ಜೂನ್ 21 ರಂದು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಜನರು 'ಅಂತರಾಷ್ಟ್ರೀಯ ಯೋಗ ದಿನ'ದಲ್ಲಿ ಭಾಗವಹಿಸಿದರು: ಪ್ರಧಾನಿ ಮೋದಿ
ವಿಶಾಖಪಟ್ಟಣಂನ ಕಡಲತೀರದಲ್ಲಿ ಮೂರು ಲಕ್ಷ ಜನರು ಒಟ್ಟಾಗಿ ಯೋಗ ಮಾಡಿದರು ಮತ್ತು ಎರಡು ಸಾವಿರಕ್ಕೂ ಹೆಚ್ಚು ಆದಿವಾಸಿ ವಿದ್ಯಾರ್ಥಿಗಳು 108 ನಿಮಿಷಗಳ ಕಾಲ 108 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸಿದರು: ಪ್ರಧಾನಿ ಮೋದಿ
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ 64% ಕ್ಕಿಂತ ಹೆಚ್ಚು ಜನರು ಈಗ ಒಂದಲ್ಲ ಒಂದು ಸಾಮಾಜಿಕ ರಕ್ಷಣಾ ಪ್ರಯೋಜನವನ್ನು ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ
ತುರ್ತು ಪರಿಸ್ಥಿತಿಯನ್ನು ಹೇರಿದವರು ನಮ್ಮ ಸಂವಿಧಾನವನ್ನು ಕೊಂದರು ಮಾತ್ರವಲ್ಲದೆ ನ್ಯಾಯಾಂಗವನ್ನು ತಮ್ಮ ಗುಲಾಮರನ್ನಾಗಿ ಇಟ್ಟುಕೊಳ್ಳುವ ಉದ್ದೇಶವನ್ನು ಹೊಂದಿದ್ದರು: ಪ್ರಧಾನಿ ಮೋದಿ
ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ಹೋರಾಡಿದ ಎಲ್ಲ ಜನರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳಬೇಕು. ನಮ್ಮ ಸಂವಿಧಾನವನ್ನು ಬಲಿಷ್ಠವಾಗಿ ಮತ್ತು ಶಾಶ್ವತವಾಗಿಡಲು ನಿರಂತರವಾಗಿ ಜಾಗರೂಕರಾಗಿರಲು ಇದು ನಮಗೆ ಸ್ಫೂರ್ತಿ ನೀಡುತ್ತದೆ: ಪ್ರಧಾನಿ ಮೋದಿ
ಬೋಡೋಲ್ಯಾಂಡ್ ಇಂದು ದೇಶದಲ್ಲಿ ಹೊಸ ಮುಖ, ಹೊಸ ಗುರುತಿನೊಂದಿಗೆ ಎದ್ದು ಕಾಣುತ್ತದೆ. ಬೋಡೋಲ್ಯಾಂಡ್ ಈಗ ದೇಶದ ಕ್ರೀಡಾ ನಕ್ಷೆಯಲ್ಲಿ ತನ್ನ ಹೊಳಪನ್ನು ಹೆಚ್ಚಿಸುತ್ತಿದೆ: ಪ್ರಧಾನಿ ಮೋದಿ
ಮೇಘಾಲಯದ ಮಹಿಳೆಯರು ಈಗ ಸ್ವಸಹಾಯ ಗುಂಪುಗಳ ಮೂಲಕ ಈ ಎರಿ ಸಿಲ್ಕ್ ಪರಂಪರೆಯನ್ನು ದೊಡ್ಡ ಪ್ರಮಾಣದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ: ಪ್ರಧಾನಿ ಮೋದಿ

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ‘ಮನದ ಮಾತು’ ಕಾರ್ಯಕ್ರಮಕ್ಕೆ ಸ್ವಾಗತ, ನಿಮ್ಮೆಲ್ಲರಿಗೂ ಅಭಿನಂದನೆಗಳು. ಯೋಗದ ಶಕ್ತಿ ಮತ್ತು ‘ಅಂತಾರಾಷ್ಟ್ರೀಯ ಯೋಗ ದಿನ’ದ ನೆನಪುಗಳಿಂದ ನಿಮ್ಮ ಮನ ಉತ್ಸಾಹದಿಂದಿರಬಹುದು. ಈ ಬಾರಿಯೂ, ಜೂನ್ 21 ರಂದು, ದೇಶ ಮತ್ತು ವಿದೇಶಗಳ ಕೋಟ್ಯಂತರ ಜನರು ‘ಅಂತಾರಾಷ್ಟ್ರೀಯ ಯೋಗ ದಿನ’ದಲ್ಲಿ ಭಾಗವಹಿಸಿದ್ದರು. ಇದು 10 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂಬುದು ನಿಮಗೆ ನೆನಪಿದೆಯೇ. ಈ 10 ವರ್ಷಗಳಲ್ಲಿ, ಈ ಯೋಗ ದಿನಾಚರಣೆ ಪ್ರತಿ ವರ್ಷವೂ ಭವ್ಯವಾಗುತ್ತಲೇ ಸಾಗುತ್ತಿದೆ. ಹೆಚ್ಚು ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದರ ಸಂಕೇತವೂ  ಇದಾಗಿದೆ. ಈ ಬಾರಿ ‘ಯೋಗ ದಿನ’ದ ಸಾಕಷ್ಟು ಆಕರ್ಷಕ ಚಿತ್ರಗಳನ್ನು ನಾವು ನೋಡಿದ್ದೇವೆ. ವಿಶಾಖಪಟ್ಟಣದ ಕಡಲತೀರದಲ್ಲಿ ಮೂರು ಲಕ್ಷ ಜನರು ಒಗ್ಗೂಡಿ ಯೋಗ ಮಾಡಿದರು. ವಿಶಾಖಪಟ್ಟಣದಿಂದಲೇ ಮತ್ತೊಂದು ಅದ್ಭುತ ಕಾರ್ಯಕ್ರಮ ನಡೆದಿರುವುದು ತಿಳಿದು ಬಂದಿದೆ. ಎರಡು ಸಾವಿರಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ಕಾಲ 108 ಸೂರ್ಯ ನಮಸ್ಕಾರಗಳನ್ನು ಇಲ್ಲಿ ಮಾಡಿದ್ದಾರೆ. ಅದೆಷ್ಟು ಶಿಸ್ತು, ಅದೆಷ್ಟು ಸಮರ್ಪಣೆ ಇದ್ದಿರಬೇಕು ಎಂದು ಕಲ್ಪಿಸಿಕೊಳ್ಳಿ. ನಮ್ಮ ನೌಕಾಪಡೆಯ ಹಡಗುಗಳಲ್ಲಿಯೂ ಸಹ ಯೋಗದ ಭವ್ಯ ಪ್ರದರ್ಶನ ನಡೆಯಿತು. ತೆಲಂಗಾಣದಲ್ಲಿ, ಮೂರು ಸಾವಿರ ದಿವ್ಯಾಂಗರು ಒಟ್ಟಾಗಿ ಯೋಗ ಶಿಬಿರದಲ್ಲಿ ಭಾಗವಹಿಸಿದರು. ಯೋಗವು ಯಾವ ರೀತಿ ಸಬಲೀಕರಣದ ಮಾಧ್ಯಮವಾಗಿದೆ ಎಂಬುದನ್ನು ಅವರು ತೋರಿಸಿದರು. ದೆಹಲಿಯ ಜನರು ಶುದ್ಧ ಯಮುನೆಯ ಸಂಕಲ್ಪದೊಂದಿಗೆ ಯಮುನಾ ನದಿ ತೀರದಲ್ಲಿ ಯೋಗ ಪ್ರದರ್ಶನ ಮಾಡಿದರು ಜಮ್ಮು ಮತ್ತು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯಲ್ಲಿಯೂ ಜನರು ಯೋಗ ಮಾಡಿದರು. ಹಿಮಾಲಯದ ಹಿಮಭರಿತ ಶಿಖರಗಳು ಮತ್ತು ಐಟಿಬಿಪಿ ಸೈನಿಕರು ಕೂಡಾ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಶೌರ್ಯ ಮತ್ತು ಸಾಧನೆ ಜೊತೆಗೆ ಹೆಜ್ಜೆ ಹಾಕಿದವು. ಗುಜರಾತ್‌ನ ಜನರು ಕೂಡ ಹೊಸ ಇತಿಹಾಸವನ್ನು ಸೃಷ್ಟಿಸಿದರು. ವಡ್ನಗರದಲ್ಲಿ, 2121 (ಎರಡು ಸಾವಿರದ ನೂರ ಇಪ್ಪತ್ತೊಂದು) ಜನರು ಒಟ್ಟಿಗೆ ಭುಜಂಗಾಸನವನ್ನು ಮಾಡಿದರು ಮತ್ತು ಹೊಸ ದಾಖಲೆಯನ್ನು ಸೃಷ್ಟಿಸಿದರು. ನ್ಯೂಯಾರ್ಕ್, ಲಂಡನ್, ಟೋಕಿಯೊ, ಪ್ಯಾರಿಸ್, ಪ್ರಪಂಚದ ಪ್ರತಿಯೊಂದು ಮಹಾ ನಗರಗಳಿಂದಲೂ ಯೋಗಾಭ್ಯಾಸದ ಚಿತ್ರಗಳು ತಲುಪಿದವು ಮತ್ತು ಪ್ರತಿ ಚಿತ್ರದಲ್ಲೂ ಶಾಂತಿ, ಸ್ಥಿರತೆ ಮತ್ತು ಸಮತೋಲನ ಎಂಬ ವಿಷಯಗಳು ವಿಶೇಷವಾಗಿದ್ದವು. ಈ ಬಾರಿಯ ತತ್ವವು ಬಹಳ ವಿಶೇಷವಾಗಿತ್ತು, ‘Yoga for One Earth, One Health, ಅಂದರೆ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'. ಇದು ಕೇವಲ ಒಂದು ಘೋಷಣೆಯಲ್ಲ, 'ವಸುಧೈವ ಕುಟುಂಬಕಂ' ಎಂಬುದರ ಅನುಭೂತಿ ನಮಗೆ ಮೂಡುವಂತೆ ಮಾಡುವ ನಿರ್ದೇಶನವಾಗಿದೆ. ಈ ವರ್ಷದ ಯೋಗ ದಿನದ ಭವ್ಯತೆ ಖಂಡಿತವಾಗಿಯೂ ಹೆಚ್ಚು ಹೆಚ್ಚು ಜನರನ್ನು ಯೋಗಾಭ್ಯಾಸದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ನನ್ನ ಪ್ರಿಯ ದೇಶವಾಸಿಗಳೇ, ಯಾರೇ ಆಗಲಿ ತೀರ್ಥಯಾತ್ರೆಗೆ ಹೊರಟರೆ, "ನಡೆಯಿರಿ, ಕರೆ ಬಂದಿದೆ" ಎಂಬ ಭಾವನೆಯೇ  ಮೊದಲು ಮನಸ್ಸಿನಲ್ಲಿ ಮೂಡುತ್ತದೆ. ಈ ಭಾವನೆ ನಮ್ಮ ಧಾರ್ಮಿಕ ತೀರ್ಥಯಾತ್ರೆಗಳ ಮೂಲವಾಗಿದೆ. ಈ ತೀರ್ಥಯಾತ್ರೆಗಳು ದೇಹವನ್ನು ಶಿಸ್ತುಬದ್ಧಗೊಳಿಸುವ, ಮನಸ್ಸನ್ನು ಶುದ್ಧೀಕರಿಸುವ, ಪರಸ್ಪರ ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವ, ಭಗವಂತನೊಂದಿಗೆ ಬಂಧವನ್ನು ಬೆಸೆಯುವ ಸಾಧನವಾಗಿದೆ. ಇದರ ಹೊರತಾಗಿ, ಈ ತೀರ್ಥಯಾತ್ರೆಗಳಲ್ಲಿ ಮತ್ತೊಂದು ದೊಡ್ಡ ಅಂಶ ಅಡಗಿದೆ. ಈ ಧಾರ್ಮಿಕ ತೀರ್ಥಯಾತ್ರೆಗಳು ಸೇವೆಗೆ ಅವಕಾಶ ಕಲ್ಪಿಸುವ ಒಂದು ದೊಡ್ಡ ಅನುಷ್ಠಾನವು ಆಗಿದೆ. ಯಾವುದೇ ತೀರ್ಥಯಾತ್ರೆ ನಡೆದಾಗ, ತೀರ್ಥಯಾತ್ರೆಗೆ ಹೋಗುವ ಜನರ ಸಂಖ್ಯೆಗಿಂತ ಹೆಚ್ಚಿನ ಜನರು ಯಾತ್ರಿಕರಿಗೆ ಸೇವೆ ಸಲ್ಲಿಸುವ ಕೆಲಸದಲ್ಲಿ ತೊಡಗುತ್ತಾರೆ. ಅಲ್ಲಲ್ಲಿ ವಿವಿಧ ಸ್ಥಳಗಳಲ್ಲಿ ಅನ್ನ ಸಂತರ್ಪಣೆ ಶಿಬಿರಗಳನ್ನು ಮತ್ತು ಲಂಗರ್‌ಗಳನ್ನು ಆಯೋಜಿಸಲಾಗುತ್ತದೆ. ಜನರು ರಸ್ತೆ ಬದಿಗಳಲ್ಲಿ ಕುಡಿಯುವ ನೀರಿನ ಅರವಟಿಗೆಗಳ ವ್ಯವಸ್ಥೆ ಮಾಡುತ್ತಾರೆ. ವೈದ್ಯಕೀಯ ಶಿಬಿರಗಳು ಮತ್ತು ಸೌಲಭ್ಯಗಳನ್ನು ಕೂಡಾ ಸೇವಾ ಮನೋಭಾವದಿಂದಲೇ ಒದಗಿಸಲಾಗುತ್ತದೆ. ಎಷ್ಟೋ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಧರ್ಮಶಾಲೆಗಳು ಮತ್ತು ಯಾತ್ರಿಕರಿಗೆ ಉಚಿತ ವಸತಿ ವ್ಯವಸ್ಥೆ ಮಾಡುತ್ತಾರೆ.

