We remember the great women and men who worked hard for India's freedom: PM Modi
We have to take the country ahead with the determination of creating a 'New India': PM Modi
In our nation, there is no one big or small...everybody is equal. Together we can bring a positive change in the nation: PM
We have to leave this 'Chalta Hai' attitude and think of 'Badal Sakta Hai': PM Modi
Security of the country is our priority, says PM Modi
GST has shown the spirit of cooperative federalism. The nation has come together to support GST: PM Modi
There is no question of being soft of terrorism or terrorists: PM Modi
India is about Shanti, Ekta and Sadbhavana. Casteism and communalism will not help us: PM
Violence in the name of 'Astha' cannot be accepted in India: PM Modi

ಪ್ರಿಯ ದೇಶವಾಸಿಗಳೇ,
ಸ್ವಾತಂತ್ರ್ಯೋತ್ಸವದ ಪವಿತ್ರ ದಿನದಂದು ಎಲ್ಲರಿಗೂ ಕೆಂಪುಕೋಟೆಯಿಂದ ನನ್ನ ಶುಭಾಶಯಗಳು.

ದೇಶದ ಜನ ಇಂದು ಜನ್ಮಾಷ್ಟಮಿಯ ಜತೆಗೆ  ಸ್ವಾತಂತ್ರ್ಯೋತ್ಸವನ್ನೂ ಆಚರಿಸುತ್ತಿದ್ದಾರೆ. ಇಲ್ಲಿ ಸಾಕಷ್ಟು ಬಾಲ ಕೃಷ್ಣನ ವೇಷಧಾರಿಗಳನ್ನು ನಾನು ನೋಡುತ್ತಿದ್ದೇನೆ. ನಮ್ಮ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಇತಿಹಾಸದಲ್ಲಿ ಸುದರ್ಶನ ಚಕ್ರಧಾರಿ ಮೋಹನನಿಂದ ಚಕ್ರಧಾರಿ ಮೋಹನ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಕೆಂಪುಕೋಟೆಯಿಂದ ದೇಶದ 125 ಕೋಟಿ ಪ್ರಜೆಗಳ ಪರವಾಗಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದವರು, ಅಪಾರ ಕಷ್ಟನಷ್ಟ ಎದುರಿಸಿದವರು ಮತ್ತು ಸ್ವಾತಂತ್ರ್ಯ, ಘನತೆ ಮತ್ತು    ಹೆಮ್ಮೆಗಾಗಿ ತ್ಯಾಗ ಮಾಡಿದವರಿಗೆ ನಾನು ತಲೆಬಾಗಿ ವಂದಿಸುತ್ತೇನೆ ಮತ್ತು ಗೌರವ ಸಲ್ಲಿಸುತ್ತೇನೆ.

ಕೆಲವೊಮ್ಮೆ ಸ್ವಾಭಾವಿಕ ಅವಘಡಗಳು ನಮಗೆ ಸವಾಲು ಒಡ್ಡುತ್ತವೆ. ದೇಶದ ಸಮೃದ್ಧಿಯಲ್ಲಿ ಉತ್ತಮ ಮಳೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಹವಾಮಾನ ಬದಲಾವಣೆಯಿಂದಾಗಿ ಅದು ಸ್ವಾಭಾವಿಕ ಅವಘಡವಾಗಿ ಪರಿಣಮಿಸುವುದಿದೆ. ದೇಶದ ಹಲವು ಭಾಗಗಳು ಇತ್ತೀಚೆಗೆ ಸ್ವಾಭಾವಿಕ ಅವಘಡಕ್ಕೆ ತುತ್ತಾಗಿವೆ. ಆಸ್ಪತ್ರೆಯೊಂದರಲ್ಲಿ ಮುಗ್ಧ ಮಕ್ಕಳು ಬಲಿಯಾಗಿವೆ. ಇಂಥ ಸಂಕಷ್ಟ ಮತ್ತು ದುಃಖದ ಸಂದರ್ಭದಲ್ಲಿ  125  ಕೋಟಿ ದೇಶವಾಸಿಗಳು ಅವರ ಹೆಗಲೆಣೆಯಾಗಿ ನಿಲ್ಲಲಿದ್ದಾರೆ. ಇಂಥ ಸಂಕಷ್ಟ ಸಮಯದಲ್ಲಿ   ಎಲ್ಲರ  ಒಳಿತಿಗಾಗಿ  ಸಾಧ್ಯವಿರುವುದನ್ನೆಲ್ಲ ಮಾಡಲಾಗುವುದು ಎಂದು ನಾನು ಖಾತ್ರಿ ನೀಡುತ್ತೇನೆ.

ಪ್ರಿಯ ದೇಶವಾಸಿಗಳೇ,
ಇದು ಸ್ವತಂತ್ರ ಭಾರತಕ್ಕೆ ವಿಶೇಷವಾದ ವರ್ಷ. ಕಳೆದ ವಾರ ನಾವು “ಭಾರತ ಬಿಟ್ಟು ತೊಲಗಿ’ ಆಂದೋಲನದ 75ನೇ ವರ್ಷವನ್ನು ಆಚರಿಸಿದ್ದೆವೆ. ಚಂಪಾರಣ್ ಸತ್ಯಾಗ್ರಹ ಮತ್ತು ಸಬರಮತಿ ಆಶ್ರಮದ ಶತಮಾನೋತ್ಸವವನ್ನೂ  ಈ ವರ್ಷ ಆಚರಿಸಲಿದ್ದೇವೆ. ಲೋಕಮಾನ್ಯ ತಿಲಕರು ನೀಡಿದ ಕರೆ,-  “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಹೇಳಿಕೆಯ ಶತಮಾನೋತ್ಸವ  ಕೂಡ ಇದೇ ವರ್ಷ ಬರಲಿದೆ. ಗಣೇಶ ಉತ್ಸವದ 125ನೇ ವರ್ಷಾಚರಣೆ  ಸಹಾ  ಈ ವರ್ಷ .

ಗಣೇಶ ಉತ್ಸವಗಳ ಮೂಲಕ ಸಮುದಾಯವನ್ನು ಎಚ್ಚರಿಸುವ ಕೆಲಸ ಆರಂಭವಾಗಿ 125 ವರ್ಷ ಕಳೆದಿದೆ. ಇವೆಲ್ಲವೂ ದೇಶಕ್ಕಾಗಿ ನಮ್ಮನ್ನು ಸಮರ್ಪಿಸಿಕೊಳ್ಳಲು ಉತ್ತೇಜಿಸುತ್ತವೆ. 1942 ರಿಂದ 1947ರ 5 ವರ್ಷ ಅವಧಿಯಲ್ಲಿ ದೇಶದೆಲ್ಲೆಡೆ ಜನರು ಒಟ್ಟಾಗಿ, ಪಣ ತೊಟ್ಟು ಬ್ರಿಟಿಷರನ್ನು ದೇಶ ಬಿಟ್ಟು ಓಡಿಸುವಲ್ಲಿ ಯಶಸ್ವಿಯಾದರು. ಇದೇ ಛಲವನ್ನು ಈ 70ನೇ ಸ್ವಾತಂತ್ರ್ಯೋತ್ಸವದಿಂದ 75ನೇ ಸ್ವಾತಂತ್ರ್ಯೋತ್ಸವದ  ಬರಲಿರುವ 2022 ರವರೆಗೆ ನಾವು ತೋರಬೇಕಿದೆ. 75ನೇ ಸ್ವಾತಂತ್ರ್ಯೋತ್ಸವಕ್ಕೆ ಇನ್ನು 5 ವರ್ಷ ಇದೆ. ಸಾಮೂಹಿಕ ಬಲ, ಸಂಕಲ್ಪ ಮತ್ತು ದೃಢ ನಿಶ್ಚಯದಿಂದ ಕಠಿಣ ಶ್ರಮ ವಹಿಸಿ, ನಮ್ಮ ಕನಸಿನ ಭಾರತವನ್ನು 2022ರೊಳಗೆ ನಿರ್ಮಿಸಲು  ದೇಶಭಕ್ತರ ನೆನಪು ನಮಗೆ ಬಲ ನೀಡಲಿದೆ. ಆದ್ದರಿಂದ, ನವ ಭಾರತ ನಿರ್ಮಾಣಕ್ಕಾಗಿ  ಸಂಕಲ್ಪ ಮಾಡಿ, ನಾವು ಮುಂದಕ್ಕೆ ಒಯ್ಯಬೇಕಿದೆ.

ದೇಶದ 125 ಕೋಟಿ ಜನರ ಸಾಮೂಹಿಕ ಬಲ, ಸಂಕಲ್ಪ, ದೃಢ ನಿಶ್ಚಯ ಮತ್ತು ತ್ಯಾಗದ ಅರಿವು ನಮಗೆ ಇದೆ. ಕೃಷ್ಣ ಪರಮಾತ್ಮ ಮಹಾನ್ ಬಲಶಾಲಿಯಾಗಿದ್ದರೂ, ಗೋಪಾಲಕರು ಬಡಿಗೆಗಳ ಮೂಲಕ ಆತನಿಗೆ ಬೆಂಬಲ ನೀಡಿದಾಗ ಮಾತ್ರವೇ ಗೋವರ್ಧನ ಪರ್ವತವನ್ನು ಎತ್ತಲು ಸಾಧ್ಯವಾಯಿತು. ಶ್ರೀ ರಾಮ ಲಂಕೆಗೆ ಹೋಗಬೇಕಾಗಿ ಬಂದಾಗ, ವಾನರ ಸೇನೆ ರಾಮಸೇತುವನ್ನು ನಿರ್ಮಿಸಿದ್ದು , ಇದರ ಮೂಲಕ ಲಂಕೆಯನ್ನು ತಲುಪಲಾಯಿತು. ಇದೇ ರೀತಿ ಮೋಹನ್ ದಾಸ್ ಕರಮಚಂದ್ ಗಾಂಧೀ   ಹತ್ತಿ ಮತ್ತು ಚರಕದ ಮೂಲಕ ಸ್ವಾತಂತ್ರ್ಯದ ವಸ್ತ್ರವನ್ನು ಹೆಣೆದು, ದೇಶವಾಸಿಗಳನ್ನು ಸಬಲಗೊಳಿಸಿದರು. ಜನರ ಸಾಮುದಾಯಿಕ ಬಲ ಮತ್ತು ಸಂಕಲ್ಪದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಇಲ್ಲಿ ಯಾರೂ ದೊಡ್ಡವರಲ್ಲ ಇಲ್ಲವೇ ಸಣ್ಣವರಲ್ಲ. ಅಳಿಲೊಂದು ಬದಲಾವಣೆಯ ಹರಿಕಾರನಾದ ಕತೆ ನಮಗೆಲ್ಲ ನೆನಪಿದೆ. ಹೀಗಾಗಿಯೇ 125 ಕೋಟಿ ಜನರಲ್ಲಿ ಯಾರೂ ದೊಡ್ಡವರಲ್ಲ ಅಥವಾ ಸಣ್ಣವರಲ್ಲ, ಎಲ್ಲರೂ ಒಂದೇ ಎಂಬುದನ್ನು ನಾವು ಮರೆಯಬಾರದು.

ನಾವು ಎಲ್ಲೇ ಇರಲಿ, ನಾವೆಲ್ಲರೂ ಹೊಸ ಸಂಕಲ್ಪ, ನವ ಚೇತನ, ಹೊಸ ಬಲದಿಂದ ಒಟ್ಟಾಗಿ ಕೆಲಸ ಮಾಡಿದಲ್ಲಿ, 75ನೇ ಸ್ವಾತಂತ್ರ್ಯೋತ್ಸವದ 2022ರಲ್ಲಿ ಈ ದೇಶದ ಭವಿಷ್ಯವನ್ನೇ ಬದಲಿಸಿ ಬಿಡಬಹುದು. ಅದು ಸುಭದ್ರ, ಸಮೃದ್ಧ ಮತ್ತು ಬಲಿಷ್ಠವಾದ ಹೊಸ ದೇಶವಾಗಲಿದೆ. ಈ ಹೊಸ ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರಲಿದೆ: ಜಾಗತಿಕ ಮಟ್ಟದಲ್ಲಿ ದೇಶಕ್ಕೆಘನತೆಯನ್ನು  ತರುವಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸಲಿವೆ.

ನಮ್ಮ ಸ್ವಾತಂತ್ರ್ಯ ಹೋರಾಟವು ನಮ್ಮ ಭಾವನೆಗಳೊಂದಿಗೆ ತಳಕು ಹಾಕಿಕೊಂಡಿದೆ. ಸ್ವಾತಂತ್ರ್ಯ ಆಂದೋಲನದ ಸಮಯದಲ್ಲಿ ವಿದ್ಯೆಯನ್ನು ಕಲಿಸುತ್ತಿದ್ದ ಶಿಕ್ಷಕ, ಹೊಲವನ್ನು ಉಳುತ್ತಿದ್ದ ರೈತ, ಕೆಲಸ ಮಾಡುತ್ತಿದ್ದ ಕಾರ್ಮಿಕ ಇವರೆಲ್ಲರಿಗೂ ಹೃದಯಾಂತರಾಳದಲ್ಲಿ   ತಾವು ಮಾಡುತ್ತಿರುವ ಕೆಲಸದಿಂದ ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ಆದ ದೇಣಿಗೆ ನೀಡುತ್ತಿದ್ದೇವೆ ಎಂಬುದು ಗೊತ್ತಿತ್ತು.  ಇಂಥ ಆಲೋಚನೆ ಬಲದ ಶ್ರೇಷ್ಠ ಮೂಲ. ಕುಟುಂಬದಲ್ಲಿ ಆಹಾರವನ್ನು ಪ್ರತಿದಿನ ತಯಾರಿಸಲಾಗುತ್ತದೆ. ಆದರೆ, ಅದನ್ನು ದೇವರಿಗೆ  ಅರ್ಪಿಸಿದರೆ  ಮಾತ್ರ ಅದು ಪ್ರಸಾದ ಆಗಲಿದೆ.

ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ನಾವು ಭಾರತಾಂಬೆಯ ಘನತೆಗಾಗಿ , ಭಾರತಾಂಬೆಯ ದೈವತ್ವಕ್ಕಾಗಿ, ದೇಶವಾಸಿಗಳನ್ನು ಬಡತನದ ಸಂಕೋಲೆಯಿಂದ ಬಿಡಿಸಲು, ನಮ್ಮ ಸಾಮಾಜಿಕ ವಸ್ತ್ರವನ್ನು ಸೂಕ್ತವಾಗಿ ಹೆಣೆದರೆ ಮಾತ್ರ, ದೇಶದ ಬಗ್ಗೆ ಭಾವನೆಗಳನ್ನು ಇಟ್ಟುಕೊಂಡು ಕೆಲಸ ಮಾಡಿದರೆ, ದೇಶದ ಬಗ್ಗೆ ಭಕ್ತಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಮತ್ತು ನಮ್ಮ ಕೆಲಸವನ್ನು ದೇಶಕ್ಕೆ ಅರ್ಪಿಸಿದರೆ  ಮಾತ್ರ ನಮ್ಮ ಸಾಧನೆಗಳು ಇನ್ನಷ್ಟು ಹೆಚ್ಚಲಿವೆ. ಈ  ಸ್ಫೂರ್ತಿಯಿಂದ ನಾವು ಮುನ್ನಡೆಯಬೇಕಿದೆ.

ಜನವರಿ 1, 2018 ಒಂದು ಸಾಮಾನ್ಯ ದಿನವಲ್ಲ . ಈ ಶತಮಾನದಲ್ಲಿ ಹುಟ್ಟಿದವರು ಆಗ 18 ವರ್ಷ ಪೂರೈಸಲಿದ್ದಾರೆ. ಇಂಥವರಿಗೆ ಅದು ಅವರ ಬದುಕಿನ ನಿರ್ಣಾಯಕ  ವರ್ಷವಾಗಲಿದೆ. ಅವರು 21ನೇ ಶತಮಾನದಲ್ಲಿ ದೇಶದ ಭವಿಷ್ಯವನ್ನು ನಿರ್ಧರಿಸುವ ಭಾಗ್ಯ ವಿಧಾತರಾಗಲಿದ್ದಾರೆ. ಇಂಥ ಯುವಕರನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಗೌರವ ಸರ್ಮಪಿಸುತ್ತೇನೆ. ದೇಶದ ಭವಿಷ್ಯವನ್ನು ನಿರ್ಧರಿಸುವ ಅವಕಾಶ ನಿಮಗಿದೆ. ತನ್ನ ಅಭಿವೃದ್ಧಿ ಪಥದಲ್ಲಿ ಪಾಲ್ಗೊಳ್ಳಬೇಕೆಂದು ಹೆಮ್ಮೆಯ ದೇಶ ನಿಮ್ಮನ್ನು ಆಹ್ವಾನಿಸುತ್ತಿದೆ.

ಪ್ರಿಯ ದೇಶವಾಸಿಗಳೇ,
ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನು  ಕೃಷ್ಣನಿಗೆ ಹಲವು ಪ್ರಶ್ನೆಗಳನ್ನು ಕೇಳಿದಾಗ, ನಿನ್ನ ನಂಬಿಕೆ ಮತ್ತು ಆಲೋಚನೆಗೆ ಅನುಗುಣವಾದ ಗುರಿಯನ್ನು ನೀನು ಸಾಧಿಸುವೆ ಎಂದು ಕೃಷ್ಣ ಹೇಳಿದ್ದ.  ನಮ್ಮಲ್ಲಿ ದೃಢ ನಿರ್ಧಾರವಿದ್ದಲ್ಲಿ  ನಾವು ಪ್ರಕಾಶಮಾನ ಭಾರತವನ್ನು ನಿರ್ಮಿಸಲಿದ್ದೇವೆ. ಭರವಸೆಯನ್ನೇ ಕಳೆದುಕೊಂಡು ಬೆಳೆದ ನಾವೆಲ್ಲರೂ, ಹತಾಶೆಯ ಮನೋಭಾವವನ್ನು ತೊಲಗಿಸಬೇಕು ಮತ್ತು ಭರವಸೆಯಿಂದ  ಮುನ್ನಡೆಯಬೇಕು.

“ಹೇಗೋ ನಡೆಯುತ್ತದೆ”   ಎಂಬ ಮನೋಭಾವವನ್ನು ನಾವು ಬಿಡಬೇಕು. ಬದಲಿಗೆ “ಬದಲಿಸಲು ಸಾಧ್ಯವಿದೆ’ ಎಂಬ ನಿಶ್ಚಯವನ್ನು ಹೊಂದಬೇಕಿದ್ದು, ಇದು ದೇಶ ಕಟ್ಟುವಲ್ಲಿ ನೆರವಾಗಲಿದೆ. ನಾವು ಇಂಥ ಆತ್ಮವಿಶ್ವಾಸ ಹೊಂದಿದ್ದು, ತ್ಯಾಗ, ಕಠಿಣ ಶ್ರಮ ಮತ್ತು ಸಂಕಲ್ಪವನ್ನು ಹೊಂದಿದ್ದರೆ, ಅಗತ್ಯ ಸಂಪನ್ಮೂಲಗಳು ಲಭ್ಯವಾಗುತ್ತವೆ ಮತ್ತು ಭಾರಿ ಪರಿವರ್ತನೆ ಆಗಲಿದೆ ಹಾಗೂ ಅದನ್ನು ನಮ್ಮ ಸಂಕಲ್ಪವು ಸಾಧನೆಯಾಗಿ ಬದಲಿಸಲಿದೆ.

ಸೋದರ, ಸೋದರಿಯರೇ,
ನಮ್ಮ ದೇಶವಾಸಿಗಳು ತಮ್ಮ ಸುರಕ್ಷತೆ ಮತ್ತು ಕ್ಷೇಮದ ಬಗ್ಗೆ ಯೋಚಿಸುವುದು ಸ್ವಾಭಾವಿಕ. ನಮ್ಮ ದೇಶ, ನಮ್ಮ ಸೈನ್ಯ, ವಾಯುದಳ, ಅಥವಾ ನೌಕಾದಳ ಸೇರಿದಂತೆ ಎಲ್ಲ ಸಮವಸ್ತ್ರಧಾರಿ ಬಲಗಳು ಅವುಗಳನ್ನು ಕರೆದಾಗಲೆಲ್ಲ ಆಗಮಿಸಿ, ತಮ್ಮ ಧೈರ್ಯವನ್ನು, ಸಾಮರ್ಥ್ಯವನ್ನು      ಪ್ರದರ್ಶಿಸಿವೆ . ನಮ್ಮ ಧೈರ್ಯಶಾಲಿ ಸೈನಿಕರು ಯಾವತ್ತೂ ಮಹಾನ್ ತ್ಯಾಗಕ್ಕೆ ಬೆನ್ನು ತೋರಿಸಿಲ್ಲ.  ಎಡಪಂಥೀಯ ಉಗ್ರಗಾಮಿಗಳು , ಉಗ್ರವಾದಿಗಳು, ನುಸುಳುಕೋರರು, ದೇಶದೊಳಗೆ ತೊಂದರೆಗೆ ಕಾರಣವಾಗುವವರು, ಯಾರೇ ಇರಲಿ, ನಮ್ಮ ಸಮವಸ್ತ್ರಧಾರಿಗಳು ಅಸಾಮಾನ್ಯ ಎನ್ನುವಂಥ ತ್ಯಾಗ ಮಾಡಿದ್ದಾರೆ. ನಾವು ಸರ್ಜಿಕಲ್  ಸ್ಟ್ರೈಕ್ ಮಾಡಿದಾಗ, ಜಗತ್ತು ನಮ್ಮ ಸಾಮರ್ಥ್ಯ  ಮತ್ತು ಬಲವನ್ನು ಒಪ್ಪಿಕೊಳ್ಳಬೇಕಾಗಿ ಬಂದಿತು.

ಪ್ರಿಯ ದೇಶವಾಸಿಗಳೇ,
ಭಾರತದ ಸುರಕ್ಷೆ ನಮ್ಮ ಆದ್ಯತೆ. ಅದು ನಮ್ಮ ಕರಾವಳಿ ಇರಲಿ ಅಥವಾ ಗಡಿ ಪ್ರದೇಶವಿರಲಿ, ಅಂತರಿಕ್ಷ ಇಲ್ಲವೇ ಸೈಬರ್ ಕ್ಷೇತ್ರವಿರಲಿ, ಎದುರಾಗುವ ಆಪತ್ತನ್ನು ಎದುರಿಸಿ, ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು  ಭಾರತ ಹೊಂದಿದೆ.

ಪ್ರಿಯ ದೇಶವಾಸಿಗಳೇ,
ದೇಶವನ್ನು ಲೂಟಿ ಹೊಡೆದವರು ಮತ್ತು ಬಡವರನ್ನು ದೋಚಿದವರು ಇಂದು ಶಾಂತಿಯಿಂದ ನಿದ್ರಿಸಲು ಸಾಧ್ಯವಿಲ್ಲ. ಇದರಿಂದ ಶ್ರಮಜೀವಿಗಳು ಮತ್ತು ಪ್ರಾಮಾಣಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಪ್ರಾಮಾಣಿಕನೊಬ್ಬ ತನ್ನ ಪ್ರಾಮಾಣಿಕತೆಗೆ ಬೆಲೆಯಿದೆ ಎಂದು ನಂಬುವಂತಾಗಿದೆ. ಇಂದು ನಾವು ಪ್ರಾಮಾಣಿಕತೆಯ ಹಬ್ಬವನ್ನು ಆಚರಿಸುತ್ತಿದ್ದೇವೆ ಹಾಗೂ ಇಲ್ಲಿ ಅಪ್ರಾಮಾಣಿಕತೆಗೆ ಆಸ್ಪದವಿಲ್ಲ. ಇದು ಹೊಸ ಆಶಾಭಾವನೆಗೆ ಕಾರಣವಾಗಿದೆ.
ಬೇನಾಮಿ ಆಸ್ತಿಗಳ ವಿರುದ್ಧ ಕಾನೂನು ಹಲವು ವರ್ಷಗಳಿಂದ ಕೊಳೆಯುತ್ತಿತ್ತು. ಈಗ ನಾವು ಬೇನಾಮಿ ಆಸ್ತಿಗಳ ವಿರುದ್ಧ ಕಾನೂನು ಮಾಡಿದ್ದೇವೆ. ಸ್ವಲ್ಪ ಅವಧಿಯಲ್ಲೇ ಸರ್ಕಾರವು  800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಇಂಥ ಘಟನೆಗಳು ನಡೆದಾಗ, ಇದು ಪ್ರಾಮಾಣಿಕರಿಗೆ  ಇರುವ  ದೇಶ ಎಂಬ ವಿಶ್ವಾಸವನ್ನು ಜನಸಾಮಾನ್ಯರು ಬೆಳೆಸಿಕೊಳ್ಳುತ್ತಾರೆ. ರಕ್ಷಣಾ ದಳಗಳಿಗೆ “ಒಂದು ಹುದ್ದೆ, ಒಂದು ಪಿಂಚಣಿ’ ಕಾರ್ಯನೀತಿಯು 30-40 ವರ್ಷದಿಂದ ಜಾರಿಗೊಳ್ಳದೆ ಇದ್ದಲ್ಲೇ ಇತ್ತು. ನಾವು ಸೈನಿಕರ ಈ ಬೇಡಿಕೆಯನ್ನು ಪೂರೈಸಿದ್ದು, ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚಿದೆ ಮತ್ತು ದೇಶವನ್ನು ರಕ್ಷಿಸಬೇಕೆಂಬ ಅವರ ಸಂಕಲ್ಪ ಹಲವು ಪಟ್ಟು ಅಧಿಕಗೊಂಡಿದೆ.

ನಮ್ಮದು ಹಲವು ರಾಜ್ಯಗಳು ಮತ್ತು ಒಂದು ಕೇಂದ್ರ ಸರ್ಕಾರವಿರುವ ದೇಶ.  ಜಿಎಸ್ಟಿಯು ಸಹಕಾರ ಒಕ್ಕೂಟ ಮನೋಭಾವವನ್ನು ತೋರ್ಪಡಿಸಿದ್ದು, ಸ್ಪರ್ಧಾತ್ಮಕ   ಸಹಕಾರ ಒಕ್ಕೂಟ ನೀತಿಗೆ ಹೊಸ ಬಲ ತುಂಬಿದೆ. ಜಿಎಸ್ಟಿಯ ಯಶಸ್ಸನ್ನು ಅದನ್ನು ಯಶಸ್ವಿಗೊಳಿಸಬೇಕೆಂದು ಹಾಕಿದ ಕಠಿಣ ಶ್ರಮಕ್ಕೆ ನೀಡಬೇಕಿದೆ. ತಂತ್ರಜ್ಞಾನನವು ಅದನ್ನು ಪವಾಡ ಎಂಬಂತೆ ಮಾಡಿಬಿಟ್ಟಿದೆ. ಇಷ್ಟು ಕಡಿಮೆ ಸಮಯದಲ್ಲಿ ಜಿಎಸ್ಟಿಯನ್ನು ಜಾರಿಗೊಳಿಸುವುದು ಹೇಗೆ ಸಾಧ್ಯವಾಯಿತು ಎಂದು ಜಗತ್ತು ಆಶ್ಚರ್ಯ ಪಡುತ್ತಿದೆ.

