ನಮ್ಮ ಸರ್ಕಾರ ಶುದ್ಧ ಇಂಧನ ಮಿಷನ್ ಅನ್ನು ಜನಾಂದೋಲನವನ್ನಾಗಿ ಪರಿವರ್ತಿಸುತ್ತಿದೆ: ಪ್ರಧಾನಮಂತ್ರಿ
ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ನಾವು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ
ಬುಡಕಟ್ಟು ಸಮುದಾಯಗಳು ಘನತೆ ಮತ್ತು ಸ್ವಾಭಿಮಾನದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಬದ್ಧತೆಯಾಗಿದೆ: ಪ್ರಧಾನಮಂತ್ರಿ

ಮಾತೆ ತ್ರಿಪುರ ಸುಂದರಿ ಕೀ ಜೈ, ಬೆನೇಶ್ವರ್ ಧಾಮ್ ಕಿ ಜೈ, ಮಂಗರ್ ಧಾಮ್ ಕಿ ಜೈ, ನಿಮ್ಮೆಲ್ಲರಿಗೂ ಜೈ ಗುರು! ರಾಮ್-ರಾಮ್! ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನಲಾಲ್ ಶರ್ಮಾ ಜಿ, ಮಾಜಿ ಮುಖ್ಯಮಂತ್ರಿ ಸಹೋದರಿ ವಸುಂಧರಾ ರಾಜೇ ಜಿ, ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪ್ರಹ್ಲಾದ್ ಜೋಶಿ ಜಿ, ಗಜೇಂದ್ರ ಸಿಂಗ್ ಶೇಖಾವತ್ ಜಿ ಮತ್ತು ಜೋಧ್‌ಪುರದಿಂದ ನಮ್ಮೊಂದಿಗೆ ಸೇರ್ಪಡೆಯಾಗಿರುವ ಅಶ್ವಿನಿ ವೈಷ್ಣವ್ ಜಿ, ಉಪಮುಖ್ಯಮಂತ್ರಿ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ ಮತ್ತು ದಿಯಾ ಕುಮಾರಿ ಜಿ, ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಮದನ್ ರಾಥೋಡ್ ಜಿ, ರಾಜಸ್ಥಾನ ಸರ್ಕಾರದ ಸಚಿವರೆ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರೆ, ಸಹೋದರ ಸಹೋದರಿಯರೆ,

ನವರಾತ್ರಿಯ ಈ 4ನೇ ದಿನದಂದು ಮಾತೆ ತ್ರಿಪುರ ಸುಂದರಿಯ ನಾಡಾಗಿರುವ ಬನ್ಸ್‌ವಾರಾಕ್ಕೆ ಬರುವ ಸೌಭಾಗ್ಯ ನನಗೆ ಒದಗಿಬಂದಿದೆ. ನಾನು ಕಾಂತಲ್ ಮತ್ತು ವಾಗಡ್‌ನ ಗಂಗೆ ಎಂದು ಪರಿಗಣಿಸಲ್ಪಟ್ಟ ಮಾತೆ ಮಾಹಿಯ ದರ್ಶನ ಪಡೆದೆ. ಮಾಹಿ ನದಿಯ ನೀರು ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರ ಹೋರಾಟ ಮತ್ತು ಹೊಂದಾಣಿಕೆಯನ್ನು ಸಂಕೇತಿಸುತ್ತದೆ. ಮಹಾನ್ ನಾಯಕ ಗೋವಿಂದ ಗುರು ಜಿ ಅವರ ಸ್ಫೂರ್ತಿದಾಯಕ ನಾಯಕತ್ವವು ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿದೆ, ಮಾಹಿಯ ಪವಿತ್ರ ಜಲ ಆ ಮಹಾಕಾವ್ಯದ ಕಥೆಗೆ ಸಾಕ್ಷಿಯಾಗಿವೆ. ನಾನು ಮಾತೆ ತ್ರಿಪುರ ಸುಂದರಿ ಮತ್ತು ಮಾತೆ ಮಾಹಿಗೆ ಭಕ್ತಿಯಿಂದ ನಮಸ್ಕರಿಸುತ್ತೇನೆ.

ಸ್ನೇಹಿತರೆ,

ಭಕ್ತಿ ಮತ್ತು ಶೌರ್ಯಕ್ಕೆ ಹೆಸರಾದ ಈ ಭೂಮಿಯಿಂದ ಮಹಾರಾಣಾ ಪ್ರತಾಪ್ ಮತ್ತು ರಾಜಾ ಬನ್ಸಿಯಾ ಭಿಲ್ ಅವರಿಗೆ ನಾನು ಗೌರವಯುತ ನಮನ ಸಲ್ಲಿಸುತ್ತೇನೆ ಮತ್ತು ನಮಿಸುತ್ತೇನೆ.

 

ಸ್ನೇಹಿತರೆ,

ನವರಾತ್ರಿ ಸಮಯದಲ್ಲಿ ನಾವು ಶಕ್ತಿಯ 9 ರೂಪಗಳನ್ನು ಪೂಜಿಸುತ್ತೇವೆ. ಇಂದು ಸಹ ಶಕ್ತಿಗೆ ಸಂಬಂಧಿಸಿದ ಒಂದು ಭವ್ಯ ಕಾರ್ಯಕ್ರಮ, ಅಂದರೆ ವಿದ್ಯುತ್ ಉತ್ಪಾದನೆ ಇಲ್ಲಿ ನಡೆಯುತ್ತಿದೆ. ವಿದ್ಯುತ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯದ ಹೊಸ ಅಧ್ಯಾಯವನ್ನು ಇಂದು ರಾಜಸ್ಥಾನದ ಮಣ್ಣಿನಿಂದ ಬರೆಯಲಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇಂದು 90,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ವಿದ್ಯುತ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. 90,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಏಕಕಾಲದಲ್ಲಿ ಪ್ರಾರಂಭಿಸುತ್ತಿರುವುದು ರಾಷ್ಟ್ರವು ವಿದ್ಯುತ್ ಉತ್ಪಾದನೆಯಲ್ಲಿ ವೇಗದಲ್ಲಿ ಮುನ್ನಡೆಯುತ್ತಿದೆ ಮತ್ತು ದೇಶದ ಪ್ರತಿಯೊಂದು ಭಾಗವು ಇದೇ ವೇಗದಲ್ಲಿ ಭಾಗವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರತಿಯೊಂದು ರಾಜ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ರಾಜಸ್ಥಾನದಲ್ಲಿಯೂ ಸಹ, ಸ್ವಚ್ಛ ಇಂಧನ ಯೋಜನೆಗಳು ಮತ್ತು ಪ್ರಸರಣ ಮಾರ್ಗಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ರಾಜಸ್ಥಾನದ ಬನ್ಸ್‌ವಾರಾದಲ್ಲಿ ಪರಮಾಣು ವಿದ್ಯುತ್ ಯೋಜನೆ ಉದ್ಘಾಟಿಸಲಾಗಿದೆ. ಇಲ್ಲಿ ಸೌರಶಕ್ತಿ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ. ಇದರರ್ಥ ದೇಶವು ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೌರಶಕ್ತಿಯಿಂದ ಪರಮಾಣು ಶಕ್ತಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಸ್ನೇಹಿತರೆ,

