ಕುವೈತ್‌ನಲ್ಲಿರುವ ಭಾರತೀಯರ ಪ್ರೀತಿ ಮತ್ತು ವಾತ್ಸಲ್ಯವು ಅಸಾಧಾರಣವಾದುದು: ಪ್ರಧಾನಮಂತ್ರಿ
43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತ ಮತ್ತು ಕುವೈತ್ ಮಧ್ಯದ ಸಂಬಂಧ ನಾಗರಿಕತೆಗಳು, ಸಮುದ್ರಗಳು ಮತ್ತು ವಾಣಿಜ್ಯಗಳದ್ದಾಗಿದೆ : ಪ್ರಧಾನಮಂತ್ರಿ
ಭಾರತ ಮತ್ತು ಕುವೈತ್ ನಿರಂತರವಾಗಿ ಪರಸ್ಪರರ ಪರವಾಗಿ ನಿಂತಿವೆ: ಪ್ರಧಾನಮಂತ್ರಿ
ವಿಶ್ವದ ನುರಿತ ಪ್ರತಿಭೆಗಳ ಬೇಡಿಕೆಯನ್ನು ಪೂರೈಸಲು ಭಾರತವು ಸುಸಜ್ಜಿತವಾಗಿದೆ: ಪ್ರಧಾನಮಂತ್ರಿ
ಭಾರತದಲ್ಲಿ, ಸ್ಮಾರ್ಟ್ ಡಿಜಿಟಲ್ ವ್ಯವಸ್ಥೆಗಳು ಐಷಾರಾಮಿ ಪಟ್ಟಿಗೆ ಸೇರುವುದಿಲ್ಲ ಹೊರತಾಗಿ, ಸಾಮಾನ್ಯ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ: ಪ್ರಧಾನಮಂತ್ರಿ
ಭವಿಷ್ಯದ ಭಾರತ ಜಾಗತಿಕ ಅಭಿವೃದ್ಧಿಯ ಕೇಂದ್ರವಾಗಲಿದೆ, ವಿಶ್ವದ ಅಭಿವೃದ್ಧಿಯ ಎಂಜಿನ್ ಆಗಲಿದೆ: ಪ್ರಧಾನಮಂತ್ರಿ
ವಿಶ್ವ ಮಿತ್ರನಾಗಿ ಭಾರತ, ಪ್ರಪಂಚದ ಉತ್ತಮ ಭವಿಷ್ಯದ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ

ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ!

ನಮಸ್ಕಾರ!

ಎರಡೂವರೆ ಗಂಟೆಗಳ ಹಿಂದೆಯಷ್ಟೇ ನಾನು ಕುವೈತ್‌ಗೆ ಬಂದೆ. ನಾನು ಇಲ್ಲಿಗೆ ಕಾಲಿಟ್ಟಾಗಿನಿಂದ, ಹೃದಯಾಂತರಾಳದ ಅನನ್ಯ ಭಾವನೆಯನ್ನು ಅನುಭವಿಸಿದೆ. ನೀವೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದೀರಿ, ಆದರೆ ನಿಮ್ಮೆಲ್ಲರನ್ನು ನೋಡುವಾಗ ನನ್ನ ಮುಂದೆ ಒಂದು ಮಿನಿ ಹಿಂದೂಸ್ಥಾನವೇ ಜೀವಂತವಾಗಿದೆ ಎಂದು ಭಾಸವಾಗುತ್ತಿದೆ. ಇಲ್ಲಿ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ಜನರು ವಿಭಿನ್ನ ಭಾಷೆ ಮತ್ತು ಉಪಭಾಷೆಗಳನ್ನು ಮಾತನಾಡುವುದನ್ನು ನಾನು ನೋಡುತ್ತೇನೆ. ಆದರೂ, ಪ್ರತಿಯೊಬ್ಬರ ಹೃದಯದಲ್ಲಿ ಒಂದು ಸಾಮಾನ್ಯ ಪ್ರತಿಧ್ವನಿ ಇದೆ, ಪ್ರತಿಯೊಬ್ಬರ ಹೃದಯದಲ್ಲಿ ಒಂದು ಪ್ರತಿಧ್ವನಿಸುವ ಘೋಷಣೆ - ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ - ಜೈ.

ಇಲ್ಲಿ ಸಾಂಸ್ಕೃತಿಕ ಹಬ್ಬದ ವಾತಾವರಣವಿದೆ. ಇದೀಗ, ನೀವು ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ತಯಾರಿ ನಡೆಸುತ್ತಿದ್ದೀರಿ. ಶೀಘ್ರದಲ್ಲೇ ಪೊಂಗಲ್ ಬರಲಿದೆ. ಅದು ಮಕರ ಸಂಕ್ರಾಂತಿ, ಲೋಹ್ರಿ, ಬಿಹು ಅಥವಾ ಅಂತಹ ಅನೇಕ ಹಬ್ಬಗಳು ದೂರವಿಲ್ಲ. ಕ್ರಿಸ್‌ಮಸ್, ಹೊಸ ವರ್ಷ ಮತ್ತು ದೇಶದ ಮೂಲೆ ಮೂಲೆಗಳಲ್ಲಿ ಆಚರಿಸಲಾಗುವ ಎಲ್ಲಾ ಹಬ್ಬಗಳಿಗೆ ನಾನು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ,

ಇಂದು, ಈ ಕ್ಷಣ ನನಗೆ ವೈಯಕ್ತಿಕವಾಗಿ ತುಂಬಾ ವಿಶೇಷವಾಗಿದೆ. 43 ವರ್ಷಗಳ ನಂತರ 4 ದಶಕಗಳಿಗೂ ಹೆಚ್ಚಿನ ಕಾಲದ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಬಂದಿದ್ದಾರೆ. ಭಾರತದಿಂದ ಕುವೈತ್‌ಗೆ ಪ್ರಯಾಣಿಸಲು ನಿಮಗೆ ಕೇವಲ 4 ತಾಸು ಬೇಕಾಗುತ್ತವೆ, ಆದರೆ ಈ ಪ್ರಯಾಣ ಮಾಡಲು ಪ್ರಧಾನಿಯೊಬ್ಬರು 4 ದಶಕಗಳನ್ನು ತೆಗೆದುಕೊಂಡರು. ನಿಮ್ಮಲ್ಲಿ ಹಲವರು ತಲೆಮಾರುಗಳಿಂದ ಕುವೈತ್‌ನಲ್ಲಿ ವಾಸಿಸುತ್ತಿದ್ದಾರೆ. ನಿಮ್ಮಲ್ಲಿ ಕೆಲವರು ಇಲ್ಲೇ ಹುಟ್ಟಿದ್ದೀರಿ. ಪ್ರತಿ ವರ್ಷ ನೂರಾರು ಭಾರತೀಯರು ನಿಮ್ಮ ಸಮುದಾಯಕ್ಕೆ ಸೇರುತ್ತಾರೆ. ನೀವು ಕುವೈತ್ ಸಮಾಜಕ್ಕೆ ಭಾರತೀಯ ಪರಿಮಳವನ್ನು ಸೇರಿಸಿದ್ದೀರಿ, ಕುವೈತ್‌ನ ಕ್ಯಾನ್ವಾಸ್ ಅನ್ನು ಭಾರತೀಯ ಕೌಶಲ್ಯಗಳ ಬಣ್ಣಗಳಿಂದ ಚಿತ್ರಿಸಿದ್ದೀರಿ. ಭಾರತದ ಪ್ರತಿಭೆ, ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಕುವೈತ್‌ನ ಫ್ಯಾಬ್ರಿಕ್‌ಗೆ ಬೆರೆಸಿದ್ದೀರಿ. ಅದಕ್ಕಾಗಿಯೇ ನಾನು ಇಂದು ಇಲ್ಲಿದ್ದೇನೆ - ಕೇವಲ ನಿಮ್ಮನ್ನು ಭೇಟಿ ಮಾಡಲು ನಾನು ಬಂದಿಲ್ಲ,  ಆದರೆ ನಿಮ್ಮ ಸಾಧನೆಗಳನ್ನು ಆಚರಿಸಲು ಇಲ್ಲಿದ್ದೇನೆ.

