"ಭಾರತದ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ಸೌರಾಷ್ಟ್ರ ತಮಿಳು ಸಂಗಮಂನಂತಹ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾವು ಸಾಕ್ಷಿಯಾಗಿದ್ದೇವೆ"
"ತಮಿಳು ಸೌರಾಷ್ಟ್ರ ಸಂಗಮವು ಸರ್ದಾರ್ ಪಟೇಲ್ ಮತ್ತು ಸುಬ್ರಮಣ್ಯ ಭಾರತಿ ಅವರ ದೇಶಭಕ್ತಿಯ ನಿರ್ಧಾರದ ಸಂಗಮವಾಗಿದೆ"
"ಭಾರತವು ತನ್ನ ವೈವಿಧ್ಯತೆಯನ್ನು ಒಂದು ವಿಶೇಷತೆಯನ್ನಾಗಿ ನೋಡುವ ದೇಶವಾಗಿದೆ"
"ನಾವು ಅದನ್ನು ತಿಳಿದುಕೊಂಡಾಗ, ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗಿ ನಮ್ಮನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಹೆಚ್ಚಾಗುತ್ತದೆ"
"ಸೌರಾಷ್ಟ್ರ ಮತ್ತು ತಮಿಳುನಾಡುಗಳ ಈ ಸಾಂಸ್ಕೃತಿಕ ಸಮ್ಮಿಳನ , ಪಶ್ಚಿಮ ಮತ್ತು ದಕ್ಷಿಣದ ನಡುವೆ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಹರಿವು"
"ಕಠಿಣ ಸಂದರ್ಭಗಳಲ್ಲಿಯೂ ಆವಿಷ್ಕಾರ ಮಾಡುವ ಶಕ್ತಿ ಭಾರತಕ್ಕೆ ಇದೆ"

ವಣಕ್ಕಂ ಸೌರಾಷ್ಟ್ರ! ವಣಕ್ಕಂ ತಮಿಳುನಾಡು!

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರೇ, ನಾಗಾಲ್ಯಾಂಡ್ ರಾಜ್ಯಪಾಲರಾದ ಶ್ರೀ ಲಾ ಗಣೇಶನ್ ಅವರೇ, ಜಾರ್ಖಂಡ್ ರಾಜ್ಯಪಾಲ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರೇ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಪುರುಷೋತ್ತಮ ರೂಪಾಲಾ ಅವರೇ, ಎಲ್. ಮುರುಗನ್ ಅವರೇ ಮತ್ತು ಮೀನಾಕ್ಷಿ ಲೇಖಿ ಅವರೇ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಸೌರಾಷ್ಟ್ರ ತಮಿಳು ಸಂಗಮಂ, ನಿಗಳ್-ಚಿಯಿಲ್, ಪಂಗೋರ್-ಕ ವಂದಿರುಕ್ಕುಮ್, ತಮಿಳಾಗ್ ಸೊಂದರಂಗಳ್ ಅನೈವರಿಯುಮ್,  ವರುಗಾ ವರುಗ ಎನ್ ವರವೇರಕಿರೆನ್. ಉಂಗಳ್ ಅನೈವರೈಯುಮ್, ಗುಜರಾತ್ ಮಣ್ಣಿಲ್, ಇಂಡ್ರು,  ಸಂದಿತ್ತದಿಲ್ ಪೆರು ಮಗಿಳ್ಚಿ. (सौराष्ट्र तमिळ् संगमम्, निगळ्-चियिल्, पंगेर्-क वन्दिरुक्कुम्, तमिळग सोन्दन्गळ् अनैवरैयुम्, वरुग वरुग एन वरवेरकिरेन्। उन्गळ् अनैवरैयुम्, गुजरात मण्णिल्, इंड्रु, संदित्तदिल् पेरु मगिळ्ची।)

