ಕೊರೊನಾ ಅವಧಿಯಲ್ಲಿ ಮಹಿಳೆಯರ ಅಭೂತಪೂರ್ವ ಸೇವೆಗಳಿಗಾಗಿ ಸ್ವಸಹಾಯ ಗುಂಪುಗಳನ್ನು ಶ್ಲಾಘಿಸುತ್ತದೆ
ಎಲ್ಲಾ ಸಹೋದರಿಯರು ತಮ್ಮ ಗ್ರಾಮಗಳನ್ನು ಸಮೃದ್ಧಿ ಮತ್ತು ಸಮೃದ್ಧಿಯೊಂದಿಗೆ ಸಂಪರ್ಕಿಸುವ ವಾತಾವರಣ ಮತ್ತು ಪರಿಸ್ಥಿತಿಗಳನ್ನು ಸರ್ಕಾರ ನಿರಂತರವಾಗಿ ಸೃಷ್ಟಿಸುತ್ತಿದೆ: ಪ್ರಧಾನಿ
ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಪ್ರೋತ್ಸಾಹಿಸುವಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಕಷ್ಟು ಸಾಮರ್ಥ್ಯವಿದೆ: ಪ್ರಧಾನಿ
ಬಂಡವಾಳೀಕರಣ ಬೆಂಬಲ ನಿಧಿಯನ್ನು ರೂಪಾಯಿ1625 ಕೋಟಿಯಿಂದ 4 ಲಕ್ಷ ಸ್ವಸಹಾಯ ಸಂಘಗಳಿಗೆ ಪ್ರಧಾನಮಂತ್ರಿ ಬಿಡುಗಡೆ ಮಾಡಿದರು

ನಮಸ್ಕಾರ್,

ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಬಹಳ ಮಹತ್ವದ್ದು. ನಮ್ಮ ಸ್ವ ನಿರ್ಮಿತ, ಸ್ವ ಸಾಧಿತ ಮಹಿಳಾ ಶಕ್ತಿಯು ಮುಂದಿನ ಕೆಲವು ವರ್ಷಗಳಲ್ಲಿ ಆತ್ಮ ನಿರ್ಭರ ಭಾರತ ಆಂದೋಲನಕ್ಕೆ ಹೊಸ ಶಕ್ತಿಯನ್ನು ಒದಗಿಸಲಿದೆ. ಇಂದು ನಿಮ್ಮೊಂದಿಗೆ ಮಾತನಾಡುತ್ತಿರುವುದು ನನಗೆ ಬಹಳ ಸ್ಫೂರ್ತಿಯನ್ನು ಕೊಟ್ಟಿದೆ. ಇಂದಿನ ಕಾರ್ಯಕ್ರಮದಲ್ಲಿ ಹಾಜರಿರುವ ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೇ, ರಾಜಸ್ಥಾನದ ಗೌರವಾನ್ವಿತ ಮುಖ್ಯಮಂತ್ರಿಗಳೇ, ರಾಜ್ಯ ಸರಕಾರಗಳ ಸಚಿವರೇ, ಸಂಸದರೇ, ಶಾಸಕರೇ, ಜಿಲ್ಲಾ ಪರಿಷತ್ತಿನ ಅಧ್ಯಕ್ಷರು ಮತ್ತು ಸದಸ್ಯರೇ, ದೇಶದ 3 ಲಕ್ಷ ಸ್ಥಳಗಳಿಂದ ಸ್ವಸಹಾಯ ಗುಂಪುಗಳ ಮೂಲಕ ಪಾಲ್ಗೊಂಡಿರುವ ಕೋಟ್ಯಂತರ ಸಹೋದರಿಯರೇ ಮತ್ತು ಪುತ್ರಿಯರೇ, ಹಾಗೂ ಎಲ್ಲಾ ಮಹನೀಯರೇ!.

ಸಹೋದರರೇ ಮತ್ತು ಸಹೋದರಿಯರೇ,

ಸ್ವಸಹಾಯ ಗುಂಪುಗಳ ಜೊತೆ ಗುರುತಿಸಿಕೊಂಡಿರುವ ಸಹೋದರಿಯರ ಜೊತೆ ನಾನು ಮಾತನಾಡುವಾಗ, ಅವರಲ್ಲಿದ್ದ ವಿಶ್ವಾಸ ನನ್ನ ಗಮನಕ್ಕೆ ಬಂದಿದೆ. ಮುನ್ನಡೆಯಲು ಅವರಲ್ಲಿರುವ ಆಸಕ್ತಿ ಮತ್ತು ಪ್ರಯತ್ನ ಕೂಡಾ ನಿಮ್ಮ ಗಮನಕ್ಕೆ ಬಂದಿರಬಹುದು. ಏನನ್ನಾದರೂ ಮಾಡಲು ಅವರಲ್ಲಿ ಹುರುಪಿದೆ, ಮತ್ತು ನಿಜವಾಗಿಯೂ ನಮೆಲ್ಲರಿಗೂ ಪ್ರೇರಣಾದಾಯಕವಾದಂತಹದು.  ನಮಗೆ ಇದು  ದೇಶಾದ್ಯಂತ ಮಹಿಳಾ ಶಕ್ತಿಯ ಸತ್ವಪೂರ್ಣ ಆಂದೋಲನದ ನೋಟವನ್ನು ಒದಗಿಸುತ್ತದೆ.

