ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಆಟಿಕೆ ಮೇಳ-2021ʼವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಖಾತೆ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಹಾಗೂ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಫೆಬ್ರವರಿ 27ರಿಂದ 2021ರ ಮಾರ್ಚ್ 2ರವರೆಗೆ ಆಟಿಕೆಗಳ ಮೇಳ ನಡೆಯಲಿದೆ. ಮೇಳದಲ್ಲಿ 1,000ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದಾರೆ.

ಕರ್ನಾಟಕದ ಚನ್ನಪಟ್ಟಣ, ಉತ್ತರ ಪ್ರದೇಶದ ವಾರಾಣಸಿ ಮತ್ತು ರಾಜಸ್ಥಾನದ ಜೈಪುರದ ಆಟಿಕೆ ತಯಾರಕರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಈ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಹಾಗೂ ರಫ್ತು ಉತ್ತೇಜಿಸುವ ಮೂಲಕ ಭಾರತವನ್ನು ಮುಂದಿನ ಆಟಿಕೆ ಉತ್ಪಾದನೆಯ ಕೇಂದ್ರ ತಾಣವನ್ನಾಗಿ ಮಾಡುವುದು ಹೇಗೆ ಎಂದು ಚರ್ಚಿಸಲು ಈ ಆಟಿಕೆ ಮೇಳದ ಮೂಲಕ ಸರಕಾರ ಮತ್ತು ಉದ್ಯಮಗಳು ಕೈಜೋಡಿಸಿವೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದಲ್ಲಿ ಆಟಿಕೆ ಉದ್ಯಮದ ಸುಪ್ತ ಸಾಮರ್ಥ್ಯವನ್ನು ಹೊರತರಲು ಮತ್ತು ಆತ್ಮನಿರ್ಭರ ಭಾರತದ ಭಾಗವಾಗಿ ಈ ಉದ್ಯಮಕ್ಕೆ ಒಂದು ಗುರುತನ್ನು ಸೃಷ್ಟಿಸಲು ಕರೆ ನೀಡಿದರು. ಈ ಚೊಚ್ಚಲ ಆಟಿಕೆ ಮೇಳವು ಕೇವಲ ವ್ಯಾಪಾರ ಅಥವಾ ಆರ್ಥಿಕ ಕಾರ್ಯಕ್ರಮವಲ್ಲ ಎಂದು ಅವರು ಹೇಳಿದರು. ಈ ಕಾರ್ಯಕ್ರಮವು ದೇಶದ ಪ್ರಾಚೀನ ಕ್ರೀಡೆ ಮತ್ತು ಕ್ರೀಡೋತ್ಸಾಹವನ್ನು ಬಲಪಡಿಸುವ ಕೊಂಡಿಯಾಗಿದೆ. ಈ ಆಟಿಕೆ ಮೇಳವು ಆಟಿಕೆಯ ವಿನ್ಯಾಸ, ಆವಿಷ್ಕಾರ, ತಂತ್ರಜ್ಞಾನ, ಮಾರುಕಟ್ಟೆ ಮತ್ತು ಪ್ಯಾಕೇಜಿಂಗ್ ಬಗ್ಗೆ ಚರ್ಚಿಸಲು ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಎಂದು ಅವರು ಹೇಳಿದರು. ಸಿಂಧೂ-ಕಣಿವೆ ನಾಗರಿಕತೆ, ಮೊಹೆಂಜೊದಾರೋ ಮತ್ತು ಹರಪ್ಪ ಯುಗದ ಆಟಿಕೆಗಳ ಬಗ್ಗೆ ಜಗತ್ತು ಸಂಶೋಧನೆಗಳನ್ನು ಮಾಡಿದೆ ಎಂದು ಅವರು ಹೇಳಿದರು.

