ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನದ ವಿಶೇಷ ಸಂದರ್ಭದಲ್ಲಿ, ನಾವು ದೇಶದ ಸಾಮೂಹಿಕ ಶಕ್ತಿಯನ್ನು ನೋಡಿದ್ದೇವೆ: ಪ್ರಧಾನಿ
ನೀರು ಮತ್ತು ನೀರಿನ ಸಂರಕ್ಷಣೆಯ ಮಹತ್ವವನ್ನು ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ: ಪ್ರಧಾನಿ ಮೋದಿ
ಅಮೃತ್ ಸರೋವರ ನಿರ್ಮಾಣವು ಸಾಮೂಹಿಕ ಆಂದೋಲನವಾಗಿದೆ: ಪ್ರಧಾನಿ ಮೋದಿ
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪೋಶನ್ ಮಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಎಲ್ಲರಿಗೂ ಮನವಿ: ಪ್ರಧಾನಿ ಮೋದಿ
ವಿಶ್ವಸಂಸ್ಥೆಯು 2023 ನೇ ವರ್ಷವನ್ನು ಅಂತರರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿದೆ: ಪ್ರಧಾನಿ
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಾಗಿ ಉತ್ಪಾದಕವಾಗಿದೆ, ಇದು ಸಣ್ಣ ರೈತರಿಗೆ ಪ್ರಯೋಜನಕಾರಿಯಾಗಿದೆ: ಪ್ರಧಾನಿ ಮೋದಿ
ಡಿಜಿಟಲ್ ಇಂಡಿಯಾ ಉಪಕ್ರಮದಿಂದಾಗಿ ದೇಶದಲ್ಲಿ ಡಿಜಿಟಲ್ ಉದ್ಯಮಿಗಳು ಹೆಚ್ಚುತ್ತಿದ್ದಾರೆ: ಪ್ರಧಾನಿ

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ! 
ಈ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಎಲ್ಲಾ ಪತ್ರಗಳು, ಸಂದೇಶಗಳು ಮತ್ತು ಕಾರ್ಡ್ ಗಳು ನನ್ನ ಕಛೇರಿಯನ್ನು ತ್ರಿವರ್ಣ ಧ್ವಜದ ಬಣ್ಣದಲ್ಲಿ ತೋಯಿಸಿವೆ. ತ್ರಿವರ್ಣ ಧ್ವಜ ಚಿತ್ರವನ್ನು ಹೊಂದಿರದ ಅಥವಾ ತ್ರಿವರ್ಣ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡದ ಯಾವುದೇ ಪತ್ರವನ್ನು ನಾನು ನೋಡಿಲ್ಲ. ಮಕ್ಕಳು ಮತ್ತು ಯುವ ಸ್ನೇಹಿತರು ಅಮೃತ ಮಹೋತ್ಸವದಲ್ಲಿ ಸುಂದರವಾದ ಚಿತ್ರಗಳು ಮತ್ತು ಕಲಾಕೃತಿಗಳನ್ನು ಕಳುಹಿಸಿದ್ದಾರೆ. ಸ್ವಾತಂತ್ರ್ಯದ ಸಂಭ್ರಮದ ಈ ತಿಂಗಳಲ್ಲಿ ನಮ್ಮ ಇಡೀ ದೇಶದಲ್ಲಿ, ಪ್ರತಿ ನಗರದಲ್ಲಿ, ಪ್ರತಿ ಹಳ್ಳಿಯಲ್ಲಿ ಅಮೃತ ಮಹೋತ್ಸವದ ಅಮೃತಧಾರೆ ಹರಿಯುತ್ತಿದೆ. ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ, ನಾವು ದೇಶದ ಸಾಮೂಹಿಕ ಶಕ್ತಿಯನ್ನು ನೋಡಿದ್ದೇವೆ. ಸಾಕ್ಷಾತ್ಕಾರದ ಪ್ರಜ್ಞೆ ಬಂದಿದೆ. ಇಷ್ಟು ದೊಡ್ಡ ದೇಶ, ಹಲವು ವೈವಿಧ್ಯಗಳು, ಆದರೆ ತ್ರಿವರ್ಣ ಧ್ವಜವನ್ನು ಹಾರಿಸುವ ವಿಷಯ ಬಂದಾಗ, ಎಲ್ಲರಲ್ಲೂ ಒಂದೇ ಉತ್ಸಾಹ ಹರಿಯುತ್ತಿತ್ತು. ಜನರು ಸ್ವತಃ ಮುಂದೆ ಬಂದರು, ತ್ರಿವರ್ಣದ ಹೆಮ್ಮೆಯ ಜೊತೆ ಮುಂಚೂಣಿಯಲ್ಲಿದ್ದರು. ಸ್ವಚ್ಛತಾ ಅಭಿಯಾನ ಮತ್ತು ಲಸಿಕೆ ಅಭಿಯಾನದಲ್ಲಿ ದೇಶದ ಚೈತನ್ಯವನ್ನು ನಾವು ನೋಡಿದ್ದೇವೆ. ಅಮೃತ ಮಹೋತ್ಸವದಲ್ಲಿ ನಾವು ಮತ್ತೆ ಅದೇ ದೇಶಭಕ್ತಿಯ ಮನೋಭಾವವನ್ನು ನೋಡುತ್ತಿದ್ದೇವೆ. ನಮ್ಮ ಸೈನಿಕರು ಎತ್ತರದ ಪರ್ವತಗಳ ಶಿಖರಗಳಲ್ಲಿ, ದೇಶದ ಗಡಿಗಳಲ್ಲಿ ಮತ್ತು ಸಮುದ್ರದ ಮಧ್ಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ತ್ರಿವರ್ಣ ಧ್ವಜ ಪ್ರಚಾರಕ್ಕಾಗಿ ಜನರು ವಿಭಿನ್ನ ವಿನೂತನ ಐಡಿಯಾಗಳೊಂದಿಗೆ ಬಂದರು. ಉದಾಹರಣೆಗೆ ಯುವ ಸ್ನೇಹಿತ ಕೃಷ್ಣ್ ಅನಿಲ್ ಜೀ ಅವರು. ಅನಿಲ್ ಜೀ ಅವರು ಒಗಟು ಕಲಾವಿದರಾಗಿದ್ದು, ದಾಖಲೆ ಸಮಯದಲ್ಲಿ ಸುಂದರವಾದ ತ್ರಿವರ್ಣ ಮೊಸಾಯಿಕ್ ಕಲೆಯನ್ನು ರಚಿಸಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಜನರು 630 ಅಡಿ ಉದ್ದ ಮತ್ತು 205 ಅಡಿ ಅಗಲದ ತ್ರಿವರ್ಣ ಧ್ವಜವನ್ನು ಹಿಡಿದು ವಿಶಿಷ್ಟ ದೃಶ್ಯವನ್ನು ಪ್ರಸ್ತುತಪಡಿಸಿದರು.    

ಅಸ್ಸಾಂನಲ್ಲಿ, ದಿಘಾಲಿಪುಖುರಿ ಯುದ್ಧ ಸ್ಮಾರಕದಲ್ಲಿ ಹಾರಿಸಲು ಸರ್ಕಾರಿ ನೌಕರರು ತಮ್ಮ ಕೈಗಳಿಂದ 20 ಅಡಿ ತ್ರಿವರ್ಣ ಧ್ವಜವನ್ನು ರಚಿಸಿದರು. ಅದೇ ರೀತಿ ಇಂದೋರ್‌ನ ಜನರು ಮಾನವ ಸರಪಳಿಯ ಮೂಲಕ ಭಾರತದ ನಕ್ಷೆಯನ್ನು ರಚಿಸಿದರು. ಚಂಡೀಗಢದಲ್ಲಿ ಯುವಕರು ಬೃಹತ್ ಮಾನವ ತ್ರಿವರ್ಣ ಧ್ವಜವನ್ನು ತಯಾರಿಸಿದ್ದಾರೆ. ಈ ಎರಡೂ ಪ್ರಯತ್ನಗಳು ಗಿನ್ನೆಸ್ ದಾಖಲೆಗಳಲ್ಲಿ ದಾಖಲಾಗಿವೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶದ ಗಂಗೋಟ್ ಪಂಚಾಯತ್ನಲ್ಲಿ ಒಂದು ದೊಡ್ಡ ಸ್ಫೂರ್ತಿದಾಯಕ ಉದಾಹರಣೆಯೂ ಕಂಡುಬಂದಿದೆ. ಇಲ್ಲಿ ಪಂಚಾಯತ್ನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನು ಮುಖ್ಯ ಅತಿಥಿಗಳಾಗಿ ಕರೆಸಿ ಗೌರವಿಸಲಾಯಿತು.   

