'ವಿಕಸಿತ ಭಾರತ, ವಿಕಸಿತ ಜಮ್ಮು-ಕಾಶ್ಮೀರ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಕೃಷಿ ಆರ್ಥಿಕತೆಯನ್ನು ಉತ್ತೇಜಿಸಲು ಸುಮಾರು 5000 ಕೋಟಿ ರೂ.ಗಳ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ
'ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ'ವು ಜಮ್ಮು-ಕಾಶ್ಮೀರದ ಸುಮಾರು 2.5 ಲಕ್ಷ ರೈತರನ್ನು ವಿಶೇಷ ʻದಕ್ಷ ಕಿಸಾನ್ ಪೋರ್ಟಲ್ʼ ಮೂಲಕ ಕೌಶಲ್ಯ ಅಭಿವೃದ್ಧಿಯೊಂದಿಗೆ ಸಜ್ಜುಗೊಳಿಸುತ್ತದೆ; ಈ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 2000 ʻಕಿಸಾನ್ ಸೇವಾ ಕೇಂದ್ರ’ಗಳನ್ನು ಸಹ ಸ್ಥಾಪಿಸಲಾಗುವುದು
ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ, `ಸ್ವದೇಶ ದರ್ಶನ’ ಮತ್ತು ʻಪ್ರಸಾದ’ ಯೋಜನೆಯಡಿ
1400 ಕೋಟಿ ರೂ.ಗೂ ಅಧಿಕ ಮೌಲ್ಯದ 52 ಪ್ರವಾಸೋದ್ಯಮ ವಲಯದ ಕಾಮಗಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿಗಳು
ಶ್ರೀನಗರದ 'ಹಜರತ್‌ಬಲ್ ದೇಗುಲದ ಸಮಗ್ರ ಅಭಿವೃದ್ಧಿ' ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿಗಳು
ಪ್ರಮುಖ ಧಾರ್ಮಿಕ ಸ್ಥಳಗಳು, ಅನುಭವ ಕೇಂದ್ರಗಳು, ಪರಿಸರ ಪ್ರವಾಸೋದ್ಯಮ ತಾಣಗಳು ಹಾಗೂ ಪ್ರವಾಸಿ ಸರ್ಕ್ಯೂಟ್‌ಗಳನ್ನು ದೇಶಾದ್ಯಂತ ಅಭಿವೃದ್ಧಿಪಡಿಸಲಾಗುವುದು
ʻಸವಾಲು ಆಧಾರಿತ ಗಮ್ಯಸ್ಥಾನ ಅಭಿವೃದ್ಧಿ ಯೋಜನೆʼಯಡಿ ಆಯ್ಕೆಯಾದ ಪ್ರವಾಸಿ ತಾಣಗಳ ಹೆಸರನ್ನು ಘೋಷಿಸಲಿರುವ ಪ್ರಧಾನಮಂತ್ರಿಗಳು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 7ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀನಗರದ ಬಕ್ಷಿ ಕ್ರೀಡಾಂಗಣಕ್ಕೆ ತಲುಪಲಿರುವ ಪ್ರಧಾನಿ, ಅಲ್ಲಿ 'ವಿಕಸಿತ ಭಾರತ, ವಿಕಸಿತ ಜಮ್ಮು-ಕಾಶ್ಮೀರ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕೃಷಿ-ಆರ್ಥಿಕತೆಯನ್ನು ಉತ್ತೇಜಿಸಲು ಸುಮಾರು 5000 ಕೋಟಿ ರೂ.ಗಳ ಕಾರ್ಯಕ್ರಮವಾದ - 'ಸಮಗ್ರ ಕೃಷಿ ಅಭಿವೃದ್ಧಿ ಯೋಜನೆ'ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಶ್ರೀನಗರದ 'ಹಜರತ್‌ಬಲ್ ದೇವಾಲಯದ ಸಮಗ್ರ ಅಭಿವೃದ್ಧಿ' ಯೋಜನೆ ಸೇರಿದಂತೆ ʻಸ್ವದೇಶ ದರ್ಶನʼ ಮತ್ತು ʻಪ್ರಸಾದ್ʼ (ಯಾತ್ರಾ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನೆ ಅಭಿಯಾನ) ಯೋಜನೆಯಡಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ 1400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಯೋಜನೆಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿಯವರು 'ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ ಟೂರಿಸ್ಟ್ ಡೆಸ್ಟಿನೇಷನ್ ಪೋಲ್' ಮತ್ತು 'ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾ ಅಭಿಯಾನ'ಗಳಿಗೆ ಚಾಲನೆ ನೀಡಲಿದ್ದಾರೆ. ʻಸವಾಲು ಆಧರಿತ ಗಮ್ಯಸ್ಥಾನ ಅಭಿವೃದ್ಧಿʼ(ಸಿಬಿಡಿಡಿ) ಯೋಜನೆಯಡಿ ಆಯ್ಕೆಯಾದ ಪ್ರವಾಸಿ ತಾಣಗಳನ್ನು ಅವರು ಘೋಷಿಸಲಿದ್ದಾರೆ. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ನೇಮಕಗೊಂಡ ಸುಮಾರು 1000 ಮಂದಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ವಿತರಿಸಲಿದ್ದಾರೆ. ಜೊತೆಗೆ, ಮಹಿಳಾ ಸಾಧಕರು, ʻಲಕ್ಷಾಧಿಪತಿ ದೀದಿʼಯರು, ರೈತರು, ಉದ್ಯಮಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕೃಷಿ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು 'ಸಮಗ್ರ ಕೃಷಿ ಅಭಿವೃದ್ಧಿ ಯೋಜನೆ'ಯನ್ನು (ಎಚ್‌ಎಡಿಪಿ) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ʻಎಚ್ಎಡಿಪಿʼ ಎಂಬುದು ಜಮ್ಮು ಮತ್ತು ಕಾಶ್ಮೀರದ ಕೃಷಿ-ಆರ್ಥಿಕತೆಯ ಮೂರು ಪ್ರಮುಖ ಕ್ಷೇತ್ರಗಳಾದ ತೋಟಗಾರಿಕೆ, ಕೃಷಿ ಮತ್ತು ಪಶುಸಂಗೋಪನೆಯಲ್ಲಿನ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ಸಮಗ್ರ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ವಿಶೇಷ ʻದಕ್ಷ ಕಿಸಾನ್ ಪೋರ್ಟಲ್ʼ ಮೂಲಕ ಸುಮಾರು 2.5 ಲಕ್ಷ ರೈತರನ್ನು ಕೌಶಲ್ಯ ಅಭಿವೃದ್ಧಿಯೊಂದಿಗೆ ಸಜ್ಜುಗೊಳಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಸುಮಾರು 2000 ʻಕಿಸಾನ್ ಸೇವಾ ಕೇಂದ್ರʼಗಳನ್ನು ಆರಂಭಿಸಲಾಗುವುದು ಮತ್ತು ಕೃಷಿ ಸಮುದಾಯದ ಕಲ್ಯಾಣಕ್ಕಾಗಿ ದೃಢವಾದ ಮೌಲ್ಯ ಸರಪಳಿಗಳನ್ನು ಸ್ಥಾಪಿಸಲಾಗುವುದು. ಈ ಕಾರ್ಯಕ್ರಮವು ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಸಣ್ಣ ಕುಟುಂಬಗಳಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.