 

ಪ್ರಾಚೀನ ಕಾಲದಲ್ಲಿ, ವಿಶ್ವದ ಪ್ರವಾಸಿಗರು ಭಾರತಕ್ಕೆ ಬಂದಾಗ ಅವರು ಭಾರತದಲ್ಲಿ ಕ್ರೀಡೆಗಳನ್ನು ಕಲಿಯುತ್ತಿದ್ದರು ಮತ್ತು ಅದನ್ನು ಅವರೊಂದಿಗೆ ಕೊಂಡೊಯ್ಯುತ್ತಿದ್ದರು ಎಂದು ಪ್ರಧಾನಿ ನೆನಪಿಸಿಕೊಂಡರು. ಇಂದು ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ʻಚೆಸ್ʼ ಅನ್ನು ಭಾರತದಲ್ಲಿ ʻಚತುರಂಗ ಅಥವಾ ಚದುರಂಗ' ಎಂಬ ಹೆಸರಿನಲ್ಲಿ ಆಡಲಾಗುತ್ತಿತ್ತು. ಆಧುನಿಕ ʻಲೂಡೋʼ ಆಟವನ್ನು ಆಗ ʻಪಾಚಿಸಿʼ ಹೆಸರಲ್ಲಿ ಆಡಲಾಗುತ್ತಿತ್ತು. ಬಾಲರಾಮನು ಸಾಕಷ್ಟು ಆಟಿಕೆಗಳನ್ನು ಹೊಂದಿದ್ದನು ಎಂದು ನಮ್ಮ ಧರ್ಮಗ್ರಂಥಗಳಲ್ಲಿ ವರ್ಣಿಸಲಾಗಿದೆ. ಗೋಕುಲದಲ್ಲಿ ಕೃಷ್ಣನು ಮನೆಯ ಹೊರಗೆ ಗೆಳೆಯರೊಂದಿಗೆ ಬಲೂನಿನಲ್ಲಿ ಆಟವಾಡುತ್ತಿದ್ದರು. ನಮ್ಮ ಪ್ರಾಚೀನ ದೇವಾಲಯಗಳಲ್ಲಿ ಆಟಗಳು, ಆಟಿಕೆಗಳು ಮತ್ತು ಕರಕುಶಲ ವಸ್ತುಗಳನ್ನು ಸಹ ಕೆತ್ತಲಾಗಿದೆ ಎಂದು ಹೇಳಿದರು.

ಇಲ್ಲಿ ತಯಾರಿಸಲಾದ ಆಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡಿವೆ ಎಂದು ಪ್ರಧಾನಿ ಹೇಳಿದರು. ಮರುಬಳಕೆ ಮತ್ತು ಮರು ಸಂಸ್ಕರಣೆಯು ಭಾರತೀಯ ಜೀವನಶೈಲಿಯ ಒಂದು ಭಾಗವಾಗಿದೆ. ಇದು ನಮ್ಮ ಆಟಿಕೆಗಳಲ್ಲಿ ಕೂಡ ಕಂಡುಬರುತ್ತದೆ ಎಂದು ಅವರು ಹೇಳಿದರು. ಬಹುತೇಕ ಭಾರತೀಯ ಆಟಿಕೆಗಳನ್ನು ನೈಸರ್ಗಿಕ ಮತ್ತು ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಬಳಸಲಾಗುವ ಬಣ್ಣಗಳು ಸಹ ನೈಸರ್ಗಿಕ ಮತ್ತು ಸುರಕ್ಷಿತ. ಈ ಆಟಿಕೆಗಳು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಮನಸ್ಸನ್ನು ಬೆಸೆದು ಮನೋ-ಸಾಮಾಜಿಕ ಬೆಳವಣಿಗೆ ಹಾಗೂ ಭಾರತೀಯ ದೃಷ್ಟಿಕೋನವನ್ನು ಬೆಳೆಸಲು ಸಹ ಸಹಕಾರಿಯಾಗಿವೆ ಎಂದರು. ಪರಿಸರ ಮತ್ತು ಮನೋವಿಜ್ಞಾನ ಎರಡಕ್ಕೂ ಉತ್ತಮವಾದ ಆಟಿಕೆಗಳನ್ನು ತಯಾರಿಸುವಂತೆ ದೇಶದ ಆಟಿಕೆ ತಯಾರಕರಿಗೆ ಅವರು ಮನವಿ ಮಾಡಿದರು! ಆಟಿಕೆಗಳಲ್ಲಿ ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡಿ, ಮರುಬಳಕೆ ಮಾಡಲು ಸಾಧ್ಯವಾಗುವಂತಹ ವಸ್ತುಗಳನ್ನು ಬಳಸಬೇಕೆಂದು ಸಲಹೆ ನೀಡಿದರು.