ಸ್ನೇಹಿತರೇ, ಅಮೃತ ಮಹೋತ್ಸವದ ಈ ಬಣ್ಣಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಇತರ ದೇಶಗಳಲ್ಲಿಯೂ ಕಂಡುಬರುತ್ತವೆ. ಬೋಟ್ಸ್‌ ವಾನಾದಲ್ಲಿ ವಾಸಿಸುವ ಸ್ಥಳೀಯ ಗಾಯಕರು 75 ದೇಶಭಕ್ತಿಯ ಗೀತೆಗಳ ಮೂಲಕ ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿದರು. ಇದರಲ್ಲಿ ಇನ್ನೂ ವಿಶೇಷವೆಂದರೆ ಈ 75 ಹಾಡುಗಳನ್ನು ಹಿಂದಿ, ಪಂಜಾಬಿ, ಗುಜರಾತಿ, ಬಾಂಗ್ಲಾ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ ಮತ್ತು ಸಂಸ್ಕೃತ ಮುಂತಾದ ಭಾಷೆಗಳಲ್ಲಿ ಹಾಡಲಾಗಿದೆ. ಅದೇ ರೀತಿ ನಮೀಬಿಯಾದಲ್ಲಿ ಇಂಡೋ-ನಮೀಬಿಯಾ ಸಾಂಸ್ಕೃತಿಕ-ಸಾಂಪ್ರದಾಯಿಕ ಸಂಬಂಧಗಳ ಕುರಿತು ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಾಗಿದೆ. 

ಸ್ನೇಹಿತರೇ, ನಾನು ನಿಮ್ಮೊಂದಿಗೆ ಇನ್ನೊಂದು ಸಂತೋಷದ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಅಲ್ಲಿ ದೂರದರ್ಶನ ಧಾರಾವಾಹಿ ‘ಸ್ವರಾಜ್’ ಪ್ರದರ್ಶನ ಏರ್ಪಡಿಸಿದ್ದರು. ಅದರ ಪ್ರಥಮ ಪ್ರದರ್ಶನ ವೀಕ್ಷಿಸುವ  ಅವಕಾಶ ನನಗೆ ಸಿಕ್ಕಿತು. ದೇಶದ ಯುವ ಪೀಳಿಗೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರ ಮತ್ತು ನಾಯಕಿಯರ ಶ್ರಮವನ್ನು ಪರಿಚಯಿಸಲು ಇದು ಉತ್ತಮ ಉಪಕ್ರಮವಾಗಿದೆ. ದೂರದರ್ಶನದಲ್ಲಿ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ. ಮತ್ತು ಅದು 75 ವಾರಗಳವರೆಗೆ ಮುಂದುವರಿಯುತ್ತದೆ ಎಂದು ನನಗೆ ತಿಳಿಸಲಾಯಿತು. ಅದನ್ನು ನೀವೂ ಕೂಡಾ ವೀಕ್ಷಿಸಲು ಮತ್ತು ಮನೆಯ ಮಕ್ಕಳಿಗೆ ತೋರಿಸಲು ಸಮಯವನ್ನು ಮೀಸಲಿಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಮತ್ತು ಅದನ್ನು ರೆಕಾರ್ಡ್ ಮಾಡಬಹುದು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ಶಾಲಾ-ಕಾಲೇಜು ಪ್ರಾರಂಭವಾದಾಗ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲರೂ ವೀಕ್ಷಿಸಬಹುದು, ಇದರಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಜನ್ಮದ ಮಹಾನ್ ವೀರರ ಬಗ್ಗೆ ಹೊಸ ಜಾಗೃತಿ ಮೂಡುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವವು ಮುಂದಿನ ವರ್ಷ ಅಂದರೆ ಆಗಸ್ಟ್ 2023 ರವರೆಗೆ ಮುಂದುವರಿಯುತ್ತದೆ. ದೇಶಕ್ಕಾಗಿ, ಸ್ವಾತಂತ್ರ್ಯ ಹೋರಾಟಗಾರರಿಗಾಗಿ, ನಾವು ಆಯೋಜಿಸುತ್ತಿರುವ ಬರಹಗಳು ಮತ್ತು ಕಾರ್ಯಕ್ರಮಗಳನ್ನು ನಾವು ಮುಂದುವರಿಸಬೇಕಾಗಿದೆ.  

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪೂರ್ವಜರ ಜ್ಞಾನ, ನಮ್ಮ ಪೂರ್ವಜರ ದೂರದೃಷ್ಟಿ ಮತ್ತು ಏಕಾತ್ಮಚಿಂತನ, ಸಮಗ್ರ ಸ್ವಯಂ ಸಾಕ್ಷಾತ್ಕಾರವು ಇಂದಿಗೂ ಬಹಳ ಮಹತ್ವದ್ದಾಗಿದೆ; ನಾವು ಅದರ ಆಳಕ್ಕೆ ಹೋದಾಗ, ನಾವು ಆಶ್ಚರ್ಯದಿಂದ ತುಂಬಿರುತ್ತೇವೆ. ನಮ್ಮ ಸಾವಿರಾರು ವರ್ಷಗಳ ಋಗ್ವೇದ! ಋಗ್ವೇದದಲ್ಲಿ ಹೀಗೆ ಹೇಳಲಾಗಿದೆ:-
ಓಮನ್-ಮಾಪೋ ಮಾನುಷಿ: ಅಮೃತಕಂ ಧಾತ್ ತೋಕಾಯ್ ತನಯಾಯ ಶ್ಯಾಮ್ಯೋ: |
ಯೂಯಂ ಹಿಸಥ ಭಿಷಜೋ ಮಾತೃತಮಾ ವಿಶ್ವಸ್ಯ ಸ್ಥಾತು: ಜಗತೋ ಜನಿತ್ರಿ: ||
ಅರ್ಥ - ಓ ನೀರು, ನೀನು ಮಾನವೀಯತೆಯ ಅತ್ಯುತ್ತಮ ಸ್ನೇಹಿತ. ನೀನು ಜೀವದಾತ, ನಿನ್ನಿಂದ ಆಹಾರ ಉತ್ಪತ್ತಿಯಾಗುತ್ತದೆ ಮತ್ತು ನಿನ್ನಿಂದಲೇ ನಮ್ಮ ಮಕ್ಕಳ ಯೋಗಕ್ಷೇಮ. ನೀನು ನಮಗೆ ರಕ್ಷಕ ಮತ್ತು ಎಲ್ಲ ದುಷ್ಟರಿಂದ ನಮ್ಮನ್ನು ದೂರವಿಡುವವ,. ನೀನೇ ಅತ್ಯುತ್ತಮ ಔಷಧ, ಮತ್ತು ನೀನು ಈ ಬ್ರಹ್ಮಾಂಡದ ಪೋಷಕ.  

ಈ ಕುರಿತು ಯೋಚಿಸಿ... ನೀರು ಮತ್ತು ನೀರಿನ ಸಂರಕ್ಷಣೆಯ ಮಹತ್ವವನ್ನು ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಇಂದಿನ ಸಂದರ್ಭದಲ್ಲಿ ನಮ್ಮ ಹಿಂದಿನವರ ಜ್ಞಾನವನ್ನು ನೋಡಿದಾಗ, ನಾವು ರೋಮಾಂಚನಗೊಳ್ಳುತ್ತೇವೆ, ಆದರೆ ರಾಷ್ಟ್ರವು ಈ ಜ್ಞಾನವನ್ನು ತನ್ನ ಶಕ್ತಿಯಾಗಿ ಸ್ವೀಕರಿಸಿದಾಗ, ಅವರ ಶಕ್ತಿಯು ಹಲವಾರು ಪಟ್ಟು ಹೆಚ್ಚಾಗುತ್ತದೆ. ನಾಲ್ಕು ತಿಂಗಳ ಹಿಂದೆ ‘ಮನ್ ಕಿ ಬಾತ್’ನಲ್ಲಿ ಅಮೃತ ಸರೋವರದ ಬಗ್ಗೆ ಹೇಳಿದ್ದೆ ನಿಮಗೆ ನೆನಪಿರಬಹುದು. ಅದರ ನಂತರ, ಸ್ಥಳೀಯ ಆಡಳಿತವು ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಯಿತು, ಸ್ವಯಂಸೇವಾ ಸಂಸ್ಥೆಗಳು ಒಗ್ಗೂಡಿದವು ಮತ್ತು ಸ್ಥಳೀಯ ಜನರು ಪರಸ್ಪರ ಸಂಪರ್ಕ ಸಾಧಿಸಿದರು  ಮತ್ತು   ಅಮೃತ್ ಸರೋವರಗಳ ನಿರ್ಮಾಣ ಒಂದು ಜನಾಂದೋಲನವಾಯಿತು. ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಆಳವಾದ ಭಾವನೆ, ತನ್ನ ಕರ್ತವ್ಯಗಳನ್ನು ಅರಿತುಕೊಳ್ಳುವುದು, ಮುಂಬರುವ ಪೀಳಿಗೆಯ ಬಗ್ಗೆ ಕಾಳಜಿ ಇದ್ದಾಗ, ಸಾಮರ್ಥ್ಯಗಳು ಕೂಡ ಸೇರಿಕೊಂಡು, ಸಂಕಲ್ಪವು ಉದಾತ್ತವಾಗುತ್ತದೆ.