ಸ್ನೇಹಿತರೇ,

ಆತಿಥ್ಯದ ಆನಂದವು ಬಹಳ ವಿಶಿಷ್ಟವಾಗಿರುತ್ತದೆ ಎಂಬುದು ನಿಜ. ಆದರೆ, ಯಾರಾದರೂ ವರ್ಷಗಳ ನಂತರ ಮನೆಗೆ ಮರಳಿದಾಗ, ಆ ಸಂತೋಷ, ಉತ್ಸಾಹ ಮತ್ತು ಉಲ್ಲಾಸವು ಮತ್ತಷ್ಟು ವಿಭಿನ್ನವಾಗಿದೆ. ಇಂದು, ಸೌರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯು ತಮಿಳುನಾಡಿನಿಂದ ಬಂದಿರುವ ತಮ್ಮ ಸಹೋದರ ಸಹೋದರಿಯರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತಿದ್ದಾರೆ. ಇಂದು, ನಾನು ತಮಿಳುನಾಡಿನ ನನ್ನ ಆತ್ಮೀಯ ಮತ್ತು ಪ್ರೀತಿಪಾತ್ರರ ನಡುವೆ ಅದೇ ಸ್ಫೂರ್ತಿಯಿಂದ ವರ್ಚುವಲ್ ಆಗಿ ಹಾಜರಿದ್ದೇನೆ.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2010ರಲ್ಲಿ ಮದುರೈನಲ್ಲಿ ಇಂತಹ ಭವ್ಯ ಸೌರಾಷ್ಟ್ರ ಸಂಗಮವನ್ನು ಆಯೋಜಿಸಿದ್ದೆ. ಸೌರಾಷ್ಟ್ರದಿಂದ ನಮ್ಮ 50,000ಕ್ಕೂ ಹೆಚ್ಚು ಸಹೋದರ ಸಹೋದರಿಯರು ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಮತ್ತು ಇಂದು, ಅದೇ ವಾತ್ಸಲ್ಯ ಮತ್ತು ಅನ್ಯೋನ್ಯತೆಯ ಅಲೆಗಳು ಸೌರಾಷ್ಟ್ರದ ನೆಲದಲ್ಲಿ ಗೋಚರಿಸುತ್ತಿವೆ. ನೀವೆಲ್ಲರೂ ತಮಿಳುನಾಡಿನಿಂದ ನಿಮ್ಮ ಪೂರ್ವಜರ ನಾಡಿಗೆ, ನಿಮ್ಮ ಮನೆಗಳಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಮುಖದಲ್ಲಿನ ಸಂತಸವನ್ನು ನೋಡಿ, ನೀವು ಇಲ್ಲಿಂದ ಬಹಳಷ್ಟು ನೆನಪುಗಳನ್ನು ಮತ್ತು ಭಾವನಾತ್ಮಕ ಅನುಭವಗಳನ್ನು ಮರಳಿ ಪಡೆಯುತ್ತೀರಿ ಎಂದು ನಾನು ಹೇಳಬಲ್ಲೆ.

