ಈ ಅಭಿಯಾನದ ಅಡಿಯಲ್ಲಿ ನಮ್ಮ ವಿಜ್ಞಾನಿಗಳ ತಂಡವು ಪ್ರಯೋಗಾಲಯದಿಂದ ಭೂಮಿಗೆ ಹೋಗಿ ರೈತರಿಗೆ ಆಧುನಿಕ ಕೃಷಿಯ ಬಗ್ಗೆ ಎಲ್ಲಾ ದತ್ತಾಂಶಗಳೊಂದಿಗೆ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಋುತುಮಾನ ಪ್ರಾರಂಭವಾಗುವ ಮೊದಲು ರೈತರಿಗೆ ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
ಈ ಅಭಿಯಾನವು ಭಾರತೀಯ ಕೃಷಿಯನ್ನು ವಿಕಸಿತ ಭಾರತದ ಮುಖ್ಯ ಆಧಾರವನ್ನಾಗಿ ಮಾಡಲು ಸಂಕಲ್ಪ ಮಾಡುತ್ತದೆ: ಪ್ರಧಾನಮಂತ್ರಿ
ಭಾರತವು ತನ್ನದೇ ಆದ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕ ಆಹಾರ ಪೂರೈಕೆದಾರನಾಗಿ ಹೊರಹೊಮ್ಮಬೇಕು: ಪ್ರಧಾನಮಂತ್ರಿ
ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಕೃಷಿಯಲ್ಲಿಆಧುನೀಕರಣಕ್ಕೆ ಚಾಲನೆ ನೀಡುವ ರೈತರಿಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ: ಪ್ರಧಾನಮಂತ್ರಿ

ಜೈ ಜಗನ್ನಾಥ್!

ಇಂದು, ಜಗನ್ನಾಥನ ಆಶೀರ್ವಾದದೊಂದಿಗೆ, ದೇಶದ ರೈತರಿಗಾಗಿ ಒಂದು ದೊಡ್ಡ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ‘ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ’ವು (ಅಭಿವೃದ್ಧಿ ಹೊಂದಿದ ಕೃಷಿ ಸಂಕಲ್ಪ ಅಭಿಯಾನ) ತನ್ನದೇ ಆದ ವಿಶಿಷ್ಟ ಉಪಕ್ರಮವಾಗಿದೆ. ಮುಂಗಾರು ಸಮೀಪಿಸುತ್ತಿದೆ, ಖಾರಿಫ್ ಋತುವಿನ ಸಿದ್ಧತೆಗಳು ನಡೆಯುತ್ತಿವೆ, ಮತ್ತು ಮುಂದಿನ 12 ರಿಂದ 15 ದಿನಗಳಲ್ಲಿ, ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳು ಮತ್ತು ಪ್ರಗತಿಪರ ರೈತರನ್ನು ಒಳಗೊಂಡ 2,000 ಕ್ಕೂ ಹೆಚ್ಚು ತಂಡಗಳು ದೇಶಾದ್ಯಂತ ಗ್ರಾಮಗಳಿಗೆ ಭೇಟಿ ನೀಡಲಿವೆ. ಈ ತಂಡಗಳು 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಕ್ಷಾಂತರ ರೈತರನ್ನು ತಲುಪಲಿವೆ. ಈ ಭವ್ಯವಾದ ಅಭಿಯಾನ, ಮಹತ್ವಾಕಾಂಕ್ಷಿ ಕಾರ್ಯಕ್ರಮ ಮತ್ತು ಭಾರತೀಯ ಕೃಷಿಯ ಉಜ್ವಲ ಭವಿಷ್ಯಕ್ಕಾಗಿ ದೇಶದ ಎಲ್ಲಾ ರೈತರಿಗೂ ಮತ್ತು ಈ ತಂಡಗಳ ಎಲ್ಲಾ ಸದಸ್ಯರಿಗೂ ನನ್ನ ಶುಭ ಹಾರೈಕೆಗಳು.