ತೆಲಂಗಾಣದ ವಾರಂಗಲ್ ನಿಂದ ಅದ್ಭುತ ಪ್ರಯತ್ನದ ಬಗ್ಗೆ ನನಗೆ ತಿಳಿದು ಬಂದಿದೆ. ಅಲ್ಲಿ ಹೊಸ ಗ್ರಾಮ ಪಂಚಾಯಿತಿ ರಚನೆಯಾಗಿದ್ದು, ಅದಕ್ಕೆ ‘ಮಾಂಗ್ತ್ಯಾ-ವಾಲ್ಯ ತಾಂಡಾ’ ಎಂದು ಹೆಸರಿಡಲಾಗಿದೆ. ಈ ಗ್ರಾಮವು ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿದೆ. ಗ್ರಾಮದ ಸಮೀಪದಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು. ಗ್ರಾಮಸ್ಥರ ಪ್ರೇರಣೆಯಿಂದ ಈ ಸ್ಥಳವನ್ನು ಈಗ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಈ ಕೆರೆ ಸಂಪೂರ್ಣ ಭರ್ತಿಯಾಗಿದೆ. 

ಮಧ್ಯಪ್ರದೇಶದ ಮಾಂಡ್ಲಾದ ಮೋಚಾ ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸಲಾದ ಅಮೃತ ಸರೋವರದ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ಅಮೃತ ಸರೋವರವನ್ನು ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದೆ ಮತ್ತು ಇದರಿಂದಾಗಿ ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರ ಪ್ರದೇಶದ ಲಲಿತ್ ಪುರದಲ್ಲಿ ನೂತನವಾಗಿ ನಿರ್ಮಿಸಿರುವ ಶಹೀದ್ ಭಗತ್ ಸಿಂಗ್ ಅಮೃತ ಸರೋವರ ಕೂಡ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ನಿವಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಕೆರೆ 4 ಎಕರೆ ವಿಸ್ತೀರ್ಣ ಹೊಂದಿದೆ. ಸರೋವರದ ದಡದಲ್ಲಿ ಮರಗಳ ನೆಡುವಿಕೆ ತನ್ನ ಸೌಂದರ್ಯವನ್ನು ಹೆಚ್ಚಿಸುತ್ತಿದೆ. ಕೆರೆಯ ಬಳಿ ಇರುವ 35 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ನೋಡಲು ದೂರದೂರುಗಳಿಂದ ಕೂಡ ಜನರು ಬರುತ್ತಿದ್ದಾರೆ. ಅಮೃತ ಸರೋವರಗಳ ಈ ಅಭಿಯಾನ ಕರ್ನಾಟಕದಲ್ಲಿಯೂ ಜೋರಾಗಿ ನಡೆಯುತ್ತಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ 'ಬಿಲ್ಕೆರೂರು' ಗ್ರಾಮದಲ್ಲಿ ಜನರು ಅತ್ಯಂತ ಸುಂದರವಾದ ಅಮೃತ ಸರೋವರವನ್ನು ನಿರ್ಮಿಸಿದ್ದಾರೆ. ವಾಸ್ತವವಾಗಿ, ಈ ಪ್ರದೇಶದಲ್ಲಿ, ಪರ್ವತದಿಂದ ನೀರು ಹರಿಯುವುದರಿಂದ ಜನರು ಬಹಳಷ್ಟು ಸಮಸ್ಯೆಗಳನ್ನು ಹೊಂದಿದ್ದರು; ರೈತರು ಮತ್ತು ಅವರ ಬೆಳೆಗಳು ಸಹ ನಷ್ಟವನ್ನು ಅನುಭವಿಸಿದವು. ಅಮೃತ ಸರೋವರವನ್ನು ಮಾಡಲು, ಗ್ರಾಮದ ಜನರು ಎಲ್ಲ ನೀರನ್ನು ಚಾನಲ್ ಮಾಡಿ ಪಕ್ಕಕ್ಕೆ ತಂದರು. ಇದರಿಂದ ಆ ಪ್ರದೇಶದಲ್ಲಿನ ಪ್ರವಾಹ ಸಮಸ್ಯೆಯೂ ಬಗೆಹರಿದಿದೆ. ಅಮೃತ್ ಸರೋವರ ಅಭಿಯಾನವು ಇಂದಿನ ನಮ್ಮ ಅನೇಕ ಸಮಸ್ಯೆಗಳನ್ನು ಮಾತ್ರ ಪರಿಹರಿಸುವುದಿಲ್ಲ; ಇದು ನಮ್ಮ ಮುಂದಿನ ಪೀಳಿಗೆಗೆ ಕೂಡಾ ಅಷ್ಟೇ ಅವಶ್ಯಕ. ಈ ಅಭಿಯಾನದ ಅಡಿಯಲ್ಲಿ, ಅನೇಕ ಸ್ಥಳಗಳಲ್ಲಿ, ಹಳೆಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಅಮೃತ ಸರೋವರಗಳನ್ನು ಪ್ರಾಣಿಗಳ ದಾಹ ನೀಗಿಸಲು ಹಾಗೂ ಬೇಸಾಯಕ್ಕೆ ಬಳಸಲಾಗುತ್ತಿದೆ. ಈ ಕೆರೆಗಳಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಅವರ ಸುತ್ತಲೂ ಹಸಿರು ಕೂಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಅಮೃತ್ ಸರೋವರದಲ್ಲಿ ಮೀನು ಸಾಕಣೆಗೆ ಹಲವೆಡೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಅಮೃತ್ ಸರೋವರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ನೀರಿನ ಸಂರಕ್ಷಣೆ ಮತ್ತು ನೀರಿನ ಸಂಗ್ರಹಣೆಯ ಈ ಪ್ರಯತ್ನಗಳಿಗೆ ಸಂಪೂರ್ಣ ಶಕ್ತಿಯನ್ನು ನೀಡುವಂತೆ ಮತ್ತು ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ನಿಮ್ಮೆಲ್ಲರನ್ನೂ, ವಿಶೇಷವಾಗಿ ನನ್ನ ಯುವ ಸ್ನೇಹಿತರನ್ನು ನಾನು ಕೋರುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಅಸ್ಸಾಂನ ಬೊಂಗೈ ಗ್ರಾಮದಲ್ಲಿ ಆಸಕ್ತಿದಾಯಕ ಯೋಜನೆಯನ್ನು ನಡೆಸಲಾಗುತ್ತಿದೆ - ಸಂಪೂರ್ಣ ಯೋಜನೆ. ಈ ಯೋಜನೆಯ ಉದ್ದೇಶವು ಅಪೌಷ್ಟಿಕತೆಯ ವಿರುದ್ಧ ಹೋರಾಡುವುದಾಗಿದೆ ಮತ್ತು ವಿಧಾನವು ತುಂಬಾ ವಿಶಿಷ್ಟವಾಗಿದೆ. ಇದರ ಅಡಿಯಲ್ಲಿ, ಅಂಗನವಾಡಿ ಕೇಂದ್ರದಿಂದ ಆರೋಗ್ಯವಂತ ಮಗುವಿನ ತಾಯಿ ಪ್ರತಿ ವಾರ ಅಪೌಷ್ಟಿಕತೆಯ ಮಗುವಿನ ತಾಯಿಯನ್ನು ಭೇಟಿಯಾಗುತ್ತಾರೆ ಮತ್ತು ಎಲ್ಲಾ ಪೌಷ್ಟಿಕಾಂಶ ಸಂಬಂಧಿತ ಮಾಹಿತಿಯನ್ನು ಚರ್ಚಿಸುತ್ತಾರೆ. ಅಂದರೆ, ಒಬ್ಬ ತಾಯಿ ಇನ್ನೊಬ್ಬ ತಾಯಿಗೆ ಸ್ನೇಹಿತೆಯಾಗುತ್ತಾಳೆ, ಅವಳಿಗೆ ಸಹಾಯ ಮಾಡುತ್ತಾಳೆ ಮತ್ತು ಕಲಿಸುತ್ತಾಳೆ. ಈ ಯೋಜನೆಯ ನೆರವಿನಿಂದ ಈ ಪ್ರದೇಶದಲ್ಲಿ ಒಂದು ವರ್ಷದಲ್ಲಿ ಶೇ.90ಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಿದೆ.

ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಡು ಮತ್ತು ಸಂಗೀತ ಮತ್ತು ಭಜನೆಗಳನ್ನು ಕೂಡಾ ಬಳಸಬಹುದೇ ಎಂಬುದನ್ನು ನೀವು ಊಹಿಸಬಲ್ಲಿರಾ? ಇದನ್ನು "ಮೇರಾ ಬಚ್ಚಾ ಅಭಿಯಾನ"ದಲ್ಲಿ ಯಶಸ್ವಿಯಾಗಿ ಬಳಸಲಾಯಿತು; ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ "ಮೇರಾ ಬಚ್ಚಾ ಅಭಿಯಾನ". ಇದರ ಅಡಿಯಲ್ಲಿ, ಜಿಲ್ಲೆಯಲ್ಲಿ ಭಜನೆ-ಕೀರ್ತನೆಗಳನ್ನು ಆಯೋಜಿಸಲಾಯಿತು, ಇದರಲ್ಲಿ ಶಿಕ್ಷಕರನ್ನು ಪೌಷ್ಟಿಕಾಂಶದ ಗುರುಗಳಾಗಿ ಕರೆಯಲಾಯಿತು. ಮಟ್ಕಾ ಕಾರ್ಯಕ್ರಮವೂ ನಡೆದಿದ್ದು, ಅಂಗನವಾಡಿ ಕೇಂದ್ರಕ್ಕೆ ಮಹಿಳೆಯರು ಹಿಡಿ ಧಾನ್ಯಗಳನ್ನು ತಂದು, ಈ ಧಾನ್ಯದೊಂದಿಗೆ ಶನಿವಾರಗಳಂದು ಬಾಲಭೋಜನ ಏರ್ಪಡಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳದ ಜೊತೆಗೆ ಅಪೌಷ್ಟಿಕತೆಯೂ ಇಳಿಮುಖವಾಗಿದೆ. ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಜಾರ್ಖಂಡ್ನಲ್ಲಿ ವಿಶಿಷ್ಟ ಅಭಿಯಾನವೂ ನಡೆಯುತ್ತಿದೆ. ಜಾರ್ಖಂಡ್ನ ಗಿರಿದಿಹ್ ನಲ್ಲಿ ಹಾವು-ಏಣಿ ಆಟವನ್ನು ಸಿದ್ಧಪಡಿಸಲಾಗಿದೆ. ಆಟದ ಮೂಲಕ ಮಕ್ಕಳು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ಕಲಿಯುತ್ತಿದ್ದಾರೆ. 

ಸ್ನೇಹಿತರೇ, ಅಪೌಷ್ಟಿಕತೆಗೆ ಸಂಬಂಧಿಸಿದ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ನಾನು ನಿಮಗೆ ಹೇಳುತ್ತಿದ್ದೇನೆ, ಏಕೆಂದರೆ ಮುಂಬರುವ ತಿಂಗಳಲ್ಲಿ ನಾವೆಲ್ಲರೂ ಈ ಅಭಿಯಾನಕ್ಕೆ ಸೇರಬೇಕಾಗಿದೆ. ಸೆಪ್ಟೆಂಬರ್ ತಿಂಗಳನ್ನು ಹಬ್ಬಗಳಿಗೆ ಮೀಸಲಿಡಲಾಗಿದೆ ಮತ್ತು ಪೋಷಣೆಗೆ ಸಂಬಂಧಿಸಿದ ದೊಡ್ಡ ಅಭಿಯಾನವನ್ನು ಹೊಂದಿದೆ. ನಾವು ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ 30 ರವರೆಗೆ ಪೋಷಣ ಮಾಹೆಯನ್ನು ಆಚರಿಸುತ್ತೇವೆ. ಅಪೌಷ್ಟಿಕತೆಯ ವಿರುದ್ಧ ದೇಶದಾದ್ಯಂತ ಅನೇಕ ಸೃಜನಶೀಲ ಮತ್ತು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವವು ಪೌಷ್ಟಿಕಾಂಶ ಅಭಿಯಾನದ ಪ್ರಮುಖ ಭಾಗವಾಗಿದೆ. ದೇಶದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಸಾಧನಗಳನ್ನು ಒದಗಿಸುವುದರಿಂದ, ಅಂಗನವಾಡಿ ಸೇವೆಗಳ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಲು ಪೋಶನ್ ಟ್ರ್ಯಾಕರ್ ಅನ್ನು ಸಹ ಪ್ರಾರಂಭಿಸಲಾಗಿದೆ. ಎಲ್ಲ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ, 14 ರಿಂದ 18 ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಸಹ ಪೋಶನ್ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ. ಅಪೌಷ್ಟಿಕತೆಯ ಕಾಯಿಲೆಗೆ ಪರಿಹಾರವು ಕೇವಲ ಈ ಹಂತಗಳಿಗೆ ಸೀಮಿತವಾಗಿಲ್ಲ - ಈ ಹೋರಾಟದಲ್ಲಿ, ಇತರ ಅನೇಕ ಉಪಕ್ರಮಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ಜಲ ಜೀವನ್ ಮಿಷನ್ ಅನ್ನು ತೆಗೆದುಕೊಳ್ಳಿ... ಭಾರತವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವಲ್ಲಿ ಈ ಮಿಷನ್ ಕೂಡ ದೊಡ್ಡ ಪರಿಣಾಮವನ್ನು ಬೀರಲಿದೆ. 
ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸಾಮಾಜಿಕ ಜಾಗೃತಿಯ ಪ್ರಯತ್ನಗಳು ಪ್ರಮುಖ ಪಾತ್ರವಹಿಸುತ್ತವೆ. ಮುಂಬರುವ ಪೌಷ್ಟಿಕಾಂಶದ ಅಭಿಯಾನದ ತಿಂಗಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಪ್ರಯತ್ನಗಳಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರಿಗೂ  ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಚೆನ್ನೈನ ಶ್ರೀದೇವಿ ವರದರಾಜನ್ ಜೀ ಅವರು ನನಗೆ ವಿಜ್ಞಾಪನೆಯನ್ನು ಕಳುಹಿಸಿದ್ದಾರೆ. ಅವರು ಮೈಗೌನಲ್ಲಿ ಈ ರೀತಿ ಬರೆದಿದ್ದಾರೆ - ಹೊಸ ವರ್ಷವು ಬರಲು 5 ತಿಂಗಳುಗಳಿಗಿಂತ ಕಡಿಮೆಯಿದೆ, ಮತ್ತು ಮುಂದಿನ ಹೊಸ ವರ್ಷವನ್ನು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸಲಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ನನಗೆ ದೇಶದ ಸಿರಿಧಾನ್ಯಗಳ ನಕ್ಷೆಯನ್ನೂ ಕಳುಹಿಸಿದ್ದಾರೆ. 'ಮನ್ ಕಿ ಬಾತ್' ನ ಮುಂಬರುವ ಸಂಚಿಕೆಯಲ್ಲಿ ನೀವು ಇದನ್ನು ಚರ್ಚಿಸಬಹುದೇ ಎಂದು ಆಕೆ ಕೇಳಿದ್ದಾರೆ. ನನ್ನ ದೇಶವಾಸಿಗಳಲ್ಲಿ ಈ ರೀತಿಯ ಮನೋಭಾವವನ್ನು ನೋಡುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿದ್ದು ನಿಮಗೆ ನೆನಪಿರಬಹುದು. ಭಾರತದ ಈ ಪ್ರಸ್ತಾಪವನ್ನು 70 ಕ್ಕೂ ಹೆಚ್ಚು ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದರೆ ನಿಮಗೆ ತುಂಬಾ ಸಂತೋಷವಾಗ ಬಹುದು.