ನೀವು ಸೌರಾಷ್ಟ್ರದಲ್ಲಿ ಪ್ರವಾಸೋದ್ಯಮದ ಆನಂದವನ್ನು ಸಾಕಷ್ಟು ಅನುಭವಿಸಿದ್ದೀರಿ. ಸೌರಾಷ್ಟ್ರದಿಂದ ತಮಿಳುನಾಡಿನವರೆಗೆ ದೇಶವನ್ನು ಸಂಪರ್ಕಿಸುವ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯನ್ನೂ ನೀವು ನೋಡಿದ್ದೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗತಕಾಲದ ಅಮೂಲ್ಯ ನೆನಪುಗಳು, ವರ್ತಮಾನದ ಸಂಬಂಧ ಮತ್ತು ಅನುಭವ ಹಾಗೂ ಭವಿಷ್ಯದ ಸಂಕಲ್ಪಗಳು ಮತ್ತು ಪ್ರೇರಣೆಗಳನ್ನು 'ಸೌರಾಷ್ಟ್ರ-ತಮಿಳು ಸಂಗಮಂ' ನಲ್ಲಿ ನಾವು ನೋಡಬಹುದಾಗಿದೆ. ಈ ಅದ್ಭುತ ಕಾರ್ಯಕ್ರಮಕ್ಕಾಗಿ ನಾನು ಸೌರಾಷ್ಟ್ರ ಮತ್ತು ತಮಿಳುನಾಡಿನ ಎಲ್ಲ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು, ನಾವು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ 'ಸೌರಾಷ್ಟ್ರ-ತಮಿಳು ಸಂಗಮಂ' ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಕೆಲವು ತಿಂಗಳ ಹಿಂದಷ್ಟೇ ಬನಾರಸ್ ನಲ್ಲಿ 'ಕಾಶಿ-ತಮಿಳು ಸಂಗಮಂ' ಆಯೋಜಿಸಲಾಗಿತ್ತು, ಇದು ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿತ್ತು. ಅಂದಿನಿಂದ, ಇಂತಹ ಕಾರ್ಯಕ್ರಮಗಳ ಆಯೋಜನೆಯ ಅನೇಕ ಸ್ವಯಂಪ್ರೇರಿತ ಪ್ರಯತ್ನಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಾರಂಭಿಸಲಾಗಿದೆ. ಇಂದು ನಾವು ಸೌರಾಷ್ಟ್ರದ ಭೂಮಿಯಲ್ಲಿ ಮತ್ತೊಮ್ಮೆ ಭಾರತದ ಎರಡು ಪ್ರಾಚೀನ ವಾಹಿನಿಗಳ ಸಂಗಮಕ್ಕೆ ಸಾಕ್ಷಿಯಾಗುತ್ತಿದ್ದೇವೆ.

ಈ 'ಸೌರಾಷ್ಟ್ರ ತಮಿಳು ಸಂಗಮಂ' ಕಾರ್ಯಕ್ರಮ ಕೇವಲ ಗುಜರಾತ್ ಮತ್ತು ತಮಿಳುನಾಡಿನ ಸಂಗಮವಲ್ಲ. ಇದು ದೇವಿ ಮೀನಾಕ್ಷಿ ಮತ್ತು ಪಾರ್ವತಿ ದೇವಿಯ ರೂಪದಲ್ಲಿ 'ಶಕ್ತಿ' ಆರಾಧನೆಯ ಆಚರಣೆಯೂ ಆಗಿದೆ. ಇದು ಭಗವಾನ್ ಸೋಮನಾಥ ಮತ್ತು ಭಗವಾನ್ ರಾಮನಾಥನ ರೂಪದಲ್ಲಿ 'ಶಿವನ' ಅನುಭೂತಿಯ ಆಚರಣೆಯಾಗಿದೆ. ಈ ಸಂಗಮವು ನಾಗೇಶ್ವರ ಮತ್ತು ಸುಂದರೇಶ್ವರದ ಭೂಮಿಯ ಸಂಗಮವಾಗಿದೆ. ಇದು ಶ್ರೀ ಕೃಷ್ಣ ಮತ್ತು ಶ್ರೀ ರಂಗನಾಥನ ಭೂಮಿಯ ಸಂಗಮವಾಗಿದೆ. ಇದು ನರ್ಮದಾ ಮತ್ತು ವೈಗೈ ನದಿಗಳ ಸಂಗಮವಾಗಿದೆ. ಇದು ದಾಂಡಿಯಾ ಮತ್ತು ಕೋಲಾಟ್ಟಂ ಸಂಗಮವಾಗಿದೆ. ಇದು ದ್ವಾರಕಾ ಮತ್ತು ಮದುರೈನಂತಹ ಪವಿತ್ರ ನಗರಗಳ ಸಂಪ್ರದಾಯಗಳ ಸಂಗಮವಾಗಿದೆ. ಮತ್ತು ಈ 'ಸೌರಾಷ್ಟ್ರ-ತಮಿಳು ಸಂಗಮಂ' ಸರ್ದಾರ್ ಪಟೇಲ್ ಮತ್ತು ಸುಬ್ರಮಣ್ಯ ಭಾರತಿ ಅವರ ರಾಷ್ಟ್ರ ಪ್ರಥಮ ಸಂಕಲ್ಪದ ಸಂಗಮವಾಗಿದೆ. ನಾವು ಈ ಸಂಕಲ್ಪಗಳೊಂದಿಗೆ ಮುಂದುವರಿಯಬೇಕು. ಈ ಸಾಂಸ್ಕೃತಿಕ ಪರಂಪರೆಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ನಾವು ರಾಷ್ಟ್ರ ನಿರ್ಮಾಣಕ್ಕಾಗಿ ಮುಂದಡಿ ಇಡಬೇಕು.

