ಬೆಂಗಳೂರಿನಲ್ಲಿ 27,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ನಾನಾ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ, ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದ ಪುನರಾಭಿವೃದ್ಧಿ, ಬೆಂಗಳೂರು ವರ್ತುಲ ರಸ್ತೆ ಯೋಜನೆಯ ಎರಡು ವಿಭಾಗಗಳು, ನಾನಾ ರಸ್ತೆ ಉನ್ನತೀಕರಣ ಯೋಜನೆಗಳು ಮತ್ತು ಬೆಂಗಳೂರಿನ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು
ಭಾರತದ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ, ಕೊಂಕಣ ರೈಲ್ವೆ ಮಾರ್ಗದ ಶೇ.100ರಷ್ಟು ವಿದ್ಯುದ್ದೀಕರಣ ಮತ್ತು ಇತರ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
ʻಮೆದುಳು ಸಂಶೋಧನಾ (ಬ್ರೈನ್‌ ರೀಸರ್ಚ್‌) ಕೇಂದ್ರʼವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿಯವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ʻಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆʼಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಬೆಂಗಳೂರಿನ ʻಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬಿ.ಎ.ಎಸ್‌.ಇ) ವಿಶ್ವವಿದ್ಯಾಲಯʼದ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ
ಸುಮಾರು 4600 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 150 'ಟೆಕ್ನಾಲಜಿ ಹಬ್'ಗಳನ್ನು ಪ್ರಧಾನ
ಉಪನಗರ ರೈಲು ಯೋಜನೆಯು ಬೆಂಗಳೂರು ನಗರವನ್ನು ಅದರ ಉಪನಗರಗಳು ಮತ್ತು ಸ್ಯಾಟಿಲೈಟ್‌ ಟೌನ್‌ಶಿಪ್‌ಗಳೊಂದಿಗೆ ಸಂಪರ್ಕಿಸುತ್ತದೆ.
ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿಯವರು ಬೆಂಗಳೂರು ವರ್ತುಲ ರಸ್ತೆ ಯೋಜನೆಯ ಎರಡು ವಿಭಾಗಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದು ದೇಶದಲ್ಲಿ ಕ್ಲಿನಿಕಲ್ ಸಂಶೋಧನೆಗೆ ಪ್ರಮುಖ ವೇದಿಕೆ ಒದಗಿಸುತ್ತದೆ ಮತ್ತು ದೇಶದಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗೆ ಸಹಾಯ ಮಾಡುವ ನವೀನ ಪರಿಹಾರಗಳನ್ನು ಕಂಡುಹಿಡಿಯುವತ್ತ ಕಾರ್ಯಮಗ್ನವಾಗಲಿದೆ.
ಆಜಾದಿ ಕಾ ಅಮೃತ ಮಹೋತ್ಸವʼವನ್ನು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಂದಿಗೆ ಸಂಯೋಜಿಸಿ, 75 ಕೇಂದ್ರ ಸಚಿವರ ನೇತೃತ್ವದಲ್ಲಿ ದೇಶಾದ್ಯಂತ 75 ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಲಾಗುವುದು.
ಅಲ್ಲದೆ, ವಿವಿಧ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಕಾರ್ಪೊರೇಟ್ ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳು ಸಹ ಯೋಗ ಪ್ರದರ್ಶನಗಳನ್ನು ನಡೆಸಲಿವೆ ಮತ್ತು ದೇಶಾದ್ಯಂತ ಕೋಟ್ಯಂತರ ಜನರು ಇವುಗಳಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿ ಪ್ರಧಾನಮಂತ್ರಿಯವರ ಯೋಗ ಕಾರ್ಯಕ್ರಮವು 'ಗಾರ್ಡಿಯನ್ ಯೋಗ ರಿಂಗ್' ಎಂಬ ವಿನೂತನ ಕಾರ್ಯಕ್ರಮದ ಭಾಗವಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 20 ಮತ್ತು 21ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಜೂನ್ 20ರಂದು ಮಧ್ಯಾಹ್ನ 12.30ರ ಸುಮಾರಿಗೆ ಪ್ರಧಾನಮಂತ್ರಿಯವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ʻಮೆದುಳು ಸಂಸೋಧನಾ ಕೇಂದ್ರʼವನ್ನು (ಸೆಂಟರ್ ಫಾರ್ ಬ್ರೈನ್ ರಿಸರ್ಚ್ -ಸಿಬಿಆರ್) ಉದ್ಘಾಟಿಸಲಿದ್ದಾರೆ. ಜೊತೆಗೆ ʻಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆʼಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಬೆಂಗಳೂರಿನ ʻಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ʼಗೆ (ಬೇಸ್) ಭೇಟಿ ನೀಡಲಿರುವ ಅವರು, ʻಬೇಸ್ ವಿಶ್ವವಿದ್ಯಾಲಯʼದ ನೂತನ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ. ಕರ್ನಾಟಕದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಪರಿವರ್ತಿಸುವ ಮೂಲಕ ಅಭಿವೃದ್ಧಿಪಡಿಸಲಾದ 150 'ಟೆಕ್ನಾಲಜಿ ಹಬ್'ಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ತದನಂತರ ಮಧ್ಯಾಹ್ನ 2.45ಕ್ಕೆ ಪ್ರಧಾನಮಂತ್ರಿಯವರು ಬೆಂಗಳೂರಿನ ಕೊಮ್ಮಘಟ್ಟ ತಲುಪಲಿದ್ದು, ಅಲ್ಲಿ ಅವರು 27,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ನಾನಾ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ನಂತರ ಸಂಜೆ 5.30ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ನಾಗನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ʻಭಾರತೀಯ ವಾಕ್‌ಶ್ರವಣ ಸಂಸ್ಥೆʼಯಲ್ಲಿ (ಎ.ಐ.ಐ.ಎಸ್.ಎಚ್) 'ಸಂವಹನ ಅಸ್ವಸ್ಥೆಗಳುಳ್ಳ ವ್ಯಕ್ತಿಗಳಿಗೆ ಉತ್ಕೃಷ್ಟತಾ ಕೇಂದ್ರ'ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಪ್ರಧಾನಮಂತ್ರಿಯವರು ಮೈಸೂರಿನ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ, ಸಂಜೆ 7.45ಕ್ಕೆ ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