ಸ್ನೇಹಿತರೇ,

ನಮ್ಮ ದೇಶದಲ್ಲಿ ಕೃಷಿಯು ಸಾಂಪ್ರದಾಯಿಕವಾಗಿ ರಾಜ್ಯದ ವಿಷಯವಾಗಿದೆ. ಪ್ರತಿಯೊಂದು ರಾಜ್ಯವು ತನ್ನದೇ ಆದ ಕೃಷಿ ನೀತಿಗಳನ್ನು ರೂಪಿಸುತ್ತದೆ ಮತ್ತು ತನ್ನ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇಂದಿನ ಕ್ಷಿಪ್ರವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಭಾರತೀಯ ಕೃಷಿಗೆ ಸಮಗ್ರ ಸುಧಾರಣೆಗಳನ್ನು ತರುವ ಅವಶ್ಯಕತೆಯಿದೆ. ನಮ್ಮ ರೈತರು ದಾಖಲೆಯ ಇಳುವರಿಯನ್ನು ಉತ್ಪಾದಿಸುವ ಮೂಲಕ ಆಹಾರ ಭಂಡಾರವನ್ನು ತುಂಬಿದ್ದಾರೆ. ಆದಾಗ್ಯೂ, ಮಾರುಕಟ್ಟೆಗಳು ವಿಕಸನಗೊಳ್ಳುತ್ತಿವೆ ಮತ್ತು ಗ್ರಾಹಕರ ಆದ್ಯತೆಗಳು ಬದಲಾಗುತ್ತಿವೆ. ಆದ್ದರಿಂದ, ರೈತರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಭಾರತೀಯ ಕೃಷಿಯನ್ನು ಆಧುನೀಕರಿಸುವುದು ಗುರಿಯಾಗಿದೆ, ಮತ್ತು ಅದಕ್ಕಾಗಿ, ಈ ಅಭಿಯಾನವು ರೈತರೊಂದಿಗೆ ನೇರ ಚರ್ಚೆಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನದ ಅಡಿಯಲ್ಲಿ, ನಮ್ಮ ವಿಜ್ಞಾನಿಗಳ ತಂಡಗಳು "ಪ್ರಯೋಗಾಲಯದಿಂದ ಭೂಮಿಗೆ" ಎಂಬ ಪರಿಕಲ್ಪನೆಯನ್ನು ದೊಡ್ಡ ಪ್ರಮಾಣದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿವೆ. ಅವರು ಅಂಕಿಅಂಶಗಳ ಆಧಾರದೊಂದಿಗೆ ಆಧುನಿಕ ಕೃಷಿ ಜ್ಞಾನವನ್ನು ರೈತರಿಗೆ ಒದಗಿಸುತ್ತಾರೆ ಮತ್ತು ಋತು ಆರಂಭವಾಗುವ ಮೊದಲು ಅವರಿಗೆ ಬೆಂಬಲ ನೀಡುತ್ತಾರೆ.

ಸ್ನೇಹಿತರೇ,

ಕಳೆದ ಹಲವಾರು ದಶಕಗಳಿಂದ, ನಮ್ಮ ಕೃಷಿ ವಿಜ್ಞಾನಿಗಳು ಅಮೂಲ್ಯವಾದ ಸಂಶೋಧನೆಗಳನ್ನು ನಡೆಸಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಿದ್ದಾರೆ. ಮತ್ತೊಂದೆಡೆ, ನಮ್ಮ ಪ್ರಗತಿಪರ ರೈತರು ತಮ್ಮ ಸ್ವಂತ ಅನುಭವಗಳ ಮೂಲಕ ಕೃಷಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ—ಇಳುವರಿಯನ್ನು ಹೆಚ್ಚಿಸಿ ದೊಡ್ಡ ಯಶಸ್ಸನ್ನು ಗಳಿಸಿದ್ದಾರೆ. ವಿಜ್ಞಾನಿಗಳ ಯಶಸ್ವಿ ಸಂಶೋಧನೆಗಳು ಮತ್ತು ಪ್ರಗತಿಪರ ರೈತರ ಯಶಸ್ವಿ ವಿಧಾನಗಳು ನಮ್ಮ ಹೆಚ್ಚಿನ ಕೃಷಿ ಸಮುದಾಯವನ್ನು ತಲುಪಬೇಕು ಎಂಬುದು ಬಹಳ ಮುಖ್ಯ. ನೀವೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ, ಆದರೆ ಈಗ ಈ ಕೆಲಸವನ್ನು ಮತ್ತಷ್ಟು ಹುಮ್ಮಸ್ಸಿನಿಂದ ಮುಂದುವರಿಸುವ ಅಗತ್ಯವಿದೆ. ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವು ಇದನ್ನು ಸಾಧಿಸಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಸ್ನೇಹಿತರೇ,