ಪ್ರವಾಸಿ ತಾಣಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಸೌಕರ್ಯಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರವ್ಯಾಪಿಯಾಗಿ ಪ್ರಮುಖ ಯಾತ್ರಾ ಮತ್ತು ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಒಟ್ಟಾರೆ ಅನುಭವವನ್ನು ಸುಧಾರಿಸುವುದು ಪ್ರಧಾನ ಮಂತ್ರಿಯವರ ಆಶಯವಾಗಿದೆ. ಇದಕ್ಕೆ ಅನುಗುಣವಾಗಿ, ಪ್ರಧಾನಮಂತ್ರಿಯವರು 1400 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ʻಸ್ವದೇಶ ದರ್ಶನʼ ಮತ್ತು ʻಪ್ರಸಾದʼ ಯೋಜನೆಗಳ ಅಡಿಯಲ್ಲಿ ಅನೇಕ ಉಪಕ್ರಮಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿರುವ ಯೋಜನೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 'ಹಜರತ್‌ಬಲ್ ದೇವಾಲಯದ ಸಮಗ್ರ ಅಭಿವೃದ್ಧಿ' ಯೋಜನೆ; ಮೇಘಾಲಯದ ಈಶಾನ್ಯ ಸರ್ಕ್ಯೂಟ್‌ನಲ್ಲಿ ಅಭಿವೃದ್ಧಿಪಡಿಸಲಾದ ಪ್ರವಾಸೋದ್ಯಮ ಸೌಲಭ್ಯಗಳು; ಬಿಹಾರ ಮತ್ತು ರಾಜಸ್ಥಾನದಲ್ಲಿ ಆಧ್ಯಾತ್ಮಿಕ ಸರ್ಕ್ಯೂಟ್; ಬಿಹಾರದ ಗ್ರಾಮೀಣ ಮತ್ತು ತೀರ್ಥಂಕರ ಸರ್ಕ್ಯೂಟ್; ತೆಲಂಗಾಣದ ಜೋಗುಲಾಂಬಾ ಗದ್ವಾಲ್ ಜಿಲ್ಲೆಯ ಜೋಗುಲಾಂಬಾ ದೇವಿ ದೇವಾಲಯದ ಅಭಿವೃದ್ಧಿ; ಮತ್ತು ಮಧ್ಯಪ್ರದೇಶದ ಅಣ್ಣುಪುರ್ ಜಿಲ್ಲೆಯ ಅಮರ್‌ಕಂಟಕ್‌ ದೇವಾಲಯದ ಅಭಿವೃದ್ಧಿ ಯೋಜನೆಗಳು ಸೇರಿವೆ.

