ಕೇರಳದ ವಿಳಿಂಜಂ ಅಂತಾರಾಷ್ಟ್ರೀಯ ಬಹುಪಯೋಗಿ ಆಳಸಮುದ್ರ ಬಂದರು ಭಾರತದ ಕಡಲ ಮೂಲಸೌಕರ್ಯದಲ್ಲಿ ಮಹತ್ವದ ಪ್ರಗತಿಯಾಗಿದೆ: ಪ್ರಧಾನಮಂತ್ರಿ
ಇಂದು ಭಗವಾನ್ ಆದಿ ಶಂಕರಾಚಾರ್ಯರ ಜಯಂತಿ, ಕೇರಳದ ಆದಿ ಶಂಕರಾಚಾರ್ಯರು ದೇಶದ ವಿವಿಧ ಮೂಲೆಗಳಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸಿದರು, ಈ ಶುಭ ಸಂದರ್ಭದಲ್ಲಿ ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ: ಪ್ರಧಾನಮಂತ್ರಿ
ಭಾರತದ ಕರಾವಳಿ ರಾಜ್ಯಗಳು ಮತ್ತು ನಮ್ಮ ಬಂದರು ನಗರಗಳು ವಿಕಸಿತ ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಕೇಂದ್ರಗಳಾಗುತ್ತವೆ: ಪ್ರಧಾನಮಂತ್ರಿ
ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಬಂದರು ಸಂಪರ್ಕವನ್ನು ಹೆಚ್ಚಿಸುವ ಸಾಗರಮಾಲಾ ಯೋಜನೆಯಡಿಯಲ್ಲಿ ಬಂದರು ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿದೆ: ಪ್ರಧಾನಮಂತ್ರಿ
ಪ್ರಧಾನಮಂತ್ರಿ-ಗತಿಶಕ್ತಿ ಅಡಿಯಲ್ಲಿ, ಜಲಮಾರ್ಗಗಳು, ರೈಲು ಮಾರ್ಗಗಳು, ಹೆದ್ದಾರಿಗಳು ಮತ್ತು ವಾಯುಮಾರ್ಗಗಳ ಅಂತರ-ಸಂಪರ್ಕವನ್ನು ತ್ವರಿತಗತಿಯಲ್ಲಿ ಸುಧಾರಿಸಲಾಗುತ್ತಿದೆ: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಹೂಡಿಕೆಗಳು ನಮ್ಮ ಬಂದರುಗಳನ್ನು ಜಾಗತಿಕ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಿರುವುದು ಮಾತ್ರವಲ್ಲದೆ, ಅವುಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸಿವೆ: ಪ್ರಧಾನಮಂತ್ರಿ
ಪೋಪ್ ಫ್ರಾನ್ಸಿಸ್ ಅವರ ಸೇವಾ ಮನೋಭಾವಕ್ಕಾಗಿ ಜಗತ್ತು ಯಾವಾಗಲೂ ಅವರನ್ನು ಸ್ಮರಿಸುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ತಿರುವನಂತಪುರಂನಲ್ಲಿ 8,800 ಕೋಟಿ ರೂ. ವೆಚ್ಚದ ವಿಳಿಂಜಂ ಅಂತಾರಾಷ್ಟ್ರೀಯ ಬಹುಪಯೋಗಿ ಆಳಸಮುದ್ರ ಬಂದರನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಭಗವಾನ್ ಆದಿ ಶಂಕರಾಚಾರ್ಯರ ಜಯಂತಿಯ ಶುಭ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೂರು ವರ್ಷಗಳ ಹಿಂದೆ ಸೆಪ್ಟೆಂಬರ್ ನಲ್ಲಿ ಆದಿ ಶಂಕರಾಚಾರ್ಯರ ಪವಿತ್ರ ಜನ್ಮಸ್ಥಳಕ್ಕೆ ಭೇಟಿ ನೀಡುವ ಸೌಭಾಗ್ಯ ತಮಗೆ ಸಿಕ್ಕಿತ್ತು ಎಂದು ಹೇಳಿದರು. ತಮ್ಮ ಸಂಸದೀಯ ಕ್ಷೇತ್ರವಾದ ಕಾಶಿಯಲ್ಲಿರುವ ವಿಶ್ವನಾಥ ಧಾಮ ಸಂಕೀರ್ಣದಲ್ಲಿ ಆದಿ ಶಂಕರಾಚಾರ್ಯರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಈ ಪ್ರತಿಮೆ ಆದಿ ಶಂಕರಾಚಾರ್ಯರ ಅಪಾರ ಆಧ್ಯಾತ್ಮಿಕ ಜ್ಞಾನ ಮತ್ತು ಬೋಧನೆಗಳಿಗೆ ಸಲ್ಲಿಸಿದ ಗೌರವವಾಗಿದೆ ಎಂದು ಅವರು ಒತ್ತಿ ಹೇಳಿದರು. ಉತ್ತರಾಖಂಡದ ಪವಿತ್ರ ಕೇದಾರನಾಥ ಧಾಮದಲ್ಲಿ ಆದಿ ಶಂಕರಾಚಾರ್ಯರ ದೈವಿಕ ಪ್ರತಿಮೆಯನ್ನು ಅನಾವರಣಗೊಳಿಸುವ ಗೌರವ ತಮಗೆ ಸಿಕ್ಕಿತು ಎಂದು ಅವರು ಹೇಳಿದರು. ಕೇದಾರನಾಥ ದೇವಾಲಯದ ಬಾಗಿಲುಗಳು ಭಕ್ತರಿಗಾಗಿ ತೆರೆದಿರುವುದು ಇಂದು ಮತ್ತೊಂದು ವಿಶೇಷ ಸಂದರ್ಭವಾಗಿದೆ ಎಂದು ಪ್ರಧಾನಿ ಹೇಳಿದರು. ಕೇರಳದಿಂದ ಬಂದ ಆದಿ ಶಂಕರಾಚಾರ್ಯರು ದೇಶದ ವಿವಿಧ ಮೂಲೆಗಳಲ್ಲಿ ಮಠಗಳನ್ನು ಸ್ಥಾಪಿಸಿ ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಿದರು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಅವರ ಪ್ರಯತ್ನಗಳು ಏಕೀಕೃತ ಮತ್ತು ಆಧ್ಯಾತ್ಮಿಕವಾಗಿ ಪ್ರಬುದ್ಧವಾದ ಭಾರತಕ್ಕೆ ಅಡಿಪಾಯ ಹಾಕಿದವು ಎಂದು ಅವರು ಒತ್ತಿ ಹೇಳಿದರು.

