"ಅಮೃತ ಕಾಲದಲ್ಲಿ, ಭಾರತವು ನೀರಿಗಾಗಿ ಭವಿಷ್ಯದತ್ತ ನೋಡುತ್ತಿದೆ"
"ಭಾರತವು ನೀರನ್ನು ದೇವರು ಮತ್ತು ನದಿಗಳನ್ನು ತಾಯಂದಿರೆಂದು ಪರಿಗಣಿಸುತ್ತದೆ"
"ಜಲ ಸಂರಕ್ಷಣೆ ನಮ್ಮ ಸಮಾಜದ ಸಂಸ್ಕೃತಿ ಮತ್ತು ನಮ್ಮ ಸಾಮಾಜಿಕ ಚಿಂತನೆಯ ಕೇಂದ್ರಬಿಂದುವಾಗಿದೆ"
"ನಮಾಮಿ ಗಂಗೆ ಅಭಿಯಾನವು ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ"
"ದೇಶದ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳ ನಿರ್ಮಾಣವು ಜಲ ಸಂರಕ್ಷಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ಬ್ರಹ್ಮಕುಮಾರಿಯವರ 'ಜಲ-ಜನ ಅಭಿಯಾನ'ವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಬ್ರಹ್ಮಕುಮಾರೀಸ್ ಸಂಸ್ಥೆಯ ಪ್ರಮುಖ್ ರಾಜಯೋಗಿನಿ ದಾದಿ ರತನ್ ಮೋಹಿನಿ ಜೀ, ನನ್ನ ಸಂಪುಟ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಜೀ, ಬ್ರಹ್ಮ ಕುಮಾರಿಸ್ ಸಂಘಟನೆಯ ಎಲ್ಲಾ ಸದಸ್ಯರೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ಬ್ರಹ್ಮಕುಮಾರಿಯವರು ಪ್ರಾರಂಭಿಸಿದ 'ಜಲ-ಜನ ಅಭಿಯಾನ'ದ ಉದ್ಘಾಟನೆಗೆ ನಾನು ಇಲ್ಲಿಗೆ ಬಂದಿರುವುದು ನನಗೆ ಸಂತೋಷ ತಂದಿದೆ. ನಿಮ್ಮೆಲ್ಲರ ನಡುವೆ ಬರುವುದು ಮತ್ತು ನಿಮ್ಮಿಂದ ಕಲಿಯುವುದು ನನಗೆ ಸದಾ ವಿಶೇಷ ಸಂಗತಿಯಾಗಿದೆ. ದಿವಂಗತ ರಾಜಯೋಗಿನಿ ದಾದಿ ಜಾನಕಿ ಜೀ ಅವರಿಂದ ನಾನು ಪಡೆದ ಆಶೀರ್ವಾದಗಳು ನನ್ನ ದೊಡ್ಡ ಆಸ್ತಿ. ದಾದಿ ಪ್ರಕಾಶ್ ಮಣಿ ಜಿ ಅವರ ನಿಧನದ ನಂತರ ಅಬು ರೋಡ್ ನಲ್ಲಿ ಅವರಿಗೆ ನನ್ನ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದು ನನಗೆ ನೆನಪಿದೆ.  ಕಳೆದ ಕೆಲವು ವರ್ಷಗಳಿಂದ, ವಿವಿಧ ಕಾರ್ಯಕ್ರಮಗಳಿಗೆ ಬ್ರಹ್ಮ ಕುಮಾರಿ ಸಹೋದರಿಯರಿಂದ ನನಗೆ ಅನೇಕ ಆತ್ಮೀಯ ಆಹ್ವಾನಗಳು ಬಂದಿವೆ. ಈ ಆಧ್ಯಾತ್ಮಿಕ ಕುಟುಂಬದ ಸದಸ್ಯನಾಗಿ ನಾನು ಸದಾ ನಿಮ್ಮ ನಡುವೆ ಇರಲು ಪ್ರಯತ್ನಿಸುತ್ತೇನೆ.