 

ಇದು ನಮ್ಮ ಸಾಮರ್ಥ್ಯದ  ಪ್ರತಿಫಲನ ಮತ್ತು ಭವಿಷ್ಯದ ಜನಾಂಗದಲ್ಲಿ ನಂಬಿಕೆ ಹಾಗೂ ಭರವಸೆಯನ್ನು ತುಂಬಲು ನೆರವಾಗಲಿದೆ. ಹೊಸ ವ್ಯವಸ್ಥೆಗಳು ಹೊಮ್ಮುತ್ತಿವೆ. ಇಂದು ಹಿಂದಿಗಿಂತ ದುಪ್ಪಟ್ಟು ವೇಗದಲ್ಲಿ ರಸ್ತೆಗಳನ್ನು ನಿರ್ಮಿಸಬಹುದು. ರೈಲು ಹಳಿಗಳನ್ನು ಎರಡು ಪಟ್ಟು ವೇಗದಲ್ಲಿ ಅಳವಡಿಸಲಾಗುತ್ತಿದೆ. ಸ್ವಾತಂತ್ರ್ಯದ ಬಳಿಕ ಕತ್ತಲೆಯಲ್ಲಿ ಮುಳುಗಿದ್ದ 14,000 ಹಳ್ಳಿಗಳಿಗೆ ವಿದ್ಯುತ್ ಪೂರೈಸಲಾಗಿದೆ. 29 ಕೋಟಿ ಮಂದಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ಧಾರೆ, 9 ಕೋಟಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡು ಗಳನ್ನು  ಕೊಡಲಾಗಿದೆ. 2 ಕೋಟಿಗೂ ಹೆಚ್ಚು ಬಡ ಮಾತೆಯರು ಮತ್ತು ಸೋದರಿಯರು, ಆಹಾರ ತಯಾರಿಕೆಗೆ ಸೌದೆಯ ಬದಲು ಎಲ್ಪಿಜಿ ಸ್ಟವ್ ಬಳಸುತ್ತಿದ್ದಾರೆ. ಬಡ ಆದಿವಾಸಿಗಳಲ್ಲಿ ವ್ಯವಸ್ಥೆ ಬಗ್ಗೆ ವಿಶ್ವಾಸ ಹುಟ್ಟಿದೆ. ಅಭಿವೃದ್ಧಿಯ ಕೊನೆಯ ಮೈಲಿಯಲ್ಲಿದ್ದ ವ್ಯಕ್ತಿ ಇಂದು ಮುಖ್ಯವಾಹಿನಿಯನ್ನು ಸೇರಿದ್ದಾನೆ ಹಾಗೂ ದೇಶ ಮುನ್ನಡೆಯುತ್ತಿದೆ.

ಯುವ ಜನರಿಗೆ ಸ್ವಉದ್ಯೋಗಕ್ಕೆ 8 ಕೋಟಿ ರೂಪಾಯಿಗೂ  ಹೆಚ್ಚು ಸಾಲವನ್ನು ಯಾವುದೇ ಖಾತ್ರಿ ಪಡೆಯದೆ ನೀಡಲಾಗಿದೆ. ಬ್ಯಾಂಕ್ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಲಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಮನೆಯನ್ನು ಕಟ್ಟಬೇಕೆಂದು ಕೊಂಡರೆ, ಆತನಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯಲಿದೆ. ಈ ಮೂಲಕ ದೇಶವು ಮುನ್ನಡೆಯುತ್ತಿದೆ ಹಾಗೂ ಜನರು ಈ ಆಂದೋಲನದಲ್ಲಿ ಸೇರುತ್ತಿದ್ದಾರೆ.
ಕಾಲ ಬದಲಾಗಿದೆ.  ಸರ್ಕಾರ  ತಾನು ಹೇಳಿದಂತೆ ನಡೆಯಲು ನಿರ್ಧರಿಸಿದೆ  .  ಹುದ್ದೆಗಳಿಗೆ ಸಂದರ್ಶನಗಳ ಪ್ರಕ್ರಿಯೆಯನ್ನು  ರದ್ದುಗೊಳಿಸಿದಂತೆ .

ಹಿಂದೆ ಸಣ್ಣ ಉದ್ಯಮಿ ಕೂಡ 50-60 ಅರ್ಜಿ  ನಮೂನೆಗಳನ್ನು  ತುಂಬಬೇಕಿತ್ತು. ನಾವು ಈಗ ಅದನ್ನು ಕಡಿಮೆಗೊಳಿಸಿ, 5-6 ನಮೂನೆಗಳಿಗೆ   ಇಳಿಸಿದ್ದೇವೆ.  ಆಡಳಿತ ಪ್ರಕ್ರಿಯೆಯನ್ನು ಸರಳಗೊಳಿಸಿದ, ಉತ್ತಮ ಆಡಳಿತ ಕುರಿತ ಇಂಥ ಹಲವು ಉದಾಹರಣೆಗಳನ್ನು ನಾನು ನೀಡಬಲ್ಲೆ. ಈ ಮೂಲಕ ನಾವು ವೇಗವಾಗಿ ನಿರ್ಧಾರ  ತೆಗೆದುಕೊಳ್ಳುವಿಕೆಯನ್ನು ಜಾರಿಗೊಳಿಸಿದ್ದೇವೆ ಮತ್ತು ಇದರಿಂದಾಗಿಯೇ 125 ಕೋಟಿ ಮಂದಿ ನಮ್ಮ ಆಡಳಿತದ ಮೇಲೆ ವಿಶ್ವಾಸವಿರಿಸಿದ್ದಾರೆ.

ಪ್ರಿಯ ದೇಶವಾಸಿಗಳೇ,
ಜಾಗತಿಕ ಮಟ್ಟದಲ್ಲಿ ಭಾರತ ಇಂದು ಪ್ರತಿಷ್ಠಿತ ಸ್ಥಾನವನ್ನು ಹೊಂದಿದೆ. ಉಗ್ರವಾದದ ವಿರುದ್ಧದ ಹೋರಾಟದಲ್ಲಿ ನಾವು ಒಂಟಿಯಾಗಿಲ್ಲ ಎಂಬುದು ಸಂತೋಷದ ವಿಷಯ. ಹಲವು ದೇಶಗಳು ನಮ್ಮನ್ನು ಈ ವಿಷಯದಲ್ಲಿ ಬೆಂಬಲಿಸುತ್ತಿವೆ.

ಅದು ಹವಾಲಾ ಇರಲಿ ಅಥವಾ ಉಗ್ರವಾದ  ಕುರಿತು ಮಾಹಿತಿ ನೀಡುವಿಕೆ ಇರಲಿ, ಜಾಗತಿಕ ಸಮುದಾಯ ನಮಗೆ ಸೂಕ್ತ ಮಾಹಿತಿ ನೀಡಿ ಬೆಂಬಲಿಸುತ್ತಿದೆ. ಉಗ್ರವಾದದ ವಿರುದ್ಧದ ಹೋರಾಟದಲ್ಲಿ ನಾವು ಬೇರೆ ದೇಶಗಳ ಜೊತೆಗೆ ಕೈ ಜೋಡಿಸಿದ್ದೇವೆ. ನಮ್ಮನ್ನು ಬೆಂಬಲಿಸುತ್ತಿರುವ ಹಾಗೂ ನಮ್ಮ ಸಾಮರ್ಥ್ಯವನ್ನು  ಒಪ್ಪಿಕೊಂಡಿರುವ ಎಲ್ಲ ದೇಶಗಳನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಮತ್ತು ಪ್ರಗತಿ, ಸಮೃದ್ಧಿ ಹಾಗೂ ಅಲ್ಲಿನ ಜನತೆಯ ಆಶಯಗಳನ್ನು ಪೂರೈಸಲು, ಜಮ್ಮು ಮತ್ತು ಕಾಶ್ಮೀರದ   ಸರ್ಕಾರ  ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕರೆಲ್ಲರೂ ಜವಾಬ್ದಾರರು.  ಆ ರಾಜ್ಯವನ್ನು ಹಿಂದಿನ ವೈಭವಕ್ಕೆ ಮರಳಿಸಲು, ಮೊದಲಿನಂತೆ ಸ್ವರ್ಗವನ್ನಾಗಿಸಲು ನಾವೆಲ್ಲರೂ ಪಣ ತೊಡಬೇಕಿದೆ.

ಕಾಶ್ಮೀರಕ್ಕೆ ಸಂಬಂಧಿಸಿದಂತೆ, ರಾಜಕೀಯ ಮತ್ತು ಆಡಂಬರದ ಮಾತುಗಳು ಕೇಳಿಬರುತ್ತವೆ. ಆದರೆ, ನನ್ನ ನಂಬಿಕೆ ಏನೆಂದರೆ, ಪ್ರತ್ಯೇಕತಾವಾದವನ್ನು ಕೆಲವರು ಮಾತ್ರವೇ ಹಬ್ಬಿಸುತ್ತಿದ್ದಾರೆ.   ಇದನ್ನು ಹೇಗೆ ಗೆಲ್ಲಬೇಕು ಎಂಬುದು ನನಗೆ ಗೊತ್ತಿದೆ. ಈ ಸಮಸ್ಯೆಯನ್ನು ಬಂದೂಕಿನ ಗುಂಡು ಇಲ್ಲವೇ ನಿಂದನೆಯಿಂದ ಬಗೆಹರಿಸಲು ಸಾಧ್ಯವಿಲ್ಲ. ಕಾಶ್ಮೀರದ ಎಲ್ಲರನ್ನೂ ಒಳಗೊಳ್ಳುವ ಮೂಲಕ ಇದನ್ನು ಸಾಧಿಸಬಹುದು. ಇದು 125 ಕೋಟಿ ಭಾರತೀಯರ ರೀತಿ ನೀತಿ . ಆದ್ದರಿಂದ ಗುಂಡು ಇಲ್ಲವೇ ನಿಂದನೆಯ ಬದಲು ಬದಲಾವಣೆ ಎಂಬುದು ಎಲ್ಲರನ್ನೂ ಒಳಗೊಳ್ಳುವ ಮೂಲಕ ಆಗಬೇಕಿದೆ. ನಾವು ಈ ದಿಕ್ಕಿನಲ್ಲಿ ಸಂಕಲ್ಪ ತೊಟ್ಟು ಮುಂದುವರಿದಿದ್ದೇವೆ.

ಉಗ್ರವಾದದ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ. ಉಗ್ರವಾದ ಇಲ್ಲವೇ ಉಗ್ರವಾದಿಗಳ ವಿರುದ್ಧ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ. ಉಗ್ರಗಾಮಿಗಳು ಮುಖ್ಯವಾಹಿನಿಯನ್ನು ಸೇರಲಿ ಎಂದು ನಾವು ಹೇಳುತ್ತಲೇ  ಇದ್ದೇವೆ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಜಾಪ್ರಭುತ್ವವು ಎಲ್ಲರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಿದೆ. ಮುಖ್ಯವಾಹಿನಿಯನ್ನು ಸೇರುವ ಮೂಲಕವಷ್ಟೇ ವ್ಯಕ್ತಿಯೊಬ್ಬ ಬಲಗೊಳ್ಳುತ್ತಾನೆ.
ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಹಾಗೂ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡ ಯುವಜನರ ಮನಪರಿವರ್ತನೆ ಮಾಡಿ, ಮುಖ್ಯವಾಹಿನಿಗೆ ತರುವಲ್ಲಿ ರಕ್ಷಣಾ ಪಡೆಗಳು ನಡೆಸಿದ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ.

ರಕ್ಷಣಾ ಪಡೆಗಳು ಗಡಿ ಪ್ರದೇಶದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿವೆ. ಭಾರತ ಸರ್ಕಾರವು  ಜಾಲತಾಣವೊಂದನ್ನು ಇಂದು ರೂಪಿಸಿದ್ದು  ಅದು ಶೌರ್ಯ ಪದಕ ಪಡೆದವರ ವಿವರಗಳನ್ನು ಒಳಗೊಂಡಿರಲಿದೆ. ದೇಶಕ್ಕೆ ಕೀರ್ತಿ  ತಂದ ಇಂಥ ವೀರರ   ಪೂರ್ಣ ವಿವರಗಳನ್ನು ನೀಡುವ ಪೋರ್ಟಲ್   ಒಂದನ್ನು  ಸಹ  ಚಾಲನೆಗೊಳಿಸಲಾಗುತ್ತಿದೆ. ಇವರ ತ್ಯಾಗವು ಖಡಿತವಾಗಿ  ಮುಂಬರಲಿರುವ  ಯುವ ಜನಾಂಗಕ್ಕೆ  ಸ್ಫೂರ್ತಿ  ತುಂಬಲಿದೆ.

ತಂತ್ರಜ್ಞಾನದ ಸಹಾಯದೊಂದಿಗೆ ದೇಶದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಉತ್ತೇಜಿಸಲು ನಾವು ಪ್ರಯತ್ನಿಸುತಿದ್ದೇವೆ. ಕಪ್ಪುಹಣದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ; ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ತಂತ್ರಜ್ಞಾನದ ಪ್ರವೇಶದಿಂದ ಆಧಾರ್ ಕಾರ್ಡನ್ನು ಇತರೆ ಎಲ್ಲ ವ್ಯವಸ್ಥೆಯೊಂದಿಗೆ ಬೆಸೆಯುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ಪರಿಚಯಿಸಲು ನಾವು ಯಶಸ್ವಿಯಾಗಿದ್ದೇವೆ. ಜಗತ್ತಿನೆಲ್ಲೆಡೆ ಭಾರತದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತಿದ್ದು, ಈ ವ್ಯವಸ್ಥೆಯ ಅಧ್ಯಯನಕ್ಕೆ ಹಲವರು ಮುಂದಾಗಿದ್ದಾರೆ. ಸಾವಿರಾರು ಕಿಲೋಮೀಟರ್ ದೂರವಿರುವ ಸಾಮಾನ್ಯನೊಬ್ಬ ಸರ್ಕಾರಕ್ಕೆ ತನ್ನ ಉತ್ಪನ್ನಗಳನ್ನು ಪೂರೈಸಬಲ್ಲ. ಅವನಿಗೆ ಯಾವ ಮಧ್ಯವರ್ತಿಯ ಅವಶ್ಯಕತೆಯಿಲ್ಲ. ನಾವು ‘ಜಿಇಎಂ’ ಎಂಬ ಪೋರ್ಟಲ್ ಪರಿಚಯಿಸಿದ್ದೇವೆ. ಸರ್ಕಾರ ಈ ಪೋರ್ಟಲ್ ಮೂಲಕವೇ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಮುಂದಾಗಿದೆ. ವಿವಿಧ ಹಂತಗಳಲ್ಲಿ ಪಾರದರ್ಶಕತೆ ತರಲು ನಾವು ಯಶಸ್ಸಿಯಾಗಿದ್ದೇವೆ.