 

ಸ್ನೇಹಿತರೆ,

ಸ್ವಲ್ಪ ಸಮಯದ ಹಿಂದೆ, ನಾನು ಇಲ್ಲಿ ಕೆಲಸ ಮಾಡುವ ಭಾರತೀಯ ಕಾರ್ಮಿಕರು ಮತ್ತು ವೃತ್ತಿಪರರನ್ನು ಭೇಟಿಯಾದೆ. ಈ ಸ್ನೇಹಿತರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇತರೆ ಹಲವು ಕ್ಷೇತ್ರಗಳಲ್ಲೂ ತಮ್ಮ ಶ್ರಮದಾನ ಮಾಡುತ್ತಿದ್ದಾರೆ. ಭಾರತೀಯ ಸಮುದಾಯದ ಸದಸ್ಯರು, ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಕುವೈತ್‌ನ ವೈದ್ಯಕೀಯ ಮೂಲಸೌಕರ್ಯದ ಗಮನಾರ್ಹ ಶಕ್ತಿಯಾಗಿದ್ದಾರೆ. ನಿಮ್ಮಲ್ಲಿ ಶಿಕ್ಷಕರಾಗಿರುವವರು ಕುವೈತ್‌ನ ಮುಂದಿನ ಪೀಳಿಗೆಯನ್ನು ಬಲಪಡಿಸಲು ಕೊಡುಗೆ ನೀಡುತ್ತಿದ್ದಾರೆ. ನಿಮ್ಮಂತಹ ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು ಕುವೈತ್‌ನಲ್ಲಿ ಮುಂದಿನ ಪೀಳಿಗೆಯ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದಾರೆ.

ಮತ್ತು ಸ್ನೇಹಿತರೆ,

ನಾನು ಕುವೈತ್‌ನ ನಾಯಕತ್ವದೊಂದಿಗೆ ಮಾತನಾಡುವಾಗ, ಅವರು ಯಾವಾಗಲೂ ನಿಮ್ಮನ್ನು ಅಪಾರವಾಗಿ ಹೊಗಳುತ್ತಾರೆ. ನಿಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಕೌಶಲ್ಯದಿಂದಾಗಿ ಕುವೈತ್‌ನ ನಾಗರಿಕರು ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇಂದು ಭಾರತವು ಹಣ ರವಾನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ, ಈ ಸಾಧನೆಯ ಶ್ರೇಯಸ್ಸಿನ ಗಮನಾರ್ಹ ಪಾಲು ನಿಮ್ಮೆಲ್ಲ ಶ್ರಮಜೀವಿ ಗೆಳೆಯರಿಗೆ ಸಲ್ಲುತ್ತದೆ. ನಿಮ್ಮ ಕೊಡುಗೆಯನ್ನು ಸ್ವದೇಶದಲ್ಲಿರುವ ನಿಮ್ಮ ಸಹ ದೇಶವಾಸಿಗಳು ಆಳವಾಗಿ ಗೌರವಿಸುತ್ತಾರೆ.

ಸ್ನೇಹಿತರೆ,

ಭಾರತ ಮತ್ತು ಕುವೈತ್ ನಡುವಿನ ಸಂಬಂಧವು ನಾಗರಿಕತೆಗಳಲ್ಲಿ ಒಂದಾಗಿದೆ, ಸಮುದ್ರ, ಪ್ರೀತಿ ಮತ್ತು ವ್ಯಾಪಾರಗಳಲ್ಲಿ ಅದು ಸೇರಿಹೋಗಿದೆ. ಭಾರತ ಮತ್ತು ಕುವೈತ್ ಅರೇಬಿಯನ್ ಸಮುದ್ರದ ವಿರುದ್ಧ ದಡದಲ್ಲಿವೆ. ಇದು ನಮ್ಮನ್ನು ಬಂಧಿಸುವ ರಾಜತಾಂತ್ರಿಕತೆಯಲ್ಲ, ಆದರೆ ಹೃದಯಗಳ ಸಂಪರ್ಕವೂ ಆಗಿದೆ. ನಮ್ಮ ಪ್ರಸ್ತುತ ಸಂಬಂಧಗಳು ನಮ್ಮ ಹಂಚಿಕೊಂಡ ಇತಿಹಾಸದಂತೆಯೇ ಪ್ರಬಲವಾಗಿವೆ. ಕುವೈತ್‌ನಿಂದ ಮುತ್ತುಗಳು, ಖರ್ಜೂರಗಳು ಮತ್ತು ಭವ್ಯವಾದ ಕುದುರೆಗಳ ತಳಿಗಳನ್ನು ಭಾರತಕ್ಕೆ ಕಳುಹಿಸುವ ಸಮಯವಿತ್ತು, ಆದರೆ ಭಾರತದಿಂದ ಅನೇಕ ಸರಕುಗಳು ಇಲ್ಲಿಗೆ ಬಂದವು. ಭಾರತೀಯ ಅಕ್ಕಿ, ಚಹಾ, ಮಸಾಲೆಗಳು, ಬಟ್ಟೆಗಳು ಮತ್ತು ಮರವನ್ನು ನಿಯಮಿತವಾಗಿ ಕುವೈತ್‌ಗೆ ತರಲಾಗುತ್ತಿತ್ತು. ಭಾರತದಿಂದ ಬಂದ ತೇಗದ ಮರವನ್ನು ಹಡಗುಗಳನ್ನು ನಿರ್ಮಿಸಲು ಬಳಸಲಾಗುತ್ತಿತ್ತು, ಅದರ ಮೇಲೆ ಕುವೈತ್ ನಾವಿಕರು ದೀರ್ಘ ಪ್ರಯಾಣ ಕೈಗೊಂಡರು. ಕುವೈತ್‌ನ ಮುತ್ತುಗಳು ಭಾರತಕ್ಕೆ ವಜ್ರಗಳಷ್ಟೇ ಅಮೂಲ್ಯವಾಗಿವೆ. ಇಂದು, ಭಾರತೀಯ ಆಭರಣಗಳು ವಿಶ್ವಾದ್ಯಂತ ಪ್ರಸಿದ್ಧವಾಗಿವೆ ಮತ್ತು ಕುವೈತ್ ಮುತ್ತುಗಳು ಆ ಪರಂಪರೆಗೆ ಕೊಡುಗೆ ನೀಡಿವೆ. ಗುಜರಾತ್‌ನಲ್ಲಿ, ಕಳೆದ ಶತಮಾನಗಳಲ್ಲಿ, ಕುವೈತ್ ಮತ್ತು ಭಾರತದ ನಡುವೆ ನಿರಂತರ ಪ್ರಯಾಣ ಮತ್ತು ವ್ಯಾಪಾರ ಹೇಗೆ ಇತ್ತು ಎಂಬುದರ ಕುರಿತು ನಮ್ಮ ಹಿರಿಯರಿಂದ ಕಥೆಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ. ವಿಶೇಷವಾಗಿ 19ನೇ ಶತಮಾನದಲ್ಲಿ, ಕುವೈತ್ ವ್ಯಾಪಾರಿಗಳು ಸೂರತ್‌ಗೆ ಬರಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸೂರತ್ ಕುವೈತ್ ಮುತ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಆಗಿತ್ತು. ಗುಜರಾತ್‌ನ ಸೂರತ್, ಪೋರಬಂದರ್ ಮತ್ತು ವೆರಾವಲ್‌ನಂತಹ ಬಂದರುಗಳು ಈ ಐತಿಹಾಸಿಕ ಸಂಬಂಧಗಳಿಗೆ ಸಾಕ್ಷಿಯಾಗಿ ನಿಂತಿವೆ.