ಇಂದು, ಪ್ರಪಂಚದಾದ್ಯಂತ, ಈ ಸಿರಿ ಧಾನ್ಯಗಳ ಬಗ್ಗೆ ವ್ಯಾಮೋಹ ಹೆಚ್ಚುತ್ತಿದೆ. ಸ್ನೇಹಿತರೇ, ನಾನು ಸಿರಿ ಧಾನ್ಯಗಳ ಬಗ್ಗೆ ಇಂದು ಮಾತನಾಡುವಾಗ, ನನ್ನ ಒಂದು ಪುಟ್ಟ ಪ್ರಯತ್ನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ಕೆಲವು ಸಮಯದಿಂದ, ಯಾವುದೇ ವಿದೇಶಿ ಅತಿಥಿಗಳು ಭಾರತಕ್ಕೆ ಬಂದಾಗ, ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಬಂದಾಗ, ಔತಣಕೂಟಗಳಲ್ಲಿ ಭಾರತದ ರಾಗಿಯಿಂದ ಮಾಡಿದ ಭಕ್ಷ್ಯಗಳನ್ನು, ಅಂದರೆ ನಮ್ಮ ಸಿರಿ ಧಾನ್ಯಗಳ ಪದಾರ್ಥಗಳನ್ನು ನೀಡುವುದು  ನನ್ನ ಪ್ರಯತ್ನವಾಗಿದೆ.  ಈ ಮಹನೀಯರು ಅವುಗಳ ಆಹಾರವನ್ನು ತುಂಬಾ ಆನಂದಿಸಿದ್ದಾರೆ ಮತ್ತು ಅವರು ನಮ್ಮ ಸಿರಿ ಧಾನ್ಯಗಳ ಬಗ್ಗೆ, ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದ್ದಾರೆ. ರಾಗಿ, ಸಿರಿ ಧಾನ್ಯಗಳು ಪ್ರಾಚೀನ ಕಾಲದಿಂದಲೂ ನಮ್ಮ ಕೃಷಿ, ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾಗಿದೆ. 

ಸಿರಿಧಾನ್ಯಗಳನ್ನು ನಮ್ಮ ವೇದಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅದೇ ರೀತಿ ಪುರಾಣನೂರು ಮತ್ತು ತೊಲ್ಕಾಪ್ಪಿಯಂನಲ್ಲಿಯೂ ಉಲ್ಲೇಖಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ಹೋದರೆ ಅಲ್ಲಿನ ಜನರ ಆಹಾರದಲ್ಲಿ ವಿವಿಧ ಬಗೆಯ ಸಿರಿಧಾನ್ಯಗಳು ಖಂಡಿತ ಸಿಗುತ್ತವೆ. ನಮ್ಮ ಸಂಸ್ಕೃತಿಯಂತೆಯೇ ಸಿರಿಧಾನ್ಯಗಳಲ್ಲಿಯೂ ಸಾಕಷ್ಟು ವೈವಿಧ್ಯ ಕಂಡುಬರುತ್ತದೆ. ಜೋಳ, ಸಜ್ಜೆ, ರಾಗಿ, ಊದಲು(ಸಾವನ್), ಕಂಗ್ನಿ, ಚೀಣ, ಕೊಡೋ, ಕುಟ್ಕಿ, ಕುಟ್ಟು, ಇವೆಲ್ಲ  ಸಿರಿಧಾನ್ಯಗಳೇ ಆಗಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳ ಉತ್ಪಾದಕ ದೇಶವಾಗಿದೆ; ಆದ್ದರಿಂದ ಈ ಉಪಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯು ನಮ್ಮ ಭಾರತೀಯರ ಹೆಗಲ ಮೇಲಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು ಮತ್ತು ದೇಶದ ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಬೇಕು. ಮತ್ತು ಸ್ನೇಹಿತರೇ, ನಿಮಗೆ ಚೆನ್ನಾಗಿ ತಿಳಿದಿದೆ, ಸಿರಿಧಾನ್ಯಗಳು ರೈತರಿಗೆ ಮತ್ತು ವಿಶೇಷವಾಗಿ ಸಣ್ಣ ರೈತರಿಗೆ ಸಹ ಪ್ರಯೋಜನಕಾರಿ. ವಾಸ್ತವವಾಗಿ, ಬೆಳೆ ಬಹಳ ಕಡಿಮೆ ಸಮಯದಲ್ಲಿ ಫಸಲು ನೀಡುತ್ತದೆ ಮತ್ತು ಹೆಚ್ಚು ನೀರಿನ ಅಗತ್ಯವಿರುವುದಿಲ್ಲ. 

ನಮ್ಮ ಸಣ್ಣ ರೈತರಿಗೆ, ಸಿರಿಧಾನ್ಯ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಸಿರಿಧಾನ್ಯಗಳ ಹುಲ್ಲು ಕೂಡ ಅತ್ಯುತ್ತಮ ಮೇವು ಎಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಆರೋಗ್ಯಕರ ಜೀವನ ಮತ್ತು ಆಹಾರ ಸೇವನೆಯತ್ತ ಹೆಚ್ಚು ಗಮನಹರಿಸುತ್ತಿದೆ. ನೀವು ಈ ರೀತಿ ನೋಡಿದರೆ, ಸಿರಿಧಾನ್ಯಗಳಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಖನಿಜಗಳಿವೆ. ಅನೇಕ ಜನರು ಇದನ್ನು ಸೂಪರ್ಫುಡ್ ಎಂದೂ ಕರೆಯುತ್ತಾರೆ. ಸಿರಿಧಾನ್ಯಗಳು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಬೊಜ್ಜು ಕಡಿಮೆ ಮಾಡುವುದರ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ, ಹೊಟ್ಟೆ ಮತ್ತು ಯಕೃತ್ತಿನ ಕಾಯಿಲೆಗಳನ್ನು ತಡೆಯಲು ಸಹ ಅವು ಸಹಾಯಕವಾಗಿವೆ. ನಾವು ಸ್ವಲ್ಪ ಸಮಯದ ಹಿಂದೆ ಅಪೌಷ್ಟಿಕತೆಯ ಬಗ್ಗೆ ಉಲ್ಲೇಖಿಸಿದ್ದೇವೆ. ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸಿರಿಧಾನ್ಯಗಳು ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅವುಗಳು ಶಕ್ತಿ ಮತ್ತು ಪ್ರೋಟೀನ್ ನಿಂದ ತುಂಬಿರುತ್ತವೆ. ಇಂದು ದೇಶದಲ್ಲಿ ಸಿರಿಧಾನ್ಯಗಳನ್ನು ಉತ್ತೇಜಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ಎಫ್.ಪಿ.ಒ.ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ, ಇದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ನನ್ನ ರೈತ ಬಂಧುಗಳು ರಾಗಿ, ಅಂದರೆ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬಳಸಿ ಅದರ ಪ್ರಯೋಜನ ಪಡೆಯಬೇಕೆಂಬುದು ನನ್ನ ವಿನಂತಿ. ಸಿರಿಧಾನ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂತಹ ಅನೇಕ ಸ್ಟಾರ್ಟ್ಅಪ್ಗಳು ಇಂದು ಹೊರಹೊಮ್ಮುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಇವುಗಳಲ್ಲಿ ಕೆಲವರು ರಾಗಿ ಕುಕೀಸ್ ತಯಾರಿಸುತ್ತಿದ್ದರೆ, ಕೆಲವರು ರಾಗಿ ಪ್ಯಾನ್ ಕೇಕ್ ಗಳು ಮತ್ತು ದೋಸೆಯನ್ನು ಸಹ ಮಾಡುತ್ತಿದ್ದಾರೆ. ಕೆಲವರು ರಾಗಿ ಎನರ್ಜಿ ಬಾರ್ ಗಳು ಮತ್ತು ರಾಗಿ ಬ್ರೇಕ್ಫಾಸ್ಟ್ಗಳನ್ನು ತಯಾರಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಶುಭ ಹಾರೈಸುತ್ತೇನೆ. ಈ ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಖಾದ್ಯಗಳಲ್ಲಿ ನಾವು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸುತ್ತೇವೆ. ನಿಮ್ಮ ಮನೆಗಳಲ್ಲಿ ಮಾಡಿದ ಇಂತಹ ಖಾದ್ಯಗಳ ಚಿತ್ರಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕು, ಇದರಿಂದ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. 
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ, ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಜೋರ್ಸಿಂಗ್ ಗ್ರಾಮದ ಸುದ್ದಿ ನಾನು ನೋಡಿದೆ. ಈ ಸುದ್ದಿಯು ಈ ಗ್ರಾಮದ ಜನರು ಹಲವು ವರ್ಷಗಳಿಂದ ಕಾಯುತ್ತಿದ್ದ ಬದಲಾವಣೆಯ ಕುರಿತಾಗಿತ್ತು. ವಾಸ್ತವವಾಗಿ, ಈ ತಿಂಗಳು ಜೋರ್ಸಿಂಗ್ ಗ್ರಾಮದಲ್ಲಿ, 4ಜಿ ಇಂಟರ್ನೆಟ್ ಸೇವೆಗಳು ಸ್ವಾತಂತ್ರ್ಯ ದಿನಾಚರಣೆಯಿಂದ ಪ್ರಾರಂಭವಾಗಿವೆ. ಹಾಗೆ, ಹಿಂದಿನ ಜನರು ಹಳ್ಳಿಗೆ ವಿದ್ಯುತ್ ಬಂದಾಗ ಸಂತೋಷಪಡುತ್ತಿದ್ದರು; ಈಗ, ನವ ಭಾರತದಲ್ಲಿ, 4ಜಿ ಅಲ್ಲಿಗೆ ತಲುಪಿದಾಗ ಅದೇ ಸಂತೋಷವನ್ನು ಅನುಭವಿಸಲಾಗುತ್ತದೆ. ಅರುಣಾಚಲ ಮತ್ತು ಈಶಾನ್ಯದ ದೂರದ ಪ್ರದೇಶಗಳಲ್ಲಿ 4ಜಿ ರೂಪದಲ್ಲಿ ಹೊಸ ಸೂರ್ಯೋದಯ ಕಂಡುಬಂದಿದೆ; ಇಂಟರ್ನೆಟ್ ಸಂಪರ್ಕವು ಹೊಸ ಉದಯವನ್ನು ತಂದಿದೆ. ಒಂದು ಕಾಲದಲ್ಲಿ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯವಿದ್ದ ಸೌಲಭ್ಯಗಳನ್ನು ಡಿಜಿಟಲ್ ಇಂಡಿಯಾದ ಮೂಲಕ ಪ್ರತಿ ಹಳ್ಳಿಗೂ ತರಲಾಗಿದೆ. ಈ ಕಾರಣದಿಂದ ದೇಶದಲ್ಲಿ ಹೊಸ ಡಿಜಿಟಲ್ ಉದ್ಯಮಿಗಳು ಹೆಚ್ಚುತ್ತಿದ್ದಾರೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಸೇಥಾ ಸಿಂಗ್ ರಾವತ್ ಜೀ ಅವರು 'ದರ್ಜಿ ಆನ್ಲೈನ್', 'ಇ-ಸ್ಟೋರ್' ನಡೆಸುತ್ತಿದ್ದಾರೆ. ಆನ್ಲೈನ್ನಲ್ಲಿ ದರ್ಜಿ ಎಂದರೇನು ಎಂದು ನೀವು ಆಶ್ಚರ್ಯ ಪಡುತ್ತೀರಿ! ವಾಸ್ತವವಾಗಿ ಸೇಥಾ ಸಿಂಗ್ ರಾವತ್ ಅವರು ಹೊಲಿಗೆ (ಟೈಲರಿಂಗ್) ಕೆಲಸ ಮಾಡುತ್ತಿದ್ದಾರೆ .

