ʻಜಾಗತಿಕ ವ್ಯಾಪಾರ ಮೇಳʼ ಮತ್ತು ʻಇನ್ವೆಸ್ಟ್ ಯುಪಿ-2.0ʼಗೆ ಚಾಲನೆ ನೀಡಿದ ಪ್ರಧಾನಿ
ಪ್ರಧಾನಮಂತ್ರಿಯವರ ನಾಯಕತ್ವ ಮತ್ತು ಉತ್ತರಪ್ರದೇಶದಲ್ಲಿ ಬೆಳವಣಿಗೆಯ ಅವಕಾಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉದ್ಯಮ ನಾಯಕರು
"ಈಗ ಉತ್ತರ ಪ್ರದೇಶವು ಉತ್ತಮ ಆಡಳಿತ, ಉತ್ತಮ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದೆ"
"ಇಂದು ಉತ್ತರ ಪ್ರದೇಶವು ಭರವಸೆ ಮತ್ತು ಸ್ಫೂರ್ತಿಯ ಮೂಲವಾಗಿದೆ"
"ದೇಶದ ಪ್ರತಿಯೊಬ್ಬ ನಾಗರಿಕನು ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ಬಯಸುತ್ತಾನೆ ಮತ್ತು 'ವಿಕಸಿತ ಭಾರತ'ಕ್ಕೆ ಸಾಕ್ಷಿಯಾಗಲು ಬಯಸುತ್ತಾನೆ"
"ಇಂದು, ಭಾರತವು ಕೈಗೊಂಡಿರುವ ಸುಧಾರಣೆಗಳು ಬಲವಂತದಿಂದಲ್ಲ, ಬದಲಿಗೆ ದೃಢನಿಶ್ಚಯದಿಂದ"
"ಹೊಸ ಮೌಲ್ಯ ಮತ್ತು ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಉತ್ತರ ಪ್ರದೇಶವು ಚಾಂಪಿಯನ್ ಆಗಿ ಹೊರಹೊಮ್ಮಿದೆ"
"ಒಂದೆಡೆ ಡಬಲ್ ಎಂಜಿನ್ ಸರ್ಕಾರದ ಸಂಕಲ್ಪ ಮತ್ತು ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿರುವ ಅಗಾಧ ಸಾಧ್ಯತೆಗಳು- ಇದಕ್ಕಿಂತ ಉತ್ತಮ ಪಾಲುದಾರಿಕೆ ಮತ್ತೊಂದಿರಲು ಸಾಧ್ಯವಿಲ್ಲ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಕ್ನೋದಲ್ಲಿ `ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ-2023ʼ ಅನ್ನು ಉದ್ಘಾಟಿಸಿದರು. ಇದೇ ಕಾರ್ಯಕ್ರಮದಲ್ಲಿ, ʻಜಾಗತಿಕ ವ್ಯಾಪಾರ ಮೇಳʼ ಮತ್ತು ʻಇನ್ವೆಸ್ಟ್ ಯುಪಿ-2.0ʼಗೆ ಸಹ ಅವರು ಚಾಲನೆ ನೀಡಿದರು. ʻಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ-2023ʼ ಉತ್ತರ ಪ್ರದೇಶ ಸರ್ಕಾರದ ಪ್ರಮುಖ ಹೂಡಿಕೆ ಶೃಂಗಸಭೆಯಾಗಿದ್ದು, ಇದು ವಿಶ್ವದ ನಾನಾ ಭಾಗಗಳ ನೀತಿ ನಿರೂಪಕರು, ಉದ್ಯಮ ನಾಯಕರು, ಶಿಕ್ಷಣ ತಜ್ಞರು, ಚಿಂತಕರು ಮತ್ತು ನಾಯಕರನ್ನು ಒಗ್ಗೂಡಿಸುತ್ತದೆ. ಪ್ರಧಾನಮಂತ್ರಿಯವರು ವಸ್ತುಪ್ರದರ್ಶನದ ಸಾಲುಗಳಲ್ಲೂ ಹೆಜ್ಜೆ ಹಾಕುವ ಮೂಲಕ ಅದರ ಸಂಕ್ಷಿಪ್ತ ನೋಟವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಉದ್ಯಮದ ಮುಖಂಡರು ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಶ್ರೀ ಕುಮಾರ್ ಮಂಗಲಂ ಬಿರ್ಲಾ ಅವರು ಮಾತನಾಡಿ, “ಭಾರತವು ಸದೃಢ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಗಮನಾರ್ಹ ಮಟ್ಟದಲ್ಲಿ ಪ್ರದರ್ಶಿಸುತ್ತಿದೆ. ದೇಶದ ಆರ್ಥಿಕ ಕ್ಷೇತ್ರಕ್ಕೆ ಹೊಸ ಶಕ್ತಿಯನ್ನು ತುಂಬಿದ ಕೀರ್ತಿ ಪ್ರಧಾನ ಮಂತ್ರಿಯವರಿಗೆ ಸಲ್ಲುತ್ತದೆ,ʼʼ ಎಂದರು. ಶ್ರೀ ಮುಖೇಶ್ ಅಂಬಾನಿ ಅವರು ಮಾತನಾಡಿ, “ಈ ವರ್ಷದ ಬಜೆಟ್ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಅಡಿಪಾಯ ಹಾಕಿದೆ,ʼʼ ಎಂದು ಹೇಳಿದರು. ಬಂಡವಾಳ ವೆಚ್ಚಕ್ಕೆ ಅಧಿಕ ನಿಧಿ ಹಂಚಿಕೆಯು