 

ಕುವೈತ್ ವ್ಯಾಪಾರಿಗಳು ಗುಜರಾತಿ ಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಗುಜರಾತ್ ನಂತರ, ಕುವೈತ್ ವ್ಯಾಪಾರಿಗಳು ಮುಂಬೈ ಮತ್ತು ಇತರೆ ಮಾರುಕಟ್ಟೆಗಳಲ್ಲಿ ವಿಶಿಷ್ಟ ಅಸ್ತಿತ್ವವನ್ನು ಸ್ಥಾಪಿಸಿದರು. ಒಂದು ಗಮನಾರ್ಹ ಉದಾಹರಣೆಯೆಂದರೆ, ಕುವೈತಿನ ಹೆಸರಾಂತ ವ್ಯಾಪಾರಿ ಅಬ್ದುಲ್ ಲತೀಫ್ ಅಲ್ ಅಬ್ದುಲ್ ರಜಾಕ್ ಅವರ ಪುಸ್ತಕ 'ಹೌ ಟು ಕ್ಯಾಲ್ಕುಲೇಟ್ ಪರ್ಲ್ ವೇಟ್' ಅನ್ನು ಮುಂಬೈನಲ್ಲಿ ಪ್ರಕಟಿಸಲಾಗಿದೆ. ಅನೇಕ ಕುವೈತ್ ವ್ಯಾಪಾರಿಗಳು ತಮ್ಮ ರಫ್ತು ಮತ್ತು ಆಮದು ವ್ಯವಹಾರಗಳಿಗಾಗಿ ಮುಂಬೈ, ಕೋಲ್ಕತಾ, ಪೋರಬಂದರ್, ವೆರಾವಲ್ ಮತ್ತು ಗೋವಾದಲ್ಲಿ ಕಚೇರಿಗಳನ್ನು ತೆರೆದರು. ಇಂದಿಗೂ, ಮುಂಬೈನ ಮೊಹಮ್ಮದ್ ಅಲಿ ಸ್ಟ್ರೀಟ್‌ನಲ್ಲಿ ಅನೇಕ ಕುವೈತ್ ಕುಟುಂಬಗಳು ನೆಲೆಸಿವೆ. 60-65 ವರ್ಷಗಳ ಹಿಂದೆ, ಕುವೈತ್‌ನಲ್ಲಿ ಭಾರತದಲ್ಲಿರುವಂತೆಯೇ ಭಾರತೀಯ ರೂಪಾಯಿ ಬಳಸಲಾಗುತ್ತಿತ್ತು ಎಂದು ತಿಳಿದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಆಗ, ಕುವೈತ್‌ನ ಅಂಗಡಿಯಿಂದ ಯಾರಾದರೂ ಏನನ್ನಾದರೂ ಖರೀದಿಸಿದರೆ, ಭಾರತೀಯ ರೂಪಾಯಿಗಳನ್ನು ಕರೆನ್ಸಿಯಾಗಿ ಸ್ವೀಕರಿಸಲಾಗುತ್ತಿತ್ತು. ಭಾರತೀಯ ಕರೆನ್ಸಿ ಶಬ್ದಕೋಶದ ಭಾಗವಾಗಿದ್ದ "ರೂಪಿಯಾ," "ಪೈಸಾ," ಮತ್ತು "ಆನಾ"ದಂತಹ ಪದಗಳು ಕುವೈತ್‌ ಜನರಿಗೆ ಬಹಳ ಪರಿಚಿತವಾಗಿವೆ.

ಸ್ನೇಹಿತರೆ,

ಕುವೈತ್‌ಗೆ ಸ್ವಾತಂತ್ರ್ಯದ ನಂತರ ಮಾನ್ಯತೆ ನೀಡಿದ ವಿಶ್ವದ ಮೊದಲ ದೇಶಗಳಲ್ಲಿ ಭಾರತವೂ ಒಂದು. ಅದಕ್ಕಾಗಿಯೇ ನಮ್ಮ ಹಿಂದಿನ ಮತ್ತು ವರ್ತಮಾನದಲ್ಲಿ ನಾವು ಅನೇಕ ನೆನಪುಗಳನ್ನು ಮತ್ತು ಅಂತಹ ಆಳವಾದ ಸಂಪರ್ಕಗಳನ್ನು ಹಂಚಿಕೊಳ್ಳುವ ದೇಶ ಮತ್ತು ಸಮಾಜಕ್ಕೆ ಭೇಟಿ ನೀಡುವುದು ನನಗೆ ನಿಜವಾಗಿಯೂ ಸ್ಮರಣೀಯವಾಗಿದೆ. ಕುವೈತ್‌ನ ಜನತೆಗೆ ಮತ್ತು ಅದರ ಸರ್ಕಾರಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ. ಅವರ ಆತ್ಮೀಯ ಆಹ್ವಾನಕ್ಕಾಗಿ ನಾನು ವಿಶೇಷವಾಗಿ ಅವರ ಗೌರವಾನ್ವಿತ ಅಮೀರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಸ್ನೇಹಿತರೆ,

