ಪ್ರಧಾನಮಂತ್ರಿಯವರು ಭಾರತೀಯ ನ್ಯಾಯಾಂಗದ 2023-24 ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು
ನಮ್ಮ ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ, ಇದು ನಿರಂತರವಾಗಿ ಹರಿಯುವ, ಜೀವಂತ ತೊರೆಯಾಗಿದೆ: ಪ್ರಧಾನಮಂತ್ರಿ
ನಮ್ಮ ಸಂವಿಧಾನ ನಮ್ಮ ವರ್ತಮಾನ ಮತ್ತು ನಮ್ಮ ಭವಿಷ್ಯಕ್ಕೆ ಮಾರ್ಗದರ್ಶಿ: ಪ್ರಧಾನಮಂತ್ರಿ
ಇಂದು ಪ್ರತಿಯೊಬ್ಬ ನಾಗರಿಕನಿಗೂ ಒಂದೇ ಗುರಿಯಿದೆ, ವಿಕಸಿತ ಭಾರತವನ್ನು ನಿರ್ಮಿಸುವುದು: ಪ್ರಧಾನಮಂತ್ರಿ
ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಹೊಸ ನ್ಯಾಯಾಂಗ ಸಂಹಿತೆಯನ್ನು ಜಾರಿಗೊಳಿಸಲಾಗಿದೆ, ಶಿಕ್ಷೆ ಆಧಾರಿತ ವ್ಯವಸ್ಥೆಯು ಈಗ ನ್ಯಾಯ ಆಧಾರಿತ ವ್ಯವಸ್ಥೆಯಾಗಿ ಬದಲಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಸಂಜೀವ್ ಖನ್ನಾ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಶ್ರೀ ಸೂರ್ಯಕಾಂತ್, ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು ಸಂವಿಧಾನ ದಿನದ ಸಂದರ್ಭದಲ್ಲಿ ಎಲ್ಲಾ ಗಣ್ಯರು, ಪ್ರತಿನಿಧಿಗಳು ಮತ್ತು ನಾಗರಿಕರಿಗೆ ಶುಭಾಶಯಗಳನ್ನು ಕೋರಿದರು. ಭಾರತ ಸಂವಿಧಾನದ 75ನೇ ವರ್ಷವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಈ ಸಂದರ್ಭದಲ್ಲಿ ಅವರು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಹಾಗೂ ಸಂವಿಧಾನಕ್ಕೆ ಗೌರವ ಸಲ್ಲಿಸಿದರು.

 

ಇಂದು ನಾವು ಸಂವಿಧಾನ ದಿನವನ್ನು ಆಚರಿಸುತ್ತಿರುವಾಗ, ಇಂದು ಮುಂಬೈ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವ ಕೂಡ ಎಂಬುದನ್ನು ನಾವು ಮರೆಯಬಾರದು ಎಂದು ಪ್ರಧಾನಿ ಹೇಳಿದರು. ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರತಿಯೊಂದು ಭಯೋತ್ಪಾದಕ ಸಂಘಟನೆಗಳಿಗೂ ಭಾರತ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಶ್ರೀ ಮೋದಿ ಪುನರುಚ್ಚರಿಸಿದರು.

