ರಾಯ್ಪುರದ ರಾಷ್ಟ್ರೀಯ ಜೈವಿಕ ಒತ್ತಡ ನಿರ್ವಹಣಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಮುಚ್ಚಯವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ
ಕೃಷಿ ವಿಶ್ವವಿದ್ಯಾಲಯಗಳಿಗೆ ಹಸಿರು ಕ್ಯಾಂಪಸ್ ಪ್ರಶಸ್ತಿಯನ್ನು ವಿತರಿಸಿದ ಪ್ರಧಾನಮಂತ್ರಿ
"ಕೃಷಿ ಮತ್ತು ಕೃಷಿಕರಿಗೆ ಎಲ್ಲಿ ಸುರಕ್ಷತ ತಾಣ ಸಿಗುತ್ತದೋ ಅಲ್ಲೆಲ್ಲಾ ಅವರ ಬೆಳವಣಿಗೆ ತ್ವರಿತವಾಗುತ್ತದೆ"
"ವಿಜ್ಞಾನ, ಸರ್ಕಾರ ಮತ್ತು ಸಮಾಜ ಒಟ್ಟಾಗಿ ಶ್ರಮಿಸಿದಾಗ, ಫಲಿತಾಂಶಗಳು ಉತ್ತಮವಾಗಿರುತ್ತವೆ. ರೈತರು ಮತ್ತು ವಿಜ್ಞಾನಿಗಳ ಇಂತಹ ಮೈತ್ರಿಯು ಹೊಸ ಸವಾಲುಗಳನ್ನು ಎದುರಿಸುವಲ್ಲಿ ದೇಶವನ್ನು ಬಲಪಡಿಸುತ್ತದೆ"
"ಬೆಳೆ ಆಧಾರಿತ ಆದಾಯ ವ್ಯವಸ್ಥೆಯಿಂದ ರೈತರನ್ನು ಹೊರತಂದು ಮೌಲ್ಯವರ್ಧನೆ ಮತ್ತು ಇತರ ಕೃಷಿ ಆಯ್ಕೆಗಳಿಗಾಗಿ ಅವರನ್ನು ಉತ್ತೇಜಿಸಲು ಪ್ರಯತ್ನಿಸಲಾಗುತ್ತಿದೆ"
"ನಮ್ಮ ಪ್ರಾಚೀನ ಕೃಷಿ ಸಂಪ್ರದಾಯಗಳ ಜೊತೆಗೆ ಭವಿಷ್ಯದತ್ತ ಹೆಜ್ಜೆ ಹಾಕುವುದೂ ಅಷ್ಟೇ ಮುಖ್ಯವಾಗಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಗುಣಲಕ್ಷಣಗಳಿರುವ 35 ಬೆಳೆಗಳ ತಳಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಯ್ಪುರದ ರಾಷ್ಟ್ರೀಯ ಜೈವಿಕ ಒತ್ತಡ ನಿರ್ವಹಣಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಿದರು.  ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕೃಷಿ ವಿಶ್ವವಿದ್ಯಾಲಯಗಳಿಗೆ ಹಸಿರು ಕ್ಯಾಂಪಸ್ ಪ್ರಶಸ್ತಿಗಳನ್ನು ಪ್ರದಾನಮಾಡಿದರು. ಅವರು ನಾವೀನ್ಯಪೂರ್ಣ ವಿಧಾನಗಳೊಂದಿಗೆ ಕೃಷಿ ಮಾಡುತ್ತಿರುವ ರೈತರೊಂದಿಗೆ ಸಂವಾದ ನಡೆಸಿದರು ಮತ್ತು ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ಜಮ್ಮು ಮತ್ತು ಕಾಶ್ಮೀರದ ಗಂದೇರ್ ಬಾಲ್ ನ ಜೈತೂನ್ ಬೇಗಂ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು, ನವೀನ ಕೃಷಿ ಪದ್ಧತಿಗಳನ್ನು ಕಲಿಯುವ ಅವರ ಪಯಣ ಮತ್ತು ಇತರ ರೈತರಿಗೆ ಅವರು ಹೇಗೆ ತರಬೇತಿ ನೀಡಿದರು ಎಂಬ ಬಗ್ಗೆ ಮತ್ತು ಕಣಿವೆಯಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದರು. ಕ್ರೀಡೆಯಲ್ಲಿಯೂ ಜಮ್ಮು ಕಾಶ್ಮೀರದ ಬಾಲಕಿಯರು ಉತ್ತಮವಾಗಿ  ಪ್ರದರ್ಶನ ನೀಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಸಣ್ಣ ಹಿಡುವಳಿಗಳನ್ನು ಹೊಂದಿರುವ ರೈತರ ಅಗತ್ಯಗಳ ಪೂರೈಕೆ ಸರ್ಕಾರದ ಆದ್ಯತೆಯಾಗಿದೆ ಮತ್ತು ಅವರು ನೇರವಾಗಿ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಬುಲಂದ್ ಶಹರ್ ನ ರೈತ ಮತ್ತು ಬೀಜ ಉತ್ಪಾದಕ ಶ್ರೀ ಕುಲವಂತ್ ಸಿಂಗ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು,  ವೈವಿಧ್ಯಮಯ ಬೀಜಗಳನ್ನು ಉತ್ಪಾದಿಸಲು ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದರು. ಪೂಸಾದಲ್ಲಿನ ಕೃಷಿ ಸಂಸ್ಥೆಯ ವಿಜ್ಞಾನಿಗಳೊಂದಿಗಿನ ಸಂವಾದದಿಂದ ಅವರಿಗೆ ಹೇಗೆ ಪ್ರಯೋಜನವಾಗುತ್ತಿದೆ    ಮತ್ತು ಅಂತಹ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದರ ಬಗ್ಗೆ ರೈತರಲ್ಲಿ ಯಾವ ರೀತಿಯ ಪ್ರವೃತ್ತಿ ಇದೆ ಎಂದು ಪ್ರಧಾನಮಂತ್ರಿ ಕೇಳಿದರು. ಬೆಳೆಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುತ್ತಿರುವ ರೈತನನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಮಾರುಕಟ್ಟೆ ಪ್ರವೇಶ, ಉತ್ತಮ ಗುಣಮಟ್ಟದ ಬೀಜಗಳು, ಮಣ್ಣಿನ ಆರೋಗ್ಯ ಕಾರ್ಡ್ ಗಳು ಮುಂತಾದ ಅನೇಕ ಉಪಕ್ರಮಗಳೊಂದಿಗೆ ರೈತರು ಉತ್ತಮ ಬೆಲೆ  ಪಡೆಯಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಗೋವಾದ ಬರ್ದೇಜ್ ನ ಶ್ರೀಮತಿ ದರ್ಶನಾ ಪೆಡೇನ್ಕರ್  ಅವರನ್ನು ವೈವಿಧ್ಯಮಯ ಬೆಳೆಗಳನ್ನು ಹೇಗೆ ಬೆಳೆಯುತ್ತೀರಿ ಮತ್ತು ವಿವಿಧ ಜಾನುವಾರುಗಳನ್ನು ಹೇಗೆ ಸಾಕುತ್ತೀರಿ ಎಂದು ಪ್ರಧಾನಮಂತ್ರಿ ಯವರು ವಿಚಾರಿಸಿದರು. ರೈತರು ಮಾಡಿದ ತೆಂಗಿನಕಾಯಿಯ ಮೌಲ್ಯವರ್ಧನೆಯ ಬಗ್ಗೆ ಅವರು ಕೇಳಿದರು. ಮಹಿಳಾ ಕೃಷಿಕರು ಉದ್ಯಮಿಗಳಾಗಿ ವಿಜೃಂಭಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಮಣಿಪುರದ ಶ್ರೀ ಥೋಯಿಬಾ ಸಿಂಗ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ನಂತರ ಕೃಷಿಯನ್ನು ಕೈಗೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ರೈತನ ವೈವಿಧ್ಯಮಯ ಚಟುವಟಿಕೆಗಳು ಅಂದರೆ ಕೃಷಿ, ಮೀನುಗಾರಿಕೆ ಮತ್ತು ಇತರ ಸಂಬಂಧಿತ ಚಟುವಟಿಕೆಗಳು ಪ್ರಧಾನಮಂತ್ರಿಯವರ ಆಸಕ್ತಿಯನ್ನು ಸೆಳೆದವು. ಜೈ ಜವಾನ್-ಜೈ ಕಿಸಾನ್ ಗೆ ಉದಾಹರಣೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು.

