ಪುದುಚೇರಿಯ ಅದ್ಭುತ ಜನರ ಮಧ್ಯೆ ಇರಲು ಸಂತೋಷವಾಗಿದೆ. ಇಂದು, ಜೀವನವನ್ನು ಸುಗಮಗೊಳಿಸುವ ಮತ್ತು ಈ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ: ಪ್ರಧಾನಮಂತ್ರಿ
ನಾನು ಈ ಹಿಂದೆ ಇಲ್ಲಿಗೆ ಬಂದಾಗ, ‘BEST’ ಪುದುಚೇರಿಯ ಮಂತ್ರವನ್ನು ನೀಡಿದ್ದೆ; BEST ಎಂದರೆ ವ್ಯವಹಾರ, ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ದೃಷ್ಟಿಕೋನವು ಫಲ ನೀಡುತ್ತಿದೆ: ಪ್ರಧಾನಮಂತ್ರಿ
ಪುದುಚೇರಿಯು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ
ಬಲಿಷ್ಠ ಮತ್ತು ಸಬಲೀಕರಣಗೊಂಡ ಯುವಶಕ್ತಿಯು ನಮ್ಮ ಬೆಳವಣಿಗೆಯ ಅಡಿಪಾಯವಾಗಿದೆ. ನಾವು ಅವರ ಕನಸುಗಳನ್ನು ಬೆಂಬಲಿಸಲು ಕೆಲಸ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ
ಎನ್ ಐ ಟಿ (NIT) ಕಾರೈಕಲ್‌ ನಲ್ಲಿ ಹೊಸ ಡಾ. ಎಪಿಜೆ ಅಬ್ದುಲ್ ಕಲಾಂ ಇಂಜಿನಿಯರಿಂಗ್ ಬ್ಲಾಕ್ ಮತ್ತು ಆಧುನಿಕ ಹಾಸ್ಟೆಲ್ ಸೌಲಭ್ಯಗಳು ಹಲವಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ಬಲಪಡಿಸುತ್ತವೆ; ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗಿದೆ: ಪ್ರಧಾನಮಂತ್ರಿ
ಆರೋಗ್ಯ ರಕ್ಷಣೆಯು ಎಲ್ಲರಿಗೂ ಲಭ್ಯವಿರಬೇಕು, ಸಿಗುವಂತಿರಬೇಕು ಮತ್ತು ಕೈಗೆಟುಕುವಂತಿರಬೇಕು ಎಂದು ನಾವು ನಂಬುತ್ತೇವೆ; ಆಯುಷ್ಮಾನ್ ಭಾರತ್ ಯೋಜನೆಯು ಈಗಾಗಲೇ ಭಾರತದಾದ್ಯಂತ ಕೋಟ್ಯಂತರ ಕುಟುಂಬಗಳಿಗೆ ಈ ದೃಷ್ಟಿಕೋನವನ್ನು ಈಡೇರಿಸುತ್ತಿದೆ: ಪ್ರಧಾನಮಂತ್ರಿ
ಪುದುಚೇರಿಯು ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಬಹುದು ಎಂದು ನಾನು ಬಲವಾಗಿ ನಂಬುತ್ತೇನೆ. ಪುದುಚೇರಿಯು ಈಗಾಗಲೇ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ; ಜಿಪ್ಮರ್‌ ನಲ್ಲಿರುವ (JIPMER) ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದ ಆಧುನೀಕರಣವು ಆರೋಗ್ಯ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲಿದೆ: ಪ್ರಧಾನಮಂತ್ರಿ
ಇಂದು ಪಿಎಂ-ಅಭಿಮ್ (PM-ABHIM) ಅಡಿಯಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ಮೂರು ಕ್ರಿಟಿಕಲ್ ಕೇರ್ ಬ್ಲಾಕ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುದುಚೇರಿಯಲ್ಲಿ 2,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಜನರ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಸಂಚಾರ ಸೇರಿದಂತೆ ಪ್ರಮುಖ ವಲಯಗಳನ್ನು ಈ ಯೋಜನೆಗಳು ಒಳಗೊಂಡಿವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಪುದುಚೇರಿಯು ಸಿದ್ಧರು, ಸಂತರು, ಕವಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭೂಮಿಯಾಗಿದೆ, ಇಲ್ಲಿ ಮಹಾಕವಿ ಸುಬ್ರಮಣ್ಯ ಭಾರತಿಯವರು ರಾಷ್ಟ್ರೀಯತೆಯ ಕಿಚ್ಚನ್ನು ಹಚ್ಚಿದರು ಮತ್ತು ಶ್ರೀ ಅರವಿಂದರು ಹಾಗೂ ಶ್ರೀ ಮಾತೆಯವರು ಜಗತ್ತಿಗೆ ಆಧ್ಯಾತ್ಮಿಕ ದೃಷ್ಟಿಕೋನವನ್ನು ನೀಡಿದರು” ಎಂದು ಸ್ಮರಿಸಿದರು.