ಇಂದು ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಯುಗದಲ್ಲಿ ಅಭಿವೃದ್ಧಿಯ ವಾಹನವು ವಿದ್ಯುತ್‌ನಿಂದ ಮಾತ್ರ ಚಲಿಸುತ್ತದೆ. ವಿದ್ಯುತ್ ಇದ್ದರೆ, ಬೆಳಕು ಇದೆ! ವಿದ್ಯುತ್ ಇದ್ದರೆ, ವೇಗವಿದೆ! ವಿದ್ಯುತ್ ಇದ್ದರೆ, ಪ್ರಗತಿ ಇದೆ! ವಿದ್ಯುತ್ ಇದ್ದರೆ, ದೂರಗಳು ಕುಗ್ಗುತ್ತವೆ! ಮತ್ತು ವಿದ್ಯುತ್ ಇದ್ದರೆ, ಇಡೀ ಜಗತ್ತೇ ನಮ್ಮ ವ್ಯಾಪ್ತಿಯಲ್ಲಿದೆ ಎಂದರ್ಥ.

ನನ್ನ ಸಹೋದರ ಸಹೋದರಿಯರೆ,

ನಮ್ಮ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಎಂದಿಗೂ ವಿದ್ಯುತ್‌ನ ಮಹತ್ವದ ಬಗ್ಗೆ ಗಮನ ಹರಿಸಲಿಲ್ಲ. ನೀವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾನು 2014ರಲ್ಲಿ ಜವಾಬ್ದಾರಿ ವಹಿಸಿಕೊಂಡಾಗ, ದೇಶದಲ್ಲಿ 2.5 ಕೋಟಿ ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಇದ್ದವು. ಸ್ವಾತಂತ್ರ್ಯದ 70 ವರ್ಷಗಳ ನಂತರವೂ, ದೇಶದ 18,000 ಹಳ್ಳಿಗಳಲ್ಲಿ ವಿದ್ಯುತ್ ಕಂಬವೂ ಇರಲಿಲ್ಲ. ದೊಡ್ಡ ನಗರಗಳಲ್ಲಿ ಗಂಟೆಗಳ ಕಾಲ ವಿದ್ಯುತ್ ಕಡಿತ ಇರುತ್ತಿತ್ತು. ಹಳ್ಳಿಗಳಲ್ಲಿ, 4–5 ಗಂಟೆಗಳ ಕಾಲ ವಿದ್ಯುತ್ ಪಡೆಯುವುದೇ ದೊಡ್ಡ ವಿಷಯವೆಂದು ಪರಿಗಣಿಸಲಾಗಿತ್ತು. ಆ ಸಮಯದಲ್ಲಿ, ಜನರು ಕರೆಂಟ್ ಹೋದಾಗ ಸುದ್ದಿ ಅಲ್ಲ, ವಿದ್ಯುತ್ ಬಂದಾಗ ಸುದ್ದಿ ಎಂದು ತಮಾಷೆ ಮಾಡುತ್ತಿದ್ದರು. ಒಂದು ಗಂಟೆಯಾದರೂ ವಿದ್ಯುತ್ ಇದ್ದರೆ ಜನರು ಪರಸ್ಪರ ಅಭಿನಂದಿಸುತ್ತಿದ್ದರು, ಪರಿಸ್ಥಿತಿ ಹಾಗಿತ್ತು. ವಿದ್ಯುತ್ ಇಲ್ಲದೆ ಕಾರ್ಖಾನೆಗಳು ನಡೆಯಲು ಸಾಧ್ಯವಿಲ್ಲ, ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ರಾಜಸ್ಥಾನ ಮತ್ತು ದೇಶಾದ್ಯಂತ ಪರಿಸ್ಥಿತಿ ಹೀಗಿತ್ತು.

 

ಸಹೋದರ ಸಹೋದರಿಯರೆ,

2014ರಲ್ಲಿ ನಮ್ಮ ಸರ್ಕಾರವು ಈ ಪರಿಸ್ಥಿತಿಗಳನ್ನು ಬದಲಾಯಿಸಲು ನಿರ್ಧರಿಸಿತು. ನಾವು ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ತಂದಿದ್ದೇವೆ. ನಾವು 2.5 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ್ದೇವೆ. ತಂತಿಗಳು ತಲುಪಿದಲ್ಲೆಲ್ಲಾ ವಿದ್ಯುತ್ ತಲುಪಿತು, ಅಲ್ಲಿಯೂ ಜೀವನ ಸುಲಭವಾಯಿತು ಮತ್ತು ಹೊಸ ಕೈಗಾರಿಕೆಗಳು ಹುಟ್ಟಿಕೊಂಡವು.