ಸ್ನೇಹಿತರೇ,

ಭಾರತವು ತನ್ನ ವೈವಿಧ್ಯತೆಯನ್ನು ಒಂದು ವಿಶೇಷತೆಯಾಗಿ ನೋಡುವ ದೇಶವಾಗಿದೆ. ನಾವು ವೈವಿಧ್ಯತೆಯನ್ನು ಆಚರಿಸುವ ಜನರು. ನಾವು ವಿಭಿನ್ನ ಭಾಷೆಗಳು ಮತ್ತು ಉಪಭಾಷೆಗಳು, ವಿಭಿನ್ನ ಕಲೆಗಳು ಮತ್ತು ಪ್ರಕಾರಗಳನ್ನು ಆಚರಿಸುತ್ತೇವೆ. ನಮ್ಮ ನಂಬಿಕೆಯಿಂದ ಹಿಡಿದು ನಮ್ಮ ಆಧ್ಯಾತ್ಮಿಕತೆಯವರೆಗೆ, ಎಲ್ಲೆಡೆ ವೈವಿಧ್ಯತೆ ಇದೆ. ನಾವು ಶಿವನನ್ನು ಪೂಜಿಸುತ್ತೇವೆ, ಆದರೆ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿನ ಪೂಜಾ ವಿಧಾನವು ತನ್ನದೇ ಆದ ವೈವಿಧ್ಯತೆಗಳನ್ನು ಹೊಂದಿದೆ. ನಾವು ಬ್ರಹ್ಮನನ್ನು 'ಎಕೋ ಅಹಂ ಬಹುಸ್ಯಂ' ಎಂದು ವಿವಿಧ ರೂಪಗಳಲ್ಲಿ ಸಂಶೋಧಿಸಿ, ಪೂಜಿಸುತ್ತೇವೆ. 'ಗಂಗೆ ಚಾ ಯಮುನೆ ಚೈವಾ, ಗೋದಾವರಿ ಸರಸ್ವತಿ' ಎಂಬ ಮಂತ್ರಗಳಲ್ಲಿ ನಾವು ದೇಶದ ವಿವಿಧ ನದಿಗಳಿಗೆ ನಮಸ್ಕರಿಸುತ್ತೇವೆ.