ಕೋವಿಡ್ ಬಂದಾಗ, ರಾವತ್ ಜೀ ಈ ಸವಾಲನ್ನು ಕಷ್ಟವಾಗಿ ತೆಗೆದುಕೊಳ್ಳಲಿಲ್ಲ; ಬದಲಿಗೆ ಅವಕಾಶವಾಗಿ ಬದಲಾಯಿಸಿದರು. ಅವರು 'ಸಾಮಾನ್ಯ ಸೇವಾ ಕೇಂದ್ರ' ಅಂದರೆ ಸಿ.ಎಸ್.ಸಿ ಇ-ಸ್ಟೋರ್ಗೆ ಸೇರಿಕೊಂಡರು ಮತ್ತು ಆನ್ಲೈನ್ ನಲ್ಲಿ ದರ್ಜಿ ಕೆಲಸ ಮಾಡಲು ಪ್ರಾರಂಭಿಸಿದರು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ಗಳಿಗಾಗಿ ಆರ್ಡರ್ ಮಾಡುವುದನ್ನು ಅವರು ಗುರುತಿಸಿದರು. ಅವರು ಕೆಲವು ಮಹಿಳೆಯರನ್ನು ನೇಮಿಸಿಕೊಂಡರು ಮತ್ತು ಮುಖಗವಸುಗಳನ್ನು ತಯಾರಿಸಲು ಪ್ರಾರಂಭಿಸಿದರು. ಇದರ ನಂತರ ಅವರು ತಮ್ಮ 'ದರ್ಜಿ ಆನ್ಲೈನ್' ಆನ್ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿದರು, ಅದರಲ್ಲಿ ಅವರು ಅನೇಕ ರೀತಿಯ ಹೊಲಿದ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಇಂದು, ಡಿಜಿಟಲ್ ಇಂಡಿಯಾದ ಶಕ್ತಿಯೊಂದಿಗೆ, ಸೇಠ ಸಿಂಗ್ ಜೀ ಅವರ ಕೆಲಸವು ತುಂಬಾ ಬೆಳೆದಿದೆ, ಈಗ ಅವರಿಗೆ ದೇಶಾದ್ಯಂತ ಆರ್ಡರ್ ಗಳು ಬರುತ್ತಿವೆ. ಇಲ್ಲಿನ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. 

ಉತ್ತರಪ್ರದೇಶದ ಉನ್ನಾವೊದ ಶ್ರೀ ಓಂ ಪ್ರಕಾಶ್ ಸಿಂಗ್ ಜೀ ಅವರನ್ನು ಡಿಜಿಟಲ್ ಇಂಡಿಯಾ ಉಪಕ್ರಮವು ಡಿಜಿಟಲ್ ಉದ್ಯಮಿಯನ್ನಾಗಿ ಮಾಡಿದೆ. ಅವರು ತಮ್ಮ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ರಾಡ್ಬ್ಯಾಂಡ್ ಸಂಪರ್ಕಗಳನ್ನು ಸ್ಥಾಪಿಸಿದ್ದಾರೆ. ಓಂ ಪ್ರಕಾಶ್ ಜೀ ಅವರು ತಮ್ಮ ಸಾಮಾನ್ಯ ಸೇವಾ ಕೇಂದ್ರದ ಸುತ್ತಲೂ ಉಚಿತ ವೈಫೈ ವಲಯವನ್ನು ನಿರ್ಮಿಸಿದ್ದಾರೆ, ಇದು ಅಗತ್ಯವಿರುವ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಓಂ ಪ್ರಕಾಶ್ ಜೀ ಅವರ ಕೆಲಸ ಎಷ್ಟು ವೃದ್ಧಿಸಿದೆ ಎಂದರೆ ಅವರು 20 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದಾರೆ. ಈ ಜನರು ಗ್ರಾಮಗಳ ಶಾಲೆ, ಆಸ್ಪತ್ರೆ, ತಹಸಿಲ್ ಕಚೇರಿ, ಅಂಗನವಾಡಿ ಕೇಂದ್ರಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡುತ್ತಿದ್ದು, ಅದರಿಂದ ಉದ್ಯೋಗವನ್ನೂ ಪಡೆಯುತ್ತಿದ್ದಾರೆ. ಸಾಮಾನ್ಯ ಸೇವಾ ಕೇಂದ್ರದಂತೆ, ಸರ್ಕಾರಿ ಇ-ಮಾರುಕಟ್ಟೆ ಸ್ಥಳದಲ್ಲಿ ಅಂದರೆ ಜಿ.ಇ.ಎಂ. ಪೋರ್ಟಲ್ನಲ್ಲಿ ಇಂತಹ ಅನೇಕ ಯಶಸ್ಸಿನ ಕಥೆಗಳು ಕಂಡುಬರುತ್ತವೆ.  