ಸ್ನೇಹಿತರೇ, ಸುದೀರ್ಘ ಕಾಲದ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಮತ್ತೆ ಪ್ರಾರಂಭವಾಗಿದೆ. ಕೈಲಾಸ ಮಾನಸ ಸರೋವರ ಅಂದರೆ ಪರಮಾತ್ಮ ಶಿವನ ವಾಸಸ್ಥಾನ. ಹಿಂದೂ, ಬೌದ್ಧ, ಜೈನ, ಪ್ರತಿಯೊಂದು ಸಂಪ್ರದಾಯದಲ್ಲೂ, ಕೈಲಾಸವನ್ನು ಶೃಧ್ಧೆ  ಮತ್ತು ಭಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಸ್ನೇಹಿತರೇ, ಪವಿತ್ರ ಅಮರನಾಥ ಯಾತ್ರೆ ಜುಲೈ 3 ರಿಂದ ಪ್ರಾರಂಭವಾಗಲಿದೆ ಮತ್ತು ಪವಿತ್ರ ಶ್ರಾವಣ ಮಾಸವೂ ಕೆಲವೇ ದಿನಗಳ ದೂರದಲ್ಲಿದೆ. ಕೆಲ ದಿನಗಳ ಹಿಂದೆಯಷ್ಟೇ ನಾವು ಭಗವಂತ ಜಗನ್ನಾಥಜಿ ರಥಯಾತ್ರೆಯನ್ನು ಸಹ ನೋಡಿದ್ದೇವೆ. ಅದು ಒಡಿಶಾ, ಗುಜರಾತ್ ಅಥವಾ ದೇಶದ ಯಾವುದೇ ಮೂಲೆಯಲ್ಲಿರಲಿ, ಲಕ್ಷಾಂತರ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ, ಈ ಯಾತ್ರೆಗಳು 'ಏಕ್ ಭಾರತ-ಶ್ರೇಷ್ಠ ಭಾರತ' ಎಂಬ ಭಾವನೆಯ ಪ್ರತಿಬಿಂಬವಾಗಿವೆ. ನಾವು ನಮ್ಮ ಧಾರ್ಮಿಕ ಪ್ರಯಾಣವನ್ನು ಭಕ್ತಿ, ಸಂಪೂರ್ಣ ಸಮರ್ಪಣೆ ಮತ್ತು ಸಂಪೂರ್ಣ ಶೃಧ್ಧೆಯಿಂದ ಪೂರ್ಣಗೊಳಿಸಿದಾಗ, ನಮಗೆ ಅದರ ಫಲ ಸಿಗುತ್ತದೆ. ಯಾತ್ರೆ ಕೈಗೊಳ್ಳುವ ಎಲ್ಲಾ ಅದೃಷ್ಟಶಾಲಿ ಭಕ್ತರಿಗೆ ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸೇವಾ ಮನೋಭಾವದಿಂದ ಈ ಯಾತ್ರೆಗಳನ್ನು ಯಶಸ್ವಿ ಮತ್ತು ಸುರಕ್ಷಿತವಾಗಿಸುವಲ್ಲಿ ತೊಡಗಿರುವವರನ್ನು ಸಹ ನಾನು ಅಭಿನಂದಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಈಗ ನಾನು ನಿಮಗೆ ದೇಶದ ಎರಡು ಸಾಧನೆಗಳ ಬಗ್ಗೆ ಹೇಳಬಯಸುತ್ತೇನೆ, ಅವು ನಿಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡುತ್ತದೆ. ಈ ಸಾಧನೆಗಳ ಬಗ್ಗೆ ಜಾಗತಿಕ ಸಂಸ್ಥೆಗಳು ಚರ್ಚಿಸುತ್ತಿವೆ. WHO ಅಂದರೆ ‘ವಿಶ್ವ ಆರೋಗ್ಯ ಸಂಸ್ಥೆ’ ಮತ್ತು ILO ಅಂದರೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳು ದೇಶದ ಈ ಸಾಧನೆಗಳ ಬಗ್ಗೆ ಅಪಾರ ಶ್ಲಾಘನೇ ವ್ಯಕ್ತಪಡಿಸಿವೆ. ಮೊದಲ ಸಾಧನೆ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ. ಟ್ರಕೋಮಾ ಎಂಬ ಒಂದು ಕಣ್ಣಿನ ಕಾಯಿಲೆಯ ಬಗ್ಗೆ ನಿಮ್ಮಲ್ಲಿ ಹಲವರು ಕೇಳಿರಬಹುದು. ಈ ರೋಗವು ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಒಂದು ಕಾಲದಲ್ಲಿ ಈ ರೋಗವು ದೇಶದ ಹಲವು ಭಾಗಗಳಲ್ಲಿ ಸಾಮಾನ್ಯವಾಗಿತ್ತು. ಕಾಳಜಿ ವಹಿಸದಿದ್ದರೆ, ಈ ರೋಗವು ಕ್ರಮೇಣ ಉಲ್ಬಣಿಸಿ ಕಣ್ಣಿನ ದೃಷ್ಟಿ ಕ್ಷೀಣಿಸುವುದಕ್ಕೆ  ಕಾರಣವಾಗುತ್ತಿತ್ತು. ಟ್ರಕೋಮಾವನ್ನು ಅದರ ಬೇರುಗಳಿಂದ ಕಿತ್ತೆಸೆಯುವ ಪ್ರತಿಜ್ಞೆಯನ್ನು ನಾವು ಮಾಡಿದ್ದೆವು. ‘ವಿಶ್ವ ಆರೋಗ್ಯ ಸಂಸ್ಥೆ’ ಅಂದರೆ WHO ಭಾರತವನ್ನು ಟ್ರಕೋಮಾ ಮುಕ್ತ ಎಂದು ಘೋಷಿಸಿದೆ ಎಂದು ನಿಮಗೆ ತಿಳಿಸಲು ತುಂಬಾ ಹರ್ಷವೆನಿಸುತ್ತದೆ. ಈಗ ಭಾರತವು ಟ್ರಕೋಮಾ ಮುಕ್ತ ದೇಶವಾಗಿದೆ. ಇದು ಅವಿಶ್ರಾಂತವಾಗಿ ಮತ್ತು ನಿರಂತರವಾಗಿ ಈ ರೋಗದ ವಿರುದ್ಧ ಹೋರಾಡಿದ ಲಕ್ಷಾಂತರ ಜನರ ಕಠಿಣ ಪರಿಶ್ರಮದ ಫಲಿತವಾಗಿದೆ. ಈ ಯಶಸ್ಸು ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಸಲ್ಲತಕ್ಕದ್ದು. ‘ಸ್ವಚ್ಛ ಭಾರತ ಅಭಿಯಾನ’ ಕೂಡ ಇದನ್ನು ನಿರ್ಮೂಲನೆ ಮಾಡುವಲ್ಲಿ ಬಹಳಷ್ಟು ಸಹಾಯ ಮಾಡಿತು. ‘ಜಲ ಜೀವನ್ ಮಿಷನ್’ ಕೂಡ ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು, ಶುದ್ಧ ನಲ್ಲಿ ನೀರು ಮನೆ ಮನೆಗೂ ತಲುಪುತ್ತಿರುವುದರಿಂದ, ಇಂತಹ ರೋಗಗಳ ಅಪಾಯ ತಗ್ಗಿದೆ. ಭಾರತವು ಈ ರೋಗವನ್ನು ನಿಭಾಯಿಸುವುದರ ಜೊತೆ ಜೊತೆಗೆ ಅದರ ಮೂಲ ಕಾರಣಗಳನ್ನು ಸಹ ತೊಡೆದು ಹಾಕಿದೆ ಎಂಬ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಶ್ಲಾಘಿಸಿದೆ.  

