ಪೊಂಗಲ್ ಇಂದು ಜಾಗತಿಕ ಹಬ್ಬವಾಗಿದೆ: ಪ್ರಧಾನಮಂತ್ರಿ
ತಮಿಳು ಸಂಸ್ಕೃತಿಯು ಇಡೀ ರಾಷ್ಟ್ರದ ಹಂಚಿಕೆಯ ಪರಂಪರೆಯಾಗಿದೆ: ಪ್ರಧಾನಮಂತ್ರಿ
ತಮಿಳು ಸಂಸ್ಕೃತಿಯಲ್ಲಿ ರೈತನನ್ನು ಜೀವನದ ಭದ್ರ ಬುನಾದಿಯೆಂದು ಪರಿಗಣಿಸಲಾಗುತ್ತದೆ; ತಿರುಕ್ಕುರಲ್ ಕೃಷಿ ಮತ್ತು ರೈತರ ಮಹತ್ವದ ಬಗ್ಗೆ ವಿವರವಾಗಿ ಹೇಳುತ್ತದೆ: ಪ್ರಧಾನಮಂತ್ರಿ
ಪ್ರಕೃತಿಯನ್ನು ಗೌರವಿಸುವುದನ್ನು ಜೀವನ ವಿಧಾನವನ್ನಾಗಿ ಮಾಡಿಕೊಳ್ಳಲು ಪೊಂಗಲ್ ನಮಗೆ ಸ್ಫೂರ್ತಿ ನೀಡುತ್ತದೆ: ಪ್ರಧಾನಮಂತ್ರಿ
ಭಾರತವು ಚೈತನ್ಯಶೀಲ ತಮಿಳು ಸಂಸ್ಕೃತಿಯ ಬಗ್ಗೆ ಬಹಳ ಹೆಮ್ಮೆಪಡುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನವದೆಹಲಿಯಲ್ಲಿಂದು ನಡೆದ ಪೊಂಗಲ್ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ತಮಿಳಿನಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ ಶ್ರೀ ನರೇಂದ್ರ ಮೋದಿ, ”ಪೊಂಗಲ್ ಇಂದು ಜಾಗತಿಕ ಹಬ್ಬವಾಗಿದೆ’’ ಎಂದು ಒತ್ತಿ ಹೇಳಿದರು. ಈ ಹಬ್ಬವನ್ನು ತಮಿಳು ಸಮುದಾಯಗಳು ಮತ್ತು ಪ್ರಪಂಚದಾದ್ಯಂತ ತಮಿಳು ಸಂಸ್ಕೃತಿಯನ್ನು ಪಾಲಿಸುವವರು ಉತ್ಸಾಹದಿಂದ ಆಚರಿಸುತ್ತಾರೆ ಮತ್ತು ತಾವೂ ಅವರಲ್ಲಿ ಒಬ್ಬರು ಎಂದು ಹೇಳಿದರು. ಈ ವಿಶೇಷ ಹಬ್ಬವನ್ನು ಎಲ್ಲರ ಜೊತೆ ಸೇರಿ ಆಚರಿಸುವುದು ತಮ್ಮ ಅದೃಷ್ಟ ಎಂದು ಅವರು ಹೇಳಿದರು. ತಮಿಳು ಜನರ ಜೀವನದಲ್ಲಿ, ಪೊಂಗಲ್ ಒಂದು ಆಹ್ಲಾದಕರ ಅನುಭವದಂತೆ, ರೈತರು, ಭೂಮಿ ಮತ್ತು ಸೂರ್ಯನ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವುದನ್ನು ಸಾಕಾರಗೊಳಿಸುತ್ತದೆ ಮತ್ತು ಪ್ರಕೃತಿ, ಕುಟುಂಬ ಮತ್ತು ಸಮಾಜದಲ್ಲಿ ಸಮತೋಲನದತ್ತ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇದೇ ವೇಳೆ ದೇಶದ ವಿವಿಧ ಭಾಗಗಳು ಲೋಹ್ರಿ, ಮಕರ ಸಂಕ್ರಾಂತಿ, ಮಾಘ ಬಿಹು ಮತ್ತು ಇತರ ಹಬ್ಬಗಳ ಆಚರಣೆಯಲ್ಲಿ ಮುಳುಗಿವೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಪೊಂಗಲ್ ಹಬ್ಬದಂದು ಭಾರತ ಮತ್ತು ವಿಶ್ವದಾದ್ಯಂತದ ಎಲ್ಲಾ ತಮಿಳು ಸಹೋದರ ಸಹೋದರಿಯರಿಗೆ ಅವರು ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು ಮತ್ತು ಇತರೆ ಎಲ್ಲಾ ಹಬ್ಬಗಳಿಗೆ ಶುಭ ಕೋರಿದರು.

