿಶೇಷವಾಗಿ ಪ್ರಧಾನಮಂತ್ರಿಯವರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಮತ್ತು ರಾಜ್ಯಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಅಪಾರ ಸಹಾಯ ಮಾಡಿದ ಕೇಂದ್ರ ಸರ್ಕಾರದಿಂದ ಒದಗಿಸಿದ ನಿಧಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಹಾಸಿಗೆಗಳ ಹೆಚ್ಚಳ, ಆಮ್ಲಜನಕದ ಲಭ್ಯತೆ ಮುಂತಾದ ಕ್ರಮಗಳ ಮೂಲಕ ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ಸನ್ನದ್ಧತೆಯ ಕುರಿತು ಮುಖ್ಯಮಂತ್ರಿಗಳು ಮಾತನಾಡಿದರು. ಕರ್ನಾಟಕ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಪ್ರಕರಣಗಳ ಪ್ರಸರಣ ಮತ್ತು ಅಪಾರ್ಟ್‌ ಮೆಂಟ್‌ ಗಳಲ್ಲಿ ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆಯೂ ಮಾತನಾಡಿದರು. ಮುಂಬರುವ ಹಬ್ಬಗಳ ಕಾರಣದಿಂದ ರಾಜ್ಯದಲ್ಲಿ ಪ್ರಕರಣಗಳ ಸಂಭವನೀಯ ಹೆಚ್ಚಳ ಮತ್ತು ಅದನ್ನು ನಿಭಾಯಿಸಲು ಆಡಳಿತದ ಸಿದ್ಧತೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಾತನಾಡಿದರು. ಈ ಅಲೆಯ ವಿರುದ್ಧದ ಹೋರಾಟದಲ್ಲಿ ರಾಜ್ಯವು ಕೇಂದ್ರದ ಜೊತೆಗೆ ನಿಲ್ಲುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದರು. ಜಾರ್ಖಂಡ್ ಮುಖ್ಯಮಂತ್ರಿ ಮಾತನಾಡಿ, ಕೆಲವು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ತಪ್ಪು ಕಲ್ಪನೆಗಳು ಲಸಿಕೆ ಕಾರ್ಯಕ್ರಮದಲ್ಲಿ ಕೆಲವು ತೊಡಕುಗಳನ್ನು ಉಂಟುಮಾಡಿವೆ ಎಂದರು. ಲಸಿಕೆ ಅಭಿಯಾನದಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ತಿಳಿಸಿದರು. ನಿಧಿ ಮತ್ತು ಮೂಲಸೌಕರ್ಯ ವಿಶೇಷವಾಗಿ ಆಮ್ಲಜನಕದ ಅಗತ್ಯತೆಗಳನ್ನು ಪೂರೈಸುವಲ್ಲಿನ ಬೆಂಬಲಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಮುನ್ನೆಚ್ಚರಿಕೆಯ ಡೋಸ್‌ ನಂತಹ ಕ್ರಮಗಳು ಅಪಾರ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದರು. ರಾಜ್ಯವು ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಮಣಿಪುರ ಮುಖ್ಯಮಂತ್ರಿ ತಿಳಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Budget 2026-27 lays blueprint for a future-ready digital ecosystem

Media Coverage

Budget 2026-27 lays blueprint for a future-ready digital ecosystem
NM on the go

Nm on the go

Always be the first to hear from the PM. Get the App Now!
...
Chief Minister of Haryana meets Prime Minister
February 02, 2026

Chief Minister of Haryana, Shri Nayab Saini met the Prime Minister, Shri Narendra Modi, at New Delhi, today.

The Prime Minister posted on X:

"Chief Minister of Haryana, Shri @NayabSainiBJP met Prime Minister @narendramodi."

@cmohry