ಸ್ನೇಹಿತರೆ,

21ನೇ ಶತಮಾನದಲ್ಲಿ, ವೇಗವಾಗಿ ಬೆಳೆಯಲು ಬಯಸುವ ಯಾವುದೇ ದೇಶವು ತನ್ನ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಬೇಕು. ಅತ್ಯಂತ ಯಶಸ್ವಿಯಾಗುವುದು ಸ್ವಚ್ಛ ಇಂಧನದಲ್ಲಿ ಮುನ್ನಡೆಸುವ ದೇಶಗಳು. ಅದಕ್ಕಾಗಿಯೇ ನಮ್ಮ ಸರ್ಕಾರ ಸ್ವಚ್ಛ ಇಂಧನ ಅಭಿಯಾನವನ್ನು ಜನರ ಚಳುವಳಿಯನ್ನಾಗಿ ಪರಿವರ್ತಿಸಿದೆ. ನಾವು ಪಿಎಂ ಸೂರ್ಯ ಘರ್: ಮಫ್ತ್ ಬಿಜ್ಲಿ ಯೋಜನೆ ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ, ನಗರಗಳು ಮತ್ತು ಹಳ್ಳಿಗಳ ಮೇಲ್ಛಾವಣಿಗಳ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತಿದೆ. ನಮ್ಮ ರೈತರಿಗೆ ಅಗ್ಗದ ವಿದ್ಯುತ್ ಒದಗಿಸಲು, ಪಿಎಂ-ಕುಸುಮ್ ಯೋಜನೆಯಡಿ ಹೊಲಗಳಲ್ಲಿ ಸೌರ ಪಂಪ್‌ಗಳನ್ನು ಅಳವಡಿಸಲಾಗುತ್ತಿದೆ. ಇಂದು ಈ ದಿಕ್ಕಿನಲ್ಲಿ ಅನೇಕ ರಾಜ್ಯಗಳಲ್ಲಿ ಸೌರ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಈ ಯೋಜನೆಗಳು ಲಕ್ಷಾಂತರ ರೈತರಿಗೆ ನೇರವಾಗಿ ಪ್ರಯೋಜನ ನೀಡುತ್ತಿವೆ. ಅಂದರೆ ಮನೆಗೆ ಉಚಿತ ವಿದ್ಯುತ್‌ಗಾಗಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಮತ್ತು ತೋಟಗಳಿಗೆ ಉಚಿತ ವಿದ್ಯುತ್‌ಗಾಗಿ ಪ್ರಧಾನ ಮಂತ್ರಿ-ಕುಸುಮ್ ಯೋಜನೆ ಬಂದಿದೆ. ಸ್ವಲ್ಪ ಸಮಯದ ಹಿಂದೆ, ಮಹಾರಾಷ್ಟ್ರದ ರೈತರು ಸೇರಿದಂತೆ ಪಿಎಂ-ಕುಸುಮ್ ಯೋಜನೆಯ ಹಲವಾರು ರೈತ ಫಲಾನುಭವಿಗಳೊಂದಿಗೆ ನಾನು ಮಾತನಾಡಿದೆ, ಅವರು ಹಂಚಿಕೊಂಡ ಅನುಭವಗಳು ಬಹಳ ಉತ್ತೇಜನಕಾರಿಯಾಗಿದ್ದವು. ಸೌರಶಕ್ತಿಯಿಂದ ಉಚಿತ ವಿದ್ಯುತ್ ಅವರಿಗೆ ದೊಡ್ಡ ವರದಾನವಾಗಿದೆ ಎಂಬುದು ಸಾಬೀತಾಗಿದೆ.

ಸ್ನೇಹಿತರೆ,

ಇಂದು ಭಾರತವು ಅಭಿವೃದ್ಧಿಗಾಗಿ ವೇಗವಾಗಿ ಕೆಲಸ ಮಾಡುತ್ತಿದೆ, ರಾಜಸ್ಥಾನವೂ ಇದರಲ್ಲಿ ದೊಡ್ಡ ಪಾತ್ರ ವಹಿಸಿದೆ. ಇಂದು ರಾಜಸ್ಥಾನದ ಜನರಿಗಾಗಿ 30,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಇಲ್ಲಿ ಪ್ರಾರಂಭಿಸಲಾಗಿದೆ. ನೀರು, ವಿದ್ಯುತ್ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಈ ಯೋಜನೆಗಳು ನಿಮ್ಮೆಲ್ಲರಿಗೂ ಸೌಲಭ್ಯಗಳನ್ನು ಹೆಚ್ಚಿಸುತ್ತವೆ. ನಾನು ವಂದೇ ಭಾರತ್ ಸೇರಿದಂತೆ 3 ಹೊಸ ರೈಲುಗಳಿಗೂ ಹಸಿರುನಿಶಾನೆ ತೋರಿದ್ದೇನೆ. ಈ ಸಮಯದಲ್ಲಿ, ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರಮುಖ ಅಭಿಯಾನವೂ ನಡೆಯುತ್ತಿದೆ. ಈ ಪ್ರಯತ್ನದ ಭಾಗವಾಗಿ, ಇಂದು ರಾಜಸ್ಥಾನದ 15,000 ಯುವಕರು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಈ ಎಲ್ಲಾ ಯುವಕರಿಗೆ ಅವರ ಜೀವನದ ಈ ಹೊಸ ಪ್ರಯಾಣಕ್ಕಾಗಿ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ರಾಜಸ್ಥಾನದ ಜನರನ್ನು ಸಹ ಅಭಿನಂದಿಸುತ್ತೇನೆ.

 

