ಶೇರ್
 
Comments
ಕಳೆದ 6 ವರ್ಷಗಳಲ್ಲಿ ತಮಿಳುನಾಡಿನಲ್ಲಿ 50 ಸಾವಿರ ಕೋಟಿ ರೂ.ಗೂ ಅಧಿಕ ತೈಲ ಮತ್ತು ಅನಿಲ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ
ನಮ್ಮ ಸರ್ಕಾರ ಮಧ್ಯಮ ವರ್ಗದವರ ಕಾಳಜಿಗೆ ಸಂವೇದನಶೀಲವಾಗಿದೆ
ತೈಲ ಮತ್ತು ಅನಿಲ ಮೂಲಸೌಕರ್ಯ ಸೃಷ್ಟಿಗೆ ಐದು ವರ್ಷಗಳಲ್ಲಿ ಏಳೂವರೆ ಲಕ್ಷ ಕೋಟಿ ರೂ. ವೆಚ್ಚ ಮಾಡಲು ನಾವು ಯೋಜಿಸಿದ್ದೇವೆ: ಪ್ರಧಾನಮಂತ್ರಿ

ವಣಕ್ಕಂ!

ತಮಿಳುನಾಡು ರಾಜ್ಯಪಾಲರಾದ ಶ್ರೀ ಬನ್ವಾರಿಲಾಲ್ ಪುರೋಹಿತ್ ಜೀ, ಮುಖ್ಯಮಂತ್ರಿ ಶ್ರೀ ಪಳನಿಸ್ವಾಮಿ ಜೀ, ಉಪಮುಖ್ಯಮಂತ್ರಿ ಶ್ರೀ ಪನ್ನೀರ್’ಸೆಲ್ವಂ ಜೀ, ನನ್ನ ಸಂಪುಟ ಸಹೋದ್ಯೋಗಿ ಶ್ರೀ ಧರ್ಮೇಂದ್ರ ಪ್ರಧಾನ್ ಜೀ, ವೇದಿಕೆಯಲ್ಲಿರುವ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ,

ವಣಕ್ಕಂ!

ನಾನಿಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಗೌರವವೆನಿಸಿದೆ. ಪ್ರಮುಖ ತೈಲ ಮತ್ತು ಅನಿಲ ಯೋಜನೆಗಳ ಆರಂಭಕ್ಕೆ ಚಾಲನೆ ನೀಡಲು ನಾವಿಂದು ಇಲ್ಲಿ ಸೇರಿದ್ದೇವೆ. ಈ ಯೋಜನೆಗಳು ತಮಿಳುನಾಡಿಗೆ ಮಾತ್ರ ಪ್ರಮುಖವಾಗದೆ, ಇಡೀ ರಾಷ್ಟ್ರಕ್ಕೆ ಮಹತ್ವಪೂರ್ಣವಾಗಿವೆ.

ಸ್ನೇಹಿತರೆ,

ನೀವು ಆಲೋಚಿಸುವಂತೆ ಮಾಡುವ 2 ಸಂಗತಿಗಳನ್ನು ಹಂಚಿಕೊಳ್ಳುವ ಮೂಲಕ ನಾನು ಮಾತು ಪ್ರಾರಂಭಿಸುತ್ತೇನೆ. 2019-20ರಲ್ಲಿ ಭಾರತವು ತನ್ನು ಬೇಡಿಕೆಗಳಿಗೆ ಸ್ಪಂದಿಸಲು ಶೇ.85ಕ್ಕಿಂತ ಅಧಿಕ ತೈಲ ಮತ್ತು ಶೇ.53ಕ್ಕಿಂತ ಹೆಚ್ಚಿನ ಅನಿಲವನ್ನು ಆಮದು ಮಾಡಿಕೊಂಡಿತ್ತು. ನಮ್ಮಂತಹ ವೈವಿಧ್ಯಮಯ ಮತ್ತು ಪ್ರತಿಭಾವಂತ ರಾಷ್ಟ್ರಕ್ಕೆ ಇಂಧನ ಆಮದು ಅವಲಂಬನೆ ಅಗತ್ಯವೇ? ನಾನು ಇಲ್ಲಿ ಯಾರೊಬ್ಬರನ್ನೂ ಟೀಕೆ ಮಾಡಲು ಬಯಸುತ್ತಿಲ್ಲ. ಆದರೆ, ನಾನಿಲ್ಲಿ ಒತ್ತು ನೀಡಿ ಹೇಳುವುದೇನೆಂದರೆ, ಈ ವಿಷಯಗಳ ಮೇಲೆ ನಾವು ಬಹು ಹಿಂದೆಯೇ ಗಮನ ನೀಡಿದ್ದರೆ, ನಮ್ಮ ಮಧ್ಯಮ ವರ್ಗದ ಜನರಿಗೆ ಇಂಧನ ಹೊರೆಯಾಗುತ್ತಿರಲಿಲ್ಲ.