ಭಾರತದ ಸಂವಿಧಾನದ ಬಗ್ಗೆ ಸಂವಿಧಾನ ಸಭೆಯ ವಿವರವಾದ ಸಂವಾದಗಳು ಮತ್ತು ಚರ್ಚೆಗಳನ್ನು ನೆನಪಿಸಿಕೊಂಡ ಮೋದಿ, "ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ, ಅದೊಂದು ಚೈತನ್ಯವಾಗಿದೆ, ಅದು ಯಾವಾಗಲೂ ಯುಗದ ಚೈತನ್ಯವಾಗಿದೆ" ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದರು.  ಈ ಚೈತನ್ಯವು ಅತ್ಯಗತ್ಯ ಎಂದು ಬಣ್ಣಿಸಿದ ಶ್ರೀ ಮೋದಿ, ದೇಶ, ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಂವಿಧಾನವನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸುವ ಸ್ವಾತಂತ್ರ್ಯವನ್ನು ಸಂವಿಧಾನದ ನಿರ್ಮಾತೃಗಳು ನಮಗೆ ನೀಡಿದ್ದಾರೆ ಎಂದು ಹೇಳಿದರು. ಭಾರತದ ಕನಸುಗಳು ಮತ್ತು ಆಕಾಂಕ್ಷೆಗಳು ಕಾಲಾನಂತರದಲ್ಲಿ ಹೊಸ ಎತ್ತರವನ್ನು ತಲುಪುತ್ತವೆ ಮತ್ತು ಸ್ವತಂತ್ರ ಭಾರತದ ಜನರ ಅಗತ್ಯತೆಗಳು ಸವಾಲುಗಳೊಂದಿಗೆ ವಿಕಸನಗೊಳ್ಳುತ್ತವೆ ಎಂಬುದನ್ನು ಸಂವಿಧಾನದ ನಿರ್ಮಾತೃಗಳು ಚೆನ್ನಾಗಿ ತಿಳಿದಿದ್ದರು ಎಂದು ಅವರು ಹೇಳಿದರು. ಆದ್ದರಿಂದ ಸಂವಿಧಾನ ರಚನೆಕಾರರು ಸಂವಿಧಾನವನ್ನು ಕೇವಲ ದಾಖಲೆಯಾಗಿ ರಚಿಸದೆ ಜೀವಂತವಾದ, ಸದಾ ಹರಿಯುವ ತೊರೆಯಾಗಿ ರೂಪಿಸಿದ್ದಾರೆ ಎಂದರು.

 

"ನಮ್ಮ ಸಂವಿಧಾನವು ನಮ್ಮ ಪ್ರಸ್ತುತ ಮತ್ತು ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಕಳೆದ 75 ವರ್ಷಗಳಲ್ಲಿ ಉದ್ಭವಿಸಿರುವ ವಿವಿಧ ಸವಾಲುಗಳನ್ನು ಎದುರಿಸಲು ಸಂವಿಧಾನ ಸರಿಯಾದ ಮಾರ್ಗವನ್ನು ತೋರಿಸಿದೆ ಎಂದು ಹೇಳಿದರು. ಭಾರತದ ಪ್ರಜಾಪ್ರಭುತ್ವವು ಎದುರಿಸುತ್ತಿರುವ ತುರ್ತು ಪರಿಸ್ಥಿತಿಯ ಅಪಾಯಕಾರಿ ಸಮಯವನ್ನೂ ಸಂವಿಧಾನವು ಎದುರಿಸಿತು ಎಂದು ಅವರು ಹೇಳಿದರು. ಸಂವಿಧಾನವು ದೇಶದ ಪ್ರತಿಯೊಂದು ಅಗತ್ಯ ಮತ್ತು ನಿರೀಕ್ಷೆಗಳನ್ನು ಈಡೇರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಡಾ.ಭೀಮರಾವ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಇಂದು ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮೊದಲ ಬಾರಿಗೆ ಸಂವಿಧಾನ ದಿನವನ್ನು ಆಚರಿಸಲಾಯಿತು ಎಂದು ಅವರು ಹೇಳಿದರು.