ಹೆಚ್ಚಿನ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಕಾರಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ದೇಶವು ಭಾರಿ ಪರಿವರ್ತನೆಗೆ ಸಾಕ್ಷಿಯಾಗಿದೆ. ಜೊತೆಗೆ, ಪ್ರಧಾನ ಮಂತ್ರಿಯವರ ದೂರದೃಷ್ಟಿಯುತ ಮಾರ್ಗದರ್ಶನ ಹಾಗೂ ಕಾರ್ಯಾನುಷ್ಠಾನದತ್ತ ಅವರ ತೀಕ್ಷ್ಣ ಗಮನದಿಂದಾಗಿ ದಿಟ್ಟ ನವ ಭಾರತವು ರೂಪುಗೊಳ್ಳುತ್ತಿದೆ ಎಂದು ಅವರು ಹೇಳಿದರು. ʻಟಾಟಾ ಸನ್ಸ್ʼನ ಅಧ್ಯಕ್ಷರಾದ ಶ್ರೀ ನಟರಾಜನ್ ಚಂದ್ರಶೇಖರನ್ ರವರು ಮಾತನಾಡಿ, “ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವ ಅವಕಾಶ ಸೃಷ್ಟಿಯಾಗಿದೆ,ʼʼ ಎಂದರು. "ಇದು ಕೇವಲ ಆರ್ಥಿಕ ಬೆಳವಣಿಗೆ ಮಾತ್ರವಲ್ಲ, ಪ್ರಧಾನಿಯವರು 360 ಡಿಗ್ರಿ ಅಭಿವೃದ್ಧಿಯನ್ನು ಶಕ್ತಗೊಳಿಸಿದ್ದಾರೆ. ಬಜೆಟ್‌ನಲ್ಲಿನ ಮಾಡಲಾದ ಅನುದಾನಗಳು, ಮೂಲಸೌಕರ್ಯ ಮತ್ತು ಅನುಭೋಗದಿಂದ ಮುನ್ನಡೆಸಲ್ಪಡುವ ಪ್ರಗತಿಯನ್ನು ಖಾತರಿಪಡಿಸುತ್ತವೆ. ಜೊತೆಗೆ ನಾವು ಗ್ರಾಮೀಣ ಪ್ರದೇಶಗಳ ಬೆಳವಣಿಗೆಗೂ ಸಾಕ್ಷಿಯಾಗಲಿದ್ದೇವೆ,ʼʼ ಎಂದು ಅವರು ಹೇಳಿದರು. “ಭಾರತವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ, ʻಜ್ಯೂರಿಚ್ ವಿಮಾನ ನಿಲ್ದಾಣʼವು ತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ,ʼʼ ಎಂದು ʻಜ್ಯೂರಿಚ್ ವಿಮಾನ ನಿಲ್ದಾಣʼದ ಏಷ್ಯಾದ ಸಿಇಒ ಡೇನಿಯಲ್ ಬಿರ್ಚರ್ ಹೇಳಿದರು. ಭಾರತದೊಂದಿಗಿನ ದೀರ್ಘಕಾಲೀನ ಪಾಲುದಾರಿಕೆಯನ್ನು ಉಲ್ಲೇಖಿಸಿದ ಅವರು, “ಎರಡು ದಶಕಗಳ ಹಿಂದೆ ಜ್ಯೂರಿಚ್ ವಿಮಾನ ನಿಲ್ದಾಣವು ಬೆಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಬೆಂಬಲ ನೀಡಿತ್ತು. ಪ್ರಸ್ತುತ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು. ʻಯಮುನಾ ಎಕ್ಸ್‌ಪ್ರೆಸ್ ವೇʼಯೊಂದಿಗೆ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೇರ ಸಂಪರ್ಕವನ್ನು ಅವರು ಒತ್ತಿ ಹೇಳಿದರು. ʻಡಿಕ್ಸನ್ ಟೆಕ್ನಾಲಜೀಸ್ʼನ ಅಧ್ಯಕ್ಷರಾದ ಶ್ರೀ ಸುನಿಲ್ ವಚಾನಿ ಅವರು ಮಾತನಾಡಿ, “ಭಾರತದಲ್ಲಿ ಮಾರಾಟವಾಗುವ ಸುಮಾರು 65% ಮೊಬೈಲ್ ಫೋನ್‌ಗಳನ್ನು ಉತ್ತರ ಪ್ರದೇಶದಲ್ಲಿ ತಯಾರಿಸಲಾಗುತ್ತದೆ ಮತ್ತು ಉತ್ತರ ಪ್ರದೇಶ ಸರ್ಕಾರದ ಕ್ರಿಯಾತ್ಮಕ ನೀತಿಗಳು ರಾಜ್ಯವನ್ನು ಪ್ರಧಾನ ಉತ್ಪಾದನಾ ಕೇಂದ್ರವನ್ನಾಗಿ ಮಾಡಿವೆ,ʼʼ ಎಂದು ಹೇಳಿದರು. ಇಂದು ʻಡಿಕ್ಸನ್ ಟೆಕ್ನಾಲಜೀಸ್ʼ ಸುಮಾರು 100 ಶತಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡಲು ನೋಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಎಲ್ಲಾ ಉದ್ಯಮದ ನಾಯಕರು ಉತ್ತರ ಪ್ರದೇಶದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೂಡಿಕೆದಾರ ಸಮುದಾಯ, ಉದ್ಯಮದ ನಾಯಕರು ಮತ್ತು ನೀತಿ ನಿರೂಪಕರನ್ನು ದೇಶದ ಪ್ರಧಾನಿಯಾಗಿ ಮತ್ತು ಉತ್ತರ ಪ್ರದೇಶದ ಸಂಸತ್ ಸದಸ್ಯರಾಗಿ ಸ್ವಾಗತಿಸಿದರು.