ಇದೀಗ ನಮ್ಮೆಲ್ಲರ ಸಂಘಟಿತ ಕರ್ತವ್ಯವೇನೆಂದರೆ, ಸ್ವಚ್ಛ ಮತ್ತು ಹಸಿರು ಇಂಧನ ಮೂಲಗಳ ಅಭಿವೃದ್ಧಿ ಮತ್ತು ಸಂಶೋಧನೆ ಕಡೆಗೆ ಆದ್ಯತೆಯ ಗಮನ ನೀಡಿ, ಇಂಧನ ಅವಲಂಬನೆಯನ್ನು ನಿಯಂತ್ರಣಕ್ಕೆ ತರುವುದಾಗಿದೆ. ದೇಶದ ಮಧ್ಯಮ ವರ್ಗಗಳ ಜನರ ಕಳವಳಗಳು ಮತ್ತು ಸಂಕಷ್ಟಗಳಿಗೆ ನಮ್ಮ ಸರ್ಕಾರ ಸೂಕ್ಷ್ಮವಾಗಿದೆ. ಅದಕ್ಕಾಗಿಯೇ ಭಾರತವೀಗ ದೇಶದ ಕೃಷಿಕರು ಮತ್ತು ಗ್ರಾಹಕರಿಗೆ ನೆರವಾಗುವ ಸಲುವಾಗಿ ಎಥನಾಲ್ ಉತ್ಪಾದನೆಗೆ ಗಮನ ಹೆಚ್ಚಿಸಿದೆ. ಸೌರಶಕ್ತಿ ವಲಯದಲ್ಲಿ ನಾಯಕ ಸ್ಥಾನ ಗಳಿಸಲು ಅದರ ಬಳಕೆಯನ್ನು ಹೆಚ್ಚಿಸುತ್ತಿದೆ. ಜನತೆಯ ಜೀವನ ಸುಲಭವಾಗುವಂತೆ ಮಾಡಲು ಮತ್ತು ಫಲದಾಯಕವಾಗಿಸಲು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲಾಗುತ್ತಿದೆ. ಮಧ್ಯಮ ವರ್ಗಗಳ ಕುಟುಂಬಗಳಲ್ಲಿ ಹೆಚ್ಚಿನ ಉಳಿತಾಯವನ್ನು ಸಕ್ರಿಯಗೊಳಿಸುವ ಸಲುವಾಗಿ ಎಲ್’ಇಡಿ ಬಲ್ಬ್’ಗಳಂತಹ ಪರ್ಯಾಯ ವಿದ್ಯುತ್ ಮೂಲಗಳನ್ನು ಅಳವಡಿಸಲಾಗುತ್ತಿದೆ.

