ಈ ದಶಕ ಉತ್ತರಾಖಂಡದ ದಶಕವಾಗಲಿದೆ: ಪ್ರಧಾನಮಂತ್ರಿ
ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ರಾಜ್ಯವು ಪ್ರಥಮ ಸ್ಥಾನವನ್ನು ಸಾಧಿಸಿದೆ: ಪ್ರಧಾನಮಂತ್ರಿ
ಉತ್ತರಾಖಂಡವನ್ನು 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ವಿಭಾಗದಲ್ಲಿ 'ಸಾಧನೆಯ ರಾಜ್ಯ' ಮತ್ತು ಸ್ಟಾರ್ಟ್ ಅಪ್ ವಿಭಾಗದಲ್ಲಿ 'ನಾಯಕತ್ವದ ರಾಜ್ಯ' ಎಂದು ಹೆಸರಿಸಲಾಗಿದೆ: ಪ್ರಧಾನಮಂತ್ರಿ
ಸರ್ವಾಂಗೀಣ ಪ್ರಗತಿಗಾಗಿ ರಾಜ್ಯಕ್ಕೆ ಕೇಂದ್ರದ ನೆರವನ್ನು ಈಗ ದ್ವಿಗುಣಗೊಳಿಸಲಾಗಿದೆ: ಪ್ರಧಾನಮಂತ್ರಿ
ಕೇಂದ್ರದ 2 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳು ಈಗಾಗಲೇ ರಾಜ್ಯದಲ್ಲಿ ಪ್ರಗತಿಯಲ್ಲಿವೆ ಮತ್ತು ಸಂಪರ್ಕ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ: ಪ್ರಧಾನಮಂತ್ರಿ
'ರೋಮಾಂಚಕ ಗ್ರಾಮ' ಯೋಜನೆಯಡಿ ಸರ್ಕಾರವು ಗಡಿ ಗ್ರಾಮಗಳನ್ನು ದೇಶದ 'ಮೊದಲ ಗ್ರಾಮಗಳು' ಎಂದು ಪರಿಗಣಿಸುತ್ತದೆ ಮತ್ತು ಈ ಹಿಂದೆ ಉಲ್ಲೇಖಿಸಿದಂತೆ ಕೊನೆಯ ಗ್ರಾಮಗಳೆಂದಲ್ಲ: ಪ್ರಧಾನಮಂತ್ರಿ
ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದೆ, ಇದನ್ನು ಇಡೀ ದೇಶ ಚರ್ಚಿಸುತ್ತಿದೆ: ಪ್ರಧಾನಮಂತ್ರಿ
ರಾಜ್ಯದ ಅಭಿವೃದ್ಧಿ ಮತ್ತು ಗುರುತನ್ನು ಬಲಪಡಿಸಲು ನಾನು ಒಂಬತ್ತು ವಿನಂತಿಗಳನ್ನು ಮಾಡುತ್ತಿದ್ದೇನೆ, ಐದು ಉತ್ತರಾಖಂಡದ ಜನರಿಗೆ ಮತ್ತು ನಾಲ್ಕು ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ: ಪ್ರಧಾನಮಂತ್ರಿ

ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ  ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ  ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ 'ಪ್ರವಾಸಿ ಉತ್ತರಾಖಂಡ ಸಮ್ಮೇಳನ'ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಪ್ರತ್ಯೇಕ ರಾಜ್ಯ ರಚನೆಗಾಗಿ ಉತ್ತರಾಖಂಡದ ಜನತೆಯ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಪ್ರಧಾನಿಯವರು ಅಟಲ್ ಜೀ ಅವರ ನಾಯಕತ್ವ ಇದ್ದಾಗ ಅವು ಫಲ ನೀಡಿದವು ಎಂದರು.  ಇಂದು ಕನಸುಗಳು ಮತ್ತು ಆಕಾಂಕ್ಷೆಗಳು ನನಸಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಸರ್ಕಾರವು ಉತ್ತರಾಖಂಡದ ಅಭಿವೃದ್ಧಿಗೆ ಇರುವ ಯಾವುದೇ ಅವಕಾಶವನ್ನೂ  ಬಿಟ್ಟು ಬಿಡದೆ ಬಳಸಿಕೊಳ್ಳುತ್ತಿದೆ ಎಂದು ಅವರು ಒತ್ತಿಹೇಳಿದರು.

