ರಾಣಿ ಲಕ್ಷ್ಮಿಬಾಯಿ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೋರಾಟಗಾರ್ತಿಯರಿಗೆ ನಮನ ಸಲ್ಲಿಸಿದರು; ಮೇಜರ್‌ ಧ್ಯಾನ್‌ಚಂದ್‌ ಅವರನ್ನು ಸ್ಮರಿಸಿದರು
ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘದ ಮೊದಲ ಸದಸ್ಯರಾಗಿ ಪ್ರಧಾನಿ ತಮ್ಮ ಹೆಸರನ್ನು ನೊಂದಣಿ ಮಾಡಿಸಿಕೊಂಡರು
ಒಂದೆಡೆ ನಮ್ಮ ದೇಶದ ಸುರಕ್ಷಾ ಪಡೆಗಳು ಸದೃಢಗೊಳ್ಳುತ್ತಿವೆ. ಅವುಗಳ ಸಾಮರ್ಥ್ಯ ಹೆಚ್ಚುತ್ತಿದೆ. ಇನ್ನೊಂದೆಡೆ ಭವಿಷ್ಯದಲ್ಲಿ ದೇಶದ ಸುರಕ್ಷೆಗಾಗಿ ಸೇವೆ ಸಲ್ಲಿಸಲು ಯುವಪಡೆಯನ್ನು ಸಿದ್ಧಗೊಳಿಸುವ ವೇದಿಕೆಯೂ ಸಜ್ಜಾಗುತ್ತಿದೆ
ಸೈನಿಕ ಶಾಲೆಗಳಲ್ಲಿ ಹೆಣ್ಣುಮಕ್ಕಳ ಪ್ರವೇಶಕ್ಕೆ ಸರ್ಕಾರ ಅವಕಾಶವನ್ನು ನೀಡಿದ್ದು, ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿವೆ. ಈ ಶೈಕ್ಷಣಿಕ ವರ್ಷದಿಂದ ದೇಶದ 33 ಸೈನಿಕ ಶಾಲೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿವೆ
ಸುದೀರ್ಘಕಾಲದವರೆಗೂ ಭಾರತವು ಶಸ್ತ್ರಾಸ್ತ್ರಗಳ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕೊಳ್ಳುವ ದೇಶವಾಗಿತ್ತು. ಇದೀಗ ಭಾರತದಲ್ಲಿಯೇ ತಯಾರಿಸಿ, ವಿಶ್ವಕ್ಕಾಗಿ ತಯಾರಿಸಿ ಎಂಬ ಸೂತ್ರವನ್ನು ಅಪ್ಪಿದೆ

ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ರಾಣಿ ಲಕ್ಷ್ಮೀಬಾಯಿ ಅವರ ನೆಲದ ಜನರಿಗೆ ನಾನು ಕೈಮುಗಿದು ನಮಸ್ಕರಿಸುತ್ತೇನೆ. ಝಾನ್ಸಿಯು ಸ್ವಾತಂತ್ರ್ಯದ ಜ್ವಾಲೆಯನ್ನು, ಕಿಡಿಯನ್ನು ಹಚ್ಚಿತು. ಈ ನೆಲದ ಪ್ರತಿಯೊಂದು ಕಣವೂ ವೀರತ್ವ ಮತ್ತು ದೇಶಪ್ರೇಮದಲ್ಲಿ ಮಿಂದೆದ್ದಿದೆ. ಝಾನ್ಸಿಯ ವೀರ ರಾಣಿ, ರಾಣಿ ಲಕ್ಷ್ಮೀಬಾಯಿ  ಅವರಿಗೆ ನಾನು ವಂದಿಸುತ್ತೇನೆ.

ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗಿರುವ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಉತ್ಸಾಹೀ ಕರ್ಮಯೋಗಿ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ದೇಶದ ರಕ್ಷಣಾ ಸಚಿವರಾದ ಮತ್ತು ಈ ರಾಜ್ಯದ ಜನಪ್ರಿಯ ಪ್ರತಿನಿಧಿ ಹಾಗು ಅತ್ಯಂತ ಹಿರಿಯ ಸಹೋದ್ಯೋಗಿಯಾಗಿರುವ ಶ್ರೀ ರಾಜ್ ನಾಥ್ ಸಿಂಗ್ ಜೀ , ರಕ್ಷಣಾ ಖಾತೆ ಸಹಾಯಕ ಸಚಿವರಾದ  ಶ್ರೀ ಅಜಯ್ ಭಟ್ ಜೀ, ಎಂ.ಎಸ್.ಎಂ.ಇ. ಸಹಾಯಕ ಸಚಿವರಾದ ಶ್ರೀ ಭಾನುಪ್ರತಾಪ್ ವರ್ಮಾ ಜೀ ಮತ್ತು ಇತರ ಅಧಿಕಾರಿಗಳೇ, ಎನ್.ಸಿ.ಸಿ. ಕೆಡೆಟ್ ಗಳೇ ಮತ್ತು ಹಳೆವಿದ್ಯಾರ್ಥಿಗಳೇ, ಹಾಗು ಸ್ನೇಹಿತರೇ!