ಹಿಂದೆ ಸಂಸ್ಕೃತಿ ಮತ್ತು ವಾಣಿಜ್ಯದ ಮೂಲಕ ಬೆಸೆದ ಬಂಧ ಈಗ ಈ ಹೊಸ ಶತಮಾನದಲ್ಲಿ ಹೊಸ ಎತ್ತರವನ್ನು ತಲುಪುತ್ತಿದೆ. ಇಂದು, ಕುವೈತ್ ಭಾರತಕ್ಕೆ ಅತ್ಯಂತ ಮಹತ್ವದ ಇಂಧನ ಮತ್ತು ವ್ಯಾಪಾರ ಪಾಲುದಾರರಾಗಿದ್ದು, ಭಾರತವು ಕುವೈತ್ ಕಂಪನಿಗಳಿಗೆ ಪ್ರಮುಖ ಹೂಡಿಕೆ ತಾಣವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ನಮ್ಮ ಸಭೆಯ ಸಂದರ್ಭದಲ್ಲಿ ಕುವೈತ್‌ನ ಗೌರವಾನ್ವಿತ ಯುವರಾಜರು ಹೇಳಿದ ಮಾತನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. "ನಿಮಗೆ ಅಗತ್ಯವಿರುವಾಗ, ಭಾರತವು ನಿಮ್ಮ ಗಮ್ಯಸ್ಥಾನವಾಗಿದೆ." ಭಾರತ ಮತ್ತು ಕುವೈತ್‌ನ ನಾಗರಿಕರು ಯಾವಾಗಲೂ ಕಷ್ಟದ ಸಮಯದಲ್ಲಿ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರ ನಿಂತಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಎರಡೂ ದೇಶಗಳು ಪ್ರತಿಯೊಂದು ಹಂತದಲ್ಲೂ ಪರಸ್ಪರ ಬೆಂಬಲಿಸಿದವು. ಭಾರತಕ್ಕೆ ಹೆಚ್ಚಿನ ಸಹಾಯ ಬೇಕಾದಾಗ, ಕುವೈತ್ ನಮಗೆ ಆಮ್ಲಜನಕ ಪೂರೈಸಿತು. ಗೌರವಾನ್ವಿತ ಯುವರಾಜರು, ಪ್ರತಿಯೊಬ್ಬರನ್ನು ತ್ವರಿತವಾಗಿ ಕೆಲಸ ಮಾಡಲು ಪ್ರೇರೇಪಿಸಲು ವೈಯಕ್ತಿಕವಾಗಿ ಮುಂದಾದರು. ಬಿಕ್ಕಟ್ಟಿನ ವಿರುದ್ಧ ಹೋರಾಡಲು ಕುವೈತ್‌ಗೆ ಸಹಾಯ ಮಾಡಲು ಭಾರತವು ಲಸಿಕೆಗಳು ಮತ್ತು ವೈದ್ಯಕೀಯ ತಂಡಗಳನ್ನು ಕಳುಹಿಸುವ ಮೂಲಕ ತನ್ನ ಬೆಂಬಲವನ್ನು ವಿಸ್ತರಿಸಿದೆ ಎಂಬ ತೃಪ್ತಿ ನನಗಿದೆ. ಕುವೈತ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ಅಗತ್ಯ ಆಹಾರ ಸರಬರಾಜು ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭಾರತವು ತನ್ನ ಬಂದರುಗಳನ್ನು ತೆರೆದಿಟ್ಟಿದೆ. ಈ ವರ್ಷದ ಜೂನ್‌ನಲ್ಲಿ, ಕುವೈತ್‌ನಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿತು. ಮಂಗಾಫ್‌ನಲ್ಲಿ ಅಗ್ನಿ ದುರಂತ -  ಅನೇಕ ಭಾರತೀಯರ ಜೀವಗಳನ್ನು ಬಲಿ ತೆಗೆದುಕೊಂಡಿತು. ಈ ಸುದ್ದಿ ಕೇಳಿದಾಗ ನಾನು ತೀವ್ರ ಕಳವಳಗೊಂಡೆ. ಆದಾಗ್ಯೂ, ಆ ಸಮಯದಲ್ಲಿ ಕುವೈತ್ ಸರ್ಕಾರವು ತನ್ನ ಬೆಂಬಲವನ್ನು ನೀಡಿದ ರೀತಿ ನಿಜವಾದ ಸಹೋದರನಂತಿದೆ. ನಾನು ಕುವೈತ್‌ನ ಆತ್ಮ ಮತ್ತು ಸಹಾನುಭೂತಿಗೆ ವಂದಿಸುತ್ತೇನೆ.