ಭಾರತವು ಪರಿವರ್ತನೆಯ ಪ್ರಮುಖ ಘಟ್ಟದಲ್ಲಿ ಸಾಗುತ್ತಿದೆ ಎಂಬುದನ್ನು ಎತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂವಿಧಾನವು ನಮಗೆ ಮಾರ್ಗದರ್ಶಕ ಬೆಳಕಿನಂತೆ ಸರಿಯಾದ ಮಾರ್ಗವನ್ನು ತೋರಿಸುತ್ತಿದೆ ಎಂದು ಹೇಳಿದರು. ದೊಡ್ಡ ಕನಸುಗಳು ಮತ್ತು ದೊಡ್ಡ ಸಂಕಲ್ಪಗಳನ್ನು ಸಾಧಿಸುವುದು ಭಾರತದ ಭವಿಷ್ಯದ ಮಾರ್ಗವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ವಿಕಸಿತ ಭಾರತವನ್ನು ನಿರ್ಮಿಸುವುದು ಇಂದಿನ ಪ್ರತಿಯೊಬ್ಬ ನಾಗರಿಕನ ಗುರಿಯಾಗಿದೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಪ್ರತಿಯೊಬ್ಬ ಪ್ರಜೆಯೂ ಜೀವನದ ಗುಣಮಟ್ಟ ಮತ್ತು ಜೀವನದ ಘನತೆಯನ್ನು ಪಡೆಯುವ ಭರವಸೆ ಇರುವ ಸ್ಥಳ ಎಂದು ಅವರು ವಿವರಿಸಿದರು. ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಲು ಇದು ಉತ್ತಮ ಮಾಧ್ಯಮವಾಗಿದೆ ಮತ್ತು ಇದು ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು. ಆದ್ದರಿಂದ, ಕಳೆದ ದಶಕದಲ್ಲಿ ಬ್ಯಾಂಕುಗಳಿಗೆ ಪ್ರವೇಶವನ್ನು ಹೊಂದಿರದ 53 ಕೋಟಿಗೂ ಹೆಚ್ಚು ಜನರ ಬ್ಯಾಂಕ್ ಖಾತೆಗಳನ್ನು ತೆರೆಯುವಂತಹ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕಳೆದ ದಶಕದಲ್ಲಿ ನಾಲ್ಕು ಕೋಟಿ ಜನರಿಗೆ ಶಾಶ್ವತ ಮನೆ ಹಾಗೂ 10 ಕೋಟಿ ಗೃಹಿಣಿಯರಿಗೆ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ನೀಡಲಾಗಿದೆ ಎಂದರು. ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದಲ್ಲಿ ಕೇವಲ 3 ಕೋಟಿ ಕುಟುಂಬಗಳು ಮನೆಗಳು ನಲ್ಲಿ ಸಂಪರ್ಕಗಳನ್ನು ಹೊಂದಿದ್ದವು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕಳೆದ 5-6 ವರ್ಷಗಳಲ್ಲಿ ತಮ್ಮ ಸರ್ಕಾರವು 12 ಕೋಟಿಗೂ ಹೆಚ್ಚು ಮನೆಗಳಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಿದೆ. ಇದು ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಜೀವನವನ್ನು ಸುಲಭಗೊಳಿಸಿದೆ. ಇದು ಸಂವಿಧಾನದ ಆಶಯವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

 

ಭಾರತ ಸಂವಿಧಾನದ ಮೂಲ ಪ್ರತಿಯಲ್ಲಿ ಭಗವಾನ್ ರಾಮ, ಸೀತಾ ದೇವಿ, ಹನುಮಾನ್, ಭಗವಾನ್ ಬುದ್ಧ, ಭಗವಾನ್ ಮಹಾವೀರ ಮತ್ತು ಗುರು ಗೋಬಿಂದ್ ಸಿಂಗ್ ಅವರ ಚಿತ್ರಗಳಿವೆ ಎಂದು ಮೋದಿ ಹೇಳಿದರು. ಭಾರತೀಯ ಸಂಸ್ಕೃತಿಯ ಈ ಪ್ರತೀಕಗಳಿಗೆ ಸಂವಿಧಾನದಲ್ಲಿ ಸ್ಥಾನ ನೀಡಲಾಗಿದ್ದು, ಅದು ಮಾನವೀಯ ಮೌಲ್ಯಗಳ ಬಗ್ಗೆ ನಿರಂತರವಾಗಿ ಜಾಗೃತವಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು. "ಮಾನವೀಯ ಮೌಲ್ಯಗಳು ಇಂದಿನ ಭಾರತೀಯ ನೀತಿಗಳು ಮತ್ತು ನಿರ್ಧಾರಗಳ ಅಡಿಪಾಯವಾಗಿವೆ" ಎಂದು ಪ್ರಧಾನಿ ಹೇಳಿದರು. ನಾಗರಿಕರಿಗೆ ನ್ಯಾಯವನ್ನು ತ್ವರಿತವಾಗಿ ತಲುಪಿಸಲು ಭಾರತೀಯ ನ್ಯಾಯಾಂಗ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು. ಶಿಕ್ಷೆ ಆಧಾರಿತ ವ್ಯವಸ್ಥೆ ಈಗ ನ್ಯಾಯ ಆಧಾರಿತ ವ್ಯವಸ್ಥೆಯಾಗಿ ಬದಲಾಗಿದೆ ಎಂದು ಹೇಳಿದರು. ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ತೃತೀಯಲಿಂಗಿಗಳ ಗುರುತು ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ವಿಕಲಚೇತನರಿಗೆ ಜೀವನವನ್ನು ಸುಲಭಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇಂದು ಭಾರತವು ನಾಗರಿಕರ ಜೀವನವನ್ನು ಸುಲಭಗೊಳಿಸಲು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಹಿರಿಯ ನಾಗರಿಕರಿಗೆ ಅವರ ಮನೆ ಬಾಗಿಲಿಗೆ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ನೀಡಲಾಗಿದೆ, ಇದು ಇಲ್ಲಿಯವರೆಗೆ ಸುಮಾರು 1.5 ಕೋಟಿ ಹಿರಿಯ ನಾಗರಿಕರಿಗೆ ಪ್ರಯೋಜನವನ್ನು ನೀಡಿದೆ. ಪ್ರತಿ ಬಡ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದರು. ಭಾರತದ ಸಾವಿರಾರು ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿ ದರದಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು. ಮಿಷನ್ ಇಂದ್ರಧನುಷ್ ಮೂಲಕ ಇಂದು ಮಕ್ಕಳಲ್ಲಿ ಲಸಿಕೆ ವ್ಯಾಪ್ತಿಯು ಶೇ.100 ರ ಸಮೀಪಕ್ಕೆ ತಲುಪಿದೆ, ಆದರೆ ಮೊದಲು ಇದು ಶೇ.60 ಕ್ಕಿಂತ ಕಡಿಮೆ ಇತ್ತು ಎಂದು ಶ್ರೀ ಮೋದಿ ಹೇಳಿದರು. ಇಂದು ದೂರದ ಹಳ್ಳಿಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಈ ಪ್ರಯತ್ನಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಿವೆ ಎಂದು ಅವರು ಹೇಳಿದರು.

