ಮುಸ್ಲಿಂ ವರ್ಲ್ಡ್ ಲೀಗ್ ನ ಪ್ರಧಾನ ಕಾರ್ಯದರ್ಶಿ ಶೇಖ್ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್-ಇಸ್ಸಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಜೆಡ್ಡಾದಲ್ಲಿ ಭೇಟಿ ಮಾಡಿದರು. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು ಮತ್ತು ಜೀವ ಕಳೆದುಕೊಂಡ ಅಮಾಯಕರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದರು.
ಜುಲೈ 2023 ರಲ್ಲಿ ಹೊಸದಿಲ್ಲಿಯಲ್ಲಿ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾಡಿರುವ ತಮ್ಮ ಹಿಂದಿನ ಭೇಟಿಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಸಹನತೆ, ಸಹಿಷ್ಣು ಮೌಲ್ಯಗಳನ್ನು ಉತ್ತೇಜಿಸುವಲ್ಲಿ, ಮಿತವಾದವನ್ನು ಪ್ರತಿಪಾದಿಸುವ ಮತ್ತು ಸಾಮಾಜಿಕ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಮುನ್ನಡೆಸುವಲ್ಲಿ ಮುಸ್ಲಿಂ ವರ್ಲ್ಡ್ ಲೀಗ್ ನ ಪಾತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ವಸುಧೈವ ಕುಟುಂಬಕಂ [ಜಗತ್ತೇ ಒಂದು ಕುಟುಂಬ] ಎಂಬ ಭಾರತದ ಪ್ರಾಚೀನ ತತ್ತ್ವಶಾಸ್ತ್ರವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು ಭಾರತವು ಬಹು-ಸಾಂಸ್ಕೃತಿಕ, ಬಹು-ಭಾಷಿಕ, ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸದಾ ಆಚರಿಸುತ್ತದೆ ಎಂದು ತಿಳಿಸಿದರು. ಭಾರತದ ಅಚಲ ವೈವಿಧ್ಯತೆಯ ಸ್ವರೂಪವು, ಅದರ ರೋಮಾಂಚಕ ಸಮಾಜ ಮತ್ತು ರಾಜಕೀಯಕ್ಕೆ ಆಕಾರವನ್ನು ನೀಡಿದ ಅಮೂಲ್ಯ ಶಕ್ತಿಯಾಗಿದೆ. ಉಗ್ರವಾದ, ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಮುಸ್ಲಿಂ ವರ್ಲ್ಡ್ ಲೀಗ್ ನ ದೃಢ ನಿಲುವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.
ಸೌದಿ ಅರೇಬಿಯಾದೊಂದಿಗಿನ ತನ್ನ ಸಂಬಂಧಗಳಿಗೆ ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು, ಅದು ಇಂದು ಹಲವಾರು ಕ್ಷೇತ್ರಗಳಲ್ಲಿ ನಿರಂತರ ಪಾಲುದಾರಿಕೆಯಾಗಿ ವಿಕಸನಗೊಂಡಿದೆ. ನಿಕಟ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳು ಈ ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ.


