ಸೇವಾ ಸಂಕಲ್ಪದ ನಿರ್ಣಯ

Published By : Admin | February 24, 2026 | 16:53 IST
ಭಾರತದ ವಿಕಾಸ ಯಾತ್ರೆಯಲ್ಲಿ ಒಂದು ಹೊಸ ಆರಂಭ
‘ಸೇವಾ ತೀರ್ಥ’ದಲ್ಲಿ ಪ್ರಥಮ ಸಚಿವ ಸಂಪುಟ ಸಭೆ

ಇಂದು ಯುಗಾಬ್ದ 5127,

ವಿಕ್ರಮ ಸಂವತ್ಸರ 2082,

ಶಕ ಸಂವತ್ಸರ 1947,

ಫಾಲ್ಗುಣ ಮಾಸ,

ಶುಕ್ಲ ಪಕ್ಷ,

ಅಷ್ಟಮಿಯ ದಿನದಂದು,

24 ಫೆಬ್ರವರಿ, 2026 ರಂದು,

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ, ನೂತನ ಪ್ರಧಾನಮಂತ್ರಿ ಕಾರ್ಯಾಲಯ ‘ಸೇವಾ ತೀರ್ಥ’ದಲ್ಲಿ ಕೇಂದ್ರ ಸಚಿವ ಸಂಪುಟದ ಐತಿಹಾಸಿಕ ಪ್ರಥಮ ಸಭೆಯು ನಡೆಯುತ್ತಿದೆ.

ಈ ಸಭೆ ಮತ್ತು ಈ ಭವನವು ನವಭಾರತದ ನವನಿರ್ಮಾಣದ ಒಂದು ನೇರ ಅಭಿವ್ಯಕ್ತಿಯಾಗಿದೆ. ಈ ಶುಭಾರಂಭದೊಂದಿಗೆ, ನಾವು ಶತಮಾನಗಳ ಪರಿಶ್ರಮದಿಂದ ನಿರ್ಮಿತವಾಗುತ್ತಿರುವ ಆ ಭವಿಷ್ಯವನ್ನು ಸ್ವಾಗತಿಸುತ್ತಿದ್ದೇವೆ. ಸ್ವಾತಂತ್ರ್ಯದ ನಂತರ, ದಶಕಗಳ ಕಾಲ ಸೌತ್ ಬ್ಲಾಕ್‌ ನಲ್ಲಿರುವ ಪ್ರಧಾನ ಮಂತ್ರಿ ಕಾರ್ಯಾಲಯದ ಮೂಲಕ ಸರ್ಕಾರಗಳು ಪರಂಪರೆಯನ್ನು ಕಾಪಾಡಿಕೊಂಡು ಬಂದವು ಮತ್ತು ಭವಿಷ್ಯದ ಕನಸುಗಳನ್ನು ಕಂಡವು. ನಾವು ಅಂತಹ ಒಂದು ಭಾರತದ ಕನಸು ಕಂಡಿದ್ದೆವು, ಅದರ ಚಿಂತನೆ ಸ್ವದೇಶಿಯಾಗಿರಲಿ, ಸ್ವರೂಪ ಆಧುನಿಕವಾಗಿರಲಿ ಮತ್ತು ಸಾಮರ್ಥ್ಯ ಅನಂತವಾಗಿರಲಿ. ಇಂದು ಈ ‘ಸೇವಾ ತೀರ್ಥ’ವು ಅದೇ ಸಂಕಲ್ಪದ ಸಾಕಾರ ರೂಪವಾಗಿದ್ದು, ಪ್ರಜಾಪ್ರಭುತ್ವದ ಜನನಿಯಾಗಿ ಭಾರತದ ಗೌರವವನ್ನು ಹೆಚ್ಚಿಸಲಿದೆ.