 

ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮವನ್ನು ಉಲ್ಲೇಖಿಸಿದ ಶ್ರೀ ಮೋದಿ, 100 ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಪ್ರತಿ ಅಭಿವೃದ್ಧಿ ನಿಯತಾಂಕಗಳಲ್ಲಿ ಉತ್ತೇಜನವನ್ನು ನೀಡಲಾಗಿದೆ ಎಂದು ಹೇಳಿದರು. ಇಂದು ಅನೇಕ ಮಹತ್ವಾಕಾಂಕ್ಷಿ ಜಿಲ್ಲೆಗಳು ಇತರ ಹಲವು ಜಿಲ್ಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಮಹತ್ವಾಕಾಂಕ್ಷಿ ಜಿಲ್ಲಾ ಕಾರ್ಯಕ್ರಮದ ಮಾದರಿಯನ್ನು ಆಧರಿಸಿ ಸರ್ಕಾರವು ಈಗ ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ನಾಗರಿಕರು ಎದುರಿಸುತ್ತಿರುವ ತೊಂದರೆಗಳನ್ನು ಹೋಗಲಾಡಿಸಲು ಸರ್ಕಾರ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ ಎಂದು ಪ್ರಧಾನಿ ಹೇಳಿದರು. ಉಚಿತ ವಿದ್ಯುತ್ ಯೋಜನೆ ಮೂಲಕ ಕಳೆದ ಕೆಲ ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಹೊಂದಿರದ 2.5 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಒದಗಿಸಲಾಗಿದೆ ಎಂದರು. 4ಜಿ ಮತ್ತು 5ಜಿ ತಂತ್ರಜ್ಞಾನಗಳ ಮೂಲಕ ಜನರಿಗೆ ಮೊಬೈಲ್ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ದೂರದ ಪ್ರದೇಶಗಳಲ್ಲಿ ಮೊಬೈಲ್ ಟವರ್‌ ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳಲ್ಲಿ ನೀರಿನೊಳಗಿನ ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕವು ಈಗ ಲಭ್ಯವಿದೆ ಎಂದು ಅವರು ಹೇಳಿದರು. ಮನೆಗಳು ಮತ್ತು ಕೃಷಿ ಭೂಮಿಗಳ ಭೂ ದಾಖಲೆಗಳನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಮುಂದಿದೆ ಎಂದು ಪ್ರಧಾನಿ ಹೇಳಿದರು. ಪ್ರಧಾನಮಂತ್ರಿ ಸ್ವಾಮಿತ್ವ ಯೋಜನೆಯಡಿ ಗ್ರಾಮದ ಜಮೀನು ಮತ್ತು ಮನೆಗಳ ಡ್ರೋನ್ ಮ್ಯಾಪಿಂಗ್ ಮಾಡಲಾಗಿದ್ದು, ಅದರ ಆಧಾರದ ಮೇಲೆ ಕಾನೂನು ದಾಖಲೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