ಈ ವೈವಿಧ್ಯತೆಯು ನಮ್ಮನ್ನು ವಿಭಜಿಸುವುದಿಲ್ಲ, ಆದರೆ ನಮ್ಮ ಬಂಧವನ್ನು, ನಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಏಕೆಂದರೆ, ನಮಗೆ ತಿಳಿದಿರುವಂತೆ, ವಿಭಿನ್ನ ವಾಹಿನಿ(ನದಿ)ಗಳು ಒಟ್ಟಿಗೆ ಸೇರಿದಾಗ, ಸಂಗಮ ಸೃಷ್ಟಿಯಾಗುತ್ತದೆ. ಆದ್ದರಿಂದ, ನದಿಗಳ ಸಂಗಮದಿಂದ ಹಿಡಿದು ಕುಂಭದಂತಹ ಕಾರ್ಯಕ್ರಮಗಳಲ್ಲಿ ವಿಚಾರಗಳ ಸಂಗಮದವರೆಗೆ ನಾವು ಶತಮಾನಗಳಿಂದ ಈ ಸಂಪ್ರದಾಯಗಳನ್ನು ಪೋಷಿಸುತ್ತಿದ್ದೇವೆ. ಇದು ಸಂಗಮದ ಶಕ್ತಿ, ಇದನ್ನು 'ಸೌರಾಷ್ಟ್ರ ತಮಿಳು ಸಂಗಮಂ' ಇಂದು ಹೊಸ ರೂಪದಲ್ಲಿ ಮುನ್ನಡೆಸುತ್ತಿದೆ. ಇಂದು, ದೇಶದ ಏಕತೆ ಅಂತಹ ದೊಡ್ಡ ಹಬ್ಬಗಳ ರೂಪದಲ್ಲಿ ರೂಪುಗೊಳ್ಳುತ್ತಿರುವಾಗ, ಸರ್ದಾರ್ ಸಾಹೇಬ್ ನಮ್ಮನ್ನು ಆಶೀರ್ವದಿಸುತ್ತಿರಬೇಕು. ಇದು ತಮ್ಮ ಜೀವನವನ್ನು ತ್ಯಾಗ ಮಾಡಿದ ಮತ್ತು 'ಏಕ ಭಾರತ ಶ್ರೇಷ್ಠ ಭಾರತ' ಕನಸು ಕಂಡ ದೇಶದ ಸಾವಿರಾರು ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳ ಈಡೇರಿಕೆಯಾಗಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ದೇಶವು 'ಪರಂಪರೆಯಲ್ಲಿ ಹೆಮ್ಮೆ' ಎಂಬ 'ಪಂಚ ಪ್ರಾಣ' (ಐದು ಪ್ರತಿಜ್ಞೆಗಳು) ಅನ್ನು ಜಾರಿಗೊಳಿಸಿದೆ. ನಾವು ಅದನ್ನು ಅರಿತಾಗ, ಗುಲಾಮಗಿರಿಯ ಮನಃಸ್ಥಿತಿಯಿಂದ ಮುಕ್ತರಾಗುವ ಮೂಲಕ ನಮ್ಮನ್ನು ನಾವು ಅರಿಯಲು ಪ್ರಯತ್ನಿಸಿದಾಗ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತಷ್ಟು ಹೆಚ್ಚಾಗುತ್ತದೆ! ಅದು 'ಕಾಶಿ ತಮಿಳು ಸಂಗಮಂ' ಆಗಿರಲಿ ಅಥವಾ 'ಸೌರಾಷ್ಟ್ರ ತಮಿಳು ಸಂಗಮಂ' ಆಗಿರಲಿ, ಈ ಕಾರ್ಯಕ್ರಮಗಳು ಆ ದಿಕ್ಕಿನಲ್ಲಿ ಪರಿಣಾಮಕಾರಿ ಆಂದೋಲನವಾಗುತ್ತಿವೆ.

ನೋಡಿ, ಗುಜರಾತ್ ಮತ್ತು ತಮಿಳುನಾಡಿನ ನಡುವೆ ಸಾಕಷ್ಟು ವಿಷಯಗಳಿವೆ, ಅದನ್ನು ಉದ್ದೇಶಪೂರ್ವಕವಾಗಿ ನಮ್ಮ ಜ್ಞಾನ ಪರಿದಿಯಿದ ಹೊರಗಿಡಲಾಗಿದೆ. ವಿದೇಶಿ ಆಕ್ರಮಣಗಳ ಅವಧಿಯಲ್ಲಿ ಸೌರಾಷ್ಟ್ರದಿಂದ ತಮಿಳುನಾಡಿಗೆ ವಲಸೆ ಬಂದ ಬಗ್ಗೆ ಸ್ವಲ್ಪ ಚರ್ಚೆಯು ಇತಿಹಾಸದ ಕೆಲವು ವಿದ್ವಾಂಸರಿಗೆ ಸೀಮಿತವಾಗಿತ್ತು. ಆದರೆ ಅದಕ್ಕೂ ಮುಂಚೆಯೇ, ಪೌರಾಣಿಕ ಕಾಲದಿಂದಲೂ ಈ ಎರಡು ರಾಜ್ಯಗಳ ನಡುವೆ ಆಳವಾದ ನಂಟಿದೆ. ಸೌರಾಷ್ಟ್ರ ಮತ್ತು ತಮಿಳುನಾಡು, ಪಶ್ಚಿಮ ಮತ್ತು ದಕ್ಷಿಣದ ಈ ಸಾಂಸ್ಕೃತಿಕ ಸಮ್ಮಿಲನವು ಸಾವಿರಾರು ವರ್ಷಗಳಿಂದ ಸಂಚಲನೆಯಲ್ಲಿರುವ ಹರಿವು.