ಸ್ನೇಹಿತರೇ, ಇಂದು ಭಾರತದ ಹೆಚ್ಚಿನ ಜನಸಂಖ್ಯೆಯು ಒಂದಲ್ಲ ಒಂದು ಸಾಮಾಜಿಕ ರಕ್ಷಣಾ ಪ್ರಯೋಜನವನ್ನು ಪಡೆಯುತ್ತಿದೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಿಂದ (ILO) ಬಹಳ ಮುಖ್ಯವಾದ ವರದಿ ಬಂದಿದೆ. ಭಾರತದ ಜನಸಂಖ್ಯೆಯ ಪ್ರತಿಶತ 64 ಕ್ಕಿಂತ ಹೆಚ್ಚು ಜನರು ಒಂದಲ್ಲಾ ಒಂದು ಸಾಮಾಜಿಕ ರಕ್ಷಣಾ ಪ್ರಯೋಜನವನ್ನು ಖಂಡಿತವಾಗಿಯೂ ಪಡೆಯುತ್ತಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಸಾಮಾಜಿಕ ಸುರಕ್ಷತೆ - ಇದು ವಿಶ್ವದ ಅತಿದೊಡ್ಡ ವಿಮಾ ರಕ್ಷಣೆಗಲ್ಲಿ ಒಂದಾಗಿದೆ. ಇಂದು, ದೇಶದ ಸುಮಾರು 95 ಕೋಟಿ ಜನರು ಒಂದಲ್ಲಾ ಒಂದು ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ, ಆದರೆ, 2015 ರವರೆಗೆ, ಸರ್ಕಾರಿ ಯೋಜನೆಗಳು 25 ಕೋಟಿಗಿಂತಲೂ ಕಡಿಮೆ ಜನರನ್ನು ತಲುಪುತ್ತಿದ್ದವು.

ಸ್ನೇಹಿತರೇ, ಭಾರತದಲ್ಲಿ, ಆರೋಗ್ಯದಿಂದ ಸಾಮಾಜಿಕ ಭದ್ರತೆಯವರೆಗೆ, ಪ್ರತಿಯೊಂದು ಕ್ಷೇತ್ರದಲ್ಲೂ ದೇಶವು ಪರಿಪೂರ್ಣತೆಯ ಭಾವನೆಯೊಂದಿಗೆ ಮುಂದುವರಿಯುತ್ತಿದೆ. ಇದು ಸಾಮಾಜಿಕ ನ್ಯಾಯದ ಉತ್ತಮ ಚಿತ್ರಣವೂ ಆಗಿದೆ. ಈ ಯಶಸ್ಸು ಮುಂಬರುವ ಸಮಯದಲ್ಲಿ ಮತ್ತಷ್ಟು ಉತ್ತಮವಾಗಿರುತ್ತದೆ, ಭಾರತವು ಪ್ರತಿ ಹಂತದಲ್ಲೂ ಇನ್ನಷ್ಟು ಬಲಶಾಲಿಯಾಗುತ್ತದೆ ಎಂಬ ನಂಬಿಕೆಯನ್ನು  ಹುಟ್ಟುಹಾಕಿದೆ.

ನನ್ನ ಪ್ರಿಯ ದೇಶವಾಸಿಗಳೇ, ಸಾರ್ವಜನಿಕ ಭಾಗವಹಿಸುವಿಕೆಯ ಶಕ್ತಿಯೊಂದಿಗೆ, ದೊಡ್ಡ ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಬಹುದು. ನಾನು ನಿಮಗಾಗಿ ಆಡಿಯೋವನ್ನು ಕೇಳಿಸುತ್ತೇನೆ. ಈ ಆಡಿಯೋದಲ್ಲಿ ಆ ಬಿಕ್ಕಟ್ಟಿನ ಪ್ರಮಾಣದ ಕಲ್ಪನೆ ನಿಮಗೆ ದೊರೆಯಲಿದೆ. ಆ ಬಿಕ್ಕಟ್ಟು ಅದೆಷ್ಟು ಬ್ರಹತ್ ಪ್ರಮಾಣದ್ದಾಗಿತ್ತು, ಅದನ್ನು ಮೊದಲು ಕೇಳಿ, ಅರ್ಥಮಾಡಿಕೊಳ್ಳಿ.

ಮೊರಾರ್ಜಿ ಭಾಯ್ ದೇಸಾಯಿ- ಭಾಷಣ

[ಎರಡು ವರ್ಷಗಳ ಕಾಲ ನಡೆದ ಈ ದಬ್ಬಾಳಿಕೆ, ದಬ್ಬಾಳಿಕೆ 5-7 ವರ್ಷಗಳಿಂದಲೇ ಶುರುವಾಗಿತ್ತು. ಆದರೆ ಎರಡು ವರ್ಷಗಳಲ್ಲಿ ಜನರ ಮೇಲೆ ತುರ್ತು ಪರಿಸ್ಥಿತಿ ಹೇರಿ ಅಮಾನವೀಯವಾಗಿ ನಡೆಸಿಕೊಂಡಾಗ ಅದು ಉತ್ತುಂಗಕ್ಕೇರಿತು. ಜನರ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲಾಯಿತು, ಪತ್ರಿಕೆಗಳಿಗೆ ಯಾವುದೇ ಬಗೆಯ ಸ್ವಾತಂತ್ರ್ಯವಿರಲಿಲ್ಲ. ನ್ಯಾಯಾಲಯಗಳನ್ನು ಸಂಪೂರ್ಣ ದುರ್ಬಲಗೊಳಿಸಲಾಯಿತು. ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಜೈಲಿಗೆ ಹಾಕಲಾಯಿತು ಮತ್ತು ನಂತರ ಅವರ ಅನಿಯಂತ್ರಿತ ಆಡಳಿತ ಮುಂದುವರೆದ ರೀತಿಗೆ, ಪ್ರಪಂಚದ ಇತಿಹಾಸದಲ್ಲಿಯೂ ಸಹ ಇದಕ್ಕೆ ಉದಾಹರಣೆ ಸಿಗುವುದು ಕಷ್ಟ.]

ಸ್ನೇಹಿತರೇ, ಇದು ದೇಶದ ಮಾಜಿ ಪ್ರಧಾನಿ ಶ್ರೀ ಮೊರಾರ್ಜಿ ಭಾಯ್ ದೇಸಾಯಿ ಅವರ ಧ್ವನಿ. ಅವರು ತುರ್ತು ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ಪಷ್ಟವಾಗಿ ಹೇಳಿದ್ದಾರೆ. ಆ ಸಮಯ ಹೇಗಿತ್ತು ಎಂದು ನೀವು ಊಹಿಸಬಹುದು! ತುರ್ತು ಪರಿಸ್ಥಿತಿ ಹೇರಿದವರು ನಮ್ಮ ಸಂವಿಧಾನದ ಕೊಲೆ ಮಾಡುವುದಲ್ಲದೆ, ನ್ಯಾಯಾಂಗವನ್ನು ತಮ್ಮ ಗುಲಾಮನನ್ನಾಗಿ ಮಾಡಿ ಕೊಳ್ಳುವ ಉದ್ದೇಶವನ್ನೂ ಹೊಂದಿದ್ದರು. ಈ ಅವಧಿಯಲ್ಲಿ, ಜನರನ್ನು ಅಪಾರ ಪ್ರಮಾಣದಲ್ಲಿ ಹಿಂಸಿಸಲಾಯಿತು. ಎಂದಿಗೂ ಮರೆಯಲಾಗದಂತಹ ಇಂಥ ಅನೇಕ ಉದಾಹರಣೆಗಳಿವೆ. ಜಾರ್ಜ್ ಫರ್ನಾಂಡಿಸ್ ಸಾಹಿಬ್ ಅವರನ್ನು ಸರಪಳಿಯಲ್ಲಿ ಬಂಧಿಸಲಾಗಿತ್ತು. ಅನೇಕ ಜನರಿಗೆ ಅತೀವ ಚಿತ್ರಹಿಂಸೆ ನೀಡಲಾಯಿತು. 'MISA' ಅಡಿಯಲ್ಲಿ, ಯಾರನ್ನಾದರೂ ಈ ರೀತಿ ಬಂಧಿಸಬಹುದಾಗಿತ್ತು. ವಿದ್ಯಾರ್ಥಿಗಳಿಗೆ ಕೂಡ ಕಿರುಕುಳ ನೀಡಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹ ಹತ್ತಿಕ್ಕಲಾಯಿತು.