ಉತ್ತರ ಪ್ರದೇಶ ತನ್ನ ಸಾಂಸ್ಕೃತಿಕ ವೈಭವ, ವೈಭವಯುತ ಇತಿಹಾಸ ಮತ್ತು ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ರಾಜ್ಯದ ಸಾಮರ್ಥ್ಯಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಉತ್ತರ ಪ್ರದೇಶಕ್ಕೆ ಅಂಟಿಕೊಂಡಿರುವ ಕಳಪೆ ಅಭಿವೃದ್ಧಿ, ʻಬಿಮಾರುʼ(ರೋಗಗ್ರಸ್ಥ ರಾಜ್ಯ) ಹಾಗೂ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯಂತಹ ಅನಗತ್ಯ ಕಳಂಕಗಳ ಬಗ್ಗೆ ಗಮನ ಸೆಳೆದರು. ಹಿಂದಿನ ಕಾಲದಲ್ಲಿ ಪ್ರತಿದಿನವೂ ಪತ್ತೆಯಾಗುತ್ತಿದ್ದ ಸಾವಿರಾರು ಕೋಟಿ ರೂ.ಗಳ ಹಗರಣಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. 5-6 ವರ್ಷಗಳಲ್ಲಿ ಉತ್ತರ ಪ್ರದೇಶವು ಹೊಸ ಹೆಗ್ಗುರುತನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಹೇಳಿದರು. ಈಗ ಉತ್ತರ ಪ್ರದೇಶವು ಉತ್ತಮ ಆಡಳಿತ, ಉತ್ತಮ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದೆ ಎಂದರು. "ಸಂಪತ್ತಿನ ಸೃಷ್ಟಿಕರ್ತರಿಗೆ ಇಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ" ಎಂದು ಪ್ರಧಾನಿ ಹೇಳಿದರು. ಉತ್ತರ ಪ್ರದೇಶದಲ್ಲಿ ಉತ್ತಮ ಮೂಲಸೌಕರ್ಯದ ಉಪಕ್ರಮಗಳು ಫಲ ನೀಡುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಶೀಘ್ರದಲ್ಲೇ ಉತ್ತರ ಪ್ರದೇಶವು 5 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಅವರು ಹೇಳಿದರು. ʻಸರಕು-ಸಾಗಣೆ ಕಾರಿಡಾರ್ʼ ರಾಜ್ಯವನ್ನು ನೇರವಾಗಿ ಮಹಾರಾಷ್ಟ್ರದ ಸಮುದ್ರ ತೀರದೊಂದಿಗೆ ಸಂಪರ್ಕಿಸುತ್ತದೆ. ಸುಗಮ ವಾಣಿಜ್ಯ-ವಹಿವಾಟನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸರ್ಕಾರದ ಚಿಂತನೆಯಲ್ಲಿ ಆಗಿರುವ ಅರ್ಥಪೂರ್ಣ ಬದಲಾವಣೆ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. "ಇಂದು ಉತ್ತರ ಪ್ರದೇಶವು ಭರವಸೆ ಮತ್ತು ಸ್ಫೂರ್ತಿಯ ಮೂಲವಾಗಿ ಮಾರ್ಪಟ್ಟಿದೆ", ಎಂದು ಪ್ರಧಾನಿ ಹೇಳಿದರು. ಜಾಗತಿಕ ವೇದಿಕೆಯಲ್ಲಿ ಭಾರತವು ಹೇಗೆ ಪ್ರಕಾಶಮಾನವಾದ ತಾಣವಾಗಿ ಮಾರ್ಪಟ್ಟಿದೆಯೋ ಹಾಗೆಯೇ ಉತ್ತರ ಪ್ರದೇಶವು ರಾಷ್ಟ್ರದ ಪಾಲಿಗೆ ಪ್ರಕಾಶಮಾನವಾದ ತಾಣವಾಗಿ ಮಾರ್ಪಟ್ಟಿದೆ ಎಂದು ಅವರು ಒತ್ತಿಹೇಳಿದರು.