ಉತ್ತರಾಖಂಡದ ಉಧಮ್ ಸಿಂಗ್ ನಗರದ ಶ್ರೀ ಸುರೇಶ್ ರಾಣಾ ಅವರಿಂದ ಪ್ರಧಾನಮಂತ್ರಿಯವರು ಜೋಳ ಕೃಷಿಯನ್ನು ಹೇಗೆ ಪ್ರಾರಂಭಿಸಿದರು ಎಂದು ವಿಚಾರಿಸಿದರು. ಎಫ್.ಪಿಒಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಕ್ಕಾಗಿ ಉತ್ತರಾಖಂಡದ ರೈತರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ರೈತರು ಒಟ್ಟಾಗಿ ಕೆಲಸ ಮಾಡಿದಾಗ ಅವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹೇಳಿದರು. ಪ್ರತಿಯೊಂದು ಸಂಪನ್ಮೂಲ ಮತ್ತು ಮೂಲಸೌಕರ್ಯಗಳನ್ನು ರೈತರಿಗೆ ಲಭ್ಯವಾಗುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 6-7 ವರ್ಷಗಳಲ್ಲಿ ಕೃಷಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆದ್ಯತೆಯ ಆಧಾರದ ಮೇಲೆ ಬಳಸಲಾಗುತ್ತಿದೆ ಎಂದರು. "ಪೌಷ್ಟಿಕ ಬೀಜಗಳ ಮೇಲೆ ನಮ್ಮ ಗಮನ ಹೆಚ್ಚಾಗಿದೆ, ಹೊಸ ಪರಿಸ್ಥಿತಿಗಳಿಗೆ, ವಿಶೇಷವಾಗಿ ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಬೇಕು," ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ವಿವಿಧ ರಾಜ್ಯಗಳಲ್ಲಿ ನಡೆದ ಬೃಹತ್ ಮಿಡತೆ ದಾಳಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಭಾರತವು ಸಾಕಷ್ಟು ಪ್ರಯತ್ನಗಳನ್ನು ಮಾಡುವ ಮೂಲಕ ಈ ದಾಳಿಯನ್ನು ನಿಭಾಯಿಸಿತು, ರೈತರಿಗೆ ಹೆಚ್ಚಿನ ಹಾನಿಯಾಗದಂತೆ ಉಳಿಸಿತು ಎಂದು ಅವರು ಹೇಳಿದರು.