‘ವಿಕಸಿತ ಭಾರತ’ಕ್ಕಾಗಿ (ಅಭಿವೃದ್ಧಿ ಹೊಂದಿದ ಭಾರತ) ಭಾರತೀಯ ಕೃಷಿಯು ಸಹ ಅಭಿವೃದ್ಧಿ ಹೊಂದಬೇಕು. ಕೇಂದ್ರ ಸರ್ಕಾರವು ಅನೇಕ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದೆ: ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಹೇಗೆ ಸಿಗಬೇಕು? ಕೃಷಿ ಆರ್ಥಿಕತೆಯನ್ನು ಹೇಗೆ ಬಲಪಡಿಸಬಹುದು? ರಾಷ್ಟ್ರೀಯ ಅಗತ್ಯಗಳಿಗೆ ಅನುಗುಣವಾಗಿ ನಾವು ಹೇಗೆ ಬೆಳೆಗಳನ್ನು ಬೆಳೆಯಬಹುದು? ಭಾರತವು ತನ್ನ ಸ್ವಂತ ಆಹಾರ ಅಗತ್ಯಗಳನ್ನು ಪೂರೈಸುವುದಲ್ಲದೆ, ಜಾಗತಿಕ ಆಹಾರ ಪೂರೈಕೆದಾರನಾಗುವುದು ಹೇಗೆ? ಭಾರತವು ಆಹಾರದ ಬುಟ್ಟಿಯಾಗುವುದು ಹೇಗೆ? ಹವಾಮಾನ ಬದಲಾವಣೆಯ ಸವಾಲುಗಳನ್ನು ನಾವು ಹೇಗೆ ಎದುರಿಸಬಹುದು? ಕಡಿಮೆ ನೀರಿನಿಂದ ನಾವು ಹೆಚ್ಚು ಧಾನ್ಯಗಳನ್ನು ಹೇಗೆ ಉತ್ಪಾದಿಸಬಹುದು? ಹಾನಿಕಾರಕ ರಾಸಾಯನಿಕಗಳಿಂದ ನಾವು ಭೂ ತಾಯಿಯನ್ನು ಹೇಗೆ ರಕ್ಷಿಸಬಹುದು? ಕೃಷಿಯನ್ನು ನಾವು ಹೇಗೆ ಆಧುನೀಕರಿಸಬಹುದು? ವಿಜ್ಞಾನ ಮತ್ತು ತಂತ್ರಜ್ಞಾನವು ಕ್ಷೇತ್ರಗಳನ್ನು ಹೇಗೆ ತಲುಪಬಹುದು? ನಮ್ಮ ಸರ್ಕಾರವು ಕಳೆದ 10-11 ವರ್ಷಗಳಲ್ಲಿ ಈ ವಿಷಯಗಳ ಮೇಲೆ ವ್ಯಾಪಕವಾಗಿ ಕೆಲಸ ಮಾಡಿದೆ. ಈಗ, ಈ ಅಭಿಯಾನದ ಮೂಲಕ ರೈತರಲ್ಲಿ ಸಾಧ್ಯವಾದಷ್ಟು ಜಾಗೃತಿ ಮೂಡಿಸುವುದು ನಿಮ್ಮ ಕೆಲಸ.

ಸ್ನೇಹಿತರೇ,

ರೈತರಿಗೆ ಹೆಚ್ಚುವರಿ ಆದಾಯದ ಮೂಲಗಳನ್ನು ಒದಗಿಸುವುದು ಒಂದು ಮುಖ್ಯವಾದ ವಿಷಯವಾಗಿದೆ. ಉದಾಹರಣೆಗೆ, ತಮ್ಮ ಹೊಲದ ಬದುಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವುದು; ದೇಶದಲ್ಲಿ ನಡೆಯುತ್ತಿರುವ ಸಿಹಿ ಕ್ರಾಂತಿಯೊಂದಿಗೆ (ಜೇನು ಕೃಷಿ) ಹೆಚ್ಚಿನ ರೈತರನ್ನು ಬೆಸೆಯುವುದು; ಕೃಷಿ ತ್ಯಾಜ್ಯವನ್ನು, ಸಾಮಾನ್ಯವಾಗಿ ಕಸವೆಂದು ಪರಿಗಣಿಸಲಾಗುವ ವಸ್ತುಗಳನ್ನು, ಶಕ್ತಿಯನ್ನು ಉತ್ಪಾದಿಸಲು ಬಳಸುವುದು - ಇದರಿಂದ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯಾಗುತ್ತದೆ; ಯಾವ ಭೂಮಿಗೆ ಯಾವ ಸಿರಿಧಾನ್ಯ (ಶ್ರೀ ಅನ್ನ) ಸೂಕ್ತ ಎಂಬುದನ್ನು ಗುರುತಿಸುವುದು; ವಿವಿಧ ಕೃಷಿ ಉತ್ಪನ್ನಗಳಿಗೆ ಮೌಲ್ಯವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಪರಿಶೀಲಿಸುವುದು ಇತ್ಯಾದಿ. ಇಂದು, ಹಾಲು ನೀಡದ ಜಾನುವಾರುಗಳು ಸಹ ಗೋಬರ್ ಧನ್ ಯೋಜನೆಯ ಮೂಲಕ ಆದಾಯದ ಮೂಲವಾಗುತ್ತಿವೆ. ನಾವು ಈ ಎಲ್ಲಾ ವಿಷಯಗಳ ಕುರಿತು ನಮ್ಮ ರೈತ ಸಹೋದರ ಸಹೋದರಿಯರೊಂದಿಗೆ ಚರ್ಚಿಸಬೇಕು, ಅವರೊಂದಿಗೆ ಕುಳಿತುಕೊಂಡು ಅವರಿಗೆ ಸಮಗ್ರ ಮಾಹಿತಿಯನ್ನು ನೀಡಬೇಕು.