ಸ್ನೇಹಿತರೇ,

ಕೊರೊನಾ ಅವಧಿಯಲ್ಲಿ ನಮ್ಮ ಸಹೋದರಿಯರು ಸ್ವ-ಸಹಾಯ ಗುಂಪುಗಳ ಮೂಲಕ ದೇಶವಾಸಿಗಳಿಗೆ ಮಾಡಿರುವ  ಸೇವೆ ಅಭೂತಪೂರ್ವವಾದುದು. ಮುಖಗವಸುಗಳ ತಯಾರಿಕೆ, ಸ್ಯಾನಿಟೈಸರ್ ಗಳ ತಯಾರಿಕೆ, ಅವಶ್ಯಕತೆ ಉಳ್ಳವರಿಗೆ ಆಹಾರ ಪೂರೈಸುವಲ್ಲಿ, ಮತ್ತು ಜಾಗೃತಿ ಮೂಡಿಸುವಲ್ಲಿ ನಿಮ್ಮ ಕೊಡುಗೆ ಹೋಲಿಕೆಗೆ ನಿಲುಕದ್ದು. ಇದೇ ಕಾಲಕ್ಕೆ ತಮ್ಮ ಕುಟುಂಬಗಳಿಗೆ ಉತ್ತಮ ಜೀವನವನ್ನು ಒದಗಿಸುತ್ತಿರುವ ಮತ್ತು ದೇಶದ ಅಭಿವೃದ್ಧಿಯನ್ನು ಮುನ್ನಡೆಸುತ್ತಿರುವ ಕೋಟ್ಯಂತರ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಮಹಿಳೆಯರಲ್ಲಿ ಉದ್ಯಮಶೀಲತೆಯ ವ್ಯಾಪ್ತಿಯನ್ನು ಹಿಗ್ಗಿಸಲು ಮತ್ತು ಸ್ವಾವಲಂಬಿ ಭಾರತದಲ್ಲಿ ಅವರ ಪಾತ್ರವನ್ನು ವಿಸ್ತರಿಸಲು  ಬಹಳ ದೊಡ್ಡ ಹಣಕಾಸು ಸಹಾಯವನ್ನು ಇಂದು ಬಿಡುಗಡೆ ಮಾಡಲಾಗಿದೆ.  1600 ಕೋ.ರೂ. ಗಳಿಗೂ ಅಧಿಕ ಮೊತ್ತವನ್ನು ಆಹಾರ ಸಂಸ್ಕರಣಾ ಉದ್ಯಮದಲ್ಲಿ ತೊಡಗಿರುವ ಲಕ್ಷಾಂತರ ಸ್ವಸಹಾಯ ಗುಂಪುಗಳಿಗೆ ಮತ್ತು ಮಹಿಳಾ ರೈತ ಉತ್ಪನ್ನಗಳ ಸಂಘಟನೆಗಳಿಗೆ ವರ್ಗಾಯಿಸಲಾಗಿದೆ. ರಕ್ಷಾ ಬಂಧನಕ್ಕೆ ಮುಂಚಿತವಾಗಿ ವರ್ಗಾಯಿಸಲಾಗಿರುವ ಈ ಮೊತ್ತ ಕೋಟ್ಯಂತರ ಸಹೋದರಿಯರ ಜೀವನದಲ್ಲಿ ಸಂತೋಷವನ್ನು ತರಲಿ ಮತ್ತು ನಿಮ್ಮ ವ್ಯವಹಾರೋದ್ಯಮ ಅಭಿವೃದ್ಧಿ ಹೊಂದಲಿ!.ನಿಮಗೆ ನನ್ನ ಶುಭಾಶಯಗಳಿವೆ.

 

ಸ್ನೇಹಿತರೇ,

ಸ್ವಸಹಾಯ ಗುಂಪುಗಳು ಮತ್ತು ದೀನ ದಯಾಳ ಅಂತ್ಯೋದಯ ಯೋಜನಾ ಗ್ರಾಮೀಣ ಭಾರತದಲ್ಲಿ ಹೊಸ ದೃಢ ಸಂಕಲ್ಪಗಳನ್ನು ಮೂಡಿಸುತ್ತಿದೆ. ಮಹಿಳಾ ಸ್ವ ಸಹಾಯ ಗುಂಪುಗಳು ಇದರಲ್ಲಿ ಪಥದರ್ಶಕಗಳಂತೆ ಕೆಲಸ ಮಾಡುತ್ತಿವೆ. ಕಳೆದ 6-7 ವರ್ಷಗಳಲ್ಲಿ ಈ ಮಹಿಳಾ ಸ್ವ ಸಹಾಯ ಗುಂಪುಗಳ ಚಳವಳಿ ಬಲಿಷ್ಟವಾಗುತ್ತಿದೆ. ದೇಶದ 70 ಲಕ್ಷ ಸ್ವಸಹಾಯ ಗುಂಪುಗಳಲ್ಲಿ ಸುಮಾರು ಎಂಟು ಕೋಟಿ ಸಹೋದರಿಯರು ಸಂಯೋಜನೆಗೊಂಡಿದ್ದಾರೆ. ಕಳೆದ 6-7 ವರ್ಷಗಳಲ್ಲಿ ಎಸ್.ಎಚ್.ಜಿ.ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಮತ್ತು ಸಹೋದರಿಯರ ಸಹಭಾಗಿತ್ವವೂ ಮೂರು ಪಟ್ಟು ಹೆಚ್ಚಾಗಿದೆ. ಇದು ಬಹಳ ಮುಖ್ಯ ಯಾಕೆಂದರೆ ಹಲವು ವರ್ಷಗಳ ಕಾಲ ಸಹೋದರಿಯರ ಹಣಕಾಸು ಸಶಕ್ತೀಕರಣ ಆಗಬೇಕಾದ ಪ್ರಮಾಣದಲ್ಲಿ ಆಗಿರಲಿಲ್ಲ. ನಮ್ಮ ಸರಕಾರ ರಚಿತವಾದಾಗ, ಕೋಟ್ಯಂತರ ಸಹೋದರಿಯರು ಬ್ಯಾಂಕ್ ಖಾತೆಗಳನ್ನೂ ಹೊಂದಿರಲಿಲ್ಲ, ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿಡಲಾಗಿತ್ತು. ಆದುದರಿಂದ ನಾವು ಜನ್ ಧನ್ ಖಾತೆಗಳನ್ನು ತೆರೆಯುವುದಕ್ಕೆ ಬಹಳ ದೊಡ್ಡ ಆಂದೋಲನವನ್ನು ಆರಂಭಿಸಿದೆವು. ಇಂದು ದೇಶದಲ್ಲಿ 42 ಕೋಟಿಗೂ ಅಧಿಕ ಜನ್ ಧನ್ ಖಾತೆಗಳಿವೆ ಮತ್ತು 55 ಪ್ರತಿಶತದಷ್ಟು ಖಾತೆಗಳು ನಮ್ಮ ಮಾತೆಯರಿಗೆ ಮತ್ತು ಸಹೋದರಿಯರಿಗೆ ಸೇರಿದವು. ಈ ಖಾತೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ. ಅವರು ಈ ಮೊದಲು ತಮ್ಮ ಉಳಿತಾಯವನ್ನು ಅಡುಗೆ ಮನೆಯ ಪೆಟ್ಟಿಗೆಗಳಲ್ಲಿ ಹಾಕಿಡುತ್ತಿದ್ದುದಕ್ಕೆ ಬದಲಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ಬ್ಯಾಂಕ್ ಖಾತೆಗಳನ್ನು ತೆರೆದದ್ದು ಮಾತ್ರವಲ್ಲ, ಬ್ಯಾಂಕುಗಳಿಂದ ಸಾಲ ಪಡೆಯುವುದನ್ನೂ ಸುಲಭ ಮಾಡಿದೆವು. ಒಂದೆಡೆ ಲಕ್ಷಾಂತರ ಮಹಿಳಾ ಉದ್ಯಮಿಗಳಿಗೆ ಭದ್ರತೆ ಇಲ್ಲದೆ ಮುದ್ರಾ ಯೋಜನೆ ಅಡಿಯಲ್ಲಿ ಸುಲಭದಲಿ ಸಾಲ ನೀಡಲಾಯಿತು. ಇನ್ನೊಂದೆಡೆ ಸ್ವಸಹಾಯ ಗುಂಪುಗಳಿಗೆ ಭದ್ರತೆ ಇಲ್ಲದೆ ನೀಡುವ ಸಾಲದ ಪ್ರಮಾಣದಲ್ಲಿ ಗಮನೀಯವಾದ ಏರಿಕೆ ಮಾಡಲಾಯಿತು. ರಾಷ್ಟ್ರೀಯ ಜೀವನೋಪಾಯ ಆಂದೋಲನ ಅಡಿಯಲ್ಲಿ ಸಹೋದರಿಯರಿಗೆ ನೀಡಲಾದ ನೆರವಿನ ಮೊತ್ತ ಹಿಂದಿನ ಸರಕಾರ ನೀಡುತ್ತಿದ್ದುದಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಇದಲ್ಲದೆ, ಸುಮಾರು 3.75 ಲಕ್ಷ ಕೋ.ರೂ.ಗಳ ಸಾಲವನ್ನು ಭದ್ರತೆ ಇಲ್ಲದೆ ಸ್ವಸಹಾಯ ಗುಂಪುಗಳಿಗೆ ಲಭ್ಯ ಮಾಡಲಾಗಿದೆ.