ಪ್ರಧಾನಮಂತ್ರಿಯವರು 'BEST' ಪುದುಚೇರಿಗಾಗಿ ತಮ್ಮ ಮಂತ್ರವನ್ನು ಪುನರುಚ್ಚರಿಸಿದರು, ಇದು ವ್ಯವಹಾರ, ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮವನ್ನು ಪ್ರತಿನಿಧಿಸುತ್ತದೆ. "ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಈ ದೃಷ್ಟಿಕೋನವು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಕಾರಣವಾಗಿದೆ, ಇದು ತಲಾದಾಯದ ಏರಿಕೆ ಮತ್ತು ದೇಶದಲ್ಲೇ ಅತ್ಯಧಿಕ ಸಾಮಾಜಿಕ ಪ್ರಗತಿ ಸೂಚ್ಯಂಕದ ಸ್ಕೋರ್ ಮೂಲಕ ಸಾಬೀತಾಗಿದೆ" ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು.

 

ದೇಶಾದ್ಯಂತ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಈ ವರ್ಷದ ಬಜೆಟ್‌ ನಲ್ಲಿ ದಾಖಲೆಯ 12 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದನ್ನು ಪ್ರಸ್ತಾಪಿಸಿದರು. "ಪುದುಚೇರಿಯನ್ನು ಈಗ 'ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು' ಯೋಜನೆಯಡಿ ಸೇರಿಸಲಾಗಿದೆ, ಇದನ್ನು ಈ ಹಿಂದೆ ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು; ಇದು ರಸ್ತೆಗಳು, ನೀರು ಸರಬರಾಜು, ಶಾಲೆಗಳು, ಆಸ್ಪತ್ರೆಗಳು ಮತ್ತು ಅಂತಹ ಅನೇಕ ಯೋಜನೆಗಳಂತಹ ಅಗತ್ಯ ಮೂಲಸೌಕರ್ಯಗಳಿಗೆ ಹೆಚ್ಚಿನ ಹಣಕಾಸು ಒದಗಿಸುವುದನ್ನು ಖಚಿತಪಡಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು.

"ಬಲಿಷ್ಠ ಮತ್ತು ಸಬಲೀಕರಣಗೊಂಡ ಯುವಶಕ್ತಿಯು ನಮ್ಮ ಬೆಳವಣಿಗೆಯ ಅಡಿಪಾಯವಾಗಿದೆ. ನಾವು ಅವರ ಕನಸುಗಳನ್ನು ಬೆಂಬಲಿಸಲು ಕೆಲಸ ಮಾಡುತ್ತಿದ್ದೇವೆ" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಎನ್ ಐ ಟಿ (NIT) ಕಾರೈಕಲ್‌ ನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಡಾ. ಎಪಿಜೆ ಅಬ್ದುಲ್ ಕಲಾಂ ಇಂಜಿನಿಯರಿಂಗ್ ಬ್ಲಾಕ್ ಮತ್ತು ಆಧುನಿಕ ಹಾಸ್ಟೆಲ್ ಸೌಲಭ್ಯಗಳು ಹಾಗೂ ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿನ ಮೂಲಸೌಕರ್ಯ ಮೇಲ್ದರ್ಜೆಯು ತಾಂತ್ರಿಕ ಶಿಕ್ಷಣವನ್ನು ಗಮನಾರ್ಹವಾಗಿ ಬಲಪಡಿಸುತ್ತದೆ ಮತ್ತು ಹಲವಾರು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾವಿರಾರು ದೀರ್ಘಕಾಲದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಸರ್ಕಾರಕ್ಕೆ ಸೇರಿದ ಯುವಕರಿಗೆ ಅವರು ಅಭಿನಂದನೆ ಸಲ್ಲಿಸಿದರು.