ಈ ಶುಭ ಸಂದರ್ಭದಲ್ಲಿ ನಾವು ಈ ಸ್ಥಳದ ಇತಿಹಾಸವನ್ನೂ ಸಹ ಸ್ಮರಿಸುತ್ತಿದ್ದೇವೆ. ‘ಸೇವಾ ತೀರ್ಥ’ವು ಬ್ರಿಟಿಷ್ ಕಾಲದ ಆ ತಾತ್ಕಾಲಿಕ ಬ್ಯಾರಕ್ ‌ಗಳಿದ್ದ ಜಾಗದಲ್ಲಿ ನಿರ್ಮಾಣವಾಗಿದೆ. ಅಂದು ಬ್ರಿಟಿಷರ ಕಾಲದ ಬ್ಯಾರಕ್‌ ಗಳಿದ್ದ ಅದೇ ಸ್ಥಳದಲ್ಲಿ, ಇಂದು ರಾಷ್ಟ್ರದ ಆಡಳಿತವನ್ನು ಮುನ್ನಡೆಸುವ ಸಕ್ರಿಯ ಸಂಸ್ಥೆಯ ನಿರ್ಮಾಣವಾಗಿರುವುದು ನವ ಭಾರತದ ಕಾಯಕಲ್ಪದ ಸಂಕೇತವಾಗಿದೆ.

ಗುಲಾಮಗಿರಿಯ ಕಾಲಘಟ್ಟಕ್ಕೂ ಮೊದಲು, ಭಾರತವು ಒಂದು ಕಡೆ ತನ್ನ ಭೌತಿಕ ವೈಭವಕ್ಕೆ ಮತ್ತು ಇನ್ನೊಂದು ಕಡೆ ತನ್ನ ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾದ ರಾಷ್ಟ್ರವಾಗಿ ಗುರುತಿಸಲ್ಪಟ್ಟಿತ್ತು. ‘ಸೇವಾ ತೀರ್ಥ’ದ ಪರಿಕಲ್ಪನೆಯು ಈ ಎರಡೂ ಆದರ್ಶಗಳ ಸಮ್ಮಿಲನದಿಂದ ರೂಪುಗೊಂಡಿದೆ. ಕರ್ತವ್ಯ, ಸೇವೆ ಮತ್ತು ಸಮರ್ಪಣೆಯ ತ್ರಿವೇಣಿ ಸಂಗಮದೊಂದಿಗೆ ಈ ಕಾರ್ಯಸ್ಥಳವು ಒಂದು ಪುಣ್ಯಕ್ಷೇತ್ರದಂತೆ ಪವಿತ್ರವಾಗಿರಲಿ ಎಂಬುದು ಇದರ ಮೂಲಭಾವನೆಯಾಗಿದೆ.

‘ಸೇವಾ ತೀರ್ಥ’ದಲ್ಲಿ ನಡೆಯುತ್ತಿರುವ ಈ ಮೊದಲ ಸಭೆಯೊಂದಿಗೆ ಕೇಂದ್ರ ಸಚಿವ ಸಂಪುಟವು ಈ ಸಂಕಲ್ಪವನ್ನು ಪುನರುಚ್ಚರಿಸುತ್ತದೆ – ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ 140 ಕೋಟಿ ದೇಶವಾಸಿಗಳ ಸೇವಾ ಮನೋಭಾವದಿಂದ ಪ್ರೇರಿತವಾಗಿರುತ್ತದೆ ಮತ್ತು ರಾಷ್ಟ್ರ ನಿರ್ಮಾಣದ ವ್ಯಾಪಕ ಗುರಿಯೊಂದಿಗೆ ಬೆಸೆದುಕೊಂಡಿರುತ್ತದೆ.

ನಮ್ಮ ಪಾಲಿಗೆ ಸಾಂವಿಧಾನಿಕ ಮೌಲ್ಯಗಳು ಆ ನೈತಿಕ ಬದ್ಧತೆಯ ಅಭಿವ್ಯಕ್ತಿಯಾಗಿದ್ದು, ಅವು ಆಡಳಿತವನ್ನು ನಾಗರಿಕರ ಘನತೆ, ಸಮಾನತೆ ಮತ್ತು ನ್ಯಾಯದೊಂದಿಗೆ ಬೆಸೆಯುತ್ತವೆ. ‘ಸೇವಾ ತೀರ್ಥ’ದ ಕಾರ್ಯ ಸಂಸ್ಕೃತಿಯು ಈ ಮನೋಭಾವದಿಂದ ನಡೆಸಲ್ಪಡುತ್ತದೆ, ಇಲ್ಲಿನ ಪ್ರತಿಯೊಂದು ನೀತಿಯು ಸಂವಿಧಾನದ ಮೂಲ ಆಶಯಕ್ಕೆ ಅನುಗುಣವಾಗಿರುತ್ತದೆ ಮತ್ತು ಪ್ರತಿಯೊಂದು ನಿರ್ಧಾರವು ದೇಶವಾಸಿಗಳ ಆಕಾಂಕ್ಷೆಗಳಿಗೆ ಉತ್ತರದಾಯಿಯಾಗಿರುತ್ತದೆ.