ಝಾನ್ಸಿಯ ಈ ವೀರ ಭೂಮಿಯಲ್ಲಿ ಕಾಲಿಟ್ಟ ಯಾರಲ್ಲೇ ಆದರೂ ಅವರ ದೇಹದಲ್ಲಿ ಶಕ್ತಿಯ ಸಂಚಾರ ಆಗದೇ ಇದ್ದೀತೇ? ಅಂತಹವರು ಯಾರಾದರೂ ಇರಲು ಸಾಧ್ಯವೇ, ಅಥವಾ “ನಾನು ನನ್ನ ಝಾನ್ಸಿಯನ್ನು ಬಿಟ್ಟು ಕೊಡಲಾರೆ” ಎಂಬುದು ಯಾರ ಕಿವಿಯಲ್ಲಾದರೂ ಅನುರಣಿಸದಿರಲು ಸಾಧ್ಯವೇ ಅಥವಾ ಯಾರಿಗೇ ಆದರೂ ದೈವಿಕ ’ರಣಚಂಡಿ’ಯ ಚಿಂತನೆ, ದೃಷ್ಟಿ ಇಲ್ಲಿರುವ ವಿಶಾಲವಾದ ಆಗಸದಲ್ಲಿ ಕಂಡು ಬರದೆ ಇದ್ದೀತೇ! ಮತ್ತು ಇಂದು ನಮ್ಮ ರಾಣಿ ಲಕ್ಷ್ಮೀ ಬಾಯಿ ಜೀ ಅವರ ಜನ್ಮದಿನ,  ಅವರು ಶೌರ್ಯ ಮತ್ತು ದೈರ್ಯಗಳ ಪ್ರತೀಕ! ಇಂದು ಝಾನ್ಸಿಯ ಈ ನೆಲ ಸ್ವಾತಂತ್ರ್ಯದ ಅದ್ದೂರಿಯ ಅಮೃತ ಮಹೋತ್ಸವವನ್ನು ಸಾಕ್ಷೀಕರಿಸುತ್ತಿದೆ! ಹೊಸ, ಬಲಿಷ್ಟ ಮತ್ತು ಸಾಮರ್ಥ್ಯಶೀಲ ಭಾರತ ಈ ನೆಲದಲ್ಲಿ ಒಡಮೂಡುತ್ತಿದೆ!.ಆದುದರಿಂದ  ಇಂದು ಝಾನ್ಸಿಗೆ ಬಂದ ಮೇಲೆ ನನಗೆ ನನ್ನ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದು ಅಷ್ಟೊಂದು ಸುಲಭವಾಗುತ್ತಿಲ್ಲ. ಆದರೆ ನಾನು ದೇಶಭಕ್ತಿಯ ಅಲೆಗಳನ್ನು ಕಾಣುತ್ತಿದ್ದೇನೆ ಮತ್ತು “ನನ್ನ ಝಾನ್ಸಿ” ಎಂಬ ಭಾವನೆಗಳು ನನ್ನ ಮನಸ್ಸಿನಲ್ಲಿ ತುಂಬಿ ತುಳುಕುತ್ತಿವೆ. ಬುಂದೇಲ್ ಖಂಡದ ಜನತೆ ನನ್ನಲ್ಲಿ ಸ್ಪೂರ್ತಿ ಉಕ್ಕಿಸುತ್ತಿದ್ದಾರೆ. ಜಾಗೃತ ಪ್ರಜ್ಞೆಯ ಈ ಭಾವನೆ ನನ್ನಲ್ಲಿ ಮೂಡುತ್ತಿದೆ ಮತ್ತು ಝಾನ್ಸಿ ಮಾತನಾಡುವುದು ನನಗೆ ಕೇಳುತ್ತಿದೆ!. ಈ ಝಾನ್ಸಿ, ರಾಣಿ ಲಕ್ಷ್ಮೀಬಾಯಿ ಅವರ ನೆಲ ಹೇಳುತ್ತಿದೆ-ನಾನು ಕ್ರಾಂತಿಕಾರಿಗಳ ಯಾತ್ರಾ ಸ್ಥಳದಲ್ಲಿದ್ದೇನೆ, ನಾನು ಝಾನ್ಸಿ, ನಾನು ಝಾನ್ಸಿ,ನಾನು ಝಾನ್ಸಿ. ತಾಯಿ ಭಾರತಿಯ ಆಶೀರ್ವಾದಗಳು ನನ್ನ ಮೇಲಿವೆ, ಝಾನ್ಸಿಯ ಬಗ್ಗೆ ನನಗೆ ಅತೀವ ಪ್ರೀತಿ ಇದೆ.ಝಾನ್ಸಿ ಎಂಬುದು ಕ್ರಾಂತಿಕಾರಿಗಳ ಕಾಶಿ. ರಾಣಿ ಝಾನ್ಸಿಯ ಹುಟ್ಟೂರಾದ ಕಾಶಿಯನ್ನು ನಾನು ಪ್ರತಿನಿಧಿಸುತ್ತಿರುವುದು ಮತ್ತು ಕಾಶಿಗೆ ನಾನು ಸೇವೆ ಸಲ್ಲಿಸುವ ಅವಕಾಶ ಲಭಿಸುವಂತಾಗಿರುವುದು ನನ್ನ ಇನ್ನೊಂದು ಸುಯೋಗ. ಆದುದರಿಂದ ನಾನು ಇಲ್ಲಿಗೆ ಬಂದಾಗ ವಿಶೇಷ ಕೃತಜ್ಞತೆಗಳನ್ನು ಹೊಂದಿದ್ದೇನೆ ಮತ್ತು ಇಲ್ಲಿಯ ಬಗ್ಗೆ ವಿಶೇಷ ಮಮತೆಯನ್ನು ಅನುಭವಿಸುತ್ತೇನೆ. ಈ ಕೃತಜ್ಞತೆಯ ಭಾವದಲ್ಲಿ ನಾನು ಝಾನ್ಸಿಗೆ ಶಿರ ಬಾಗುತ್ತೇನೆ ಮತ್ತು ವೀರರ ಭೂಮಿಯಾದ ಬುಂದೇಲ್ ಖಂಡಕ್ಕೆ ಶಿರಬಾಗಿ ನಮಿಸುತ್ತೇನೆ.  