ಸ್ನೇಹಿತರೆ,

ಇಂದು ರಾಜಸ್ಥಾನದ ಬಿಜೆಪಿ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ರಾಜಸ್ಥಾನವನ್ನು ಲೂಟಿ ಮಾಡುವ ಮೂಲಕ ಕಾಂಗ್ರೆಸ್ ಮಾಡಿದ ಗಾಯಗಳನ್ನು ನಮ್ಮ ಸರ್ಕಾರ ಗುಣಪಡಿಸುತ್ತಿದೆ. ರಾಜಸ್ಥಾನವು ಕಾಂಗ್ರೆಸ್ ಸರ್ಕಾರದಲ್ಲಿ ಸೋರಿಕೆಯ ಕೇಂದ್ರವಾಯಿತು. ಜಲಜೀವನ್ ಮಿಷನ್ ಅನ್ನು ಸಹ ಭ್ರಷ್ಟಾಚಾರದ ಬಲಿಪೀಠ ಮಾಡಲಾಯಿತು. ಮಹಿಳೆಯರ ಮೇಲಿನ ಅಪರಾಧಗಳು ಉತ್ತುಂಗದಲ್ಲಿತ್ತು ಮತ್ತು ಅತ್ಯಾಚಾರಿಗಳನ್ನು ರಕ್ಷಿಸಲಾಗುತ್ತಿತ್ತು. ಕಾಂಗ್ರೆಸ್ ಆಳ್ವಿಕೆಯಲ್ಲಿ ಬನ್ಸ್‌ವಾರಾ, ಡುಂಗರ್‌ಪುರ ಮತ್ತು ಪ್ರತಾಪ್‌ಗಢದಂತಹ ಪ್ರದೇಶಗಳಲ್ಲಿ ಅಪರಾಧ ಮತ್ತು ಅಕ್ರಮ ಮದ್ಯ ವ್ಯಾಪಾರ ಹೆಚ್ಚಾಯಿತು. ಆದರೆ ನೀವು ಇಲ್ಲಿ ಬಿಜೆಪಿಗೆ ಅವಕಾಶ ನೀಡಿದಾಗ, ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಿದ್ದೇವೆ, ಯೋಜನೆಗಳನ್ನು ವೇಗಗೊಳಿಸಿದ್ದೇವೆ ಮತ್ತು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಇಂದು, ರಾಜಸ್ಥಾನದಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ಇಂದು ಬಿಜೆಪಿ ಸರ್ಕಾರವು ರಾಜಸ್ಥಾನವನ್ನು, ವಿಶೇಷವಾಗಿ ದಕ್ಷಿಣ ರಾಜಸ್ಥಾನವನ್ನು ತ್ವರಿತ ಅಭಿವೃದ್ಧಿಯ ಹಾದಿಯಲ್ಲಿ ಇರಿಸುತ್ತಿದೆ.

ಸ್ನೇಹಿತರೆ,

ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ. ಅವರು ನಮಗೆ ಅಂತ್ಯೋದಯ ತತ್ವವನ್ನು ನೀಡಿದರು. ಅಂತ್ಯೋದಯ ಎಂದರೆ ಸಮಾಜದ ಕೊನೆಯ ಮೆಟ್ಟಿಲುಗಳ ಮೇಲೆ ನಿಂತಿರುವ ವ್ಯಕ್ತಿಯ ಉನ್ನತಿ. ಅವರ ದೃಷ್ಟಿಕೋನ ಇಂದು ನಮ್ಮ ಧ್ಯೇಯವಾಗಿದೆ. ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ನಾವು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇವೆ. 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್' ಎಂಬ ಮಂತ್ರದಿಂದ ಮಾರ್ಗದರ್ಶನ ಪಡೆದು ನಾವು ಮುಂದುವರಿಯುತ್ತಿದ್ದೇವೆ.

 

ಸ್ನೇಹಿತರೆ,

ಕಾಂಗ್ರೆಸ್ ಸದಾ ಬುಡಕಟ್ಟು ಸಮುದಾಯವನ್ನು ನಿರ್ಲಕ್ಷಿಸಿದೆ, ಅವರ ಅಗತ್ಯಗಳನ್ನು ಎಂದಿಗೂ ಅರ್ಥ ಮಾಡಿಕೊಳ್ಳಲಿಲ್ಲ. ಬುಡಕಟ್ಟು ಕಲ್ಯಾಣಕ್ಕೆ ಆದ್ಯತೆ ನೀಡಿ, ಅದಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದು ಬಿಜೆಪಿ ಸರ್ಕಾರ. ಅಟಲ್ ಅವರ ಸರ್ಕಾರ ಬಂದಾಗ, ಬುಡಕಟ್ಟು ಸಚಿವಾಲಯವನ್ನು ಮೊದಲ ಬಾರಿಗೆ ಸ್ಥಾಪಿಸಲಾಯಿತು. ಅದಕ್ಕೂ ಮೊದಲು, ದಶಕಗಳು ಕಳೆದವು, ಮಹಾನ್ ನಾಯಕರು ಬಂದು ಹೋದರು, ಆದರೆ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಿಲ್ಲ. ಅಟಲ್ ಜಿ ಬಂದಾಗ ಮಾತ್ರ ಅದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಭವಿಸಿತು. ಕಾಂಗ್ರೆಸ್ ಯುಗದಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ ಅಂತಹ ದೊಡ್ಡ ಯೋಜನೆಗಳನ್ನು ಯಾರೂ ಊಹಿಸಲೂ ಸಾಧ್ಯವಾಗಲಿಲ್ಲ! ಆದರೆ ಬಿಜೆಪಿ ಸರ್ಕಾರದಲ್ಲಿ, ಇದೆಲ್ಲವೂ ಸಾಧ್ಯವಾಗಿದೆ. ಇತ್ತೀಚೆಗೆ, ನಾವು ಮಧ್ಯಪ್ರದೇಶದ ಧಾರ್‌ನಲ್ಲಿ ಬೃಹತ್ ಪಿಎಂ ಮಿತ್ರ ಪಾರ್ಕ್ ಪ್ರಾರಂಭಿಸಿದ್ದೇವೆ, ಇದು ಬುಡಕಟ್ಟು ಪ್ರದೇಶವೂ ಆಗಿದೆ. ಇದು ಬುಡಕಟ್ಟು ರೈತರಿಗೆ, ವಿಶೇಷವಾಗಿ ಹತ್ತಿ ಬೆಳೆಯುವ ರೈತರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ಬಿಜೆಪಿಯ ಪ್ರಯತ್ನಗಳಿಂದಾಗಿ ಇಂದು ಬಡ ಬುಡಕಟ್ಟು ಕುಟುಂಬದ ಮಗಳು, ಗೌರವಾನ್ವಿತ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಯಾಗಿದ್ದಾರೆ. ಅತ್ಯಂತ ವಂಚಿತ ಮತ್ತು ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ ವಿಷಯವನ್ನು ಸ್ವತಃ ರಾಷ್ಟ್ರಪತಿ ಮುರ್ಮು ಅವರೇ ಎತ್ತಿದರು. ಅವರಿಂದ ಪ್ರೇರಿತರಾಗಿ, ನಾವು ಪ್ರಧಾನ ಮಂತ್ರಿ ಜನ್ಮನ್ ಯೋಜನೆ ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ, ಅತ್ಯಂತ ನಿರ್ಲಕ್ಷಿತ ಬುಡಕಟ್ಟು ಗುಂಪುಗಳಿಗೂ ಆದ್ಯತೆ ನೀಡಲಾಗುತ್ತಿದೆ. ಇಂದು ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನದಡಿ ಬುಡಕಟ್ಟು ಗ್ರಾಮಗಳನ್ನು ಆಧುನೀಕರಿಸಲಾಗುತ್ತಿದೆ. ಜನರು ಭಗವಾನ್ ಬಿರ್ಸಾ ಮುಂಡಾ ಅವರನ್ನು ಧರ್ತಿ ಆಬಾ ಎಂದು ತಿಳಿದಿದ್ದಾರೆ. ಈ ಅಭಿಯಾನವು 5 ಕೋಟಿಗೂ ಹೆಚ್ಚು ಬುಡಕಟ್ಟು ಜನರಿಗೆ ಪ್ರಯೋಜನ ನೀಡುತ್ತದೆ. ದೇಶಾದ್ಯಂತ ನೂರಾರು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಅರಣ್ಯವಾಸಿಗಳು ಮತ್ತು ಪರಿಶಿಷ್ಟ ಪಂಗಡಗಳ ಅರಣ್ಯ ಹಕ್ಕುಗಳನ್ನು ಸಹ ನಾವು ಗುರುತಿಸಿದ್ದೇವೆ.

