ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತಿನ ಏಕಲ ವಿದ್ಯಾಲಯ ಸಂಘಟನೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಲ್ಲಿ ಶಿಕ್ಷಣವನ್ನು ಉತ್ತೇಜಿಸುತ್ತಿರುವ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಏಕಲ ವಿದ್ಯಾಲಯ ಸಂಘಟನೆಯನ್ನು ಪ್ರಧಾನ ಮಂತ್ರಿ ಅವರು ಅಭಿನಂದಿಸಿದರು. ಭಾರತ ಮತ್ತು ನೇಪಾಳಗಳ ಅತ್ಯಂತ ದೂರ ಮತ್ತು ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ 2.8 ಮಿಲಿಯನ್ನಿಗೂ ಅಧಿಕ ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಒದಗಿಸಿ ಮತ್ತು ಜಾಗೃತಿ ಮೂಡಿಸುತ್ತಿರುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಘಟನೆಯ ಸ್ವಯಂಸೇವಕರು ವಹಿಸುತ್ತಿರುವ ಪಾತ್ರವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಂಡಾಡಿದರು.

ಭಾರತದಲ್ಲಿ ಸಂಘಟನೆಯ ಶಾಲೆಗಳ ಸಂಖ್ಯೆ 1 ಲಕ್ಷ ದಾಟಿರುವುದಕ್ಕೆ ಸಂಘಟನೆಯನ್ನು ಅಭಿನಂದಿಸಿದ ಪ್ರಧಾನ ಮಂತ್ರಿ ಅವರು, ಅಸಾಧ್ಯವಾದುದು ಎಂದು ಬಿಂಬಿಸಲ್ಪಟ್ಟಿದ್ದ ಗುರಿಯನ್ನು ಅರ್ಪಣಾ ಭಾವ , ಬದ್ದತೆ ಮತ್ತು ಸಂತೋಷದಿಂದ ಕೆಲಸ ಮಾಡುವುದರಿಂದ ತಲುಪಲು ಸಾಧ್ಯವಾಗುತ್ತದೆ ಎಂದರು. ಸಾಮಾಜಿಕ ಸೇವೆಗೆ ಅದರ ಬದ್ದತೆಯನ್ನು ಪರಿಗಣಿಸಿ ಸಂಘಟನೆಗೆ ಗಾಂಧಿ ಶಾಂತಿ ಪ್ರಶಸ್ತಿ ಲಭಿಸಿರುವುದನ್ನು ಪ್ರಧಾನವಾಗಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಇಡೀ ದೇಶಕ್ಕೆ ಇದು ಪ್ರೇರಣೆ ನೀಡುವಂತಹ ಆದರ್ಶ ಮಾದರಿಯಾಗಿದೆ ಎಂದೂ ಹೇಳಿದರು.

ಭಾರತದಲ್ಲಿ ಉತ್ತಮ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನಿಟ್ಟಿನಲ್ಲಿ ಭಾರತ ಸರಕಾರವೂ ಉತ್ಸಾಹದಿಂದ ಕಾರ್ಯ ನಿರತವಾಗಿದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಪರಿಶಿಷ್ಟ ಬುಡಕಟ್ಟು ಮಕ್ಕಳಿಗಾಗಿ ವಿದ್ಯಾರ್ಥಿ ವೇತನ, ಏಕಲ ಮಾದರಿ ನಿವಾಸಿ ಶಾಲೆ , ಪೋಷಣ ಅಭಿಯಾನ, ಇಂದ್ರಧನುಷ್ ಅಭಿಯಾನ ಮತ್ತು ಬುಡಕಟ್ಟು ಜನರ ಹಬ್ಬಗಳ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಇತ್ಯಾದಿ ಸವಲತ್ತುಗಳಿಂದಾಗಿ ಶಾಲೆ ತೊರೆಯುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಮತ್ತು ಇದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತೇಜನ ದೊರಕಿದೆ ಎಂದೂ ಹೇಳಿದರು.