ಭಾರತವು ಸಾಂಕ್ರಾಮಿಕ ರೋಗ ಮತ್ತು ಯುದ್ಧದ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದ್ದು ಮಾತ್ರವಲ್ಲದೆ, ತ್ವರಿತ ಚೇತರಿಕೆಯನ್ನು ಪ್ರದರ್ಶಿಸಿತು. ಇದರಿಂದಾಗಿ ಇಂದು ವಿಶ್ವದ ಪ್ರತಿಯೊಂದು ವಿಶ್ವಾಸಾರ್ಹ ಧ್ವನಿಯೂ ಭಾರತೀಯ ಆರ್ಥಿಕತೆಯ ಏರುಗತಿಯ ಬಗ್ಗೆ ಆಶಾವಾದ ಹೊಂದಿದೆ ಎಂದು ಪ್ರಧಾನಿ ಹೇಳಿದರು.

ಭಾರತೀಯ ಸಮಾಜ ಮತ್ತು ಭಾರತದ ಯುವಜನರ ಚಿಂತನೆ ಮತ್ತು ಆಕಾಂಕ್ಷೆಗಳಲ್ಲಿ ಆಗುತ್ತಿರುವ ಬೃಹತ್ ಬದಲಾವಣೆಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಅಭಿವೃದ್ಧಿಯ ಪಥದಲ್ಲಿ ಸಾಗಲು ಬಯಸುತ್ತಾರೆ ಮತ್ತು ಮುಂಬರುವ ದಿನಗಳಲ್ಲಿ 'ವಿಕಸಿತ ಭಾರತ'ಕ್ಕೆ ಸಾಕ್ಷಿಯಾಗಲು ಬಯಸುತ್ತಾರೆ ಎಂದು ಅವರು ಒತ್ತಿಹೇಳಿದರು. ಭಾರತೀಯ ಸಮಾಜದ ಆಕಾಂಕ್ಷೆಗಳು ಸರ್ಕಾರಕ್ಕೆ ಪ್ರೇರಕ ಶಕ್ತಿಯಾಗಿ ಮಾರ್ಪಟ್ಟಿವೆ. ಇದು ದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಗಾತ್ರ ಮತ್ತು ಜನಸಂಖ್ಯೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತದಂತೆ ಉತ್ತರಪ್ರದೇಶದಲ್ಲೂ ಮಹತ್ವಾಕಾಂಕ್ಷೆಯ ಸಮಾಜ ನಿಮಗಾಗಿ ಕಾಯುತ್ತಿದೆ ಎಂದು ಹೂಡಿಕೆದಾರರಿಗೆ ತಿಳಿಸಿದರು.

