ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಕರ್ನಾಟಕ ಮತ್ತು ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಪ್ರಧಾನಮಂತ್ರಿ ಅವರು ಕರ್ನಾಟಕದ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಅವರು ಗೋವಾಕ್ಕೆ ಪ್ರಯಾಣಿಸಲಿದ್ದು, ಮಧ್ಯಾಹ್ನ 3:15ರ ಸುಮಾರಿಗೆ ಅಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಮಠದ 550ನೇ ವರ್ಷಾಚರಣೆಯಾದ 'ಸಾರ್ಧ ಪಂಚಮ ಶತಮಾನೋತ್ಸವ' (550ನೇ ವರ್ಷಾಚರಣೆ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉಡುಪಿಯಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು ಅಲ್ಲಿ ವಿದ್ಯಾರ್ಥಿಗಳು, ಸಾಧು-ಸಂತರು, ವಿದ್ವಾಂಸರು ಮತ್ತು ವಿವಿಧ ವರ್ಗಗಳ ನಾಗರಿಕರು ಸೇರಿದಂತೆ 100,000 ಮಂದಿ ಭಾಗವಹಿಸುವ ʻಲಕ್ಷ ಕಂಠ ಗೀತಾ ಪಾರಾಯಣʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಾರಾಯಣಕ್ಕೆ ಪ್ರಧಾನಮಂತ್ರಿ ಸಾಕ್ಷಿಯಾಗಲಿದ್ದಾರೆ.
ಪ್ರಧಾನಮಂತ್ರಿ ಅವರು ಶ್ರೀ ಕೃಷ್ಣ ದೇಗುಲದ ಗರ್ಭಗುಡಿಯ ಮುಂಭಾಗದಲ್ಲಿರುವ ʻಸುವರ್ಣ ತೀರ್ಥ ಮಂಟಪʼವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ಕನಕದಾಸರು ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನವನ್ನು ಪಡೆದ ಸ್ಥಳವೆಂದು ಎಂದು ನಂಬಲಾದ ಪವಿತ್ರ ಕಿಟಕಿಯಾದ ʻಕನಕನ ಕಿಂಡಿʼಗೆ ಕನಕ ಕವಚವನ್ನು ಸಮರ್ಪಿಸಲಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠವನ್ನು 800 ವರ್ಷಗಳ ಹಿಂದೆ ವೇದಾಂತದ ದ್ವೈತ ತತ್ವಶಾಸ್ತ್ರದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಗೋವಾದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ದಕ್ಷಿಣ ಗೋವಾದ ಕೆನಕೋನಾದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮಠದ 550ನೇ ವರ್ಷಾಚರಣೆಯಾದ 'ಸಾರ್ಧ ಪಂಚ ಶತಮನೋತ್ಸವ'ದ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಅವರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದಲ್ಲಿ ಕಂಚಿನಿಂದ ಮಾಡಲಾದ ಪ್ರಭು ಶ್ರೀ ರಾಮನ 77 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಜೊತೆಗೆ ಮಠವು ಅಭಿವೃದ್ಧಿಪಡಿಸಿದ 'ರಾಮಾಯಣ ಥೀಮ್ಪಾರ್ಕ್ ಉದ್ಯಾನ'ವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಪ್ರಧಾನಮಂತ್ರಿ ಅವರು ಮಾತನಾಡಲಿದ್ದಾರೆ.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠವು ಮೊದಲ ಗೌಡ ಸಾರಸ್ವತ ಬ್ರಾಹ್ಮಣ ವೈಷ್ಣವ ಮಠವಾಗಿದೆ. ಇದು ಕ್ರಿ.ಶ 13ನೇ ಶತಮಾನದಲ್ಲಿ ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಸಿದ್ಧಾಂತವನ್ನು ಅನುಸರಿಸುತ್ತದೆ. ಕುಶಾವತಿ ನದಿಯ ದಡದಲ್ಲಿರುವ ದಕ್ಷಿಣ ಗೋವಾದ ಪರ್ತಗಳಿ ಎಂಬ ಸಣ್ಣ ಪಟ್ಟಣದಲ್ಲಿ ಮಠದ ಪ್ರಧಾನ ಕಚೇರಿ ಇದೆ.