ಸ್ನೇಹಿತರೇ,

ನಮ್ಮ ಸಹೋದರಿಯರ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಉಲ್ಲೇಖಿಸುವುದೂ ಬಹಳ ಮುಖ್ಯ. ಈ ಏಳು ವರ್ಷಗಳಲ್ಲಿ, ಸ್ವಸಹಾಯ ಗುಂಪುಗಳು ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡುವಲ್ಲಿ ಗಣನೀಯ ಕೆಲಸವನ್ನು ಮಾಡಿವೆ. ಗಿರಿರಾಜ್ ಜೀ  ಅವರು ಹೇಳಿದಂತೆ ಬ್ಯಾಂಕ್ ಸಾಲಗಳಲ್ಲಿ 9 ಪ್ರತಿಶತದಷ್ಟು ಸಾಲಗಳು ಮರುಪಾವತಿಯಾಗದೆ ಬಾಕಿಯಾಗುತ್ತಿದ್ದ ಕಾಲವಿತ್ತು. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ಈ ಮೊತ್ತ ಮರುಪಾವತಿಯಾಗುತ್ತಲೇ ಇರಲಿಲ್ಲ. ಈಗ ಇದು ಶೇಕಡಾ ಎರಡೂವರೆಗೆ  ಇಳಿದಿದೆ. ಇಂದು ದೇಶವು ನಿಮ್ಮ ಪ್ರಾಮಾಣಿಕತೆ ಮತ್ತು ಉದ್ಯಮಶೀಲತೆಯನ್ನು ಗುರುತಿಸಿ ಮನ್ನಣೆ ನೀಡುತ್ತಿದೆ.  ಆದುದರಿಂದ ಇನ್ನೊಂದು ಪ್ರಮುಖ ನಿರ್ಧಾರವನ್ನು ಮಾಡಲಾಗಿದೆ. ಮೊದಲು ಈ ಸ್ವಸಹಾಯ ಗುಂಪುಗಳು ಗ್ಯಾರಂಟಿ/ಭದ್ರತೆ ಇಲ್ಲದೆ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯುತ್ತಿದ್ದವು. ಈಗ ಈ ಮಿತಿಯನ್ನು ದುಪ್ಪಟ್ಟು ಮಾಡಿ 20 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಈ ಮೊದಲು ನೀವು ಸಾಲಕ್ಕಾಗಿ ಬ್ಯಾಂಕಿಗೆ ಭೇಟಿ ನೀಡುತ್ತಿದ್ದಾಗ ಬ್ಯಾಂಕ್ ನಿಮ್ಮ ಉಳಿತಾಯ ಖಾತೆಗಳನ್ನು ಸಾಲದ ಜೊತೆಗೆ ಜೋಡಿಸಲು ಹೇಳುತ್ತಿತ್ತು ಮತ್ತು ಸ್ವಲ್ಪ ಹಣವನ್ನು ಠೇವಣಿ ಮಾಡಲು ಹೇಳುತ್ತಿತ್ತು. ಈಗ ಈ ಷರತ್ತನ್ನು ಕೂಡಾ ತೆಗೆದುಹಾಕಲಾಗಿದೆ. ಇಂತಹ ಹಲವು ಪ್ರಯತ್ನಗಳಿಂದಾಗಿ ಸ್ವಾವಲಂಬನೆ ಆಂದೋಲನದಲ್ಲಿ ಬಹಳ ದೊಡ್ಡ ಉತ್ಸಾಹದೊಂದಿಗೆ ನೀವು ಮುನ್ನಡೆ ಸಾಧಿಸಲು ಸಮರ್ಥರಾಗಲಿದ್ದೀರಿ.

