ಗೌರವಾನ್ವಿತ

ಮಹನೀಯರೆಲ್ಲರಿಗೂ

ನಮಸ್ಕಾರಗಳು!

ಭಾರತದ 140 ಕೋಟಿ ಭಾರತೀಯರ ಪರವಾಗಿ ತಮ್ಮೆಲ್ಲರಿಗೂ ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼ ಸಮ್ಮೇಳನಕ್ಕೆ (3ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ) ಆತ್ಮೀಯ ಸ್ವಾಗತ. ಕಳೆದ ಎರಡು ಶೃಂಗಸಭೆಗಳಲ್ಲಿ, ನಿಮ್ಮಲ್ಲಿ ಹಲವರೊಂದಿಗೆ ನಿಕಟವಾಗಿ ಕಾರ್ಯನಿವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಈ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ತರುವಾಯ ಮತ್ತೊಮ್ಮೆ ಈ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ.

ಸ್ನೇಹಿತರೇ,

ಭಾರತವು ಕಳೆದ 2022ರಲ್ಲಿ ಜಿ20 ಶೃಂಗಸಭೆಯ ಆತಿಥ್ಯ ವಹಿಸಿಕೊಂಡಾಗ ನಾವು ಜಿ20 ಶೃಂಗಸಭೆಗೆಗೆ ಹೊಸ ರೂಪ ನೀಡಲು ನಿರ್ಧರಿಸಿದ್ದೆವು. ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು ನಾವು ಅಭಿವೃದ್ಧಿ-ಸಂಬಂಧಿತ ಸಮಸ್ಯೆಗಳು ಮತ್ತು ಆದ್ಯತೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಿದೆ.

ಹಾಗೆಯೇ, ಭಾರತವು ಜಾಗತಿಕ ದಕ್ಷಿಣದ ಭರವಸೆಗಳು, ಆಕಾಂಕ್ಷೆಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ಜಿ20 ಶೃಂಗಸಭೆಯ ಕಾರ್ಯಸೂಚಿಯನ್ನು ರೂಪಿಸಿತ್ತು; ಆ ಮೂಲಕ ಎಲ್ಲರನ್ನು ಒಳಗೊಂಡ ಹಾಗೂ ಅಭಿವೃದ್ಧಿ-ಕೇಂದ್ರಿತ ಪ್ರಯತ್ನಗಳೊಂದಿಗೆ ಮುನ್ನಡೆಸಲಾಯಿತು. ಆ ಪ್ರಯತ್ನದ ಬಹುದೊಡ್ಡ ಉದಾಹರಣೆ ಎಂಬಂತೆ ಆಫ್ರಿಕನ್ ಒಕ್ಕೂಟವು (ಎಯು) ಜಿ20ರ ಕಾಯಂ ಸದಸ್ಯತ್ವ ಪಡೆಯಿತು.

ಸ್ನೇಹಿತರೇ,

ನಾವೆಲ್ಲಾ ಇಂದು ಜಗತ್ತಿನಾದ್ಯಂತ ಅನಿಶ್ಚಿತತೆಯ ವಾತಾವರಣವಿರುವ ಸಮಯದಲ್ಲಿ ಒಟ್ಟುಗೂಡಿದ್ದೇವೆ. ಕೋವಿಡ್‌ನ ಹಾವಳಿಯ ಪ್ರಭಾವದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಇದೇ ಸಂದರ್ಭದಲ್ಲಿ, ಯುದ್ಧದ ಪರಿಸ್ಥಿತಿಯು ನಮ್ಮ ಅಭಿವೃದ್ಧಿ ಹಾದಿಯಲ್ಲಿನ ಪಯಣಕ್ಕೆ ಹಲವು ಸವಾಲುಗಳನ್ನು ತಂದೊಡ್ಡಿದೆ. ಈಗಾಗಲೇ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುತ್ತಿರುವ ನಾವು ಈಗ ಆರೋಗ್ಯ ಸುರಕ್ಷತೆ, ಭದ್ರತೆ, ಆಹಾರ ಭದ್ರತೆ ಮತ್ತು ಇಂಧನ ಸುರಕ್ಷತೆ ಬಗ್ಗೆಯೂ ಕಾಳಜಿ ವಹಿಸಬೇಕಿದೆ.