ಡಿಜಿಟಲ್ ಕ್ರಾಂತಿಯಿಂದಾಗಿ, ಉತ್ತರ ಪ್ರದೇಶ ಸಮಾಜವು ಎಲ್ಲರನ್ನೂ ಒಳಗೊಂಡ ಮತ್ತು ಸಂಪರ್ಕಿತ ರಾಜ್ಯವಾಗಿ ಬೆಳೆದಿದೆ ಎಂದು ಪ್ರಧಾನಿ ಹೇಳಿದರು. "ಒಂದು ಮಾರುಕಟ್ಟೆಯಾಗಿ, ಭಾರತವು ಸೀಮಾತೀತವಾಗುತ್ತಿದೆ. ಕಾರ್ಯವಿಧಾನಗಳನ್ನು ಸರಳೀಕರಿಸಲಾಗುತ್ತಿದೆ. "ಇಂದು, ಭಾರತವು ಸುಧಾರಣೆಗಳನ್ನು ಬಲವಂತದಿಂದ ಮಾಡುತ್ತಿಲ್ಲ, ಬದಲಿಗೆ ದೃಢನಿಶ್ಚಯದಿಂದ ಮಾಡುತ್ತಿದೆ,"ಎಂದು ಅವರು ಹೇಳಿದರು.

ಭಾರತವು ಇಂದು ನೈಜವಾಗಿ ವೇಗ ಮತ್ತು ಅಗಾಧತೆಯ ಪಥದಲ್ಲಿ ಸಾಗಲು ಆರಂಭಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಏಕೆಂದರೆ ಇಂದು ದೇಶದ ಬಹಳ ದೊಡ್ಡ ಭಾಗದ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲಾಗಿದೆ ಮತ್ತು ಈಗ ಅವರು ಮೂಲಭೂತ ಅಗತ್ಯಗಳ ಮಟ್ಟವನ್ನು ಮೀರಿ ಯೋಚಿಸುತ್ತಿದ್ದಾರೆ. ಇದು ಭಾರತದ ಮೇಲಿನ ನಂಬಿಕೆಗೆ ದೊಡ್ಡ ಕಾರಣವಾಗಿದೆ ಎಂದು ಹೇಳಿದರು.

