ನಾಗಪುರ-ವಿಜಯವಾಡ ಆರ್ಥಿಕ ಕಾರಿಡಾರ್‌ ಗೆ ಸಂಬಂಧಿಸಿದ ಪ್ರಮುಖ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು
ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಹೈದರಾಬಾದ್-ವಿಶಾಖಪಟ್ಟಣಂ ಕಾರಿಡಾರ್‌ ಗೆ ಸಂಬಂಧಿಸಿದ ರಸ್ತೆ ಯೋಜನೆಯನ್ನು ಲೋಕಾರ್ಪಣೆ ಮಾಡಿದರು
ಪ್ರಮುಖ ತೈಲ ಮತ್ತು ಅನಿಲ ಪೈಪ್‌ ಲೈನ್ ಯೋಜನೆಗಳಿಗೆ ಅಡಿಪಾಯ ಹಾಕಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು
ಮೊದಲ ಹೈದರಾಬಾದ್ (ಕಾಚಿಗೂಡ) - ರಾಯಚೂರು - ಹೈದರಾಬಾದ್ (ಕಾಚಿಗೂಡ) ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದರು
ತೆಲಂಗಾಣದ ಅರಿಶಿನ ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಅರಿಶಿನ ಮಂಡಳಿಯ ರಚನೆಯನ್ನು ಪ್ರಕಟಿಸಿದರು
ಹನಮಕೊಂಡ, ಮಹಬೂಬಾಬಾದ್, ವಾರಂಗಲ್ ಮತ್ತು ಖಮ್ಮಂ ಜಿಲ್ಲೆಗಳ ಯುವಜನತೆಗೆ ಆರ್ಥಿಕ ಕಾರಿಡಾರ್ ಹಲವು ಮಾರ್ಗಗಳನ್ನು ತೆರೆಯುತ್ತದೆ
ಹೊಸ ಸಾಮಕ್ಕ-ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯಕ್ಕೆ 900 ಕೋಟಿ ರೂ.ವೆಚ್ಚ ಮಾಡಲಾಗುವುದು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಮಹಬೂಬ್‌ ನಗರದಲ್ಲಿ 13,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಅಭಿವೃದ್ಧಿ ಯೋಜನೆಗಳು ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈಲು ಸೇವೆಗೆ ಚಾಲನೆ ನೀಡಿದರು.

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಹಬ್ಬದ ಋತು ಆರಂಭವಾಗುತ್ತಿರುವುದನ್ನು ಒತ್ತಿ ಹೇಳಿದರು ಮತ್ತು ಸಂಸತ್ತಿನಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮದ ಅಂಗೀಕಾರವು ನವರಾತ್ರಿ ಪ್ರಾರಂಭಕ್ಕೂ ಮೊದಲು ಶಕ್ತಿ ಪೂಜೆಯ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಹೇಳಿದರು.

ಈ ಪ್ರದೇಶದ ಜೀವನವನ್ನು ಪರಿವರ್ತಿಸುವ ಹಲವು ರಸ್ತೆ ಸಂಪರ್ಕ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ನಾಗಪುರ-ವಿಜಯವಾಡ ಆರ್ಥಿಕ ಕಾರಿಡಾರ್ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಾರಿಗೆ ಮತ್ತು ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಈ ರಾಜ್ಯಗಳಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುತ್ತದೆ. ಕಾರಿಡಾರ್‌ ನಲ್ಲಿ 8 ವಿಶೇಷ ಆರ್ಥಿಕ ವಲಯ, 5 ಮೆಗಾ ಫುಡ್ ಪಾರ್ಕ್‌, 4 ಮೀನುಗಾರಿಕೆ ಸಮುದ್ರಾಹಾರ ಕ್ಲಸ್ಟರ್‌ ಗಳು, 3 ಫಾರ್ಮಾ ಮತ್ತು ಮೆಡಿಕಲ್ ಕ್ಲಸ್ಟರ್‌ ಗಳು ಮತ್ತು 1 ಜವಳಿ ಕ್ಲಸ್ಟರ್ ಸೇರಿದಂತೆ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಇದು ಹನಮಕೊಂಡ, ಮಹಬೂಬಾಬಾದ್, ವಾರಂಗಲ್ ಮತ್ತು ಖಮ್ಮಂ ಜಿಲ್ಲೆಗಳ ಯುವಜನತೆಗೆ ಹಲವು ಮಾರ್ಗಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು.