ಸ್ನೇಹಿತರೆ,

ಸುಖ-ದುಃಖ ಎರಡರಲ್ಲೂ ಒಬ್ಬರಿಗೊಬ್ಬರು ನಿಲ್ಲುವ ಈ ಸಂಪ್ರದಾಯವು ನಮ್ಮ ಪರಸ್ಪರ ಸಂಬಂಧ ಮತ್ತು ನಂಬಿಕೆಯ ಅಡಿಪಾಯವನ್ನು ಭದ್ರಪಡಿಸಿದೆ. ಮುಂಬರುವ ದಶಕಗಳಲ್ಲಿ, ನಾವು ಸಮೃದ್ಧಿಯಲ್ಲಿ ಇನ್ನೂ ಹೆಚ್ಚಿನ ಪಾಲುದಾರರಾಗುತ್ತೇವೆ. ನಮ್ಮ ಗುರಿಗಳು ತುಂಬಾ ಭಿನ್ನವಾಗಿಲ್ಲ. ಕುವೈತ್‌ನ ಜನರು ಹೊಸ ಕುವೈತ್‌ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ, ಭಾರತದ ಜನರು 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಮರ್ಪಿತರಾಗಿದ್ದಾರೆ. ಕುವೈತ್ ವ್ಯಾಪಾರ ಮತ್ತು ನಾವೀನ್ಯತೆಗಳ ಮೂಲಕ ಕ್ರಿಯಾತ್ಮಕ ಆರ್ಥಿಕತೆಯ ಗುರಿ ಹೊಂದಿದೆ, ಭಾರತವು ಸಹ ನಾವೀನ್ಯತೆಯತ್ತ ಗಮನ ಹರಿಸುತ್ತಿದೆ. ಇದು ನಿರಂತರವಾಗಿ ತನ್ನ ಆರ್ಥಿಕತೆಯನ್ನು ಬಲಪಡಿಸುತ್ತದೆ. ಈ 2 ಗುರಿಗಳು ಒಂದಕ್ಕೊಂದು ಪೂರಕವಾಗಿವೆ. ಹೊಸ ಕುವೈತ್‌ ಸೃಷ್ಟಿಗೆ ಅಗತ್ಯವಿರುವ ನಾವೀನ್ಯತೆ, ಕೌಶಲ್ಯ, ತಂತ್ರಜ್ಞಾನ ಮತ್ತು ಮಾನವಶಕ್ತಿ ಎಲ್ಲವೂ ಭಾರತದಲ್ಲಿ ಲಭ್ಯವಿದೆ. ಭಾರತದ ಸ್ಟಾರ್ಟಪ್‌ಗಳು, ಹಣಕಾಸು ತಂತ್ರಜ್ಞಾನದಿಂದ ಆರೋಗ್ಯ ಸಂರಕ್ಷಣೆವರೆಗೆ, ಸ್ಮಾರ್ಟ್ ಸಿಟಿಗಳಿಂದ ಹಸಿರು ತಂತ್ರಜ್ಞಾನಗಳವರೆಗೆ, ಕುವೈತ್‌ನ ಪ್ರತಿಯೊಂದು ಅಗತ್ಯಕ್ಕೂ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸಬಹುದು. ಭಾರತದ ನುರಿತ ಯುವಕರು ಕುವೈತ್‌ನ ಭವಿಷ್ಯದ ಪ್ರಯಾಣಕ್ಕೆ ಹೊಸ ಶಕ್ತಿ ಸೇರಿಸಬಹುದು.

 

ಸ್ನೇಹಿತರೆ,

ಭಾರತವು ವಿಶ್ವದ ಕೌಶಲ್ಯ ರಾಜಧಾನಿಯಾಗುವ ಸಾಮರ್ಥ್ಯ ಹೊಂದಿದೆ. ಭಾರತವು ಮುಂದಿನ ಹಲವು ದಶಕಗಳವರೆಗೆ ವಿಶ್ವದ ಅತ್ಯಂತ ಚಿರಯೌವ್ವನ(ಕಿರಿಯ) ದೇಶವಾಗಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ಕೌಶಲ್ಯಕ್ಕಾಗಿ ಜಾಗತಿಕ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸಾಧಿಸಲು, ಭಾರತವು ತನ್ನ ಯುವಜನರ ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಕೌಶಲ್ಯ ಉನ್ನತೀಕರಣದ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತವು ಗಲ್ಫ್ ರಾಷ್ಟ್ರಗಳು, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಮಾರಿಷಸ್, ಯುಕೆ ಮತ್ತು ಇಟಲಿ ಸೇರಿದಂತೆ ಸುಮಾರು 2 ಡಜನ್ ದೇಶಗಳೊಂದಿಗೆ ವಲಸೆ ಮತ್ತು ಉದ್ಯೋಗ ಒಪ್ಪಂದಗಳಿಗೆ ಸಹಿ ಹಾಕಿದೆ. ವಿಶ್ವಾದ್ಯಂತದ ದೇಶಗಳು ಭಾರತದ ಕೌಶಲ್ಯಪೂರ್ಣ ಮಾನವಶಕ್ತಿಗೆ ತಮ್ಮ ಬಾಗಿಲುಗಳನ್ನು ತೆರೆಯುತ್ತಿವೆ.

ಸ್ನೇಹಿತರೆ,

ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರ ಕಲ್ಯಾಣ ಮತ್ತು ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ವಿವಿಧ ದೇಶಗಳೊಂದಿಗೆ ಅನೇಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇ-ಮೈಗ್ರೇಟ್ ಪೋರ್ಟಲ್ ನಿಮಗೆ ತಿಳಿದಿರಬಹುದು. ಈ ಪೋರ್ಟಲ್ ಮೂಲಕ ವಿದೇಶಿ ಕಂಪನಿಗಳು ಮತ್ತು ನೋಂದಾಯಿತ ಏಜೆಂಟ್‌ಗಳನ್ನು ಒಂದೇ ವೇದಿಕೆಗೆ ತರಲಾಗಿದೆ. ಇದು ಮಾನವ ಸಂಪನ್ಮೂಲಕ್ಕೆ ಎಲ್ಲಿ ಬೇಡಿಕೆಯಿದೆ, ಯಾವ ರೀತಿಯ ಮಾನವಶಕ್ತಿಯ ಅಗತ್ಯವಿದೆ ಮತ್ತು ಯಾವ ಕಂಪನಿಗೆ ಅಗತ್ಯವಿದೆ ಎಂಬುದನ್ನು ಗುರುತಿಸಲು ಸುಲಭವಾಗುತ್ತದೆ. ಈ ಪೋರ್ಟಲ್‌ಗಾಗಿ ಧನ್ಯವಾದಗಳು, ಕಳೆದ 4-5 ವರ್ಷಗಳಲ್ಲಿ ಲಕ್ಷಾಂತರ ಕಾರ್ಮಿಕರು ಗಲ್ಫ್ ದೇಶಗಳಿಗೆ ಬಂದಿದ್ದಾರೆ. ಅಂತಹ ಪ್ರತಿಯೊಂದು ಉಪಕ್ರಮವು ಒಂದೇ ಗುರಿ ಹೊಂದಿದೆ - ಭಾರತದ ಪ್ರತಿಭೆಯು ಪ್ರಪಂಚದ ಪ್ರಗತಿಗೆ ಕೊಡುಗೆ ನೀಡುತ್ತದೆ, ಕೆಲಸಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಯಾವಾಗಲೂ ಅಗತ್ಯ ಬೆಂಬಲವಿದೆ ಎಂದು ಖಚಿತಪಡಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳಿಂದ ಕುವೈತ್‌ನಲ್ಲಿರುವ ನೀವೆಲ್ಲರೂ ಹೆಚ್ಚು ಪ್ರಯೋಜನ ಪಡೆಯುತ್ತೀರಿ.

