ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲಿರುವ ಯೋಜನೆ
ಉತ್ಪಾದನಾ ವಲಯ ಮತ್ತು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಪ್ರೋತ್ಸಾಹಧನ ನೀಡುವತ್ತ ಗಮನ ಹರಿಸಲಿದೆ
ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಎರಡು ಕಂತುಗಳಲ್ಲಿ ಗರಿಷ್ಠ 15,000 ರೂ.ಗಳವರೆಗೆ ಒಂದು ತಿಂಗಳ ವೇತನವನ್ನು ಪಡೆಯಲಿದ್ದಾರೆ
ಒಂದು ಲಕ್ಷ ಕೋಟಿ ರೂ. ನಿಧಿಯನ್ನು ಹೊಂದಿರುವ ಈ ಯೋಜನೆಯು ಎರಡು ವರ್ಷಗಳಲ್ಲಿ 3.5 ಕೋಟಿಗಿಂತ ಅಧಿಕ ಉದ್ಯೋಗಗಳ ಸೃಷ್ಟಿಗೆ ಬೆಂಬಲ ನೀಡಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಿ, ʻಉದ್ಯೋಗ ಆಧರಿತ ಪ್ರೋತ್ಸಾಹಧನʼ(ಇಎಲ್ಐ) ಯೋಜನೆಗೆ ಅನುಮೋದನೆ ನೀಡಿದೆ. ಉದ್ಯೋಗ ಸೃಷ್ಟಿ, ಎಲ್ಲ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ, ಮೊದಲ ಬಾರಿಯ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ (15,000 ರೂ.ವರೆಗೆ), ಉದ್ಯೋಗದಾತರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುವುದು.  ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನಗಳನ್ನು ನೀಡಲಾಗುವುದು. 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಒದಗಿಸಲು ಪ್ರಧಾನ ಮಂತ್ರಿಯವರ ಐದು ಯೋಜನೆಗಳ ಪ್ಯಾಕೇಜ್‌ನ ಭಾಗವಾಗಿ 2024-25ರ ಕೇಂದ್ರ ಬಜೆಟ್‌ನಲ್ಲಿ 2 ಲಕ್ಷ ಕೋಟಿ ರೂ.ಗಳ ಅನುದಾನದೊಂದಿಗೆ ʻಉದ್ಯೋಗ ಆಧರಿತ ಪ್ರೋತ್ಸಾಹಧನʼ(ಇಎಲ್ಐ) ಯೋಜನೆಯನ್ನು ಘೋಷಿಸಲಾಯಿತು.

99,446 ಕೋಟಿ ರೂ.ಗಳ ಅನುದಾನದೊಂದಿಗೆ, ʻಇಎಲ್ಐʼ ಯೋಜನೆಯು 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಪೈಕಿ 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಉದ್ಯೋಗ ಪಡೆಯಲಿದ್ದಾರೆ. ಆಗಸ್ಟ್ 01, 2025 ಮತ್ತು ಜುಲೈ 31, 2027ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಈ ಯೋಜನೆಯ ಪ್ರಯೋಜನಗಳು ಅನ್ವಯವಾಗುತ್ತವೆ.

ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದ್ದು, ʻಭಾಗ-ಎʼ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ʻಭಾಗ-ಬಿʼ ಉದ್ಯೋಗದಾತರ ಮೇಲೆ ಗಮನ ಕೇಂದ್ರೀಕರಿಸಿದೆ:

ಭಾಗ ಎ: ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ:

ಈ ಭಾಗವು ʻಇಪಿಎಫ್ಒʼನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಇದರ ಅಡಿಯಲ್ಲಿ ಗರಿಷ್ಠ 15,000 ರೂ.ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. 1 ಲಕ್ಷ ರೂ.ವರೆಗಿನ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ಹಾಗೂ ಉದ್ಯೋಗಿಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಪಾವತಿಸಲಾಗುತ್ತದೆ. ಉಳಿತಾಯ ಮಾಡುವ ಅಭ್ಯಾಸವನ್ನು ಉತ್ತೇಜಿಸಲು, ಪ್ರೋತ್ಸಾಹಧನದ ಒಂದು ಭಾಗವನ್ನು ಠೇವಣಿ ಖಾತೆಯ ಉಳಿತಾಯ ಸಾಧನದಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ. ಇದನ್ನು ನಂತರದ ದಿನಗಳಲ್ಲಿ ಉದ್ಯೋಗಿಯು ಹಿಂಪಡೆಯಬಹುದು.

ʻಭಾಗ-ಎʼ ಸುಮಾರು 1.92 ಕೋಟಿ ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಭಾಗ ಬಿ: ಉದ್ಯೋಗದಾತರಿಗೆ ಬೆಂಬಲ:

ಈ ಭಾಗವು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತದೆಯಾದರೂ, ಉತ್ಪಾದನಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಗರಿಷ್ಠ 1 ಲಕ್ಷ ರೂ.ವರೆಗಿನ ವೇತನ ಹೊಂದಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನವನ್ನು ಪಡೆಯುತ್ತಾರೆ. ಕನಿಷ್ಠ ಆರು ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ 3,000 ರೂ.ಗಳವರೆಗೆ ಪ್ರೋತ್ಸಾಹಧನ ನೀಡುವ ಮೂಲಕ ಉದ್ಯೋಗದಾತರನ್ನು ಪ್ರೋತ್ಸಾಹಿಸುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹಕಗಳನ್ನು 3 ಮತ್ತು 4 ನೇ ವರ್ಷಗಳಿಗೂ ವಿಸ್ತರಿಸಲಾಗುವುದು.