 

ಇಲ್ಲಿ ತಯಾರಿಸಿದ ಸರಕುಗಳನ್ನು ಬಂದರುಗಳಿಗೆ ಕೊಂಡೊಯ್ಯಲು ತೆಲಂಗಾಣದಂತಹ ಒಳ ಪ್ರದೇಶದ ರಾಜ್ಯಕ್ಕೆ ರೈಲು ಮತ್ತು ರಸ್ತೆ ಸಂಪರ್ಕದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ದೇಶದ ಹಲವು ಪ್ರಮುಖ ಆರ್ಥಿಕ ಕಾರಿಡಾರ್‌ ಗಳು ತೆಲಂಗಾಣದ ಮೂಲಕ ಹಾದು ಹೋಗುತ್ತಿವೆ ಎಂದರು. ಇವೆಲ್ಲವೂ ರಾಜ್ಯವನ್ನು ಪೂರ್ವ ಮತ್ತು ಪಶ್ಚಿಮ ಕರಾವಳಿಯೊಂದಿಗೆ ಸಂಪರ್ಕಿಸುವ ಮಾಧ್ಯಮವಾಗಲಿವೆ. ಹೈದರಾಬಾದ್ - ವಿಶಾಖಪಟ್ಟಣಂ ಕಾರಿಡಾರ್‌ ನ ಸೂರ್ಯಪೇಟ್-ಖಮ್ಮಂ ವಿಭಾಗವೂ ಇದಕ್ಕೆ ಸಹಾಯ ಮಾಡುತ್ತದೆ. ಇದು ಪೂರ್ವ ಕರಾವಳಿಯನ್ನು ತಲುಪಲು ನೆರವಾಗುತ್ತದೆ. ಇದಲ್ಲದೆ, ಕೈಗಾರಿಕೆಗಳು ಮತ್ತು ಉದ್ಯಮಗಳ ಲಾಜಿಸ್ಟಿಕ್ಸ್ ವೆಚ್ಚಗಳು ಸಹ ಕಡಿಮೆಯಾಗುತ್ತವೆ. ಜಕ್ಲೇರ್ ಮತ್ತು ಕೃಷ್ಣಾ ಭಾಗದ ನಡುವೆ ನಿರ್ಮಿಸಲಾಗುತ್ತಿರುವ ರೈಲು ಮಾರ್ಗವೂ ಇಲ್ಲಿನ ಜನರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ತೆಲಂಗಾಣದ ಅರಿಶಿನ ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ರಚಿಸುತ್ತದೆ ಎಂದು ಪ್ರಧಾನಿ ಘೋಷಿಸಿದರು. ರಾಷ್ಟ್ರೀಯ ಅರಿಶಿನ ಮಂಡಳಿಯು ಪೂರೈಕೆ ಸರಪಳಿಯ ಮೌಲ್ಯವರ್ಧನೆಯತ್ತ ಗಮನಹರಿಸುತ್ತದೆ ಮತ್ತು ರೈತರಿಗೆ ಮೂಲಸೌಕರ್ಯ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಅರಿಶಿನ ಮಂಡಳಿಯ ರಚನೆಗಾಗಿ ತೆಲಂಗಾಣ ಮತ್ತು ಇಡೀ ರಾಷ್ಟ್ರದ ಎಲ್ಲಾ ಅರಿಶಿನ ಬೆಳೆಯುವ ರೈತರಿಗೆ ಪ್ರಧಾನಿಯವರು ಅಭಿನಂದನೆಗಳನ್ನು ತಿಳಿಸಿದರು.

 