ವಿಶ್ವವು ಪ್ರಸ್ತುತ ಸ್ವಚ್ಛ ಮತ್ತು ಹಸಿರು ಸಂಚಾರದತ್ತ ಗಮನ ಹರಿಸುತ್ತಿದೆ ಮತ್ತು ಎಲೆಕ್ಟ್ರಿಕ್ ವಾಹನಗಳು ದೈನಂದಿನ ಜೀವನದ ಅತ್ಯಗತ್ಯ ಭಾಗವಾಗುತ್ತಿವೆ ಎಂದು ಶ್ರೀ ಮೋದಿ ಅವರು ಹೇಳಿದರು. ಪುದುಚೇರಿಯಂತಹ ಪ್ರವಾಸಿ ತಾಣದಲ್ಲಿ, ಇಂದು 'ಪಿಎಂ ಇ-ಬಸ್ ಸೇವೆ' ಅಡಿಯಲ್ಲಿ ಒದಗಿಸಲಾದ ಎಲೆಕ್ಟ್ರಿಕ್ ಬಸ್‌ ಗಳು ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಬದಲಾವಣೆ ತರಬಲ್ಲವು ಎಂದು ಅವರು ತಿಳಿಸಿದರು. ಹೆಚ್ಚುವರಿಯಾಗಿ, ಕುಟುಂಬಗಳಿಗೆ ಸ್ಥಿರತೆ ಮತ್ತು ಘನತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ವಸತಿ ಯೋಜನೆಗಳು ಮತ್ತು ಪುದುಚೇರಿ, ಕಾರೈಕಲ್, ಮಾಹೆ ಮತ್ತು ಯಾನಂನಾದ್ಯಂತ ಹಲವಾರು ನೂರು ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಈ ಉಪಕ್ರಮಗಳಲ್ಲಿ ಶುದ್ಧ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಲು ನೀರಿನ ಉಪ್ಪು ತೆಗೆಯುವ ಘಟಕಗಳು, ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಹೊಸ ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ಮುಂಗಾರು ಅವಧಿಯಲ್ಲಿ ಪ್ರವಾಹ ಮತ್ತು ನೀರು ನಿಲ್ಲುವುದನ್ನು ಕಡಿಮೆ ಮಾಡಲು ನಡೆಯುತ್ತಿರುವ ಕಾಮಗಾರಿಗಳು ಸೇರಿವೆ. ಪ್ರಧಾನಮಂತ್ರಿಯವರು, "ನಮ್ಮ ಎಲ್ಲಾ ಪ್ರಯತ್ನಗಳು ಪುದುಚೇರಿಯ ಜನರ ಜೀವನವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿವೆ" ಎಂದು ತಿಳಿಸಿದರು.

 

ಯಾವುದೇ ರಾಷ್ಟ್ರವು ತನ್ನ ಮಾನವ ಬಂಡವಾಳವು ಆರೋಗ್ಯವಾಗಿದ್ದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ, ಹಾಗಾಗಿ ಆರೋಗ್ಯ ರಕ್ಷಣೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಆರೋಗ್ಯ ರಕ್ಷಣೆಯು ಎಲ್ಲರಿಗೂ ಸುಲಭವಾಗಿ ಲಭ್ಯವಿರಬೇಕು, ಸಿಗುವಂತಿರಬೇಕು ಮತ್ತು ಕೈಗೆಟುಕುವಂತಿರಬೇಕು ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು, ಈ ದೃಷ್ಟಿಕೋನವು ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಲಭ್ಯವಾಗುತ್ತಿದೆ. ಚಿಕಿತ್ಸೆಗಾಗಿ ಪುದುಚೇರಿಯ ಯಾವುದೇ ನಾಗರಿಕರು ದೂರ ಪ್ರಯಾಣ ಮಾಡುವಂತಾಗಬಾರದು ಎಂದು ಪ್ರತಿಪಾದಿಸಿದ ಅವರು, ಈಗಾಗಲೇ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಈ ಪ್ರದೇಶವು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು, ಜಿಪ್ಮರ್‌ ನಲ್ಲಿರುವ (JIPMER) ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವನ್ನು ಆಧುನೀಕರಿಸಲಾಗುತ್ತಿದೆ ಮತ್ತು ತುರ್ತು ಸೇವೆಗಳನ್ನು ಹೆಚ್ಚಿಸಲು ಪುದುಚೇರಿ ಮತ್ತು ಕಾರೈಕಲ್‌ ನಲ್ಲಿ PM-ABHIM ಅಡಿಯಲ್ಲಿ ಮೂರು ಕ್ರಿಟಿಕಲ್ ಕೇರ್ ಬ್ಲಾಕ್‌ ಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಕಾರೈಕಲ್‌ ನಲ್ಲಿರುವ ಹೊಸ ಸಂಯೋಜಿತ ಆಯುಷ್ ಆಸ್ಪತ್ರೆಯು ಸಿದ್ಧ ವೈದ್ಯಕೀಯ ಮತ್ತು ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಈ ಪ್ರದೇಶಕ್ಕಿರುವ ಖ್ಯಾತಿಯನ್ನು ಮತ್ತಷ್ಟು ವೃದ್ಧಿಸಲಿದೆ. "ಪುದುಚೇರಿಯು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಬಲ್ಲದು ಎಂದು ನಾನು ಬಲವಾಗಿ ನಂಬುತ್ತೇನೆ" ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟರು.