ಭಯೋತ್ಪಾದನೆ, ತೀವ್ರವಾದ ಮತ್ತು ಪ್ರತ್ಯೇಕತಾವಾದವು ನಮ್ಮ ಸಮಾಜಕ್ಕೆ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಲೇ ಇವೆ.  ತಂತ್ರಜ್ಞಾನ ವಿಭಜನೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಸಹ ಸೃಷ್ಟಿಯಾಗುತ್ತಿವೆ. ಕಳೆದ ಶತಮಾನದಲ್ಲಿ ಸ್ಥಾಪನೆಯಾಗಿರುವ ಜಾಗತಿಕ ಆಡಳಿತ ಮತ್ತು ಹಣಕಾಸು ಸಂಸ್ಥೆಗಳು ಈ ಶತಮಾನದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಮರ್ಥವಾಗಿಲ್ಲ.

ಸ್ನೇಹಿತರೇ,

ಆ ಹಿನ್ನೆಲೆಯಲ್ಲಿ, ಜಾಗತಿಕ ದಕ್ಷಿಣದ ದೇಶಗಳು ಒಂದಾಗುವುದು, ಒಂದೇ ಧ್ವನಿಯಾಗಿ ಕಾರ್ಯ ನಿರ್ವಹಿಸುವುದು ಹಾಗೂ ಪರಸ್ಪರರ ಶಕ್ತಿಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಒಬ್ಬರು ಮತ್ತೊಬ್ಬರ ಅನುಭವಗಳಿಂದ ಕಲಿಯೋಣ, ನಮ್ಮ ಸಾಮರ್ಥ್ಯಗಳ ಬಗ್ಗೆಯೂ ಹಂಚಿಕೊಳ್ಳೋಣ. ಆ ಮೂಲಕ ಎಲ್ಲರೂ ಒಟ್ಟಾಗಿ ನಮ್ಮ ನಿರ್ಣಯಗಳನ್ನು ಯಶಸ್ಸಾಗಿ ಪರಿವರ್ತಿಸೋಣ.

ಮಾನವೀಯತೆಯ ಮೂರನೇ ಎರಡರಷ್ಟು ಮನ್ನಣೆ ಪಡೆಯಲು ನಾವೆಲ್ಲಾ ಒಂದುಗೂಡೋಣ. ಭಾರತವು ತನ್ನ ಅನುಭವಗಳನ್ನು, ತನ್ನ ಸಾಮರ್ಥ್ಯಗಳನ್ನು ಜಾಗತಿಕ ದಕ್ಷಿಣದ ಎಲ್ಲಾ ದೇಶಗಳೊಂದಿಗೆ ಹಂಚಿಕೊಳ್ಳಲು ಬದ್ಧವಾಗಿದೆ. ನಾವು ಪರಸ್ಪರ ವ್ಯಾಪಾರ, ಎಲ್ಲರನ್ನು ಒಳಗೊಂಡ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿ ಮತ್ತು ಮಹಿಳಾ ಮುಂದಾಳತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ಬಯಸುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ, ಡಿಜಿಟಲ್ ಮತ್ತು ಇಂಧನ ಸಂಪರ್ಕ ಕ್ಷೇತ್ರಗಳಲ್ಲಿ ನಮ್ಮ ಪರಸ್ಪರ ಸಹಕಾರವನ್ನು ಉತ್ತೇಜಿಸಲಾಗುತ್ತಿದೆ.