ಒಂದೆಡೆ ಅಪಾರ ಸಾಧ್ಯತೆಗಳಿಂದ ಸಮೃದ್ಧವಾಗಿರುವ ವಿಶಾಲ ಸಾಗರವಿದೆ. ಮತ್ತೊಂದೆಡೆ, ಪ್ರಕೃತಿಯ ಆಕರ್ಷಕ ಸೌಂದರ್ಯದ ಭವ್ಯತೆಯಿದೆ ಎಂದು ಶ್ರೀ ಮೋದಿ ಹೇಳಿದರು. ಇದೆಲ್ಲದರ ನಡುವೆ, ವಿಳಿಂಜಂ ಆಳ ಸಮುದ್ರ ಬಂದರು ಈಗ ಹೊಸ ಯುಗದ ಅಭಿವೃದ್ಧಿಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಅವರು ಒತ್ತಿ ಹೇಳಿದರು. ಈ ಗಮನಾರ್ಹ ಸಾಧನೆಗಾಗಿ ಅವರು ಕೇರಳದ ಜನತೆ ಮತ್ತು ಇಡೀ ರಾಷ್ಟ್ರವನ್ನು ಅಭಿನಂದಿಸಿದರು.

 

ವಿಳಿಂಜಂ ಆಳ ಸಮುದ್ರ ಬಂದರನ್ನು ₹ 8,800 ಕೋಟಿ  ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಮುಂಬರುವ ವರ್ಷಗಳಲ್ಲಿ ಈ ಸಾಗಣೆ ಕೇಂದ್ರದ ಸಾಮರ್ಥ್ಯವು ಮೂರು ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದರು. ಇದು ವಿಶ್ವದ ಕೆಲವು ದೊಡ್ಡ ಸರಕು ಹಡಗುಗಳ ಸುಲಭ ಆಗಮನಕ್ಕೆ ಅನುವು ಮಾಡಿಕೊಡುತ್ತದೆ. ಭಾರತದ ಶೇ.75 ರಷ್ಟು ಸಾಗಣೆ ಕಾರ್ಯಾಚರಣೆಗಳು ಈ ಹಿಂದೆ ವಿದೇಶಿ ಬಂದರುಗಳಲ್ಲಿ ನಡೆಯುತ್ತಿದ್ದವು, ಇದರಿಂದಾಗಿ ದೇಶವು ಗಮನಾರ್ಹ ಆದಾಯ ನಷ್ಟವನ್ನು ಅನುಭವಿಸಿತು ಎಂದು ಅವರು ಹೇಳಿದರು. ಪರಿಸ್ಥಿತಿ ಈಗ ಬದಲಾಗಲಿದೆ ಎಂದು ಒತ್ತಿ ಹೇಳಿದ ಅವರು, ಭಾರತದ ಹಣ ಈಗ ಭಾರತಕ್ಕೆ ಉಪಯೋಗವಾಗುತ್ತದೆ. ಒಂದು ಕಾಲದಲ್ಲಿ ದೇಶದ ಹೊರಗೆ ಹರಿಯುತ್ತಿದ್ದ ನಿಧಿಗಳು ಈಗ ಕೇರಳ ಮತ್ತು ವಿಳಿಂಜಂನ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಪ್ರತಿಪಾದಿಸಿದರು.