 

ಪ್ರಸ್ತುತ ದಶಕ ಉತ್ತರಾಖಂಡಕ್ಕೆ ಸೇರಿದೆ ಮತ್ತು ಕಳೆದ ವರ್ಷಗಳಲ್ಲಿ ಈ ಕುರಿತಾದ ತಮ್ಮ  ನಂಬಿಕೆ ಸಾಬೀತಾಗಿದೆ ಎಂಬುದನ್ನು ಪ್ರಧಾನಿ ಪುನರುಚ್ಚರಿಸಿದರು. ಉತ್ತರಾಖಂಡವು ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಮತ್ತು ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದ ವಿಷಯದಲ್ಲಿ ರಾಜ್ಯವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು. ಉತ್ತರಾಖಂಡವನ್ನು 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ವಿಭಾಗದಲ್ಲಿ 'ಸಾಧಕರ ರಾಜ್ಯ' ಮತ್ತು ಸ್ಟಾರ್ಟ್ಅಪ್ ವಿಭಾಗದಲ್ಲಿ 'ನಾಯಕತ್ವದ ರಾಜ್ಯ' ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯದ ಬೆಳವಣಿಗೆಯ ದರವು 1.25 ಪಟ್ಟು ಹೆಚ್ಚಾಗಿದೆ ಮತ್ತು ಜಿಎಸ್ಟಿ ಸಂಗ್ರಹವು ಶೇಕಡಾ 14 ರಷ್ಟು ಹೆಚ್ಚಾಗಿದೆ, ತಲಾ ಆದಾಯವು 2014 ರಲ್ಲಿ 1.25 ಲಕ್ಷ ರೂ.ಗಳಿಂದ ವಾರ್ಷಿಕವಾಗಿ 2.60 ಲಕ್ಷ ರೂ.ಗೆ ಏರಿದೆ ಮತ್ತು ಒಟ್ಟು ದೇಶೀಯ ಉತ್ಪನ್ನವು 2014 ರಲ್ಲಿ 1 ಲಕ್ಷ 50 ಸಾವಿರ ಕೋಟಿ ರೂ.ಗಳಿಂದ ಇಂದು ಸುಮಾರು 3 ಲಕ್ಷ 50 ಸಾವಿರ ರೂ.ಗೆ ಏರಿದೆ ಎಂದು ಅವರು ಮಾಹಿತಿ ನೀಡಿದರು. ಅಂಕಿಅಂಶಗಳು ಯುವಜನರಿಗೆ ಹೊಸ ಅವಕಾಶಗಳು ಲಭಿಸುತ್ತಿರುವ ಮತ್ತು ಕೈಗಾರಿಕಾ ಬೆಳವಣಿಗೆಯ ಸ್ಪಷ್ಟ ಸೂಚನೆಯಾಗಿದೆ ಮತ್ತು ಇದರಿಂದ ಮಹಿಳೆಯರು ಮತ್ತು ಮಕ್ಕಳ ಜೀವನ ಸುಲಭವಾಗುತ್ತದೆ ಎಂದು ಅವರು ಹೇಳಿದರು. 2014ರಲ್ಲಿ ಶೇ.5ರಷ್ಟಿದ್ದ ನಳ್ಳಿ ನೀರಿನ ವ್ಯಾಪ್ತಿ ಇಂದು ಶೇ.96ಕ್ಕೆ ಏರಿಕೆಯಾಗಿದೆ ಮತ್ತು ಗ್ರಾಮೀಣ ರಸ್ತೆಗಳ ನಿರ್ಮಾಣ 6,000 ಕಿ.ಮೀ.ನಿಂದ 20,000 ಕಿ.ಮೀ.ಗೆ ಏರಿದೆ ಎಂದೂ ಅವರು ಮಾಹಿತಿ ನೀಡಿದರು. ಲಕ್ಷಾಂತರ ಶೌಚಾಲಯಗಳ ನಿರ್ಮಾಣ, ವಿದ್ಯುತ್ ಸರಬರಾಜು, ಅನಿಲ ಸಂಪರ್ಕ, ಆಯುಷ್ಮಾನ್ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಸರ್ಕಾರವು ಸಮಾಜದ ಎಲ್ಲಾ ವರ್ಗಗಳ ಜೊತೆಯಾಗಿ  ನಿಂತಿದೆ ಎಂದೂ  ಹೇಳಿದರು.

ಉತ್ತರಾಖಂಡ ರಾಜ್ಯಕ್ಕೆ ಕೇಂದ್ರವು ನೀಡುವ ಅನುದಾನವು ಬಹುತೇಕ ದ್ವಿಗುಣಗೊಂಡಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿಯವರು, ಏಮ್ಸ್ ಗಾಗಿ ಉಪಗ್ರಹ ಕೇಂದ್ರ, ಡ್ರೋನ್ ಅಪ್ಲಿಕೇಶನ್ ಸಂಶೋಧನಾ ಕೇಂದ್ರ ಮತ್ತು ಉದ್ಧಮ್ ಸಿಂಗ್ ನಗರದಲ್ಲಿ ಸಣ್ಣ ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸುವ ಸಾಧನೆಗಳನ್ನು ಪಟ್ಟಿ ಮಾಡಿದರು. ಕೇಂದ್ರದ 2 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳು ಈಗಾಗಲೇ ರಾಜ್ಯದಲ್ಲಿ ಪ್ರಗತಿಯಲ್ಲಿವೆ ಮತ್ತು ಸಂಪರ್ಕ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಹೃಷಿಕೇಶ್-ಕರ್ಣಪ್ರಯಾಗ್ ರೈಲು ಯೋಜನೆಯನ್ನು 2026ರ ವೇಳೆಗೆ ಪೂರ್ಣಗೊಳಿಸಲು ಸರ್ಕಾರ ತಯಾರಿ ನಡೆಸಿದೆ ಎಂದು ಪ್ರಧಾನಿ ಹೇಳಿದರು. ಉತ್ತರಾಖಂಡದ 11 ರೈಲ್ವೆ ನಿಲ್ದಾಣಗಳನ್ನು ಅಮೃತ್ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಎಕ್ಸ್ ಪ್ರೆಸ್ ವೇ ಪೂರ್ಣಗೊಂಡ ನಂತರ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವು 2.5 ಗಂಟೆಗಳಿಗೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಈ ಬೆಳವಣಿಗೆಯು ವಲಸೆಯನ್ನು ಸಹ ನಿಯಂತ್ರಿಸಿದೆ ಎಂದು ಅವರು ನುಡಿದರು.