ಇಂಧನ ಮತ್ತು ಇಂಧನ ಭದ್ರತಾ ವಲಯದಲ್ಲಿ ಪ್ರಪಂಚದಾದ್ಯಂತದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರವು ಕೈಗಾರಿಕೆಗಳಿಗೆ ಮಾತ್ರವಲ್ಲದೆ ಮನೆಗಳಿಗೂ ಇಂಧನವನ್ನು ಖಾತ್ರಿಪಡಿಸಿದೆ ಎಂದು ಹೇಳಿದರು. 2014ರಲ್ಲಿ 14 ಕೋಟಿಯಷ್ಟಿದ್ದ ಎಲ್‌ ಪಿ ಜಿ ಸಿಲಿಂಡರ್‌ ಗಳ ಸಂಖ್ಯೆ 2023ರಲ್ಲಿ 32 ಕೋಟಿಗೆ ಏರಿಕೆಯಾಗಿರುವ ಉದಾಹರಣೆಯನ್ನು ನೀಡಿದ ಅವರು, ಇತ್ತೀಚೆಗೆ ಅಡುಗೆ ಅನಿಲ ಬೆಲೆಯಲ್ಲಿ ಇಳಿಕೆಯಾಗಿರುವ ಬಗ್ಗೆಯೂ ಪ್ರಸ್ತಾಪಿಸಿದರು. ದೇಶದಲ್ಲಿ ಎಲ್‌ ಪಿ ಜಿ ವಿತರಣಾ ಜಾಲದ ವಿಸ್ತರಣೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ, ಹಾಸನ-ಚೆರ್ಲಪಲ್ಲಿ ಎಲ್‌ ಪಿ ಜಿ ಪೈಪ್‌ ಲೈನ್ ಯೋಜನೆಯು ಈ ಪ್ರದೇಶದ ಜನರಿಗೆ ಇಂಧನ ಭದ್ರತೆಯನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ತೆಲಂಗಾಣದಲ್ಲಿ ಸಾವಿರಾರು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಸಹಾಯ ಮಾಡುವ ಕೃಷ್ಣಪಟ್ಟಣಂ - ಹೈದರಾಬಾದ್ ನಡುವಿನ ಮಲ್ಟಿ ಪ್ರೊಡಕ್ಟ್ ಪೆಟ್ರೋಲಿಯಂ ಪೈಪ್‌ ಲೈನ್‌ ಗೆ ಶಂಕುಸ್ಥಾಪನೆ ನೆರವೇರಿಸಿದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಇದಕ್ಕೂ ಮುನ್ನ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಲವು ಕಟ್ಟಡಗಳನ್ನು ಪ್ರಧಾನಿ ಉದ್ಘಾಟಿಸಿದರು. ಕೇಂದ್ರ ಸರ್ಕಾರವು ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ಸ್ಥಾನಮಾನ ನೀಡಿ ವಿಶೇಷ ಧನಸಹಾಯ ನೀಡಿದೆ ಎಂದು ಅವರು ಹೇಳಿದರು. ಭಾರತ ಸರ್ಕಾರವು ಮುಲುಗು ಜಿಲ್ಲೆಯಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ಈ ವಿಶ್ವವಿದ್ಯಾನಿಲಯಕ್ಕೆ ಪೂಜ್ಯ ಬುಡಕಟ್ಟು ದೇವತೆಗಳಾದ ಸಾಮಕ್ಕ-ಸಾರಕ್ಕ ಅವರ ಹೆಸರನ್ನು ಇಡಲಾಗುವುದು. ಸಾಮಕ್ಕ-ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯಕ್ಕೆ ಸುಮಾರು 900 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಈ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯಕ್ಕಾಗಿ ಶ್ರೀ ಮೋದಿ ಅವರು ತೆಲಂಗಾಣದ ಜನರನ್ನು ಅಭಿನಂದಿಸಿದರು.

 

ತೆಲಂಗಾಣ ರಾಜ್ಯಪಾಲರಾದ ಶ್ರೀಮತಿ ತಮಿಳಿಸಾಯಿ ಸೌಂದರರಾಜನ್, ಕೇಂದ್ರ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಮತ್ತು ಸಂಸದ ಶ್ರೀ ಬಂಡಿ ಸಂಜಯ್ ಕುಮಾರ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹಿನ್ನೆಲೆ