ಇಂದು ಜಗತ್ತಿನ ಮೂಲೆ ಮೂಲೆಗಳಲ್ಲೂ ಭಾರತೀಯ ದೃಷ್ಟಿಕೋನ ಮತ್ತು ಭಾರತದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ಗಮನ ಸೆಳೆದರು. ಜ್ಞಾನ, ವಿಜ್ಞಾನ, ಮನರಂಜನೆ ಮತ್ತು ಮನೋವಿಜ್ಞಾನವನ್ನು ಒಳಗೊಂಡಿರುವುದು ಭಾರತೀಯ ಕ್ರೀಡೆಗಳು ಮತ್ತು ಆಟಿಕೆಗಳ ವಿಶೇಷತೆ ಎಂದು ಅವರು ಹೇಳಿದರು. ಮಕ್ಕಳು ಲಟ್ಟು ಆಡುವುದನ್ನು ಕಲಿತಾಗ, ಅವರಿಗೆ ಗುರುತ್ವಾಕರ್ಷಣೆ ಮತ್ತು ಸಮತೋಲನದ ಪಾಠವನ್ನು ಕಲಿಸಲಾಗುತ್ತದೆ. ಅದೇ ರೀತಿ, ಕ್ಯಾಟರ್‌ಬಿಲ್ಲು (ಕವೆಗೋಲು) ನೊಂದಿಗೆ ಆಟವಾಡುತ್ತಿರುವ ಮಗು, ಚಲನಶಕ್ತಿಯ ಸಾಮರ್ಥ್ಯದ ಬಗ್ಗೆ ಮೂಲಭೂತ ಅಂಶಗಳನ್ನು ಕಲಿಯಲು ಆರಂಭಿಸುತ್ತದೆ. ಒಗಟು ಆಟಿಕೆಗಳು ವ್ಯೂಹಾತ್ಮಕ ಚಿಂತನೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲವನ್ನು ಅಭಿವೃದ್ಧಿಪಡಿಸುತ್ತವೆ ಎಂದು ಅವರು ಹೇಳಿದರು. ಅದೇ ರೀತಿ ನವಜಾತ ಶಿಶುಗಳು ತೋಳುಗಳನ್ನು ತಿರುಚುವ ಮೂಲಕ ಮತ್ತು ತಿರುಗಿಸುವ ಮೂಲಕ ವೃತ್ತಾಕಾರದ ಚಲನೆಯನ್ನು ಅನುಭವಿಸಲು ಪ್ರಾರಂಭಿಸುತ್ತವೆ.