ಜೂನ್ 21ರಂದು ಬೆಳಿಗ್ಗೆ 6.30ಕ್ಕೆ ಪ್ರಧಾನಮಂತ್ರಿಯವರು 8ನೇ ʻಅಂತಾರಾಷ್ಟ್ರೀಯ ಯೋಗ ದಿನʼದ ಅಂಗವಾಗಿ ಮೈಸೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನ ಮಂತ್ರಿ

ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಬೆಂಗಳೂರಿನಲ್ಲಿ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿಯವರು ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿ.ಎಸ್‌.ಆರ್‌.ಪಿ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉಪನಗರ ರೈಲು ಯೋಜನೆಯು ಬೆಂಗಳೂರು ನಗರವನ್ನು ಅದರ ಉಪನಗರಗಳು ಮತ್ತು ಸ್ಯಾಟಿಲೈಟ್‌ ಟೌನ್‌ಶಿಪ್‌ಗಳೊಂದಿಗೆ ಸಂಪರ್ಕಿಸುತ್ತದೆ. 15,700 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯಡಿ ಒಟ್ಟು 148 ಕಿ.ಮೀ.ಗಿಂತಲೂ ಹೆಚ್ಚು ಉದ್ದದ 4 ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು. ಪ್ರಧಾನಮಂತ್ರಿಯವರು ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಶವಂತಪುರ ಜಂಕ್ಷನ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಎರಡೂ ನಿಲ್ದಾಣಗಳನ್ನು ಅನುಕ್ರಮವಾಗಿ ಸುಮಾರು 500 ಕೋಟಿ ಮತ್ತು 375 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಈ ಕಾರ್ಯಕ್ರಮದ ವೇಳೆ, ಸುಮಾರು 315 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ವಿಮಾನ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾದ ಬೈಯಪ್ಪನಹಳ್ಳಿಯಲ್ಲಿರುವ ಭಾರತದ ಮೊಟ್ಟಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣವಾದ ʻಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣʼವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು, ಉಡುಪಿ, ಮಡಗಾಂವ್ ಮತ್ತು ರತ್ನಗಿರಿಯಿಂದ ವಿದ್ಯುತ್ ಚಾಲಿತ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ರೋಹಾ (ಮಹಾರಾಷ್ಟ್ರ)ದಿಂದ ತೋಕೂರು (ಕರ್ನಾಟಕ)ವರೆಗಿನ ಕೊಂಕಣ ರೈಲು ಮಾರ್ಗದ (ಸುಮಾರು 740 ಕಿ.ಮೀ) 100 ಪ್ರತಿಶತ ವಿದ್ಯುದ್ದೀಕರಣ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕೊಂಕಣ ರೈಲ್ವೆ ಮಾರ್ಗದ ವಿದ್ಯುದ್ದೀಕರಣವನ್ನು 1280 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಮಾಡಲಾಗಿದೆ. ಪ್ರಧಾನಮಂತ್ರಿಯವರು ಅರಸೀಕೆರೆಯಿಂದ ತುಮಕೂರು (ಸುಮಾರು 96 ಕಿ.ಮೀ) ಮತ್ತು ಯಲಹಂಕದಿಂದ ಪೆನುಕೊಂಡ (ಸುಮಾರು 120 ಕಿ.ಮೀ) ವರೆಗಿನ ಎರಡು ರೈಲ್ವೆ ಮಾರ್ಗ ಡಬ್ಲಿಂಗ್ ಯೋಜನೆಗಳನ್ನು ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಮತ್ತು ಮೆಮು ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಎರಡು ರೈಲ್ವೆ ಮಾರ್ಗ ಡಬಲಿಂಗ್‌ ಯೋಜನೆಗಳನ್ನು ಕ್ರಮವಾಗಿ 750 ಕೋಟಿ ಮತ್ತು 1,100 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿಯವರು ಬೆಂಗಳೂರು ವರ್ತುಲ ರಸ್ತೆ ಯೋಜನೆಯ ಎರಡು ವಿಭಾಗಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2,280 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಮಾಡಲಿದೆ. ರಾಷ್ಟ್ರೀಯ ಹೆದ್ದಾರಿ 48ರ ನೆಲಮಂಗಲ-ತುಮಕೂರು ವಿಭಾಗದ ಆರು ಪಥಗಳ ನಿರ್ಮಾಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆ-ಚಾರ್ಮಾಡಿ ವಿಭಾಗದ ರಸ್ತೆ ಅಗಲೀಕರಣ; ರಾಷ್ಟ್ರೀಯ ಹೆದ್ದಾರಿ-69ರ ಒಂದು ಭಾಗದ ಪುನರ್ವಸತಿ ಮತ್ತು ಉನ್ನತೀಕರಣಕ್ಕೂ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಯೋಜನೆಗಳ ಒಟ್ಟು ವೆಚ್ಚ ಸುಮಾರು 3,150 ಕೋಟಿ ರೂಪಾಯಿಗಳು. ಬೆಂಗಳೂರಿನಿಂದ ಸುಮಾರು ಸುಮಾರು 40 ಕಿ.ಮೀ ದೂರದಲ್ಲಿರುವ ಮುದ್ದಲಿಂಗನಹಳ್ಳಿಯಲ್ಲಿ ಸುಮಾರು 1800 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ʻಮಲ್ಟಿ ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಸಾರಿಗೆ, ನಿರ್ವಹಣೆ ಮತ್ತು ಎರಡನೇ ಹಂತದ ಸಾಗಣೆ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.

ಪ್ರಧಾನಮಂತ್ರಿಯವರು ಬೆಂಗಳೂರಿನ ʻಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯʼದ ನೂತನ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಸ್ವತಂತ್ರ ಭಾರತದ ಅಭಿವೃದ್ಧಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಅನುಕರಣೀಯ ಕೊಡುಗೆಗಳನ್ನು ಗುರುತಿಸಿ ಮತ್ತು ಅವರ 125ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಸ್ಮರಣಾರ್ಥವಾಗಿ 2017ರಲ್ಲಿ ಈ ವಸತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