ದೇಶದ ಲಕ್ಷಾಂತರ ಜನರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ರದ್ದಿ (ಚಿಂದಿ) ನೀತಿಯನ್ನು ಅನಾವರಣಗೊಳಿಸಿದೆ. ಭಾರತದ ಹೆಚ್ಚಿನ ನಗರಗಳಲ್ಲಿ ಇದೀಗ ಮೆಟ್ರೊ ರೈಲು ಸೌಕರ್ಯ ಆರಂಭಿಸಲಾಗಿದೆ. ಸೋಲಾರ್ ಪಂಪುಗಳು ಹೆಚ್ಚಿನ ಜನಪ್ರಿಯತೆ ಗಳಿಸುತ್ತಿವೆ. ಅವು ಕೃಷಿಕರಿಗೆ ಅತ್ಯಧಿಕ ಪ್ರಮಾಣದಲ್ಲಿ ನೆರವಾಗುತ್ತಿವೆ. ಜನರ ಬೆಂಬಲವಿಲ್ಲದಿದ್ದರೆ ಇವೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಭಾರತವೀಗ ಕೆಲಸ ಮಾಡುತ್ತಿದೆ. ಜತೆಗೆ, ನಮ್ಮ ಇಂಧನ ಆಮದು ಅವಲಂಬನೆಯನ್ನು ಸಹ ನಿಯಂತ್ರಿಸುತ್ತಿದೆ. ಅದೇ ವೇಳೆ, ನಾವು ನಮ್ಮ ಆಮದು ಮೂಲಗಳನ್ನು ವೈವಿದ್ಯಗೊಳಿಸುತ್ತಿದ್ದೇವೆ.

ಸ್ನೇಹಿತರೆ,

ನಾವು ಇವನ್ನೆಲ್ಲಾ ಹೇಗೆ ಮಾಡುತ್ತಿದ್ದೇವೆ? ಸಾಮರ್ಥ್ಯ ಅಭಿವೃದ್ಧಿ ಮೂಲಕ ಮಾಡುತ್ತಿದ್ದೇವೆ. 2019-2020ರಲ್ಲಿ ತೈಲ ಸಂಸ್ಕರಣೆಯಲ್ಲಿ ನಾವು ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದೇವೆ. ಸುಮಾರು 65.2 ದಶಲಕ್ಷ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿದ್ದೇವೆ. ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ನಮ್ಮ ಕಂಪನಿಗಳು ಹೊರರಾಷ್ಟ್ರಗಳಲ್ಲಿ ಗುಣಮಟ್ಟದ ತೈಲ ಮತ್ತು ಅನಿಲ ಘಟಕಗಳನ್ನು ಸ್ವಾಧಿನಪಡಿಸಿಕೊಂಡು, ಉದ್ಯಮಗಳನ್ನು ಮುನ್ನಡೆಸುತ್ತಿವೆ. ಇದೀಗ, ಭಾರತೀಯ ತೈಲ ಮತ್ತು ಅನಿಲ ಕಂಪನಿಗಳು 27 ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 2 ಲಕ್ಷ 70 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಬಂಡವಾಳ ತೊಡಗಿಸಿವೆ.

ಸ್ನೇಹಿತರೆ,

‘ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್’ ಗುರಿ ಸಾಧನೆಗೆ ದೇಶವ್ಯಾಪಿ ಅನಿಲ ಪೈಪ್’ಲೈನ್ ಅಭಿವೃದ್ಧಿಪಡಿಸುತ್ತಿದ್ದೇವೆ. ಮುಂದಿನ 5 ವರ್ಷಗಳಲ್ಲಿ ತೈಲ ಮತ್ತು ಅನಿಲ ಮೂಲಸೌಕರ್ಯ ಸೃಷ್ಟಿಗೆ ಏಳೂವರೆ ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜಿಸಿದ್ದೇವೆ. ದೇಶದ 407 ಜಿಲ್ಲೆಗಳಿಗೆ ಸೇರಿದ ನಗರಗಳಲ್ಲಿ ಅನಿಲ ವಿತರಣಾ ಜಾಲ ಸ್ಥಾಪಿಸಿ, ವಿಸ್ತರಿಸಲು ಬಲವಾದ ಒತ್ತು ನೀಡಿದ್ದೇವೆ.