ಸೃಜನಶೀಲ ಆಟಿಕೆಗಳು ಮಕ್ಕಳಲ್ಲಿ ಸಂವೇದನೆಯನ್ನು ಬೆಳಸಿ, ಕಲ್ಪನಾಶಕ್ತಿಗೆ ರೆಕ್ಕೆಪುಕ್ಕ ನೀಡುತ್ತವೆ ಎಂದು ಪ್ರಧಾನಿ ಹೇಳಿದರು. ಮಕ್ಕಳ ಕಲ್ಪನೆ ಅಮಿತವಾದದ್ದು. ಅವರಿಗೆ ಬೇಕಾಗಿರುವುದು ಅವರ ಕುತೂಹಲವನ್ನು ತೃಪ್ತಿಪಡಿಸುವ ಮತ್ತು ಅವರ ಸೃಜನಶೀಲತೆಯನ್ನು ಜಾಗೃತಗೊಳಿಸುವ ಒಂದು ಪುಟ್ಟ ಆಟಿಕೆಯಷ್ಟೇ. ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಆಟಿಕೆಗಳು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳೊಂದಿಗೆ ಆಟ ಆಡಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಆಟಿಕೆಗಳ ವಿಜ್ಞಾನವನ್ನು ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ಅವುಗಳ ಪಾತ್ರವನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು, ಶಿಕ್ಷಕರೂ ಶಾಲೆಗಳಲ್ಲಿ ಇವುಗಳನ್ನು ಬಳಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು. ಈ ನಿಟ್ಟಿನಲ್ಲಿ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು, ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಬದಲಾವಣೆಗಳನ್ನು ತಂದಿದೆ ಎಂದು ಅವರು ಹೇಳಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ ಪ್ರಧಾನಿ, ಆಟ-ಆಧಾರಿತ ಮತ್ತು ಚಟುವಟಿಕೆ ಆಧಾರಿತ ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಇದು ಒಳಗೊಂಡಿದೆ ಎಂದರು. ಮಕ್ಕಳಲ್ಲಿ ತಾರ್ಕಿಕ ಮತ್ತು ಸೃಜನಶೀಲ ಚಿಂತನೆಯ ಬೆಳವಣಿಗೆಗೆ ವಿಶೇಷ ಗಮನವನ್ನು ನೀಡುವ ಶಿಕ್ಷಣ ವ್ಯವಸ್ಥೆ ಇದಾಗಿದೆ. ಆಟಿಕೆಗಳ ಕ್ಷೇತ್ರದಲ್ಲಿ ಭಾರತವು ಪರಂಪರೆ, ತಂತ್ರಜ್ಞಾನ ಪರಿಕಲ್ಪನೆ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ನಾವು ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಕಂಪ್ಯೂಟರ್ ಗೇಮ್‌ಗಳ ಮೂಲಕ ಜಗತ್ತನ್ನು ಮತ್ತೆ ಪರಿಸರಸ್ನೇಹಿ ಆಟಿಕೆಗಳ ಕಡೆಗೆ ಕೊಂಡೊಯ್ಯಬಹುದು, ಭಾರತದ ಕಥನಗಳನ್ನು ಎಲ್ಲೆಡೆ ಪ್ರಚುರಪಡಿಸಬಹುದು. ಆದರೆ ಇದೆಲ್ಲದರ ಹೊರತಾಗಿಯೂ ಜಗತ್ತಿನ ೧೦೦ ಶತಕೋಟಿ ಡಾಲರ್‌ ಮೌಲ್ಯದ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಅತ್ಯಲ್ಪ. ದೇಶದಲ್ಲಿ ಶೇ. 85ರಷ್ಟು ಆಟಿಕೆಗಳು ವಿದೇಶದಿಂದ ಆಮದಾಗುತ್ತವೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ಅಗತ್ಯವನ್ನು ಪ್ರಧಾನಿಯವರು ಒತ್ತಿ ಹೇಳಿದರು.