ಸ್ನೇಹಿತರೇ,

ಹೊಸ ಗುರಿಗಳನ್ನು ನಿಗದಿ ಮಾಡಿ ಮತ್ತು ಹೊಸ ಶಕ್ತಿಯೊಂದಿಗೆ ಮುನ್ನಡೆ ಸಾಧಿಸಲು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯು ಒಂದು ಸುಸಂದರ್ಭ. ಈಗ ಸಹೋದರಿಯರ ಸಾಮೂಹಿಕ ಶಕ್ತಿಯನ್ನು  ಹೊಸ ಹುರುಪಿನೊಂದಿಗೆ ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಸರಕಾರವು ನಮ್ಮ ಸಹೋದರಿಯರು ಸಮೃದ್ಧಿಯ ಗ್ರಾಮಗಳ ಜೊತೆ ಸಂಪರ್ಕಿಸಲ್ಪಡುವಂತೆ ನಿರಂತರವಾಗಿ ಅದಕ್ಕೆ ಅನುಕೂಲವಾದ  ಪರಿಸ್ಥಿತಿಗಳನ್ನು  ನಿರ್ಮಾಣ ಮಾಡುತ್ತಿದೆ. ಕೃಷಿ ಮತ್ತು ಕೃಷಿಯಾಧಾರಿತ ಉದ್ಯಮಗಳು ಮಹಿಳಾ ಸ್ವಸಹಾಯ ಗುಂಪುಗಳು ಕಾರ್ಯಾಚರಿಸಲು ಅಪರಿಮಿತ ಅವಕಾಶಗಳಿರುವ ಕ್ಷೇತ್ರಗಳಾಗಿವೆ. ಗ್ರಾಮಗಳಲ್ಲಿ ದಾಸ್ತಾನುಗಾರಗಳನ್ನು ಮತ್ತು  ಶೀತಲ ದಾಸ್ತಾನುಗಾರಗಳ ಸರಪಳಿಯನ್ನು ನಿರ್ಮಾಣ ಮಾಡಲು, ಕೃಷಿ ಯಂತ್ರಗಳನ್ನು ಸ್ಥಾಪಿಸಲು, ಹಾಲು, ಹಣ್ಣುಗಳು ಮತ್ತು ತರಕಾರಿಗಳು ಹಾಳಾಗುವುದನ್ನು ,  ವ್ಯರ್ಥವಾಗುವುದನ್ನು ತಡೆಯಲು ಸ್ಥಾವರಗಳನ್ನು ಸ್ಥಾಪಿಸಲು ಹಾಗು ಇತರ ಉಪಕ್ರಮಗಳಿಗೆ ವಿಶೇಷ ನಿಧಿಯೊಂದನ್ನು ಸ್ಥಾಪಿಸಲಾಗಿದೆ. ಸ್ವಸಹಾಯ ಗುಂಪುಗಳು ಈ ನಿಧಿಯಿಂದ ಸಹಾಯ ಪಡೆದುಕೊಂಡು ಈ ಸೌಲಭ್ಯಗಳನ್ನು ಸ್ಥಾಪಿಸಬಹುದು. ಈ ಸೌಲಭ್ಯಗಳನ್ನು ಸ್ಥಾಪಿಸುವ ಸದಸ್ಯರು ಅವುಗಳನ್ನು ಇತರರಿಗೆ ನ್ಯಾಯೋಚಿತ ದರದಲ್ಲಿ ಬಾಡಿಗೆಗೆ ನೀಡುವ ಮೂಲಕ ಹಣಕಾಸು ಪ್ರಯೋಜನಗಳನ್ನೂ ಪಡೆಯಬಹುದು. ನಮ್ಮ ಸರಕಾರ ಮಹಿಳಾ ರೈತರಿಗೆ ವಿಶೇಷ ತರಬೇತಿ ನೀಡುವ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ. ಇದುವರೆಗೆ ಸುಮಾರು 1.25 ಕೋಟಿ ರೈತರು ಮತ್ತು ಪಶುಪಾಲನೆಯ ಸಹೋದರಿಯರು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಹೊಸ ಕೃಷಿ ಸುಧಾರಣೆಗಳು ದೇಶದ ಕೃಷಿ ವಲಯಕ್ಕೆ ಮತ್ತು ನಮ್ಮ ರೈತರಿಗೆ ಮಾತ್ರ ಪ್ರಯೋಜನಕಾರಿಯಾಗಿರುವುದಲ್ಲ, ಅಲ್ಲಿ ಸ್ವಸಹಾಯ ಗುಂಪುಗಳಿಗೂ ಅಪರಿಮಿತ ಅವಕಾಶಗಳಿವೆ. ಈಗ ನೀವು ಕೃಷಿ ಕ್ಷೇತ್ರದಲ್ಲಿರುವ ರೈತರ ಜೊತೆ ಕೈಜೋಡಿಸಿ ಮನೆ ಮನೆಗಳಿಗೆ ಆಹಾರ ಧಾನ್ಯಗಳನ್ನು, ಬೇಳೆ ಕಾಳುಗಳನ್ನು ಪೂರೈಸಬಹುದು. ಕೊರೊನಾ ಅವಧಿಯಲ್ಲಿ ಇದು ಬಹಳ ಕಡೆಗಳಲ್ಲಿ ನಡೆದಿರುವುದನ್ನು ನಾವು ನೋಡಿದ್ದೇವೆ. ಈಗ ನಿಮಗೆ ದಾಸ್ತಾನುಗಾರಗಳ ಸೌಲಭ್ಯವನ್ನು ಒಂದೆಡೆ ಸೇರಿಸಲು ಅವಕಾಶವಿದೆ, ನೀವು ಇಷ್ಟೇ ಪ್ರಮಾಣದಲ್ಲಿ  ದಾಸ್ತಾನು ಮಾಡಿಡಬೇಕು ಎಂಬುದಕ್ಕೆ ನಿರ್ಬಂಧ ಇಲ್ಲ. ನಿಮಗೀಗ ಉತ್ಪನ್ನಗಳನ್ನು ಕೃಷಿ ಕ್ಷೇತ್ರದಿಂದ ನೇರವಾಗಿ ಮಾರಾಟ ಮಾಡುವ  ಅಥವಾ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಮತ್ತು ಆ ಉತ್ಪನ್ನವನ್ನು ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡುವ ಅವಕಾಶವೂ ಇದೆ. ಈಗೀಗ ಆನ್ ಲೈನ್ ವ್ಯಾಪಾರ ಕೂಡಾ ಬಹಳ ದೊಡ್ಡ ಮಾಧ್ಯಮವಾಗಿದೆ, ಅದನ್ನು ಹೆಚ್ಚು ಹೆಚ್ಚು ನೀವು ಬಳಸಿಕೊಳ್ಳಬೇಕು. ನೀವು ಆನ್ ಲೈನ್ ಕಂಪೆನಿಗಳ ಜೊತೆ ಕೈಜೋಡಿಸಿ ಸುಲಭದಲ್ಲಿ ನಿಮ್ಮ ಪ್ಯಾಕೇಜ್ ಮಾಡಲ್ಪಟ್ಟ ಉತ್ಪನ್ನಗಳನ್ನು ನಗರಗಳಲ್ಲಿ ಮಾರಾಟ ಮಾಡಬಹುದು. ನೀವು ಜಿಇಎಂ ಪೋರ್ಟಲಿಗೆ ಭೇಟಿ ನೀಡಿ ನೇರವಾಗಿ ಸರಕಾರಕ್ಕೆ ಅದರ ಆವಶ್ಯಕತೆಗಳಿಗೆ ಅನುಸಾರವಾಗಿ ವಸ್ತುಗಳನ್ನು ಮಾರಾಟ ಮಾಡಬಹುದು.