ಸ್ನೇಹಿತರೆ,

ನಾವು ಜಗತ್ತಿನಲ್ಲಿ ಎಲ್ಲಿಯೇ ವಾಸಿಸಿದರೂ, ನಾವು ಇರುವ ದೇಶವನ್ನು ಗೌರವಿಸುತ್ತೇವೆ,  ಭಾರತವು ಹೊಸ ಎತ್ತರ ತಲುಪುವುದನ್ನು ನೋಡಲು ನಾವು ಅಪಾರ ಸಂತೋಷ ಅನುಭವಿಸುತ್ತೇವೆ. ನೀವೆಲ್ಲರೂ ಭಾರತದಿಂದ ಬಂದಿದ್ದೀರಿ, ಇಲ್ಲಿ ವಾಸಿಸುತ್ತಿದ್ದೀರಿ, ಆದರೂ ನಿಮ್ಮ ಭಾರತೀಯ ಗುರುತನ್ನು ನಿಮ್ಮ ಹೃದಯದಲ್ಲಿ ಉಳಿಸಿಕೊಂಡಿದ್ದೀರಿ. ಈಗ ಹೇಳಿ, ಮಂಗಳಯಾನದ ಯಶಸ್ಸಿನ ಬಗ್ಗೆ ಯಾವ ಭಾರತೀಯ ಹೆಮ್ಮೆ ಪಡುವುದಿಲ್ಲ? ಚಂದ್ರಯಾನವನ್ನು ಚಂದ್ರನ ಮೇಲೆ ಇಳಿಸಿದಾಗ ಯಾವ ಭಾರತೀಯನು ಹೆಚ್ಚು ಸಂತೋಷಪಡುವುದಿಲ್ಲ? ಇಂದು ಭಾರತ ಹೊಸ ಚೈತನ್ಯದೊಂದಿಗೆ ಮುನ್ನಡೆಯುತ್ತಿದೆ. ಭಾರತವು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದ ನಂಬರ್ 1 ಹಣಕಾಸು ತಂತ್ರಜ್ಞಾನ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ ಮತ್ತು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ದೇಶವಾಗಿದೆ.

ನಾನು ನಿಮ್ಮೊಂದಿಗೆ ಅಂಕಿಅಂಶವನ್ನು ಹಂಚಿಕೊಳ್ಳುತ್ತೇನೆ ಮತ್ತು ಅದನ್ನು ಕೇಳಲು ನೀವು ಸಂತೋಷಪಡುತ್ತೀರಿ ಎಂಬುದು ನನಗೆ ಖಾತ್ರಿಯಿದೆ. ಕಳೆದ 10 ವರ್ಷಗಳಲ್ಲಿ, ಭಾರತದಾದ್ಯಂತ ಹಾಕಲಾದ ಆಪ್ಟಿಕಲ್ ಫೈಬರ್‌ನ ಉದ್ದವು ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 8 ಪಟ್ಟು ಹೆಚ್ಚಾಗಿದೆ. ಇಂದು ಭಾರತವು ಜಗತ್ತಿನಲ್ಲೇ ಹೆಚ್ಚು ಡಿಜಿಟಲ್ ಸಂಪರ್ಕ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಭಾರತೀಯನೂ ಸಣ್ಣ ಪಟ್ಟಣಗಳಿಂದ ಹಳ್ಳಿಗಳವರೆಗೆ ಡಿಜಿಟಲ್ ಸಾಧನಗಳನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಸ್ಮಾರ್ಟ್ ಡಿಜಿಟಲ್ ವ್ಯವಸ್ಥೆಗಳು ಇನ್ನು ಮುಂದೆ ಐಷಾರಾಮಿಯಾಗಿಲ್ಲ; ಅವು ಈಗ ಸಾಮಾನ್ಯರ ದೈನಂದಿನ ಜೀವನದ ಭಾಗವಾಗಿವೆ. ಅದು ಒಂದು ಕಪ್ ಚಹಾ ಆನಂದಿಸುವುದಿರಲಿ, ರಸ್ತೆಯಲ್ಲಿ ಹಣ್ಣುಗಳನ್ನು ಖರೀದಿಸುವುದಿರಲಿ ಅಥವಾ ಡಿಜಿಟಲ್ ಪಾವತಿಗಳನ್ನು ಮಾಡುವುದಿರಲಿ, ಭಾರತವು ಡಿಜಿಟಲ್ ಅನುಕೂಲತೆಯನ್ನು ಸ್ವೀಕರಿಸಿದೆ. ದಿನಸಿ, ಆಹಾರ, ಹಣ್ಣುಗಳು, ತರಕಾರಿಗಳು ಅಥವಾ ದೈನಂದಿನ ಗೃಹೋಪಯೋಗಿ ವಸ್ತುಗಳಿಗೆ ಈಗ ಕೆಲವೇ ಕ್ಷಣಗಳಲ್ಲಿ ಆರ್ಡರ್ ಮಾಡಲಾಗುತ್ತದೆ, ಪಾವತಿಗಳನ್ನು ಮೊಬೈಲ್ ಫೋನ್‌ಗಳ ಮೂಲಕ ಮಾಡಲಾಗುತ್ತದೆ. ಜನರು ದಾಖಲೆಗಳನ್ನು ಸಂಗ್ರಹಿಸಲು ಡಿಜಿಲಾಕರ್, ವಿಮಾನ ನಿಲ್ದಾಣಗಳಲ್ಲಿ ತಡೆರಹಿತ ಪ್ರಯಾಣಕ್ಕಾಗಿ ಡಿಜಿಯಾತ್ರಾ ಮತ್ತು ಟೋಲ್ ಬೂತ್‌ಗಳಲ್ಲಿ ಸಮಯ ಉಳಿಸಲು ಫಾಸ್ಟ್‌ಟ್ಯಾಗ್ ಹೊಂದಿದ್ದಾರೆ. ಭಾರತವು ಹೆಚ್ಚಾಗಿ ಡಿಜಿಟಲ್ ಸ್ಮಾರ್ಟ್ ಆಗುತ್ತಿದ್ದು, ಇದು ಕೇವಲ ಆರಂಭವಾಗಿದೆ. ಇಡೀ ಜಗತ್ತಿಗೆ ದಿಕ್ಕು ಹೊಂದಿಸುವ ನಾವೀನ್ಯತೆಗಳಲ್ಲಿ ಭಾರತದ ಭವಿಷ್ಯ ಅಡಗಿದೆ. ಭವಿಷ್ಯದ ಭಾರತವು ಜಾಗತಿಕ ಅಭಿವೃದ್ಧಿಯ ಕೇಂದ್ರವಾಗಿದೆ, ಇಡೀ ವಿಶ್ವದ ಬೆಳವಣಿಗೆಯ ಎಂಜಿನ್ ಆಗಿದೆ. ಭಾರತವು ಹಸಿರು ಇಂಧನ, ಫಾರ್ಮಾ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ಸ್, ಸೆಮಿಕಂಡಕ್ಟರ್‌ಗಳು, ಕಾನೂನು, ವಿಮೆ, ಗುತ್ತಿಗೆ ಮತ್ತು ವಾಣಿಜ್ಯ ಕ್ಷೇತ್ರಗಳ ಕೇಂದ್ರವಾಗುವ ಕಾಲ ದೂರವಿಲ್ಲ. ಪ್ರಪಂಚದ ಪ್ರಮುಖ ಆರ್ಥಿಕ ಕೇಂದ್ರಗಳು ಭಾರತದಲ್ಲಿ ಸ್ಥಾಪನೆಯಾಗುವುದನ್ನು ನೀವು ನೋಡುತ್ತೀರಿ. ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಜಾಗತಿಕ ತಂತ್ರಜ್ಞಾನ ಕೇಂದ್ರಗಳು ಮತ್ತು ಜಾಗತಿಕ ಎಂಜಿನಿಯರಿಂಗ್ ಕೇಂದ್ರಗಳಿಗೆ ಭಾರತವು ಬೃಹತ್ ಕೇಂದ್ರವಾಗಿ ಹೊರಹೊಮ್ಮಲಿದೆ.