ʼಮಿಷನ್ ಲೈಫ್  (ಮಿಷನ್‌ ಎಲ್‌ಐಎಫ್‌ಇ) ಅಡಿ ನಾವು ಭಾರತದಲ್ಲಿ ಮಾತ್ರವಲ್ಲದೆ ಪಾಲುದಾರ ರಾಷ್ಟ್ರಗಳಲ್ಲಿಯೂ ಮೇಲ್ಛಾವಣಿ ಸೌರ ವಿದ್ಯುತ್‌ ಮತ್ತು ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡುತ್ತಿದ್ದೇವೆ. ನಾವು ಆರ್ಥಿಕ ಒಳಗೊಳ್ಳುವಿಕೆ ಹಾಗೂ ಕಟ್ಟ ಕಡೆಯ ವ್ಯಕ್ತಿಗೂ ವಿತರಣೆ ಸೇವೆ ಲಭ್ಯವಾಗುವಂತಹ ನಮ್ಮ ವ್ಯವಸ್ಥೆ, ಅನುಭವಗಳನ್ನು ಹಂಚಿಕೊಂಡಿದ್ದೇವೆ; ಹಾಗೆಯೇ ಜಾಗತಿಕ ದಕ್ಷಿಣದ ನಾನಾ ರಾಷ್ಟ್ರಗಳಿಗೆ ಏಕೀಕೃತ ಪಾವತಿ ಸಂಪರ್ಕ (ಇಂಟರ್‌ಫೇಸ್‌) ವ್ಯವಸ್ಥೆಯೊಂದಿಗೆ ಅಂದರೆ ಯುಪಿಐನೊಂದಿಗೆ ಸಂಪರ್ಕಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಜತೆಗೆ, ಶಿಕ್ಷಣ, ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಕಳೆದ ವರ್ಷ, ಜಾಗತಿಕ ದಕ್ಷಿಣ ಯುವ ರಾಜತಾಂತ್ರಿಕ ವೇದಿಕೆಯನ್ನು ( ಗ್ಲೋಬಲ್ ಸೌತ್ ಯಂಗ್ ಡಿಪ್ಲೋಮ್ಯಾಟ್ ಫೋರಂ) ಪ್ರಾರಂಭಿಸಲಾಯಿತು. ಹಾಗೆಯೇ, ʼದಕ್ಷಿಣ್‌' ಎಂದರೆ ಗ್ಲೋಬಲ್ ಸೌತ್ ಎಕ್ಸಲೆನ್ಸ್ ಸೆಂಟರ್ ಮೂಲಕ ನಮ್ಮ ಸಾಮರ್ಥ್ಯ ವೃದ್ಧಿ, ಕೌಶಲ್ಯ ಮತ್ತು ಜ್ಞಾನ ಹಂಚಿಕೆ ಕಾರ್ಯವೂ ನಡೆದಿದೆ.

ಸ್ನೇಹಿತರೇ,

ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ (ಡಿಜಿಟಲ್‌ ಪಬ್ಲಿಕ್‌ ಇನ್ಫ್ರಾಸ್ಟ್ರಕ್ಚರ್‌) ಕೊಡುಗೆಯು ಅಂದರೆ ಎಲ್ಲರನ್ನೂ ಒಳಗೊಳ್ಳುವಿಕೆಯಲ್ಲಿ ಡಿಪಿಐನ ಕೊಡುಗೆ ಯಾವುದೇ ಕ್ರಾಂತಿಗೂ ಕಡಿಮೆ ಇಲ್ಲ. ಜಾಗತಿಕ ಡಿಪಿಐ ಭಂಡಾರವು ನಮ್ಮ ಜಿ20 ಶೃಂಗಸಭೆಯ ಅಡಿಯಲ್ಲಿ ರಚಿಸಲಾಗಿದ್ದು, ಮೊಟ್ಟ ಮೊದಲ ಬಹುಪಕ್ಷೀಯ ಒಮ್ಮತ ಗಳಿಸಿದೆ.

ಜಾಗತಿಕ ದಕ್ಷಿಣದ 12 ಪಾಲುದಾರರೊಂದಿಗೆ  "ಇಂಡಿಯಾ ಸ್ಟಾಕ್" ಅನ್ನು ಹಂಚಿಕೊಳ್ಳಲು ಒಡಂಬಡಿಕೆ ಮಾಡಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತೇವೆ. ಜಾಗತಿಕ ದಕ್ಷಿಣದಲ್ಲಿ ಡಿಪಿಐಗೆ ಇನ್ನಷ್ಟು ಶಕ್ತಿ, ವೇಗ ನೀಡುವ ಸಲುವಾಗಿ ನಾವು ಸಾಮಾಜಿಕ ಪರಿಣಾಮ ನಿಧಿಯನ್ನೂ ರಚಿಸಿದ್ದೇವೆ. ಭಾರತವು ಇದಕ್ಕೆ 25 ದಶಲಕ್ಷ ಡಾಲರ್‌ಅನ್ನು ಆರಂಭಿಕ ಕೊಡುಗೆಯನ್ನು ನೀಡಲಿದೆ.