ಕೇಂದ್ರ ಸಚಿವ ಸಂಪುಟವು ಈ ಸಂಕಲ್ಪವನ್ನು ಪುನರುಚ್ಚರಿಸುತ್ತದೆ – ಈ ಸಂಕೀರ್ಣದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ‘ನಾಗರಿಕ ದೇವೋ ಭವ’ ಎಂಬ ಭಾವನೆಯಿಂದ ಪ್ರೇರಿತವಾಗಿರುತ್ತದೆ. ಈ ಸ್ಥಳವು ಅಧಿಕಾರದ ಪ್ರದರ್ಶನಕ್ಕಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯನ ಸಬಲೀಕರಣದ ಕೇಂದ್ರವಾಗಲಿದೆ. ‘ಸೇವಾ ತೀರ್ಥ’ದಿಂದ ಸಂಚಾಲಿತವಾಗುವ ಆಡಳಿತದ ಪ್ರತಿಯೊಂದು ಪ್ರಯತ್ನವೂ ದೇಶದ ಕಟ್ಟಕಡೆಯ ವ್ಯಕ್ತಿಯ ಜೀವನವನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿರುತ್ತದೆ. ನಮ್ಮ ದೃಷ್ಟಿಕೋನದಂತೆ, ಪಾರದರ್ಶಕ, ಜವಾಬ್ದಾರಿಯುತ ಮತ್ತು ನಾಗರಿಕರ ಸಂವೇದನೆಗಳಿಗೆ ಸ್ಪಂದಿಸುವ ಆಡಳಿತ ಮಾದರಿಯನ್ನು ನಾವು ಇನ್ನಷ್ಟು ಬಲಪಡಿಸುತ್ತೇವೆ ಎಂದು ನಾವು ಪುನರುಚ್ಚರಿಸುತ್ತೇವೆ.

ಜಡತ್ವದ ಬದಲಿಗೆ ಕ್ರಿಯಾಶೀಲತೆಯನ್ನು, ಉದಾಸೀನತೆಯ ಬದಲಿಗೆ ನಿಷ್ಠೆಯನ್ನು ಮತ್ತು ಸಂದೇಹದ ಬದಲಿಗೆ ಪರಿಹಾರವನ್ನು ಉತ್ತೇಜಿಸುವ ಆಡಳಿತ ಮೂಲಸೌಕರ್ಯದ ಅಗತ್ಯಕ್ಕೆ 'ಸೇವಾ ತೀರ್ಥ' ಉತ್ತರವಾಗಿದೆ.

ಇದೇ ಚಿಂತನೆಯೊಂದಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು ಆಡಳಿತದ ಉದ್ದೇಶಕ್ಕೆ ಹೊಸ ಸ್ಪಷ್ಟತೆಯನ್ನು ನೀಡಿವೆ. ಕೋಟ್ಯಂತರ ನಾಗರಿಕರ ಜೀವನದಲ್ಲಿ ಉಂಟಾದ ಬದಲಾವಣೆಗಳು ಆಡಳಿತದ ಮೇಲಿರುವ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಕಳೆದ ಒಂದು ದಶಕದಲ್ಲಿ 25 ಕೋಟಿಗೂ ಹೆಚ್ಚು ನಾಗರಿಕರನ್ನು ಬಡತನದಿಂದ ಮುಕ್ತಗೊಳಿಸುವ ಮೂಲಕ, ದೇಶವು ಅಸಾಧ್ಯವೆಂದು ಭಾವಿಸಲಾದ ಕಾರ್ಯವನ್ನು ಸಾಧ್ಯವಾಗಿಸಿ ತೋರಿಸಿದೆ. ಇಂತಹ ಅನೇಕ ಸಾಧನೆಗಳ ಹಿಂದೆ ಸರ್ಕಾರದ ದೂರದೃಷ್ಟಿ, ಸಮಗ್ರ  ದೃಷ್ಟಿಕೋನ ಮತ್ತು ಅವಿರತ ಶ್ರಮ ಅಡಗಿದೆ.  ಆಯುಷ್ಮಾನ್ ಭಾರತ್ ಮೂಲಕ ಕೋಟ್ಯಂತರ ಜನರನ್ನು ಆರೋಗ್ಯ ಸುರಕ್ಷತೆಯೊಂದಿಗೆ ಬೆಸೆಯುವ ಹೆಮ್ಮೆಯನ್ನು ದೇಶವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅಡಿಯಲ್ಲಿ ಸುಮಾರು 80 ಕೋಟಿ ನಾಗರಿಕರಿಗೆ ಆಹಾರ ಭದ್ರತೆಯನ್ನು ತಲುಪಿಸುವ ಮೂಲಕ ಹಸಿವಿನ ಶಾಪವನ್ನು ಅಂತ್ಯಗೊಳಿಸಲಾಗಿದೆ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣದಿಂದ ಕೋಟ್ಯಂತರ ಕುಟುಂಬಗಳಿಗೆ ಮತ್ತು ಮಹಿಳೆಯರಿಗೆ ಘನತೆಯ ಜೀವನ ಲಭಿಸಿದೆ. ಈ ಎಲ್ಲಾ ಅಂಕಿಅಂಶಗಳು ಆಡಳಿತದ ಆ ದಿಕ್ಕನ್ನು ಸೂಚಿಸುತ್ತವೆ, ಅಲ್ಲಿ ನೀತಿಯ ಅಂತಿಮ ಉದ್ದೇಶವು ನಾಗರಿಕರ ಜೀವನವನ್ನು ಸರಳಗೊಳಿಸುವುದೇ ಆಗಿದೆ.