ಸ್ನೇಹಿತರೆ,

ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತೇವೆ. ಭಾರತವು ‘ವಿಶ್ವ ಬಂಧು’(ಜಾಗತಿಕ ಸ್ನೇಹಿತ)ವಾಗಿ, ಲೋಕಕಲ್ಯಾಣ ಚಿಂತಿಸುತ್ತಾ ಮುನ್ನಡೆಯುತ್ತಿದೆ. ಜಗತ್ತು ಕೂಡ ಭಾರತದ ಈ ಮನೋಭಾವವನ್ನು ಅಂಗೀಕರಿಸುತ್ತಿದೆ. ಇಂದು, 2024 ಡಿಸೆಂಬರ್ 21ರಂದು ಇಡೀ ಜಗತ್ತು ತನ್ನ ಮೊದಲ ವಿಶ್ವ ಧ್ಯಾನ ದಿನ ಆಚರಿಸುತ್ತಿದೆ. ಇದು ಭಾರತದ ಸಾವಿರಾರು ವರ್ಷಗಳ ಧ್ಯಾನ ಸಂಪ್ರದಾಯಕ್ಕೆ ಸಮರ್ಪಿತವಾಗಿದೆ. 2015ರಿಂದ ಇಡೀ ಜಗತ್ತು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದೆ, ಇದು ಭಾರತದ ಯೋಗ ಸಂಪ್ರದಾಯಕ್ಕೆ ಸಮರ್ಪಿತವಾಗಿದೆ. 2023ರಿಂದ ಇಡೀ ಜಗತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಆಚರಿಸುತ್ತಿದೆ, ಇದು ಭಾರತದ ಪ್ರಯತ್ನಗಳು ಮತ್ತು ಪ್ರಸ್ತಾಪದ ಮೂಲಕ ಸಾಧ್ಯವಾಯಿತು. ಇಂದು ಭಾರತದ ಯೋಗವು ಪ್ರಪಂಚದ ಪ್ರತಿಯೊಂದು ಪ್ರದೇಶವನ್ನು ಒಂದುಗೂಡಿಸುತ್ತಿದೆ. ಭಾರತದ ಸಾಂಪ್ರದಾಯಿಕ ಔಷಧ, ನಮ್ಮ ಆಯುರ್ವೇದ ಮತ್ತು ನಮ್ಮ ಆಯುಷ್ ಉತ್ಪನ್ನಗಳು ಜಾಗತಿಕ ಸ್ವಾಸ್ಥ್ಯವನ್ನು ಉತ್ಕೃಷ್ಟಗೊಳಿಸುತ್ತಿವೆ. ನಮ್ಮ ಉತ್ಕೃಷ್ಟ ಆಹಾರಗಳು, ಸಿರಿಧಾನ್ಯ ಅಥವಾ ಶ್ರೀ ಅನ್ನವು ಪೌಷ್ಟಿಕಾಂಶ ಮತ್ತು ಆರೋಗ್ಯಕರ ಜೀವನಶೈಲಿಗೆ ಪ್ರಮುಖ ಅಡಿಪಾಯವಾಗುತ್ತಿದೆ. ನಳಂದದಿಂದ ಐಐಟಿಗಳವರೆಗೆ, ಭಾರತದ ಜ್ಞಾನ ವ್ಯವಸ್ಥೆಯು ಜಾಗತಿಕ ಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಇಂದು ಭಾರತವು ಜಾಗತಿಕ ಸಂಪರ್ಕದಲ್ಲಿ ಪ್ರಮುಖ ಕೊಂಡಿಯಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಘೋಷಣೆ ಮಾಡಲಾಯಿತು. ಈ ಕಾರಿಡಾರ್ ಪ್ರಪಂಚದ ಭವಿಷ್ಯಕ್ಕೆ ಹೊಸ ದಿಕ್ಕು ಒದಗಿಸಲು ಸಿದ್ಧವಾಗಿದೆ.

 

ಸ್ನೇಹಿತರೆ,

‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಪ್ರಯಾಣವು ನಿಮ್ಮ ಬೆಂಬಲ ಮತ್ತು ಭಾರತೀಯ ವಲಸೆಗಾರರ ​​ಭಾಗವಹಿಸುವಿಕೆ ಇಲ್ಲದೆ ಅಪೂರ್ಣವಾಗಿದೆ. ‘ವಿಕಸಿತ ಭಾರತ’ದ ಸಂಕಲ್ಪದಲ್ಲಿ ಸೇರಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಹೊಸ ವರ್ಷ 2025ರ ಮೊದಲ ತಿಂಗಳು ಜನವರಿ, ಅನೇಕ ರಾಷ್ಟ್ರೀಯ ಆಚರಣೆಗಳ ತಿಂಗಳಾಗಿರುತ್ತದೆ. ಈ ವರ್ಷದ ಜನವರಿ 8ರಿಂದ 10ರ ವರೆಗೆ ಭುವನೇಶ್ವರದಲ್ಲಿ ಪ್ರವಾಸಿ ಭಾರತೀಯ ದಿವಸ್ ನಡೆಯಲಿದೆ, ವಿಶ್ವಾದ್ಯಂತದ ಜನರು ಒಟ್ಟಾಗಿ ಸೇರುತ್ತಾರೆ. ಈ ಕಾರ್ಯಕ್ರಮದ ಭಾಗವಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಈ ಪ್ರಯಾಣದಲ್ಲಿ ನೀವು ಪುರಿಯಲ್ಲಿರುವ ಜಗನ್ನಾಥನ ಆಶೀರ್ವಾದ ಪಡೆಯಬಹುದು. ಅದರ ನಂತರ, ಜನವರಿ 13ರಿಂದ ಫೆಬ್ರವರಿ 26ರ ವರೆಗೆ ಸುಮಾರು ಒಂದೂವರೆ ತಿಂಗಳ ಕಾಲ ನಡೆಯುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್ ರಾಜ್ ಗೆ ಭೇಟಿ ನೀಡಿ. ಜನವರಿ 26ರಂದು ಗಣರಾಜ್ಯೋತ್ಸವ ವೀಕ್ಷಿಸಿದ ನಂತರ ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಿ. ಹೌದು, ನಿಮ್ಮ ಕುವೈತ್ ಸ್ನೇಹಿತರನ್ನು ಭಾರತಕ್ಕೆ ಕರೆತನ್ನಿ, ಅವರನ್ನು ಎಲ್ಲೆಡೆ ಕರೆದೊಯ್ದು ಸುಂದರ ತಾಣಗಳನ್ನು ತೋರಿಸಿ, ಅವರಿಗೆ ಭಾರತವನ್ನು ಅನುಭವಿಸಲು ಅವಕಾಶ ಮಾಡಿಕೊಡಿ. ದಿಲೀಪ್ ಕುಮಾರ್ ಸಾಹೇಬರು ಇಲ್ಲಿ ಮೊದಲ ಭಾರತೀಯ ರೆಸ್ಟೋರೆಂಟ್ ಉದ್ಘಾಟಿಸಿದ ಸಮಯವಿತ್ತು. ಭಾರತದ ನಿಜವಾದ ಸ್ವಾದವನ್ನು ಅಲ್ಲಿ ಮಾತ್ರ ಅನುಭವಿಸಲು ಸಾಧ್ಯ. ಆದ್ದರಿಂದ, ಈ ಅನುಭವಕ್ಕಾಗಿ ನಿಮ್ಮ ಕುವೈತ್ ಸ್ನೇಹಿತರನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳಿ.

