ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 20 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುಮಾರು 11:15ಕ್ಕೆ ಪ್ರಧಾನಮಂತ್ರಿಯವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ಸುಮಾರು 3,200 ಕೋಟಿ ರೂ. ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ NH-34ರ 66.7 ಕಿಮೀ ಉದ್ದದ ಬರಜಗುಲಿ - ಕೃಷ್ಣಾನಗರ ವಿಭಾಗದ ಚತುಷ್ಪಥ ರಸ್ತೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ NH-34ರ 17.6 ಕಿಮೀ ಉದ್ದದ ಬಾರಾಸತ್-ಬರಜಗುಲಿ ವಿಭಾಗದ ಚತುಷ್ಪಥ ಕಾಮಗಾರಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಯೋಜನೆಗಳು ಕೋಲ್ಕತ್ತಾ ಮತ್ತು ಸಿಲಿಗುರಿ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಲಿವೆ. ಇವು ಪ್ರಯಾಣದ ಸಮಯವನ್ನು ಸುಮಾರು 2 ಗಂಟೆಗಳಷ್ಟು ಕಡಿಮೆ ಮಾಡಲು ಸಹಾಯ ಮಾಡಲಿವೆ, ತಡೆರಹಿತ ಸಂಚಾರ ಮತ್ತು ವಾಹನಗಳ ವೇಗವಾದ ಹಾಗೂ ಸುಗಮ ಚಲನೆಯನ್ನು ಖಚಿತಪಡಿಸಲಿವೆ, ವಾಹನ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿವೆ ಮತ್ತು ಕೋಲ್ಕತ್ತಾದಿಂದ ಪಶ್ಚಿಮ ಬಂಗಾಳದ ಇತರ ನೆರೆಯ ಜಿಲ್ಲೆಗಳಿಗೆ ಹಾಗೂ ನೆರೆಯ ದೇಶಗಳೊಂದಿಗೆ ಸಂಪರ್ಕವನ್ನು ಸುಧಾರಿಸಲಿವೆ. ಈ ಯೋಜನೆಗಳು ಈ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿವೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ವೇಗ ನೀಡಲಿವೆ.