ಅದೇ ರೀತಿ, 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣದ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಆಶ್ರಯ ಮತ್ತು ಭದ್ರತೆ ಲಭಿಸಿದೆ. ಜಲ ಜೀವನ ಮಿಷನ್ ಮೂಲಕ ಗ್ರಾಮೀಣ ಭಾಗದ ಸುಮಾರು 12 ಕೋಟಿಗೂ ಅಧಿಕ ಹೊಸ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ.

ಇದೇ ರೀತಿ, 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣದಿಂದ ಕೋಟ್ಯಂತರ ಕುಟುಂಬಗಳಿಗೆ ತಲೆಗೊಂದು ಸೂರು ಮತ್ತು ಭದ್ರತೆ ಲಭಿಸಿದೆ. ಗ್ರಾಮೀಣ ಭಾಗಗಳಲ್ಲಿ ಜಲ ಜೀವನ ಮಿಷನ್ ಮೂಲಕ ಸುಮಾರು 16 ಕೋಟಿ ನಾಗರಿಕರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ತಲುಪಿಸಲಾಗಿದೆ.

ಕೇಂದ್ರ ಸಚಿವ ಸಂಪುಟವು ಭಾರತದ ಆರ್ಥಿಕತೆಯಲ್ಲಿ ಉಂಟಾದ ವ್ಯಾಪಕ ಬದಲಾವಣೆಗಳನ್ನು ಒಂದು ನಿರಂತರ ಸುಧಾರಣಾ ಪಯಣವಾಗಿ ನೋಡುತ್ತದೆ. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮಂತ್ರದೊಂದಿಗೆ ಜಿ.ಎಸ್.ಟಿ., ಡಿ.ಬಿ.ಟಿ ಮತ್ತು ಡಿಜಿಟಲ್ ಇಂಡಿಯಾ ಅಂತಹ ಸುಧಾರಣೆಗಳು ಆಡಳಿತವನ್ನು ಹೆಚ್ಚು ಪಾರದರ್ಶಕ, ಹೆಚ್ಚು ಸಕ್ಷಮ ಮತ್ತು ಹೆಚ್ಚು ನಾಗರಿಕ-ಕೇಂದ್ರಿತವಾಗಿಸಿವೆ. ತೆರಿಗೆ ವಿಷಯಗಳಲ್ಲಿ ಫೇಸ್‌ ಲೆಸ್ ತನಿಖಾ ಪ್ರಕ್ರಿಯೆಯಿಂದ ಪ್ರಾಮಾಣಿಕತೆಗೆ ಉತ್ತೇಜನ ಸಿಕ್ಕಿದೆ ಮತ್ತು ಸಾಮಾನ್ಯ ನಾಗರಿಕರ ವಿಶ್ವಾಸವು ಬಲಗೊಂಡಿದೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಭಾರತವು ಇಂದು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ತನ್ನದೇ ಆದ ಸಶಕ್ತ ಸ್ಥಾನವನ್ನು ನಿರ್ಮಿಸಿಕೊಂಡಿದೆ.