 

ಕಳೆದ ವರ್ಷದಲ್ಲಿ ತಮಿಳು ಸಂಸ್ಕೃತಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತನಗೆ ಅವಕಾಶ ಸಿಕ್ಕಿದ್ದು ತುಂಬಾ ಸಂತೋಷದ ವಿಷಯ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ತಮಿಳುನಾಡಿನ ಸಾವಿರ ವರ್ಷ ಹಳೆಯ ಗಂಗೈಕೊಂಡ ಚೋಳಪುರಂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಅವರು ಹೇಳಿದರು. ವಾರಾಣಾಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮದಲ್ಲಿ, ಸಾಂಸ್ಕೃತಿಕ ಏಕತೆಯ ಶಕ್ತಿಯನ್ನು ನಿರಂತರವಾಗಿ ಅನುಭವಿಸಿದ ಮತ್ತು ಅದರೊಂದಿಗೆ ಸಂಪರ್ಕ ಹೊಂದಿರುವುದಾಗಿ ಪ್ರಧಾನಮಂತ್ರಿ ಒತ್ತಿ ಹೇಳಿದರು. ಪಂಬನ್ ಸೇತುವೆ ಉದ್ಘಾಟನೆಗಾಗಿ ರಾಮೇಶ್ವರಂಗೆ ಭೇಟಿ ನೀಡಿದ್ದಾಗ, ತಮಿಳು ಇತಿಹಾಸದ ಶ್ರೇಷ್ಠತೆಯನ್ನು ಮತ್ತೊಮ್ಮೆ ಕಂಡಿದ್ದಾಗಿ ಅವರು ಸ್ಮರಿಸಿಕೊಂಡರು. ತಮಿಳು ಸಂಸ್ಕೃತಿಯು ಇಡೀ ರಾಷ್ಟ್ರದ ಮತ್ತು ವಾಸ್ತವವಾಗಿ, ಇಡೀ ಮನುಕುಲದ ಹಂಚಿಕೆಯ ಪರಂಪರೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ತಾವು ಆಗಾಗ್ಗೆ ಹೇಳುವ ‘ಏಕ ಭಾರತ ಶ್ರೇಷ್ಠ ಭಾರತ’ದ ಚೈತನ್ಯವು ಪೊಂಗಲ್‌ನಂತಹ ಹಬ್ಬಗಳಿಂದ ಮತ್ತಷ್ಟು ಬಲಗೊಳ್ಳುತ್ತದೆ ಎಂದರು.

 

ವಿಶ್ವದ ಬಹುತೇಕ ಎಲ್ಲಾ ನಾಗರಿಕತೆಗಳು ಬೆಳೆಗಳಿಗೆ ಸಂಬಂಧಿಸಿದ ಕೆಲವು ಹಬ್ಬಗಳನ್ನು ಆಚರಿಸುತ್ತವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ತಮಿಳು ಸಂಸ್ಕೃತಿಯಲ್ಲಿ, ರೈತನನ್ನು ಜೀವನದ ಭದ್ರ ಬುನಾದಿಯನ್ನಾಗಿ ಎತ್ತಿ ತೋರಿಸಲಾಗಿದೆ. ತಿರುಕ್ಕುರಲ್ ಕೃಷಿ ಮತ್ತು ರೈತರ ಬಗ್ಗೆ ವ್ಯಾಪಕವಾದ ಬರಹಗಳನ್ನು ಒಳಗೊಂಡಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ರೈತರು ರಾಷ್ಟ್ರ ನಿರ್ಮಾಣದಲ್ಲಿ ಪ್ರಬಲ ಪಾಲುದಾರರು ಮತ್ತು ಅವರ ಪ್ರಯತ್ನಗಳು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತಿವೆ ಎಂದು ಅವರು ಒತ್ತಿ ಹೇಳಿದರು. ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.