ಸ್ನೇಹಿತರೇ,

ಇಂದು ಕಾರ್ತಿಕ ಪೂರ್ಣಿಮೆ ಜೊತೆ ದೇವ್ ದೀಪಾವಳಿ ಹಾಗು ಗುರು ನಾನಕ್ ದೇವ್ ಜೀ ಅವರ ಜನ್ಮವರ್ಷಾಚರಣೆ ಇದೆ. ನಾನು ಗುರು ನಾನಕ್ ದೇವ್ ಜೀ ಅವರಿಗೆ ಶಿರಬಾಗಿ ನಮಿಸುತ್ತೇನೆ ಮತ್ತು ಈ ಹಬ್ಬಗಳಿಗಾಗಿ ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ದೇವ ದೀಪಾವಳಿಯಂದು ಕಾಶಿಯನ್ನು ಅತ್ಯದ್ಭುತ ದೈವಿಕ ದೀಪಗಳಿಂದ ಅಲಂಕರಿಸಲಾಗಿದೆ. ನಮ್ಮ ಹುತಾತ್ಮರ ಸ್ಮರಣಾರ್ಥ ಗಂಗೆಯ ಘಾಟ್ ಗಳಲ್ಲಿ ದೀಪಗಳನ್ನು ಬೆಳಗಲಾಗಿದೆ. ಕಳೆದ ವರ್ಷ ದೇವ ದೀಪಾವಳಿಯಂದು ನಾನು ಕಾಶಿಯಲ್ಲಿದ್ದೆ. ಮತ್ತು ಇಂದು ನಾನು “ರಾಷ್ಟ್ರ ರಕ್ಷಾ ಸಮರ್ಪಣಾ ಪರ್ವ”ದ ಅಂಗವಾಗಿ ಝಾನ್ಸಿಯಲ್ಲಿದ್ದೇನೆ. ಝಾನ್ಸಿಯ ನೆಲದಿಂದ ಕಾಶಿಯ ಜನತೆಗೆ ನಾನು ಹಾರ್ದಿಕ ಶುಭಾಶಯಗಳನ್ನು ಹೇಳುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ವೀರಾಂಗನಾ ಝಾಲ್ಕರಿ ಬಾಯಿ ಅವರ  ಮಿಲಿಟರಿ ಪರಾಕ್ರಮ  ಮತ್ತು ವೀರತ್ವಕ್ಕೆ ಈ ಭೂಮಿ ಸಾಕ್ಷಿಯಾಗಿದೆ. ಅವರು ರಾಣಿ ಲಕ್ಷ್ಮೀಬಾಯಿ ಅವರ ನಿಕಟವರ್ತಿಯಾಗಿದ್ದರು. 1857 ಸ್ವಾತಂತ್ರ್ಯ ಹೋರಾಟದ ಆ ಅಮರಖ್ಯಾತಿಯ  ನಾಯಕಿಯ ಪಾದಗಳಲ್ಲಿ ನಾನು ನನ್ನ ಗೌರವಪೂರ್ವಕವಾದ  ನಮನಗಳನ್ನು ಸಲ್ಲಿಸುತ್ತೇನೆ. ಭಾರತೀಯರ ಶೌರ್ಯ ಮತ್ತು ಸಂಸ್ಕೃತಿಯ ಬಗ್ಗೆ ಈ ನೆಲದಿಂದ ಶಾಶ್ವತವಾದಂತಹ ಕಥೆಗಳನ್ನು ಬರೆದ ಮತ್ತು ಭಾರತ ಹೆಮ್ಮೆ ಪಡುವಂತೆ ಮಾಡಿದ ಚಂದೇಲರು ಮತ್ತು ಬುಂದೇಲರಿಗೆ ನಾನು ಶಿರಬಾಗಿ ನಮಿಸುತ್ತೇನೆ! ವೀರರಾದ ಅಲ್ಹಾ ಮತ್ತು ಉದಾಲ್ ಅವರು ಈಗಲೂ ತಾಯ್ನಾಡಿನ ರಕ್ಷಣೆಗಾಗಿ ತ್ಯಾಗ ಮಾಡಿದ ಸಂಕೇತಗಳಾಗಿದ್ದಾರೆ, ಬುಂದೇಲ್ ಖಂಡದ ಈ ವೈಭವಕ್ಕೂ ನಾನು ತಲೆ ಬಾಗುತ್ತೇನೆ. ಅಲ್ಲಿ ಅನೇಕ ಅಜರಾಮರ ಹೋರಾಟಗಾರರಿದ್ದಾರೆ, ಝಾನ್ಸಿ ಜೊತೆ ವಿವಿಧ ಕಾಲಘಟ್ಟದಲ್ಲಿ ವಿಶೇಷ ಬಾಂಧವ್ಯ ಹೊಂದಿದಂತಹ ಕ್ರಾಂತಿಕಾರಿಗಳು,  ಹೀರೋಗಳು ಮತ್ತು ಹೀರೋಯಿನ್ ಗಳಿದ್ದಾರೆ ಮತ್ತು ಇಲ್ಲಿಂದ ಪ್ರೇರಣೆ ಪಡೆದವರಿದ್ದಾರೆ. ಆ ಎಲ್ಲಾ ಶ್ರೇಷ್ಟ ವ್ಯಕ್ತಿತ್ವಗಳಿಗೆ ನಾನು ಗೌರವದ ನಮನ ಸಲ್ಲಿಸುತ್ತೇನೆ. ರಾಣಿ ಲಕ್ಷ್ಮೀ ಬಾಯಿ ಅವರ ಸೇನೆಯಲ್ಲಿ ಹೋರಾಟ ಮಾಡಿ ಪರಮ ತ್ಯಾಗ ಮಾಡಿದ್ದಾರೆ ನಿಮ್ಮ ಪೂರ್ವಿಕರು. ಈ ಭೂಮಿಯ ಮಕ್ಕಳಿಗಾಗಿ ಅವರ ಪರವಾಗಿ ಮಹೋನ್ನತ ತ್ಯಾಗ ಮಾಡಿದ ಅವರೆಲ್ಲರಿಗೂ ನಾನು ಶಿರಬಾಗುತ್ತೇನೆ. 