ವಸಾಹತುಶಾಹಿ ಆಳ್ವಿಕೆಗೂ ಮೊದಲು ಭಾರತವು ಶತಮಾನಗಳ ಸಮೃದ್ಧಿಯನ್ನು ಕಂಡಿತ್ತು ಎಂದು ಶ್ರೀ ಮೋದಿ ಹೇಳಿದರು. ಒಂದು ಕಾಲದಲ್ಲಿ ಭಾರತವು ಜಾಗತಿಕ ಜಿಡಿಪಿಯಲ್ಲಿ ದೊಡ್ಡ ಪಾಲನ್ನು ಹೊಂದಿತ್ತು ಎಂಬುದನ್ನು ಅವರು ಒತ್ತಿ ಹೇಳಿದರು. ಆ ಯುಗದಲ್ಲಿ ಭಾರತವನ್ನು ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿಸಿದ್ದು ಅದರ ಕಡಲ ಸಾಮರ್ಥ್ಯ ಮತ್ತು ಅದರ ಬಂದರು ನಗರಗಳ ಆರ್ಥಿಕ ಚಟುವಟಿಕೆ ಎಂದು ಅವರು ಹೇಳಿದರು. ಈ ಕಡಲ ಶಕ್ತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕೇರಳದ ಪ್ರಮುಖ ಪಾತ್ರವನ್ನು ಗಮನಿಸಿದ ಅವರು, ಕಡಲ ವ್ಯಾಪಾರದಲ್ಲಿ ಕೇರಳದ ಐತಿಹಾಸಿಕ ಪಾತ್ರವನ್ನು ಎತ್ತಿ ತೋರಿಸಿದರು, ಅರಬ್ಬಿಸಮುದ್ರದ ಮೂಲಕ ಭಾರತವು ಅನೇಕ ರಾಷ್ಟ್ರಗಳೊಂದಿಗೆ  ವ್ಯಾಪಾರ ಸಂಬಂಧವನ್ನು ಉಳಿಸಿಕೊಂಡಿದೆ ಎಂದು ಒತ್ತಿ ಹೇಳಿದರು. ಕೇರಳದ ಹಡಗುಗಳು ವಿವಿಧ ದೇಶಗಳಿಗೆ ಸರಕುಗಳನ್ನು ಸಾಗಿಸುತ್ತವೆ, ಇದು ಜಾಗತಿಕ ವಾಣಿಜ್ಯಕ್ಕೆ ಪ್ರಮುಖ ಕೇಂದ್ರವಾಗಿದೆ  ಎಂದು ಅವರು ಹೇಳಿದರು. "ಇಂದು, ಭಾರತ ಸರ್ಕಾರವು ಆರ್ಥಿಕ ಬಲದ ಈ ಮಾರ್ಗವನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ." ಎಂದು ಅವರು ಹೇಳಿದರು. "ಭಾರತದ ಕರಾವಳಿ ರಾಜ್ಯಗಳು ಮತ್ತು ಬಂದರು ನಗರಗಳು ಅಭಿವೃದ್ಧಿ ಹೊಂದಿದ ಭಾರತದ ಪ್ರಗತಿಗೆ ಪ್ರಮುಖ ಕೇಂದ್ರಗಳಾಗುತ್ತವೆ" ಎಂದು ಅವರು ಹೇಳಿದರು.