ಬಜೆಟ್‌ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಮೂಲಸೌಕರ್ಯಕ್ಕೆ ಹೆಚ್ಚುತ್ತಿರುವ ಅನುದಾನದ ಬಗ್ಗೆ ಒತ್ತಿ ಹೇಳಿದರು. ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಮೂಲಸೌಕರ್ಯಗಳಲ್ಲಿ ಹೂಡಿಕೆದಾರರಿಗೆ ಇರುವ ಅವಕಾಶಗಳ ಬಗ್ಗೆ ಮಾತನಾಡಿದರು. ಅಂತೆಯೇ, ಭಾರತವು ಅಳವಡಿಸಿಕೊಂಡಿರುವ ʻಹಸಿರು ಬೆಳವಣಿಗೆʼಯ ಹಾದಿಯಲ್ಲಿನ ಅವಕಾಶಗಳಿಗೆ ಅವರು ಹೂಡಿಕೆದಾರರನ್ನು ಆಹ್ವಾನಿಸಿದರು. ಈ ವರ್ಷದ ಬಜೆಟ್‌ನಲ್ಲಿ ಇಂಧನ ಪರಿವರ್ತನೆಗಾಗಿ 35,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೊಸ ಮೌಲ್ಯ ಮತ್ತು ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವಲ್ಲಿ ಉತ್ತರ ಪ್ರದೇಶ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ರಾಜ್ಯದಲ್ಲಿ ಇರುವ ಸಾಂಪ್ರದಾಯಿಕ ಮತ್ತು ಆಧುನಿಕ ʻಎಂಎಸ್ಎಂಇʼಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ಬಲಿಷ್ಠ ಜಾಲವನ್ನು ಪ್ರಧಾನಿ ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ಉತ್ತರ ಪ್ರದೇಶವನ್ನು ಭಾರತದ ಜವಳಿ ಕೇಂದ್ರವನ್ನಾಗಿ ಮಾಡಿರುವ `ಭದೋಹಿ’ ಮತ್ತು `ವಾರಣಾಸಿ’ ರೇಷ್ಮೆಯ ಉದಾಹರಣೆ ನೀಡಿದರು. ಭಾರತದ ಶೇ.60ರಷ್ಟು ಮೊಬೈಲ್‌ ಫೋನ್‌ಗಳು ಮತ್ತು ಗರಿಷ್ಠ ಮೊಬೈಲ್ ಬಿಡಿಭಾಗಗಳನ್ನು ಉತ್ತರಪ್ರದೇಶದಲ್ಲಿ ತಯಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ದೇಶದ ಎರಡು ರಕ್ಷಣಾ ಕಾರಿಡಾರ್‌ಗಳಲ್ಲಿ ಒಂದನ್ನು ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಾರತೀಯ ಸೇನೆಗೆ ʻಮೇಡ್ ಇನ್ ಇಂಡಿಯಾʼ ರಕ್ಷಣಾ ವ್ಯವಸ್ಥೆಗಳು ಮತ್ತು ವೇದಿಕೆಗಳನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದರು.

ಹೈನುಗಾರಿಕೆ, ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿರುವ ಅವಕಾಶಗಳ ಬಗ್ಗೆ ಪ್ರಧಾನಿ ಮಾಹಿತಿ ನೀಡಿದರು. ಖಾಸಗಿ ವಲಯದ ಭಾಗವಹಿಸುವಿಕೆ ಇನ್ನೂ ಸೀಮಿತವಾಗಿರುವ ಏಕೈಕ ಕ್ಷೇತ್ರ ಇದೆಂದು ಎಂದು ಅವರು ಉಲ್ಲೇಖಿಸಿದರು. ಆಹಾರ ಸಂಸ್ಕರಣಾ ಉದ್ಯಮದಲ್ಲಿ ʻಉತ್ಪಾದನೆ ಆಧರಿತ ಸಹಾಯಧನʼದ(ಪಿಎಲ್ಐ) ಬಗ್ಗೆ ಹೂಡಿಕೆದಾರರಿಗೆ ತಿಳಿಸಿದರು. ರೈತರಿಗೆ ಬಿತ್ತನೆಯಿಂದ ಹಿಡಿದು ಕೊಯ್ಲಿನ ನಂತರದ ನಿರ್ವಹಣೆಯವರೆಗೆ ತಡೆರಹಿತ ಆಧುನಿಕ ವ್ಯವಸ್ಥೆಯನ್ನು ಖಾತರಿಪಡಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಸಣ್ಣ ಹೂಡಿಕೆದಾರರು ಕೃಷಿ ಮೂಲಸೌಕರ್ಯ ನಿಧಿಗಳನ್ನು ಬಳಸಬಹುದು ಎಂದು ಅವರು ಹೇಳಿದರು.