ʻಬೇಸ್ ವಿಶ್ವವಿದ್ಯಾಲಯದʼಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಕರ್ನಾಟಕದಾದ್ಯಂತ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಪರಿವರ್ತಿಸುವ ಮೂಲಕ ಅಭಿವೃದ್ಧಿಪಡಿಸಲಾದ 150 'ಟೆಕ್ನಾಲಜಿ ಹಬ್'ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 4,600 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಶಿಷ್ಟ ಉಪಕ್ರಮವನ್ನು ಅನೇಕ ಉದ್ಯಮ ಪಾಲುದಾರರು ಬೆಂಬಲಿಸಿದ್ದಾರೆ. ಇದು ʻಉದ್ಯಮ 4.0ʼ ಮಾನವಶಕ್ತಿಯ ಅಗತ್ಯಗಳನ್ನು ಪೂರೈಸಲು ನುರಿತ ಕಾರ್ಯಪಡೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ʻತಂತ್ರಜ್ಞಾನ ಹಬ್‌ʼಗಳು, ತಮ್ಮ ವಿವಿಧ ನವೀನ ಕೋರ್ಸ್‌ಗಳ ಮೂಲಕ, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಉನ್ನತ ಕೌಶಲ್ಯ ತರಬೇತಿಯನ್ನು ಒದಗಿಸುತ್ತವೆ ಮತ್ತು ಉದ್ಯೋಗ ಹಾಗೂ ಉದ್ಯಮಶೀಲತೆಯಲ್ಲಿ ಐಟಿಐ ಪದವೀಧರರಿಗೆ ಅವಕಾಶಗಳ ಸುಧಾರಣೆಗೆ ನೆರವಾಗಲಿವೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಪ್ರಧಾನಮಂತ್ರಿಯವರು ʻಮೆದುಳು ಸಂಶೋಧನಾ ಕೇಂದ್ರ (ʻಸೆಂಟರ್ ಫಾರ್ ಬ್ರೈನ್ ರಿಸರ್ಚ್-ಸಿಬಿಆರ್)ವನ್ನು ಉದ್ಘಾಟಿಸಲಿದ್ದಾರೆ. ಇದಕ್ಕೆ ಸ್ವತಃ ಪ್ರಧಾನ ಮಂತ್ರಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕೇಂದ್ರವನ್ನು ಒಂದು ರೀತಿಯ ಸಂಶೋಧನಾ ಘಟಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ವಯಸ್ಸಿಗೆ ಸಂಬಂಧಿಸಿದ ಮೆದುಳಿನ ಅಸ್ವಸ್ಥತೆಗಳನ್ನು ನಿರ್ವಹಿಸಲು ಪುರಾವೆ ಆಧರಿತ ಸಾರ್ವಜನಿಕ ಆರೋಗ್ಯ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಸಂಶೋಧನೆಗಳನ್ನು ನಡೆಸುವತ್ತ ಇದು ಗಮನ ಹರಿಸುತ್ತದೆ. ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು 832 ಹಾಸಿಗೆಗಳ ʻಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆʼಗೆ ಶಂಕುಸ್ಥಾಪನೆ ನೆರವೇರಿಸುವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್‌ನಲ್ಲಿ ಈ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಲಯಗಳನ್ನು ಸಂಯೋಜಿಸಲು ಇದು ಸಹಾಯ ಮಾಡುತ್ತದೆ. ಇದು ದೇಶದಲ್ಲಿ ಕ್ಲಿನಿಕಲ್ ಸಂಶೋಧನೆಗೆ ಪ್ರಮುಖ ವೇದಿಕೆ ಒದಗಿಸುತ್ತದೆ ಮತ್ತು ದೇಶದಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗೆ ಸಹಾಯ ಮಾಡುವ ನವೀನ ಪರಿಹಾರಗಳನ್ನು ಕಂಡುಹಿಡಿಯುವತ್ತ ಕಾರ್ಯಮಗ್ನವಾಗಲಿದೆ.