 

ಪ್ರಕೃತಿಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು ಕೇವಲ ಮಾತುಗಳಿಗೆ ಸೀಮಿತವಾಗಿರದೆ, ನಮ್ಮ ಜೀವನಶೈಲಿಯ ಭಾಗವಾಗುವಂತೆ ಪೊಂಗಲ್ ಹಬ್ಬವು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಭೂಮಿಯು ನಮಗೆ ಇಷ್ಟೊಂದು ಕೊಡುಗೆ ನೀಡಿದಾಗ, ಅದನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಅವರು ಒತ್ತಿ ಹೇಳಿದರು. ಮಣ್ಣನ್ನು ಆರೋಗ್ಯಕರವಾಗಿಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಸಂಪನ್ಮೂಲಗಳನ್ನು ಸಮತೋಲಿತ ರೀತಿಯಲ್ಲಿ ಬಳಸುವುದು ಅತ್ಯಂತ ಅತ್ಯಗತ್ಯ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಮಿಷನ್ ಲೈಫ್, ಏಕ್ ಪೆಡ್ ಮಾ ಕೆ ನಾಮ್ ಮತ್ತು ಅಮೃತ ಸರೋವರದಂತಹ ಅಭಿಯಾನಗಳು ಈ ಮನೋಭಾವವನ್ನು ಮುನ್ನಡೆಸುತ್ತವೆ ಎಂದು ಅವರು ಪ್ರತಿಪಾದಿಸಿದರು. ಕೃಷಿಯನ್ನು ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂಬರುವ ದಿನಗಳಲ್ಲಿ, ಸುಸ್ಥಿರ ಕೃಷಿ ಪದ್ಧತಿಗಳು, ಜಲ ನಿರ್ವಹಣೆ - 'ಪ್ರತಿ ಹನಿ, ಹೆಚ್ಚಿನ ಬೆಳೆ' - ನೈಸರ್ಗಿಕ ಕೃಷಿ, ಕೃಷಿ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ - ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಈ ಎಲ್ಲಾ ಕ್ಷೇತ್ರಗಳಲ್ಲಿ, ಯುವಕರು ನವೀನ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕೆಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಸಮ್ಮೇಳನದಲ್ಲಿ ತಾನು ಭಾಗವಹಿಸಿದ್ದೆನು, ಅಲ್ಲಿ ತಮಿಳು ಯುವಕರ ಅತ್ಯುತ್ತಮ ಕೆಲಸಗಳನ್ನು ತಾನ ವೀಕ್ಷಿಸಿದೆನು ಎಂದರು. ಆ ಯುವಕರು ತಮ್ಮ ವೃತ್ತಿಪರ ಜೀವನದ ಪ್ರಮುಖ ಅಂಶಗಳನ್ನು ಬಿಟ್ಟು ಹೊಲಗಳಲ್ಲಿ ಕೆಲಸ ಮಾಡಲು ಹೋದರು ಎಂದು ಹೇಳಿದರು. ಸುಸ್ಥಿರ ಕೃಷಿಯಲ್ಲಿ ಕ್ರಾಂತಿ ತರುವ ಈ ಅಭಿಯಾನವನ್ನು ಮತ್ತಷ್ಟು ವಿಸ್ತರಿಸುವಂತೆ ಪ್ರಧಾನಮಂತ್ರಿ ಕೃಷಿಯಲ್ಲಿ ತೊಡಗಿರುವ ಯುವ ತಮಿಳು ಸ್ನೇಹಿತರಿಗೆ ಕರೆ ನೀಡಿದರು. ನಮ್ಮ ತಟ್ಟೆ ತುಂಬಿರಬೇಕು, ನಮ್ಮ ಜೇಬು ತುಂಬಿರಬೇಕು ಮತ್ತು ನಮ್ಮ ಭೂಮಿ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಗುರಿಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