ಸೋದರರೇ ಮತ್ತು ಸೋದರಿಯರೇ,
ಸರ್ಕಾರದ ಎಲ್ಲ ಯೋಜನೆಗಳ ಅನುಷ್ಠಾನ ವೇಗ ಪಡೆದುಕೊಳ್ಳುತ್ತಿವೆ. ಕಾಮಗಾರಿಯೊಂದರ ನಿಧಾನಗತಿ ಕೇವಲ ಯೋಜನೆಯ ನಿಧಾನಗತಿ ಮಾತ್ರವಲ್ಲ. ಅದಕ್ಕೆ ಖರ್ಚಾಗಿರುವ ಹಣದ ವಿಷಯವೂ ಅಲ್ಲ. ಕಾಮಗಾರಿಯೊಂದರ ಸ್ಥಗಿತತೆ, ಈ ದೇಶದ ಬಡಜನರ ಬವಣೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರಿಯಬೇಕು. ನಾವು ಮಂಗಳ ಗ್ರಹವನ್ನು ಒಂಭತ್ತು ತಿಂಗಳಲ್ಲಿ ತಲುಪಬಲ್ಲೆವು; ಆ ಸಾಧನೆ ಮಾಡುವ ಸಾಮರ್ಥ್ಯ  ನಮಗಿದೆ. ಪ್ರತೀ ತಿಂಗಳು ನಾನು ಸರ್ಕಾರಿ ಯೋಜನೆಗಳನ್ನು ಪರಾಮರ್ಶಿಸುತ್ತೇನೆ. ಒಂದು ನಿರ್ದಿಷ್ಠ ಯೋಜನೆ ನನ್ನ ಗಮನಕ್ಕೆ ಬಂದಿತು. ಅದು 42 ವರ್ಷಗಳ ಹಳೆಯ ಯೋಜನೆ. ಆ ಯೋಜನೆ ಅನ್ವಯ ಸುಮಾರು 70-72 ಕಿಲೋಮೀಟರ್ ರೈಲ್ವೇ ಹಳಿಗಳನ್ನು ನಿರ್ಮಿಸಬೇಕಿತ್ತು. ಆದರೆ 42 ವರ್ಷಗಳಿಂದ ಆ ಯೋಜನೆ ತ್ರಿಶಂಕು ಸ್ಥಿತಿಯಲ್ಲಿದೆ.

ನನ್ನ ಸೋದರರೇ ಮತ್ತು ಸೋದರಿಯರೇ,
ದೇಶವೊಂದು ಮಂಗಳ ಗ್ರಹವನ್ನು 9 ತಿಂಗಳಲ್ಲಿ ತಲುಪಬಲ್ಲ ಸಾಮರ್ಥ್ಯವಿದ್ದಾಗ್ಯೂ , ಕೇವಲ 70-72 ಕಿಲೋಮೀಟರ್ ರೈಲ್ವೇ ಹಳಿಗಳನ್ನು ಹಾಕಲು 42 ವರ್ಷಗಳಿಂದ ಏಕೆ ಸಾಧ್ಯವಾಗಿಲ್ಲ? ಇದು ಬಡ ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಠಿಸುತ್ತವೆ. ಇಂತವುಗಳನ್ನು ನಾವು ಬಗೆಹರಿಸಲು ಕ್ರಮಕೈಗೊಂಡಿದ್ದೇವೆ. ತಂತ್ರಜ್ಞಾನದ ಮೂಲಕ ಸಮಗ್ರ ಬದಲಾವಣೆಗೆ ನಾವು ಪ್ರಯತ್ನಿಸುತ್ತಿದ್ದೇವೆ. ಇವು ಭೂ-ಕೇಂದ್ರಿತ ತಂತ್ರಜ್ಞಾನಗಳಾಗಲಿ ಅಥವಾ ಬಾಹ್ಯಾಕಾಶ ಕೇಂದ್ರಿತ ತಂತ್ರಜ್ಞಾನವಾಗಲಿ, ಬದಲಾವಣೆಗಾಗಿ ಎಲ್ಲ ತಂತ್ರಜ್ಞಾನಗಳನ್ನು ಒಟ್ಟಾಗಿ ತರಲು ಪ್ರಯತ್ನಿಸುತ್ತಿದ್ದೇವೆ. ಯೂರಿಯಾ ಮತ್ತು ಸೀಮೆಎಣ್ಣೆಗಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷ ಏರ್ಪಟ್ಟಿದ್ದಕ್ಕೆ ನೀವು ಸಾಕ್ಷಿಯಾಗಿರಬಹುದು. ಕೇಂದ್ರ ಸರ್ಕಾರ ದೊಡ್ಡಣ್ಣನಂತೆ ವರ್ತಿಸುತ್ತಿದ್ದು, ರಾಜ್ಯ ಸರ್ಕಾರಗಳನ್ನು ಕಿರಿಯವನಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು.

ನಾನು ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಅಭಿವೃದ್ಧಿಯಲ್ಲಿ ರಾಜ್ಯಗಳ ಪಾಲು ನನಗೆ ಸ್ಪಷ್ಟವಾಗಿ ಅರಿವಿದೆ. ಆದ್ದರಿಂದ ನಾನು ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಒತ್ತು ನೀಡಿದ್ದೇನೆ. ಪ್ರಸ್ತುತ ನಾವು, ಸ್ಪರ್ಧಾತ್ಮಕ ಸಹಕಾರಿ ಸಂಯುಕ್ತ ವ್ಯವಸ್ಥೆಯತ್ತ ಮುನ್ನಡೆಯುತ್ತಿದ್ದೇವೆ. ನಾವು, ಎಲ್ಲ ನಿರ್ಧಾರಗಳನ್ನು ಒಟ್ಟಾಗಿ ತೆಗೆದುಕೊಳ್ಳುತ್ತಿರುವುದನ್ನು ನೀವು ಕಾಣುತ್ತಿದ್ದೀರಿ. ದೇಶದ ವಿದ್ಯುತ್ ಪೂರೈಕೆ ಕಂಪೆನಿಗಳ ದುಸ್ಥಿತಿ ಬಗೆಗೆ ಪ್ರಧಾನಿಯೊಬ್ಬರು ಇದೇ ಕೆಂಪುಕೋಟೆಯ ವೇದಿಕೆಯಿಂದ ಮಾತನಾಡಿದ್ದು ನಿಮಗೆ ನೆನಪಿರಬಹುದು. ವಿದ್ಯುತ್ ಸಮಸ್ಯೆ ಬಗೆಗೆ ಅವರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದರು. ಇಂದು “ಉದಯ್”  ಯೋಜನೆಯೊಂದಿಗೆ ನಾವು ಈ ವಿದ್ಯುತ್ ಕಂಪೆನಿಗಳೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸಿ, ಸಮಸ್ಯೆಯನ್ನು ಬಗೆಹರಿಸುತ್ತಿದ್ದೇವೆ. ಇದು ಸಂಯುಕ್ತ ವ್ಯವಸ್ಥೆಯ ಒಂದು ನೈಜ ಉದಾಹರಣೆ.

ಜಿಎಸ್ಟಿ ಅಥವಾ ಸ್ಮಾರ್ಟ್ ಸಿಟಿ ಯೋಜನೆಯಾಗಲಿ, ಸ್ವಚ್ಚ ಭಾರತ್ ಅಭಿಯಾನವಾಗಲಿ, ಶೌಚಾಲಯಗಳ ನಿರ್ಮಾಣವಾಗಲಿ ಅಥವಾ ವ್ಯವಹಾರ ಮಾಡಲು ಸುಲಭ ಪರಿಸ್ಥಿತಿ ನಿರ್ಮಾಣವಾಗಲಿ, ಎಲ್ಲ ಯೋಜನೆಗಳನ್ನು ರಾಜ್ಯಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ನನ್ನ ಪ್ರಿಯ ದೇಶವಾಸಿಗಳೇ,
ಹೊಸ ಭಾರತದ ದೊಡ್ಡ ಶಕ್ತಿ ಪ್ರಜಾಪ್ರಭುತ್ವ. ಆದರೆ ನಮ್ಮ ಪ್ರಜಾಪ್ರಭುತ್ವನ್ನು ಕೇವಲ ಮತಪೆಟ್ಟಿಗೆಗೆ ಮಾತ್ರ ಸೀಮಿತಗೊಳಿಸಿಬಿಟ್ಟಿದ್ದೇವೆ. ಪ್ರಜಾಪ್ರಭುತ್ವವವನ್ನು ಕೇವಲ ಮತಪೆಟ್ಟಿಗೆಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಹೊಸ ಭಾರತದ ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯಿಂದ ಜನರಲ್ಲ, ಬದಲಿಗೆ ಜನರಿಂದಲೇ ವ್ಯವಸ್ಥೆ ನಡೆಯುತ್ತದೆ ಎಂಬ ವಾತಾವರಣವನ್ನು ನಾವು ನಿರ್ಮಿಸಬೇಕಿದೆ. ಅಂತಹ ಪ್ರಜಾಪ್ರಭುತ್ವ ಹೊಸ ಭಾರತದ ಅಸ್ತಿತ್ವವಾಗಬೇಕು ಮತ್ತು ಆ ದಿಸೆಯಲ್ಲಿ ನಾವು ಮುನ್ನಡೆಯಬೇಕು. ಲೋಕಮಾನ್ಯ ತಿಲಕ್ ಅವರು ಹೇಳಿದ್ದರು, “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು” ಎಂದು. ಸ್ವತಂತ್ರ ಭಾರತದಲ್ಲಿ “ಉತ್ತಮ ಆಡಳಿತ ನನ್ನ ಜನ್ಮಸಿದ್ಧ ಹಕ್ಕು” ಎನ್ನುವ ಮಂತ್ರ ನಮ್ಮದಾಗಬೇಕು. ‘ಸುರಾಜ’ ಅಥವಾ ಉತ್ತಮ ಆಡಳಿತ ನಮ್ಮ ಸಾಮುದಾಯಿಕ ಜವಾಬ್ದಾರಿಯಾಗಬೇಕು. ನಾಗರಿಕರು ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಮತ್ತು ಸರ್ಕಾರ ತನ್ನ ಜವಾಬ್ದಾರಿಗಳನ್ನು ಪೂರೈಸಬೇಕು.

ನಾವು ‘ಸ್ವರಾಜ್’ನಿಂದ ‘ಸುರಾಜ್’ಗೆ ಪರಿವರ್ತನೆಗೊಂಡಾಗ, ಜನತೆ ಹಿಂದೆ ಬೀಳುವುದಿಲ್ಲ. ಉದಾಹರಣೆಗೆ, ಸಬ್ಸಿಡಿ ಗ್ಯಾಸ್ ತ್ಯಜಿಸುವಂತೆ ನಾನು ಕರೆ ನೀಡಿದಾಗ, ಇಡೀ ದೇಶ ನನ್ನೊಂದಿಗೆ ಪ್ರತಿಕ್ರಯಿಸಿತು. ನಾನು ಶುದ್ಧತೆ ಬಗೆಗೆ ಮಾತನಾಡಿದ್ದೇನೆ. ಈಗ ದೇಶಾದ್ಯಂತ ಜನರು ಈ ನೈರ್ಮಲ್ಯದ ಆಂದೋಲನವನ್ನು ಮುನ್ನಡೆಸಲು ಕೈಜೋಡಿಸುತ್ತಿದ್ದಾರೆ. ಅಮಾನ್ಯೀಕರಣ ಕ್ರಮವನ್ನು ಘೋಷಿಸಿದಾಗ ಜಗತ್ತೇ ವಿಸ್ಮಯ ವ್ಯಕ್ತಪಡಿಸಿತು. ಇದು ಮೋದಿಯ ಅಂತ್ಯ ಎಂದು ಜನರು ಅಂದುಕೊಂಡರು. ಆದರೆ ದೇಶದ 125 ಕೋಟಿ ಜನತೆ ಇದಕ್ಕೆ ತೋರಿದ ಸಂಯಮ ಮತ್ತು ನಂಬಿಕೆ, ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಹೋರಾಡಲು ನಮಗೆ ಸಾಧ್ಯವಾಯಿತು. ಜನರನ್ನು ಒಳ ಸೇರಿಸಿ ಕೊಳ್ಳುವಂತಹ  ಈ ಹೊಸ ಹವ್ಯಾಸ, ಎಲ್ಲರನ್ನೂ ಒಳಗೊಂಡು ನಮ್ಮ ಗುರಿ ತಲುಪುವ ಹಾದಿಯನ್ನು ಸುಲಭ ಗೊಳಿಸಿದೆ.

ನನ್ನ ಪ್ರಿಯ ಸಹ ದೇಶವಾಸಿಗಳೇ,
“ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯನ್ನು ಲಾಲ್ ಬಹದ್ದೂರ್ ಶಾಸ್ತ್ರಿ ನಮಗೆ ನೀಡಿದ್ದರು. ಅಂದಿನಿಂದ ನಮ್ಮ ರೈತರು ಹಿಂದೆ ತಿರುಗಿ ನೋಡಿಲ್ಲ. ದಾಖಲೆಯ ಇಳುವರಿಯನ್ನು ಉತ್ಪಾದಿಸುತ್ತಿರುವ ರೈತರು, ಅನೇಕ ನೈಸರ್ಗಿಕ ಅನಾನಕೂಲದ ನಡುವೆಯೂ ತಮ್ಮ ಉತ್ಪಾದನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

ನನ್ನ ಪ್ರಿಯ ಸೋದರರೇ ಮತ್ತು ಸೋದರಿಯರೇ,
ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಸಂಪ್ರದಾಯ ಭಾರತದಲ್ಲಿರಲಿಲ್ಲ. ಆದರೂ ಕೆಲವೊಮ್ಮೆ ಅಪರೂಪಕ್ಕೆ ಆಮದು ಮಾಡಿಕೊಂಡಿದ್ದೇ ಆದರೆ, ಅದರ ಪ್ರಮಾಣ ಕೆಲ ಸಾವಿರ ಟನ್ಗಳಲ್ಲಷ್ಟೇ ಇರುತ್ತಿತ್ತು. ಈ ವರ್ಷ ರೈತರು ದೇಶದ ಬಡಜನರಿಗೆ ಪೌಷ್ಠಿಕಾಂಶ ಪೂರೈಸಲು 16 ಲಕ್ಷ ಟನ್ ದ್ವಿದಳ ಧಾನ್ಯ ಉತ್ಪಾದಿಸಿದಾಗ, ಸರ್ಕಾರ ಅವರ  ಉತ್ಪಾದನೆಯನ್ನು ಕೊಳ್ಳುವುದರ ಮೂಲಕ ಉತ್ತೇಜನ ನೀಡಿದೆ. ‘ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆ’ ನಮ್ಮ ರೈತರಿಗೆ ಭದ್ರತೆ ಒದಗಿಸಿದೆ. ಇದೇ ಯೋಜನೆ ಮೂರು ವರ್ಷಗಳ ಹಿಂದೆ ಇನ್ನೊಂದು ಹೆಸರಿನಲ್ಲಿ ಚಾಲ್ತಿಯಲ್ಲಿತ್ತು. ಆದರೆ ಆಗ ಕೇವಲ 3.25 ಕೋಟಿ ರೈತರು ಮಾತ್ರ ಫಲಾನುಭವಿಗಳಾಗಿದ್ದರು. ಆದರೆ ಕಳೆದ 3 ವರ್ಷಗಳ ಕಡಿಮೆ ಅವಧಿಯಲ್ಲಿ ಇದರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಯೋಜನೆಯ ವ್ಯಾಪ್ತಿ ಶೀಘ್ರದಲ್ಲಿಯೇ 5.75 ಕೋಟಿ ರೈತರನ್ನು ಮುಟ್ಟಲಿದೆ.