ಸ್ನೇಹಿತರೇ,

ಇಂದು ನಾವು 2047ರ ಭಾರತದ ಗುರಿಗಳನ್ನು ಹೊಂದಿದ್ದೇವೆ. ಗುಲಾಮಗಿರಿಯ ಮತ್ತು ನಂತರದ ಏಳು ದಶಕಗಳ ಸವಾಲುಗಳು ಸಹ ನಮ್ಮಲ್ಲಿವೆ. ನಾವು ದೇಶವನ್ನು ಮುನ್ನಡೆಸಬೇಕು, ಆದರೆ ಈ ಹಾದಿಯಲ್ಲಿ, ನಮ್ಮನ್ನು ವಿಭಜಿಸುವ ಶಕ್ತಿಗಳು ಮತ್ತು ನಮ್ಮನ್ನು ದಾರಿತಪ್ಪಿಸುವ ಜನರು ಇರುತ್ತಾರೆ. ಆದರೆ, ಕಠಿಣ ಸಂದರ್ಭಗಳಲ್ಲಿಯೂ ಆವಿಷ್ಕಾರ ಮಾಡುವ ಶಕ್ತಿ ಭಾರತಕ್ಕೆ ಇದೆ, ಸೌರಾಷ್ಟ್ರ ಮತ್ತು ತಮಿಳುನಾಡಿನ ಹಂಚಿಕೆಯ ಇತಿಹಾಸವು ನಮಗೆ ಈ ಭರವಸೆಯನ್ನು ನೀಡುತ್ತದೆ.

ವಿದೇಶಿ ಆಕ್ರಮಣಕಾರರು ಭಾರತದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದನ್ನು ಸ್ಮರಿಸಿ. ದೇಶದ ಸಂಸ್ಕೃತಿ ಮತ್ತು ಗೌರವದ ಮೇಲೆ ನಡೆದ ಮೊದಲ ಪ್ರಮುಖ ದಾಳಿ ಸೋಮನಾಥದ ಮೇಲೆ ನಡೆದುದಾಗಿತ್ತು. ಶತಮಾನಗಳ ಹಿಂದೆ, ಇಂದಿನಂತೆ ಯಾವುದೇ ಸಂಪನ್ಮೂಲಗಳು ಇರಲಿಲ್ಲ. ಮಾಹಿತಿ ತಂತ್ರಜ್ಞಾನದ ಯುಗವಾಗಿರಲಿಲ್ಲ ಮತ್ತು ಪ್ರಯಾಣಿಸಲು ವೇಗದ ರೈಲುಗಳು ಮತ್ತು ವಿಮಾನಗಳು ಇರಲಿಲ್ಲ. ಆದರೆ, ನಮ್ಮ ಪೂರ್ವಜರಿಗೆ हिमालयात् समारभ्य, यावत् इन्दु सरोवरम्। तं देव-निर्मितं देशं, हिन्दुस्थानं प्रचक्षते॥ ಅಂದರೆ, ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಈ ಇಡೀ ದೇವಭೂಮಿಯು ನಮ್ಮ ಸ್ವಂತ ದೇಶ ಭಾರತವಾಗಿದೆ ಎಂಬುದು  ತಿಳಿದಿತ್ತು.  ಅದಕ್ಕಾಗಿಯೇ, ಹೊಸ ಭಾಷೆಗಳು, ಹೊಸ ಜನರು ಮತ್ತು ಹೊಸ ಪರಿಸರ ಇಷ್ಟು ದೂರದಲ್ಲಿ ಇರುತ್ತದೆ, ಹೀಗಾಗಿ ಅಲ್ಲಿ ಹೇಗೆ ವಾಸಿಸುವುದು ಎಂದು ಅವರು ಚಿಂತಿಸಲಿಲ್ಲ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ನಂಬಿಕೆ ಮತ್ತು ಅಸ್ಮಿತೆಯನ್ನು ರಕ್ಷಿಸಲು ಸೌರಾಷ್ಟ್ರದಿಂದ ತಮಿಳುನಾಡಿಗೆ ವಲಸೆ ಬಂದರು. ತಮಿಳುನಾಡಿನ ಜನರು ಅವರನ್ನು ಕೈಚಾಚಿ ಸ್ವಾಗತಿಸಿದರು ಮತ್ತು ಹೊಸ ಜೀವನಕ್ಕಾಗಿ ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದರು. 'ಏಕ ಭಾರತ, ಶ್ರೇಷ್ಠ ಭಾರತ'ದ ದೊಡ್ಡ ಮತ್ತು ಉನ್ನತ ಉದಾಹರಣೆ ಇದಕ್ಕಿಂತ ಇನ್ನೇನು ಬೇಕು?