ದೇಶದಾದ್ಯಂತ ಆಧುನಿಕ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಯ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಉತ್ತೇಜನವನ್ನು ನೀಡುವ ಒಂದು ಹೆಜ್ಜೆಯಾಗಿ ಹಲವು ರಸ್ತೆ ಯೋಜನೆಗಳ ಶಿಲಾನ್ಯಾಸ ನೆರವೇರಿಸಲಾಯಿತು ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಯಿತು. ನಾಗ್ಪುರ-ವಿಜಯವಾಡ ಆರ್ಥಿಕ ಕಾರಿಡಾರ್‌ ಭಾಗವಾಗಿರುವ ಪ್ರಮುಖ ರಸ್ತೆ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಿದರು. ಈ ಯೋಜನೆಯಲ್ಲಿ 108 ಕಿಮೀ ಉದ್ದದ ನಾಲ್ಕು ಪಥದ ಪ್ರವೇಶ ನಿಯಂತ್ರಿತ ಗ್ರೀನ್‌ ಫೀಲ್ಡ್ ಹೆದ್ದಾರಿ ವಾರಂಗಲ್‌ನಿಂದ ಖಮ್ಮಮ್ ವಿಭಾಗ ಎನ್‌ ಎಚ್-163ಜಿ ಮತ್ತು 90 ಕಿಮೀ ಉದ್ದದ ‘ಎನ್‌ ಎಚ್-163ಜಿ ಯ ಖಮ್ಮಮ್‌ ನಿಂದ ವಿಜಯವಾಡ ಭಾಗಕ್ಕೆ ನಾಲ್ಕು ಪಥದ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿ ಸೇರಿವೆ. ಈ ರಸ್ತೆ ಯೋಜನೆಗಳನ್ನು ಒಟ್ಟು 6400 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಯೋಜನೆಗಳು ವಾರಂಗಲ್ ಮತ್ತು ಖಮ್ಮಮ್ ನಡುವಿನ ಪ್ರಯಾಣದ ದೂರವನ್ನು ಸುಮಾರು 14 ಕಿ.ಮೀಗಳಷ್ಟು ಮತ್ತು ಖಮ್ಮಂ ಮತ್ತು ವಿಜಯವಾಡ ನಡುವೆ ಸುಮಾರು 27 ಕಿ.ಮೀ.ಗಳಷ್ಟು ಕಡಿಮೆ ಮಾಡುತ್ತವೆ.

ಎನ್‌ ಎಚ್-365ಬಿಬಿಯ 59 ಕಿಮೀ ಉದ್ದದ ಸೂರ್ಯಪೇಟ್‌ ನಿಂದ ಖಮ್ಮಂ ಭಾಗದ ನಾಲ್ಕು ಪಥದ ರಸ್ತೆ ಯೋಜನೆಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 2,460 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಹೈದರಾಬಾದ್-ವಿಶಾಖಪಟ್ಟಣಂ ಕಾರಿಡಾರ್‌ ಭಾಗವಾಗಿದೆ ಮತ್ತು ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಖಮ್ಮಂ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.

 

ಯೋಜನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ‘37 ಕಿಮೀ ಜಕ್ಲೇರ್ – ಕೃಷ್ಣಾ ಹೊಸ ರೈಲು ಮಾರ್ಗʼವನ್ನು ಲೋಕಾರ್ಪಣೆ ಮಾಡಿದರು. 500 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಹೊಸ ರೈಲು ಮಾರ್ಗವು ಹಿಂದುಳಿದ ಜಿಲ್ಲೆಯಾದ ನಾರಾಯಣಪೇಟೆಯ ಪ್ರದೇಶಗಳನ್ನು ಮೊದಲ ಬಾರಿಗೆ ರೈಲು ನಕ್ಷೆಯಲ್ಲಿ ತರುತ್ತದೆ. ಪ್ರಧಾನಮಂತ್ರಿಯವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೃಷ್ಣಾ ನಿಲ್ದಾಣದಿಂದ ಮೊದಲ ಹೈದರಾಬಾದ್ (ಕಾಚಿಗೂಡ) - ರಾಯಚೂರು - ಹೈದರಾಬಾದ್ (ಕಾಚಿಗೂಡ) ರೈಲು ಸೇವೆಗೆ ಚಾಲನೆ ನೀಡಿದರು. ರೈಲು ಸೇವೆಯು ತೆಲಂಗಾಣದ ಹೈದರಾಬಾದ್, ರಂಗಾರೆಡ್ಡಿ, ಮಹಬೂಬ್‌ ನಗರ ಮತ್ತು ನಾರಾಯಣಪೇಟ್ ಜಿಲ್ಲೆಗಳನ್ನು ಕರ್ನಾಟಕದ ರಾಯಚೂರು ಜಿಲ್ಲೆಗೆ ಸಂಪರ್ಕಿಸುತ್ತದೆ. ಈ ಸೇವೆಯು ಹಿಂದುಳಿದ ಜಿಲ್ಲೆಗಳಾದ ಮಹಬೂಬ್‌ ನಗರ ಮತ್ತು ನಾರಾಯಣಪೇಟೆಯಲ್ಲಿ ಹಲವಾರು ಹೊಸ ಪ್ರದೇಶಗಳಿಗೆ ಮೊದಲ ಬಾರಿಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ, ವಿದ್ಯಾರ್ಥಿಗಳು, ದೈನಂದಿನ ಪ್ರಯಾಣಿಕರು, ಕಾರ್ಮಿಕರು ಮತ್ತು ಈ ಪ್ರದೇಶದ ಸ್ಥಳೀಯ ಕೈಮಗ್ಗ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ.