ಸ್ನೇಹಿತರೇ,

ಝಾನ್ಸಿಯ ಇನ್ನೋರ್ವ ಪುತ್ರ ಮೇಜರ್ ಧ್ಯಾನ್ ಚಂದ್ ಜೀ ಅವರನ್ನು ಸ್ಮರಿಸಲು ಇಚ್ಛೆಪಡುತ್ತೇನೆ. ಅವರು ಕ್ರೀಡಾ ಜಗತ್ತಿನಲ್ಲಿ ಭಾರತಕ್ಕೆ ಜಾಗತಿಕ ಮನ್ನಣೆ, ಗುರುತಿಸುವಿಕೆಯನ್ನು ತಂದವರು. ಬಹಳ ಹಿಂದೇನೂ ಅಲ್ಲ, ನಮ್ಮ ಸರಕಾರ ದೇಶದ ಖೇಲ್ ರತ್ನ ಪ್ರಶಸ್ತಿಗಳನ್ನು ಮೇಜರ್ ಧ್ಯಾನ್ ಚಂದ್ ಜೀ ಅವರ ಹೆಸರಿನೊಂದಿಗೆ ಮರು ನಾಮಕರಣ ಮಾಡಿತು. ಝಾನ್ಸಿಯ ಈ ಗೌರವ ಮತ್ತು ಅದರ ಪುತ್ರ ನಮ್ಮೆಲ್ಲರಿಗೂ ಹೆಮ್ಮೆಯನ್ನು ತಂದಿದ್ದಾರೆ.

ಸ್ನೇಹಿತರೇ,

ಇಲ್ಲಿಗೆ ಬರುವುದಕ್ಕೆ ಮೊದಲು, ನಾನು ಮಹೋಬಾದಲ್ಲಿದ್ದೆ. ಅಲ್ಲಿ ನೀರಿಗೆ ಸಂಬಂಧಿಸಿದ ಯೋಜನೆಗಳಿಗೆ ಶಿಲಾನ್ಯಾಸ ಮಾಡುವ ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಅವಕಾಶ ನನಗೆ ದೊರಕಿತ್ತು.ಇವು ಬುಂದೇಲ್ ಖಂಡದ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತವೆ. ಮತ್ತು ಈಗ ಝಾನ್ಸಿಯಲ್ಲಿ ನಾನು “ರಾಷ್ಟ್ರ ರಕ್ಷಾ ಸಮರ್ಪಣ ಪರ್ವ”ದ  ಭಾಗವಾಗುತ್ತಿದ್ದೇನೆ. ಈ ಹಬ್ಬವು ಝಾನ್ಸಿಯಿಂದ ದೇಶದ ರಕ್ಷಣಾ ವಲಯದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಈಗ 400 ಕೋ.ರೂ.ಗಳ ಮೊತ್ತದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನ ಹೊಸ ಸ್ಥಾವರಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಉತ್ತರ ಪ್ರದೇಶ ರಕ್ಷಣಾ ಕಾರಿಡಾರಿನ ಝಾನ್ಸಿ ಗುಚ್ಛ ಇಲ್ಲಿಗೆ ಇದು ಹೊಸ ಗುರುತಿಸುವಿಕೆಯನ್ನು ನೀಡಲಿದೆ. ಟ್ಯಾಂಕ್ ನಿರೋಧಿ ಕ್ಷಿಪಣಿಗಳ ಸಲಕರಣೆಗಳನ್ನು ಝಾನ್ಸಿಯಲ್ಲಿ ತಯಾರಿಸಲಾಗುವುದು. ಇದು ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಹೊಸ ಬಲವನ್ನು ಮತ್ತು ವಿಶ್ವಾಸವನ್ನು ನೀಡಲಿದೆ. ಮತ್ತು ಅದರ ಪರಿಣಾಮವಾಗಿ ದೇಶದ ಗಡಿಗಳು ಹೆಚ್ಚು ಸುರಕ್ಷಿತವಾಗಿರುತ್ತವೆ.

ಸ್ನೇಹಿತರೇ,

ಇದರ ಜೊತೆಗೆ ಭಾರತದಲ್ಲಿ ತಯಾರಾದಂತಹ ದೇಶೀಯ ಲಘು ಯುದ್ಧ ಹೆಲಿಕಾಪ್ಟರುಗಳು, ಡ್ರೋನ್ ಗಳು ಮತ್ತು ಇಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ನಮ್ಮ ಪಡೆಗಳಿಗೆ ಒದಗಿಸಲಾಗುತ್ತಿದೆ. 16,500 ಅಡಿ ಎತ್ತರದಲ್ಲಿ ಹಾರಾಟ ಮಾಡುವಂತಹ ಲಘು ಯುದ್ಧ ಹೆಲಿಕಾಪ್ಟರ್ ಇದಾಗಿದೆ. ಇದು ನವ ಭಾರತದ ಶಕ್ತಿ ಮತ್ತು ಸ್ವಾವಲಂಬಿ ಭಾರತದ ಸಾಧನೆ ಹಾಗು ನಮ್ಮ ಝಾನ್ಸಿಯ ವೀರತ್ವ  ಅದನ್ನು ಸಾಕ್ಷೀಕರಿಸುತ್ತಿದೆ.