‘ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆ’ ರೈತರಿಗೆ ಅವಶ್ಯಕವಾದ ನೀರಿನ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿದೆ. ನನ್ನ ರೈತರು ಸಾಕಷ್ಟು ನೀರು ಪಡೆದರೆ, ತಮ್ಮ ಕೃಷಿ ಭೂಮಿಯಿಂದ ಖಂಡಿತಾ ಉತ್ತಮ ಇಳುವರಿಯನ್ನು ಪಡೆಯುತ್ತಾರೆ. ಆದ್ದರಿಂದಲೇ ಕೆಂಪುಕೋಟೆಯ ವೇದಿಕೆಯಿಂದ ಕಳೆದ ವರ್ಷದ ಸ್ವಾತಂತ್ರ್ಯ ದಿನದಂದು ನಾನು ಕೆಲವು ಘೋಷಣೆಗಳನ್ನು ಮಾಡಿದ್ದೆ. ಅವುಗಳಲ್ಲಿ ಒಟ್ಟು 21 ಯೋಜನೆಗಳನ್ನು ನಾವು ಪೂರ್ಣಗೊಳಿಸಿದ್ದು, ಉಳಿದ 50 ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದ್ದೇವೆ. 99 ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ನಾನು ವಾಗ್ದಾನ ಮಾಡಿದ್ದೆ. 2019ರೊಳಗೆ ಆ 99 ಬೃಹತ್ ಯೋಜನೆಗಳನ್ನು ಪೂರೈಸುವುದರೊಂದಿಗೆ ನಾವು ನಮ್ಮ ಮಾತಿಗೆ ಬದ್ಧರಾಗಿ ನಡೆದುಕೊಳ್ಳಲಿದ್ದೇವೆ. ರೈತನಿಗೆ ಉತ್ತಮ  ಬಿತ್ತನೆ  ಬೀಜ ವಿತರಿಸುವುದರಿಂದಿಡಿತು, ತಾನು ಉತ್ಪಾದಿಸಿದ ಬೆಳೆಯನ್ನು ಸುರಕ್ಷಿತವಾಗಿ ಮಾರುಕಟ್ಟೆಗೆ ತಲುಪಿಸುವವರೆಗೆ ಅವರ ಕೈ ಹಿಡಿಯಬೇಕು . ಅಲ್ಲಿಯವರೆಗೂ ನಾವು ಬಹುತೇಕ ರೈತರನ್ನು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ನಮಗೆ ಮೂಲಸೌಕರ್ಯ ಮತ್ತು ಸರಬರಾಜು ವ್ಯವಸ್ಥೆ ಬೇಕಿದೆ. ಪ್ರತೀವರ್ಷ ಕೋಟ್ಯಂತರ ರೂಪಾಯಿ ತರಕಾರಿ, ಹಣ್ಣು ಮತ್ತು ಬೇಳೆ ಕಾಳುಗಳು ವ್ಯರ್ಥವಾಗುತ್ತಿವೆ. ಈ ಪರಿಸ್ಥಿತಿಯ  ಬದಲಾವಣೆಗಾಗಿ ಸರ್ಕಾರ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಮೂಲಸೌಕರ್ಯ ನಿರ್ಮಾಣಕ್ಕಾಗಿ ಸರ್ಕಾರ ‘ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆ ‘ ಯನ್ನು  ಆರಂಭಿಸಿದೆ. ಇದರೊಂದಿಗೆ ಬೀಜ ವಿತರಣೆಯಿಂದ ಮಾರುಕಟ್ಟೆಗೆ ತನ್ನ ಉತ್ಪನ್ನಗಳನ್ನು ತರುವವರೆಗಿನ  ವ್ಯವಸ್ಥೆಯಲ್ಲಿ ರೈತನ ಕೈಹಿಡಿಯಲಿದೆ. ಇಂತಹ ಕ್ರಮಗಳು ಕೋಟ್ಯಂತರ ರೈತರ ಬದುಕನ್ನು ಬದಲಾಯಿಸಲಿವೆ.

ಬೇಡಿಕೆ ಮತ್ತು ತಂತ್ರಜ್ಞಾನದ ಬದಲಾವಣೆಯಿಂದಾಗಿ ದೇಶದಲ್ಲಿ ಉದ್ಯೋಗಗಳ ಸ್ವರೂಪವೂ ಬದಲಾಗುತ್ತಿದೆ. ಉದ್ಯೋಗ ಸಂಬಂಧಿತ ಯೋಜನೆಗಳಲ್ಲಿ ಸರ್ಕಾರ ಹಲವಾರು ಹೊಸ ಕ್ರಮಗಳನ್ನು ಪರಿಚಯಿಸಿದೆ. 21ನೇ ಶತಮಾನಕ್ಕೆ ಅನುಗುಣವಾಗಿ ಉದ್ಯೋಗಗಳಿಗೆ ಅವಶ್ಯಕವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಆಕಾಂಕ್ಷಿಗಳನ್ನು ರೂಪಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಯುವಜನತೆಗೆ ಸಮಗ್ರ ಸಾಲ ನೀಡುವ ಬೃಹತ್ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ನಮ್ಮ ಯುವಜನತೆ ಸ್ವತಂತ್ರವಾಗಿರಬೇಕು. ನಮ್ಮ ಯುವಜನತೆ ಉದ್ಯೋಗ ಪಡೆಯಬೇಕು. ನಮ್ಮ ಯುವಕರು ಇತರರಿಗೆ ಉದ್ಯೋಗ ನೀಡವಂತಾಗಬೇಕು. ಆ ದಿಸೆಯಲ್ಲಿ, ಕಳೆದ ಮೂರು ವರ್ಷಗಳಲ್ಲಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಲಕ್ಷಾಂತರ ಯುವಕರು ಸ್ವಾಲಂಬಿಯಾಗಲು ಕಾರಣವಾಗಿದೆ. ಇದು ಓರ್ವ ಯುವಕ ಕೇವಲ ಒಬ್ಬರಿಗೆ, ಇಬ್ಬರಿಗೆ ಅಥವಾ ಮೂವರಿಗೆ ಕೆಲಸ ನೀಡುವಷ್ಟೇ ಸಣ್ಣಪ್ರಮಾಣದ್ದು ಅಲ್ಲ .

ಶಿಕ್ಷಣ ಕ್ಷೇತ್ರದಲ್ಲಿ ನಾವು ಕೈಗೊಂಡ ಕ್ರಮಗಳಿಂದಾಗಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಾಗಲು ಪ್ರೋತ್ಸಾಹ ದೊರೆತಂತಾಗಿದೆ. 20 ವಿಶ್ವವಿದ್ಯಾಲಯಗಳಿಗೆ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವಂತೆ ನಾವು ಮಾಡಿದ್ದೇವೆ. ಅವುಗಳ ಕಾರ್ಯದಲ್ಲಿ ಸರ್ಕಾರ ಯಾವ ರೀತಿಯಿಂದಲೂ ಮೂಗು ತೂರಿಸುವುದಿಲ್ಲ. ಇದಲ್ಲದೇ, ಸರ್ಕಾರ 1,000 ಕೋಟಿಯವರೆಗೂ ಧನಸಹಾಯ ಮಾಡಲಿದೆ. ನಮ್ಮ ಶಿಕ್ಷಣ ಸಂಸ್ಥೆಗಳು ಮುಂದೆ ಬಂದು, ಜಾಗತಿಕ ಯಶಸ್ಸನ್ನು ಸಾಧಿಸಲಿವೆ ಎಂಬ ವಿಶ್ವಾಸ ನನಗಿದೆ. ಕಳೆದ ಮೂರು ವರ್ಷಗಳಲ್ಲಿ ನಾವು 6 ಐಐಟಿ, 7 ಹೊಸ ಐಐಎಂ ಮತ್ತು 8 ಹೊಸ ಐಐಐಟಿಗಳನ್ನು ಸ್ಥಾಪಿಸಿದ್ದೇವೆ ಮತ್ತು  ಉದ್ಯೋಗಾವಕಾಶಗಳನ್ನು ಶಿಕ್ಷಣದೊಂದಿಗೆ ಸಂಮಿಳಿತಗೊಳಿಸುವ ಬಗೆಗೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ

ನನ್ನ ತಾಯಂದಿರೇ ಮತ್ತು ಅಕ್ಕತಂಗಿಯರೇ,
ಕುಟುಂಬದಲ್ಲಿರುವ ಮಹಿಳೆಯರು ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಅವರಿಗೆ ರಾತ್ರಿಯ ವೇಳೆಯೂ ಉದ್ಯೋಗ ದೊರಕಿಸಿಕೊಡುವ ಸಲುವಾಗಿ ಕಾರ್ಮಿಕ ಕಾನೂನುಗಳಿಗೆ ಪ್ರಮುಖ ಸುಧಾರಣೆಗಳನ್ನು ತರುವತ್ತ ಹೆಜ್ಜೆ ಇರಿಸಿದ್ದೇವೆ. ನಮ್ಮ ತಾಯಿಂದಿರು ಮತ್ತು ಸೋದರಿಯರು ನಮ್ಮ ಕುಟುಂಬ ವ್ಯವಸ್ಥೆಯ ಅವಿಭಾಜ್ಯ ಘಟಕವಾಗಿದ್ದಾರೆ. ನಮ್ಮ ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ಅವರ ಕೊಡುಗೆ ಪ್ರಮುಖ. ಆದ್ದರಿಂದ ಈ ಹಿಂದೆ ಇದ್ದ 12 ವಾರಗಳ ಸಂಬಳ ಸಹಿತ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಿದ್ದೇವೆ.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ, ‘ತ್ರಿವಳಿ ತಲಾಖ್’ನಂತಹ ವ್ಯವಸ್ಥೆಯಿಂದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಜೀವನ ಸಾಗಿಸುತ್ತಿರುವ ನನ್ನ ಸೋದರಿಯರನ್ನು ನಾನು ಗೌರವಿಸುತ್ತೇನೆ. ಅವರಿಗೆ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ಅಂತಹ ಸಂತ್ರಸ್ಥ ಮಹಿಳೆಯರು ದೇಶಾದ್ಯಂತ ಬೃಹತ್ ಹೋರಾಟಕ್ಕೆ ನಾಂದಿ  ಹಾಡಿದ್ದಾರೆ. ಅವರು ಈ ದೇಶದ ಬುದ್ದಿಜೀವಿ ವರ್ಗದ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದಾರೆ. ಮಾಧ್ಯಮಗಳೂ ಕೂಡ ಅವರಿಗೆ ಬೆನ್ನೆಲುಬಾಗಿ ನಿಂತಿವೆ. ಒಟ್ಟಾರೆ, ‘ತ್ರಿವಳಿ ತಲಾಖ್’ವಿರುದ್ಧ ದೇಶಾದ್ಯಂತ ಹೋರಾಟಗಳು ಆರಂಭವಾಗಿವೆ. ಈ ‘ತ್ರಿವಳಿ ತಲಾಖ್’ವಿರುದ್ಧ ನಿಂತಿರುವ ಮತ್ತು ಹೋರಾಟಕ್ಕೆ ನಾಂದಿ ಹಾಡಿದ  ಆ ಎಲ್ಲಾ ಸೋದರಿಯರನ್ನು ನಾನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ದೇಶವೂ ಅವರಿಗೆ ಸಹಾಯ ಮಾಡಲಿದೆ ಎಂದು ನಾನು ನಂಬಿದ್ದೇನೆ. ಆ ತಾಯಂದಿರ ಮತ್ತು ಸೊದರಿಯರ ಹಕ್ಕುಗಳನ್ನು ಪಡೆಯಲು ದೇಶ ಒತ್ತಾಸೆಯಾಗಿ ನಿಲ್ಲಲಿದೆ ಎಂದು ನಾನು ನಂಬಿದ್ದೇನೆ. ಮಹಿಳಾ ಸಬಲೀಕರಣದ ಹಾದಿಯಲ್ಲಿ ಭಾರತ ಅವರ ಕನಸುಗಳಿಗೆ ಪೂರಕವಾಗಿ ನಿಂತು, ಅವರ ಹೋರಾಟಕ್ಕೆ ಜಯ ತಂದುಕೊಡಲಿದೆ; ಇದರ ಬಗೆಗೆ ನಾನು ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ.