2011ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದ 'ಫ್ಯೂಚರ್ ಆಫ್ ಪವರ್' ಕಾರ್ಯಕ್ರಮ, ಸಂಸ್ಥೆಯ ಸ್ಥಾಪನೆಯ 75 ವರ್ಷಗಳು, 2013ರಲ್ಲಿ ಸಂಗಮ ತೀರ್ಥಧಾಮ, 2017ರಲ್ಲಿ ಬ್ರಹ್ಮಕುಮಾರಿ ಸಂಸ್ಥಾನದ 80ನೇ ಸಂಸ್ಥಾಪನಾ ದಿನ ಅಥವಾ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಕಳೆದ ವರ್ಷದ ಕಾರ್ಯಕ್ರಮವಾಗಿರಲಿ, ನಿಮ್ಮ ನಡುವೆ ಬಂದಾಗೆಲ್ಲ ನಿಮ್ಮ ಪ್ರೀತಿ ಮತ್ತು ಬಾಂಧವ್ಯ ನನ್ನನ್ನು ಆವರಿಸಿಕೊಳ್ಳುತ್ತದೆ. ಬ್ರಹ್ಮಕುಮಾರಿಯವರೊಂದಿಗಿನ  ನನ್ನ ಸಂಬಂಧವೂ ವಿಶೇಷವಾಗಿದೆ ಏಕೆಂದರೆ ಆತ್ಮದಿಂದ ಮೇಲೇರಿ ಸಮಾಜಕ್ಕಾಗಿ ಎಲ್ಲವನ್ನೂ ಸಮರ್ಪಿಸುವುದು ನಿಮ್ಮೆಲ್ಲರಿಗೂ ಆಧ್ಯಾತ್ಮಿಕ ಸಾಧನೆಯ ಒಂದು ವಿಧಾನವಾಗಿದೆ, ರೂಪವಾಗಿದೆ.