ಸ್ನೇಹಿತರೇ,

ಒಂದೆಡೆ ನಮ್ಮ ಪಡೆಗಳ ಶಕ್ತಿ ಹೆಚ್ಚುತ್ತಿದ್ದರೆ, ಅದೇ ವೇಳೆಗೆ ಭವಿಷ್ಯದಲ್ಲಿ ದೇಶವನ್ನು ರಕ್ಷಿಸುವ ಸಾಮರ್ಥ್ಯ ಇರುವ ಯುವಜನತೆಗಾಗಿ ನೆಲವನ್ನು ತಯಾರು ಮಾಡಲಾಗುತ್ತಿದೆ. ಈ 100 ಸೈನಿಕ ಶಾಲೆಗಳು ಭವಿಷ್ಯದಲ್ಲಿ ದೇಶಕ್ಕೆ ಶಕ್ತಿಶಾಲೀ ಕೈಗಳನ್ನು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಿವೆ. ನಮ್ಮ ಸರಕಾರವು ಸೈನಿಕ ಶಾಲೆಗಳಿಗೆ ಹೆಣ್ಣು ಮಕ್ಕಳ ಸೇರ್ಪಡೆಯನ್ನೂ ಆರಂಭ ಮಾಡಿದೆ. 33 ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸೇರ್ಪಡೆ ಈ ಅವಧಿಯಿಂದ ಆರಂಭಗೊಂಡಿದೆ. ಈಗ ರಾಣಿ ಲಕ್ಷ್ಮೀಬಾಯಿ ಅವರಂತಹ ಹೆಣ್ಣು ಮಕ್ಕಳು ಸೈನಿಕ ಶಾಲೆಗಳಲ್ಲಿ ರೂಪುಗೊಂಡು ಹೊರಬರಲಿದ್ದಾರೆ ಮತ್ತು ಅವರು ದೇಶದ ರಕ್ಷಣೆ, ಭದ್ರತೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಳ್ಳಲಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಜೊತೆಗೆ ಎನ್.ಸಿ.ಸಿ. ಹಿರಿಯ ವಿದ್ಯಾರ್ಥಿಗಳ ಸಂಘಟನೆ ಮತ್ತು ಎನ್.ಸಿ.ಸಿ. ಕೆಡೆಟ್ ಗಳಿಗೆ ಸಿಮ್ಯುಲೇಷನ್ ತರಬೇತಿಗಾಗಿರುವ ರಾಷ್ಟ್ರೀಯ ಕಾರ್ಯಕ್ರಮಗಳು ’ರಾಷ್ಟ್ರ ರಕ್ಷಾ ಸಮರ್ಪಣ ಪರ್ವ” ದ ಉತ್ಸಾಹವನ್ನು, ಸ್ಪೂರ್ತಿಯನ್ನು  ಉದ್ದೀಪಿಸಲಿವೆ. ಇಂದು ರಕ್ಷಣಾ ಸಚಿವಾಲಯ ಮತ್ತು ಎನ್.ಸಿ.ಸಿ. ಯು ನನ್ನ ಬಾಲ್ಯ ಕಾಲದ ನೆನಪುಗಳನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಮತ್ತು ಎನ್.ಸಿ.ಸಿ.ಯ ಸಾಮರ್ಥ್ಯ, ಉತ್ಸಾಹದ ಜೊತೆ ಕೂಡಿಕೊಳ್ಳುವಂತೆ ಮಾಡಿದೆ. ಎನ್.ಸಿ.ಸಿ. ಕೆಡೆಟ್ ಗಳು ಈ ಹಿರಿಯ ವಿದ್ಯಾರ್ಥಿಗಳ ಸಂಘಟನೆಯ ಭಾಗವಾಗಬೇಕು ಮತ್ತು ಒಗ್ಗೂಡಿ ದೇಶಕ್ಕಾಗಿ ಏನಾದರು ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ. ಎನ್.ಸಿ.ಸಿ.ಯು ನಮಗೆ ಸ್ಥಿರತೆ, ಧೈರ್ಯ ಮತ್ತು ದೇಶದ ಆತ್ಮ ಗೌರವದೊಂದಿಗೆ ಬದುಕುವ ಪಾಠವನ್ನು ಹೇಳಿಕೊಟ್ಟಿದೆ. ಮತ್ತು ನಾವು ಇಂತಹ ಮೌಲ್ಯಗಳನ್ನು ಮುಂಚೂಣಿಗೆ ತರಬೇಕು. ಎನ್.ಸಿ.ಸಿ. ಕೆಡೆಟ್ ಗಳ ಆಶಯದ ಇಚ್ಛಾಶಕ್ತಿ ಮತ್ತು ಅರ್ಪಣಾಭಾವ ದೇಶದ ಕರಾವಳಿ ಪ್ರದೇಶಗಳಲ್ಲಿ ಸಮರ್ಪಕ ರೀತಿಯಲ್ಲಿ ಪ್ರಯೋಜನಕ್ಕೆ ಬರಲಿದೆ. ಇಂದು ಮೊದಲ ಎನ್.ಸಿ.ಸಿ. ಹಿರಿಯ ವಿದ್ಯಾರ್ಥಿಗಳ ಸದಸ್ಯತ್ವ ಕಾರ್ಡ್ ಕೊಟ್ಟುದಕ್ಕಾಗಿ ನಿಮ್ಮೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಇದು ನನಗೆ ಹೆಮ್ಮೆಯ ಸಂಗತಿ.