ಸ್ನೇಹಿತರೇ,

ಸರಕಾರವು ಭಾರತದಲ್ಲಿ ತಯಾರಾದ ಆಟಿಕೆಗಳಿಗೆ ಉತ್ತೇಜನವನ್ನು ನೀಡುತ್ತಿದೆ. ಮತ್ತು ಈ ನಿಟ್ಟಿನಲ್ಲಿ ಸಾಧ್ಯ ಇರುವ ಎಲ್ಲಾ ನೆರವನ್ನೂ ಒದಗಿಸುತ್ತಿದೆ. ವಾಸ್ತವವಾಗಿ ನಮ್ಮ ಬುಡಕಟ್ಟು ಸಮುದಾಯದ ಸಹೋದರಿಯರು ಸಾಂಪ್ರದಾಯಿಕವಾಗಿ ಅವುಗಳ ಜೊತೆ ಬೆಸೆಯಲ್ಪಟ್ಟಿದ್ದಾರೆ. ಸ್ವಸಹಾಯ ಗುಂಪುಗಳಿಗೆ ಅಲ್ಲಿ ಬಹಳಷ್ಟು ಅವಕಾಶಗಳಿವೆ. ಅದೇ ರೀತಿ ಏಕ ಬಳಕೆ ಪ್ಲಾಸ್ಟಿಕ್ ನಿಂದ ದೇಶವನ್ನು ಮುಕ್ತ ಮಾಡಲು ಆಂದೋಲನ ನಡೆಯುತ್ತಿದೆ. ನಾವು ಈಗಷ್ಟೇ ನಮ್ಮ ತಮಿಳುನಾಡಿನ ಸಹೋದರಿಯರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇವೆ. ಸಹೋದರಿ ಜಯಂತಿ ಅವರು ನೀಡಿರುವ ಅಂಕಿ ಅಂಶ ಪ್ರತಿಯೊಬ್ಬರಿಗೂ ಬಹಳ ಪ್ರೇರಣಾದಾಯಕ. ಈ ನಿಟ್ಟಿನಲ್ಲಿ ಸ್ವ ಸಹಾಯ ಗುಂಪುಗಳಿಗೆ ದ್ವಿಮುಖ ಪಾತ್ರವಿದೆ. ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವುದಲ್ಲದೆ ಅದಕ್ಕೆ ಪರ್ಯಾಯವಾದುದನ್ನು ಹುಡುಕುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತವಾಗಬೇಕಾಗಿದೆ. ನೀವು ಪ್ಲಾಸ್ಟಿಕ್ ಚೀಲಗಳಿಗೆ ಬದಲಾಗಿ ನಾರಿನ, ಸೆಣಬಿನ ಆಕರ್ಷಕ ಚೀಲಗಳನ್ನು ತಯಾರಿಸಬಹುದು. ಕಳೆದ 2-3 ವರ್ಷಗಳಿಂದ ನೀವು ನಿಮ್ಮ ಉತ್ಪನ್ನಗಳನ್ನು ನೇರವಾಗಿ ಸರಕಾರಕ್ಕೆ ಮಾರಾಟ ಮಾಡುವಂತಹ ವ್ಯವಸ್ಥೆಯೊಂದು ಜಾರಿಯಲ್ಲಿದೆ. ನಾನು ಈ ಮೊದಲು ಹೇಳಿದಂತೆ ಸ್ವ ಸಹಾಯ ಗುಂಪುಗಳು ಸರಕಾರದ ಇ-ಮಾರುಕಟ್ಟೆ ಸ್ಥಳದ ಪೂರ್ಣ ಪ್ರಯೋಜನವನ್ನು ಪಡೆಯಬಹುದು.