ಸ್ನೇಹಿತರೇ, ನಾನು ಹಳ್ಳಿಗಳಿಂದ ಇಂತಹ ಹಲವಾರು ಸಂದೇಶಗಳನ್ನು ಪಡೆಯುತ್ತೇನೆ, ಅದು ಅಂತರ್ಜಾಲದಿಂದ ತಂದ ಬದಲಾವಣೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತದೆ. ಇಂಟರ್ನೆಟ್ ನಮ್ಮ ಯುವ ಸ್ನೇಹಿತರು ಕಲಿಯುವ ಮತ್ತು ಕಲಿಯುವ ವಿಧಾನವನ್ನು ಬದಲಾಯಿಸಿದೆ. ಉದಾಹರಣೆಗೆ, ಉತ್ತರಪ್ರದೇಶದ ಶ್ರೀಮತಿ ಗುಡಿಯಾ ಸಿಂಗ್ ಅವರು ಉನ್ನಾವೊದ ಅಮೋಯ ಹಳ್ಳಿಯಲ್ಲಿರುವ ಅತ್ತೆಯ ಮನೆಗೆ ಬಂದಾಗ, ಅವರು ತಮ್ಮ ಅಧ್ಯಯನದ ಬಗ್ಗೆ ಚಿಂತಿತರಾಗಿದ್ದರು. ಆದರೆ, ಭಾರತ್ ನೆಟ್ ಅವರ ಕಳವಳವನ್ನು ಪರಿಹರಿಸಿತು. ಗುಡಿಯಾ ಅಂತರ್ಜಾಲದ ಮೂಲಕ ತನ್ನ ಅಧ್ಯಯನವನ್ನು ಮುಂದುವರಿಸಿದರು. ಮತ್ತು ತನ್ನ ಪದವಿಯನ್ನು ಸಹ ಪೂರ್ಣಗೊಳಿಸಿದರು.  ಡಿಜಿಟಲ್ ಇಂಡಿಯಾ ಅಭಿಯಾನದಿಂದ ಹಳ್ಳಿಗಳಲ್ಲಿ ಇಂತಹ ಎಷ್ಟು ಜೀವಗಳು ಹೊಸ ಶಕ್ತಿ ಪಡೆಯುತ್ತಿವೆ. ಹಳ್ಳಿಗಳ ಡಿಜಿಟಲ್ ಉದ್ಯಮಿಗಳ ಬಗ್ಗೆ ನಿಮಗೆ ಸಾಧ್ಯವಾದಷ್ಟು ನನಗೆ ಬರೆಯಿರಿ ಮತ್ತು ಅವರ ಯಶಸ್ಸಿನ ಕಥೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ. 

ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಲ್ಪ ದಿನಗಳ ಹಿಂದೆ, ಹಿಮಾಚಲ ಪ್ರದೇಶದಿಂದ 'ಮನ್ ಕಿ ಬಾತ್' ಕೇಳುಗ ಶ್ರೀ ರಮೇಶ್ ಜೀ ಅವರಿಂದ ನನಗೆ ಪತ್ರ ಬಂದಿತ್ತು. ರಮೇಶ್ ಜೀ ಅವರು ತಮ್ಮ ಪತ್ರದಲ್ಲಿ ಗುಡ್ಡಬೆಟ್ಟಗಳ ಹಲವು ವಿಶೇಷತೆಗಳನ್ನು ವಿವರಿಸಿದ್ದಾರೆ. ಪರ್ವತಗಳ ಮೇಲಿನ ನಿವಾಸ-ವಸಾಹತುಗಳು ದೂರ-ದೂರದಲ್ಲಿರಬಹುದು, ಆದರೆ ಜನರ ಹೃದಯಗಳು ಪರಸ್ಪರ ಹತ್ತಿರದಲ್ಲಿವೆ ಎಂದು ಅವರು ಬರೆದಿದ್ದಾರೆ. ನಿಜಕ್ಕೂ, ಬೆಟ್ಟಗಳಲ್ಲಿ ವಾಸಿಸುವ ಜನರ ಜೀವನದಿಂದ ನಾವು ಬಹಳಷ್ಟು ಕಲಿಯಬಹುದು. ಮಲೆನಾಡಿನ ಜೀವನಶೈಲಿ ಮತ್ತು ಸಂಸ್ಕೃತಿಯಿಂದ ನಾವು ಪಡೆಯುವ ಮೊದಲ ಪಾಠವೆಂದರೆ ನಾವು ಪರಿಸ್ಥಿತಿಗಳ ಒತ್ತಡಕ್ಕೆ ಒಳಗಾಗದಿದ್ದರೆ, ನಾವು ಅವುಗಳನ್ನು ಸುಲಭವಾಗಿ ಜಯಿಸಬಹುದು ಮತ್ತು ಎರಡನೆಯದಾಗಿ, ಸ್ಥಳೀಯ ಸಂಪನ್ಮೂಲಗಳೊಂದಿಗೆ ನಾವು ಹೇಗೆ ಸ್ವಾವಲಂಬಿಯಾಗಬಹುದು ಎಂಬುದನ್ನು ಅವರು ತಮ್ಮ ಜೀವನ ಮೂಲಕ ನಮಗೆ ಹೇಳಿಕೊಡುತ್ತಾರೆ. 

ಅವರು ಹೇಳಿದ ಮೊದಲ ಸುಂದರ ಪಾಠ, ಇತ್ತೀಚಿನ ದಿನಗಳಲ್ಲಿ ಸ್ಪಿತಿ ಪ್ರದೇಶದಲ್ಲಿ ಕಂಡುಬರುತ್ತದೆ. ಸ್ಪಿತಿ ಬುಡಕಟ್ಟು ಪ್ರದೇಶವಾಗಿದೆ. ಇಲ್ಲಿ, ಇತ್ತೀಚಿನ ದಿನಗಳಲ್ಲಿ, ಅವರೆಕಾಳು ಕೀಳುವುದು ನಡೆಯುತ್ತಿದೆ. ಬೆಟ್ಟದ ಜಮೀನುಗಳಲ್ಲಿ ಇದು ಶ್ರಮದಾಯಕ ಮತ್ತು ಕಷ್ಟಕರವಾದ ಕೆಲಸವಾಗಿದೆ. ಆದರೆ ಇಲ್ಲಿ ಹಳ್ಳಿಯ ಹೆಂಗಸರು ಒಂದೆಡೆ ಸೇರಿ ಪರಸ್ಪರರ ಹೊಲಗಳಿಂದ ಅವರೆಕಾಳು ಕೀಳುತ್ತಾರೆ. ಈ ಕಾರ್ಯದ ಜೊತೆಗೆ, ಮಹಿಳೆಯರು ಸ್ಥಳೀಯ ಹಾಡು 'ಛಪ್ರಾ ಮಾಝಿ ಛಾಪ್ರಾ' ಅನ್ನು ಸಹ ಹಾಡುತ್ತಾರೆ. ಅಂದರೆ ಇಲ್ಲಿ ಪರಸ್ಪರ ಸಹಕಾರವೂ ಜನಪದ ಸಂಪ್ರದಾಯದ ಭಾಗವಾಗಿದೆ. ಸ್ಥಳೀಯ ಸಂಪನ್ಮೂಲಗಳ ಬಳಕೆಯ ಅತ್ಯುತ್ತಮ ಉದಾಹರಣೆ ಸ್ಪಿತಿಯಲ್ಲಿಯೂ ಕಂಡುಬರುತ್ತದೆ. ಸ್ಪಿತಿಯಲ್ಲಿ ಹಸುಗಳನ್ನು ಸಾಕುವ ರೈತರು ಸಗಣಿ ಒಣಗಿಸಿ ಗೋಣಿಚೀಲಗಳಲ್ಲಿ ತುಂಬುತ್ತಾರೆ. ಚಳಿಗಾಲ ಬಂತೆಂದರೆ ಹಸುಗಳು ವಾಸಿಸುವ ಶೆಡ್ಗಳಲ್ಲಿ ಈ ಗೋಣಿಚೀಲಗಳನ್ನು ಹಾಕಲಾಗುತ್ತದೆ, ಇದನ್ನು ಇಲ್ಲಿ “ಖುದ್” ಎಂದು ಕರೆಯಲಾಗುತ್ತದೆ. ಹಿಮಪಾತದ ಸಮಯದಲ್ಲಿ, ಈ ಚೀಲಗಳು ಚಳಿಯಿಂದ ಹಸುಗಳಿಗೆ ರಕ್ಷಣೆ ನೀಡುತ್ತದೆ. ಚಳಿಗಾಲದ ನಂತರ, ಈ ಹಸುವಿನ ಸಗಣಿ, ಹೊಲಗಳಲ್ಲಿ ಗೊಬ್ಬರವಾಗಿ ಬಳಸಲ್ಪಡುತ್ತದೆ. ಅಂದರೆ, ನಮ್ಮ ಸಾಕುಪ್ರಾಣಿಗಳ ತ್ಯಾಜ್ಯವನ್ನು ಬಳಸಿಕೊಂಡು ಪ್ರಾಣಿಗಳ ರಕ್ಷಣೆ ಮತ್ತು ಹೊಲಗಳಿಗೆ ಗೊಬ್ಬರವನ್ನು ಸಹ ಬಳಸಲಾಗುತ್ತದೆ. ಸಾಗುವಳಿ ವೆಚ್ಚವೂ ಕಡಿಮೆ, ಹೊಲಗಳಲ್ಲಿ ಇಳುವರಿಯೂ ಹೆಚ್ಚು. ಅದಕ್ಕಾಗಿಯೇ ಈ ಪ್ರದೇಶವು ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಕೃಷಿಗೆ ಸ್ಫೂರ್ತಿಯಾಗಿದೆ. 