ಸರ್ಕಾರವು ಅಭಿವೃದ್ಧಿಯ ಜೊತೆಗೆ ಪರಂಪರೆಯನ್ನು ಸಂರಕ್ಷಿಸುವಲ್ಲಿಯೂ ತೊಡಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಕೇದಾರನಾಥ ದೇವಾಲಯದ ಭವ್ಯ ಮತ್ತು ದೈವಿಕ ಪುನರ್ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ ಎಂಬುದರತ್ತ  ಗಮನ ಸೆಳೆದರು. ಬದರೀನಾಥ ಧಾಮದಲ್ಲಿ ಅಭಿವೃದ್ಧಿ ಕಾರ್ಯಗಳ ತ್ವರಿತ ಪ್ರಗತಿಯನ್ನೂ ಅವರು ಉಲ್ಲೇಖಿಸಿದರು. ಮನಸ್ಖಂಡ್ ಮಂದಿರ ಮಿಷನ್ ಮಾಲಾ ಯೋಜನೆಯ ಮೊದಲ ಹಂತದಲ್ಲಿ 16 ಪ್ರಾಚೀನ ದೇವಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. "ಸರ್ವ ಋತು ರಸ್ತೆಗಳು ಚಾರ್ ಧಾಮ್ ಯಾತ್ರೆಯ ಪ್ರವೇಶವನ್ನು ಸುಲಭಗೊಳಿಸಿವೆ" ಎಂದು ಶ್ರೀ ಮೋದಿ ಉದ್ಗರಿಸಿದರು. ಪರ್ವತ ಮಾಲಾ ಯೋಜನೆಯಡಿ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳನ್ನು ರೋಪ್ ವೇ ಮೂಲಕ ಸಂಪರ್ಕಿಸಲಾಗುತ್ತಿದೆ ಎಂದು ಅವರು ಹೇಳಿದರು. 'ರೋಮಾಂಚಕ ಗ್ರಾಮ' ಯೋಜನೆಯನ್ನು ಮಾನಾ ಗ್ರಾಮದಿಂದ ಆರಂಭಿಸಲಾಗಿದೆ ಎಂದು ಹೇಳಿದ ಶ್ರೀ ಮೋದಿ, ಗಡಿ ಗ್ರಾಮಗಳನ್ನು ಹಿಂದಿನ ಕೊನೆಯ ಹಳ್ಳಿಗಳೆಂದು ಕರೆಯುವುದಕ್ಕೆ ಬದಲಾಗಿ  ದೇಶದ 'ಮೊದಲ ಗ್ರಾಮಗಳು' ಎಂದು ಸರ್ಕಾರ ಪರಿಗಣಿಸುತ್ತದೆ ಎಂದರು. ರೋಮಾಂಚಕ ಗ್ರಾಮ ಯೋಜನೆಯಡಿ 25 ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಅಂತಹ ಪ್ರಯತ್ನಗಳು ಉತ್ತರಾಖಂಡದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅವಕಾಶಗಳನ್ನು ಹೆಚ್ಚಿಸಲು ಕಾರಣವಾಗಿವೆ ಮತ್ತು ಉತ್ತರಾಖಂಡದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಅವರು ಹೇಳಿದರು. ಈ ವರ್ಷ 6 ಕೋಟಿ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ ಎಂಬ ವರದಿಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಕಳೆದ ವರ್ಷ 54 ಲಕ್ಷ ಯಾತ್ರಾರ್ಥಿಗಳು ಚಾರ್ಧಾಮ್ ಗೆ ಭೇಟಿ ನೀಡಿದ್ದರು, 2014 ಕ್ಕೆ ಮೊದಲು ಇಲ್ಲಿಗೆ ಭೇಟಿ ನೀಡಿದ ಯಾತ್ರಿಕರ ಸಂಖ್ಯೆ 24 ಲಕ್ಷ ದಷ್ಟಿತ್ತು. ಇದು ಹೋಟೆಲ್ ಗಳು, ಹೋಮ್ ಸ್ಟೇಗಳು, ಸಾರಿಗೆ ಏಜೆಂಟರು, ಕ್ಯಾಬ್ ಚಾಲಕರು ಸೇರಿದಂತೆ ಇತರರಿಗೆ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ 5000 ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಾಯಿಸಲ್ಪಟ್ಟಿವೆ ಎಂಬುದರತ್ತಲೂ  ಅವರು ಬೆಟ್ಟು ಮಾಡಿದರು.

 