ಸ್ನೇಹಿತರೇ, ಆ ಅವಧಿಯಲ್ಲಿ ಬಂಧಿಸಲ್ಪಟ್ಟ ಸಾವಿರಾರು ಜನರ ಮೇಲೆ ಇದೇ ರೀತಿಯ ಅಮಾನವೀಯ ದೌರ್ಜನ್ಯಗಲು ನಡೆದವು. ಆದರೆ ಇದು ಭಾರತದ ಜನಶಕ್ತಿ, ಅವರು ತಲೆಬಾಗಲಿಲ್ಲ, ಬಗ್ಗಲಿಲ್ಲ ಮತ್ತು ಪ್ರಜಾಪ್ರಭುತ್ವದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಒಪ್ಪಲಿಲ್ಲ. ಅಂತಿಮವಾಗಿ, ಜನತಾ ಜನಾರ್ಧನನ ಗೆಲುವು ಆಯಿತು. ತುರ್ತು ಪರಿಸ್ಥಿತಿಯನ್ನು ಕಿತ್ತೊಗೆಯಲಾಯಿತು ಮತ್ತು ಅದನ್ನು ಹೇರಿದವರನ್ನು ಸೋಲಿಸಲಾಯಿತು. ಬಾಬು ಜಗಜೀವನ್ ರಾಮ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಳ ಬಲವಾಗಿ ವ್ಯಕ್ತಪಡಿಸಿದ್ದರು.

ಬಾಬು ಜಗಜೀವನ್ ರಾಮ್ ತಮ್ಮದೇ ಶೈಲಿಯಲ್ಲಿ ಅಂದು ಹೇಳಿದ್ದನ್ನು ನಾವು ಖಂಡಿತಾ ಕೇಳಬೇಕು  - 

#ಆಡಿಯೋ #

[ಸೋದರಿಯರೇ ಮತ್ತು ಸೋದರರೇ, ಕಳೆದ ಚುನಾವಣೆ ಚುನಾವಣೆಯಾಗಿರಲಿಲ್ಲ. ಇದು ಆ ಕಾಲದ ಪರಿಸ್ಥಿತಿಗಳನ್ನು ಬದಲಾಯಿಸುವ, ಸರ್ವಾಧಿಕಾರದ ಅಲೆಯ ದಿಕ್ಕನ್ನು ಬದಲಿಸುವ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ  ಭಾರತದ ಜನರ ಮಹಾನ್ ಅಭಿಯಾನವಾಗಿತ್ತು.]

ಅಟಲ್ ಜಿ ತಮ್ಮದೇ ಶೈಲಿಯಲ್ಲಿ ಅಂದು ಹೇಳಿದ್ದನ್ನು ನಾವು ಖಂಡಿತಾ ಕೇಳಬೇಕು -

#ಆಡಿಯೋ #

[ಸೋದರಿಯರೇ ಮತ್ತು ಸೋದರರೇದೇಶದಲ್ಲಿ ನಡೆದದ್ದೆಲ್ಲವನ್ನು ಕೇವಲ ಚುನಾವಣೆ ಎಂದು ಉಲ್ಲೇಖಿಸಲಾಗುವುದಿಲ್ಲಶಾಂತಿಯುತ ಕ್ರಾಂತಿ ನಡೆದಿದೆಜನಶಕ್ತಿಯ ಅಲೆ ಪ್ರಜಾಪ್ರಭುತ್ವದ ಕೊಲೆಗಾರರನ್ನು ಇತಿಹಾಸದ ಕಸದ ತೊಟ್ಟಿಗೆ ಎಸೆದಿದೆ.]

ಸ್ನೇಹಿತರೇ, ಕೆಲವೇ ದಿನಗಳ ಹಿಂದೆ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳು ಪೂರ್ಣಗೊಂಡಿವೆ. ನಾವು ದೇಶವಾಸಿಗಳು 'ಸಂವಿಧಾನ ಹತ್ಯೆ ದಿನ' ಆಚರಿಸಿದ್ದೇವೆ. ತುರ್ತು ಪರಿಸ್ಥಿತಿಯ ವಿರುದ್ಧ ಧೈರ್ಯದಿಂದ ಹೋರಾಡಿದ ಎಲ್ಲರನ್ನು ನಾವು ಸದಾ ಸ್ಮರಣೆ ಮಾಡಬೆಕು. ಇದು ನಮ್ಮ ಸಂವಿಧಾನವನ್ನು ಸಶಕ್ತವಾಗಿಡಲು ನಿರಂತರವಾಗಿ ಜಾಗರೂಕರಾಗಿರಲು ನಮಗೆ ಸ್ಫೂರ್ತಿ ನೀಡುತ್ತದೆ.

ನನ್ನ ಪ್ರಿಯ ದೇಶವಾಸಿಗಳೇ, ಒಂದು ಚಿತ್ರವನ್ನು ಕಲ್ಪಿಸಿಕೊಳ್ಳಿ. ಬೆಳಗಿನ ಸೂರ್ಯರಶ್ಮಿ ಬೆಟ್ಟಗಳನ್ನು ತಾಕುತ್ತಿದೆ, ನಿಧಾನವಾಗಿ ಬೆಳಕು ಬಯಲು ಪ್ರದೇಶಗಳ ಕಡೆಗೆ ಪಸರಿಸುತ್ತಿದೆ, ಮತ್ತು ಆ ಬೆಳಕಿನ ಜೊತೆ ಜೊತೆಗೆ, ಫುಟ್ಬಾಲ್ ಪ್ರಿಯರ ಗುಂಪು ಮುಂದೆ ಹೆಜ್ಜೆ ಹಾಕುತ್ತಿದೆ. ಶಿಳ್ಳೆ ಹೊಡೆಯುತ್ತದೆ ಮತ್ತು ಕೆಲವೇ  ಕ್ಷಣಗಳಲ್ಲಿ ಆ ಮೈದಾನ ಚಪ್ಪಾಳೆ ಮತ್ತು ಘೋಷಣೆಗಳೊಂದಿಗೆ ಮೊಳಗಲಾರಂಭಿಸುತ್ತದೆ. ಪ್ರತಿ ಪಾಸ್‌  ಮತ್ತು ಪ್ರತಿ ಗೋಲ್ ನೊಂದಿಗೆ ಜನರ ಉತ್ಸಾಹ ಹೆಚ್ಚುತ್ತಿದೆ. ಇದು ಎಂತಹ ಸುಂದರ ಜಗತ್ತು ಎಂದು ನೀವು ಯೋಚಿಸುತ್ತಿರಬೇಕು? ಸ್ನೇಹಿತರೇ, ಈ ಚಿತ್ರವು ಅಸ್ಸಾಂನ ಪ್ರಮುಖ ಪ್ರದೇಶವಾದ ಬೋಡೋಲ್ಯಾಂಡ್‌ನ ವಾಸ್ತವ ದೃಶ್ಯವಾಗಿದೆ. ಬೋಡೋಲ್ಯಾಂಡ್ ಹೊಸ ರೂಪದೊಂದಿಗೆ ಇಂದು ದೇಶದ ಮುಂದೆ ನಿಂತಿದೆ. ಇಲ್ಲಿನ ಯುವಕರಲ್ಲಿರುವ ಉತ್ಸಾಹ ಮತ್ತು ಆತ್ಮವಿಶ್ವಾಸವು ಫುಟ್‌ಬಾಲ್ ಮೈದಾನದಲ್ಲಿ ಅಧಿಕವಾಗಿ ಗೋಚರಿಸುತ್ತದೆ. ಬೋಡೋ ಪ್ರಾದೇಶಿಕ ವಿಭಾಗದಲ್ಲಿ ಬೋಡೋಲ್ಯಾಂಡ್ ಸಿಇಎಂ ಕಪ್ ಅನ್ನು ಆಯೋಜಿಸಲಾಗುತ್ತಿದೆ. ಇದು ಕೇವಲ ಪಂದ್ಯಾವಳಿಯಲ್ಲ; ಇದು ಏಕತೆ ಮತ್ತು ಭರವಸೆಯ ಆಚರಣೆಯಾಗಿದೆ. 3700 ಕ್ಕೂ ಹೆಚ್ಚು ತಂಡಗಳು, ಸುಮಾರು 70,000 ಆಟಗಾರರು ಅದರಲ್ಲೂ ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಅಂಕಿಅಂಶಗಳು ಬೋಡೋಲ್ಯಾಂಡ್‌ನ ದೊಡ್ಡ ಬದಲಾವಣೆಯ ಕಥೆಯನ್ನು ಸಾರುತ್ತವೆ. ಬೋಡೋಲ್ಯಾಂಡ್ ಈಗ ದೇಶದ ಕ್ರೀಡಾ ನಕ್ಷೆಯಲ್ಲಿ ತನ್ನ ಪ್ರಕಾಶವನ್ನು ಬೀರುತ್ತಿದೆ.