ಬೆಳೆ ವೈವಿಧ್ಯೀಕರಣ, ರೈತರಿಗೆ ಹೆಚ್ಚಿನ ಸಂಪನ್ಮೂಲಗಳು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ನೈಸರ್ಗಿಕ ಕೃಷಿಯತ್ತ ಸರ್ಕಾರ ಗಮನ ಹರಿಸಿರುವುದಾಗಿ ತಿಳಿಸಿದರು. ಉತ್ತರ ಪ್ರದೇಶದಲ್ಲಿ ಗಂಗಾನದಿಯ ಎರಡೂ ಬದಿಗಳಲ್ಲಿ 5 ಕಿ.ಮೀ.ವರೆಗೆ ನೈಸರ್ಗಿಕ ಕೃಷಿ ಪ್ರಾರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ 10 ಸಾವಿರ ʻಬಯೋ ಇನ್‌ಪುಟ್‌ʼ ಸಂಪನ್ಮೂಲ ಕೇಂದ್ರಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಭಾರತದಲ್ಲಿ ʻಶ್ರೀ ಅನ್ನʼ ಎಂದು ಕರೆಯಲ್ಪಡುವ ಸಿರಿಧಾನ್ಯಗಳ ಪೌಷ್ಠಿಕಾಂಶದ ಮೌಲ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತದ ʻಶ್ರೀ ಅನ್ನʼವು ಜಾಗತಿಕ ಪೌಷ್ಠಿಕಾಂಶ ಭದ್ರತೆಯ ಅಗತ್ಯಗಳನ್ನು ಪೂರೈಸುವಂತಾಗಲು ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು. ಹೂಡಿಕೆದಾರರು ʻರೆಡಿ ಟು ಈಟ್ʼ ಮತ್ತು ʻರೆಡಿ ಟು ಕುಕ್ʼ ಅವಕಾಶಗಳನ್ನು ʻಶ್ರೀ ಅನ್ನʼದಲ್ಲಿ ಕಂಡುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಪ್ರಧಾನಿ ಬೆಳಕು ಚೆಲ್ಲಿದರು. ʻಮಹಾಯೋಗಿ ಗುರು ಗೋರಖ್ ನಾಥ್ ಆಯುಷ್ ವಿಶ್ವವಿದ್ಯಾಲಯʼ, ʻಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ವಿಶ್ವವಿದ್ಯಾಲಯʼ, ʻರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯʼ ಮತ್ತು ʻಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯʼಗಳು ವಿವಿಧ ರೀತಿಯ ಕೌಶಲ್ಯಗಳನ್ನು ನೀಡುವ ಸಂಸ್ಥೆಗಳು ಎಂದು ಅವರು ಪಟ್ಟಿ ಮಾಡಿದರು. ʻಕೌಶಲ್ಯ ಅಭಿವೃದ್ಧಿ ಮಿಷನ್ʼ ಅಡಿಯಲ್ಲಿ 16 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಉತ್ತರ ಪ್ರದೇಶ ಸರ್ಕಾರವು ʻಪಿಜಿಐ ಲಕ್ನೋʼ ಮತ್ತು ʻಐಐಟಿ ಕಾನ್ಪುರʼದಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಪ್ರಾರಂಭಿಸಿದೆ ಮತ್ತು ದೇಶದ ನವೋದ್ಯಮ ಕ್ರಾಂತಿಯಲ್ಲಿ ರಾಜ್ಯದ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸಿದೆ. ಮುಂಬರುವ ವರ್ಷಗಳಲ್ಲಿ ಉತ್ತರ ಪ್ರದೇಶ ಸರ್ಕಾರವು 100 ಇನ್‌ಕ್ಯೂಬೇಟರ್‌ಗಳು ಮತ್ತು ಮೂರು ಅತ್ಯಾಧುನಿಕ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಿದೆ. ಇದರಿಂದ ಪ್ರತಿಭಾವಂತ ಮತ್ತು ನುರಿತ ಯುವಕರ ದೊಡ್ಡ ಪಡೆ ಸೃಷ್ಟಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಒಂದೆಡೆ ಡಬಲ್ ಎಂಜಿನ್ ಸರ್ಕಾರದ ಸಂಕಲ್ಪ ಮತ್ತೊಂದೆಡೆ ಉತ್ತರ ಪ್ರದೇಶ ರಾಜ್ಯದಲ್ಲಿರುವ ಅಗಾಧ ಸಾಧ್ಯತೆಗಳ ನಡುವಿನ ದೃಢವಾದ ಪಾಲುದಾರಿಕೆಯನ್ನು ಪ್ರಧಾನಿ ವಿಶೇಷವಾಗಿ ಉಲ್ಲೇಖಿಸಿದರು. ಹೂಡಿಕೆದಾರರು ಮತ್ತು ಉದ್ಯಮದ ನಾಯಕರು ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ, ಸಮೃದ್ಧಿಯ ಭಾಗವಾಗಬೇಕೆಂದು ಅವರು ಒತ್ತಾಯಿಸಿದರು. "ವಿಶ್ವದ ಸಮೃದ್ಧಿ ಭಾರತದ ಸಮೃದ್ಧಿಯಲ್ಲಿ ಅಡಗಿದೆ ಮತ್ತು ಸಮೃದ್ಧಿಯ ಈ ಪ್ರಯಾಣದಲ್ಲಿ ನಿಮ್ಮ ಭಾಗವಹಿಸುವಿಕೆ ಬಹಳ ಮುಖ್ಯ" ಎಂದು ಹೇಳುವ ಮೂಲಕ ಪ್ರಧಾನಿ ತಮ್ಮ ಮಾತು ಮುಕ್ತಾಯಗೊಳಿಸಿದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸರ್ಕಾರದ ವಿವಿಧ ಸಚಿವರು, ವಿದೇಶಿ ಗಣ್ಯರು ಮತ್ತು ಉದ್ಯಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