ಸ್ನೇಹಿತರೇ,

ಝಾನ್ಸಿಯ ತ್ಯಾಗ ಭೂಮಿಯಿಂದ ಇಂದು ಇನ್ನೊಂದು ಪ್ರಮುಖ ವ್ಯವಸ್ಥೆಯೊಂದನ್ನು ಆರಂಭ ಮಾಡಲಾಗುತ್ತಿದೆ. “ರಾಷ್ಟ್ರೀಯ ಯುದ್ಧ ಸ್ಮಾರಕ”ದಲ್ಲಿ ಡಿಜಿಟಲ್ ಕಿಯೋಸ್ಕ್ ನ್ನು ಆರಂಭ ಮಾಡಲಾಗುತ್ತಿದೆ.ಈಗ ಎಲ್ಲಾ ದೇಶವಾಸಿಗಳೂ ನಮ್ಮ ಹುತಾತ್ಮರಿಗೆ, ಯುದ್ಧ ವೀರರಿಗೆ ಮೊಬೈಲ್ ಆಪ್ ಮೂಲಕ ತಮ್ಮ ಗೌರವಗಳನ್ನು ಸಲ್ಲಿಸಬಹುದಾಗಿದೆ. ಮತ್ತು ಭಾವನಾತ್ಮಕವಾಗಿ ಸಮಾನ ವೇದಿಕೆಯ ಮೂಲಕ ಇಡೀ ದೇಶದ ಜೊತೆ ಜೋಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಉತ್ತರ ಪ್ರದೇಶ ಸರಕಾರವು ಕೂಡಾ ಅಟಲ್ ಏಕತಾ ಉದ್ಯಾನವನ ಮತ್ತು 600 ಮೆ.ವಾ. ಅಲ್ಟ್ರಾಮೆಗಾ ಸೌರ  ವಿದ್ಯುತ್ ಪಾರ್ಕನ್ನು ಇಂದು ಝಾನ್ಸಿಗೆ ಅರ್ಪಣೆ ಮಾಡಿದೆ. ಜಗತ್ತು ಮಾಲಿನ್ಯ ಮತ್ತು ಪರಿಸರ ಸಂಬಂಧಿ ಸವಾಲುಗಳ ಜೊತೆ ಹೋರಾಡುತ್ತಿರುವಾಗ ಸೌರ ವಿದ್ಯುತ್ ಪಾರ್ಕ್ ನಂತಹ ಸಾಧನೆಗಳು ರಾಜ್ಯದ ಮತ್ತು ದೇಶದ ದೂರದೃಷ್ಟಿಯ ಚಿಂತನೆಗೆ ಉದಾಹರಣೆ. ನಾನು ಈ ಅಭಿವೃದ್ಧಿಯ ಸಾಧನೆಗಳಿಗಾಗಿ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳಿಗಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ಸ್ನೇಹಿತರೇ,

ನನ್ನ ಹಿಂದಿರುವ ಚಾರಿತ್ರಿಕ ಝಾನ್ಸಿ ಕೋಟೆ ಭಾರತವು ವೀರತ್ವದ ಕೊರತೆಯಿಂದ ಅಥವಾ ಧೈರ್ಯದ ಕೊರತೆಯಿಂದ ಯುದ್ಧವನ್ನು ಎಂದೂ ಸೋತಿಲ್ಲ ಎಂಬ ವಸ್ತುಸ್ಥಿತಿಗೆ ಸಾಕ್ಷಿಯಾಗಿದೆ!. ರಾಣಿ ಲಕ್ಷ್ಮೀ ಬಾಯಿ ಬಳಿ ಸಂಪನ್ಮೂಲಗಳಿದ್ದರೆ ಮತ್ತು  ಬ್ರಿಟಿಷರ ಬಳಿ ಇದ್ದಂತಹ ಆಧುನಿಕ ಶಸ್ತ್ರಾಸ್ತ್ರಗಳಿದ್ದರೆ, ಆಗ ದೇಶದ ಸ್ವಾತಂತ್ರ್ಯದ ಇತಿಹಾಸವೇ ಬದಲಾಗಿರುತ್ತಿತ್ತು!. ನಮಗೆ ಸ್ವಾತಂತ್ರ್ಯ ದೊರೆತಾಗ ನಮಗೆ ಅವಕಾಶ ಮತ್ತು  ಅನುಭವ ಇತ್ತು. ಸರ್ದಾರ್ ಪಟೇಲರ ಕನಸಿನ ಭಾರತವನ್ನು ರೂಪಿಸುವುದು ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿ. ಸ್ವಾತಂತ್ರ್ಯದ ಈ ಪುಣ್ಯಕರ ಕಾಲಘಟ್ಟದಲ್ಲಿ ದೇಶದ ದೃಢ ನಿರ್ಧಾರ ಮತ್ತು ಗುರಿ ಇದಾಗಿದೆ. ಬುಂದೇಲ್ ಖಂಡದ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಈ ಆಂದೋಲನದಲ್ಲಿ ಮುಂಚೂಣಿ ಪಾತ್ರವನ್ನು ವಹಿಸಲಿದೆ. ಬುಂದೇಲ್ ಖಂಡವು ಒಂದು ಕಾಲದಲ್ಲಿ ಶೌರ್ಯ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿತ್ತು. ಈಗ ಅದು ಭಾರತದ ವ್ಯೂಹಾತ್ಮಕ ಶಕ್ತಿಯ ಪ್ರಮುಖ ಕೇಂದ್ರವಾಗಿ ಪರಿಗಣಿಸಲ್ಪಡಲಿದೆ. ನನ್ನಲ್ಲಿ ನಂಬಿಕೆ ಇಡಿ, ಬುಂದೇಲ್ ಖಂಡ ಎಕ್ಸ್ ಪ್ರೆಸ್ ವೇ ಈ ವಲಯದ ಅಭಿವೃದ್ಧಿಯ ಎಕ್ಸ್ ಪ್ರೆಸ್ ವೇ ಆಗಲಿದೆ. ಇಂದು ಕ್ಷಿಪಣಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪೆನಿಗೆ ಶಿಲಾನ್ಯಾಸ ಮಾಡಲಾಗುತ್ತಿದೆ ಮತ್ತು ಇಂತಹ ಇನ್ನೂ ಹಲವು ಕಂಪೆನಿಗಳು ಸದ್ಯೋಭವಿಷ್ಯದಲ್ಲಿ ಇಲ್ಲಿಗೆ ಬರಲಿವೆ.