ಸ್ನೇಹಿತರೇ,

ಮಹಾನ್ ಸಂತ ತಿರುವಳ್ಳುವರ್ ಅವರು ಹೀಗೆ ಹೇಳಿದ್ದರು: अगन् अमर्न्दु, सेय्याळ् उरैयुम् मुगन् अमर्न्दु, नल् विरुन्दु, ओम्बुवान् इल् (ಆಗನ್ ಅಮರಂದು, ಸೆಯ್ಯಲ್ ಉರೈಯುಂ ಮುಗನ್ ಅಮರಂದು, ನಳ ವಿರುಂದು, ಒಂಬುವನ್ ಇಲ್ ) " ಸಂತೋಷ,  ಸಮೃದ್ಧಿ ಮತ್ತು ಅದೃಷ್ಟವು ಇತರರನ್ನು ತಮ್ಮ ಮನೆಗೆ ಸಂತೋಷದಿಂದ ಸ್ವಾಗತಿಸುವುದರಲ್ಲಿ ಇರುತ್ತದೆ. ಆದ್ದರಿಂದ, ನಾವು ಸಾಮರಸ್ಯಕ್ಕೆ ಒತ್ತು ನೀಡಬೇಕು, ಸಾಂಸ್ಕೃತಿಕ ಘರ್ಷಣೆಗಳಿಗಲ್ಲ. ನಾವು ಹೋರಾಟಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿಲ್ಲ; ನಾವು ಸಂಗಮಗಳು ಮತ್ತು ಸಮಾಗಮಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು. ನಾವು ವ್ಯತ್ಯಾಸಗಳನ್ನು ಕಂಡುಹಿಡಿಯಬೇಕಾಗಿಲ್ಲ; ನಾವು ಭಾವನಾತ್ಮಕ ಸಂಪರ್ಕ ಬೆಸೆಯಲು ಬಯಸಬೇಕು.

ಸೌರಾಷ್ಟ್ರ ಮೂಲದ ಜನರು ತಮಿಳುನಾಡಿನಲ್ಲಿ ನೆಲೆಸಿದ್ದು, ತಮಿಳು ಜನರು ಅವರನ್ನು ಸ್ವಾಗತಿಸಿದ್ದಾರೆ. ನೀವೆಲ್ಲರೂ ತಮಿಳು ಭಾಷೆಯನ್ನು ಕಲಿತು ಅಳವಡಿಸಿಕೊಂಡಿದ್ದೀರಿ, ಆದರೆ ಅದೇ ವೇಳೆ, ಸೌರಾಷ್ಟ್ರದ ಭಾಷೆ, ಆಹಾರ ಮತ್ತು ಪದ್ಧತಿಗಳನ್ನು ನೆನಪಿಟ್ಟುಕೊಂಡಿದ್ದೀರಿ. ಇದು ಭಾರತದ ಅಮರ ಸಂಪ್ರದಾಯವಾಗಿದ್ದು, ಇದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ ಮತ್ತು ಸಮಗ್ರತೆಯಿಂದ ಮುಂದುವರಿಯುತ್ತದೆ, ಎಲ್ಲರನ್ನೂ ಸ್ವೀಕರಿಸುತ್ತ ಮುಂದೆ ಸಾಗುತ್ತದೆ.