ಸ್ನೇಹಿತರೇ,

ಬದಲಾದ ಸರಕಾರದಲ್ಲಿ ಸಹೋದರಿಯರಿಗೆ ಮತ್ತು ಪುತ್ರಿಯರಿಗೆ ಮುನ್ನಡೆ ಸಾಧಿಸಲು ಅವಕಾಶಗಳ ಹೆಚ್ಚಳವಾಗಿದೆ. ಎಲ್ಲಾ ಸಹೋದರಿಯರೂ ಮನೆ, ಶೌಚಾಲಯ, ವಿದ್ಯುತ್, ನೀರು, ಅನಿಲ, ಇತ್ಯಾದಿಗಳ ಜೊತೆ ಜೋಡಿಸಲ್ಪಟ್ಟಿದ್ದಾರೆ. ಸರಕಾರವು ಸಹೋದರಿಯರು ಮತ್ತು ಹೆಣ್ಣು ಮಕ್ಕಳ   ಶಿಕ್ಷಣ, ಆರೋಗ್ಯ, ಪೋಷಕಾಂಶ, ಲಸಿಕಾಕರಣ, ಮತ್ತು ಇತರ ಆವಶ್ಯಕತೆಗಳ ಬಗ್ಗೆಯೂ ಪೂರ್ಣ ಸೂಕ್ಷ್ಮತ್ವದೊಂದಿಗೆ ಕಾರ್ಯನಿರತವಾಗಿದೆ. ಅದು ಮಹಿಳೆಯರ ಘನತೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ಹೆಣ್ಣು ಮಕ್ಕಳ ಮತ್ತು ಸಹೋದರಿಯರ ವಿಶ್ವಾಸವನ್ನೂ ಎತ್ತರಿಸಿದೆ. ಈ ಆತ್ಮವಿಶ್ವಾಸವನ್ನು ಕ್ರೀಡಾಂಗಣದಲ್ಲಿ, ವಿಜ್ಞಾನ –ತಂತ್ರಜ್ಞಾನ ಕ್ಷೇತ್ರದಲ್ಲಿ, ಮತ್ತು ಯುದ್ಧರಂಗದಲ್ಲಿಯೂ ಕಾಣಬಹುದಾಗಿದೆ. ಭಾರತದ ಸ್ವಾವಲಂಬನೆಗೆ ಅಲ್ಲಿ ಉತ್ತಮ ಸಂಕೇತಗಳಿವೆ. ನೀವು ಈಗ ಈ ವಿಶ್ವಾಸವನ್ನು ಮತ್ತು ರಾಷ್ಟ್ರ ನಿರ್ಮಾಣದ ನಿಮ್ಮ ಪ್ರಯತ್ನಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜೊತೆ ಸೇರಿಸಬೇಕು. ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ 2023 ರ ಆಗಸ್ಟ್ 15 ರವರೆಗೆ ನಡೆಯುತ್ತದೆ. ಎಂಟು ಕೋಟಿಗೂ ಅಧಿಕ ಸಹೋದರಿಯರ ಮತ್ತು ಹೆಣ್ಣು ಮಕ್ಕಳ ಸಾಮೂಹಿಕ ಶಕ್ತಿ ಅಮೃತ ಮಹೋತ್ಸವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಈಗ ನೀವು ಹಣಕಾಸು ಪ್ರಗತಿ ಸಾಧಿಸುತ್ತಿರುವಿರಿ, ನೀವು ಮಹಿಳಾ ಗುಂಪುಗಳಾಗಿ ಸಾಮಾಜಿಕ ಕಾರ್ಯವನ್ನು ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸಬಹುದೇ?. ಇದರಲ್ಲಿ ಯಾವುದೇ ಹಣಕಾಸು ವರ್ಗಾವಣೆಗಳು ಇರಲಾರವು, ಆದರೆ ಅಲ್ಲಿ ಸೇವೆಯ ಸ್ಪೂರ್ತಿ ಇರುತ್ತದೆ, ಅದು ಸಾಮಾಜಿಕ ಬದುಕಿನಲ್ಲಿ ಬಹಳಷ್ಟು ಪ್ರಭಾವವನ್ನು ಹೊಂದಿರುತ್ತದೆ. ಉದಾಹರಣೆಗೆ ನೀವು ನಿಮ್ಮ ಪ್ರದೇಶದಲ್ಲಿ ನ್ಯೂನ ಪೋಷಣೆಯ ಬಗ್ಗೆ ಜಾಗೃತಿ ಆಂದೋಲನ ಮಾಡಬಹುದು ಮತ್ತು ನ್ಯೂನ ಪೋಷಣೆಯಿಂದ ಸಹೋದರಿಯರು ಮತ್ತು 12-16 ವರ್ಷ ವಯೋಮಿತಿಯ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಅರಿವು ಮೂಡಿಸಬಹುದು. ಈಗ ದೇಶವು ಕೊರೊನಾ ವಿರುದ್ಧ ಲಸಿಕಾಕರಣ ಆಂದೋಲನವನ್ನು ನಡೆಸುತ್ತಿದೆ. ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲಾಗುತ್ತಿದೆ. ನೀವು ನಿಮ್ಮ ಸರದಿ ಬಂದಾಗ ನಿಮಗೆ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ನಿಮ್ಮ ಗ್ರಾಮದ ಇತರ ಜನರೂ ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತೇಜಿಸಬೇಕು.

ನೀವು ನಿಮ್ಮ ಗ್ರಾಮಗಳಲ್ಲಿ ಈ ವರ್ಷದ ಆಗಸ್ಟ್ 15 ರಿಂದ ಮುಂದಿನ ವರ್ಷದ ಆಗಸ್ಟ್ 15 ರವರೆಗಿನ ಅವಧಿಯಲ್ಲಿ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ವರ್ಷದಲ್ಲಿ 75 ಗಂಟೆಗಳನ್ನು ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ಮೀಸಲಿಡುವ ಬಗೆಗೆ ನಿರ್ಧಾರ ಕೈಗೊಳ್ಳಬಹುದು. ನಾನು ಹೆಚ್ಚಿನದೇನನ್ನೂ ಕೇಳುತ್ತಿಲ್ಲ. ಈ ಸ್ವಸಹಾಯ ಗುಂಪಿನ ಸಹೋದರಿಯರು ಸ್ವಚ್ಛತೆಯ ಬಗ್ಗೆ, ಜಲ ಸಂರಕ್ಷಣೆಯ ಬಗ್ಗೆ, ಬಾವಿಗಳ ಮತ್ತು ಕೆರೆಗಳ ದುರಸ್ತಿಯ ಬಗ್ಗೆ  ಮತ್ತು ಇತರ ವಿಷಯಗಳ ಬಗ್ಗೆ ಆಂದೋಲನಗಳನ್ನು ನಡೆಸಬಹುದು. ನೀವು ತಿಂಗಳಿಗೆ ಒಂದು ಬಾರಿಯೋ ಅಥವಾ ಎರಡು ಬಾರಿಯೋ ವೈದ್ಯರನ್ನು ಕರೆಸಿ ಮಹಿಳೆಯರಿಗೆ ಅವರ ಆರೋಗ್ಯದ ಬಗ್ಗೆ, ಕಾಡುವ ರೋಗಗಳ ಬಗ್ಗೆ ತಿಳಿಸಲು ಮುಕ್ತ ಸಭೆ ನಡೆಸಬಹುದು. ಇದರಿಂದ ಎಲ್ಲಾ ಸಹೋದರಿಯರಿಗೆ ಬಹಳ ದೊಡ್ದ ಸಹಾಯವಾಗಲಿದೆ ಮತ್ತು ಅಲ್ಲಿ ಜಾಗೃತಿಯೂ ಮೂಡುತ್ತದೆ. ಮಕ್ಕಳ ಆರೈಕೆಗೆ ಸಂಬಂಧಿಸಿ ಉತ್ತಮ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಬಹುದು. ತಿಂಗಳಲ್ಲಿ ನೀವು ಕೆಲವು ಪ್ರವಾಸಗಳನ್ನು ಕೈಗೊಳ್ಳಬೇಕು. ತಮ್ಮ ಕೆಲಸಗಳಲ್ಲಿ ತೊಡಗಿರುವ ಸಹೋದರಿ ಗುಂಪುಗಳು  ವರ್ಷಕ್ಕೊಂದು ಬಾರಿ ಇಂತಹದೇ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಇನ್ನೆಲ್ಲಾದರೂ ಮಾಡಲಾಗಿದೆಯೇ ಎಂಬುದನ್ನು ನೋಡಲು ಪ್ರವಾಸ  ಕೈಗೊಳ್ಳಬೇಕು. ನೀವು ಬಸ್ಸನ್ನು ಬಾಡಿಗೆಗೆ ಪಡೆದು,  ನೋಡಿಕೊಂಡು ಕಲಿಯಬೇಕು. ಅದರಿಂದ ಬಹಳಷ್ಟು ಪ್ರಯೋಜನವಾಗುತ್ತದೆ. ನೀವು ಬಹಳ ದೊಡ್ಡ ಡೈರಿ ಸ್ಥಾವರಕ್ಕೆ ಭೇಟಿ ನೀಡಬಹುದು ಅಥವಾ ಹತ್ತಿರದ ದನದ ಸೆಗಣಿ ಸ್ಥಾವರಕ್ಕೆ ಅಥವಾ ಸೌರ ವಿದ್ಯುತ್ ಸ್ಥಾವರಕ್ಕೆ  ಭೇಟಿ ನೀಡಬಹುದು. ನಾವು ಈಗಷ್ಟೇ ಪ್ಲಾಸ್ಟಿಕ್ ಬಗ್ಗೆ ಕೇಳಿದೆವು, ನೀವು ಅಲ್ಲಿಗೆ ಹೋಗಿ ಜಯಂತಿ ಜೀ ಅಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದು. ನೀವು ಉತ್ತರಾಖಂಡದಲ್ಲಿ ಬೇಕರಿ ಮತ್ತು ಬಿಸ್ಕೇಟ್ ತಯಾರಿಸುತ್ತಿದ್ದುದನ್ನು ಈಗಷ್ಟೇ ನೋಡಿದಿರಿ. ನೀವಲ್ಲಿಗೆ ಭೇಟಿ ನೀಡಿ ಬಹಳಷ್ಟನ್ನು ಕಲಿಯಬಹುದು. ಇದಕ್ಕೆ ಬಹಳಷ್ಟೇನೂ ಖರ್ಚಾಗುವುದಿಲ್ಲ. ಆದರೆ ನಿಮ್ಮ ಆತ್ಮವಿಶ್ವಾಸ ಬೆಳೆಯುತ್ತದೆ. ನೀವೇನು ಕಲಿಯುತ್ತೀರೋ ಅದು ದೇಶಕ್ಕೂ ಬಹಳ ಮುಖ್ಯ. ನಾನು ಏನು ಹೇಳಲು ಇಚ್ಛಿಸುತ್ತೇನೆ ಎಂದರೆ, ನೀವು ಈಗ ಏನು ಮಾಡುತ್ತಿದ್ದೀರೋ, ಅದರ ಜೊತೆಗೆ ಸ್ವಲ್ಪ ಸಮಯವನ್ನು ಸೇವಾ ಕಾರ್ಯಕ್ಕೂ ವಿನಿಯೋಗಿಸಿ, ಇದರಿಂದ ಸಮಾಜ ಕೂಡಾ ನೀವು ಒಂದಷ್ಟು ಕಲ್ಯಾಣ ಕೆಲಸಗಳನ್ನು ಮಾಡುತ್ತಿರುವುದನ್ನು ಗುರುತಿಸುತ್ತದೆ.