 

ಸ್ನೇಹಿತರೆ,

ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಸಾವಿರಾರು ವರ್ಷಗಳಿಂದ ಅರಣ್ಯ ಸಂಪನ್ಮೂಲಗಳನ್ನು ಬಳಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಈ ಅರಣ್ಯ ಸಂಪನ್ಮೂಲಗಳು ಅವರ ಪ್ರಗತಿಗೆ ಒಂದು ಸಾಧನವಾಗುವಂತೆ ನೋಡಿಕೊಳ್ಳಲು ನಾವು ವನ್ ಧನ್ ಯೋಜನೆ ಪ್ರಾರಂಭಿಸಿದ್ದೇವೆ. ಅರಣ್ಯ ಉತ್ಪನ್ನಗಳಿಗೆ ನಾವು ಗರಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ. ನಾವು ಬುಡಕಟ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಸಂಪರ್ಕಿಸಿದ್ದೇವೆ. ಇದರ ಪರಿಣಾಮವಾಗಿ, ದೇಶಾದ್ಯಂತ ಅರಣ್ಯ ಉತ್ಪನ್ನಗಳಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ.

ಸ್ನೇಹಿತರೆ,

ಬುಡಕಟ್ಟು ಸಮುದಾಯವು ಘನತೆಯಿಂದ ಬದುಕಲು ಅವಕಾಶ ಪಡೆಯುವುದೇ ನಮ್ಮ ಬದ್ಧತೆಯಾಗಿದೆ. ಅವರ ನಂಬಿಕೆ, ಅವರ ಸ್ವಾಭಿಮಾನ ಮತ್ತು ಅವರ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಗಂಭೀರ ಪ್ರತಿಜ್ಞೆಯಾಗಿದೆ.

ಸ್ನೇಹಿತರೆ,

ಸಾಮಾನ್ಯ ನಾಗರಿಕನ ಜೀವನ ಸುಲಭವಾದಾಗ, ಅವನು ಸ್ವತಃ ದೇಶದ ಪ್ರಗತಿಗೆ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ನಿಮಗೆ ನೆನಪಿರಬಹುದು, 11 ವರ್ಷಗಳ ಹಿಂದೆ ಕಾಂಗ್ರೆಸ್ ಯುಗದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅದು ಏಕೆ ಕೆಟ್ಟದಾಗಿತ್ತು? ಏಕೆಂದರೆ ಕಾಂಗ್ರೆಸ್ ಸರ್ಕಾರವು ದೇಶದ ಜನರನ್ನೇ ಶೋಷಿಸುವಲ್ಲಿ, ದೇಶದ ನಾಗರಿಕರನ್ನು ಲೂಟಿ ಮಾಡುವಲ್ಲಿ ತೊಡಗಿತ್ತು. ಆ ಸಮಯದಲ್ಲಿ, ತೆರಿಗೆಗಳು ಮತ್ತು ಹಣದುಬ್ಬರ ಎರಡೂ ಗಗನಕ್ಕೇರಿತ್ತು. ನೀವು ಮೋದಿಯನ್ನು ಆಶೀರ್ವದಿಸಿದಾಗ, ನಮ್ಮ ಸರ್ಕಾರವು ಕಾಂಗ್ರೆಸ್‌ನ ಲೂಟಿಯನ್ನು ಕೊನೆಗೊಳಿಸಿತು.

 

ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನವರು ನನ್ನ ಮೇಲೆ ಇಷ್ಟೊಂದು ಕೋಪಗೊಳ್ಳಲು ಇದೇ ಕಾರಣ.

ಸ್ನೇಹಿತರೆ,

2017ರಲ್ಲಿ ನಾವು ಜಿ ಎಸ್ ಟಿ ಜಾರಿಗೆ ತರುವ ಮೂಲಕ ದೇಶವನ್ನು ತೆರಿಗೆ ಮತ್ತು ಸುಂಕಗಳ ಜಂಜಡದಿಂದ ಮುಕ್ತಗೊಳಿಸಿದ್ದೇವೆ. ಈ ನವರಾತ್ರಿಯ ಮೊದಲ ದಿನದಿಂದಲೇ, ಜಿಎಸ್ಟಿಯಲ್ಲಿ ಮತ್ತೆ ಒಂದು ಪ್ರಮುಖ ಸುಧಾರಣೆ ಮಾಡಲಾಗಿದೆ. ಪರಿಣಾಮವಾಗಿ, ಇಂದು ಇಡೀ ದೇಶವು ಜಿ ಎಸ್ ಟಿ 'ಬಚಾಟ್' (ಉಳಿತಾಯ) ಹಬ್ಬ ಆಚರಿಸುತ್ತಿದೆ. ಮನೆಗಳಲ್ಲಿ ಬಳಸುವ ಹೆಚ್ಚಿನ ದೈನಂದಿನ ವಸ್ತುಗಳು ಅಗ್ಗವಾಗಿವೆ. ಇಲ್ಲಿ, ಅನೇಕ ತಾಯಂದಿರು ಮತ್ತು ಸಹೋದರಿಯರು ಒಟ್ಟುಗೂಡಿದ್ದಾರೆ. ನಾನು ಇಲ್ಲಿ ಜೀಪಿನಲ್ಲಿ ಬರುತ್ತಿದ್ದಾಗ, ಎಲ್ಲಾ ತಾಯಂದಿರು ಮತ್ತು ಸಹೋದರಿಯರು ತಮ್ಮ ಆಶೀರ್ವಾದ ಸುರಿಸುತ್ತಿದ್ದರು. ತಾಯಂದಿರು ಮತ್ತು ಸಹೋದರಿಯರಿಗೆ ಮನೆಯ ವೆಚ್ಚಗಳು ಕಡಿಮೆಯಾಗಿವೆ.