ಸ್ನೇಹಿತರೇ,

ಬಹಳ ದೀರ್ಘಾವಧಿಯಿಂದ ಭಾರತವು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ವಿಶ್ವದ ಅತ್ಯಂತ ದೊಡ್ಡ ರಾಷ್ಟ್ರವಾಗಿತ್ತು. ನಮ್ಮ ಪ್ರತಿಷ್ಟೆ ಏನಾಗಿರಬಹುದು? ಶಸ್ತ್ರಗಳನ್ನು ಖರೀದಿಸುವುದು ನಮ್ಮ ದೇಶದ ಪ್ರತಿಷ್ಟೆಯಾಗಿತ್ತು. ನಮ್ಮನ್ನು ನಿರಂತರವಾಗಿ ಆ ರೀತಿಯಲ್ಲಿ ಅಳತೆ ಮಾಡಲಾಗುತ್ತಿತ್ತು. ಆದರೆ ಇಂದು ದೇಶದ ಮಂತ್ರ-ಮೇಕ್ ಇನ್ ಇಂಡಿಯಾ, ವಿಶ್ವಕ್ಕಾಗಿ ತಯಾರಿಸಿ ಎಂಬುದಾಗಿದೆ. ಇಂದು ಭಾರತವು ತನ್ನ ಪಡೆಗಳನ್ನು ದೇಶೀಯವಾಗಿ ಸ್ವಾವಲಂಬಿಯಾಗಿಸಲು ಕಾರ್ಯ ನಿರತವಾಗಿದೆ. ನಾವು ದೇಶದ ರಕ್ಷಣಾ ವಲಯದ ಜೊತೆ ಖಾಸಗಿ ವಲಯದ ಪ್ರತಿಭೆಯನ್ನು  ಸರಿಹೊಂದಿಸುತ್ತಿದ್ದೇವೆ. ಹೊಸ ನವೋದ್ಯಮಗಳು ಈ ಕ್ಷೇತ್ರದಲ್ಲಿಯೂ ತಮ್ಮ ತಜ್ಞತೆಯನ್ನು ತೋರಿಸಲು ಈಗ ಅವಕಾಶಗಳನ್ನು ಪಡೆಯುತ್ತಿವೆ. ಮತ್ತು ಇದೆಲ್ಲದರಲ್ಲೂ ಒಟ್ಟಾಗಿ ಉತ್ತರ ಪ್ರದೇಶದ ರಕ್ಷಣಾ ಕಾರಿಡಾರಿನ ಝಾನ್ಸಿ ಗುಚ್ಛ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಲಿದೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ  ಎಂ.ಎಸ್.ಎಂ.ಇ.ಗಳಿಗೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಇಲ್ಲಿರುವ ಯುವ ಜನತೆಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಕೆಲವು ವರ್ಷಗಳ ಹಿಂದಿನವರೆಗೆ ತಪ್ಪು ನೀತಿಗಳ ಪರಿಣಾಮವಾಗಿ ಇಲ್ಲಿಂದ ಜನ ವಲಸೆ ಹೋಗುತ್ತಿದ್ದರು, ಈಗ ಅದು ಉದ್ಭವಿಸುತ್ತಿರುವ ಹೊಸ ಸಾಧ್ಯತೆಗಳ ಪರಿಣಾಮವಾಗಿ ಆಕರ್ಷಣೆಯ ಕೇಂದ್ರವಾಗುತ್ತಿದೆ. ದೇಶಾದ್ಯಂತದಿಂದ ಮತ್ತು ವಿದೇಶಗಳಿಂದ ಜನರು ಬುಂದೇಲ್ ಖಂಡಕ್ಕೆ ಬರಲಿದ್ದಾರೆ.  ಬುಂದೇಲ್ ಖಂಡದ ಭೂಮಿ ಒಂದು ಕಾಲದಲ್ಲಿ ಮಳೆಯ ಕೊರತೆಯಿಂದಾಗಿ ಬರಡು ಭೂಮಿಯಾಗಿತ್ತು. ಈಗದು ಪ್ರಗತಿಯ ಬೀಜಗಳನ್ನು ಒಳಗೊಂಡಿದೆ.

ಸ್ನೇಹಿತರೇ,

ರಕ್ಷಣಾ ಬಜೆಟಿನ ದೊಡ್ಡ ಭಾಗವನ್ನು ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳಿಗೆ ಬಳಸುವುದೆಂದು ದೇಶ ನಿರ್ಧರಿಸಿದೆ. ರಕ್ಷಣಾ ಸಚಿವಾಲಯ ಇಂತಹ 200 ಅಧಿಕ ಸಲಕರಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಈಗ ದೇಶದೊಳಗೇ ಖರೀದಿ ಮಾಡಬಹುದೇ ಹೊರತು ಹೊರಗಿನಿಂದ ಖರೀದಿಸುವಂತಿಲ್ಲ. ಅವುಗಳ ಆಮದನ್ನು ನಿಷೇಧಿಸಲಾಗಿದೆ.