ಸ್ನೇಹಿತರೆ,

ಇಂದು ಆರಂಭವಾಗಲಿರುವ ಅರೇಬಿಯನ್ ಗಲ್ಫ್ ಕಪ್ ಬಗ್ಗೆ ನೀವೆಲ್ಲರೂ ತುಂಬಾ ಉತ್ಸುಕರಾಗಿದ್ದೀರಿ ಎಂಬುದು ನನಗೆ ತಿಳಿದಿದೆ. ನೀವು ಕುವೈತ್ ತಂಡವನ್ನು ಹುರಿದುಂಬಿಸಲು ಉತ್ಸುಕರಾಗಿದ್ದೀರಿ. ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ಗೌರವಾನ್ವಿತ ಅತಿಥಿಯಾಗಿ ಆಹ್ವಾನಿಸಿದ್ದಕ್ಕಾಗಿ ನಾನು ಅವರ ಗೌರವಾನ್ವಿತ ಯುವರಾಜು ಅಮೀರ್ ಅವರಿಗೆ ಕೃತಜ್ಞನಾಗಿದ್ದೇನೆ. ಇದು ರಾಜ ಮನೆತನದ ಕುವೈತ್ ಸರ್ಕಾರವು ನಿಮ್ಮೆಲ್ಲರಿಗೂ ಮತ್ತು ಭಾರತಕ್ಕೂ ಹೊಂದಿರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ. ನೀವು ಭಾರತ-ಕುವೈತ್ ಸಂಬಂಧವನ್ನು ಈ ರೀತಿಯಲ್ಲಿ ಬಲಪಡಿಸುವುದನ್ನು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಹಾರೈಕೆಯೊಂದಿಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು!

ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ!

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Apple’s India iPhone output may hit $70 billion in five years on export surge: Report

Media Coverage

Apple’s India iPhone output may hit $70 billion in five years on export surge: Report
NM on the go

Nm on the go

Always be the first to hear from the PM. Get the App Now!
...
Prime Minister greets devotees and participants of Matua Dharma Mela
March 16, 2026

The Prime Minister, Shri Narendra Modi has greeted all the devotees and participants of the Matua Dharma Mela. This special occasion is associated with the Jayanti of Purna Brahma Shree Shree Harichand Thakur Ji. “I offer my humble Pranams to him. His thoughts and teachings continue to give strength and hope to several people. They awakened a powerful movement for dignity, equality and devotion. He inspired generations to walk the path of righteousness, harmony and collective upliftment”, Shri Modi stated.

The Prime Minister remarked that the rich and vibrant traditions of Matua culture reflect a deep spiritual strength and an unbreakable commitment to equality. It significantly enriches the social fabric of our nation. “Over the past decade, our Government has been deeply committed to the welfare, empowerment and dignity of the Matua community”, Shri Modi said.

The Prime Minister posted on X:

“My heartfelt greetings and best wishes to all devotees and participants of the Matua Dharma Mela.

This special occasion is associated with the Jayanti of Purna Brahma Shree Shree Harichand Thakur Ji. I offer my humble Pranams to him. His thoughts and teachings continue to give strength and hope to several people. They awakened a powerful movement for dignity, equality and devotion. He inspired generations to walk the path of righteousness, harmony and collective upliftment.

The rich and vibrant traditions of the Matua culture reflect a deep spiritual strength and an unbreakable commitment to equality. It significantly enriches the social fabric of our nation. Over the past decade, our Government has been deeply committed to the welfare, empowerment and dignity of the Matua community.” 

 

“মতুয়া ধর্মমেলায় আগত সমস্ত ভক্ত এবং অংশগ্রহণকারীদের জানাই আমার আন্তরিক শুভেচ্ছা ও অভিনন্দন।

এই বিশেষ তিথিটি পূর্ণ ব্রহ্ম শ্রী শ্রী হরিচাঁদ ঠাকুরজির জয়ন্তীর সঙ্গে যুক্ত। আমি তাঁকে আমার সশ্রদ্ধ প্রণাম নিবেদন করছি। তাঁর আদর্শ এবং শিক্ষা আজও অগণিত মানুষকে শক্তি ও আশার আলো দিয়ে চলেছে এবং সম্মান, সাম্য ও ভক্তির এক শক্তিশালী আন্দোলনের জন্ম ঘটিয়েছে। তিনি প্রজন্ম থেকে প্রজন্মান্তরকে ন্যায়ের পথ, সম্প্রীতি এবং সমষ্টিগত উন্নয়নের পথে চলার অনুপ্রেরণা জুগিয়েছেন।

মতুয়া সংস্কৃতির এই সমৃদ্ধ এবং প্রাণবন্ত ঐতিহ্য এক গভীর আধ্যাত্মিক শক্তি এবং সাম্যের প্রতি অটুট অঙ্গীকারকে প্রতিফলিত করে। এটি আমাদের দেশের সামাজিক কাঠামোকে উল্লেখযোগ্যভাবে সমৃদ্ধ করেছে। গত এক দশকে, আমাদের সরকার মতুয়া সম্প্রদায়ের কল্যাণ, ক্ষমতায়ন এবং মর্যাদার প্রতি সম্পূর্ণ দায়বদ্ধ থেকে কাজ করে চলেছে।”