 

ಆಧುನಿಕ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ಮಹತ್ತರವಾದ ಅಗತ್ಯವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಮೂಲಸೌಕರ್ಯ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದರಿಂದ ಹಣ ಉಳಿತಾಯವಾಗುತ್ತದೆ ಮತ್ತು ಯೋಜನೆಯ ಉಪಯುಕ್ತತೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ʼಪ್ರಗತಿʼ ವೇದಿಕೆಯನ್ನು ಬಳಸಿಕೊಂಡು ಮೂಲಸೌಕರ್ಯ ಯೋಜನೆಗಳ ನಿಯಮಿತ ಪರಿಶೀಲನೆ ನಡೆಸಲಾಗುತ್ತಿದೆ ಮತ್ತು 18 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಯೋಜನೆಗಳನ್ನು ಪರಿಶೀಲಿಸಲಾಗಿದೆ ಮತ್ತು ಅವುಗಳಿಗೆ ಎದುರಾಗಿದ್ದ ಅಡೆತಡೆಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. ಮೂಲಸೌಕರ್ಯ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದರಿಂದ ಜನರ ಜೀವನದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ ಎಂದು ಶ್ರೀ ಮೋದಿ ಹೇಳಿದರು. ಈ ಪ್ರಯತ್ನಗಳು ದೇಶದ ಪ್ರಗತಿಯನ್ನು ಖಾತರಿಪಡಿಸುವುದರ ಜೊತೆಗೆ ಸಂವಿಧಾನದ ಮೂಲ ಆಶಯವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

"ಇಂದು ಭಾರತಕ್ಕೆ ತಮ್ಮ ಸ್ವಂತ ಹಿತಾಸಕ್ತಿಗಳಿಗಿಂತ ರಾಷ್ಟ್ರದ ಹಿತಾಸಕ್ತಿಗಳನ್ನು ಮುಖ್ಯವೆಂದು ಪರಿಗಣಿಸುವ ಪ್ರಾಮಾಣಿಕ ಜನರ ಗುಂಪಿನ ಅಗತ್ಯವಿದೆ " ಎಂದು ನವೆಂಬರ್ 26, 1949 ರಂದು ಡಾ. ರಾಜೇಂದ್ರ ಪ್ರಸಾದ್ ಅವರು ಮಾಡಿದ ಭಾಷಣದ ಸಾಲುಗಳನ್ನು ಉಲ್ಲೇಖಿಸಿದ ಪ್ರಧಾನಿಯವರು, ರಾಷ್ಟ್ರ ಮೊದಲು ಎಂಬ ಈ ಮನೋಭಾವ ಮುಂದಿನ ಶತಮಾನಗಳ ಕಾಲ ಭಾರತದ ಸಂವಿಧಾನವನ್ನು ಜೀವಂತವಾಗಿರಿಸುತ್ತದೆ ಎಂದು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಹಿನ್ನೆಲೆ

ಭಾರತದ ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳ ಮಹತ್ವದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವೋಚ್ಛ  ನ್ಯಾಯಾಲಯದ ಆಡಳಿತ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಭಾರತದ ಸರ್ವೋಚ್ಛ  ನ್ಯಾಯಾಲಯ ಆಯೋಜಿಸಿತು. ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸರ್ವೋಚ್ಛ ನ್ಯಾಯಾಲಯದ ಇತರ ನ್ಯಾಯಾಧೀಶರು ಉಪಸ್ಥಿತರಿದ್ದರು.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s Agricultural Transformation: How India’s Agri sector transformed over the last decade

Media Coverage

India’s Agricultural Transformation: How India’s Agri sector transformed over the last decade
NM on the go

Nm on the go

Always be the first to hear from the PM. Get the App Now!
...
Prime Minister attends the Defence Investiture Ceremony 2026 (Phase-1)
June 08, 2026

Prime Minister Shri Narendra Modi today attended the Defence Investiture Ceremony 2026 (Phase-1) where Gallantry Awards were conferred upon our brave personnel.

The Prime Minister expressed pride in their extraordinary courage, commitment and selfless service to the nation.

The Prime Minister posted on X:

"Attended the Defence Investiture Ceremony 2026 (Phase-1) where Gallantry Awards were conferred upon our brave personnel. We are proud of their extraordinary courage, commitment and selfless service to the nation."