ʻಹಜರತ್‌ಬಲ್ʼ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಸೃಷ್ಟಿಸುವ ಪ್ರಯತ್ನದ ಭಾಗವಾಗಿ ಮತ್ತು ಪ್ರವಾಸಿಗರ ಸಮಗ್ರ ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ, 'ಹಜರತ್‌ಬಲ್ ದೇವಾಲಯದ ಸಮಗ್ರ ಅಭಿವೃದ್ಧಿ' ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ದೇವಾಲಯದ ಗಡಿ ಗೋಡೆಯ ನಿರ್ಮಾಣ; ಹಜರತ್‌ಬಲ್ ದೇವಾಲಯದ ಆವರಣದ ದೀಪಾಲಂಕಾರ; ದೇವಾಲಯದ ಸುತ್ತಲಿನ ಘಟ್ಟಗಳು ಮತ್ತು ದೇವ್ರಿ ಮಾರ್ಗಗಳ ಸುಧಾರಣೆ; ಸೂಫಿ ವ್ಯಾಖ್ಯಾನ ಕೇಂದ್ರ ನಿರ್ಮಾಣ; ಪ್ರವಾಸಿ ಸೌಲಭ್ಯ ಕೇಂದ್ರ ನಿರ್ಮಾಣ; ಸೂಚನಾ ಫಲಕಗಳ ಸ್ಥಾಪನೆ; ಬಹು ಹಂತದ ಕಾರ್ ಪಾರ್ಕಿಂಗ್; ದೇವಾಲಯದ ಸಾರ್ವಜನಿಕ ಅನುಕೂಲಕರ ಬ್ಲಾಕ್ ಮತ್ತು ಪ್ರವೇಶ ದ್ವಾರದ ನಿರ್ಮಾಣ ಸೇರಿದಂತೆ ಇಡೀ ಪ್ರದೇಶದ ಅಭಿವೃದ್ಧಿಯನ್ನು ಒಳಗೊಂಡ ಹಲವು ಕಾಮಗಾರಿಗಳು ಸೇರಿವೆ.