ಮೈಸೂರಿನಲ್ಲಿ ಪ್ರಧಾನ ಮಂತ್ರಿ

ಮೈಸೂರಿನ ಮಹಾರಾಜ ಕಾಲೇಜು ಮೈದಾನದ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ನಾಗನಹಳ್ಳಿ ರೈಲ್ವೆ ನಿಲ್ದಾಣದಲ್ಲಿ 480 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಉಪನಗರ ಸಂಚಾರ ಉದ್ದೇಶದ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕೋಚಿಂಗ್ ಟರ್ಮಿನಲ್ ಮೆಮು ಶೆಡ್ ಅನ್ನು ಸಹ ಹೊಂದಿರುತ್ತದೆ ಮತ್ತು ಹಾಲಿ ಇರುವ ಮೈಸೂರು ಯಾರ್ಡ್‌ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೈಸೂರಿನಿಂದ ಹೆಚ್ಚಿನ ಮೆಮು ರೈಲು ಸೇವೆಗಳು ಮತ್ತು ದೂರದ ರೈಲುಗಳ ಓಡಾಟಕ್ಕೆ ಅನುವು ಮಾಡಿಕೊಡುತ್ತದೆ. ಇದು ಈ ಪ್ರದೇಶದ ಸಂಪರ್ಕ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಸುಧಾರಿಸಲಿದೆ. ಅಲ್ಲದೆ, ಇದರಿಂದ ದೈನಂದಿನ ಪ್ರಯಾಣಿಕರಿಗೆ ಮತ್ತು ದೂರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಪ್ರಯೋಜನವಾಗಲಿದೆ.

ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ʻಭಾರತೀಯ ವಾಕ್‌ಶ್ರವಣ ಸಂಸ್ಥೆʼಯಲ್ಲಿ (ಎ.ಐ.ಐ.ಎಸ್.ಎಚ್) 'ಸಂವಹನ ಅಸ್ವಸ್ಥತೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಉತ್ಕೃಷ್ಟತಾ ಕೇಂದ್ರ'ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸಂವಹನ ಅಸ್ವಸ್ಥತೆಗಳನ್ನು ಹೊಂದಿರುವ ವ್ಯಕ್ತಿಗಳ ರೋಗನಿರ್ಣಯ, ಮೌಲ್ಯಮಾಪನ ಮತ್ತು ಪುನರ್ವಸತಿಗಾಗಿ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಸೌಲಭ್ಯಗಳನ್ನು ಇದು ಹೊಂದಿದೆ.