‘ಸೇವಾ ತೀರ್ಥ’ದ ಹೊಸ ಚೈತನ್ಯ ಮತ್ತು 'ಸುಧಾರಣಾ ಎಕ್ಸ್‌ ಪ್ರೆಸ್'ನ ತೀವ್ರ ವೇಗದೊಂದಿಗೆ, ಮುಂಬರುವ ದಿನಗಳಲ್ಲಿ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತದ ಸ್ಥಾನವನ್ನು ಖಚಿತಪಡಿಸುವ ಸಂಕಲ್ಪವನ್ನು ನಾವು ಪೂರೈಸುತ್ತೇವೆ ಎಂದು ಸಚಿವ ಸಂಪುಟವು ದೃಢ ಸಂಕಲ್ಪ ಮಾಡುತ್ತದೆ.

ಇಂದು ಕೇಂದ್ರ ಸಚಿವ ಸಂಪುಟವು ‘ವಿಕಸಿತ ಭಾರತ 2047’ರ ರಾಷ್ಟ್ರೀಯ ಸಂಕಲ್ಪಕ್ಕೆ ತನ್ನನ್ನು ತಾನು ಪುನರ್ ಸಮರ್ಪಿಸಿಕೊಳ್ಳುತ್ತದೆ. ಇದೊಂದು ದೀರ್ಘಕಾಲೀನ ರಾಷ್ಟ್ರೀಯ ಪಯಣವಾಗಿದ್ದು, ಇಂದು ಕೈಗೊಳ್ಳುವ ನಿರ್ಧಾರಗಳು ಮುಂದಿನ ಪೀಳಿಗೆಗಳ ಭವಿಷ್ಯದ ರೂಪುರೇಷೆಗಳನ್ನು ನಿರ್ಧರಿಸಲಿವೆ. ‘ಸೇವಾ ತೀರ್ಥ’ದಲ್ಲಿ ನಡೆಯುತ್ತಿರುವ ಈ ಮೊದಲ ಸಭೆಯು, ಅಭಿವೃದ್ಧಿಯ ಗುರಿ ಎಷ್ಟು ದೊಡ್ಡದಾಗಿದೆಯೋ, ಅದರ ಬಗ್ಗೆ ನಮ್ಮ ಹೊಣೆಗಾರಿಕೆಯೂ ಅಷ್ಟೇ ಗಂಭೀರವಾಗಿರಬೇಕು ಎಂಬುವುದನ್ನು ನಮಗೆ ನೆನಪಿಸುತ್ತದೆ.

ಈ ಸಂಕೀರ್ಣವು ಕೇವಲ ಒಂದು ಆಧುನಿಕ ಕಾರ್ಯಸ್ಥಳವಲ್ಲ; ಇದು ಆಡಳಿತದ ನೂತನ ಕಾರ್ಯಸಂಸ್ಕೃತಿಯ ಸಂಕೇತವೂ ಹೌದು. ಇಲ್ಲಿನ ಆಧುನಿಕ ತಂತ್ರಜ್ಞಾನ ಮತ್ತು ದಕ್ಷ ಕಾರ್ಯವೈಖರಿಯ ಮೂಲಕ ಸರ್ಕಾರದ ಕಾರ್ಯಕ್ಷಮತೆಯು ಹೊಸ ಎತ್ತರಕ್ಕೆ ಏರಲಿದೆ. ಇಲ್ಲಿಂದ ಚಲಿಸುವ ಪ್ರತಿಯೊಂದು ಕಡತ ಮತ್ತು ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ‘ಕರ್ಮಯೋಗಿ’ಯೂ ಸಹ, ತನ್ನ ಕಾರ್ಯವು ದೇಶದ ಕಟ್ಟಕಡೆಯ ವ್ಯಕ್ತಿಯ ಜೀವನವನ್ನು ಸರಳಗೊಳಿಸುವುದರೊಂದಿಗೆ ಬೆಸೆದುಕೊಂಡಿದೆ ಎಂಬ ಭಾವನೆಯಿಂದ ಪ್ರೇರಿತರಾಗುತ್ತಾರೆ. ಸಂಪನ್ಮೂಲಗಳ ವಿವೇಕಯುತ ಬಳಕೆಯನ್ನು ಉತ್ತೇಜಿಸಲು ಮತ್ತು ಕಳೆದ ಕೆಲವು ವರ್ಷಗಳಲ್ಲಿ ದೇಶವು ಕಂಡ ಸುಧಾರಣೆಗಳ ನಿರಂತರ ಪಯಣಕ್ಕೆ ವೇಗ ನೀಡಲು ಕೇಂದ್ರ ಸಚಿವ ಸಂಪುಟವು ಇಲ್ಲಿ ಸಂಕಲ್ಪ ಮಾಡುತ್ತದೆ.