ಕೃಷಿಗೆ ಮತ್ತು ಕೃಷಿಕರಿಗೆ ಸುರಕ್ಷತಾ ನೆಲೆ ಸಿಕ್ಕಾಗಲೆಲ್ಲಾ ಅವರ ಬೆಳವಣಿಗೆ ತ್ವರಿತವಾಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭೂಮಿಯ ರಕ್ಷಣೆಗಾಗಿ 11 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ರೈತರಿಗೆ ನೀರಿನ ಭದ್ರತೆ ಒದಗಿಸಲು ಬಾಕಿ ಇರುವ ಸುಮಾರು 100 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಅಭಿಯಾನ, ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ರೈತರಿಗೆ ಹೊಸ ರೀತಿಯ ಬೀಜಗಳನ್ನು ಒದಗಿಸುವುದೇ ಮುಂತಾದ ಸರ್ಕಾರದ ರೈತ ಸ್ನೇಹಿ ಉಪಕ್ರಮಗಳನ್ನು ಪ್ರಧಾನಮಂತ್ರಿ ಪಟ್ಟಿ ಮಾಡಿದರು. ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದರ ಜೊತೆಗೆ, ಖರೀದಿ ಪ್ರಕ್ರಿಯೆಯನ್ನು ಸಹ ಸುಧಾರಿಸಲಾಗಿದೆ, ಇದರಿಂದ ಹೆಚ್ಚು ಹೆಚ್ಚು ರೈತರು ಪ್ರಯೋಜನವನ್ನು ಪಡೆಯಬಹುದು ಎಂದು ಅವರು ಹೇಳಿದರು. ಹಿಂಗಾರು ಹಂಗಾಮಿನಲ್ಲಿ 430 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಗೋಧಿಯನ್ನು ಖರೀದಿಸಲಾಗಿದೆ ಮತ್ತು ರೈತರಿಗೆ 85 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಪಾವತಿಸಲಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಗೋಧಿ ಖರೀದಿ ಕೇಂದ್ರಗಳನ್ನು  ಮೂರು ಪಟ್ಟು ಹೆಚ್ಚು ಹೆಚ್ಚಿಸಲಾಯಿತು ಎಂದೂ ತಿಳಿಸಿದರು.

ರೈತರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವುದರ ಜೊತೆಗೆ, ಬ್ಯಾಂಕುಗಳಿಂದ ಸಹಾಯ ಪಡೆಯುವುದನ್ನು ನಾವು ಸುಲಭಗೊಳಿಸಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ರೈತರು ಹವಾಮಾನ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ಪಡೆಯುತ್ತಿದ್ದಾರೆ. ಇತ್ತೀಚೆಗೆ 2 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ ಎಂದರು.