ದೇಶದಲ್ಲಿ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಕಾರ್ಯಕ್ರಮದಲ್ಲಿ ಪ್ರಮುಖ ತೈಲ ಮತ್ತು ಅನಿಲ ಪೈಪ್‌ ಲೈನ್ ಯೋಜನೆಗಳಿಗೆ ಅಡಿಪಾಯ ಹಾಕಲಾಯಿತು ಮತ್ತು ದೇಶಕ್ಕೆ ಸಮರ್ಪಣೆ ಮಾಡಲಾಯಿತು. ಪ್ರಧಾನಮಂತ್ರಿಯವರು ‘ಹಾಸನ-ಚೆರ್ಲಪಲ್ಲಿ ಎಲ್‌ ಪಿ ಜಿ ಪೈಪ್‌ ಲೈನ್ ಯೋಜನೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 2170 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎಲ್‌ ಪಿ ಜಿ ಪೈಪ್‌ ಲೈನ್, ಕರ್ನಾಟಕದ ಹಾಸನದಿಂದ ಚೆರ್ಲಪಲ್ಲಿ (ಹೈದರಾಬಾದ್‌ ನ ಉಪನಗರ) ವರೆಗೆ ಸುರಕ್ಷಿತ, ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಲ್‌ ಪಿ ಜಿ ಸಾಗಣೆ ಮತ್ತು ವಿತರಣೆಯನ್ನು ಒದಗಿಸುತ್ತದೆ. ಪ್ರಧಾನಿಯವರು ಕೃಷ್ಣಪಟ್ಟಣದಿಂದ ಹೈದರಾಬಾದ್ (ಮಲ್ಕಾಪುರ) ವರೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ಮಲ್ಟಿಪ್ರೊಡಕ್ಟ್ ಪೆಟ್ರೋಲಿಯಂ ಪೈಪ್‌ಲೈನ್‌ ಗೆ ಶಂಕುಸ್ಥಾಪನೆ ಮಾಡಿದರು. 1940 ಕೋಟಿ ರೂ. ವೆಚ್ಚದಲ್ಲಿ 425 ಕಿಲೋಮೀಟರ್ ಪೈಪ್ ಲೈನ್ ನಿರ್ಮಿಸಲಾಗುವುದು. ಪೈಪ್‌ ಲೈನ್ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಸುರಕ್ಷಿತ, ವೇಗದ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸಾಗಣೆ ವಿಧಾನವನ್ನು ಒದಗಿಸುತ್ತದೆ.

 

ಪ್ರಧಾನಮಂತ್ರಿಯವರು 'ಹೈದರಾಬಾದ್ ವಿಶ್ವವಿದ್ಯಾಲಯದ ಐದು ಹೊಸ ಕಟ್ಟಡಗಳನ್ನು ಉದ್ಘಾಟಿಸಿದರು. ಅವುಗಳೆಂದರೆ; ಸ್ಕೂಲ್ ಆಫ್ ಎಕನಾಮಿಕ್ಸ್, ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ & ಸ್ಟ್ಯಾಟಿಸ್ಟಿಕ್ಸ್; ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಉಪನ್ಯಾಸ ಸಭಾಂಗಣ ಕಾಂಪ್ಲೆಕ್ಸ್ - III; ಮತ್ತು ಸರೋಜಿನಿ ನಾಯ್ಡು ಸ್ಕೂಲ್ ಆಫ್ ಆರ್ಟ್ಸ್ & ಕಮ್ಯುನಿಕೇಷನ್ (ಅನೆಕ್ಸ್). ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಮೂಲಭೂತ ಸೌಕರ್ಯಗಳ ಉನ್ನತೀಕರಣವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸುಧಾರಿತ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಒದಗಿಸುವ ಒಂದು ಕ್ರಮವಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
But where is India’s economic growth?

Media Coverage

But where is India’s economic growth?
NM on the go

Nm on the go

Always be the first to hear from the PM. Get the App Now!
...
Prime Minister shares moments from his metro journey to and from the SRCC programme
September 05, 2026

Prime Minister Shri Narendra Modi today shared glimpses of his metro journey while traveling to and from the SRCC programme.

In a post on X, the Prime Minister shared:

"Metro moments…

On the way to the SRCC programme and back."