ವಿಶ್ವ ದರ್ಜೆಯ ವಾಯು ಸಾರಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮತ್ತು ಸಂಪರ್ಕವನ್ನು ಹೆಚ್ಚಿಸುವ ತಮ್ಮ ಬದ್ಧತೆಯಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜೂನ್ 2 ರಂದು ಸಂಜೆ 5 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘದ (ಐಎಟಿಎ) 81ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಐಎಟಿಎ ಸಂಘದ 81ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಿಶ್ವ ವಾಯು ಸಾರಿಗೆ ಶೃಂಗಸಭೆ (ಡಬ್ಲ್ಯೂಎಟಿಎಸ್) ಜೂನ್ 1 ರಿಂದ 3 ರವರೆಗೆ ನಡೆಯಲಿದೆ. ಭಾರತದಲ್ಲಿ ನಡೆದ ಕಡೆಯ ವಾರ್ಷಿಕ ಮಹಾಸಭೆ 42 ವರ್ಷಗಳ ಹಿಂದೆ 1983ರಲ್ಲಿ ನಡೆದಿತ್ತು. ಈಗಿನ ಸಭೆಯು ಜಾಗತಿಕ ವಿಮಾನಯಾನ ಉದ್ಯಮದ ಪ್ರಮುಖ ನಾಯಕರು, ಸರ್ಕಾರಿ ಅಧಿಕಾರಿಗಳು ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 1,600 ಕ್ಕೂ ಹೆಚ್ಚು ಭಾಗವಹಿಸುವವರನ್ನು ಒಟ್ಟುಗೂಡಿಸುತ್ತದೆ.
ವಿಶ್ವ ವಾಯು ಸಾರಿಗೆ ಶೃಂಗಸಭೆಯು ವಿಮಾನಯಾನ ಉದ್ಯಮದ ಆರ್ಥಿಕತೆ, ವಾಯು ಸಂಪರ್ಕ, ಇಂಧನ ಭದ್ರತೆ, ಸುಸ್ಥಿರ ವಾಯುಯಾನ ಇಂಧನ ಉತ್ಪಾದನೆ, ಹಣಕಾಸು, ಇಂಗಾಲದ ಕಡಿತಗೊಳಿಸುವಿಕೆ, ನಾವೀನ್ಯತೆಗಳು ಸೇರಿದಂತೆ ವಾಯುಯಾನ ಉದ್ಯಮ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಯ ಕ್ಷೇತ್ರದ ಪ್ರಮುಖರು ಮತ್ತು ಮಾಧ್ಯಮ ಪ್ರತಿನಿಧಿಗಳು ವಾಯುಯಾನ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ರೂಪಾಂತರ ಮತ್ತು ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯನ್ನು ಕಾಣುವ ಅವಕಾಶವನ್ನು ಪಡೆಯಲಿದ್ದಾರೆ.