ಸ್ನೇಹಿತರೇ, ನಮ್ಮ ಇತರ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲೂ ಇಂತಹ ಶ್ಲಾಘನೀಯ ಪ್ರಯತ್ನಗಳು ಕಂಡುಬರುತ್ತಿವೆ. ಉತ್ತರಾಖಂಡದಲ್ಲಿ ಅನೇಕ ರೀತಿಯ ಔಷಧಿಗಳು ಮತ್ತು ಸಸ್ಯಗಳು ಕಂಡುಬರುತ್ತವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಒಂದು ಹಣ್ಣು – “ಬೇಡು”. ಇದನ್ನು “ಹಿಮಾಲಯನ್ ಫಿಗ್ “ಎಂದೂ ಕರೆಯುತ್ತಾರೆ. ಈ ಹಣ್ಣಿನಲ್ಲಿ ಖನಿಜಗಳು ಮತ್ತು ವಿಟಮಿನ್ ಗಳು ಹೇರಳವಾಗಿ ಕಂಡುಬರುತ್ತವೆ. ಜನರು ಇದನ್ನು ಹಣ್ಣಿನ ರೂಪದಲ್ಲಿ ಮಾತ್ರವಲ್ಲ, ಅನೇಕ ರೋಗಗಳ ಚಿಕಿತ್ಸೆಯಲ್ಲಿಯೂ ಬಳಸುತ್ತಾರೆ. ಈ ಹಣ್ಣಿನಲ್ಲಿರುವ ಈ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ಬೀಡು ಜ್ಯೂಸ್, ಜಾಮ್, ಚಟ್ನಿ, ಉಪ್ಪಿನಕಾಯಿ, ಒಣಗಿಸಿ ತಯಾರಿಸಿದ ಒಣ ಹಣ್ಣುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಪಿಥೋರಗಢ ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಹಕಾರದಿಂದ ಬೀಡುವನ್ನು ವಿವಿಧ ರೂಪಗಳಲ್ಲಿ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. “ಪಹಾರಿ ಅಂಜೂರ” ಎಂದು ಬ್ರಾಂಡ್ ಮಾಡುವ ಮೂಲಕ ಆನ್ಲೈನ್ ಮಾರುಕಟ್ಟೆಯಲ್ಲೂ ಬೀಡು ಬಿಡುಗಡೆಯಾಗಿದೆ. ಇದರಿಂದಾಗಿ, ರೈತರು ಹೊಸ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ ಮಾತ್ರವಲ್ಲದೆ, ”ಬೀಡು” ಹಣ್ಣಿನ ಔಷಧೀಯ ಗುಣಗಳ ಪ್ರಯೋಜನಗಳು ದೂರದವರೆಗೆ ತಲುಪಲು ಪ್ರಾರಂಭಿಸಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ಆರಂಭದಲ್ಲಿ, ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಉಲ್ಲೇಖಿಸಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ಮಹಾರಥೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಹಬ್ಬಗಳು ಅಣಿಯಾಗುತ್ತಿವೆ. 
ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ, ಭಗವಾನ್ ಗಣೇಶನನ್ನು ಪೂಜಿಸುವ ಹಬ್ಬ ಬರುತ್ತದೆ. ಗಣೇಶ ಚತುರ್ಥಿ, ಅಂದರೆ ಗಣಪತಿ ಬಪ್ಪನ ಆಶೀರ್ವಾದದ ಹಬ್ಬ. ಗಣೇಶ ಚತುರ್ಥಿಯ ಜೊತೆಗೆ ಓಣಂ ಹಬ್ಬವೂ ಆರಂಭವಾಗುತ್ತದೆ. ಓಣಂ ಅನ್ನು ವಿಶೇಷವಾಗಿ ಕೇರಳದಲ್ಲಿ ಶಾಂತಿ ಮತ್ತು ಸಮೃದ್ಧಿಯ ಭಾವನೆಯೊಂದಿಗೆ ಆಚರಿಸಲಾಗುತ್ತದೆ. ಹರ್ತಾಲಿಕಾ ತೀಜ್ ಕೂಡ ಆಗಸ್ಟ್ 30 ರಂದು. ಒಡಿಶಾದಲ್ಲಿ ಸೆಪ್ಟೆಂಬರ್ 1 ರಂದು ನುವಾಖಾಯ್ ಹಬ್ಬವನ್ನು ಆಚರಿಸಲಾಗುತ್ತದೆ. ನುವಾಖೈ ಎಂದರೆ ಹೊಸ ಆಹಾರ, ಅಂದರೆ ಇದು ಕೂಡ ಇತರ ಅನೇಕ ಹಬ್ಬಗಳಂತೆ ನಮ್ಮ ಕೃಷಿ ಸಂಪ್ರದಾಯಗಳಿಗೆ ಸಂಬಂಧಿಸಿದ ಹಬ್ಬವಾಗಿದೆ. ಇದೇ ವೇಳೆ ಜೈನ ಸಮುದಾಯದ ಸಂವತ್ಸರಿ ಉತ್ಸವವೂ ನಡೆಯಲಿದೆ. ನಮ್ಮ ಈ ಎಲ್ಲ ಹಬ್ಬಗಳು ನಮ್ಮ ಸಾಂಸ್ಕೃತಿಕ ಏಳಿಗೆ ಮತ್ತು ಜೀವಂತಿಕೆಗೆ ಸಮಾನಾರ್ಥಕವಾಗಿವೆ. ಈ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ. 
ಈ ಹಬ್ಬಗಳ ಜೊತೆಗೆ ನಾಳೆ ಆಗಸ್ಟ್ 29 ರಂದು ಮೇಜರ್ ಧ್ಯಾನಚಂದ್ ಜಿ ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಸಹ ಆಚರಿಸಲಾಗುತ್ತದೆ. ನಮ್ಮ ಯುವ ಕ್ರೀಡಾ ಪಟುಗಳು ಜಾಗತಿಕ ವೇದಿಕೆಗಳಲ್ಲಿ ನಮ್ಮ ತ್ರಿವರ್ಣ ಧ್ವಜದ ವೈಭವವನ್ನು ಹೆಚ್ಚಿಸುವುದನ್ನು ಮುಂದುವರಿಸಲಿ, ಇದು ಧ್ಯಾನ್ ಚಂದ್ ಜಿ ಅವರಿಗೆ ನಮ್ಮ ಗೌರವವಾಗಿದೆ. ನಾವೆಲ್ಲರೂ ಸೇರಿ ದೇಶಕ್ಕಾಗಿ ಹೀಗೆ ಕೆಲಸ ಮಾಡೋಣ; ದೇಶದ ಗೌರವವನ್ನು ಹೆಚ್ಚಿಸುತ್ತಾ ಇರೋಣ...ಈ ಹಾರೈಕೆಯೊಂದಿಗೆ ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ. ಮುಂದಿನ ತಿಂಗಳು ಮತ್ತೊಮ್ಮೆ ‘ಮನ್ ಕಿ ಬಾತ್’ ನಡೆಯಲಿದೆ.
ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why India making its own bullet trains is a big deal – explained

Media Coverage

Why India making its own bullet trains is a big deal – explained
NM on the go

Nm on the go

Always be the first to hear from the PM. Get the App Now!
...
Prime Minister’s Departure Statement ahead of his visit to Seychelles
June 27, 2026

At the invitation of my friend, H.E. Dr. Patrick Herminie, President of the Republic of Seychelles, I will undertake a State Visit to Seychelles from 27-29 June 2026 to participate in the Golden Jubilee celebrations of the National Day of Seychelles as the Guest of Honour.

Seychelles is a valued maritime neighbour and a key partner in our Vision MAHASAGAR and our shared commitment to the Global South. This year, we also mark the 50th anniversary of the establishment of our diplomatic relations which are rooted in mutual trust, shared democratic values, respect for diversity and deep affinity between our peoples.

Building on the successful State visit of President Herminie to India in February 2026, I look forward to our discussions aimed at further strengthening our enduring friendship. Together, we will work to advance the progress of our peoples, and promote security and prosperity in the Indian Ocean region.

During the visit, I will have the honour of becoming the first Indian Prime Minister to address the National Assembly of Seychelles. This historic opportunity reflects the strong democratic values and parliamentary traditions that bind our two nations.

I also look forward to interacting with the vibrant Indian community in Seychelles, who have been nurturing the special friendship between India and Seychelles for generations, and serving as a living bridge between our two nations.

I am confident that my visit will further deepen the longstanding bonds between the two countries, enhance maritime cooperation in the Indian Ocean region, and advance our shared vision of a secure, peaceful and prosperous Indian Ocean region.