ಸ್ನೇಹಿತರೇ,

ವಿಶ್ವದಾದ್ಯಂತ ನೀರಿನ ಅಭಾವವನ್ನು ಭವಿಷ್ಯದ ಬಿಕ್ಕಟ್ಟಾಗಿ ನೋಡುತ್ತಿರುವ ಕಾಲಘಟ್ಟದಲ್ಲಿ 'ಜಲ-ಜನ ಅಭಿಯಾನ'ವನ್ನು ಪ್ರಾರಂಭಿಸಲಾಗುತ್ತಿದೆ. 21 ನೇ ಶತಮಾನದ ಜಗತ್ತು ಭೂಮಿಯ ಮೇಲಿನ ಸೀಮಿತ ಜಲ ಸಂಪನ್ಮೂಲಗಳ ಗಂಭೀರ ಸ್ಥಿತಿಯನ್ನು ಅರಿತುಕೊಳ್ಳುತ್ತಿದೆ. ತನ್ನ ದೊಡ್ಡ, ಬೃಹತ್ ಜನಸಂಖ್ಯೆಯ ಕಾರಣದಿಂದಾಗಿ, ನೀರಿನ ಸುರಕ್ಷತೆಯು ಭಾರತಕ್ಕೆ ಕೂಡಾ ಒಂದು ಪ್ರಮುಖ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ, ಇಂದು ದೇಶವು "ಜಲ್ ಹೈ ತೋ ಕಲ್ ಹೈ" ಎಂಬ ಮಾತಿನಂತೆ, ನೀರನ್ನು 'ನಾಳೆ'ಯ ಸಂಪನ್ಮೂಲ ಎಂಬಂತೆ ನೋಡುತ್ತಿದೆ. ನೀರು ಇದ್ದರೆ ಮಾತ್ರ ನಾಳೆ ಇರುತ್ತದೆ. ಆದ್ದರಿಂದ, ಈ ನಿಟ್ಟಿನಲ್ಲಿ ನಾವು ಇಂದಿನಿಂದಲೇ ಒಟ್ಟಾಗಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ದೇಶವು ಈಗ ಜಲ ಸಂರಕ್ಷಣೆಯ ನಿರ್ಣಯವನ್ನು ಜನಾಂದೋಲನವಾಗಿ ಮುಂದಕ್ಕೆ ಕೊಂಡೊಯ್ಯುತ್ತಿದೆ ಎಂಬ ತೃಪ್ತಿ ನನಗಿದೆ. ಬ್ರಹ್ಮಕುಮಾರಿಯವರ 'ಜಲ-ಜನ ಅಭಿಯಾನ' ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಈ ಪ್ರಯತ್ನಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ಇದು ಜಲ ಸಂರಕ್ಷಣಾ ಅಭಿಯಾನದ ವ್ಯಾಪ್ತಿಯನ್ನು ವಿಸ್ತರಿಸುವುದಲ್ಲದೆ, ಅದರ ಪರಿಣಾಮಕಾರಿತ್ವವನ್ನು ಕೂಡಾ ಹೆಚ್ಚಿಸುತ್ತದೆ. ಬ್ರಹ್ಮಕುಮಾರೀಸ್ ಸಂಘಟನೆಗೆ ಸಂಬಂಧಿಸಿದ ಎಲ್ಲಾ ಹಿರಿಯ ನಾಯಕರು ಮತ್ತು ಅದರ ಲಕ್ಷಾಂತರ ಅನುಯಾಯಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಸಾವಿರಾರು ವರ್ಷಗಳ ಹಿಂದೆ, ಭಾರತದ ಸಾಧುಗಳು ಪ್ರಕೃತಿ, ಪರಿಸರ ಮತ್ತು ನೀರಿನ ಬಗ್ಗೆ ಸಂಯಮ, ಸಮತೋಲಿತ ಮತ್ತು ಸೂಕ್ಷ್ಮ ವ್ಯವಸ್ಥೆಯನ್ನು ರೂಪಿಸಿದ್ದರು. ನಾವು ನೀರನ್ನು ಹಾಳು ಮಾಡಬಾರದು, ನಾಶ ಮಾಡಬಾರದು, ಆದರೆ ಅದನ್ನು ಸಂರಕ್ಷಿಸಬೇಕು ಎಂಬ ಮಾತಿದೆ. ಈ ಸ್ಪೂರ್ತಿಯು  ಸಾವಿರಾರು ವರ್ಷಗಳಿಂದ ನಮ್ಮ ಆಧ್ಯಾತ್ಮಿಕತೆಯ ಒಂದು ಭಾಗವಾಗಿದೆ ಮತ್ತು ನಮ್ಮ ಧರ್ಮದ ಒಂದು ಭಾಗವಾಗಿದೆ. ಇದು ನಮ್ಮ ಸಮಾಜದ ಸಂಸ್ಕೃತಿ, ನಮ್ಮ ಸಾಮಾಜಿಕ ಚಿಂತನೆಯ ಕೇಂದ್ರ. ಅದಕ್ಕಾಗಿಯೇ ನಾವು ನೀರನ್ನು ದೇವರೆಂದು ಪರಿಗಣಿಸುತ್ತೇವೆ ಮತ್ತು ನದಿಗಳನ್ನು ತಾಯಿ ಎಂದು ಪರಿಗಣಿಸುತ್ತೇವೆ. ಒಂದು ಸಮಾಜವು ಪ್ರಕೃತಿಯೊಂದಿಗೆ ಅಂತಹ ಭಾವನಾತ್ಮಕ ಸಂಪರ್ಕವನ್ನು ಹೊಂದಿದಾಗ ಸುಸ್ಥಿರ ಅಭಿವೃದ್ಧಿಯು ಅದರ ಸಹಜ, ನೈಸರ್ಗಿಕ ಜೀವನ ವಿಧಾನವಾಗುತ್ತದೆ. ಆದ್ದರಿಂದ, ಇಂದು ಭವಿಷ್ಯದ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುವಾಗ, ನಾವು ಗತಕಾಲದ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಬೇಕು. ಜಲ ಸಂರಕ್ಷಣೆಯ ಮೌಲ್ಯಗಳ ಬಗ್ಗೆ ನಾವು ದೇಶವಾಸಿಗಳಲ್ಲಿ ಅದೇ ನಂಬಿಕೆಯನ್ನು ಮೂಡಿಸಬೇಕಾಗಿದೆ. ಜಲಮಾಲಿನ್ಯಕ್ಕೆ ಕಾರಣವಾಗುವ ಪ್ರತಿಯೊಂದು ಅವ್ಯವಸ್ಥೆಯನ್ನು ನಾವು ತೆಗೆದುಹಾಕಬೇಕು. ಮತ್ತು, ಎಂದಿನಂತೆ, ಬ್ರಹ್ಮಕುಮಾರಿಯವರಂತಹ ಭಾರತದ ಆಧ್ಯಾತ್ಮಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸ್ನೇಹಿತರೇ,