ಸ್ನೇಹಿತರೆ,

ನಮ್ಮ ಗ್ರಾಹಕ ಕೇಂದ್ರೀಕೃತ ಯೋಜನೆಗಳಾದ ಪಹಲ್ ಮತ್ತು ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಗಳ ಮೂಲಕ ಪ್ರತಿ ಭಾರತೀಯ ಕುಟುಂಬಕ್ಕೂ ಅನಿಲ ಲಭ್ಯತೆಗೆ ಸಹಕರಿಸುತ್ತಿದ್ದೇವೆ. ತಮಿಳುನಾಡಿನ ಶೇ.95ಕ್ಕಿಂತ ಎಲ್ಪಿಜಿ ಗ್ರಾಹಕರು ಪಹಲ್ ಯೋಜನೆಗೆ ಸೇರ್ಪಡೆ ಆಗಿದ್ದಾರೆ. ಶೇ.90ಕ್ಕಿಂತ ಅಧಿಕ ಸಕ್ರಿಯ ಗ್ರಾಹಕರು ನೇರ ಸಬ್ಸಿಡಿ ವರ್ಗಾವಣೆಯ ಪ್ರಯೋಜನ ಪಡೆಯುತ್ತಿದ್ದಾರೆ. ಉಜ್ವಲ ಯೋಜನೆ ಅಡಿ, ತಮಿಳುನಾಡಿನಲ್ಲಿ 32 ಲಕ್ಷಕ್ಕಿಂತ ಹೆಚ್ಚಿನ ಬಿಪಿಎಲ್ ಕುಟುಂಬಗಳಿಗೆ ಹೊಸ ಅನಿಲ ಸಂಪರ್ಕ ನೀಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ, 31.6 ಲಕ್ಷಕ್ಕಿಂತ ಹೆಚ್ಚಿನ ಅಧಿಕ ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್’ಗಳನ್ನು ಒದಗಿಸಲಾಗುತ್ತಿದೆ.

ಸ್ನೇಹಿತರೆ,

ಭಾರತೀಯ ತೈಲ ನಿಗಮವು 143 ಕಿ.ಮೀ. ಉದ್ದದ ಅನಿಲ ಪೈಪ್’ಲೈನ್ ಯೋಜನೆಯನ್ನು ರಾಮನಾಥಪುರಂನಿಂದ ಟುಟಿಕೊರಿನ್’ವರೆಗೆ ನಿರ್ಮಿಸಿದೆ. ಅದನ್ನು ನಾವಿಂದು ಲೋಕಾರ್ಪಣೆ ಮಾಡುತ್ತಿದ್ದೇವೆ. ಈ ಯೋಜನೆಗೆ ಒಎನ್’ಜಿಸಿ ಗ್ಯಾಸ್ ಫೀಲ್ಡ್’ನಿಂದ ಅನಿಲ ಪೂರೈಕೆ ಆಗಲಿದೆ. 4,500 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಬೃಹತ್ ನೈಸರ್ಗಿಕ ಅನಿಲ ಪೈಪ್’ಲೈನ್ ಯೋಜನೆಯ ಭಾಗವಾಗಿ ತಮಿಳುನಾಡಿನ ಈ ಯೋಜನೆ ಅನಾವರಣಗೊಳ್ಳುತ್ತಿದೆ.