2022 ರಲ್ಲಿ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಮಾಡುವಾಗ, ಸಂಘಟನೆಯು ತನ್ನ ಶಾಲಾ ಮಕ್ಕಳನ್ನು ಉತ್ತೇಜಿಸಲು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನರ ಪಾತ್ರವನ್ನು ಪ್ರಧಾನವಾಗಿ ಬಿಂಬಿಸುವ ವಿಶೇಷ ಕಿರು ನಾಟಕ ಹಾಗು ಸಂಗೀತ ಮತ್ತು ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸುವಂತೆಯೂ ಪ್ರಧಾನ ಮಂತ್ರಿ ಅವರು ಸಲಹೆ ಮಾಡಿದರು. ಸ್ಪರ್ಧೆಗಳನ್ನು ಈ ವರ್ಷ ಆರಂಭಿಸಬಹುದು ಮತ್ತು ಅದು ಎಲ್ಲರನ್ನು ಒಳಗೊಂಡು 2022 ರಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಪೂರ್ಣಗೊಳಿಸಬಹುದು ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಏಕಲ ಕುಟುಂಬವು ಸಾಂಪ್ರದಾಯಿಕ ಭಾರತೀಯ ಕ್ರೀಡೆಗಳ ಖೇಲ್ ಮಹಾಕುಂಭ (ಕ್ರೀಡಾ ಉತ್ಸವ) ವನ್ನೂ ಆಯೋಜಿಸಬಹುದು ಎಂದು ಸಲಹೆ ನೀಡಿದರು.

ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ನಗರಗಳ ವಿದ್ಯಾರ್ಥಿಗಳಿಂದ ಮತ್ತು ನಗರದ ವಿದ್ಯಾರ್ಥಿಗಳು ಗ್ರಾಮೀಣ ವಿದ್ಯಾರ್ಥಿಗಳಿಂದ ಕಲಿಯುವಂತಾಗಲು ಖಾಸಗಿ ಮತ್ತು ಸಾರ್ವಜನಿಕ ಶಾಲೆಗಳನ್ನು ಪರಸ್ಪರ ಜೋಡಿಸುವ ಚಿಂತನೆಯನ್ನು ಹಂಚಿಕೊಂಡ ಪ್ರಧಾನ ಮಂತ್ರಿ ಅವರು ಇದರಿಂದ “ಏಕ ಭಾರತ, ಶ್ರೇಷ್ಟ ಭಾರತ” ಚಿಂತನೆಗೆ ಹೆಚ್ಚಿನ ಬಲ ಬರುತ್ತದೆ ಎಂದರು. ಏಕಲ ಸಂಸ್ಥಾನವು ಇ-ಶಿಕ್ಷಣ ಮತ್ತು ಡಿಜಿಟಲೀಕರಣವನ್ನು ಅಳವಡಿಸಿಕೊಂಡಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಪ್ರಧಾನ ಮಂತ್ರಿ ಅವರು ಸಂಘಟನೆಯು ಎಲ್ಲಾ ಏಕಲ ವಿದ್ಯಾಲಯಗಳ ಪ್ರಗತಿಯನ್ನು ಸಮಗ್ರ ಮಾದರಿಯಲ್ಲಿ ನಿಗಾ ವಹಿಸಲು ಅನುಕೂಲವಾಗುವಂತೆ ಏಕ ರೀತಿಯ ಡ್ಯಾಶ್ ಬೋರ್ಡ್ ಅಳವಡಿಸಿಕೊಳ್ಳಬಹುದು ಎಂದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯ ತಿಥಿಯ ದಿನವನ್ನು ಸಭಿಕರಿಗೆ ನೆನಪಿಸಿದ ಪ್ರಧಾನ ಮಂತ್ರಿ ಅವರು ಏಕಲ ಸಂಘಟನೆಯು ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಸಮಾನ ಶಿಕ್ಷಣ ನೀಡಬೇಕು ಎನ್ನುವ ಬಾಬಾ ಸಾಹೇಬ್ ಅವರ ಕನಸನ್ನು ನನಸು ಮಾಡುವಲ್ಲಿ ಯಶಸ್ಸು ಸಾಧಿಸಿದೆ ಎಂದೂ ಹೇಳಿದರು. ನಾಲ್ಕು ದಶಕಗಳ ಕುಟುಂಬದ ಪ್ರಯಾಣದಲ್ಲಿ ಸಂಘಟನೆಯು “ಪಂಚತಂತ್ರ ಮಾದರಿ ಶಿಕ್ಷಣ”ದ ಮೂಲಕ ಚೌಕಟ್ಟಿನಾಚೆಗಿನ ಚಿಂತನೆಯನ್ನು ಬಹುವಾಗಿ ಉತ್ತೇಜಿಸಿದೆ . ಪೋಷಣ ವಟಿಕಾ ಮೂಲಕ ಪೋಷಣೆಯನ್ನು ಉತ್ತೇಜಿಸಿದೆ, ಕೃಷಿಯಲ್ಲಿ ಜೈವಿಕ ರಸ ಗೊಬ್ಬರಗಳ ಬಳಕೆಗೆ ತರಬೇತಿ, ಔಷಧೀಯ ಗುಣಗಳ ಗಿಡ ಮೂಲಿಕೆಗಳ ಬಳಕೆಯ ಕೌಶಲ್ಯದ ಬಗ್ಗೆ ತರಬೇತಿ, ಉದ್ಯೋಗ ತರಬೇತಿ ಮತ್ತು ಸಾಮಾಜಿಕ ಜಾಗೃತಿ ಬಗ್ಗೆ ತರಬೇತಿಗಳನ್ನು ಆಯೋಜಿಸಿದೆ ಎಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಕಲ ವಿದ್ಯಾಲಯದಲ್ಲಿ ತೇರ್ಗಡೆಯಾದವರು ಶಿಕ್ಷಣ , ನೀತಿ, ಕೈಗಾರಿಕೆ, ಮತ್ತು ಸೇನೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವುದನ್ನು ನೋಡುವುದು ತೃಪ್ತಿದಾಯಕ ಸಂಗತಿಯಾಗಿದೆ ಎಂದರು.

ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಏಕಲ ವಿದ್ಯಾಲಯಗಳ ಯಶಸ್ಸು ಗಾಂಧೀಜಿಯವರ ಆದರ್ಶಗಳಾದ ಗ್ರಾಮ ಸ್ವರಾಜ್ಯ, ಬಾಬಾ ಸಾಹೇಬ್ ಅವರ ಸಾಮಾಜಿಕ ನ್ಯಾಯ, ದೀನ ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ, ಮತ್ತು ಸ್ವಾಮಿ ವಿವೇಕಾನಂದರ ಕನಸಾದ ಭವ್ಯ ಭಾರತವನ್ನು ನನಸು ಮಾಡಲು ನೆರವಾಗಲಿದೆ ಎಂದೂ ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ತರು.

ಏಕಲ ವಿದ್ಯಾಲಯ ಕುರಿತು

ಏಕಲ ವಿದ್ಯಾಲಯ ಎಂಬುದು ಗ್ರಾಮೀಣ ಹಾಗು ಬುಡಕಟ್ಟು ಭಾರತ ಮತ್ತು ನೇಪಾಳದ ಸಮಗ್ರ ಹಾಗು ಸರ್ವಾಂಗೀಣ ಅಭಿವೃದ್ದಿಗಾಗಿರುವ ಆಂದೋಲನವಾಗಿದೆ. ಈ ಆಂದೋಲನದಡಿಯಲ್ಲಿ ಮುಖ್ಯ ಕಾರ್ಯಕ್ರಮವಾಗಿ ಪ್ರತೀ ಮಗುವಿಗೂ ಶಿಕ್ಷಣ ದೊರಕುವಂತಾಗಲು ಏಕ ಶಿಕ್ಷಕ ಶಾಲೆಗಳನ್ನು (ಏಕಲ ವಿದ್ಯಾಲಯ ಎಂಬ ಹೆಸರಿನಲ್ಲಿ ) ಭಾರತದಾದ್ಯಂತ ದೂರ ಮತ್ತು ದುರ್ಗಮ ಹಾಗು ಬುಡಕಟ್ಟು ಗ್ರಾಮ ಪ್ರದೇಶಗಳಲ್ಲಿ ತೆರೆಯಲಾಗುತ್ತದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Exports may hit $1 Tn in FY27 on new trade deals, tariff cuts

Media Coverage

Exports may hit $1 Tn in FY27 on new trade deals, tariff cuts
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10ಫೆಬ್ರವರಿ 2026
February 10, 2026

Stable Banks, Soaring Growth, Sectoral Wins: Celebrating India's Unstoppable Rise in 2026 Under PM Modi