2023ರ ಫೆಬ್ರವರಿ 10ರಿಂದ 12 ರವರೆಗೆ ನಿಗದಿಯಾಗಿರುವ ʻಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ-2023ʼ ಉತ್ತರ ಪ್ರದೇಶ ಸರ್ಕಾರದ ಪ್ರಮುಖ ಹೂಡಿಕೆ ಶೃಂಗಸಭೆಯಾಗಿದ್ದು, ಇದು ವಿಶ್ವದ ನಾನಾ ಭಾಗಗಳ ನೀತಿ ನಿರೂಪಕರು, ಉದ್ಯಮ ನಾಯಕರು, ಶಿಕ್ಷಣ ತಜ್ಞರು, ಚಿಂತಕರು ಮತ್ತು ನಾಯಕರನ್ನು ಒಗ್ಗೂಡಿಸುತ್ತದೆ.

ʻಇನ್ವೆಸ್ಟ್‌ ಯುಪಿ-2.0ʼ, ಎಂಬುದು ಉತ್ತರ ಪ್ರದೇಶದ ಸಮಗ್ರ, ಹೂಡಿಕೆದಾರ ಕೇಂದ್ರಿತ ಮತ್ತು ಸೇವಾ ಆಧಾರಿತ ಹೂಡಿಕೆ ಪರಿಸರ ವ್ಯವಸ್ಥೆಯಾಗಿದೆ. ಇದು ಪ್ರಸ್ತುತವೆನಿಸಿದ, ಉತ್ತಮವಾಗಿ ವ್ಯಾಖ್ಯಾನಿಸಲಾದ, ಪ್ರಮಾಣೀಕೃತ ಸೇವೆಗಳನ್ನು ಹೂಡಿಕೆದಾರರಿಗೆ ತಲುಪಿಸಲು ಪ್ರಯತ್ನಿಸುತ್ತದೆ.

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
With HPV vaccine rollout, AIIMS oncologist says it’s the beginning of the end for cervical cancer in India

Media Coverage

With HPV vaccine rollout, AIIMS oncologist says it’s the beginning of the end for cervical cancer in India
NM on the go

Nm on the go

Always be the first to hear from the PM. Get the App Now!
...
Prime Minister congratulates Jammu and Kashmir team on their first-ever Ranji Trophy victory
February 28, 2026

The Prime Minister has congratulated the Jammu and Kashmir team for their first-ever Ranji Trophy win.

The Prime Minister stated that this historic triumph reflects the remarkable grit, discipline, and passion of the team. Highlighting that it is a proud moment for the people of Jammu and Kashmir, he noted that the victory underscores the growing sporting passion and talent in the region.

The Prime Minister expressed hope that this feat will inspire many young athletes to dream big and play more.

The Prime Minister shared on X post;

"Congratulations to the Jammu and Kashmir team for their first ever Ranji Trophy win! This historic triumph reflects remarkable grit, discipline and passion of the team. It is a proud moment for the people of Jammu and Kashmir and it highlights the growing sporting passion and talent there. May this feat inspire many young athletes to dream big and play more."