ಸ್ನೇಹಿತರೆ,

ಇದರಿಂದ ಪ್ರಯೋಜನ ಲಭಿಸಲಿದೆ: ಎನ್ನೋರ್, ತಿರಿವಲ್ಲೂರ್, ಬೆಂಗಳೂರು, ಪುದುಚೆರಿ, ನಾಗಪಟ್ಟಿನಂ, ಮದುರೈ, ಟ್ಯೂಟಿಕೊರಿನ್ ಅನಿಲ ಪೈಪ್’ಲೈನ್ ಯೋಜನೆಗಳು ನಗರಗಳ ಅನಿಲ ಪೈಪ್’ಲೈನ್ ಯೋಜನೆಗಳ ಅಭಿವೃದ್ಧಿಗೆ ಅನುವು ಮಾಡಿಕೊಡಲಿವೆ. ತಮಿಳುನಾಡಿನ 10 ಜಿಲ್ಲೆಗಳಲ್ಲಿ ಈ ಯೋಜನೆಗಳನ್ನು 5,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರತಿ ಕುಟುಂಬಕ್ಕೆ ಸ್ವಚ್ಛ ಇಂಧನ, ಪಿಎನ್’ಜಿ, ವಾಹನಗಳು ಮತ್ತು ಸ್ಥಳೀಯ ಕೈಗಾರಿಕೆಗಳಿಗೆ ಪರ್ಯಾಯ ಸಾರಿಗೆ ಇಂಧನವಾಗಿ ಸಿಎನ್’ಜಿ ಲಭ್ಯವಾಗಲಿವೆ. ಒಎನ್’ಜಿಸಿ ಫೀಲ್ಡ್’ನಿಂದ ಇದೀಗ ಟುಟಿಕೊರಿನ್’ನಲ್ಲಿರುವ ಸದರ್ನ್ ಪೆಟ್ರೋಕೆಮಿಕಲ್ ಇಂಡಸ್ಟ್ರೀಸ್ ಲಿಮಿಟೆಡ್’ಗೆ ಅನಿಲ ವಿತರಣೆ ಆಗಲಿದೆ. ಈ ಪೈಪ್’ಲೈನ್ ಯೋಜನೆಯು ರಸಗೊಬ್ಬರ ತಯಾರಿಸುವ ಸ್ಪಿಕ್ ಕಂಪನಿಗೆ ಅಗ್ಗದ ದರಕ್ಕೆ ನೈಸರ್ಗಿಕ ಅನಿಲವನ್ನು ಪೂರೈಸಲಿದೆ.

ಕಚ್ಚಾ ವಸ್ತುವಿನ ರೂಪದ ನೈಸರ್ಗಿಕ ಅನಿಲವು ನಿರಂತರ ಲಭ್ಯವಾಗಲಿದೆ. ಅದನ್ನು ದಾಸ್ತಾನು ಮಾಡುವ ಅಗತ್ಯ ಇರುವುದಿಲ್ಲ. ಇದರಿಂದ ಸ್ಪಿಕ್ ಕಂಪನಿಗೆ ರಸಗೊಬ್ಬರ ಉತ್ಪಾದನೆಯಲ್ಲಿ ವಾರ್ಷಿಕ 70ರಿಂದ 95 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ರಸಗೊಬ್ಬರ ತಯಾರಿಕೆಯ ಅಂತಿಮ ವೆಚ್ಚದಲ್ಲೂ ಗಣನೀಯ ಇಳಿಕೆ ಕಂಡುಬರಲಿದೆ. ನಮ್ಮಇಂಧನ ವಲಯದಲ್ಲಿ ಅನಿಲ ಉತ್ಪಾದನೆ ಸಾಮರ್ಥ್ಯವನ್ನು ಈಗಿರುವ 6.3%ನಿಂದ 15%ಗೆ ಹೆಚ್ಚಿಸಲು ನಾವು ಉತ್ಸುಕರಾಗಿದ್ದೇವೆ.

ಸ್ನೇಹಿತರೆ,

ಅಭಿವೃದ್ಧಿ ಯೋಜನೆಗಳು ನಮಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ. ನಾಗಪಟ್ಟಿನಂನಲ್ಲಿರುವ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಸಿಪಿಸಿಎಲ್)ನ ಹೊಸ ಸಂಸ್ಕರಣಾ ಘಟಕವು ಸುಮಾರು ಶೇ.80ರಷ್ಟು ದೇಶೀಯ ಕಚ್ಚಾವಸ್ತುಗಳನ್ನು ಬಳಸಿ ಇಂಧನ ಉತ್ಪಾದಿಸುವ ಮತ್ತು ಸೇವೆ ಒದಗಿಸುವ ಮೂಲವಾಗಿದೆ. ಈ ಸಂಸ್ಕರಣಾ ಘಟಕವು ಸಾರಿಗೆ ಸೌಲಭ್ಯಗಳ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ಜತೆಗೆ, ಈ ಭಾಗದಲ್ಲಿರುವ ಸಣ್ಣ ಉದ್ದಿಮೆಗಳಿಗೆ ನೆರವಾಗಲಿದೆ. ಈ ಘಟಕವು ಬಿಎಸ್-4 ನಿಯಮಗಳಿಗೆ(ವಿಶೇಷತೆ) ಸ್ಪಂದಿಸುವ ಮೌಲ್ಯವರ್ಧಿತ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲಿದೆ.