ಜೂನ್ 21 ರಂದು ಪ್ರಧಾನ ಮಂತ್ರಿಯವರ ಕಾರ್ಯಕ್ರಮ

2022ರ ಜೂನ್ 21 ರಂದು 8ನೇ ʻಅಂತಾರಾಷ್ಟ್ರೀಯ ಯೋಗ ದಿನʼದ(ಐ.ಡಿ.ವೈ) ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಮೈಸೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸಾವಿರಾರು ಸ್ಪರ್ಧಿಗಳೊಂದಿಗೆ ಭಾಗವಹಿಸಲಿದ್ದಾರೆ. ʻಆಜಾದಿ ಕಾ ಅಮೃತ ಮಹೋತ್ಸವʼವನ್ನು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಂದಿಗೆ ಸಂಯೋಜಿಸಿ, 75 ಕೇಂದ್ರ ಸಚಿವರ ನೇತೃತ್ವದಲ್ಲಿ ದೇಶಾದ್ಯಂತ 75 ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಮೈಸೂರಿನಲ್ಲಿ ಪ್ರಧಾನ ಮಂತ್ರಿಯವರ ಯೋಗ ಪ್ರದರ್ಶನದ ಜತೆಗೇ ಈ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ, ವಿವಿಧ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಕಾರ್ಪೊರೇಟ್ ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳು ಸಹ ಯೋಗ ಪ್ರದರ್ಶನಗಳನ್ನು ನಡೆಸಲಿವೆ ಮತ್ತು ದೇಶಾದ್ಯಂತ ಕೋಟ್ಯಂತರ ಜನರು ಇವುಗಳಲ್ಲಿ ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಪ್ರಧಾನಮಂತ್ರಿಯವರ ಯೋಗ ಕಾರ್ಯಕ್ರಮವು 'ಗಾರ್ಡಿಯನ್ ಯೋಗ ರಿಂಗ್' ಎಂಬ ವಿನೂತನ ಕಾರ್ಯಕ್ರಮದ ಭಾಗವಾಗಿದೆ. ರಾಷ್ಟ್ರೀಯ ಗಡಿಗಳನ್ನು ಮೀರಿ ವಿವಿಧ ದೇಶಗಳನ್ನು ಏಕೀಕರಣಗೊಳಿಸುವ ಯೋಗದ ಶಕ್ತಿಯನ್ನು ವಿವರಿಸುವ ನಿಟ್ಟಿನಲ್ಲಿ 79 ದೇಶಗಳು, ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಹಾಗೂ ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಪರಸ್ಪರ ಸಹಯೋಗದಲ್ಲಿ ಕೈಗೊಂಡ ಉಪಕ್ರಮ ಇದಾಗಿದೆ. ಸೂರ್ಯನು ಪ್ರಪಂಚದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವ ರೀತಿಯಲ್ಲಿಯೇ, ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ವಿವಿಧ ದೇಶಗಳಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನಗಳನ್ನು ಭೂಮಿಯ ಮೇಲಿನ ಯಾವುದೇ ಒಂದು ಬಿಂದುವಿನಿಂದ ನೋಡಿದರೆ, ಒಂದರ ನಂತರ ಒಂದರಂತೆ, ಹೆಚ್ಚುಕಡಿಮೆ ಸೂರ್ಯನ ಚಲನೆಗೆ ಜೊತೆಜೊತೆಯಾಗಿ ನಡೆಯುತ್ತಿರುವಂತೆ ತೋರುತ್ತದೆ. ಈ ಮೂಲಕ 'ಒಬ್ಬ ಸೂರ್ಯ, ಒಂದು ಭೂಮಿ' ಎಂಬ ಪರಿಕಲ್ಪನೆಯನ್ನು ಇದು ಒತ್ತಿಹೇಳುತ್ತದೆ. ಈ ವಿನೂತನ ಕಾರ್ಯಕ್ರಮವು ʻಡಿಡಿ ಇಂಡಿಯಾʼದಲ್ಲಿ 2022ರ ಜೂನ್ 21ರಂದು ಭಾರತೀಯ ಕಾಲಮಾನ ಬೆಳಗ್ಗೆ 3ರಿಂದ (ʻಫಿಜಿʼ ದೇಶದಿಂದ ಪ್ರಸಾರ) ರಾತ್ರಿ 10 ಗಂಟೆಯವರೆಗೆ (ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಪ್ರಸಾರವಾಗಲಿದೆ) ನೇರಪ್ರಸಾರವಾಗಲಿದೆ. ಕಾರ್ಯಕ್ರಮದ ಭಾಗವಾಗಿ, ಮೈಸೂರಿನಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮವು ಭಾರತೀಯ ಕಾಲಮಾನ ಬೆಳಿಗ್ಗೆ 06:30 ರಿಂದ ʻಡಿಡಿ ಇಂಡಿಯಾʼದಲ್ಲಿ ನೇರಪ್ರಸಾರವಾಗಲಿದೆ.

2015 ರಿಂದ, ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ʻಅಂತರರಾಷ್ಟ್ರೀಯ ಯೋಗ ದಿನʼವನ್ನು (ಐ.ಡಿ.ವೈ.) ಆಚರಿಸಲಾಗುತ್ತದೆ. ಈ ವರ್ಷದ ಯೋಗ ದಿನದ ಥೀಮ್ "ಮಾನವೀಯತೆಗಾಗಿ ಯೋಗ". ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನೋವು ನಿವಾರಣೆಗೆ ಯೋಗವು ಮನುಕುಲಕ್ಕೆ ಹೇಗೆ ನೆರವಾಯಿತು ಎಂಬುದನ್ನು ಈ ವಿಷಯ ವಸ್ತುವು ಚಿತ್ರಿಸಲಿದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Parliament on verge of history, says PM Modi, as it readies to take up women's bills

Media Coverage

Parliament on verge of history, says PM Modi, as it readies to take up women's bills
NM on the go

Nm on the go

Always be the first to hear from the PM. Get the App Now!
...
Prime Minister pays homage to Dr. Babasaheb Ambedkar in the Parliament complex
April 14, 2026

The Prime Minister, Shri Narendra Modi has paid homage to Dr. Babasaheb Ambedkar in the Parliament complex earlier today.

The Prime Minister wrote on X;

“Paid homage to Dr. Babasaheb Ambedkar in the Parliament complex earlier today.”