 

ಸ್ನೇಹಿತರೆ,

2014ರ ಮೊದಲು, ನೀವು ಸೋಪ್, ಶಾಂಪೂ, ಟೂತ್‌ಪೇಸ್ಟ್ ಅಥವಾ ಟೂತ್‌ಪೌಡರ್‌ನಂತಹ 100 ರೂಪಾಯಿ ಮೌಲ್ಯದ ದೈನಂದಿನ ವಸ್ತುಗಳನ್ನು ಖರೀದಿಸಿದರೆ, ನೀವು ತೆರಿಗೆ ಸೇರಿಸಿ 131 ರೂಪಾಯಿ ಪಾವತಿಸಬೇಕಾಗಿತ್ತು. ವಸ್ತುವಿನ ಬೆಲೆ 100 ರೂಪಾಯಿ, ಆದರೆ ನೀವು 131 ರೂಪಾಯಿ ಪಾವತಿಸಬೇಕಾಗಿತ್ತು. ನಾನು 2014ರ ಹಿಂದಿನ ಸಮಯದ ಬಗ್ಗೆ ಮಾತನಾಡುತ್ತಿದ್ದೇನೆ, ಇಂದಿನ "ಸ್ಟೇಟ್‌ಮೆಂಟ್ ಯೋಧರು" ಎಂದು ಕರೆಯಲ್ಪಡುವವರು ಎಲ್ಲಾ ರೀತಿಯ ಸುಳ್ಳುಗಳನ್ನು ಹರಡಿದರು. ಕಾಂಗ್ರೆಸ್ ಸರ್ಕಾರ 100 ರೂಪಾಯಿ ಖರೀದಿಗೆ 31 ರೂಪಾಯಿ ತೆರಿಗೆ ವಿಧಿಸುತ್ತಿತ್ತು. 2017ರಲ್ಲಿ, ನಾವು ಮೊದಲ ಬಾರಿಗೆ ಜಿ ಎಸ್ ಟಿ ಜಾರಿಗೆ ತಂದಾಗ, ಅದೇ 100 ರೂಪಾಯಿ ವಸ್ತು ಕೇವಲ 118 ರೂಪಾಯಿಗೆ ಲಭ್ಯವಾಯಿತು. ಅಂದರೆ, ಕಾಂಗ್ರೆಸ್ ಸರ್ಕಾರಕ್ಕೆ ಹೋಲಿಸಿದರೆ, ಬಿಜೆಪಿ ಸರ್ಕಾರದಲ್ಲಿ ಜನರು ಪ್ರತಿ 100 ರೂಪಾಯಿಯಲ್ಲಿ 13 ರೂಪಾಯಿ ಉಳಿಸಿದ್ದರು. ಈಗ, ಸೆಪ್ಟೆಂಬರ್ 22ರಂದು ನಾವು ಪರಿಚಯಿಸಿದ ಜಿ ಎಸ್ ಟಿ ಸುಧಾರಣೆಯ ನಂತರ, ಮೊದಲು 131 ರೂಪಾಯಿ ಬೆಲೆಯಿದ್ದ ಅದೇ 100 ರೂಪಾಯಿ ವಸ್ತುವು ಈಗ ಕೇವಲ 105 ರೂಪಾಯಿ ಮಾತ್ರ ವೆಚ್ಚವಾಗುತ್ತದೆ. ಕೇವಲ 5 ರೂಪಾಯಿ ತೆರಿಗೆ! 31 ರೂಪಾಯಿ ತೆರಿಗೆಯಿಂದ ಕೇವಲ 5 ರೂಪಾಯಿ ತೆರಿಗೆಗೆ ಇಳಿದಿದೆ! ಇದರರ್ಥ ಕಾಂಗ್ರೆಸ್ ಯುಗಕ್ಕೆ ಹೋಲಿಸಿದರೆ, ಇಂದು ನೀವು ಖರ್ಚು ಮಾಡುವ ಪ್ರತಿ 100 ರೂಪಾಯಿಯಲ್ಲಿ 26 ರೂಪಾಯಿ ಉಳಿಸುತ್ತಿದ್ದೀರಿ. ತಾಯಂದಿರು ಮತ್ತು ಸಹೋದರಿಯರು ಮಾಸಿಕ ಬಜೆಟ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ. ಈ ಲೆಕ್ಕಾಚಾರದ ಮೂಲಕ, ನೀವು ಈಗ ಪ್ರತಿ ತಿಂಗಳು ನೂರಾರು ರೂಪಾಯಿ ಉಳಿಸುತ್ತೀರಿ.