ಹವಾಮಾನ ಬದಲಾವಣೆಯಿಂದಾಗಿ ಹೊಸ ರೀತಿಯ ಕೀಟಗಳು, ಹೊಸ ರೋಗಗಳು, ಸಾಂಕ್ರಾಮಿಕ ರೋಗಗಳು ಹೊರಹೊಮ್ಮುತ್ತಿವೆ, ಇದರಿಂದಾಗಿ ಮಾನವರು ಮತ್ತು ಜಾನುವಾರುಗಳ ಆರೋಗ್ಯಕ್ಕೆ ದೊಡ್ಡ ಅಪಾಯವಿದೆ ಮತ್ತು ಬೆಳೆಗಳ ಮೇಲೂ ಸಹ ಪರಿಣಾಮ ಬೀರುತ್ತಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈ ಅಂಶಗಳ ಬಗ್ಗೆ ತೀವ್ರ ನಿರಂತರ ಸಂಶೋಧನೆ ಅಗತ್ಯ. ವಿಜ್ಞಾನ, ಸರ್ಕಾರ ಮತ್ತು ಸಮಾಜ ಒಟ್ಟಾಗಿ ಶ್ರಮಿಸಿದಾಗ, ಫಲಿತಾಂಶಗಳು ಉತ್ತಮವಾಗಿರುತ್ತವೆ ಎಂದು ಅವರು ಹೇಳಿದರು. ರೈತರು ಮತ್ತು ವಿಜ್ಞಾನಿಗಳ ಇಂತಹ ಮೈತ್ರಿಯು ಹೊಸ ಸವಾಲುಗಳನ್ನು ಎದುರಿಸುವಲ್ಲಿ ದೇಶವನ್ನು ಬಲಪಡಿಸುತ್ತದೆ ಎಂದೂ ತಿಳಿಸಿದರು.

ಬೆಳೆ ಆಧಾರಿತ ಆದಾಯ ವ್ಯವಸ್ಥೆಯಿಂದ ರೈತನನ್ನು ಹೊರತಂದು ಮೌಲ್ಯವರ್ಧನೆ ಮತ್ತು ಇತರ ಕೃಷಿ ಆಯ್ಕೆಗಳಿಗೆ ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಜ್ಞಾನ ಮತ್ತು ಸಂಶೋಧನೆಯ ಪರಿಹಾರಗಳೊಂದಿಗೆ ಸಿರಿಧಾನ್ಯಗಳು ಮತ್ತು ಇತರ ಧಾನ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಬೆಳೆಯಬಹುದು ಎಂಬುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.  ವಿಶ್ವಸಂಸ್ಥೆ ಮುಂದಿನ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಿಸುವುದರಿಂದ ದೊರಕುವ ಅವಕಾಶಗಳನ್ನು ಬಳಸಿಕೊಳ್ಳಲು ಜನರು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

ನಮ್ಮ ಪ್ರಾಚೀನ ಕೃಷಿ ಸಂಪ್ರದಾಯಗಳ ಜೊತೆಗೆ ಭವಿಷ್ಯದತ್ತ ಹೆಜ್ಜೆಯಿಡುವುದೂ ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆಧುನಿಕ ತಂತ್ರಜ್ಞಾನ ಮತ್ತು ಹೊಸ ಕೃಷಿ ಸಾಧನಗಳು ಭವಿಷ್ಯದ ಕೃಷಿಯ ತಿರುಳಾಗಿದೆ ಎಂದು ಅವರು ಹೇಳಿದರು. "ಆಧುನಿಕ ಕೃಷಿ ಯಂತ್ರಗಳು ಮತ್ತು ಸಲಕರಣೆಗಳನ್ನು ಉತ್ತೇಜಿಸುವ ಪ್ರಯತ್ನಗಳು ಇಂದು ಫಲ ನೀಡುತ್ತಿವೆ" ಎಂದು ಅವರು ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
With HPV vaccine rollout, AIIMS oncologist says it’s the beginning of the end for cervical cancer in India

Media Coverage

With HPV vaccine rollout, AIIMS oncologist says it’s the beginning of the end for cervical cancer in India
NM on the go

Nm on the go

Always be the first to hear from the PM. Get the App Now!
...
Prime Minister congratulates Jammu and Kashmir team on their first-ever Ranji Trophy victory
February 28, 2026

The Prime Minister has congratulated the Jammu and Kashmir team for their first-ever Ranji Trophy win.

The Prime Minister stated that this historic triumph reflects the remarkable grit, discipline, and passion of the team. Highlighting that it is a proud moment for the people of Jammu and Kashmir, he noted that the victory underscores the growing sporting passion and talent in the region.

The Prime Minister expressed hope that this feat will inspire many young athletes to dream big and play more.

The Prime Minister shared on X post;

"Congratulations to the Jammu and Kashmir team for their first ever Ranji Trophy win! This historic triumph reflects remarkable grit, discipline and passion of the team. It is a proud moment for the people of Jammu and Kashmir and it highlights the growing sporting passion and talent there. May this feat inspire many young athletes to dream big and play more."