ಕಳೆದ ದಶಕಗಳಲ್ಲಿ, ನಮ್ಮ ದೇಶದಲ್ಲಿ ಅಂತಹ ನಕಾರಾತ್ಮಕ ಚಿಂತನೆ ಬೆಳೆದಿದೆ, ನಾವು ಜಲ ಸಂರಕ್ಷಣೆ ಮತ್ತು ಪರಿಸರದಂತಹ ಸಮಸ್ಯೆಗಳನ್ನು ಸಮಸ್ಯಾತ್ಮಕವೆಂದು ಪರಿಗಣಿಸಿದ್ದೇವೆ ಮತ್ತು ಅವುಗಳನ್ನು ಗಮನಿಸದೆ ಬಿಟ್ಟಿದ್ದೇವೆ. ಇವುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗದ ಸವಾಲಿನ ವಿಷಯಗಳು ಎಂದು ಕೆಲವರು ಭಾವಿಸಿದ್ದರು! ಆದರೆ ಕಳೆದ 8-9 ವರ್ಷಗಳಲ್ಲಿ ದೇಶವು ಈ ಮನಸ್ಥಿತಿಯನ್ನು ಬದಲಾಯಿಸಿಕೊಂಡಿದೆ ಮತ್ತು ಪರಿಸ್ಥಿತಿಯೂ ಬದಲಾಗಿದೆ. 'ನಮಾಮಿ ಗಂಗೆ' ಇದಕ್ಕೆ ಬಲವಾದ ಉದಾಹರಣೆಯಾಗಿದೆ. ಇಂದು, ಗಂಗಾ ಮಾತ್ರವಲ್ಲ, ಅದರ ಎಲ್ಲಾ ಉಪನದಿಗಳು ಸಹ ಸ್ವಚ್ಚಗೊಳ್ಳುತ್ತಿವೆ. ನೈಸರ್ಗಿಕ ಕೃಷಿಯಂತಹ ಅಭಿಯಾನಗಳು ಗಂಗಾ ತೀರದಲ್ಲಿ ಪ್ರಾರಂಭವಾಗಿವೆ. 'ನಮಾಮಿ ಗಂಗೆ' ಅಭಿಯಾನವು ಇಂದು ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.