ಈ ಮೊದಲ ಸಭೆಯು ಭಾರತವು ಇಂದು ಪರಿವರ್ತನೆಯ ಅಂತಹ ಒಂದು ಹಂತದಲ್ಲಿ ನಿಂತಿದೆ ಎಂಬ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುತ್ತದೆ, ಅಲ್ಲಿ ನೀತಿ, ನಿಯತ್ತು ಮತ್ತು ನೇತೃತ್ವವು ವಿಕಸಿತ ಭಾರತದ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ. ‘ಸೇವಾ ತೀರ್ಥ’ದಿಂದ ಆರಂಭವಾಗುವ ಈ ಹೊಸ ಕಾರ್ಯಸಂಸ್ಕೃತಿಯು ಭಾರತವನ್ನು ಒಂದು ಸಮರ್ಥ, ಸಶಕ್ತ ಮತ್ತು ಆತ್ಮನಿರ್ಭರ ರಾಷ್ಟ್ರವನ್ನಾಗಿ ಮುನ್ನಡೆಸಲು ಬುನಾದಿಯಾಗಲಿದೆ.

ಸಶಕ್ತ ಭಾರತದ ಈ ನವನಿರ್ಮಾಣದಿಂದ ಜಾಗತಿಕ ಅಸ್ಥಿರತೆಯ ಈ ಕಾಲದಲ್ಲಿ ವಿಶ್ವ ಶಾಂತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ ಎಂಬ ವಿಶ್ವಾಸವನ್ನು ನಾವು ವ್ಯಕ್ತಪಡಿಸುತ್ತೇವೆ. ಹೊಸ ಜಾಗತಿಕ ಕ್ರಮದಲ್ಲಿ ಉತ್ತಮ ಭವಿಷ್ಯಕ್ಕಾಗಿ ಭಾರತವು ಶಾಶ್ವತ ಪಾತ್ರವನ್ನು ವಹಿಸಲಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೇತೃತ್ವದಲ್ಲಿ, ಕೇಂದ್ರ ಸಚಿವ ಸಂಪುಟವು ‘ಸೇವಾ ತೀರ್ಥ’ವನ್ನು ಸಂವೇದನಾಶೀಲ, ಜವಾಬ್ದಾರಿಯುತ ಮತ್ತು ನಾಗರಿಕ-ಕೇಂದ್ರಿತ ಆಡಳಿತದ ಒಂದು ಜಾಗತಿಕ ಉದಾಹರಣೆಯನ್ನಾಗಿ ಮಾಡಲು ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. 2047ರ ವೇಳೆಗೆ ಭಾರತವನ್ನು ಒಂದು ಸಮೃದ್ಧ, ಸಮರ್ಥ ಮತ್ತು ಆತ್ಮನಿರ್ಭರ ರಾಷ್ಟ್ರವನ್ನಾಗಿ ಮಾಡುವ ಪಯಣದಲ್ಲಿ ಈ ಸಂಕೀರ್ಣವು ರಾಷ್ಟ್ರೀಯ ಆಕಾಂಕ್ಷೆಗಳ ಸಶಕ್ತ ಕೇಂದ್ರವಾಗಲಿದೆ ಎಂದು ಸಚಿವ ಸಂಪುಟವು ಸಂಕಲ್ಪ ಮಾಡುತ್ತದೆ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
10 Years of UPI: From 18 mln to 219 bln transactions, volumes jump 12,000x

Media Coverage

10 Years of UPI: From 18 mln to 219 bln transactions, volumes jump 12,000x
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಎಪ್ರಿಲ್ 2026
April 10, 2026

Safe Anchor, Green Engine, Digital Dynamo: PM Modi’s Blueprint for India’s Economic Renaissance