ನನ್ನ ಪ್ರಿಯ ದೇಶವಾಸಿಗಳೇ,
ಕೆಲವೊಮ್ಮೆ ತಾಳ್ಮೆ ಇಲ್ಲದೆ ನಂಬಿಕೆಯ ಹೆಸರಿನಲ್ಲಿ ಕೆಲವರು ಸಮಾಜ ಬೆಸೆಯವ ಎಳೆಯನ್ನೆ ನಾಶಪಡಿಸುತ್ತಿದ್ದಾರೆ. ಶಾಂತಿ, ಸಹಬಾಳ್ವೆ  ಮತ್ತು ಏಕತೆ ಈ ದೇಶವನ್ನು ಒಟ್ಟಾಗಿ ತಂದಿರುವ ಎಳೆಗಳು. ಜಾತಿವಾದದ ವಿಷ ಮತ್ತು ಕೋಮುವಾದ ಎಂದಿಗೂ ದೇಶಕ್ಕೆ ಲಾಭ ತರುವುದಿಲ್ಲ. ಇದು ಗಾಂಧಿ, ಬುದ್ಧ ಬದುಕಿದ ನಾಡಾಗಿದ್ದು, ಎಲ್ಲರನ್ನೂ ಒಳಗೊಳ್ಳಿಸಿಕೊಂಡು ನಾವು ಮುನ್ನಡೆಯಬೇಕಿದೆ. ಇದು ನಮ್ಮ ದೇಶದ ಸಂಸ್ಕೃತಿ  ಮತ್ತು ಸಂಪ್ರದಾಯದ ಭಾಗವಾಗಿದೆ.  ಇದನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದರೆ, ನಂಬಿಕೆ, ಹಿಂಸೆಯ ಹೆಸರನ್ನು ನಾವು ದೂರವಿಡಬೇಕಾಗುತ್ತದೆ.  ಆಸ್ಪತ್ರೆಯಲ್ಲಿ ರೋಗಿಗಳಿಗೆ ಏನಾದರೂ ಆಯಿತು ಮತ್ತು ಆಸ್ಪತ್ರೆಗೆ ಬೆಂಕಿ ಬೀಳುತ್ತದೆ; ಯಾವುದೋ ಅಪಘಾತವಾಯಿತು ಮತ್ತು ವಾಹನಗಳನ್ನು ಸುಟ್ಟುಹಾಕಲಾಯಿತು; ಜನಗಳು ಪ್ರತಿಭಟನೆಗೆ ಮುಂದಾಗಿ, ಸಾರ್ವಜನಿಕ ಆಸ್ತಿಯನ್ನು ಸುಟ್ಟುಹಾಕಿದರು; ಇದು ಸ್ವತಂತ್ರ ಭಾರತಕ್ಕಾಗಿ ಮಾಡುವ ಕೆಲಸವೇ? ಈ ಎಲ್ಲಾ ಆಸ್ತಿಗಳು ದೇಶದ 125 ಕೋಟಿ ಜನರಿಗೆ ಸೇರಿದ್ದು.

 

ಈ  ಕೆಟ್ಟ ಸಂಸ್ಕೃತಿ  ಯಾರ ಕೊಡುಗೆ? ಇದು ನಮ್ಮದೇ ಆಸ್ತಿ, 125 ಕೋಟಿ ಜನರ  ಆಸ್ತಿ. ಇದು ಯಾರ ನಂಬಿಕೆ? ಇದು ನಮ್ಮದೇ ನಂಬಿಕೆ, 125 ಕೋಟಿ ಜನರ ನಂಬಿಕೆ; ಆದ್ದರಿಂದಲೇ ನಂಬಿಕೆಯ ಆಧಾರದಲ್ಲಿ ನಡೆಯುವ ಹಿಂಸೆಯ ಮಾರ್ಗ ಭಾರತದಲ್ಲಿ ಎಂದಿಗೂ ಯಶಸ್ಸು ಸಾಧಿಸುವುದಿಲ್ಲ. ದೇಶ ಇದನ್ನು ಎಂದಿಗೂ ಸಹಿಸುವುದಿಲ್ಲ. ಒಂದು ಕಾಲದಲ್ಲಿ ನಮ್ಮ ಘೋಷವಾಕ್ಯ, ‘ಭಾರತ ಬಿಟ್ಟು ತೊಲಗಿ’ ಎಂಬುದಾಗಿತ್ತು. ಇಂದು ನಮ್ಮ ಘೋಷವಾಕ್ಯ ‘ಭಾರತವನ್ನು ಸೇರಿಸಿ’ ಎಂಬುದಾಗಬೇಕಿದೆ. ದೇಶವನ್ನು ಮುನ್ನಡೆಸಬೇಕಾದರೆ ಎಲ್ಲಾ ಸಮುದಾಯಗಳನ್ನು ಮತ್ತು ಎಲ್ಲಾ ವರ್ಗಗಳನ್ನೂ ನಾವು ಒಟ್ಟಾಗಿ ಸೇರಿಸಿ ಮುಂದೆ ಕೊಂಡೊಯ್ಯಬೇಕಿದೆ.

ಸಂವೃದ್ದ   ಭಾರತ ನಿರ್ಮಾಣಕ್ಕಾಗಿ, ನಾವು ಸದೃಢ ಆರ್ಥಿಕತೆ, ಸಮತೋಲಿತ ಅಭಿವೃದ್ಧಿ ಮತ್ತು ಮುಂದಿನ ತಲೆಮಾರಿಗಾಗಿನ ಮೂಲಸೌಕರ್ಯ ನಿರ್ಮಿಸಬೇಕಿದೆ. ಇವುಗಳಿಂದ ಮಾತ್ರ ನಮ್ಮ ಭಾರತದ ಕನಸನ್ನು ನಾವು ಸಾಧೃಶಗೊಳಿಸಿಕೊಳ್ಳಲು ಸಾಧ್ಯ.

ಸೋದರರೇ ಮತ್ತು ಸೋದರಿಯರೇ,
ಕಳೆದ ಮೂರು ವರ್ಷಗಳಲ್ಲಿ ನಾವು ಅಸಂಖ್ಯ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಕೆಲವು ನಿಮ್ಮ ಗಮನಕ್ಕೆ ಬಂದಿರಬಹುದು ಮತ್ತು ಕೆಲವು ಬಾರದೇ ಇರಬಹುದು. ಆದರೆ ಒಂದಂತೂ ನಿಜ; ನೀವು ದೊಡ್ಡ ಬದಲಾವಣೆಗಳೆಡೆಗೆ ನಡೆಯುವಾಗ, ಖಂಡಿತಾ ಅಡ್ಡಿಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಈ ಸರ್ಕಾರದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿ;  ರೈಲೊಂದು ನಿಲ್ದಾಣವನ್ನು ದಾಟಿ ಮುಂದೆ ಚಲಿಸುತ್ತಾ ಹಳಿ ಬದಲಾಯಿಸುವಾಗ ಅದರ 60 ಕಿಲೋಮೀಟರ್ ವೇಗವನ್ನು 30 ಕಿಲೋಮೀಟರ್ಗೆ  ಇಳಿಸಲೇಬೇಕಾಗುತ್ತದೆ. ಒಂದು ಹಳಿಯಿಂದ ಇನ್ನೊಂದು ಹಳಿಗೆ ಬದಲಾಯಿಸುವಾಗ ಅದರ ವೇಗ ಕಡಿತವಾಗಲೇಬೇಕು. ಆದರೆ ನಾವು ಯಾವುದೇ ವೇಗವನ್ನು ಕಡಿತಗೊಳಿಸದೇ ಹೊಸ ಹಳಿಗೆ ದೇಶವನ್ನು ವರ್ಗಾಯಿಸುತ್ತಿದ್ದೇವೆ. ನಾವು ಅದೇ ವೇಗದಲ್ಲಿ ನಿರ್ವಹಿಸುತ್ತಿದ್ದೇವೆ. ನಾವು ಜಿಎಸ್ಟಿ ಅಂತಹ ಹಲವಾರು ಹೊಸ ಕಾನೂನು ಮತ್ತು ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದೇವೆ. ಜತೆಗೆ , ನಾವು ಕೈಗೊಂಡ ಕರ್ತವ್ಯಗಳನ್ನು ಸಂಪೂರ್ಣಗೊಳಿಸುತ್ತಿದ್ದೇವೆ ಹಾಗೂ ಇನ್ನೂ ಹಲವು ಕೆಲಸಗಳು ಮುಂದುವರೆಯುತ್ತಿವೆ.

ನಾವು ಮೂಲಸೌಕರ್ಯದ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ನಾವು, ಸಣ್ಣ ಪಟ್ಟಣಗಳಲ್ಲಿರುವ ರೈಲ್ವೇ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು, ವಿಮಾನ ನಿಲ್ದಾಣಗಳನ್ನು ನಿರ್ಮಿಸಲು, ಸಮುದ್ರ ಮಾರ್ಗ ಮತ್ತು ರಸ್ತೆ ಮಾರ್ಗಗಳನ್ನು ವಿಸ್ತರಿಸಲು, ಅನಿಲ ಮಾರ್ಗಗಳ  ಅಳವಡಿಕೆಗಾಗಿ ಅಥವಾ ನೀರಿನ ಸಂಪರ್ಕ ಕಲ್ಪಿಸಲು, ಆಫ್ಟಿಕಲ್ ಫೈಬರ್ ಅಳವಡಿಕೆಯಂತಹ ಅನೇಕ ಮೂಲಸೌಕರ್ಯ ನಿರ್ಮಾಣಕ್ಕಾಗಿ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದೇವೆ. ಎಲ್ಲ ರೀತಿಯ ಆಧುನಿಕ ಮೂಲಸೌಕರ್ಯಗಳಿಗೆ ನಾವು ಒತ್ತು ನೀಡಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,
21ನೇ ಶತಮಾನದಲ್ಲಿ ದೇಶ ಮುನ್ನಡೆಯಬೇಕಿದ್ದರೆ ಭಾರತದ ಪೂರ್ವಭಾಗದ ಸಂವೃದ್ದಿ  ಆವಶ್ಯಕ . ಇಲ್ಲಿ ಪ್ರಚಂಡ ಅವಕಾಶ, ಸಾಕಷ್ಟು  ಮಾನವ ಸಂಪತ್ತು, ಅಗಾಧ   ಪ್ರಮಾಣದ ನೈಸರ್ಗಿಕ ಸಂಪನ್ಮೂಲ, ಕಾರ್ಮಿಕ ಶಕ್ತಿಯಿದ್ದು, ನಮ್ಮ ಬದುಕನ್ನೇ ಬದಲಾಯಿಸುವ ಸಾಮರ್ಥ್ಯವಿದೆ  . ಈಶಾನ್ಯ ಭಾಗ, ಓಡಿಸ್ಸಾ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರವನ್ನು ಒಳಗೊಂಡ ಪೂರ್ವ ಭಾರತದೆಡೆಗೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಿದ್ದೇವೆ. ಈ ರಾಜ್ಯಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ. ಈ ಎಲ್ಲಾ ರಾಜ್ಯಗಳು ಅಗಾಧ  ಪ್ರಮಾಣದ ಸ್ವಾಭಾವಿಕ ಸಂಪನ್ಮೂಲಗಳನ್ನು ಹೊಂದಿದ್ದು, ದೇಶವನ್ನು ಹೊಸ ಎತ್ತರಕ್ಕೆ ಒಯ್ಯಲು ಶ್ರಮಿಸುತ್ತಿವೆ.

ಸೋದರರೇ ಮತ್ತು ಸೋದರಿಯರೇ,
ಭಾರತವನ್ನು ಲಂಚಮುಕ್ತ ರಾಷ್ಟವನ್ನಾಗಿ ಮಾಡುವುದು ಪ್ರಮುಖ ಕಾರ್ಯವಾಗಿದ್ದು, ಅದಕ್ಕೆ ಅಗತ್ಯವಾದ ಪ್ರೋತ್ಸಾಹ ನೀಡುತ್ತಿದ್ದೇವೆ. ಸರ್ಕಾರ ರಚಿಸಿದ ನಂತರದ ನಮ್ಮ ಮೊದಲ ಕರ್ತವ್ಯ ಎಸ್ಐಟಿಯನ್ನು ರಚಿಸುವುದಾಗಿತ್ತು. ಸರ್ಕಾರ ರಚಿಸಿದ ಮೂರೇ ವರ್ಷಗಳಲ್ಲಿ ನಾವು 1.25 ಲಕ್ಷ ಕೋಟಿ ರೂಪಾಯಿ ಕಪ್ಪು ಹಣವನ್ನು ವಶಪಡಿಸಿಕೊಂಡಿದ್ದೇವೆ ಎಂದು ನಿಮಗೆ ತಿಳಿಸಲು ನನಗೆ ಹೆಮ್ಮೆ ಎನಿಸುತ್ತಿದೆ . ಕಪ್ಪುಹಣದ ತಪ್ಪಿತಸ್ಥರನ್ನು ಹಿಡಿದು, ಶರಣಾಗತಿಗೆ ಒಳಪಡಿಸಲಿದ್ದೇವೆ.

ನೋಟು ಅಮಾನ್ಯೀಕರಣ ಇದರ ಮುಂದುವರೆದ ಭಾಗ. ಅಮಾನ್ಯೀಕರಣದಿಂದ ನಾವು ಹಲವಾರು ಮೈಲುಗಲ್ಲುಗಳನ್ನು ಮುಟ್ಟಿದ್ದೇವೆ. ಬಟ್ಟಿಚ್ಚಿದ್ದ ಕಪ್ಪುಹಣವನ್ನು ಅಧಿಕೃತ ಆರ್ಥಿಕತೆಯೊಳಗೆ ತರಲಾಗಿದೆ. ನಿಮಗೆ ಗೊತ್ತಿರಬಹುದು, ನಾವು ಗಡುವಿನ ದಿನಗಳನ್ನು 7 ರಿಂದ 10 ದಿನಗಳಿಗೆ ಮತ್ತು 15 ದಿನಗಳಿಗೆ ವಿಸ್ತರಿಸುತ್ತಿದ್ದೆವು. ಕೆಲವೊಮ್ಮೆ ಹಳೆಯ ನೋಟುಗಳನ್ನು ಪೆಟ್ರೋಲ್ ಬಂಕುಗಳಲ್ಲಿ , ಔಷಧಾಲಯಗಳಲ್ಲಿ ಮತ್ತು ರೈಲ್ವೇ ಸ್ಟೇಷನ್ ಗಳಲ್ಲಿ  ಬಳಕೆಗೆ ಅವಕಾಶ ನೀಡಿದ್ದವು. ಈ ಎಲ್ಲ ಕ್ರಮ, ಗಡುವು, ಮಿತಿಗಳ ಉದ್ದೇಶ ಹಳೆಯ ನೋಟುಗಳನ್ನು ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಗೆ ತರುವುದಾಗಿತ್ತು, ಇದರಿಂದ ನಾವು ಕೈಗೊಂಡ ಕಾರ್ಯದ ಯಶಸ್ಸನ್ನು  ಮಟ್ಟಿದಂತಾಯಿತು. ಬಾಹ್ಯ ತಜ್ಞರ ಸಂಶೋಧನೆಯ ಪ್ರಕಾರ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಂದೂ ಭಾಗವಹಿಸದ ಸುಮಾರು 3 ಲಕ್ಷ ಕೋಟಿ ರೂಪಾಯಿ ಹಣವನ್ನು ಅಮಾನ್ಯೀಕರಣದಿಂದಾಗಿ ವ್ಯವಸ್ಥೆಯೊಳಕ್ಕೆ ತರಲಾಯಿತು .