ನಾವೆಲ್ಲರೂ ನಮ್ಮ ಪೂರ್ವಜರ ಕೊಡುಗೆಯನ್ನು ಕರ್ತವ್ಯ ಪ್ರಜ್ಞೆಯೊಂದಿಗೆ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬುದು ನನಗೆ ಸಂತೋಷ ನೀಡಿದೆ. ಸ್ಥಳೀಯ ಮಟ್ಟದಲ್ಲಿ ದೇಶದ ವಿವಿಧ ಭಾಗಗಳ ಜನರನ್ನು ಅದೇ ರೀತಿ ಆಹ್ವಾನಿಸಿ ಅವರಿಗೆ ಭಾರತವನ್ನು ತಿಳಿದುಕೊಳ್ಳಲು ಮತ್ತು ಭಾರತವನ್ನು ಉಸಿರಾಡಲು ಅವಕಾಶ ನೀಡಬೇಕೆಂದು ನಾನು ಬಯಸುತ್ತೇನೆ. 'ಸೌರಾಷ್ಟ್ರ ತಮಿಳು ಸಂಗಮಂ' ಈ ನಿಟ್ಟಿನಲ್ಲಿ ಐತಿಹಾಸಿಕ ಉಪಕ್ರಮವೆಂದು ಸಾಬೀತುಪಡಿಸುತ್ತದೆ ಎಂಬ  ಖಾತ್ರಿ ನನಗಿದೆ.

ಈ ಸ್ಫೂರ್ತಿಯೊಂದಿಗೆ, ನೀವು ತಮಿಳುನಾಡಿನಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದಕ್ಕೆ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ವೈಯಕ್ತಿಕವಾಗಿ ಅಲ್ಲಿಗೆ ಬಂದು ನಿಮ್ಮನ್ನು ಸ್ವಾಗತಿಸಿದ್ದರೆ ನಾನು ಹೆಚ್ಚು ಆನಂದಿಸುತ್ತಿದ್ದೆ. ಆದರೆ ಸಮಯದ ಕೊರತೆಯಿಂದಾಗಿ ನನಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಇಂದು ನಿಮ್ಮೆಲ್ಲರನ್ನೂ ವರ್ಚುವಲ್ ಮೂಲಕ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ಈ ಇಡೀ ಸಂಗಮದಲ್ಲಿ ನಾವು ನೋಡಿದ ಸ್ಫೂರ್ತಿಯನ್ನು ನಾವು ಮುಂದೆ ತೆಗೆದುಕೊಂಡು ಹೋಗಬೇಕು. ನಾವು ಆ ಮನೋಭಾವವನ್ನು ಅನುಸರಿಸಬೇಕು. ಮತ್ತು ನಾವು ನಮ್ಮ ಭವಿಷ್ಯದ ಪೀಳಿಗೆಯನ್ನು ಸಹ ಅದಕ್ಕಾಗಿ ಅಣಿಗೊಳಿಸಬೇಕು. ತುಂಬ ಧನ್ಯವಾದಗಳು. ವಣಕ್ಕಂ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Parliament passes Jan Vishwas Bill 2026, decriminalising 717 offences, fines up to Rs 1 crore

Media Coverage

Parliament passes Jan Vishwas Bill 2026, decriminalising 717 offences, fines up to Rs 1 crore
NM on the go

Nm on the go

Always be the first to hear from the PM. Get the App Now!
...
Prime Minister highlights values of harmony and compassion on Good Friday
April 03, 2026

The Prime Minister, Shri Narendra Modi, said that Good Friday reminds us of the sacrifice of Jesus Christ.

Shri Modi expressed hope that the day deepens the values of harmony, compassion and forgiveness.

He said that brotherhood and hope should guide everyone.

In a X post, Shri Modi said;

“Good Friday reminds us of Jesus Christ’s sacrifice. May this day further deepen the values of harmony, compassion and forgiveness. May brotherhood and hope guide us all.”