ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಮಲೇಷ್ಯಾದ ಪ್ರಧಾನಮಂತ್ರಿ ಘನತೆವೆತ್ತ ಡಾಟೊ ಸೆರಿ ಅನ್ವರ್ ಇಬ್ರಾಹಿಂ ಅವರು ಪೆರ್ಡಾನಾ ಪುತ್ರ ಸಂಕೀರ್ಣದಲ್ಲಿ ಬರಮಾಡಿಕೊಂಡರು ಮತ್ತು ವಿಧ್ಯುಕ್ತವಾಗಿ ಸ್ವಾಗತ ಕೋರಿದರು. ನಂತರ, ಉಭಯ ನಾಯಕರು ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರ ಅಧಿಕೃತ ನಿವಾಸವಾದ ಸೆರಿ ಪೆರ್ಡಾನಾದಲ್ಲಿ ಖಾಸಗಿ ಮತ್ತು ನಿಯೋಗ ಮಟ್ಟದ ಸ್ವರೂಪಗಳಲ್ಲಿ ಮಾತುಕತೆಯಲ್ಲಿ ತೊಡಗಿದರು.

ನಾಯಕರು ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು 2024ರಲ್ಲಿ ಉಭಯ ದೇಶಗಳ ನಡುವೆ ಸ್ಥಾಪಿಸಲಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಮತ ವ್ಯಕ್ತಪಡಿಸಿದರು. ಪಾಲುದಾರಿಕೆ ಮತ್ತು ಜನರ ನಡುವಿನ ನಿಕಟ ಸಂಬಂಧದಲ್ಲಿ ನೆಲೆಯೂರಿರುವ ಭಾರತ-ಮಲೇಷ್ಯಾ ಹಳೆಯ ಬಾಂಧವ್ಯವನ್ನು ಅವರು ಸ್ಮರಿಸಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಸಮುದ್ರ, ಶುದ್ಧ ಇಂಧನ, ಮೂಲಸೌಕರ್ಯ, ನವೋದ್ಯಮಗಳು, ಕೃಷಿ, ಶಿಕ್ಷಣ, ಆರೋಗ್ಯ, ಆಯುರ್ವೇದ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಪರ್ಕಗಳಂತಹ ಆದ್ಯತೆಯ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಯಾಮವನ್ನು ನಾಯಕರು ಪರಿಶೀಲಿಸಿದರು. ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಅವರು ಚರ್ಚಿಸಿದರು. 'ದ್ವಿಪಕ್ಷೀಯ ಡಿಜಿಟಲ್ ಮಂಡಳಿ' ಮೂಲಕ ಉಭಯ ದೇಶಗಳ ನಡುವಿನ ಡಿಜಿಟಲ್ ಸಹಕಾರದ ಸ್ಥಿರ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು. ಇದೇವೇಳೆ  'ಫಿನ್‌ಟೆಕ್‌' ಕ್ಷೇತ್ರದಲ್ಲಿ  ಸಹಯೋಗವನ್ನು ಹೆಚ್ಚಿಸಲು 'ಯುಪಿಐ' ಮತ್ತು 'ಪೇ-ನೆಟ್' ನಡುವಿನ ಒಪ್ಪಂದವನ್ನು ಅವರು ಸ್ವಾಗತಿಸಿದರು.

 

ಸಂಸದೀಯ ಮತ್ತು ವಿಶ್ವವಿದ್ಯಾಲಯಗಳ ವಿನಿಮಯದ ಮೂಲಕ ಯುವಜನರ ನಡುವಿನ ಸಂಪರ್ಕವನ್ನು ಬಲಪಡಿಸಲು ಪ್ರಧಾನಮಂತ್ರಿ ಮೋದಿ ಕರೆ ನೀಡಿದರು. ಈ ನಿಟ್ಟಿನಲ್ಲಿ, ಭಾರತದ ನಳಂದ ವಿಶ್ವವಿದ್ಯಾಲಯ ಮತ್ತು ಮಲಯಾ ವಿಶ್ವವಿದ್ಯಾಲಯ ಹಾಗೂ ಐಐಟಿ ಮದ್ರಾಸ್ ಮತ್ತು ಮಲೇಷ್ಯಾದ ಅಡ್ವಾನ್ಸ್ಡ್ ಸೆಮಿಕಂಡಕ್ಟರ್ ಅಕಾಡೆಮಿ ನಡುವೆ ನಡೆಯುತ್ತಿರುವ ಸಹಕಾರವನ್ನು ಅವರು ಸ್ವಾಗತಿಸಿದರು. ಮಲೇಷಿಯಾದಲ್ಲಿ ಭಾರತದ ಮೊದಲ ರಾಯಭಾರ ಕಚೇರಿಯನ್ನು ತೆರೆಯುವುದರಿಂದ ವಾಣಿಜ್ಯ ಮತ್ತು ಜನರ ನಡುವಿನ ಸಂಬಂಧ ಬಲಗೊಳ್ಳಲಿದೆ ಎಂದು ಅವರು ಹೇಳಿದರು.