ಬ್ಯಾಂಕುಗಳಲ್ಲಿ ಜಮೆ ಮಾಡಲಾದ 1.75 ಲಕ್ಷ ಕೋಟಿ ರೂಪಾಯಿ ಹಣದ ಮೂಲವನ್ನು ಹುಡುಕಲಾಗುತ್ತಿದೆ. ಸುಮಾರು 2 ಲಕ್ಷ ಕೋಟಿ ರೂಪಾಯಿಯಷ್ಟು ಕಪ್ಪುಹಣವನ್ನು ಬ್ಯಾಂಕು ಗಳಲ್ಲಿ  ಜಮೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಹಣದ ವಹಿವಾಟಿನಲ್ಲಿ ಪಾರದರ್ಶಕತೆ ಬಂದಂತಾಗಿದೆ. ಇದರಿಂದ ಕಪ್ಪುಹಣದ ಹರಿವೂ ನಿಂತಂತಾಗಿದೆ. ಕಳೆದ ವರ್ಷದಲ್ಲಿ ಏಪ್ರಿಲ್ 01 ರಿಂದ ಆಗಸ್ಟ್ 05 ರವರೆಗಿನ ಆದಾಯ ತೆರಿಗೆ ಸಲ್ಲಿಸಿದವರ ಸಂಖ್ಯೆ ಕೇವಲ 22 ಲಕ್ಷ ಇದ್ದದ್ದು, ಪ್ರಸಕ್ತ ಆರ್ಥಿಕ ವರ್ಷದ ಅದೇ ಅವಧಿಯಲ್ಲಿ 56 ಲಕ್ಷಕ್ಕೆ ಏರಿಕೆಯಾಗಿದೆ. ಒಂದು ರೀತಿ ಈ ವರ್ಷದ ಆದಾಯ ತೆರಿಗೆ ಸಲ್ಲಿಸಿದವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ  ದುಪ್ಪಟ್ಟಿಗಿಂತ ಹೆಚ್ಚಾದಂತಾಗಿದೆ. ಕಪ್ಪು ಹಣ ವಿರುದ್ಧದ ನಮ್ಮ ಹೋರಾಟದ ಫಲವೇ ಇದು.

ತಾವು ಘೋಷಿಸಿಕೊಂಡ ಆದಾಯಕ್ಕಿಂತ ಅಧಿಕ ಆದಾಯ ಹೊಂದಿರುವ ಸುಮಾರು 18 ಲಕ್ಷಕ್ಕಿಂತಲೂ ಹೆಚ್ಚಿನ ಮಂದಿಯನ್ನು ಗುರುತಿಸಲಾಗಿದೆ. ಇದಕ್ಕೆ ಅವರೆಲ್ಲಾ ಸಮಂಜಸ ಉತ್ತರ ಕೊಡಬೇಕಿದೆ. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸುಮಾರು 4.5 ಲಕ್ಷ ತೆರಿಗೆದಾರರು ಮುಂದೆ ಬಂದಿದ್ದು, ಸರಿ ದಾರಿಯಲ್ಲಿ ನಡೆಯಲು ಮುಂದಾಗಿದ್ದಾರೆ. ಆದಾಯ ತೆರಿಗೆ ಎಂದರೆ ಅರಿಯದೇ ಇದ್ದ ಮತ್ತು ಇದುವರೆಗೂ ಆದಾಯ ತೆರಿಗೆ ಸಲ್ಲಿಸದೇ ಇದ್ದ ಸುಮಾರು ಒಂದು ಲಕ್ಷ ಮಂದಿ ತೆರಿಗೆ ಪಾವತಿಸಲೇ ಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ.

ಸೋದರರೇ ಮತ್ತು ಸೋದರಿಯರೇ,
ನಮ್ಮ ದೇಶದಲ್ಲಿ ಕೆಲ ಕಂಪೆನಿಗಳು ಮುಚ್ಚಿದರೇ ಅದರ ಬಗೆಗೆ ಅಂತ್ಯವೇ ಇಲ್ಲದ ಚರ್ಚೆ ಮತ್ತು ವಾದಗಳಲ್ಲಿ ನಾವು ತೊಡಗಿಕೊಳ್ಳುತ್ತೇವೆ. ಜನರು ಆರ್ಥಿಕತೆಯೇ ಕುಸಿಯುವ ಬಗೆಗೆ ಊಹಾಪೋಹ   ಮತ್ತಿತರ ಕಥೆಗಳನ್ನು ಸೃಷ್ಠಿಸುತ್ತಾರೆ.    ಕಾಳಸಂತೆಕೋರರೇ ನಕಲಿ ಕಂಪೆನಿಗಳನ್ನು ಹೊಂದಿರುವವರು ಎನ್ನುವ ಸತ್ಯ ನಿಮಗೆ ಆಶ್ಚರ್ಯ ತರಬಹುದು. ನೋಟು ಅಮಾನ್ಯೀಕರಣದ ನಂತರದ ವರದಿಗಳು ಹವಾಲಾ ವರ್ಗಾವಣೆ ಮಾಡುವ  ಸುಮಾರು 3 ಲಕ್ಷ ನಕಲಿ ಕಂಪೆನಿಗಳು ಇವೆ ಎಂಬ ಆಶ್ಚರ್ಯಕರ ಸಂಗತಿಯನ್ನು ಹೊರಹಾಕಿವೆ.  ಇವುಗಳ ಪೈಕಿ   ಇದುವರೆಗೂ ಸುಮಾರು 1.75 ಲಕ್ಷ ಕಂಪೆನಿಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ.

ಕೇವಲ ಐದು ಕಂಪೆನಿಗಳು ತಮ್ಮ ಬಾಗಿಲು ಮುಚ್ಚಿದರೆ ಬಹುದೊಡ್ಡ ಸಾರ್ವಜನಿಕ ಪ್ರತಿಭಟನೆ ವ್ಯಕ್ತವಾಗುತ್ತದೆ. ನಾವಿಲ್ಲಿ ಒಂದು ಲಕ್ಷದ ಎಪ್ಪತೈದು ಸಾವಿರ ಕಂಪೆನಿಗಳನ್ನು ಮುಚ್ಚಿದ್ದೇವೆ. ದೇಶದ ಸಂಪತ್ತನ್ನು ಲೂಟಿ ಹೊಡೆದವರು ಇದಕ್ಕೆ ಉತ್ತರಿಸಬೇಕು. ನಾವು ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ.

ನಿಮಗೆ ಮತ್ತೊಂದು ಸಂಗತಿ ಆಶ್ಚರ್ಯವೆನಿಸಬಹುದು; ಒಂದೇ ವಿಳಾಸದಿಂದ ಹಲವಾರು ನಕಲಿ ಕಂಪೆನಿಗಳು ಕಾರ್ಯನಿರ್ವಸುವ ಸಂಗತಿ. ಸರಿಸುಮಾರು 400 ಕಂಪೆನಿಗಳು ಒಂದೇ ವಿಳಾಸದಿಂದ ಕಾರ್ಯನಿರ್ವಹಣೆ ಮಾಡಿರುವುದು ಪತ್ತೆಯಾಗಿದೆ. ಅವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಇವೆಲ್ಲವೂ ಒಂದು ರೀತಿಯ ಒಪ್ಪಂದಗಳಾಗಿದ್ದವು.

ಸೋದರ ಮತ್ತು ಸೋದರಿಯರೇ,
ಆದ್ದರಿಂದಲೇ ನಾನು ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು. ದೇಶದ ಉಜ್ವಲ ಭವಿಷ್ಯಕ್ಕಾಗಿ ಮತ್ತು ಜನಗಳ ಒಳಿತಿಗಾಗಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ.

ಸೋದರ ಮತ್ತು ಸೋದರಿಯರೇ,
ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಎಸ್ಟಿಯಿಂದ ಇಡೀ ವ್ಯವಸ್ಥೆ ಮತ್ತಷ್ಟು ಪಾರದರ್ಶಕವಾಗಲಿದ್ದು, ನಮ್ಮ ಹೋರಾಟವೂ ಹೆಚ್ಚಾಗಲಿದೆ. ಜಿಎಸ್ಟಿಯ ಪರಿಚಯದ ನಂತರ ಓರ್ವ ಸಾಮಾನ್ಯ ಟ್ರಕ್ ಚಾಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುವಲ್ಲಿ  ಸುಮಾರು ಶೇ. 30ರಷ್ಟು ಸಮಯವನ್ನು ಉಳಿಸುತ್ತಿದ್ದಾನೆ. ಚೆಕ್ ಪೋಸ್ಟ್ಗಳನ್ನು ತೆಗೆದುಹಾಕಿರುವುದರಿಂದ ನೂರಾರು ಕೋಟಿ ರೂಪಾಯಿ ಉಳಿತಾಯವಾಗಿದೆ. ಇದು ಆ ಚಾಲಕನ ದಕ್ಷತೆಯಲ್ಲಿ ಶೇ. 30ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದ ಸಾರಿಗೆ ಕ್ಷೇತ್ರದಲ್ಲಿ ಶೇ. 30ರಷ್ಟು ಹೆಚ್ಚಾದ ದಕ್ಷತೆಯ ಪರಿಣಾಮವನ್ನು ನೀವು ಬಲ್ಲಿರಾ? ಜಿಎಸ್ಟಿ ಈ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,
ಅಮಾನ್ಯೀಕರಣದಿಂದ ಇಂದು ಬ್ಯಾಂಕುಗಳಲ್ಲಿ ಸಾಕಷ್ಟು ಹಣದ ಹರಿವಿದೆ. ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ಇಳಿಸುತ್ತಿವೆ. ಸಾಮಾನ್ಯ ವ್ಯಕ್ತಿಯೂ ಕೂಡ ಮುದ್ರಾ ಮೂಲಕ ಹಣವನ್ನು ಪಡೆಯುವಂತಾಗಿದ್ದಾನೆ. ತನ್ನ ಕಾಲ ಮೇಲೆ ತಾನು ನಿಲ್ಲವ ಅವಕಾಶಗಳನ್ನು ಅವನು ಪಡೆಯುತ್ತಿದ್ದಾನೆ. ಒಂದು ದಿನ ತಮ್ಮ ಸ್ವಂತ ಮನೆಯನ್ನು ಹೊಂದುವ ಕನಸು ಕಾಣುತಿದ್ದ ಮಧ್ಯಮ ವರ್ಗ ಮತ್ತು ನಿರ್ಲಕ್ಷಿತ ಸಮುದಾಯಗಳು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯುತ್ತಿವೆ. ಇಂತಹ ಹೆಜ್ಜೆಗಳು ದೇಶದ ಆರ್ಥಿಕ ಪ್ರಗತಿಗೆ ಅನೇಕ ರೀತಿ ಕೊಡುಗೆ ನೀಡುತ್ತಿವೆ.

ನನ್ನ ಪ್ರೀತಿಯ ದೇಶವಾಸಿಗಳೇ,
ಕಾಲ ಬದಲಾಗಿದೆ. ನಾವು 21ನೇ ಶತಮಾನದಲ್ಲಿದ್ದೇವೆ. ಜಗತ್ತಿನ ಅತೀ ಹೆಚ್ಚು ಯುವಕರು ಇರುವುದೇ ನಮ್ಮ ದೇಶದಲ್ಲಿ. ಡಿಜಿಟಲ್ ಜಗತ್ತಿನಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಳು ಭಾರತಕ್ಕೆ ಅಪಾರ ಮನ್ನಣೆ ತಂದಿವೆ. ನಾವಿನ್ನೂ ಹಳೇ ಮನಸ್ಥಿತಿಯಲ್ಲೇ ಇರಬೇಕೇ? ಒಂದು ಕಾಲದಲ್ಲಿ ಚರ್ಮದ ನಾಣ್ಯಗಳು ಚಲಾವಣೆಯಲ್ಲಿದ್ದವು. ಕ್ರಮೇಣ ಅವು ಕಣ್ಮರೆಯಾದವು. ಇಂದು ನಮ್ಮ ಬಳಿ ಕಾಗದದ ನೋಟುಗಳಿವೆ. ನಿಧಾನವಾಗಿ ಈ ಕಾಗದದ ನೋಟುಗಳು ಡಿಜಿಟಲ್ ನೋಟುಗಳಿಂದ ಬದಲಾಯಿಸಲ್ಪಡುತ್ತವೆ. ಡಿಜಿಟಲ್ ವರ್ಗಾವಣೆಗಾಗಿ ನಾವೆಲ್ಲಾ ಮುಂದಾಗಬೇಕಿದೆ. ಎಲ್ಲಾ ರೀತಿಯ ವರ್ಗಾವಣೆಗಳಿಗೆ ನಾವು ಭೀಮ್ ಆಪ್ ಬಳಸಬೇಕಿದೆ ಮತ್ತು ಅದನ್ನು ನಮ್ಮ ದೈನಂದಿನ ಆರ್ಥಿಕ ಚಟುವಟಿಕೆಗಳ ಭಾಗವಾಗಿಸಬೇಕಿದೆ. ಇದರೊಟ್ಟಿಗೆ, ನಾವು ಪೂರ್ವ ಪಾವತಿ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸಬೇಕಿದೆ. ಡಿಜಿಟಲ್ ವರ್ಗಾವಣೆಯಲ್ಲಿ ಸಾಕಷ್ಟು ಏರಿಕೆಯಾಗಿರುವುದು ನನಗೆ ಸಂತಸ ತಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 34ರಷ್ಟು ಡಿಜಿಟಲ್ ವರ್ಗಾವಣೆ ಮತ್ತು ಶೇ. 44ರಷ್ಟು ಪೂರ್ವ ಪಾವತಿ ವರ್ಗಾವಣೆಗಳು ಹೆಚ್ಚಳಗೊಂಡಿವೆ. ನಾವು ಕಡಿಮೆ ನಗದಿನ ಆರ್ಥಿಕತೆಯತ್ತ ಸಾಗಬೇಕಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಸರ್ಕಾರದ ಕೆಲವು ಯೋಜನೆಗಳು ದೇಶದ ಸಾಮಾನ್ಯ ಜನರ ಉಳಿತಾಯಕ್ಕಾಗಿ ಪರಿಚಯಿಸಲಾಗಿದೆ. ನೀವು ಎಲ್ಇಡಿ ಬಲ್ಬ್ ಬಳಸಿದ್ದೇ ಆದರೆ, ವಾರ್ಷಿಕವಾಗಿ ಸುಮಾರು 2,000 ದಿಂದ 5,000 ರೂಪಾಯಿಯಷ್ಟು ಉಳಿತಾಯ ಮಾಡಬಹುದು. ನಾವು ಸ್ವಚ್ಚ ಭಾರತದಲ್ಲಿ ಯಶಸ್ವಿಯಾದರೇ, ಬಡವನೊಬ್ಬ ಔಷಧಿಗಾಗಿ ವ್ಯಯಿಸುವ ಹಣದಲ್ಲಿ ಸುಮಾರು 7,000ದವರೆಗೂ ಉಳಿತಾಯ ಮಾಡಬಹುದು. ಹಣದುಬ್ಬರವನ್ನು ನಿಯಂತ್ರಿಸುವುದರಿಂದ ಜನರು ಹಣವನ್ನು ಉಳಿತಾಯ ಮಾಡಲು ಸಹಾಯಕವಾಗಲಿದೆ.