 

"ಮೂಲಸೌಕರ್ಯ ಮತ್ತು ವ್ಯವಹಾರ ಮಾಡುವ ಸುಲಭತೆಯನ್ನು ಒಟ್ಟಿಗೆ ಉತ್ತೇಜಿಸಿದಾಗ, ಬಂದರು ಆರ್ಥಿಕತೆಯು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪುತ್ತದೆ" ಎಂದು ಪ್ರಧಾನಿ ಒತ್ತಿ ಹೇಳಿದರು ಮತ್ತು ಕಳೆದ 10 ವರ್ಷಗಳಲ್ಲಿ, ಇದು ಭಾರತ ಸರ್ಕಾರದ ಬಂದರು ಮತ್ತು ಜಲಮಾರ್ಗ ನೀತಿಯ ನೀಲನಕ್ಷೆಯಾಗಿದೆ ಎಂದು ಹೇಳಿದರು. ಕೈಗಾರಿಕಾ ಚಟುವಟಿಕೆಗಳು ಮತ್ತು ರಾಜ್ಯಗಳ ಒಟ್ಟಾರೆ ಅಭಿವೃದ್ಧಿಗಾಗಿ ಸರ್ಕಾರ ಪ್ರಯತ್ನಗಳನ್ನು ಚುರುಕುಗೊಳಿಸಿದೆ ಎಂದು ಅವರು ಒತ್ತಿ ಹೇಳಿದರು. ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸಾಗರಮಾಲಾ ಯೋಜನೆಯಡಿಯಲ್ಲಿ ಬಂದರು ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿದೆ ಮತ್ತು ಬಂದರು ಸಂಪರ್ಕವನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿಯಲ್ಲಿ, ಜಲಮಾರ್ಗಗಳು, ರೈಲು ಮಾರ್ಗಗಗಳು, ಹೆದ್ದಾರಿಗಳು ಮತ್ತು ವಾಯುಮಾರ್ಗಗಳನ್ನು ಸುಗಮ ಸಂಪರ್ಕಕ್ಕಾಗಿ ತ್ವರಿತವಾಗಿ ಸಂಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ವ್ಯವಹಾರ ಮಾಡುವುದನ್ನು ಸುಲಭಗೊಳಿಸಿರುವ ಈ ಸುಧಾರಣೆಗಳು ಬಂದರುಗಳು ಮತ್ತು ಮೂಲಸೌಕರ್ಯ ವಲಯಗಳಲ್ಲಿ ಹೆಚ್ಚಿನ ಹೂಡಿಕೆಗೆ ಕಾರಣವಾಗಿವೆ ಎಂದು ಅವರು ಹೇಳಿದರು. ಭಾರತೀಯ ನಾವಿಕರಿಗೆ ಸಂಬಂಧಿಸಿದ ನಿಯಮಗಳನ್ನು ಭಾರತ ಸರ್ಕಾರ ತಿದ್ದುಪಡಿ ಮಾಡಿದೆ ಎಂದು ಪ್ರಧಾನಿ ಹೇಳಿದರು. ಇದು ಗಮನಾರ್ಹ ಫಲಿತಾಂಶಗಳನ್ನು ನೀಡಿದೆ. 2014 ರಲ್ಲಿ ಭಾರತೀಯ ನಾವಿಕರ ಸಂಖ್ಯೆ 1.25 ಲಕ್ಷಕ್ಕಿಂತ ಕಡಿಮೆಯಿತ್ತು, ಇಂದು ಈ ಸಂಖ್ಯೆ 3.25 ಲಕ್ಷಕ್ಕೂ ಹೆಚ್ಚಾಗಿದೆ. ನಾವಿಕರ ಸಂಖ್ಯೆಯ ದೃಷ್ಟಿಯಿಂದ ಭಾರತವು ಈಗ ಜಾಗತಿಕವಾಗಿ ಅಗ್ರ ಮೂರು ದೇಶಗಳಲ್ಲಿ ಸ್ಥಾನ ಪಡೆದಿದೆ ಎಂದು ಅವರು ಒತ್ತಿ ಹೇಳಿದರು.