ಪ್ರಧಾನಮಂತ್ರಿಯವರು ದೇಶಾದ್ಯಂತ ವ್ಯಾಪಕ ಶ್ರೇಣಿಯ ತೀರ್ಥಯಾತ್ರೆ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸುಮಾರು 43 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇವುಗಳಲ್ಲಿ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಅನ್ನಾವರಂ ದೇವಾಲಯ; ತಮಿಳುನಾಡಿನ ತಂಜಾವೂರು ಮತ್ತು ಮಯಿಲಾಡುತುರೈ ಜಿಲ್ಲೆ ಮತ್ತು ಪುದುಚೇರಿಯ ಕಾರೈಕಲ್ ಜಿಲ್ಲೆಯ ನವಗ್ರಹ ದೇವಾಲಯಗಳು; ಕರ್ನಾಟಕದ ಮೈಸೂರು ಜಿಲ್ಲೆಯ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ, ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಕರ್ಣಿ ಮಾತಾ ಮಂದಿರ; ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ʻಮಾ ಚಿಂತ್‌ಪುರ್ಣಿ ದೇವಾಲಯ,; ಗೋವಾದ ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್, ಇತ್ಯಾದಿ ಪ್ರಮುಖ ಧಾರ್ಮಿಕ ಸ್ಥಳಗಳು ಸೇರಿವೆ. ಈ ಯೋಜನೆಗಳಲ್ಲಿ ಅರುಣಾಚಲ ಪ್ರದೇಶದ ʻಮೆಚುಕಾ ಅಡ್ವೆಂಚರ್ ಪಾರ್ಕ್ʼ; ಉತ್ತರಾಖಂಡದ ಪಿಥೋರಗಢದ ಗುಂಜಿಯಲ್ಲಿ ʻಗ್ರಾಮೀಣ ಪ್ರವಾಸೋದ್ಯಮ ಕ್ಲಸ್ಟರ್ ಅನುಭವ ಕೇಂದ್ರʼ; ತೆಲಂಗಾಣದ ಅನಂತಗಿರಿಯ ಅನಂತಗಿರಿ ಅರಣ್ಯದಲ್ಲಿ ʻಪರಿಸರ ಪ್ರವಾಸೋದ್ಯಮ ವಲಯʼ; ಮೇಘಾಲಯದ ಸೊಹ್ರಾದಲ್ಲಿ ಮೇಘಾಲಯ ಯುಗದ ಗುಹೆಯ ಅನುಭವ ಮತ್ತು ಜಲಪಾತ ಹಾದಿಗಳ ಅನುಭವ; ಅಸ್ಸಾಂನ ಜೋರ್ಹತ್‌ನ ಸಿನ್ನಮಾರಾ ಟೀ ಎಸ್ಟೇಟ್ನ ಮರುನಿರ್ಮಾಣ; ಪಂಜಾಬ್‌ನ ಕಪುರ್ಥಾಲಾದ ಕಂಜ್ಲಿ ಜೌಗು ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮದ ಅನುಭವ; ಲೇಹ್‌ನಲ್ಲಿ ʻಜುಲ್ಲಿ ಲೇಹ್ ಜೀವವೈವಿಧ್ಯ ಉದ್ಯಾನ ಇತ್ಯಾದಿ ವಿವಿಧ ತಾಣಗಳು ಮತ್ತು ಅನುಭವ ಕೇಂದ್ರಗಳ ಅಭಿವೃದ್ಧಿಯೂ ಸೇರಿವೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ʻಸವಾಲು ಆಧರಿತ ಗಮ್ಯಸ್ಥಾನ ಅಭಿವೃದ್ಧಿʼ (ಸಿಬಿಡಿಡಿ) ಯೋಜನೆಯಡಿ ಆಯ್ಕೆಯಾದ 42 ಪ್ರವಾಸಿ ತಾಣಗಳ ಹೆಸರನ್ನು ಘೋಷಿಸಲಿದ್ದಾರೆ. ಕೇಂದ್ರ ಬಜೆಟ್ 2023-24 ರಲ್ಲಿ ಘೋಷಿಸಲಾದ ಈ ನವೀನ ಯೋಜನೆಯು ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ವೇಗವರ್ಧಿಸುವ ಮೂಲಕ ಸಮಗ್ರ ಪ್ರವಾಸಿ ಅನುಭವಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಡಿ 42 ತಾಣಗಳನ್ನು ನಾಲ್ಕು ವಿಭಾಗಗಳಲ್ಲಿ ಗುರುತಿಸಲಾಗಿದೆ (ಸಂಸ್ಕೃತಿ ಮತ್ತು ಪಾರಂಪರಿಕ ತಾಣದಲ್ಲಿ 16; ಆಧ್ಯಾತ್ಮಿಕ ತಾಣಗಳಲ್ಲಿ 11; ಪರಿಸರ ಪ್ರವಾಸೋದ್ಯಮ ಮತ್ತು ಅಮೃತ್ ಧರೋಹರ್‌ನಲ್ಲಿ 10; ಮತ್ತು ವೈಬ್ರೆಂಟ್ ವಿಲೇಜ್‌ನಲ್ಲಿ 5).