ಈಗ ದೇಶವು ಆಟಿಕೆ ಉದ್ಯಮವನ್ನು ಶ್ರೇಣೀಕೃತಗೊಳಿಸಿ, 24 ಪ್ರಮುಖ ವಲಯಗಳನ್ನಾಗಿ ವಿಂಗಡಿಸಿದೆ. ʻರಾಷ್ಟ್ರೀಯ ಆಟಿಕೆ ಕ್ರಿಯಾ ಯೋಜನೆʼಯನ್ನೂ ಸಿದ್ಧಪಡಿಸಲಾಗಿದೆ. ಈ ಉದ್ಯಮವನ್ನು ಸ್ಪರ್ಧಾತ್ಮಕವಾಗಿಸಲು, ದೇಶವನ್ನು ಆಟಿಕೆಗಳಲ್ಲಿ ಸ್ವಾವಲಂಬಿಯಾಗಿಸಲು ಮತ್ತು ಭಾರತದ ಆಟಿಕೆಗಳು ಜಾಗತಿಕ ಮಾರುಕಟ್ಟೆಗೆ ಸರಬರಾಜಾಗುವಂತೆ ಮಾಡಲು 15 ಸಚಿವಾಲಯಗಳು ಮತ್ತು ಇಲಾಖೆಗಳನ್ನು ಸೇರಿಸಲಾಗಿದೆ. ಆಟಿಕೆ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಈ ಅಭಿಯಾನದ ಉದ್ದಕ್ಕೂ ರಾಜ್ಯ ಸರಕಾರಗಳನ್ನು ಸಮಾನ ಪಾಲುದಾರರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳ ಜೊತೆಗೆ ಆಟಿಕೆ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಬಲಪಡಿಸಲು ಪ್ರಯತ್ನಿಸಲಾಗುತ್ತದೆ ಎಂದರು. ಭಾರತೀಯ ಕ್ರೀಡೆ ಆಧಾರಿತ ಆಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ʻಟಾಯ್ಕಾಥಾನ್-2021ʼ ಅನ್ನು ಸಹ ಆಯೋಜಿಸಲಾಗಿತ್ತು ಮತ್ತು 7000ಕ್ಕೂ ಹೆಚ್ಚು ಆಲೋಚನೆಗಳನ್ನು ಈ ವೇಳೆ ಮಂಥನಗೊಳಿಸಲಾಯಿತು.

ʻಮೇಡ್ ಇನ್ ಇಂಡಿಯಾʼಕ್ಕೆ ಇಂದು ಬೇಡಿಕೆ ಇದೆ ಎಂದಾದರೆ, ʻಹ್ಯಾಂಡ್‌ಮೇಡ್‌ ಇನ್‌ ಇಂಡಿಯಾʼಗೂ ಸಮಾನವಾಗಿ ಬೇಡಿಕೆ ಹೆಚ್ಚುತ್ತಿದೆ. ಇಂದು ಜನರು ಆಟಿಕೆಗಳನ್ನು ಒಂದು ಉತ್ಪನ್ನವಾಗಿ ಖರೀದಿಸುವುದು ಮಾತ್ರವಲ್ಲ, ಆ ಆಟಿಕೆಯೊಂದಿಗೆ ಬರುವ ಅನುಭವದೊಂದಿಗೆ ತಮ್ಮನ್ನು ಸಂಪರ್ಕಿಸಿಕೊಳ್ಳಲು ಬಯಸುತ್ತಾರೆ. ಹಾಗಾಗಿ, ನಾವು ʻಹ್ಯಾಂಡ್‌ಮೇಡ್‌ ಇನ್ ಇಂಡಿಯಾʼವನ್ನು ಕೂಡ ಪ್ರಚಾರ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's crude supply secure, LPG production increased: Hardeep Puri

Media Coverage

India's crude supply secure, LPG production increased: Hardeep Puri
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam emphasising on auspicious thoughts guiding the path of progress
March 13, 2026

The Prime Minister, Shri Narendra Modi, shared a Sanskrit Subhashitam emphasising on auspicious thoughts guiding the path of progress:

“आ नो भद्राः क्रतवो यन्तु विश्वतोऽदब्धासो अपरीतास उद्भिदः।

देवा नो यथा सदमिद् वृधे असन्नप्रायुवो रक्षितारो दिवे दिवे॥”

The Subhashitam conveys that, may auspicious and inspiring thoughts come to us from all directions – thoughts that grant us enthusiasm, energy, and the strength to move forward. May those thoughts be steadfast, unconquerable, and capable of opening the path to progress. May the divine powers infuse our lives each day with growth, advancement, and renewed zeal and inspire us to keep moving ahead while protecting us day after day.

The Prime Minister wrote on X;

“आ नो भद्राः क्रतवो यन्तु विश्वतोऽदब्धासो अपरीतास उद्भिदः।

देवा नो यथा सदमिद् वृधे असन्नप्रायुवो रक्षितारो दिवे दिवे॥”