ಒಂದು ದಶಕದ ಹಿಂದೆ, ಹಡಗುಗಳು ಬಂದರುಗಳಲ್ಲಿ ಬಹಳ ಸಮಯ ಕಾಯಬೇಕಾಗಿತ್ತು. ಇದು ಸರಕುಗಳ ಇಳಿಸುವಿಕೆಯಲ್ಲಿ ಗಮನಾರ್ಹ ವಿಳಂಬಕ್ಕೆ ಕಾರಣವಾಯಿತು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ನಿಧಾನಗತಿಯು ವ್ಯವಹಾರಗಳು, ಕೈಗಾರಿಕೆಗಳು ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು ಎಂದು ಹೇಳಿದರು. ಪರಿಸ್ಥಿತಿ ಈಗ ಬದಲಾಗಿದೆ ಮತ್ತು ಕಳೆದ 10 ವರ್ಷಗಳಲ್ಲಿ, ಭಾರತದ ಪ್ರಮುಖ ಬಂದರುಗಳು ಹಡಗುಗಳ ತಿರುವು ಸಮಯವನ್ನು ಶೇ. 30 ರಷ್ಟು ಕಡಿಮೆ ಮಾಡಿವೆ ಎಂದು ಅವರು ಹೇಳಿದರು. ಇದು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಿದೆ. ಹೆಚ್ಚಿದ ಬಂದರು ದಕ್ಷತೆಯಿಂದಾಗಿ, ಭಾರತವು ಈಗ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸರಕು ಪ್ರಮಾಣವನ್ನು ನಿರ್ವಹಿಸುತ್ತಿದೆ. ಇದು ದೇಶದ ಲಾಜಿಸ್ಟಿಕ್ಸ್ ಮತ್ತು ವ್ಯಾಪಾರ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು.

"ಭಾರತದ ಕಡಲ ಯಶಸ್ಸು ಒಂದು ದಶಕದ ದೂರದೃಷ್ಟಿ ಮತ್ತು ಪ್ರಯತ್ನದ ಫಲವಾಗಿದೆ" ಎಂದು ಪ್ರಧಾನಿ ಹೇಳಿದರು, ಕಳೆದ 10 ವರ್ಷಗಳಲ್ಲಿ ಭಾರತವು ತನ್ನ ಬಂದರುಗಳ ಸಾಮರ್ಥ್ಯವನ್ನು ದುಪ್ಪಟ್ಟುಮಾಡಿದೆ ಮತ್ತು ತನ್ನ ರಾಷ್ಟ್ರೀಯ ಜಲಮಾರ್ಗಗಳನ್ನು ಎಂಟು ಪಟ್ಟು ವಿಸ್ತರಿಸಿದೆ ಎಂದು ಹೇಳಿದರು. ಇಂದು, ಜಾಗತಿಕವಾಗಿ ಅಗ್ರ 30 ಬಂದರುಗಳಲ್ಲಿ ಎರಡು ಭಾರತದ ಬಂದರುಗಳಿವೆ ಎಂದು ಅವರು ಹೇಳಿದರು. ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವೂ ಸುಧಾರಿಸಿದೆ. ಇದಲ್ಲದೆ, ಜಾಗತಿಕ ಹಡಗು ನಿರ್ಮಾಣದಲ್ಲಿ ಭಾರತವು ಈಗ ಅಗ್ರ 20 ದೇಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ದೇಶದ ಮೂಲಸೌಕರ್ಯವನ್ನು ಬಲಪಡಿಸಿದ ನಂತರ, ಜಾಗತಿಕ ವ್ಯಾಪಾರದಲ್ಲಿ ಭಾರತದ ಕಾರ್ಯತಂತ್ರದ ಸ್ಥಾನದತ್ತ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಭಾರತದ ಕಡಲ ಕಾರ್ಯತಂತ್ರವನ್ನು ವಿವರಿಸುವ ಮಾರಿಟೈಮ್ ಅಮೃತ್ ಕಾಲ್ ವಿಷನ್ ಅನ್ನು ಅವರು ಪ್ರಾರಂಭಿಸುವುದಾಗಿ ಘೋಷಿಸಿದರು. ಭಾರತ-ಮಧ್ಯ ಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಸ್ಥಾಪಿಸಲು ಭಾರತವು ಹಲವಾರು ಪ್ರಮುಖ ದೇಶಗಳೊಂದಿಗೆ ಸಹಕರಿಸಿದ ಜಿ-20 ಶೃಂಗಸಭೆಯನ್ನು ಅವರು ನೆನಪಿಸಿಕೊಂಡರು. ಈ ಕಾರಿಡಾರ್ ನಲ್ಲಿ ಕೇರಳದ ಪ್ರಮುಖ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಈ ಉಪಕ್ರಮದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.