ಸ್ನೇಹಿತರೆ,

ಭಾರತವೀಗ, ನವೀಕರಿಸಬಹುದಾದ ಇಂಧನಗಳ ಉತ್ಪಾದನೆ ಪಾಲನ್ನು ಹೆಚ್ಚಿಸಿಕೊಂಡಿದೆ. 2030ರ ಹೊತ್ತಿಗೆ, ಇಂಧನ ಮೂಲಗಳ ಪೈಕಿ ಶೇ.40ರಷ್ಟು ಇಂಧನವನ್ನು ಹಸಿರು ಇಂಧನ ಮೂಲಗಳಿಂದಲೇ ಉತ್ಪಾದಿಸಲು ದೇಶ ಗುರಿ ಹಾಕಿಕೊಂಡಿದೆ. ಇಂದು ಉದ್ಘಾಟನೆಯಾದ ಮನಾಲಿಯಲ್ಲಿರುವ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಸಿಪಿಸಿಎಲ್)ನ ಹೊಸ ಗ್ಯಾಸೊಲಿನ್ ಡಿಸಲ್ಫರೈಸೇಷನ್ ಘಟಕವು ಹಸಿರು ಇಂಧನ ಉತ್ಪಾದನೆ ಹೆಚ್ಚಳ ಮಾಡುವ ಪ್ರಯತ್ನಗಳ ಭಾಗವಾಗಿದೆ. ಈ ಸಂಸ್ಕರಣಾ ಘಟಕವು ಬಿಎಸ್-6 ವಿಶೇಷತೆಗಳಿಗೆ ಸ್ಪಂದಿಸುವ ಸಲ್ಫರ್ ಪ್ರಮಾಣ ಕಡಿಮೆ ಇರುವ ಇಂಧನವನ್ನು ಉತ್ಪಾದಿಸಲಿದೆ.

ಸ್ನೇಹಿತರೆ,

2014ರಿಂದ ನಾವು ದೇಶದ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದೇವೆ. ತೈಲ ಮತ್ತು ಅನಿಲ ಅನ್ವೇಷಣೆ, ಉತ್ಪಾದನೆ, ನೈಸರ್ಗಿಕ ಅನಿಲ, ಮಾರುಕಟ್ಟೆ ಮತ್ತು ವಿತರಣಾ ಜಾಲ ವಿಸ್ತರಿಸಿದ್ದೇವೆ. ಜತೆಗೆ, ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದ್ದೇವೆ. ಇವೆಲ್ಲವೂ ಹೂಡಿಕೆ-ಸ್ನೇಹಿ ಕ್ರಮಗಳಿಂದ ಸಾಧ್ಯವಾಗಿದೆ. ವಿವಿಧ ರಾಜ್ಯಗಳಲ್ಲಿ ಇದ್ದ ತೆರಿಗೆ ಅಡೆತಡೆಗಳನ್ನು ನಿವಾರಿಸಿದ್ದೇವೆ. ತೆರಿಗೆ ಪದ್ಧತಿಯ ಏಕರೂಪತೆಯಿಂದ ನೈಸರ್ಗಿಕ ಅನಿಲ ಉತ್ಪಾದನೆ ವೆಚ್ಚ ನಿಯಂತ್ರಣ ಸಾಧ್ಯವಾಗಿದೆ, ನಾನಾ ಕೈಗಾರಿಕೆಗಳಲ್ಲಿ ಇಂಧನ ಬಳಕೆ ಪ್ರಮಾಣ ಹೆಚ್ಚಾಗಿದೆ. ಜಿಎಸ್’ಟಿ ತೆರಿಗೆ ಜಾಲಕ್ಕೆ ನೈಸರ್ಗಿಕ ಅನಿಲ ವಲಯವನ್ನು ತರಲು ನಾವು ಬದ್ಧರಾಗಿದ್ದೇವೆ.