ʻಇಪಿಎಫ್ಒʼನಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಗಳು ಕನಿಷ್ಠ ಆರು ತಿಂಗಳವರೆಗೆ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು (50 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ) ಅಥವಾ ಐದು ಹೆಚ್ಚುವರಿ ಉದ್ಯೋಗಿಗಳನ್ನು (50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ) ಕನಿಷ್ಠ ಆರು ತಿಂಗಳವರೆಗೆ ಕಾಯಂ ಆಧಾರದ ಮೇಲೆ ನೇಮಿಸಿಕೊಳ್ಳಬೇಕಾಗುತ್ತದೆ.

ಪ್ರೋತ್ಸಾಹಧನ ರಚನೆಯು ಈ ಕೆಳಗಿನಂತಿರುತ್ತದೆ:

ಹೆಚ್ಚುವರಿ ಉದ್ಯೋಗಿಯ ಇಪಿಎಫ್ ವೇತನ ಸ್ಲ್ಯಾಬ್‌ಗಳು (ರೂ.ಗಳಲ್ಲಿ)

ಉದ್ಯೋಗದಾತರಿಗೆ ಪ್ರಯೋಜನ (ಪ್ರತಿ ತಿಂಗಳು ಹೆಚ್ಚುವರಿ ಉದ್ಯೋಗಕ್ಕೆ)

10,000 ರೂ.ವರೆಗೆ*

1,000 ರೂ.ವರೆಗೆ

10,000 ರೂ.ಗಿಂತ ಹೆಚ್ಚು ಮತ್ತು 20,000 ರೂ.ವರೆಗೆ

2,000 ರೂ.

20,000 ರೂ.ಗಿಂತ ಹೆಚ್ಚು (ತಿಂಗಳಿಗೆ 1 ಲಕ್ಷ ರೂ.ವರೆಗೆ)

3,000 ರೂ.

* 10,000 ರೂ.ವರೆಗಿನ ಇಪಿಎಫ್ ವೇತನ ಹೊಂದಿರುವ ಉದ್ಯೋಗಿಗಳಿಗೆ, ಅನುಗುಣವಾಗಿ  ಪ್ರೋತ್ಸಾಹಧನ ಸಿಗಲಿದೆ.

ಈ ಭಾಗವು ಸುಮಾರು 2.60 ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ.

 

ಪ್ರೋತ್ಸಾಹಕ ಪಾವತಿ ಕಾರ್ಯವಿಧಾನ:

ಯೋಜನೆಯ ʻಭಾಗ-ಎʼ ಅಡಿಯಲ್ಲಿ ಮೊದಲ ಬಾರಿಯ ಉದ್ಯೋಗಿಗಳಿಗೆ ಎಲ್ಲಾ ಪಾವತಿಗಳನ್ನು ʻಆಧಾರ್ ಬ್ರಿಡ್ಜ್ ಪೇಮೆಂಟ್ ಸಿಸ್ಟಮ್ʼ(ಎಬಿಪಿಎಸ್) ಬಳಸಿ ʻಡಿಬಿಟಿʼ (ನೇರ ಲಾಭ ವರ್ಗಾವಣೆ) ಮೂಲಕ ಮಾಡಲಾಗುತ್ತದೆ. ʻಭಾಗ-ಬಿʼ ಅಡಿಯಲ್ಲಿ ಉದ್ಯೋಗದಾತರಿಗೆ ಪಾವತಿಗಳನ್ನು ನೇರವಾಗಿ ಅವರ ಪ್ಯಾನ್-ಲಿಂಕ್ ಮಾಡಿದ ಖಾತೆಗಳಿಗೆ ಮಾಡಲಾಗುತ್ತದೆ.

ʻಇಎಲ್ಐʼ ಯೋಜನೆಯೊಂದಿಗೆ, ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಜೊತೆಗೆ ಮೊದಲ ಬಾರಿಗೆ ಕಾರ್ಯಪಡೆಗೆ ಸೇರುವ ಯುವಕರನ್ನು ಪ್ರೋತ್ಸಾಹಿಸುತ್ತದೆ. ಕೋಟ್ಯಂತರ ಯುವಕರು ಮತ್ತು ಮಹಿಳೆಯರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ದೇಶದ ಕಾರ್ಯಪಡೆಯನ್ನು ಔಪಚಾರಿಕಗೊಳಿಸುವುದು ಈ ಯೋಜನೆಯ ಮತ್ತೊಂದು ಮಹತ್ವದ ಪ್ರಯೋಜನವಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Government's foodgrain stocks hit 604 lakh tonnes, nearly three times buffer requirement

Media Coverage

Government's foodgrain stocks hit 604 lakh tonnes, nearly three times buffer requirement
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಮೇ 2026
May 07, 2026

Justice Delivered Under PM Modi: How Operation Sindoor Redefined India’s Response to Terror

Aatmanirbhar Bharat in Action: Record Exports, Defence Exports, Food Security & Green Mobility Under the Leadership of PM Modi