ಸ್ನೇಹಿತರೇ, ಹೋರಾಟವೇ ಇಲ್ಲಿನ ಗುರುತು ಎಂಬಂತಿದ್ದ ಕಾಲವೊಂದಿತ್ತು. ಆಗ ಇಲ್ಲಿನ ಯುವಜನತೆಗೆ ದಾರಿಗಳು ಸೀಮಿತವಾಗಿದ್ದವು. ಆದರೆ ಇಂದು ಅವರ ಕಣ್ಣುಗಳಲ್ಲಿ ಒಂದು ಹೊಸ ಕನಸಿದೆ, ಮನದಲ್ಲಿ ಆತ್ಮವಿಶ್ವಾಸದ, ಸ್ವಾವಲಂಬನೆಯ ಧೈರ್ಯವಿದೆ. ಇಲ್ಲಿಂದ ಹೊರಹೊಮ್ಮಿರುವ ಫುಟ್ಬಾಲ್ ಆಟಗಾರರು ಈಗ ದೊಡ್ಡ ಮಟ್ಟದಲ್ಲಿ ತಮ್ಮ ಗುರುತು ಮೂಡಿಸುತ್ತಿದ್ದಾರೆ. ಹಾಲೀಚರಣ್ ನಾರಜಾರೀ, ದುರ್ಗಾ ಬೋರೋ, ಅಪೂರ್ಣಾ ನಾರಜಾರಿ, ಮನಬೀರ್ ಬಸುಮತಾರಿ – ಇವು ಕೇವಲ ಕಾಲ್ಚೆಂಡು ಆಟಗಾರರ ಹೆಸರು ಮಾತ್ರವಲ್ಲ, - ಇವು ಬೋಡೋಲ್ಯಾಂಡ್ ಅನ್ನು ಆಟದ ಮೈದಾನದಿಂದ ರಾಷ್ಟ್ರೀಯ ವೇದಿಕೆಗೆ ಕೊಂಡೊಯ್ದ ಹೊಸ ಪೀಳಿಗೆಯ ಗುರುತುಗಳಾಗಿವೆ. ಇವರ ಪೈಕಿ ಅನೇಕರು ಸೀಮಿತ ಸಂಪನ್ಮೂಲಗಳಿಂದ ಅಭ್ಯಾಸ ಮಾಡಿದವರಿದ್ದಾರೆ, ಅನೇಕರು ಕಠಿಣ ಪರಿಸ್ಥಿತಿಗಳಲ್ಲಿ ತಮ್ಮ ದಾರಿ ಕಂಡುಕೊಂಡಿದ್ದಾರೆ, ಇಂದು ಇವರ ಹೆಸರು ಹೇಳಿಕೊಂಡು ದೇಶದ ಅದೆಷ್ಟೋ ಮಕ್ಕಳು ತಮ್ಮ ಕನಸಿನ ಆರಂಭ ಮಾಡುತ್ತಾರೆ.

ಸ್ನೇಹಿತರೇ, ನಮ್ಮ ಸಾಮರ್ಥ್ಯವನ್ನು ನಾವು ವಿಸ್ತರಿಸಿಕೊಳ್ಳಬೇಕಾದರೆ, ಎಲ್ಲಕ್ಕಿಂತ ಮೊದಲು ನಾವು ನಮ್ಮ ಶಾರೀರಿಕ ದೃಢತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಅಂತೆಯೇ ಸ್ನೇಹಿತರೇ ಫಿಟ್ನೆಸ್ ಗಾಗಿ ಮತ್ತು ಸ್ಥೂಲಕಾಯ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ನಾನು ನೀಡಿದ್ದ ಒಂದು ಸಲಹೆ ನಿಮಗೆಲ್ಲಾ ನೆನಪಿದೆಯಲ್ಲವೇ! ಆಹಾರದಲ್ಲಿ ಎಣ್ಣೆಯ ಬಳಕೆ ಪ್ರಮಾಣವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿ, ಸಣ್ಣಗಾಗಿ. ನೀವು ಶಾರೀರಿಕವಾಗಿ ದೃಢವಾಗಿದ್ದರೆ, ಜೀವನದಲ್ಲಿ ಮತ್ತಷ್ಟು ಸೂಪರ್ ಫಿಟ್ ಆಗಿರುತ್ತೀರಿ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಭಾರತ ದೇಶ ಯಾವರೀತಿ ನಮ್ಮ ಪ್ರಾದೇಶಿಕ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳಿಂದಾಗಿ ಹೆಸರುವಾಸಿಯಾಗಿದೆಯೋ ಅದೇ ರೀತಿ, ಕಲೆ, ಶಿಲ್ಪ ಮತ್ತು ಕರಕುಶಲತೆಯ ವೈವಿಧ್ಯತೆ ಕೂಡಾ ನಮ್ಮ ದೇಶದ ಒಂದು ಸುಂದರತೆಯಾಗಿದೆ. ನೀವು ಯಾವುದೇ ಪ್ರದೇಶಕ್ಕೆ ಹೋಗಿ, ಅಲ್ಲಿ ನಿಮಗೆ ಒಂದಲ್ಲಾ ಒಂದು ವಿಶೇಷವಾದ ಮತ್ತು ಸ್ಥಳೀಯ ವಸ್ತುವಿನ ಬಗ್ಗೆ ತಿಳಿದುಬರುತ್ತದೆ. ನಾವು ಆಗಾಗ್ಗೆ ‘ಮನದ ಮಾತಿನಲ್ಲಿ’ ದೇಶದ ಇಂತಹ ವಿಶಿಷ್ಠ ಉತ್ಪನ್ನಗಳ ಬಗ್ಗೆ ಮಾತನಾಡುತ್ತೇವೆ. ಅಂತಹದ್ದೇ ಒಂದು ಉತ್ಪನ್ನ ಮೇಘಾಲಯದ ಎರಿ ಸಿಲ್ಕ್ (ಎರಿ ರೇಷ್ಮೆ) ಆಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಇದಕ್ಕೆ GI Tag ದೊರೆತಿದೆ. ಎರಿ ರೇಷ್ಮೆ ಮೇಘಾಲಯದ ಪರಂಪರೆಯಂತಿದೆ. ಇಲ್ಲಿನ ಬುಡಕಟ್ಟು ಜನಾಂಗದವರು ವಿಶೇಷವಾಗಿ ಖಾಸಿ ಸಮುದಾಯದ ಜನರು ಇದನ್ನು ತಲೆಮಾರುಗಳಿಂದ ರಕ್ಷಿಸುತ್ತಾ ಬಂದಿದ್ದಾರೆ ಮತ್ತು ತಮ್ಮ ಕೌಶಲ್ಯದಿಂದ ಅದನ್ನು ಶ್ರೀಮಂತಗೊಳಿಸಿದದಾರೆ. ಈ ರೇಷ್ಮೆ ತನ್ನ ಹಲವು ವಿಶೇಷ ಉತ್ತಮ ಗುಣಗಳಿಂದಾಗಿ ಬೇರೆ ಇತರ ಬಟ್ಟೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇದರ ಅತ್ಯಂತ ವಿಶೇಷವಾದ ಗುಣವೆಂದರೆ ಇದನ್ನು ತಯಾರಿಸುವ ವಿಧಾನ. ಈ ರೇಷ್ಮೆಯನ್ನು ಪಡೆಯಲು ಅದನ್ನು ತಯಾರಿಸುವ ಹುಳುಗಳನ್ನು ಸಾಯಿಸಲಾಗುವುದಿಲ್ಲ, ಆದ್ದರಿಂದಲೇ ಇದನ್ನು ಅಹಿಂಸಾ ರೇಷ್ಮೆ ಎಂದು ಕೂಡಾ ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಇಂತಹ ಹಿಂಸಾ ರಹಿತ, ಪ್ರಕೃತಿಯ ಮೇಲೆ ದುಷ್ಪರಿಣಾಮ ಉಂಟು ಮಾಡದ ಉತ್ಪನ್ನಗಳಿಗೆ ಬೇಡಿಕೆ ಅಧಿಕವಾಗುತ್ತಿದೆ. ಆದ್ದರಿಂದ ಮೇಘಾಲಯದ ಎರಿ ರೇಷ್ಮೆ ಜಾಗತಿಕ ಮಾರುಕಟ್ಟೆಗೆ ಒಂದು ಸೂಕ್ತವಾದ ಉತ್ಪನ್ನವಾಗಿದೆ. ಇದರ ಮತ್ತೊಂದು ವಿಶೇಷ ಗುಣವಿದೆ, ಅದೆಂದರೆ ಈ ರೇಷ್ಮೆ ಚಳಿಗಾಲದಲ್ಲಿ ಬೆಚ್ಚನೆಯ ಅನಿಸಿಕೆ ಹಾಗೂ ಬೇಸಿಗೆಯಲ್ಲಿ ತಣ್ಣನೆಯ ಅನಿಸಿಕೆ ನೀಡುತ್ತದೆ. ಇದರ ಈ ವಿಶೇಷತೆಯು ಹೆಚ್ಚಿನ ಸ್ಥಳಗಳಿಗೆ ಅನುಕೂಲವಾಗಿಸಿದೆ. ಮೇಘಾಲಯದ ಮಹಿಳೆಯರು ಈಗ ಸ್ವ ಸಹಾಯ ಗುಂಪಿನ ಮೂಲಕ ತಮ್ಮ ಈ ಪರಂಪರೆಯನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಎರಿ ರೇಷ್ಮೆಗೆ ಜಿಐ ಟ್ಯಾಗ್ ದೊರೆತಿರುವುದಕ್ಕಾಗಿ ನಾನು ಮೇಘಾಲಯದ ಜನರನ್ನು ಅಭಿನಂದಿಸುತ್ತೇನೆ. ನೀವು ಕೂಡಾ ಎರಿ ರೇಷ್ಮೆಯಿಂದ ತಯಾರಿಸಲಾದ ಬಟ್ಟೆಗಳನ್ನು ಖಂಡಿತವಾಗಿಯೂ ಪ್ರಯತ್ನಿಸಿ ಎಂದು ಮನವಿ ಮಾಡುತ್ತೇನೆ ಅಂತೆಯೇ ಖಾದಿ, ಕೈಮಗ್ಗ, ಕರಕುಶಲ ವಸ್ತುಗಳು ಮತ್ತು ವೋಕಲ್ ಫಾರ್ ಲೋಕಲ್ ಇವುಗಳನ್ನು ಕೂಡಾ ನೀವು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಗ್ರಾಹಕರು ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನು ಖರೀದಿಸಬೇಕು, ಮತ್ತು ವ್ಯಾಪಾರಿಗಳು ಭಾರತದಲ್ಲೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಆಗಲೇ ‘ಆತ್ಮನಿರ್ಭರ ಭಾರತ ಅಭಿಯಾನ’ ಕ್ಕೆ ಹೊಸ ಶಕ್ತಿ ದೊರೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಮಹಿಳಾ ನೇತೃತ್ವದ ಅಭಿವೃದ್ಧಿ (Women Led Development) ಈ ಮಂತ್ರ ಭಾರತದ ಹೊಸ ಭವಿಷ್ಯ ರೂಪಿಸಲು ಸಿದ್ಧವಾಗಿದೆ.  ನಮ್ಮ ತಾಯಂದಿರು, ಸೋದರಿಯರು, ಹೆಣ್ಣು ಮಕ್ಕಳು ಇಂದು ಕೇವಲ ತಮಗಾಗಿ ಮಾತ್ರವಲ್ಲದೇ, ಇಡೀ ಸಮಾಜಕ್ಕಾಗಿ ಹೊಸ ದಿಕ್ಕನ್ನು ಸೃಷ್ಟಿಸುತ್ತಿದ್ದಾರೆ. ತೆಲಂಗಾಣದ ಭದ್ರಾಚಲಂನ ಮಹಿಳೆಯರ ಯಶಸ್ಸಿನ ಬಗ್ಗೆ ತಿಳಿದಾಗ ನಿಮಗೆ ಕೂಡಾ ಸಂತೋಷವೆನಿಸುತ್ತದೆ. ಈ ಮಹಿಳೆಯರು ಈ ಮೊದಲು ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹೊಟ್ಟೆಪಾಡಿಗಾಗಿ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಇಂದು ಅದೇ ಮಹಿಳೆಯರು, ಸಿರಿಧಾನ್ಯಗಳು, ಶ್ರೀಅನ್ನದಿಂದ ಬಿಸ್ಕತ್ ತಯಾರಿಸುತ್ತಿದ್ದಾರೆ. 'ಭದ್ರಾದ್ರಿ ಮಿಲೆಟ್ ಮ್ಯಾಜಿಕ್' ಹೆಸರಿನಿಂದ ಈ ಬಿಸ್ಕತ್ ಹೈದರಾಬಾದ್ ನಿಂದ ಲಂಡನ್ ವರೆಗೂ ತಲುಪುತ್ತಿದೆ. ಭದ್ರಾಚಲಂನ ಈ ಮಹಿಳೆಯರು ಸ್ವ ಸಹಾಯ ಗುಂಪಿನೊಂದಿಗೆ ಸೇರಿ ತರಬೇತಿ ಪಡೆದುಕೊಂಡಿದ್ದಾರೆ.   