ಸಂಪರ್ಕವು ಪ್ರಗತಿಯ ಬೆನ್ನೆಲುಬು ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಗ್ರಾಮೀಣ ಮತ್ತು ನಗರ ಮೂಲಸೌಕರ್ಯಗಳೆರಡರ ಮೇಲೂ ಗಮನ ಹರಿಸಿದರು. ವಿದ್ಯಾರ್ಥಿಗಳು, ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುವಂತೆ ನೂರಾರು ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೈಲೈಟ್ ಮಾಡಿದರು. "ಅದೇ ಸಮಯದಲ್ಲಿ, 440 ಕೋಟಿ ರೂಪಾಯಿಗಳ ಹೊಸ ಫ್ಲೈಓವರ್ ಸೇರಿದಂತೆ ಪುದುಚೇರಿ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 1,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ," ಎಂದು ಪ್ರಧಾನಿ ಮೋದಿ ತಿಳಿಸಿದರು. ಈಸ್ಟ್ ಕೋಸ್ಟ್ ಮತ್ತು ಗ್ರ್ಯಾಂಡ್ ಸದರ್ನ್ ಟ್ರಂಕ್ ರಸ್ತೆಗಳ ಮೂಲಕ ಚೆನ್ನೈಗೆ ಇರುವ ಸಂಪರ್ಕವನ್ನು ಸಹ ಹೆಚ್ಚಿಸಲಾಗುತ್ತಿದೆ, ಇದರಿಂದ ಪ್ರಯಾಣದ ಸಮಯವನ್ನು ಎರಡು ಗಂಟೆಗಳಿಗಿಂತ ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು. "ಕನ್ಯಾಕುಮಾರಿಯವರೆಗಿನ ಈಸ್ಟ್ ಕೋಸ್ಟ್ ಕಾರಿಡಾರ್‌ ನಲ್ಲಿ 30,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆ ಮಾಡಲಾಗಿದ್ದು, ಈ ಯೋಜನೆಗಳು ಪುದುಚೇರಿಯನ್ನು ಬೆಂಗಳೂರು ಮತ್ತು ಕೊಯಮತ್ತೂರಿನಂತಹ ಪ್ರಮುಖ ಆರ್ಥಿಕ ಕೇಂದ್ರಗಳಿಗೆ ಸಂಪರ್ಕಿಸುತ್ತವೆ, ಇದು ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕೆಗೆ ಗಮನಾರ್ಹ ಉತ್ತೇಜನ ನೀಡುತ್ತದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿಯವರು ಪ್ರವಾಸೋದ್ಯಮವನ್ನು ಪುದುಚೇರಿಯ ಅತಿದೊಡ್ಡ ಸಾಮರ್ಥ್ಯಗಳಲ್ಲಿ ಒಂದೆಂದು ಗುರುತಿಸಿದರು ಮತ್ತು ಇದು ಈಗಾಗಲೇ ಪ್ರಮುಖ ವಾರಾಂತ್ಯದ ತಾಣವಾಗಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಹೇಳಿದರು. ಈ ಯಶಸ್ಸಿಗೆ ಸ್ಥಳೀಯ ಜನರ ಆತ್ಮೀಯತೆಯೇ ಕಾರಣ ಎಂದು ಅವರು ಶ್ಲಾಘಿಸಿದರು ಮತ್ತು ಈ ಪ್ರದೇಶಕ್ಕೆ ಬರುವ ರೈಲುಗಳು ಹಾಗೂ ವಿಮಾನಗಳು ನಿರಂತರವಾಗಿ ಭರ್ತಿಯಾಗಿರುತ್ತವೆ ಎಂದು ತಿಳಿಸಿದರು. "ಆಧ್ಯಾತ್ಮಿಕ, ಪರಿಸರ ಮತ್ತು ಆರೋಗ್ಯ ಪ್ರವಾಸೋದ್ಯಮದಲ್ಲಿ ಉದ್ದೇಶಿತ ಹೂಡಿಕೆಗಳ ಮೂಲಕ ಸರ್ಕಾರವು ಈ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ, ಇದರಲ್ಲಿ 'ಪ್ರಶಾದ್' (PRASHAD) ಯೋಜನೆಯಡಿ ವಿವಿಧ ದೇವಾಲಯಗಳಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿಯೂ ಸೇರಿದೆ" ಎಂದು ಶ್ರೀ ಮೋದಿ ಅವರು ಹೇಳಿದರು. ಶ್ರೀ ಅರವಿಂದರು ಮತ್ತು ಶ್ರೀ ಮಾತೆಯವರು ಆರೋವಿಲ್ ಅನ್ನು 'ಜಾಗತಿಕ ಪ್ರಜ್ಞೆಯ ನಗರ' ಎಂದು ಕಲ್ಪಿಸಿಕೊಂಡಿದ್ದರು ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು ಮತ್ತು ಇಂದು ಅಲ್ಲಿ ಜಾಗತಿಕ ಆಧ್ಯಾತ್ಮಿಕ ಮಹೋತ್ಸವ ಪ್ರಾರಂಭವಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಇಂತಹ ಸಭೆಗಳು ವಿವಿಧ ಪ್ರದೇಶಗಳು ಮತ್ತು ಧರ್ಮಗಳ ಜನರನ್ನು ಒಗ್ಗೂಡಿಸಲು ಸಹಕಾರಿಯಾಗಿವೆ ಎಂದು ಅವರು ಒತ್ತಿ ಹೇಳಿದರು.