ಸ್ನೇಹಿತರೇ,

ಭಾರತೀಯ ಕೃಷಿಯನ್ನು ‘ವಿಕಸಿತ ಭಾರತ’ದ (ಅಭಿವೃದ್ಧಿ ಹೊಂದಿದ ಭಾರತ) ಬುನಾದಿಯನ್ನಾಗಿ ಮಾಡುವುದು ಒಂದು ದೊಡ್ಡ ಸಂಕಲ್ಪವಾಗಿದೆ. ನಿಮ್ಮ ಹಳ್ಳಿಗಳಿಗೆ ಭೇಟಿ ನೀಡುವ ವಿಜ್ಞಾನಿಗಳನ್ನು ನಮ್ಮೆಲ್ಲಾ ರೈತರು ಸಾಧ್ಯವಾದಷ್ಟು ಪ್ರಶ್ನೆಗಳನ್ನು ಕೇಳಬೇಕೆಂದು ನಾನು ವಿನಂತಿಸುತ್ತೇನೆ. ಮತ್ತು ವಿಜ್ಞಾನಿಗಳು ಹಾಗೂ ಅಧಿಕಾರಿಗಳಿಗೆ ನನ್ನ ಮನವಿ: ಇದು ಕೇವಲ ಸರ್ಕಾರದ ಕೆಲಸವಲ್ಲ - ಇದು ಒಂದು ರಾಷ್ಟ್ರೀಯ ಮಿಷನ್. ಇದನ್ನು ದೇಶಸೇವೆ ಮಾಡುವ ಮನೋಭಾವದಿಂದ ಸ್ವೀಕರಿಸಿ. ರೈತರ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಿ ಮತ್ತು ಅವರ ಅಮೂಲ್ಯವಾದ ಸಲಹೆಗಳನ್ನು ಸಹ ದಾಖಲಿಸಿಕೊಳ್ಳಿ. ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವು ನಮ್ಮ ‘ಅನ್ನದಾತರ’ (ಆಹಾರ ಒದಗಿಸುವವರ) ಪ್ರಗತಿಗೆ ಹೊಸ ದಾರಿಗಳನ್ನು ತೆರೆಯುತ್ತದೆ. ಈ ಆಶಯದೊಂದಿಗೆ, ನಾನು ಇಡೀ ತಂಡಕ್ಕೆ ಮತ್ತು ಎಲ್ಲಾ ರೈತರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi makes India stand tall

Media Coverage

PM Modi makes India stand tall
NM on the go

Nm on the go

Always be the first to hear from the PM. Get the App Now!
...
Prime Minister visits Dera Sachkhand Ballan
February 01, 2026

The Prime Minister, Shri Narendra Modi visited Dera Sachkhand Ballan, in Punjab, today. Shri Modi stated that it was a very special feeling to be at Dera Sachkhand Ballan on the Jayanti of Shri Guru Ravidass Maharaj Ji.

Shri Modi posted on X:

"It was a very special feeling to be at Dera Sachkhand Ballan on the Jayanti of Shri Guru Ravidass Maharaj Ji.”

“ਸ੍ਰੀ ਗੁਰੂ ਰਵਿਦਾਸ ਮਹਾਰਾਜ ਜੀ ਦੀ ਜਯੰਤੀ 'ਤੇ ਡੇਰਾ ਸੱਚਖੰਡ ਬੱਲਾਂ ਵਿਖੇ ਆਉਣਾ ਬਹੁਤ ਹੀ ਖ਼ਾਸ ਅਹਿਸਾਸ ਸੀ।”