ಜಾಗತಿಕ ಆಡಳಿತ ಸುಧಾರಣೆಗಳು, ಇಂಡೋ-ಪೆಸಿಫಿಕ್ ಮತ್ತು ಬೆಳೆಯುತ್ತಿರುವ ಭಾರತ-ಆಸಿಯಾನ್ ಪಾಲುದಾರಿಕೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಉಭಯ ನಾಯಕರು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡರು. 'ಎಐಟಿಐಜಿಎ' ಪರಾಮರ್ಶೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು.

2025ರಲ್ಲಿ ಮಲೇಷ್ಯಾ ಯಶಸ್ವಿಯಾಗಿ 'ಆಸಿಯಾನ್'  ಅಧ್ಯಕ್ಷತೆ ವಹಿಸಿದ್ದಕ್ಕಾಗಿ  ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರನ್ನು ಪ್ರಧಾನಮಂತ್ರಿ ಮೋದಿ ಅಭಿನಂದಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು 2026ರಲ್ಲಿ ಭಾರತದ 'ಬ್ರಿಕ್ಸ್' ಅಧ್ಯಕ್ಷತೆಗೆ ತಮ್ಮ ಶುಭಾಶಯ ಮತ್ತು ಬೆಂಬಲವನ್ನು ತಿಳಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಕೆಂಪು ಕೋಟೆ ಸ್ಫೋಟವನ್ನು ಬಲವಾಗಿ ಖಂಡಿಸಿದ  ಅನ್ವರ್ ಇಬ್ರಾಹಿಂ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು. ಇದೇವೇಳೆ, ಭಯೋತ್ಪಾದನೆ ನಿಗ್ರಹದಲ್ಲಿ ನಿಕಟ ಸಹಕಾರವನ್ನು ಮುಂದುವರಿಸುವಂತೆ ಕರೆ ನೀಡಿದರು.

 

ಮಾತುಕತೆಯ ಬಳಿಕ ಡಿಜಿಟಲ್ ಪಾವತಿ, ಭದ್ರತಾ ಸಹಕಾರ, ಸೆಮಿಕಂಡಕ್ಟರ್‌ಗಳು, ಆರೋಗ್ಯ ಮತ್ತು ಔಷಧ, ವಿಪತ್ತು ನಿರ್ವಹಣೆ, ಭ್ರಷ್ಟಾಚಾರ ನಿಗ್ರಹ, ಆಡಿಯೋ-ವಿಶುವಲ್ ಸಹ-ನಿರ್ಮಾಣ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ, ವಿಶ್ವಸಂಸ್ಥೆಯ ಶಾಂತಿಪಾಲನಾ ಸಹಕಾರ ಮತ್ತು ಭಾರತೀಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೇರಿದಂತೆ ಹಲವಾರು ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. 'ಅಂತಾರಾಷ್ಟ್ರೀಯ  ಬಿಗ್ ಕ್ಯಾಟ್ ಅಲೈಯನ್ಸ್'ಗೆ(ಐಬಿಸಿಎ) ಸೇರಲು ಎಲ್ಲಾ ಕಾರ್ಯವಿಧಾನಗಳನ್ನು ಮಲೇಷ್ಯಾ ಪೂರ್ಣಗೊಳಿಸಿದೆ. ವಿನಿಮಯ ಮಾಡಿಕೊಂಡ  ಒಡಂಬಡಿಕೆ/ಒಪ್ಪಂದಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.[ಲಿಂಕ್]

2026ರ ಫೆಬ್ರವರಿ 07 ರಂದು ಪ್ರಧಾನಮಂತ್ರಿಯವರ ಭೇಟಿಯ ಸಂದರ್ಭದಲ್ಲಿ 10ನೇ 'ಭಾರತ-ಮಲೇಷ್ಯಾ ಸಿಇಒ ಸಭೆ' ನಡೆಯಿತು. ಸಭೆಯ ಫಲಿತಾಂಶದ ದಾಖಲೆಯನ್ನು ಎರಡೂ ಕಡೆಯವರು ಸ್ವೀಕರಿಸಿದರು.

ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿ ಮೋದಿ ಅವರ ಗೌರವಾರ್ಥ ಭೋಜನಕೂಟವನ್ನು ಆಯೋಜಿಸಿದ್ದರು.  ಅನ್ವರ್ ಇಬ್ರಾಹಿಂ ಅವರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಧನ್ಯವಾದ ಅರ್ಪಿಸಿದರು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM-KISAN crosses ₹4.27 lakh crore disbursal, over 9.35 crore farmers benefit

Media Coverage

PM-KISAN crosses ₹4.27 lakh crore disbursal, over 9.35 crore farmers benefit
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಮಾರ್ಚ್ 2026
March 25, 2026

PM Modi’s Blueprint for a Stronger India: Empowerment, Infrastructure & Economic Resilience in Action