ನಾನು ಇಲ್ಲಿಂದಲೇ ಇಡೀ ವಿಶ್ವಕ್ಕೆ ಹೇಳಲು ಬಯಸುವುದೇನೆಂದರೆ, ಜಾಗತಿಕ ಹೂಡಿಕೆದಾರರೆ, ಭಾರತಕ್ಕೆ ಬನ್ನಿ. ಭಾರತದ ತೈಲ ಮತ್ತು ಅನಿಲ ವಲಯದಲ್ಲಿ ಅಪಾರ ಹೂಡಿಕೆ ಮಾಡಿ!

ಸ್ನೇಹಿತರೆ,

ಕಳೆದ 6 ವರ್ಷಗಳಲ್ಲಿ, ತಮಿಳುನಾಡು ರಾಜ್ಯವೊಂದರಲ್ಲೇ 50,000 ಕೋಟಿ ರೂ,ಗಿಂತ ಹೆಚ್ಚಿನ ತೈಲ ಮತ್ತು ಅನಿಲ ಯೋಜನೆಗಳ ಜಾರಿಗೆ ಅನುಮೋದನೆ ನೀಡಲಾಗಿದೆ. ಅದೇ ಅವಧಿಯಲ್ಲಿ, 2014ಕ್ಕಿಂತ ಮೊದಲು ಮಂಜೂರಾತಿ ನೀಡಲಾಗಿದ್ದ 9,100 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳು ಪೂರ್ಣಗೊಂಡಿವೆ. ಇದರ ಜತೆಗೆ, 4,300 ಕೋಟಿ ರೂ. ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ. ಭಾರತದ ಸುಸ್ಥಿರ ಪ್ರಗತಿಗೆ ನಾವು ಕೈಗೊಂಡ ಸ್ಥಿರ ನೀತಿಗಳು ಮತ್ತು ಉಪಕ್ರಮಗಳ ಜಂಟಿ ಪ್ರಯತ್ನಗಳ ಫಲವೇ ತಮಿಳುನಾಡಿನ ಈ ಎಲ್ಲಾ ಯೋಜೆನೆಗಳಾಗಿವೆ.

ತಮಿಳುನಾಡಿನಲ್ಲಿ ಇಂಧನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ನಾನಾ ಕ್ರಮಗಳನ್ನು ಕೈಗೊಂಡಿರುವ ಎಲ್ಲಾ ಪಾಲುದಾರರನ್ನು ನಾನಿಲ್ಲಿ ಅಭಿನಂದಿಸುತ್ತೇನೆ. ನಮ್ಮೆಲ್ಲಾ ಪ್ರಯತ್ನಗಳಲ್ಲಿ ನಾವು ಯಶಸ್ಸಿನೊಂದಿಗೆ ಮುಂದೆ ಸಾಗುತ್ತೇವೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಧನ್ಯವಾದಗಳು!

ವಣಕ್ಕಂ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Rs 1,780 Cr & Counting: How PM Modi’s Constituency Varanasi is Scaling New Heights of Development

Media Coverage

Rs 1,780 Cr & Counting: How PM Modi’s Constituency Varanasi is Scaling New Heights of Development
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಮಾರ್ಚ್ 2023
March 26, 2023
ಶೇರ್
 
Comments

PM Modi Inspires and Motivates the Nation with The 99 th episode of Mann Ki Baat

During the launch of LVM3M3, people were encouraged by PM Modi's visionary thinking