ಸ್ನೇಹಿತರೇ,

ಜಲಮಾಲಿನ್ಯದಂತೆಯೇ, ಕುಸಿಯುತ್ತಿರುವ ಅಂತರ್ಜಲ ಮಟ್ಟವೂ ದೇಶಕ್ಕೆ ಒಂದು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ದೇಶವು 'ಕ್ಯಾಚ್ ದಿ ರೇನ್' (ಮಳೆಯನ್ನು ಹಿಡಿಯಿರಿ) ಆಂದೋಲನವನ್ನು ಪ್ರಾರಂಭಿಸಿದೆ, ಅದು ಈಗ ವೇಗವಾಗಿ ಮುಂದುವರಿಯುತ್ತಿದೆ. ಅಟಲ್ ಭೂಜಲ್ ಯೋಜನೆಯ ಮೂಲಕ ದೇಶದ ಸಾವಿರಾರು ಗ್ರಾಮ ಪಂಚಾಯಿತಿಗಳಲ್ಲಿ ಜಲ ಸಂರಕ್ಷಣೆಯನ್ನು ಉತ್ತೇಜಿಸಲಾಗುತ್ತಿದೆ. ದೇಶದ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರ ನಿರ್ಮಿಸುವ ಅಭಿಯಾನವು ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ ನೀರಿನ ಸಂರಕ್ಷಣೆಯಂತಹ ಜೀವನದ ಪ್ರಮುಖ ವಿಷಯಗಳಿಗೆ ಮಹಿಳೆಯರು ದಾರಿದೀಪವಾಗಿದ್ದಾರೆ. ಇಂದು ದೇಶದ ಹಳ್ಳಿಗಳಲ್ಲಿನ ಮಹಿಳೆಯರು 'ಪಾನಿ ಸಮಿತಿ' (ನೀರಿನ ಸಮಿತಿಗಳು) ಮೂಲಕ ಜಲ ಜೀವನ್ ಮಿಷನ್ ನಂತಹ ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಬ್ರಹ್ಮಕುಮಾರಿ ಸಹೋದರಿಯರು ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಅದೇ ರೀತಿಯ ಪಾತ್ರವನ್ನು ವಹಿಸಬಹುದು. ಜಲ ಸಂರಕ್ಷಣೆಯ ಜೊತೆಗೆ, ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಾವು ಸಮಾನ ಉತ್ಸಾಹದಿಂದ ಎತ್ತಿಕೊಳ್ಳಬೇಕಾಗಿದೆ. ಕೃಷಿಯಲ್ಲಿ ನೀರಿನ ಸಮತೋಲಿತ ಬಳಕೆಗಾಗಿ ದೇಶವು ಹನಿ ನೀರಾವರಿಯಂತಹ ತಂತ್ರಗಳನ್ನು ಉತ್ತೇಜಿಸುತ್ತಿದೆ. ಅದನ್ನು ಇನ್ನಷ್ಟು ಪರಿಮಣಕಾರಿಯಾಗಿ ಬಳಸಲು ನೀವು ರೈತರನ್ನು ಪ್ರೇರೇಪಿಸಬೇಕು. ಈಗ ಇಡೀ ವಿಶ್ವವು ಭಾರತದ ಉಪಕ್ರಮದ ಮೇರೆಗೆ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸುತ್ತಿದೆ. ಶ್ರೀ ಅನ್ನ ಬಾಜ್ರಾ ಮತ್ತು ಶ್ರೀ ಅನ್ನ ಜೋಳದಂತಹ ಸಿರಿಧಾನ್ಯಗಳು ಶತಮಾನಗಳಿಂದ ನಮ್ಮ ದೇಶದಲ್ಲಿ ಕೃಷಿಬೆಳೆ ಮತ್ತು ಆಹಾರ ಪದ್ಧತಿಯ ಒಂದು ಭಾಗವಾಗಿವೆ. ಸಿರಿಧಾನ್ಯಗಳು ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿವೆ ಮತ್ತು ಅದರ ಕೃಷಿಗೆ ಕಡಿಮೆ ನೀರು ಸಾಕಾಗುತ್ತದೆ. ಆದ್ದರಿಂದ, ನೀವು ಆಹಾರದಲ್ಲಿ ಹೆಚ್ಚು ಇಂತಹ ಬೇಳೆ ಕಾಳು,ಸಿರಿ ಧಾನ್ಯಗಳನ್ನು ಸೇರಿಸಿಕೊಳ್ಳಲು ಜನರಿಗೆ  ಪ್ರೇರೇಪಣೆ ನೀಡಿದರೆ, ಈ ಅಭಿಯಾನವು ಬಲವನ್ನು ಪಡೆಯುತ್ತದೆ ಮತ್ತು ನೀರಿನ ಸಂರಕ್ಷಣೆಗೂ ಉತ್ತೇಜನ ಸಿಗುತ್ತದೆ.

ನಮ್ಮ ಜಂಟಿ ಪ್ರಯತ್ನಗಳು 'ಜಲ-ಜನ ಅಭಿಯಾನ'ವನ್ನು ಯಶಸ್ವಿಗೊಳಿಸುತ್ತವೆ ಮತ್ತು ನಾವು ಉತ್ತಮ ಭಾರತ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸುತ್ತೇವೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಶುಭ ಹಾರೈಕೆಗಳು. ಓಂ ಶಾಂತಿ!

ಘೋಷಣೆ: ಇದು ಪ್ರಧಾನಿಯವರ ಭಾಷಣದ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Stranded in Tehran, 50 Iranian Sikhs return safely to India

Media Coverage

Stranded in Tehran, 50 Iranian Sikhs return safely to India
NM on the go

Nm on the go

Always be the first to hear from the PM. Get the App Now!
...
Prime Minister Narendra Modi pays tributes to Freedom Fighter, Shri Pingali Venkayya on his 150th birth anniversary
August 02, 2026

The Prime Minister, Shri Narendra Modi, paid tributes to freedom fighter, Shri Pingali Venkayya on his 150th birth anniversary.

The Prime Minister remembered Pingali Venkayya for his invaluable role in giving the nation the Tricolour and said that his efforts continue to inspire people to serve the country with dedication and patriotic fervour.

Shri Modi said that the Tiranga fills every Indian heart with immense pride and inspires the nation to work towards nation-building.

The Prime Minister wrote on X;

“Tributes to Pingali Venkayya Ji on his 150th birth anniversary. He is remembered for his invaluable role in giving our nation the Tricolour. May his efforts always inspire people to serve our country with dedication and patriotic fervour.

The Tiranga fills every Indian heart with immense pride and inspires us to work towards nation building.”