ಸ್ನೇಹಿತರೆ, ಈ ಮಹಿಳೆಯರು ಮತ್ತೊಂದು ಪ್ರಶಂಸನೀಯ ಕೆಲಸ ಮಾಡಿದ್ದಾರೆ. ಇವರು 'ಗಿರಿ ಸ್ಯಾನಿಟರಿ ಪ್ಯಾಡ್ಸ್' ತಯಾರಿಸಲು ಆರಂಭಿಸಿದ್ದಾರೆ. ಕೇವಲ ಮೂರು ತಿಂಗಳುಗಳಲ್ಲಿ 40,000 (ನಲವತ್ತು ಸಾವಿರ) ಪ್ಯಾಡ್ಸ್ ತಯಾರಿಸಿದ್ದಾರೆ ಮತ್ತು ಅವುಗಳನ್ನು ಶಾಲೆಗಳು ಮತ್ತು ಸುತ್ತಮುತ್ತಲಿನ ಕಛೇರಿಗಳಿಗೆ ತಲುಪಿಸಿದ್ದಾರೆ – ಅದು ಕೂಡಾ ಅತ್ಯಂತ ಕಡಿಮೆ ಬೆಲೆಯಲ್ಲಿ.

ಸ್ನೇಹಿತರೇ, ಕರ್ನಾಟಕದ ಕಲಬುರ್ಗಿಯ ಮಹಿಳೆಯರ ಸಾಧನೆ ಕೂಡಾ ಬಹಳ ಉತ್ತಮವಾಗಿದೆ. ಇವರು ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ಮಾಡಿದ್ದಾರೆ. ಅವರು ರಚಿಸಿರುವ ಸಹಕಾರಿ ಸಂಘದಲ್ಲಿ ಪ್ರತಿದಿನ ಮೂರು ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ. ಈ ರೊಟ್ಟಿಗಳ ಸುವಾಸನೆ ಈಗ ಕೇವಲ ಹಳ್ಳಿಗಳಿಗೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ. Online Food Platforms ನಲ್ಲಿ ಬೇಡಿಕೆಗಳು ಬರುತ್ತಿವೆ. ಕಲಬುರ್ಗಿಯ ರೊಟ್ಟಿ ಈಗ ದೊಡ್ಡ ನಗರಗಳ ಅಡಿಗೆ ಮನೆಯವರೆಗೂ ತಲುಪುತ್ತಿದೆ. ಇದು ಈ ಮಹಿಳೆಯರ ಮೇಲೆ ಉತ್ತಮ ಪರಿಣಾಮ ಬೀರಿದ್ದು, ಇವರ ವರಮಾನ ಕೂಡಾ ಹೆಚ್ಚಾಗುತ್ತಿದೆ.

ಸ್ನೇಹಿತರೇ, ಈ ಕಥೆಗಳಲ್ಲಿ ವಿವಿಧ ರಾಜ್ಯಗಳ ಮುಖಗಳಿವೆ. ಆದರೆ ಅವುಗಳ ಕಾಂತಿ ಒಂದೇ. ಇದು ಆತ್ಮವಿಶ್ವಾಸದ ಕಾಂತಿಯಾಗಿದೆ. ಸ್ವಾವಲಂಬನೆಯ ಕಾಂತಿಯಾಗಿದೆ. ಅಂತಹ ಒಂದು ವದನವೇ ಮಧ್ಯಪ್ರದೇಶದ ಸುಮಾ ಉಯಿಕೆ. ಸುಮಾ ಅವರ ಪ್ರಯತ್ನಗಳು ಅತ್ಯಂತ ಶ್ಲಾಘನೀಯ. ಅವರು ಬಾಲಘಾಟ್ ಜಿಲ್ಲೆಯ ಕಟಂಗಿ ಬ್ಲಾಕ್ ನಲ್ಲಿರುವ ಸ್ವಸಹಾಯ ಗುಂಪನ್ನು ಸೇರಿಕೊಂಡು ಅಣಬೆ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತರಬೇತಿ ಪಡೆದುಕೊಂಡರು. ಇದು ಅವರಿಗೆ ಸ್ವಾವಲಂಬನೆಯ ಹಾದಿಯನ್ನು ತೋರಿಸಿತು. ಸುಮಾ ಉಯಿಕೆ ತಮ್ಮ ಆದಾಯ ಹೆಚ್ಚಾದಾಗ, ತಮ್ಮ ಕೆಲಸವನ್ನು ವಿಸ್ತರಿಸಿದರು. ಸಣ್ಣದೊಂದು ಪ್ರಯತ್ನದ ಮೂಲಕ ಆರಂಭವಾದ ಈ ಪಯಣ ಈಗ 'ದೀದಿ ಕ್ಯಾಂಟೀನ್' ಮತ್ತು 'ಥರ್ಮಲ್ ಚಿಕಿತ್ಸಾ ಕೇಂದ್ರ' ದವರೆಗೂ ತಲುಪಿದೆ. ದೇಶದ ಮೂಲೆ ಮೂಲೆಯಲ್ಲಿ ಇಂತಹ ಅಸಂಖ್ಯಾತ  ಮಹಿಳೆಯರು ತಮ್ಮ ಮತ್ತು ದೇಶದ ಭಾಗ್ಯವನ್ನು ಬದಲಾಯಿಸುತ್ತಿದ್ದಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ನನಗೆ ವಿಯೆಟ್ನಾಂನಿಂದ ಬಹಳಷ್ಟು ಜನರು ಬೇರೆ ಬೇರೆ ವಿಧಾನದ ಮೂಲಕ ನನಗೆ ತಮ್ಮ ಸಂದೇಶಗಳನ್ನು ಕಳಿಸಿದ್ದಾರೆ. ಈ ಸಂದೇಶಗಳ ಪ್ರತಿಯೊಂದು ಸಾಲಿನಲ್ಲೂ ಶ್ರದ್ಧೆ ಹಾಗೂ ಆತ್ಮೀಯತೆ ತುಂಬಿತ್ತು. ಅದರಲ್ಲಿ ಅಡಕವಾಗಿದ್ದ ಭಾವನೆಗಳು ಮನ ಮುಟ್ಟುವಂತಿದ್ದವು. ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅವರು ಭಾರತಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು. ಅವರ ಸಾಲುಗಳಲ್ಲಿದ್ದ ಭಾವನೆಗಳು ಯಾವುದೇ ಔಪಚಾರಿಕ ಕೃತಜ್ಞತೆಗಳಿಗಿಂತ ಹೆಚ್ಚಾಗಿದ್ದವು.

ಸ್ನೇಹಿತರೇ, ಮೂಲತಃ ಬುದ್ಧನ ಈ ಪವಿತ್ರ ಅವಶೇಷಗಳು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನಾಗಾರ್ಜುನಕೊಂಡದಲ್ಲಿ ಪತ್ತೆಯಾಗಿದ್ದವು. ಈ ಸ್ಥಳವು ಬೌದ್ಧಧರ್ಮದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಒಂದು ಕಾಲದಲ್ಲಿ ಶ್ರೀಲಂಕಾ ಮತ್ತು ಚೀನಾ ಸೇರಿದಂತೆ ದೂರದೂರದ ಸ್ಥಳಗಳಿಂದ ಜನರು ಈ ಸ್ಥಳಕ್ಕೆ ಬರುತ್ತಿದ್ದರೆಂದು ಹೇಳಲಾಗುತ್ತದೆ.