ನಿಮ್ಮ ಪ್ರಯತ್ನಗಳ ಮೂಲಕ ಅಮೃತ ಮಹೋತ್ಸವದ ಯಶಸ್ಸಿನ ಮಕರಂದ ಎಲ್ಲೆಡೆ ಹರಡಿ ದೇಶಕ್ಕೆ  ಲಾಭವಾಗಲಿದೆ. ಭಾರತದ 8 ಕೋಟಿ ಮಹಿಳೆಯರ ಸಾಮೂಹಿಕ ಶಕ್ತಿಯ ಫಲವಾಗಿ ಹೊರಹೊಮ್ಮಲಿರುವ ಪರಿಣಾಮದ ಬಗ್ಗೆ ಕಲ್ಪಿಸಿಕೊಳ್ಳಿ ಮತ್ತು ಅದು ದೇಶವನ್ನು ಎಲ್ಲಿಯವರೆಗೆ ಮುಂದಕ್ಕೆ ಕೊಂಡೊಯ್ಯಬಲ್ಲದು ಎಂಬುದನ್ನೂ ಕಲ್ಪಿಸಿಕೊಳ್ಳಿ. ಈ ಎಂಟು ಕೋಟಿ ಮಾತೆಯರಲ್ಲಿ ಮತ್ತು ಸಹೋದರಿಯರಲ್ಲಿ ನನ್ನ ಮನವಿ ಏನೆಂದರೆ ಅವರ ಗುಂಪಿನ ಯಾವುದಾದರೂ ಸಹೋದರಿಗೆ ಅಥವಾ ಮಾತೆಗೆ ಓದು ಬರಹ ಬಾರದೇ ಇದ್ದರೆ ಅವರಿಗೆ ಕಲಿಸುವ ಬಗ್ಗೆ ಚಿಂತನೆ ಮಾಡಿ ಎಂಬುದಾಗಿದೆ. ನೀವು ಬಹಳಷ್ಟನ್ನು ಮಾಡಬೇಕೆಂದೇನಿಲ್ಲ, ಆದರೆ ನಿಮ್ಮ ಸಣ್ಣ ಪ್ರಯತ್ನ ಮತ್ತು ಸಮಯ ಬಹಳ ದೊಡ್ಡ ಸೇವೆಯನ್ನು ಮಾಡಬಲ್ಲದು. ಆ ಸಹೋದರಿಯರು ಬಳಿಕ ಇತರರಿಗೆ ಕಲಿಸುತ್ತಾರೆ. ನಾನು ನಿಮ್ಮ ಮಾತುಗಳನ್ನು ಕೇಳುತ್ತಿರುವಾಗ ಅಲ್ಲಿ ನಿಮ್ಮಿಂದ ಕಲಿಯಲು ಬಹಳಷ್ಟಿದೆ ಎಂದು ನನಗನಿಸಿದೆ ಮತ್ತು ನಾನು ನಿಮ್ಮಿಂದ ಬಹಳಷ್ಟನ್ನು ಕಲಿಯಬಹುದು ಎಂಬುದೂ ನನ್ನ ಭಾವನೆಯಾಗಿದೆ. ಕಠಿಣ ಪರಿಸ್ಥಿತಿಗಳಿದ್ದರೂ ಸಹಿತ ನೀವು ಬಹಳ ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದ್ದೀರಿ. ನಿಮ್ಮ ವೈಯಕ್ತಿಕ ಬದುಕಿನಲ್ಲಿರುವ ಸಮಸ್ಯೆಗಳ ಹೊರತಾಗಿಯೂ, ನೀವು ನಿಮ್ಮ ಕೆಲಸಗಳನ್ನು ಕೈಬಿಡದೆ ಹೊಸತಾದುದನ್ನು ಮಾಡಿರುವಿರಿ. ದೇಶದ ಮಾತೆಯರ ಮತ್ತು ಸಹೋದರಿಯರ ಪ್ರತಿಯೊಂದು ಶಬ್ದವೂ ನನ್ನನ್ನು ಸೇರಿ ಪ್ರತಿಯೊಬ್ಬರಿಗೂ ಬಹಳ ಪ್ರೇರಣಾದಾಯಕ. ನಾನು ಎಲ್ಲಾ ಸಹೋದರಿಯರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ. ಬರಲಿರುವ ರಕ್ಷಾ ಬಂಧನಕ್ಕೆ ನಿಮ್ಮ ಆಶೀರ್ವಾದಗಳಿರಲಿ ಮತ್ತು ನಮಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಕೊಡಿ. ನಾನೀಗ ನನ್ನ ಭಾಷಣಕ್ಕೆ ನಿಲುಗಡೆ ಕೊಡುತ್ತೇನೆ, ನಿಮಗೆ ಮುಂಚಿತವಾಗಿ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತೇನೆ.

ಬಹಳ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM walks among Yoga participants, guides them: Asanas performed on boats, swimming pools; soldiers practise at 14,000 feet

Media Coverage

PM walks among Yoga participants, guides them: Asanas performed on boats, swimming pools; soldiers practise at 14,000 feet
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the transformative impact of Yoga
June 22, 2026

The Prime Minister, Shri Narendra Modi, said that the remarkable success of the International Day of Yoga is proof that Yoga is not only helping millions of people across the world achieve physical well-being, but is also inspiring them to lead positive lives with confidence.

The Prime Minister shared a Sanskrit Subhashitam-

“चित्तप्रशमनोपायो योग इत्यभिधीयते। प्राणस्पन्दनिरोधो वा द्वेधा योगस्य धारणा॥”

The Subhashitam conveys that yoga is the means of completely calming and quieting the mind. To attain this goal, two principal methods of yoga are prescribed: calming the mind and regulating the flow of the breath.

The Prime Minister wrote on X;

“अंतर्राष्ट्रीय योग दिवस की बड़ी सफलता इस बात का प्रमाण है कि योग न केवल दुनियाभर में करोड़ों लोगों को शारीरिक रूप से स्वस्थ बना रहा है, बल्कि उन्हें आत्मविश्वास के साथ सकारात्मक जीवन जीने के लिए प्रेरित भी कर रहा है।

चित्तप्रशमनोपायो योग इत्यभिधीयते। प्राणस्पन्दनिरोधो वा द्वेधा योगस्य धारणा॥”