ಸ್ನೇಹಿತರೆ,

ಪಾದರಕ್ಷೆಗಳು ಎಲ್ಲರ ಅಗತ್ಯ. ಕಾಂಗ್ರೆಸ್ ಆಳ್ವಿಕೆಯಲ್ಲಿ, ನೀವು 500 ರೂಪಾಯಿ ಮೌಲ್ಯದ ಶೂ ಖರೀದಿಸಿದರೆ, ಅದು ನಿಮಗೆ 575 ರೂಪಾಯಿ ವೆಚ್ಚವಾಗುತ್ತಿತ್ತು. ಅಂದರೆ 500 ರೂಪಾಯಿ ಶೂಗೆ, ಕಾಂಗ್ರೆಸ್ 75 ರೂಪಾಯಿ ತೆರಿಗೆ ಸಂಗ್ರಹಿಸುತ್ತಿತ್ತು. ನಾವು ಜಿ ಎಸ್ ಟಿ  ಜಾರಿಗೆ ತಂದಾಗ, 15 ರೂಪಾಯಿ ತೆರಿಗೆ ಕಡಿಮೆ ಮಾಡಿದೆವು. ಈಗ, ಹೊಸ ಜಿ ಎಸ್ ಟಿ  ಸುಧಾರಣೆಯ ನಂತರ, ನೀವು ಅದೇ ಜೋಡಿ ಶೂಗಳ ಮೇಲೆ ಇನ್ನೂ 50 ರೂಪಾಯಿ ಉಳಿಸುತ್ತೀರಿ. ಇದಕ್ಕೂ ಮೊದಲು, 500 ರೂಪಾಯಿಗಿಂತ ಹೆಚ್ಚಿನ ಬೆಲೆಯ ಶೂಗಳು ಇನ್ನೂ ಹೆಚ್ಚಿನ ತೆರಿಗೆ ಆಕರ್ಷಿಸುತ್ತಿದ್ದವು. ನಾವು ಆ 500 ರೂಪಾಯಿ ತೆರಿಗೆ ಶ್ರೇಣಿ ತೆಗೆದುಹಾಕಿದ್ದೇವೆ. ಈಗ, ಕೇವಲ 500 ರೂಪಾಯಿವರೆಗೆ ತೆರಿಗೆ ವಿಧಿಸುವ ಬದಲು, ನಾವು ತೆರಿಗೆ ಶ್ರೇಣಿಯನ್ನು 2,500 ರೂಪಾಯಿವರೆಗೆ ಕಡಿಮೆ ಮಾಡಿದ್ದೇವೆ.

 

ಸ್ನೇಹಿತರೆ,

ಸಾಮಾನ್ಯ ಕುಟುಂಬವು ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಹೊಂದುವ ಕನಸು ಕಾಣುತ್ತದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ, ಇದು ಕೂಡ ಹೊರೆಯಾಗಿತ್ತು. 60,000 ರೂಪಾಯಿ ಬೈಕ್‌ಗೆ, ಕಾಂಗ್ರೆಸ್ 19,000 ರೂಪಾಯಿಗಿಂತ ಹೆಚ್ಚು ತೆರಿಗೆ ವಿಧಿಸುತ್ತಿತ್ತು. ಊಹಿಸಿ! 60,000 ರೂಪಾಯಿ ಮೇಲೆ, 19,000 ರೂಪಾಯಿಗಿಂತ ಹೆಚ್ಚಿನ ತೆರಿಗೆ. 2017ರಲ್ಲಿ ನಾವು ಜಿ ಎಸ್ ಟಿ ಜಾರಿಗೆ ತಂದಾಗ, ಈ ತೆರಿಗೆಯನ್ನು 2,000–2,500 ರೂಪಾಯಿ ಕಡಿಮೆ ಮಾಡಿದೆವು. ಈಗ ಸೆಪ್ಟೆಂಬರ್ 22ರಂದು ಜಾರಿಗೆ ಬಂದ ಹೊಸ ಜಿ ಎಸ್ ಟಿ ದರಗಳ ನಂತರ, 60,000 ರೂಪಾಯಿ ಬೈಕ್ ಮೇಲಿನ ತೆರಿಗೆಯನ್ನು ಕೇವಲ 10,000 ರೂಪಾಯಿಗೆ ಇಳಿಸಲಾಗಿದೆ. 2014ಕ್ಕೆ ಹೋಲಿಸಿದರೆ, ಇದರರ್ಥ ಸುಮಾರು 9,000 ರೂಪಾಯಿ ಲಾಭವಾಗುತ್ತದೆ.

ಸ್ನೇಹಿತರೆ,

ಕಾಂಗ್ರೆಸ್ ಆಳ್ವಿಕೆಯಲ್ಲಿ, ಮನೆ ಕಟ್ಟುವುದು ತುಂಬಾ ದುಬಾರಿಯಾಗಿತ್ತು. 300 ರೂಪಾಯಿ ಸಿಮೆಂಟ್ ಚೀಲದ ಮೇಲೆ, ಕಾಂಗ್ರೆಸ್ ಸರ್ಕಾರ 90 ರೂಪಾಳಿಗಿಂತ ಹೆಚ್ಚು ತೆರಿಗೆ ವಿಧಿಸುತ್ತಿತ್ತು. 2017ರಲ್ಲಿ ಜಿ ಎಸ್ ಟಿ ಬಂದ ನಂತರ, ಇದನ್ನು ಸುಮಾರು 10 ರೂಪಾಯಿ ಕಡಿಮೆ ಮಾಡಲಾಗಿದೆ. ಈಗ ಸೆಪ್ಟೆಂಬರ್ 22ರಂದು ನಾವು ಮಾಡಿದ ಜಿ ಎಸ್ ಟಿ ಸುಧಾರಣೆಯೊಂದಿಗೆ, ಅದೇ ಸಿಮೆಂಟ್ ಚೀಲದ ಮೇಲಿನ ಜಿ ಎಸ್ ಟಿ ಕೇವಲ 50 ರೂಪಾಯಿಗೆ ತಗ್ಗಿದೆ. ಅಂದರೆ, 2014ಕ್ಕೆ ಹೋಲಿಸಿದರೆ, ಇಂದು ಪ್ರತಿ ಸಿಮೆಂಟ್ ಚೀಲದ ಮೇಲೆ 40 ರೂಪಾಯಿ ಉಳಿತಾಯವಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಾಂಗ್ರೆಸ್ ಆಡಳಿತದಲ್ಲಿ ಕೇವಲ ಲೂಟಿ, ಇಂದು ಬಿಜೆಪಿ ಸರ್ಕಾರದಲ್ಲಿ ಕೇವಲ ಉಳಿತಾಯ. ಅದಕ್ಕಾಗಿಯೇ ಇಡೀ ದೇಶವು ಜಿ ಎಸ್ ಟಿ ಉಳಿತಾಯ ಹಬ್ಬ ಆಚರಿಸುತ್ತಿದೆ.