ಪ್ರವಾಸೋದ್ಯಮದ ಬಗ್ಗೆ ರಾಷ್ಟ್ರದ ನಾಡಿಮಿಡಿತವನ್ನು ಗುರುತಿಸುವ ಮೊದಲ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿ ಪ್ರಧಾನಿ ಮೋದಿ ಅವರು 'ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್-2024' ಎಂಬ ಮತದಾನ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಆಧ್ಯಾತ್ಮಿಕ, ಸಾಂಸ್ಕೃತಿ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ, ಸಾಹಸ ಮತ್ತು ಇತರ ವಿಭಾಗ ಎಂಬ 5 ಪ್ರವಾಸೋದ್ಯಮ ವಿಭಾಗಗಳಲ್ಲಿ ಹೆಚ್ಚು ಆದ್ಯತೆಯ ಪ್ರವಾಸಿ ಆಕರ್ಷಣೆಗಳನ್ನು ಗುರುತಿಸಲು ಹಾಗೂ ಪ್ರವಾಸಿಗರ ಗ್ರಹಿಕೆಗಳನ್ನು ಅರ್ಥಮಾಡಿಕೊಳ್ಳಲು ನಾಗರಿಕರೊಂದಿಗೆ ತೊಡಗುವುದು ಈ ರಾಷ್ಟ್ರವ್ಯಾಪಿ ಮತದಾನದ ಉದ್ದೇಶವಾಗಿದೆ. ನಾಲ್ಕು ಮುಖ್ಯ ವಿಭಾಗಗಳ ಹೊರತಾಗಿ, 'ಇತರ' ವರ್ಗದಲ್ಲಿ ತಮ್ಮ ವೈಯಕ್ತಿಕ ನೆಚ್ಚಿನ ತಾಣಗಳಿಗೂ ಜನರು ಮತ ಚಲಾಯಿಸಬಹುದು. ಇದುವರೆಗೂ ಅನ್ವೇಷಿಸದ ಪ್ರವಾಸೋದ್ಯಮ ಆಕರ್ಷಣೆಗಳು ಮತ್ತು ರೋಮಾಂಚಕ ಗಡಿ ಗ್ರಾಮಗಳು, ಸ್ವಾಸ್ಥ್ಯ ಪ್ರವಾಸೋದ್ಯಮ, ವಿವಾಹ ಪ್ರವಾಸೋದ್ಯಮ ಮುಂತಾದ ತಾಣಗಳ ರೂಪದಲ್ಲಿ ಸುಪ್ತ ಪ್ರವಾಸೋದ್ಯಮ ಅವಕಾಶಗಳನ್ನು ಅನಾವರಣಗೊಳಿಸಲು ಇದು ಸಹಾಯ ಮಾಡುತ್ತದೆ. ಈ ಮತದಾನವನ್ನು ಭಾರತ ಸರ್ಕಾರದ ನಾಗರಿಕರ ಪಾಲ್ಗೊಳ್ಳುವಿಕೆ ಪೋರ್ಟಲ್ ಆದ ʻMyGov’(ಮೈಗೌ) ವೇದಿಕೆಯಲ್ಲಿ ಆಯೋಜಿಸಲಾಗಿದೆ.

ಭಾರತೀಯ ವಲಸಿಗರನ್ನು ʻಇನ್ಕ್ರೆಡಿಬಲ್ ಇಂಡಿಯಾʼದ ರಾಯಭಾರಿಗಳಾಗಿಸಲು ಮತ್ತು ಭಾರತಕ್ಕೆ ಬರುವಂತೆ ಪ್ರವಾಸಿಗರನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನಿಯವರು 'ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾʼ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿಯವರು ಇತ್ತೀಚೆಗೆ ನೀಡಿದ ಕರೆ ಆಧರಿಸಿ ಈ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಇತ್ತೀಚೆಗೆ ಪ್ರಧಾನಿಯವರು ಕನಿಷ್ಠ 5 ಭಾರತೀಯೇತರ ಸ್ನೇಹಿತರನ್ನು ಭಾರತಕ್ಕೆ ಪ್ರಯಾಣಿಸಲು ಪ್ರೋತ್ಸಾಹಿಸುವಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗೆ ಕರೆ ನೀಡಿದ್ದರು. 3 ಕೋಟಿಗೂ ಹೆಚ್ಚು ಸಾಗರೋತ್ತರ ಭಾರತೀಯರಿದ್ದು, ಈ ಭಾರತೀಯ ವಲಸಿಗರು ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವ ಮೂಲಕ ಭಾರತೀಯ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡಬಹುದಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s startup game-changer? ₹10,000 crore FoF 2.0 set to attract investors

Media Coverage

India’s startup game-changer? ₹10,000 crore FoF 2.0 set to attract investors
NM on the go

Nm on the go

Always be the first to hear from the PM. Get the App Now!
...
Members of the Governing Body of Shri Ram College of Commerce meets the Prime Minister
April 25, 2026

A delegation comprising members of the Governing Body of Shri Ram College of Commerce, met the Prime Minister, Shri Narendra Modi, today. Shri Modi noted that this year marks the centenary of the institution, a significant milestone in its illustrious journey of academic excellence and nation-building. He lauded the college’s long-standing contribution to higher education and its role in nurturing generations of leaders across diverse fields.

On the occasion, a commemorative stamp marking the centenary year of Shri Ram College of Commerce was also released.

The Prime Minister posted on X:

"Met a delegation consisting of the Governing Body of the Shri Ram College of Commerce, one of India’s most reputed educational institutions. This year, we are marking the centenary of this institution. A commemorative stamp was released too. My best wishes to this institution."