ಸ್ನೇಹಿತರೇ,

ಆರೋಗ್ಯ ಸುರಕ್ಷತೆಗಾಗಿ ʼಒಂದು ವಿಶ್ವ-ಒಂದು ಆರೋಗ್ಯʼ ಎಂಬುದು ನಮ್ಮ ಧ್ಯೇಯ ಹಾಗೂ "ಆರೋಗ್ಯ ಮೈತ್ರಿ" ಅಂದರೆ "ಆರೋಗ್ಯಕ್ಕಾಗಿ ಸ್ನೇಹ" ಎಂಬುದು ನಮ್ಮ ಚಿಂತನೆ ಗುರಿ. ಆಫ್ರಿಕಾ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಆಸ್ಪತ್ರೆಗಳು, ಡಯಾಲಿಸಿಸ್ ಯಂತ್ರಗಳು, ಜೀವರಕ್ಷಕ ಔಷಧಗಳು ಮತ್ತು ‘ಜನ್ ಔಷಧಿ ಕೇಂದ್ರ’ಗಳನ್ನು ಒದಗಿಸುವ ಮೂಲಕ ನಾವು ಈ ಸ್ನೇಹವನ್ನು ನಿರ್ವಹಿಸಿಕೊಂಡಿದ್ದೇವೆ.

ಮಾನವೀಯತೆಯ ಬಿಕ್ಕಟ್ಟು ತಲೆದೋರಿದ ಸಮಯದಲ್ಲಿ, ಸ್ನೇಹಪರ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚುವ ಮೊದಲ ರಾಷ್ಟ್ರವಾಗಿ ಭಾರತ ಸ್ಪಂದಿಸಲಿದೆ. ಅದು ಪಪುವ ನ್ಯೂಗಿನಿಯ ಜ್ವಾಲಾಮುಖಿ ಸ್ಫೋಟವಾಗಿರಲಿ ಅಥವಾ ಕೀನ್ಯಾದಲ್ಲಿ ಸಂಭವಿಸಿದ ನೆರೆ ಹಾನಿಯಾಗಿರಲಿ. ಹಾಗೆಯೇ ಸಂಘರ್ಷದಲ್ಲಿ ತೊಡಗಿರುವ ಗಾಜಾ ಹಾಗೂ ಉಕ್ರೇನ್‌ನ ಪ್ರದೇಶಗಳಲ್ಲೂ ನಾವು ಮಾನವೀಯ ನೆಲೆಯಲ್ಲಿ ನೆರವು ನೀಡಿದ್ದೇವೆ.

ಸ್ನೇಹಿತರೇ,

"ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್ʼ ವೇದಿಕೆಯು ಈವರೆಗೆ ಯಾರೂ ಆಲಿಸದ ಜನರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳಿಗೆ ನಾವು ಧ್ವನಿ ನೀಡುತ್ತಿದ್ದೇವೆ. ನಮ್ಮ ಶಕ್ತಿ ನಮ್ಮ ಏಕತೆಯಲ್ಲಿದೆ ಎಂದು ನಾವು ನಂಬುತ್ತೇವೆ ಹಾಗೂ ಈ ಏಕತೆಯ ಬಲದೊಂದಿಗೆ ನಾವು ಹೊಸ ದಿಕ್ಕಿನತ್ತ ಸಾಗುತ್ತೇವೆ. ಮುಂದಿನ ತಿಂಗಳು ಯುಎನ್‌ನಲ್ಲಿ ಭವಿಷ್ಯದ ಶೃಂಗಸಭೆಯನ್ನು ನಿಗದಿಪಡಿಸಲಾಗಿದೆ. ಅಷ್ಟರೊಳಗೆ, ಭವಿಷ್ಯದ ಒಪ್ಪಂದಗಳ ಸಂಬಂಧ ಚರ್ಚೆಗಳು ಮುಂದುವರಿಯುತ್ತಿರುತ್ತವೆ.

ಈ ಒಪ್ಪಂದದಲ್ಲಿ ಗ್ಲೋಬಲ್ ಸೌತ್‌ನ ಧ್ವನಿಯನ್ನು ಬಲಪಡಿಸಲು ನಾವೆಲ್ಲರೂ ಒಟ್ಟಾಗಿ ಸಕಾರಾತ್ಮಕ ಪ್ರಯತ್ನವನ್ನು ತೆಗೆದುಕೊಳ್ಳಬಹುದೇ? ಈ ಆಲೋಚನೆಗಳೊಂದಿಗೆ, ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ಈಗ ನಾನು ನಿಮ್ಮ ಆಲೋಚನೆಗಳನ್ನು ಕೇಳಲು ಕಾತುರನಾಗಿದ್ದೇನೆ.

ಎಲ್ಲರಿಗೂ ಅನಂತ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Coconut industry gets a policy boost

Media Coverage

Coconut industry gets a policy boost
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಫೆಬ್ರವರಿ 2026
February 17, 2026

India’s Tech-focused Revolution under PM Modi’s Leadership Takes Centre Stage at the IndiaAI Impact Summit