ಜನ್ ಔಷಧಿ ಕೇಂದ್ರಗಳಿಂದ ಮಾರಾಟ ಮಾಡುತ್ತಿರುವ ಕಡಿಮೆ ಬೆಲೆಯ ಔಷಧಿಗಳು ಬಡಜನತೆಗೆ ವರವಾಗಿವೆ. ಶಸ್ತ್ರಚಿಕಿತ್ಸೆ ಮತ್ತು ಸ್ಟೆಂಟ್ ಗಳಿಗೆ  ಸಾಕಷ್ಟು ಖರ್ಚಾಗುತ್ತಿತ್ತು. ಮಂಡಿ ಸಂಬಂಧಿತ ಶಸ್ತ್ರಚಿಕಿತ್ಸೆಗೆ ವ್ಯಯಿಸುತ್ತಿರುವ ಹಣವನ್ನ  ತಗ್ಗಿಸಲು ನಾವು ಪ್ರಯತ್ನಿಸಿದ್ದೇವೆ. ಮಧ್ಯಮ ವರ್ಗ ಮತ್ತು ಬಡಜನತೆಗೆ ಇವು ಎಟುಕುವಂತೆ ಮಾಡಲು ನಾವು ಶ್ರಮವಹಿಸಿದ್ದೇವೆ.

ಈ ಮೊದಲು, ರಾಜ್ಯಗಳ ರಾಜಧಾನಿಯಲ್ಲಿ ಮಾತ್ರ ಡಯಾಲಿಸಿಸ್ ಕೇಂದ್ರಗಳಿದ್ದವು. ಜಿಲ್ಲಾ ಮಟ್ಟದಲ್ಲೂ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲು ನಾವು ನಿರ್ಧರಿಸಿದ್ದೇವೆ. ಈಗಾಗಲೇ ನಾವು 350 ರಿಂದ 400 ಜಿಲ್ಲೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆದಿದ್ದು, ಇವು ಬಡಜನರಿಗೆ ತಮ್ಮ ಸೇವೆ ಒದಗಿಸುತ್ತಿವೆ.

ನಮ್ಮ ಅಭಿವೃದ್ಧಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಪಿಎಸ್ ಮೂಲಕ ‘ನೇವಿಕ್ ದಿಕ್ಸೂಚಿ ವ್ಯವಸ್ಥೆ’ಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಸಾರ್ಕ್ ಉಪಗ್ರಹಗಳ ಉಡಾವಣೆ ಮಾಡಿ ನೆರೆಹೊರೆಯ ದೇಶಗಳಿಗೆ ನಾವು ಸಹಾಯ ಮಾಡಿದ್ದೇವೆ. ತೇಜಸ್ ವಿಮಾನನೌಕೆ ಮೂಲಕ ಜಗತ್ತಿಗೆ ನಮ್ಮ ಸಾಮರ್ಥ್ಯವನ್ನು  ತೋರಿಸಿದ್ದೇವೆ. ಭೀಮ್ ಆಧಾರ್ ಆಪ್ ಜಗತ್ತಿಗೆ ಒಂದು ವಿಸ್ಮಯವಾಗಿದೆ. ದೇಶದಲ್ಲಿ ಕೋಟ್ಯಾಂತರ ರುಪೇ ಕಾರ್ಡ್ಗಳು ದೊರೆಯುತ್ತಿವೆ. ಈ ಎಲ್ಲಾ ಕಾರ್ಡುಗಳು ಬಳಕೆಗೆ ಬಂದಾಗ, ಭಾರತ ಜಗತ್ತಿನಲ್ಲೇ ಅತಿಹೆಚ್ಚು ಕಾರ್ಡು ಬಳಸುವ ದೇಶವಾಗಿ ಹೊರಹೊಮ್ಮಲಿದೆ.

ನನ್ನ ಪ್ರಿಯ ದೇಶವಾಸಿಗಳೇ,
ಹೊಸ ಭಾರತದ ಪ್ರತಿಜ್ಞೆಯನ್ನು ನೀವು ಸ್ವೀಕರಿಸಿ ಮನ್ನಡೆಯಿರಿ ಎಂದು ನಾನು ನಿಮಗೆ ಕರೆ ನೀಡುತ್ತಿದ್ದೇನೆ. ನಮ್ಮ ಧರ್ಮಗ್ರಂಥಗಳು ಹೇಳುತ್ತವೆ, “अनियत काल:,अनियत कालः प्रभुत्यो विपलवन्ते, प्रभुत्यो विपलवन्ते”. ನಾವು ಹಾಕಿಕೊಂಡ ಕಾಲಮಿತಿಯೊಳಗೆ ನಮ್ಮ ಕೆಲಸವನ್ನು ಪೂರೈಸಲಾಗಿದ್ದರೆ, ನಾವು ಅಂದುಕೊಂಡ ಫಲಿತಾಂಶ ದೊರೆಯುವುದಿಲ್ಲ ಎನ್ನುವುದು ಈ ಹೇಳಿಕೆಯ ಅರ್ಥ. ಆದ್ದರಿಂದ  ನಾವು “ಟೀಮ್ ಇಂಡಿಯಾ ”  , 125 ಕೋಟಿ  ಭಾರತೀಯರಿಗಾಗಿ  2022ರೊಳಗೆ  ನಮ್ಮ ಕೆಲಸವನ್ನು ಪೂರೈಸುವ ಸಂಕಲ್ಪ ಮಾಡಬೇಕು.

2022ರ ವೇಳೆಗೆ ಶ್ರೇಷ್ಠ ಮತ್ತು ಭವ್ಯ ಭಾರತವನ್ನು ನಿರ್ಮಿಸಲು ನಾವು ನಮ್ಮನ್ನು ಸಮರ್ಪಿಸಿಕೊಳ್ಳೋಣ.
ದೇಶದ ಬಡಜನರು ವಿದ್ಯುತ್ ಮತ್ತು ನೀರು ಲಭ್ಯವಿರುವ ಪಕ್ಕಾ ಮನೆ ಕಟ್ಟುವ ಭಾರತದ ನಿರ್ಮಾಣಕ್ಕೆ ನಾವು ಒಟ್ಟಾಗಿ ಕಾರ್ಯನಿರ್ವಹಿಸೋಣ.
ರೈತರು ಯಾವುದೇ ಚಿಂತೆ ಇಲ್ಲದಂತೆ ನಿದ್ರಿಸಲು ಸಾಧ್ಯವಾಗುವಂತಹ ಭಾರತ ವನ್ನು ನಿರ್ಮಿಸಲು ನಾವು ಒಟ್ಟಾಗಿ ಕಾರ್ಯನಿರ್ವಹಿಸೋಣ.  ಇಂದು ಅವರು ಸಂಪಾದಿಸುತ್ತಿರುವ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವಂತೆ ಮಾಡೋಣ.

ಯವಜನತೆ, ಮಹಿಳೆಯರು ತಮ್ಮ ಕನಸುಗಳನ್ನು ಪೂರ್ಣಗೊಳಿಸಲು ಅವಶ್ಯಕವಾಗಿರುವ ಅವಕಾಶಗಳನ್ನು ಸೃಷ್ಠಿಸಲು ಸಾಧ್ಯವಾಗುವ ಭಾರತ ನಿರ್ಮಿಸಲು ನಾವು ಒಟ್ಟಾಗಿ ಕಾರ್ಯನಿರ್ವಹಿಸೋಣ.
ಭಯೋತ್ಪಾದನೆ, ಕೋಮುವಾದ ಮತ್ತು ಜಾತಿವಾದದಿಂದ ಮುಕ್ತವಾದ ಭಾರತವನ್ನು ನಾವು ಒಟ್ಟಾಗಿ ನಿರ್ಮಿಸೋಣ.
ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದೊಂದಿಗೆ ಯಾರೂ ಕೈಜೋಡಿಸದ ಭಾರತವನ್ನು ನಾವು ಒಟ್ಟಾಗಿ ನಿರ್ಮಿಸೋಣ.
ಸು-ರಾಜ್ ಕನಸನ್ನು ಪೂರ್ಣಗೊಳಿಸುವ ನೈರ್ಮಲ್ಯ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸಲು ನಾವು ಒಟ್ಟಾಗಿ ಕಾರ್ಯನಿರ್ವಹಿಸೋಣ.

 

ಈ ಎಲ್ಲಾ ಕಾರಣಗಳಿಗಾಗಿ ನಾವು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ.  ನನ್ನ ಪ್ರಿಯ ಸಹ ದೇಶವಾಸಿಗಳೇ ಮತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕಿದೆ.

70 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸಿರುವ ನಾವು, ಮುಂದಿನ 5 ವರ್ಷಗಳು ದೇಶವನ್ನು ಕಟ್ಟಲು ಒಟ್ಟಾಗಿ ಕಾರ್ಯನಿರ್ವಹಿಸಿ 75 ನೇ ಸ್ವಾತಂತ್ರ್ಯ ದಿನದ ಹೊತ್ತಿಗೆ  ಶ್ರೇಷ್ಠ ಮತ್ತು ಭವ್ಯ ಭಾರತ ನಿರ್ಮಾಣದ ನಮ್ಮ ಕನಸುಗಳನ್ನು ಸಾಕಾರಗೊಳಿಸೋಣ.
ಈ ಆಲೋಚನೆಯೊಂದಿಗೆ, ಮತ್ತೊಮ್ಮೆ ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಗೆ ನಾನು ತಲೆಬಾಗಿಸುತ್ತೇನೆ.

ದೇಶದ 125 ಕೋಟಿ ಜನತೆಯ ಹೊಸ ವಿಶ್ವಾಸ ಮತ್ತು ಉತ್ಸಾಹದ ಮುಂದೆ ನಾನು ತಲೆಬಾಗುತ್ತಿದ್ದೇನೆ ಮತ್ತು ಈ ಹೊಸ ಪ್ರತಿಜ್ಞೆಯೊಂದಿಗೆ “ಟೀಮ್ ಇಂಡಿಯಾ ”  ಮುನ್ನಡೆಯಲಿ ಎಂದು ನಾನು ಕರೆ ನೀಡುತ್ತಿದ್ದೇನೆ.
ಇದರೊಂದಿಗೆ ನಾನು ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಜೈ ಹಿಂದ್
ಜೈ ಹಿಂದ್, ಜೈ ಹಿಂದ್, ಜೈ ಹಿಂದ್, ಜೈ ಹಿಂದ್
ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ
ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ

ನಿಮ್ಮೆಲ್ಲರಿಗೂ ವಂದನೆಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From welfare to opportunity: How DPI 2.0 and AI will unlock India’s productivity

Media Coverage

From welfare to opportunity: How DPI 2.0 and AI will unlock India’s productivity
NM on the go

Nm on the go

Always be the first to hear from the PM. Get the App Now!
...
State Visit of Prime Minister to Seychelles
June 28, 2026

As part of Prime Minister Shri Narendra Modi’s State Visit to Seychelles from 27-29 June 2026, Prime Minister and the President of Seychelles, H.E. Dr. Patrick Herminie today held official talks at the State House in Victoria, Mahe.

The talks covered the full spectrum of bilateral relations, with the leaders agreeing to further strengthen cooperation in health, education, capacity building, digital transformation, sustainable development, social infrastructure, renewable energy, maritime security and defence. They also exchanged views on regional and global developments, including challenges in the Indian Ocean region, such as illegal fishing, drug trafficking and piracy. Both leaders expressed satisfaction at the progress made in the implementation of projects and initiatives under the Special Economic Package announced by India. Prime Minister reaffirmed India’s commitment to supporting the development priorities of Seychelles and to further deepen the close and enduring partnership between the two countries.

Following the official talks, both leaders released a joint commemorative logo marking 50 years of the establishment of diplomatic relations between the two countries. Several MoUs/agreements in the fields of Capacity Building, UPI, Health, Agriculture, Shipping, Space, Extradition and Line of Credit were exchanged thereafter. The amount of the Line of Credit stands at INR 1250 crores. The full list of MoUs/agreements may be seen here [link]. In addition, several announcements in the fields of food security, infrastructure, health, vocational training, maritime security and defence were made in support of the development needs of Seychelles. The details of these announcements may be seen here [link]. Seychelles also announced that it is joining the Coalition for Disaster Resilient Infrastructure [CDRI].

Later in the day, Prime Minister addressed an Extraordinary Sitting of the National Assembly of Seychelles, becoming the first Indian Prime Minister to do so. In his address, he highlighted the historical bonds of friendship between India and Seychelles and underscored the shared values of democracy, rule of law and people-centric governance that guide the two countries. He noted that mutual trust and close cooperation have shaped a robust partnership spanning development cooperation, maritime security, technology, innovation, health and capacity building. Prime Minister also called for enhanced parliamentary exchanges between the two democracies. The full address of Prime Minister may be seen here [link]

The Leader of Opposition of Seychelles, H.E. Mr. Bernard Georges, also called on Prime Minister. The two leaders discussed India-Seychelles bilateral ties and conveyed their strong support to further build the special friendship between the two countries.