ಉತ್ತರಾಖಂಡದ ನಿರ್ಧಾರಗಳು ಮತ್ತು ನೀತಿಗಳು ರಾಷ್ಟ್ರಕ್ಕೆ ಮಾದರಿಯಾಗಿವೆ ಎಂದು ಒತ್ತಿ ಹೇಳಿದ ಪ್ರಧಾನಿ, ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಇಡೀ ದೇಶವು ಚರ್ಚಿಸುತ್ತಿದೆ ಮತ್ತು ಯುವಜನರನ್ನು ರಕ್ಷಿಸಲು ನಕಲಿ ವಿರೋಧಿ ಕಾನೂನನ್ನು ಜಾರಿಗೆ ತರಲಾಗಿದೆ ಎಂಬುದನ್ನೂ ಉಲ್ಲೇಖಿಸಿದರು. ರಾಜ್ಯದಲ್ಲಿ ನೇಮಕಾತಿಗಳು ಪಾರದರ್ಶಕತೆಯೊಂದಿಗೆ ನಡೆಯುತ್ತಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಒಂಬತ್ತು ವಿನಂತಿಗಳನ್ನು ಪಟ್ಟಿ ಮಾಡಿದರು, ಅವುಗಳಲ್ಲಿ ಐದು ಉತ್ತರಾಖಂಡದ ಜನರಿಗಾಗಿ ಮತ್ತು ನಾಲ್ಕು ರಾಜ್ಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗಾಗಿವೆ. ಘರ್ವಾಲಿ, ಕುಮಾವೊನಿ ಮತ್ತು ಜೌನ್ಸಾರಿಯಂತಹ ಭಾಷೆಗಳ ಸಂರಕ್ಷಣೆಗೆ ಅವರು ಒತ್ತು ನೀಡಿದರು ಮತ್ತು ಭವಿಷ್ಯದ ಪೀಳಿಗೆಗೆ ಭಾಷೆಗಳನ್ನು ಕಲಿಸುವಂತೆ ರಾಜ್ಯದ ಜನರನ್ನು ಆಗ್ರಹಿಸಿದರು. ಎರಡನೆಯದಾಗಿ, ಹವಾಮಾನ ಬದಲಾವಣೆಯ ಸವಾಲುಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನವನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು. ಮೂರನೆಯದಾಗಿ, ಜಲಮೂಲಗಳನ್ನು ಸಂರಕ್ಷಿಸಲು ಮತ್ತು ನೀರಿನ ನೈರ್ಮಲ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಅಭಿಯಾನಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ನಾಲ್ಕನೆಯದಾಗಿ, ನಾಗರಿಕರು ತಮ್ಮ ಬೇರುಗಳೊಂದಿಗೆ ಸಂಪರ್ಕ ಹೊಂದಿರಬೇಕು ಮತ್ತು ತಮ್ಮ ಹಳ್ಳಿಗಳಿಗೆ ಭೇಟಿ ನೀಡಬೇಕು ಎಂದು ಅವರು ಒತ್ತಿ ಹೇಳಿದರು. ಐದನೆಯದಾಗಿ, ರಾಜ್ಯದ ಸಾಂಪ್ರದಾಯಿಕ ಮನೆಗಳ ಸಂರಕ್ಷಣೆಗೆ ಒತ್ತು ನೀಡಿದರು ಮತ್ತು ಅವುಗಳನ್ನು ಹೋಮ್ ಸ್ಟೇಗಳಾಗಿ ಪರಿವರ್ತಿಸಲು ಸಲಹೆ ನೀಡಿದರು.

ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಪ್ರಧಾನಮಂತ್ರಿಯವರು, ಅವರಲ್ಲಿ ನಾಲ್ಕು ವಿನಂತಿಗಳನ್ನು ಪಟ್ಟಿ ಮಾಡಿದರು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿಂದ ದೂರವಿರಬೇಕು, 'ವೋಕಲ್ ಫಾರ್ ಲೋಕಲ್' ಮಂತ್ರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಸ್ಥಳೀಯವಾಗಿ ಉತ್ಪಾದಿಸಿದ ಸರಕುಗಳಿಗೆ ಒಟ್ಟು ವೆಚ್ಚದ ಕನಿಷ್ಠ 5 ಪ್ರತಿಶತವನ್ನು ಖರ್ಚು ಮಾಡಬೇಕು, ಸಂಚಾರ ನಿಯಮಗಳನ್ನು ಅನುಸರಿಸಬೇಕು ಮತ್ತು ಕೊನೆಯದಾಗಿ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು, ಅಲಂಕಾರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ 9 ವಿನಂತಿಗಳು ಉತ್ತರಾಖಂಡದ ದೇವ ಭೂಮಿಯ ಗುರುತನ್ನು ಬಲಪಡಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಸಂಕಲ್ಪಗಳನ್ನು ಸಾಧಿಸುವಲ್ಲಿ ಉತ್ತರಾಖಂಡವು ದೊಡ್ಡ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'More strict actions to come against paper leaks': PM Modi announces new Bill push in video message

Media Coverage

'More strict actions to come against paper leaks': PM Modi announces new Bill push in video message
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlights the importance of fostering beneficial thoughts, words, and actions
July 24, 2026

Prime Minister Shri Narendra Modi shared a Sanskrit Subhashitam today, highlighting how continuous practice in thought, word, and action shapes one's character and direction in life.

The Prime Minister wrote on X;

"कर्मणा मनसा वाचा यदभीक्ष्णं निषेवते।

तदेवापहरत्येनं तस्मात् कल्याणमाचरेत्॥"

Whatever a person continuously practices through their actions, thoughts, and words ultimately shapes their personality and draws them in that very direction; therefore, one should always give space only to beneficial subjects in one's thoughts and conversations.