ಸ್ನೇಹಿತರೇ,

ರಾಣಿ ಲಕ್ಷ್ಮೀ ಬಾಯಿ, ಝಾಲ್ಕರಿ ಬಾಯಿ, ಅವಂತಿ ಬಾಯಿ, ಉದಾ ದೇವಿ ಅವರಂತಹ ಅನೇಕ ಪ್ರತಿಮೆಗಳಿವೆ. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್, ಚಂದ್ರಶೇಖರ ಅಝಾದ್ ಮತ್ತು ಭಗತ್ ಸಿಂಗ್ ಅವರಂತಹ ದೊಡ್ಡ ಚೇತನಗಳು ನಮ್ಮ ಪ್ರತಿಮೆಗಳಾಗಿವೆ. ಆದುದರಿಂದ ನಾವೆಲ್ಲ ಒಟ್ಟಾಗಿ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಮಗ್ರತೆಯ ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ನಾವು ಅಭಿವೃದ್ಧಿ ಮತ್ತು ಪ್ರಗತಿಯ ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ರಾಣಿ ಲಕ್ಷ್ಮೀ ಬಾಯಿ ಅವರನ್ನು ಇಷ್ಟೊಂದು ಅದ್ದೂರಿ ರೀತಿಯಲ್ಲಿ ದೇಶವು ಸ್ಮರಿಸಿಕೊಳ್ಳುತ್ತಿರುವಾಗ ಬುಂದೇಲ್ ಖಂಡದಲ್ಲಿ ಇತರ ಅನೇಕ ಪುತ್ರರು ಮತ್ತು ಹೆಣ್ಣು ಮಕ್ಕಳು ಇದ್ದಾರೆ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಈ ಭೂಮಿಯ ವೈಭವವನ್ನು ಮರಳಿ ತರಲು ತ್ಯಾಗ ಮಾಡಿದ ಇಂತಹವರ ಇತಿಹಾಸವನ್ನು ದೇಶದ ಮತ್ತು ವಿಶ್ವದ ಮುನ್ನೆಲೆಗೆ ತರಲು ನಾನು ಯುವ ಜನತೆಗೆ ಕರೆ ಕೊಡುತ್ತೇನೆ. ಈ ಅಜರಾಮರವಾದಂತಹ ನಾಯಕತ್ವದ ಭೂಮಿಯ ವೈಭವವನ್ನು ನಾವೆಲ್ಲರೂ ಒಗ್ಗೂಡಿ ಮರುಸ್ಥಾಪನೆ ಮಾಡುವಲ್ಲಿ ಸಫಲರಾಗುವ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಅನುರಾಗ್ ಜೀ ಇಂತಹ ವಿಷಯಗಳ ಬಗ್ಗೆ ಏನಾದರೊಂದು ಮಾಡುತ್ತಿರುತ್ತಾರೆ. ವಾರ ಅವಧಿಯ ರಾಷ್ಟ್ರ ರಕ್ಷಾ ಪರ್ವ್ ಕಾರ್ಯಕ್ರಮಕ್ಕೆ ಅವರು ಸ್ಥಳೀಯ ಜನರನ್ನು ತೊಡಗಿಸಿಕೊಂಡಿರುವ ಬಗೆಯನ್ನು ನಾನು ಕಾಣುತ್ತಿದ್ದೇನೆ. ನಮ್ಮ ಸಂಸತ್ ಸದಸ್ಯರು ಮತ್ತು ಅವರ ಎಲ್ಲಾ ಸಹೋದ್ಯೋಗಿಗಳು ಸರಕಾರ ಮತ್ತು ಜನರು ಹೇಗೆ ಇಂತಹ ಅದ್ಭುತವಾದ ಕೆಲಸವನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾನವರನ್ನು ಅಭಿನಂದಿಸುತ್ತೇನೆ. ಗೌರವಾನ್ವಿತ ರಾಜ್ ನಾಥ್ ಜೀ ಮತ್ತವರ ಇಡೀ ತಂಡಕ್ಕೆ ಈ ಅದ್ದೂರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಮತ್ತು ರಕ್ಷಣಾ ಕಾರಿಡಾರಿಗೆ ಉತ್ತರ ಪ್ರದೇಶವನ್ನು ಆಯ್ಕೆ ಮಾಡಿದುಕ್ಕಾಗಿ ಹಲವು ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಅದು ಬಹಳ ಪರಿಣಾಮಕಾರಿಯಾದುದಾಗಿದೆ. ಯೋಗೀ ಜೀ ಕೂಡಾ ಉತ್ತರ ಪ್ರದೇಶದ ಅಭಿವೃದ್ಧಿಗೆ ಮತ್ತು ಹೊಸ ಶಕ್ತಿ ಮತ್ತು ಮುಂಚಲನೆಯ ಬೆಂಬಲವನ್ನು ಒದಗಿಸಿದ್ದಾರೆ. ರಕ್ಷಣಾ ಕಾರಿಡಾರ್ ಮತ್ತು ಬುಂದೇಲ್ ಖಂಡವನ್ನು ರಾಷ್ಟ್ರೀಯ ರಕ್ಷಣೆಗಾಗಿರುವ ಫಲವತಾದ ಭೂಮಿಯಾಗಿ ಮತ್ತೆ ರೂಪಿಸುವ ಚಿಂತನೆ ಒಂದು ಬಹಳ ದೂರ ದೃಷ್ಟಿಯ ಚಿಂತನೆ ಎಂದು ನಾನು ಭಾವಿಸುತ್ತೇನೆ. ಅವರನ್ನೂ ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಆ ಪವಿತ್ರ ಹಬ್ಬಗಳಿಗಾಗಿ ನಿಮಗೆ ನಾನು ಶುಭಾಶಯಗಳನ್ನು ಹಾರೈಸುತ್ತೇನೆ. ನಿಮಗೆ ಬಹಳ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Freed Banks From NPA Illness': PM Modi Discusses Reforms, Economy, Trade Deals, World Order

Media Coverage

Freed Banks From NPA Illness': PM Modi Discusses Reforms, Economy, Trade Deals, World Order
NM on the go

Nm on the go

Always be the first to hear from the PM. Get the App Now!
...
Prime Minister Congratulates India’s U-19 Cricket Team on World Cup Victory
February 06, 2026

The Prime Minister, Shri Narendra Modi, has lauded the outstanding performance of India’s Under-19 cricket team for clinching the World Cup title.

Prime Minister commended the team for playing very well through the tournament, showcasing exceptional skill. This win will inspire several young sportspersons too, he added.

In a message on X, Shri Modi said:

“India’s cricketing talent shines!

Proud of our U-19 team for bringing home the World Cup. The team has played very well through the tournament, showcasing exceptional skill. This win will inspire several young sportspersons too. Best wishes to the players for their upcoming endeavours.”