 

ಭಾರತದ ಕಡಲ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಖಾಸಗಿ ವಲಯದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು. ಈ ಸಹಯೋಗವು ಭಾರತದ ಬಂದರುಗಳನ್ನು ಜಾಗತಿಕ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಿರುವುದು ಮಾತ್ರವಲ್ಲದೆ, ಅವುಗಳನ್ನು ಭವಿಷ್ಯಕ್ಕೆ ಸಿದ್ಧವಾಗಿಸಿದೆ ಎಂದು ಅವರು ಒತ್ತಿ ಹೇಳಿದರು. ಖಾಸಗಿ ವಲಯದ ಭಾಗವಹಿಸುವಿಕೆಯು ನಾವೀನ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಕೊಚ್ಚಿಯಲ್ಲಿ ಹಡಗು ನಿರ್ಮಾಣ ಮತ್ತು ದುರಸ್ತಿ ಕ್ಲಸ್ಟರ್ ಸ್ಥಾಪಿಸುವತ್ತ ಭಾರತ ಸಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಕ್ಲಸ್ಟರ್ ಪೂರ್ಣಗೊಂಡ ನಂತರ, ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದು ಕೇರಳದ ಸ್ಥಳೀಯ ಪ್ರತಿಭೆಗಳು ಮತ್ತು ಯುವಕರ ಅಭಿವೃದ್ಧಿಗೆ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಭಾರತವು ಈಗ ತನ್ನ ಹಡಗು ನಿರ್ಮಾಣ ಸಾಮರ್ಥ್ಯಗಳನ್ನು ಬಲಪಡಿಸಲು ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ವರ್ಷದ ಕೇಂದ್ರ ಬಜೆಟ್ ಭಾರತದಲ್ಲಿ ದೊಡ್ಡ ಹಡಗುಗಳ ನಿರ್ಮಾಣವನ್ನು ಉತ್ತೇಜಿಸಲು ಹೊಸ ನೀತಿಯನ್ನು ಪರಿಚಯಿಸಿದೆ ಎಂದು ಅವರು ಹೇಳಿದರು. ಈ ಉಪಕ್ರಮವು ಉತ್ಪಾದನಾ ವಲಯಕ್ಕೆ ಗಮನಾರ್ಹ ಉತ್ತೇಜನ ನೀಡುವುದರ ಜೊತೆಗೆ, ಎಂ ಎಸ್ ಎಂ ಇ ಗಳಿಗೂ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಇದು ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

"ಮೂಲಸೌಕರ್ಯಗಳು ನಿರ್ಮಾಣವಾದಾಗ, ವ್ಯಾಪಾರ ವೃದ್ಧಿಯಾದಾಗ ಮತ್ತು ಶ್ರೀಸಾಮಾನ್ಯರ ಮೂಲಭೂತ ಅಗತ್ಯಗಳನ್ನು ಪೂರೈಸಿದಾಗ ನಿಜವಾದ ಅಭಿವೃದ್ಧಿ ಘಟಿಸುತ್ತದೆ" ಎಂದು ಪ್ರಧಾನಿ ಪ್ರತಿಪಾದಿಸಿದರು. ಕಳೆದ 10 ವರ್ಷಗಳಲ್ಲಿ ಕೇರಳದ ಜನರು ಬಂದರು ಮೂಲಸೌಕರ್ಯದಲ್ಲಿ ಮಾತ್ರವಲ್ಲದೆ ಹೆದ್ದಾರಿಗಳು, ರೈಲು ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳಲ್ಲಿಯೂ ತ್ವರಿತ ಪ್ರಗತಿಯನ್ನು ಕಂಡಿದ್ದಾರೆ ಎಂದು ಅವರು ಹೇಳಿದರು. ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಲ್ಲಂ ಬೈಪಾಸ್ ಮತ್ತು ಆಲಪ್ಪುಳ ಬೈಪಾಸ್ ನಂತಹ ಯೋಜನೆಗಳು ಪೂರ್ಣಗೊಳ್ಳುತ್ತಿವೆ ಎಂದು ಪ್ರಧಾನಿ ಹೇಳಿದರು. ಕೇರಳಕ್ಕೆ ಆಧುನಿಕ ವಂದೇ ಭಾರತ್ ರೈಲುಗಳನ್ನು ಒದಗಿಸಲಾಗಿದ್ದು, ಇದು ಅದರ ಸಾರಿಗೆ ಜಾಲ ಮತ್ತು ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದರು.
ಕೇರಳದ ಅಭಿವೃದ್ಧಿಯು ಭಾರತದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂಬ ತತ್ವದಲ್ಲಿ ಭಾರತ ಸರ್ಕಾರ ದೃಢವಾಗಿ ನಂಬಿಕೆ ಇಟ್ಟಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತ ಸರ್ಕಾರವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು ಕಳೆದ ದಶಕದಲ್ಲಿ ಪ್ರಮುಖ ಸಾಮಾಜಿಕ ನಿಯತಾಂಕಗಳಲ್ಲಿ ಕೇರಳದ ಪ್ರಗತಿಯನ್ನು ಖಚಿತಪಡಿಸಿದೆ ಎಂದು ಅವರು ಹೇಳಿದರು. ಜಲ ಜೀವನ್ ಮಿಷನ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಮತ್ತು ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಸೇರಿದಂತೆ ಕೇರಳದ ಜನರಿಗೆ ಪ್ರಯೋಜನಕಾರಿಯಾದ ಹಲವಾರು ಉಪಕ್ರಮಗಳನ್ನು ಪ್ರಧಾನಿ ಎತ್ತಿ ತೋರಿಸಿದರು.

ಮೀನುಗಾರರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಪುನರುಚ್ಚರಿಸಿದ ಪ್ರಧಾನಿ, ನೀಲಿ ಕ್ರಾಂತಿ ಮತ್ತು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೇರಳಕ್ಕೆ ನೂರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಪೊನ್ನಣಿ ಮತ್ತು ಪುತಿಯಪ್ಪ ಬಂದರು ಸೇರಿದಂತೆ ಇತರ ಮೀನುಗಾರಿಕೆ ಬಂದರುಗಳ ಆಧುನೀಕರಣದ ಬಗ್ಗೆಯೂ ಅವರು ಪ್ರಮುಖವಾಗಿ ಮಾತನಾಡಿದರು. ಇದಲ್ಲದೆ, ಕೇರಳದ ಸಾವಿರಾರು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ನೂರಾರು ಕೋಟಿ ಮೌಲ್ಯದ ಆರ್ಥಿಕ ನೆರವು ಪಡೆಯಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.

 

ಕೇರಳವು ಯಾವಾಗಲೂ ಸಾಮರಸ್ಯ ಮತ್ತು ಸಹಿಷ್ಣುತೆಯ ಭೂಮಿಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ವಿಶ್ವದ ಅತ್ಯಂತ ಹಳೆಯ ಚರ್ಚ್ ಗಳಲ್ಲಿ ಒಂದಾದ ಸೇಂಟ್ ಥಾಮಸ್ ಚರ್ಚ್ ಅನ್ನು ಶತಮಾನಗಳ ಹಿಂದೆಯೇ ಇಲ್ಲಿ ಸ್ಥಾಪಿಸಲಾಯಿತು ಎಂದು ಒತ್ತಿ ಹೇಳಿದರು. ಕೆಲವು ದಿನಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರ ನಿಧನದ ನಂತರ ಪ್ರಪಂಚದಾದ್ಯಂತ ಜನರು ಅನುಭವಿಸಿದ ದುಃಖವನ್ನು ಅವರು ಸ್ಮರಿಸಿದರು. ಅವರು ಆಳವಾದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ರಾಷ್ಟ್ರದ ಪರವಾಗಿ ಗೌರವ ಸಲ್ಲಿಸಿದರು ಎಂದು ಅವರು ಹೇಳಿದರು. ಈ ನಷ್ಟದಿಂದ ದುಃಖಿತರಾಗಿರುವ ಎಲ್ಲರಿಗೂ ಪವಿತ್ರ ಭೂಮಿ ಕೇರಳದಿಂದ ಶ್ರೀ ಮೋದಿ ಮತ್ತೊಮ್ಮೆ ಸಂತಾಪ ಸೂಚಿಸಿದರು.

ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುತ್ತಾ, ಸೇವಾ ಮನೋಭಾವ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಜಗತ್ತು ಅವರ ಕೊಡುಗೆಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು. ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲು ಹಲವು ಅವಕಾಶಗಳು ದೊರೆತಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಅವರಿಂದ ವಿಶೇಷ ಆತ್ಮೀಯತೆ ದೊರೆಯಿತು ಮತ್ತು ಮಾನವೀಯತೆ, ಸೇವೆ ಮತ್ತು ಶಾಂತಿಯ ಕುರಿತು ಅವರೊಂದಿಗೆ ನಡೆಸಿದ ಚರ್ಚೆಗಳು ಸ್ಮರಣೀಯವಾದುವು, ಅವು ತಮಗೆ ಸ್ಫೂರ್ತಿ ನೀಡುತ್ತವೆ ಎಂದು ಪ್ರಧಾನಿ ಹೇಳಿದರು.