 

“ತಮಿಳು ಸಂಸ್ಕೃತಿ ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ತಮಿಳು ಸಂಸ್ಕೃತಿ ಶತಮಾನಗಳನ್ನು ಒಟ್ಟಿಗೆ ಬೆಸೆಯುತ್ತದೆ, ಇತಿಹಾಸದಿಂದ ಕಲಿಸುತ್ತದೆ ಮತ್ತು ವರ್ತಮಾನವನ್ನು ಭವಿಷ್ಯದತ್ತ ಮಾರ್ಗದರ್ಶನ ಮಾಡುತ್ತದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದರಿಂದ ಪ್ರೇರಿತರಾಗಿ, ಇಂದಿನ ಭಾರತವು ತನ್ನ ಬೇರುಗಳಿಂದ ಬಲವನ್ನು ಪಡೆಯುತ್ತಿದೆ ಮತ್ತು ಹೊಸ ಸಾಧ್ಯತೆಗಳತ್ತ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪೊಂಗಲ್ ಹಬ್ಬದ ಶುಭ ಸಂದರ್ಭದಲ್ಲಿ, ಭಾರತವನ್ನು ಮುನ್ನಡೆಸುತ್ತಿರುವ ನಂಬಿಕೆಯನ್ನು ನಾವು ಅನುಭವಿಸುತ್ತಿದ್ದೇವೆ - ತನ್ನ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದ, ತನ್ನ ಭೂಮಿಯನ್ನು ಗೌರವಿಸುವ ಮತ್ತು ತನ್ನ ಭವಿಷ್ಯದ ಬಗ್ಗೆ ಆತ್ಮವಿಶ್ವಾಸದಿಂದ ತುಂಬಿರುವ ರಾಷ್ಟ್ರ ಎಂದು ಅವರು ಉಲ್ಲೇಖಿಸಿದರು. ಪ್ರಧಾನಮಂತ್ರಿ ಅವರು ತಮಿಳಿನಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರುವ ಮೂಲಕ ತಮ್ಮ ಮಾತುಗಳನ್ನು ಪೂರ್ಣಗೊಳಿಸಿದರು ಮತ್ತು ಮತ್ತೊಮ್ಮೆ ಎಲ್ಲರಿಗೂ ಪೊಂಗಲ್ ಹಬ್ಬದ ಶುಭ ಕೋರುತ್ತಾ ಕೃತಜ್ಞತೆಗಳನ್ನು ಸಲ್ಲಿಸಿದರು.

ಪೊಂಗಲ್ ಆಚರಣೆಯು ನವದೆಹಲಿಯಲ್ಲಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ.ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆಯಿತು. ಕೇಂದ್ರ ಸಚಿವರಾದ ಶ್ರೀ ಜಿ.ಕಿಷನ್ ರೆಡ್ಡಿ, ಶ್ರೀ ರಾಮಮೋಹನ್ ನಾಯ್ದು, ಶ್ರೀ ಅರ್ಜುನ್ ರಾಮ್‌ ಮೇಘ್ವಾಲ್, ಶ್ರೀ ವಿ.ಸೋಮಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರಲ್ಲಿ ಸೇರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Teachers: The artists of education

Media Coverage

Teachers: The artists of education
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಸೆಪ್ಟೆಂಬರ್ 2026
September 07, 2026

Vasudhaiva Kutumbakam in Action: Tech Hub, Border Villages, Global Leadership by PM Modi