ಸ್ನೇಹಿತರೇ, ಕಳೆದ ತಿಂಗಳು ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನುಭಾರತದಿಂದ ವಿಯೆಟ್ನಾಂಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿನ 9 ಬೇರೆ ಬೇರೆ ಸ್ಥಳಗಳಲ್ಲಿ ಅದನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಭಾರತದ ಈ ಉಪಕ್ರಮವು ಒಂದು ರೀತಿಯಲ್ಲಿ ವಿಯೆಟ್ನಾಂನ ಜನತೆಗೆ ಒಂದು ರಾಷ್ಟ್ರೀಯ ಹಬ್ಬದಂತಾಗಿತ್ತು. ಸರಿಸುಮಾರು 10 ಕೋಟಿ ಜನಸಂಖ್ಯೆ ಹೊಂದಿರುವ ವಿಯೆಟ್ನಾಂನಲ್ಲಿ ಒಂದೂವರೆ ಕೋಟಿಗೂ ಅಧಿಕ ಸಂಖ್ಯೆಯ ಜನರು ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ದರ್ಶನ ಪಡೆದರು. ಸಾಮಾಜಿಕ ಮಾಧ್ಯದಲ್ಲಿ ನಾನು ನೋಡಿದಂತಹ ಚಿತ್ರಗಳು ಮತ್ತು ವಿಡಿಯೋಗಳು, ಭಕ್ತಿಗೆ ಯಾವುದೇ ಮಿತಿಯಾಗಲೀ, ಗಡಿಯಾಗಲೀ ಇರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಮಳೆಯಿರಲಿ, ಸುಡು ಬಿಸಿಲೇ ಇರಲಿ, ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು. ಚಿಕ್ಕಮಕ್ಕಳು, ವೃದ್ಧರು, ದಿವ್ಯಾಂಗರು ಎಲ್ಲರೂ ಭಾವಪೂರಿತರಾಗಿದ್ದರು. ವಿಯೆಟ್ನಾಂನ ರಾಷ್ಟ್ರಪತಿ, ಉಪ-ಪ್ರಧಾನ ಮಂತ್ರಿ, ಹಿರಿಯ ಸಚಿವರು, ಪ್ರತಿಯೊಬ್ಬರೂ ಪವಿತ್ರ ಅವಶೇಷಗಳೆದುರು ತಲೆಬಾಗಿದರು. ಅಲ್ಲಿನ ಜನರಲ್ಲಿ ಈ ದರ್ಶನದ ಬಗ್ಗೆ ಗೌರವ ಅದೆಷ್ಟು ಆಳವಾಗಿತ್ತೆಂದರೆ, ವಿಯೆಟ್ನಾಂ ಸರ್ಕಾರವು ಅದನ್ನು ಇನ್ನೂ  12 ದಿನಗಳ ಕಾಲ ವಿಸ್ತರಿಸುವಂತೆ ವಿನಂತಿಸಿತು ಮತ್ತು ಭಾರತ ಅದನ್ನು ಸಂತೋಷದಿಂದ ಅಂಗೀಕರಿಸಿತು.

ಸ್ನೇಹಿತರೇ, ದೇಶವನ್ನು, ಸಂಸ್ಕೃತಿಯನ್ನು ಮತ್ತು ಜನರನ್ನು ಒಂದು ಸೂತ್ರದಲ್ಲಿ ಪೋಣಿಸುವಂತಹ ಶಕ್ತಿ ಭಗವಾನ್ ಬುದ್ಧನ ಚಿಂತನೆಗಳಲ್ಲಿವೆ. ಇದಕ್ಕೆ ಮುನ್ನ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ಥೈಲ್ಯಾಂಡ್ ಹಾಗೂ ಮಂಗೋಲಿಯಾ ದೇಶಗಳಿಗೂ ತೆಗೆದುಕೊಂಡು ಹೋಗಲಾಗಿತ್ತು, ಅಲ್ಲಿ ಕೂಡಾ ಭಕ್ತಿಯ ಇದೇ ಭಾವನೆ ಕಂಡು ಬಂದಿತ್ತು. ನಿಮ್ಮ ರಾಜ್ಯಗಳಲ್ಲಿರುವ ಬೌದ್ಧರ ಪವಿತ್ರ ಸ್ಥಳಗಳಿಗೆ ನೀವು ಕೂಡಾ ಪ್ರವಾಸ ಹೋಗಿಬನ್ನಿರೆಂದು ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ. ಅದೊಂದು ಆಧ್ಯಾತ್ಮಿಕ ಅನುಭವ ಎನಿಸುತ್ತದೆ, ಜೊತೆಯಲ್ಲೇ ನಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ನಮ್ಮನ್ನು ನಾವು ಜೋಡಣೆ ಮಾಡಿಕೊಳ್ಳುವಂತಹ ಒಂದು ಸುಂದರ ಅವಕಾಶವೂ ಆಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈ ತಿಂಗಳು ನಾವೆಲ್ಲರೂ ‘ವಿಶ್ವ ಪರಿಸರ ದಿನ’ ಆಚರಿಸಿದೆವು. ಕೇವಲ ತಾವೊಬ್ಬರೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡ, ನಂತರ ಅವರೊಂದಿಗೆ ಇಡೀ ಸಮಾಜ ಕೈಜೋಡಿಸಿದಂತಹ ತಮ್ಮ ಸುತ್ತಮುತ್ತಲಿನ ಸ್ನೇಹಿತರ ಬಗ್ಗೆ ಅನೇಕರು ಹೇಳಿದ್ದಾರೆ. ಎಲ್ಲರ ಇಂತಹ ಕೊಡುಗೆಯು, ನಮ್ಮ ಭೂತಾಯಿಗೆ ದೊಡ್ಡ ಶಕ್ತಿಯಾಗಿದೆ. ಪುಣೆಯ ಶ್ರೀ ರಮೇಶ್ ಖರ್ಮಾಲೆ ಅವರ ಕೆಲಸಗಳ ಬಗ್ಗೆ ತಿಳಿದು ನಿಮಗೆ ಬಹಳ ಪ್ರೇರಣೆ ದೊರೆಯುತ್ತದೆ. ವಾರಾಂತ್ಯದಲ್ಲಿ ಜನರು ವಿಶ್ರಾಂತಿ ಪಡೆಯಲು ಬಯಸುವಾಗ, ರಮೇಶ್ ಮತ್ತು ಅವರ ಕುಟುಂಬದವರು ಸನಿಕೆ ಮತ್ತು ಗುದ್ದಲಿ ತೆಗೆದುಕೊಂಡು ಹೊರಡುತ್ತಾರೆ. ಎಲ್ಲಿಗೆಂದು ಗೊತ್ತೇ? ಜುನ್ನಾರ್ ಬೆಟ್ಟಗಳ ಕಡೆಗೆ. ಬಿಸಿಲೇ ಇರಲಿ ಅಥವಾ ಎತ್ತರದ ಬೆಟ್ಟವೇ ಆಗಿರಲಿ, ಅವರ ಹೆಜ್ಜೆಗಳು ನಿಲ್ಲುವುದಿಲ್ಲ. ಅವರು ಪೊದೆಗಳನ್ನು ಸ್ವಚ್ಛಗೊಳಿಸುತ್ತಾರೆ, ನೀರು ನಿಲ್ಲುವಂತಾಗಲು ಹಳ್ಳಗಳನ್ನು ತೋಡುತ್ತಾರೆ ಮತ್ತು ಬೀಜ ಬಿತ್ತುತ್ತಾರೆ. ಅವರು ಕೇವಲ ಎರಡು ತಿಂಗಳುಗಳಲ್ಲಿ 70 ಹಳ್ಳಗಳನ್ನು ಸಿದ್ಧಪಡಿಸಿದ್ದಾರೆ. ರಮೇಶ್ ಅವರು ಹಲವು ಸಣ್ಣ ಕೊಳಗಳನ್ನು ನಿರ್ಮಿಸಿದ್ದಾರೆ. ನೂರಾರು ಮರಗಳನ್ನು ನೆಟ್ಟಿದ್ದಾರೆ. ಅವರು ಒಂದು ಆಮ್ಲಜನಕ ಉದ್ಯಾನವನ್ನು ಕೂಡಾ ನಿರ್ಮಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪಕ್ಷಿಗಳು ಇಲ್ಲಿಗೆ ಮರಳಲು ಪ್ರಾರಂಭಿಸಿವೆ ಮತ್ತು ವನ್ಯಜೀವಿಗಳು ಹೊಸ ಜೀವವನ್ನು ಪಡೆಯುತ್ತಿವೆ.

ಸ್ನೇಹಿತರೇ, ಗುಜರಾತ್‌ ನ ಅಹಮದಾಬಾದ್ ನಗರದಲ್ಲಿ ಪರಿಸರಕ್ಕಾಗಿ ಮತ್ತೊಂದು ಸುಂದರ ಉಪಕ್ರಮ ಕಂಡುಬಂದಿದೆ. ಇಲ್ಲಿ ನಗರ ನಿಗಮವು ‘ದಶಲಕ್ಷ ಮರಗಳ ಅಭಿಯಾನ’ - ‘Mission for Million Trees’ ಆರಂಭಿಸಿದೆ. ಲಕ್ಷಾಂತರ ಮರಗಳನ್ನು ನೆಡುವುದು – ಇದರ ಗುರಿಯಾಗಿದೆ. ಈ ಅಭಿಯಾನದ ವಿಶೇಷ ವಿಷಯವೆಂದರೆ 'ಸಿಂಧೂರ್ ಫಾರೆಸ್ಟ್'. ಈ ಅರಣ್ಯವನ್ನು ಆಪರೇಷನ್ ಸಿಂದೂರ್‌ ನಲ್ಲಿ ಪಾಲ್ಗೊಂಡ ವೀರ ಯೋಧರಿಗೆ ಸಮರ್ಪಿಸಲಾಗುತ್ತಿದೆ. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಧೈರ್ಯಶಾಲಿ ಯೋಧರ ನೆನಪಿಗಾಗಿ ಸಿಂಧೂರ್ ಗಿಡಗಳನ್ನು ನೆಡಲಾಗುತ್ತಿದೆ. ಇಲ್ಲಿ ಮತ್ತೊಂದು ಅಭಿಯಾನಕ್ಕೆ ಹೊಸ ಪ್ರಚೋದನೆ ನೀಡಲಾಗುತ್ತಿದೆ - 'ಒಂದು ಸಸಿ ತಾಯಿಯ ಹೇಸರಿನಲ್ಲಿ'. ಈ ಅಭಿಯಾನದ ಅಡಿಯಲ್ಲಿ, ದೇಶದಲ್ಲಿ ಕೋಟ್ಯಂತರ ಸಸಿಗಳನ್ನು ನೆಡಲಾಗಿದೆ. ನಿಮ್ಮ ಹಳ್ಳಿ ಅಥವಾ ನಗರದಲ್ಲಿ ನಡೆಯುತ್ತಿರುವ ಇಂತಹ ಅಭಿಯಾನಗಳಲ್ಲಿ ನೀವು ಕೂಡಾ ಪಾಲ್ಗೊಳ್ಳಬೇಕು. ಗಿಡಗಳನ್ನು ನೆಡಿ, ನೀರನ್ನು ಉಳಿಸಿ, ಭೂಮಿತಾಯಿಯ ಸೇವೆ ಮಾಡಿ,  ಏಕೆಂದರೆ ನಾವು ಪ್ರಕೃತಿಯನ್ನು ಉಳಿಸಿದಾಗ ಮಾತ್ರ, ನಾವು ನಿಜವಾಗಿಯೂ ನಮ್ಮ ಭವಿಷ್ಯದ ಪೀಳಿಗೆಯನ್ನು ರಕ್ಷಿಸುತ್ತೇವೆ.