 

ಸಹೋದರ ಸಹೋದರಿಯರೆ,

ಜಿ ಎಸ್ ಟಿ ಉಳಿತಾಯ ಹಬ್ಬ ನಡೆಯುತ್ತಿರುವಾಗ, ನಮಗೆ ಇನ್ನೊಂದು ಗುರಿಯೂ ಇದೆ, ಅದು 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ). ನಾವು ಇತರರ ಮೇಲೆ ಅವಲಂಬಿತರಾಗಬಾರದು ಎಂಬುದು ಈಗ ಬಹಳ ಅವಶ್ಯಕವಾಗಿದೆ, ಇದಕ್ಕೆ ಮಾರ್ಗವು ಸ್ವದೇಶಿಯ ಮಂತ್ರದಲ್ಲಿದೆ. ಆದ್ದರಿಂದ, ನಾವು ಸ್ವದೇಶಿಯ ಮಂತ್ರವನ್ನು ಎಂದಿಗೂ ಮರೆಯಬಾರದು. ನಾನು ನಿಮ್ಮೆಲ್ಲರಿಗೂ ಮತ್ತು ರಾಜಸ್ಥಾನದಾದ್ಯಂತ ಮತ್ತು ನನ್ನ ಮಾತನ್ನು ಕೇಳುತ್ತಿರುವ ದೇಶದ ಪ್ರತಿಯೊಂದು ಮೂಲೆಗೂ, ವಿಶೇಷವಾಗಿ ನನ್ನ ವರ್ತಕರು ಮತ್ತು ವ್ಯಾಪಾರಿ ಸ್ನೇಹಿತರಿಗೆ ಮನವಿ ಮಾಡುತ್ತೇನೆ. ನಾವು ಏನೇ ಮಾರಾಟ ಮಾಡಿದರೂ ಅದು ಸ್ವದೇಶಿಯಾಗಿರಬೇಕು. ನಾನು ನನ್ನ ನಾಗರಿಕರಿಗೂ ಮನವಿ ಮಾಡುತ್ತೇನೆ, ನಾವು ಏನೇ ಖರೀದಿಸಿದರೂ ಅದು ಸ್ವದೇಶಿಯಾಗಿರಬೇಕು. ನಾವು ವ್ಯಾಪಾರಿಯನ್ನು ಕೇಳಬೇಕು, "ಸಹೋದರ, ಇದು ಸ್ವದೇಶಿಯೇ ಅಥವಾ ಇಲ್ಲವೇ?" ಸ್ವದೇಶಿಯ ಬಗ್ಗೆ ನನ್ನ ವ್ಯಾಖ್ಯಾನ ತುಂಬಾ ಸರಳವಾಗಿದೆ: ಕಂಪನಿ ಯಾವುದೇ ದೇಶಕ್ಕೆ ಸೇರಿರಬಹುದು, ಬ್ರ್ಯಾಂಡ್ ಯಾವುದೇ ದೇಶಕ್ಕೆ ಸೇರಿರಬಹುದು, ಆದರೆ ಉತ್ಪನ್ನವು ಭಾರತದಲ್ಲಿ ತಯಾರಿಸಲ್ಪಡಬೇಕು, ನಮ್ಮ ಯುವಕರ ಕಠಿಣ ಪರಿಶ್ರಮದಿಂದ ತಯಾರಾಗಿದೆ, ನಮ್ಮ ಜನರ ಬೆವರು ಮತ್ತು ಪರಿಮಳದಿಂದ ತುಂಬಿದೆ, ನಮ್ಮ ಮಣ್ಣಿನ ಸಾರದಿಂದ ತುಂಬಿದೆ. ನನಗೆ, ಅದು ಸ್ವದೇಶಿ. ಅದಕ್ಕಾಗಿಯೇ ನಾನು ಎಲ್ಲಾ ವ್ಯಾಪಾರಿಗಳಿಗೆ ಹೇಳುತ್ತೇನೆ. ನಿಮ್ಮ ಅಂಗಡಿಗಳಲ್ಲಿ ಹೆಮ್ಮೆಯಿಂದ ಹೇಳುವ ಫಲಕ  ಹಾಕಿ: "ಇದು ಸ್ವದೇಶಿ." ನೀವು ಸ್ವದೇಶಿ ಖರೀದಿಸಿದಾಗ, ಆ ಹಣವು ನಮ್ಮ ಸ್ವಂತ ದೇಶದ ಕುಶಲಕರ್ಮಿ, ಕೆಲಸಗಾರ, ವ್ಯಾಪಾರಿಗೆ ಹೋಗುತ್ತದೆ. ಆ ಹಣ ವಿದೇಶಕ್ಕೆ ಹೋಗುವುದಿಲ್ಲ; ಅದು ರಾಷ್ಟ್ರದ ಅಭಿವೃದ್ಧಿಗಾಗಿ ಇಲ್ಲಿ ಉಳಿಯುತ್ತದೆ. ಅದು ಹೊಸ ಹೆದ್ದಾರಿಗಳು, ಹೊಸ ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಬಡವರಿಗೆ ಮನೆಗಳನ್ನು ನಿರ್ಮಿಸುತ್ತದೆ.

ಆದ್ದರಿಂದ, ಸ್ನೇಹಿತರೆ,

ನಾವು ಸ್ವದೇಶಿಯನ್ನು ನಮ್ಮ ಹೆಮ್ಮೆಯನ್ನಾಗಿ ಮಾಡಬೇಕು. ಈ ಹಬ್ಬದ ಹಂಗಾಮಿನಲ್ಲಿ, ಸ್ವದೇಶಿ ವಸ್ತುಗಳನ್ನು ಮಾತ್ರ ಖರೀದಿಸುವ ಸಂಕಲ್ಪ ಸ್ವೀಕರಿಸುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಈ ಸಂಕಲ್ಪದೊಂದಿಗೆ ಮತ್ತೊಮ್ಮೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬು ಧನ್ಯವಾದಗಳು! ಪೂರ್ಣ ಶಕ್ತಿಯಿಂದ ನನ್ನೊಂದಿಗೆ ಹೇಳಿ: ಭಾರತ್ ಮಾತಾ ಕಿ ಜೈ! ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಭಾರತ ಮಾತೆಗೆ ನಮಸ್ಕಾರ ಮಾಡಿ. ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s PC exports double in a year, US among top buyers

Media Coverage

India’s PC exports double in a year, US among top buyers
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives due to a mishap in the Anjaw district of Arunachal Pradesh
December 11, 2025
PM announces ex-gratia from PMNRF

Prime Minister Shri Narendra Modi today condoled the loss of lives due to a mishap in the Anjaw district of Arunachal Pradesh. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Distressed by the loss of lives due to a mishap in the Anjaw district of Arunachal Pradesh. My thoughts are with those who have lost their loved ones. I pray for the speedy recovery of those injured.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”