 

ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ಶುಭಾಶಯ ಕೋರಿದ ಅವರು, ಕೇರಳವು ಜಾಗತಿಕ ಕಡಲ ವ್ಯಾಪಾರದ ಪ್ರಮುಖ ಕೇಂದ್ರವಾಗುತ್ತದೆ, ಇದು ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಈ ಗುರಿಯನ್ನು ಸಾಧಿಸಲು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವ ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. "ಭಾರತದ ಕಡಲ ಕ್ಷೇತ್ರವು ಹೊಸ ಎತ್ತರವನ್ನು ತಲುಪಲಿದೆ" ಎಂದು ಹೇಳಿದ ಶ್ರೀ ಮೋದಿ, ಕೇರಳದ ಜನರ ಸಾಮರ್ಥ್ಯಗಳಲ್ಲಿ ವಿಶ್ವಾಸ ವ್ಯಕ್ತಪಡಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್, ಕೇಂದ್ರ ಸಚಿವರಾದ ಶ್ರೀ ಸುರೇಶ್ ಪ್ರಭು, ಶ್ರೀ ಜಾರ್ಜ್ ಕುರಿಯನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

8,800 ಕೋಟಿ ರೂ. ವೆಚ್ಚದ ವಿಳಿಂಜಂ ಅಂತಾರಾಷ್ಟ್ರೀಯ ಬಹುಪಯೋಗಿ ಆಳ ಸಮುದ್ರ ಬಂದರು ದೇಶದ ಮೊದಲ ಮೀಸಲಾದ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಬಂದರಾಗಿದ್ದು, ಇದು ವಿಕಸಿತ ಭಾರತದ ಏಕೀಕೃತ ದೃಷ್ಟಿಯ ಭಾಗವಾಗಿ ಭಾರತದ ಕಡಲ ವಲಯದಲ್ಲಿ ಮಾಡಲಾಗುತ್ತಿರುವ ಪರಿವರ್ತನಾತ್ಮಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

ಕಾರ್ಯತಂತ್ರದಲ್ಲಿ ಮಹತ್ವದ್ದಾಗಿರುವ ವಿಳಿಂಜಂ ಬಂದರನ್ನು ಪ್ರಮುಖ ಆದ್ಯತೆಯ ಯೋಜನೆಯಾಗಿ ಗುರುತಿಸಲಾಗಿದೆ. ಇದು ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು, ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸರಕು ಸಾಗಣೆಗಾಗಿ ವಿದೇಶಿ ಬಂದರುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ. ಸುಮಾರು 20 ಮೀಟರ್ ಗಳಷ್ಟು ನೈಸರ್ಗಿಕ ಆಳವಾದ ಡ್ರಾಫ್ಟ್ ಮತ್ತು ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ವ್ಯಾಪಾರ ಮಾರ್ಗಗಳಿಗೆ ಹತ್ತಿರವಿರುವ ಕಾರಣದಿಂದಾಗಿ ಇದು ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Digi Yatra Crosses 10 Cr Journeys: How India’s aviation revolution under PM Modi is making air travel fast, accessible

Media Coverage

Digi Yatra Crosses 10 Cr Journeys: How India’s aviation revolution under PM Modi is making air travel fast, accessible
NM on the go

Nm on the go

Always be the first to hear from the PM. Get the App Now!
...
Prime Minister congratulates Indian contingent on winning 19 medals at 22nd Asian U20 Athletics Championships
June 01, 2026

The Prime Minister, Shri Narendra Modi today congratulated the Indian contingent for its outstanding performance at the 22nd Asian U20 Athletics Championships.

The Prime Minister congratulated the Indian contingent on winning 19 medals, including 10 Gold medals, at the Championships.

The Prime Minister said that the achievement reflects the determination and excellence of India’s young athletes.

He expressed hope that these accomplishments would inspire many more young Indians to pursue sports in the years to come.

The Prime Minister wrote on X;

“Congratulations to the Indian contingent at the 22nd Asian U20 Athletics Championships for winning 19 medals, including 10 Golds. This outstanding performance reflects the determination and excellence of India’s young athletes. May these achievements inspire many more young Indians to pursue sports in the years to come.”