ಸ್ನೇಹಿತರೇ, ಮಹಾರಾಷ್ಟ್ರದ ಒಂದು ಹಳ್ಳಿ ಕೂಡಾ ಅತ್ಯಂತ ಉತ್ತಮ ಉದಾಹರಣೆಯನ್ನು ನೀಡಿದೆ. ಛತ್ರಪತಿ ಸಂಭಾಜಿ ನಗರ ಜಿಲ್ಲೆಯ ಗ್ರಾಮ ಪಂಚಾಯಿತ್ ‘ಪಾಟೋದಾ’. ಇದು ಕಾರ್ಬನ್ ನ್ಯಾಚುರಲ್ ಗ್ರಾಮಪಂಚಾಯಿತಿ ಆಗಿದೆ. ಈ ಗ್ರಾಮದಲ್ಲಿ ಯಾರೊಬ್ಬರೂ ತಮ್ಮ ಮನೆಯ ಹೊರಗಡೆ ತ್ಯಾಜ್ಯ ಬಿಸಾಡುವುದಿಲ್ಲ. ಪ್ರತಿ ಮನೆಯಿಂದಲೂ ತ್ಯಾಜ್ಯ ಸಂಗ್ರಹಿಸುವ ಸಂಪೂರ್ಣ ವ್ಯವಸ್ಥೆಯಿದೆ. ಇಲ್ಲಿ ಕೊಳಕು ನೀರಿನ ಸಂಸ್ಕರಣೆಯೂ ನಡೆಯುತ್ತದೆ. ಸಂಸ್ಕರಣೆ ಮಾಡದಂತೆ ಯಾವುದೇ ನೀರನ್ನು ನದಿಗೆ ಬಿಡುವುದಿಲ್ಲ. ಇಲ್ಲಿ ಬೆರಣಿಗಳಿಂತ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಮತ್ತು ಆ ಬೂದಿಯಿಂದ ಮೃತರ ಹೆಸರಿನಲ್ಲಿ ಗಿಡ ನೆಡಲಾಗುತ್ತದೆ. ಈ ಗ್ರಾಮದಲ್ಲಿನ ಸ್ವಚ್ಛತೆ ನೋಡಲು ಬಹಳ ಆನಂದವಾಗುತ್ತದೆ. ಸಣ್ಣ ಪುಟ್ಟ ಅಭ್ಯಾಸಗಳು ಸಾಮೂಹಿಕ ಸಂಕಲ್ಪದ ರೂಪ ತಳೆದಾಗ, ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

ನನ್ನ ಪ್ರೀತಿಯ ಸ್ನೇಹಿತರೆ, ಈಗ ಪ್ರತಿಯೊಬ್ಬರ ಕಣ್ಣುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲೆ ನೆಟ್ಟಿವೆ. ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ನಾನು ನಿನ್ನೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೂ ಮಾತನಾಡಿದ್ದೆ. ಶುಭಾಂಶು ಅವರೊಂದಿಗಿನ ನನ್ನ ಸಂಭಾಷಣೆಯನ್ನು ನೀವು ಕೇಳಿರಬೇಕು. ಇದೀಗ, ಶುಭಾಂಶು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇನ್ನೂ ಕೆಲವು ದಿನಗಳ ಕಾಲ ಇರಬೇಕಾಗಿದೆ. ಈ ಕಾರ್ಯಾಚರಣೆಯ ಬಗ್ಗೆ ನಾವು ಇನ್ನಷ್ಟು ಮಾತನಾಡೋಣ ಆದರೆ ಅದು 'ಮನ್ ಕಿ ಬಾತ್' ನ ಮುಂದಿನ ಸಂಚಿಕೆಯಲ್ಲಿ.

ಈಗ ಈ ಸಂಚಿಕೆ ಮುಕ್ತಾಯಗೊಳಿಸುವ, ನಿಮ್ಮಿಂದ ವಿದಾಯ ಪಡೆಯುವ ಸಮಯ. ಆದರೆ ಸ್ನೇಹಿತರೇ, ನಾನು ಒಂದು ವಿಶೇಷ ದಿನದ ಬಗ್ಗೆ ನೆನಪಿಸಲು ಬಯಸುತ್ತೇನೆ. ಜುಲೈ 1 ನಾಡಿದ್ದು, ಅಂದರೆ ಜುಲೈ  ರಂದು ನಾವೆಲ್ಲರೂ ಎರಡು ಪ್ರಮುಖ ವೃತ್ತಿಪರರನ್ನು ಗೌರವಿಸುತ್ತೇವೆ, ವೈದ್ಯರು ಮತ್ತು ಚಾರ್ಟೆಡ್ ಅಕೌಂಟೆಂಟ್ ಗಳು. ಇವರಿಬ್ಬರೂ ನಮ್ಮ ಜೀವನವನ್ನು ಉತ್ತಮಗೊಳಿಸುವಂತಹ ಸಮಾಜದ ಸ್ತಂಭಗಳು. ವೈದ್ಯರು ನಮ್ಮ ಆರೋಗ್ಯದ ರಕ್ಷಕರಾದರೆ, ಚಾರ್ಟೆಡ್ ಅಕೌಂಟೆಂಟ್ ಗಳು ನಮ್ಮ ಆರ್ಥಿಕ ಜೀವನದ ಮಾರ್ಗದರ್ಶಕರು. ಎಲ್ಲಾ ವೈದ್ಯರುಗಳಿಗೂ, ಮತ್ತು ಚಾರ್ಟೆಡ್ ಅಕೌಂಟೆಂಟ್ ಗಳಿಗೂ ನನ್ನ ಅನೇಕಾನೇಕ ಶುಭ ಹಾರೈಕೆಗಳು.

ಸ್ನೇಹಿತರ, ನಾನು ಯಾವಾಗಲೂ ನಿಮ್ಮ ಸಲಹೆಗಳಿಗಾಗಿ ಕಾಯುತ್ತಿರುತ್ತೇನೆ. 'ಮನ್ ಕಿ ಬಾತ್' ನ ಮುಂದಿನ ಸಂಚಿಕೆಯು ನಿಮ್ಮ ಸಲಹೆಗಳಿಂದ ಸಮೃದ್ಧವಾಗಿರುತ್ತದೆ. ಹೊಸ ವಿಷಯಗಳು, ಹೊಸ ಸ್ಫೂರ್ತಿಗಳು ಮತ್ತು ದೇಶವಾಸಿಗಳ ಹೊಸ ಸಾಧನೆಗಳೊಂದಿಗೆ ನಾವು ಮತ್ತೆ ಭೇಟಿಯಾಗೋಣ. ಅನೇಕಾನೇಕ ಧನ್ಯವಾದಗಳು, ನಮಸ್ಕಾರ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
As Naxalism ends in Chhattisgarh, village gets tap water for first time

Media Coverage

As Naxalism ends in Chhattisgarh, village gets tap water for first time
NM on the go

Nm on the go

Always be the first to hear from the PM. Get the App Now!
...
PM to visit Uttarakhand and UP on 14 April
April 13, 2026
PM to inaugurate Delhi–Dehradun Economic Corridor
Corridor to reduce travel time between Delhi and Dehradun from over 6 hours to around 2.5 hours
Corridor has been designed with several features aimed at significantly reducing man-animal conflict
Project include a 12 km long wildlife elevated corridor which is one of the longest in Asia
PM to also visit and undertake review of the Wildlife Corridor

Prime Minister Shri Narendra Modi, will visit Uttarakhand and Uttar Pradesh on 14 April 2026. At around 11:15 AM, the Prime Minister will visit Saharanpur in Uttar Pradesh to undertake a review of the Wildlife Corridor on the elevated section of the Delhi-Dehradun Economic Corridor. At around 11:40 AM, the Prime Minister will perform Darshan and Pooja at Jai Maa Daat Kali Temple near Dehradun. Thereafter, at around 12:30 PM, Prime Minister will inaugurate the Delhi-Dehradun Economic Corridor at a public function in Dehradun and will also address the gathering on the occasion.

The 213 km long six-lane access-controlled Delhi-Dehradun Economic Corridor has been developed at a cost of over ₹12,000 crore. The corridor traverses through the states of Delhi, Uttar Pradesh and Uttarakhand, and will reduce travel time between Delhi and Dehradun from over six hours at present to around two and a half hours.

Implementation of the project also includes the construction of 10 interchanges, three Railway Over Bridges (ROBs), four major bridges and 12 wayside amenities to enable seamless high-speed connectivity. The corridor is equipped with an Advanced Traffic Management System (ATMS) to provide a safer and more efficient travel experience for commuters.

Keeping in view the ecological sensitivity, rich biodiversity and wildlife in the region, the corridor has been designed with several features aimed at significantly reducing man-animal conflict. To ensure the free movement of wild animals, the project incorporates several dedicated wildlife protection features. These include a 12 km long wildlife elevated corridor, which is one of the longest in Asia. The corridor also includes eight animal passes, two elephant underpasses of 200 metres each, and a 370 metre long tunnel near the Daat Kali temple.

The Delhi-Dehradun Economic Corridor will play a pivotal role in strengthening regional economic growth by enhancing connectivity between major tourism and economic centres as well as opening new avenues for trade and development across the region. The project reflects the vision of the Prime Minister to develop next-generation infrastructure that combines high-speed connectivity with environmental sustainability and improved quality of life for citizens.