 

ಪುದುಚೇರಿಯು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಅಂಗವಾಗಿದೆ ಮತ್ತು ಅನೇಕ ಮಹಾನ್ ನಾಯಕರ ಜನ್ಮಸ್ಥಳ ಅಥವಾ ಕಾರ್ಯಸ್ಥಳವಾಗಿದೆ ಎಂದು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. 1947ರಲ್ಲಿ ಭಾರತವು ಸ್ವಾತಂತ್ರ್ಯ ಪಡೆಯುವಲ್ಲಿ ಈ ಭೂಮಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ಅವರು ತಿಳಿಸಿದರು. ಭವಿಷ್ಯದತ್ತ ದೃಷ್ಟಿ ಹರಿಸಿದ ಪ್ರಧಾನಮಂತ್ರಿಯವರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಪುದುಚೇರಿ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯನ್ನು ಒತ್ತಿ ಹೇಳಿದರು ಹಾಗೂ ಡಬಲ್ ಎಂಜಿನ್ ಸರ್ಕಾರವು ಈ ಗುರಿಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು. "ನಾವು 'BEST' ಪುದುಚೇರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ" ಎಂಬ ದೃಢವಾದ ಮಾತಿನೊಂದಿಗೆ ಪ್ರಧಾನಮಂತ್ರಿಯವರು ಭಾಷಣ ಮುಕ್ತಾಯಗೊಳಿಸಿದರು.

 

 ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Proud Moment For Every Indian: PM Modi On Sarnath Being Inscribed On UNESCO World Heritage List

Media Coverage

Proud Moment For Every Indian: PM Modi On Sarnath Being Inscribed On UNESCO World Heritage List
NM on the go

Nm on the go

Always be the first to hear from the PM. Get the App Now!
...
Prime Minister expresses gratitude to brave soldiers on Kargil Vijay Diwas
July 26, 2026

Prime Minister Shri Narendra Modi today stated that on Kargil Vijay Diwas, our nation expresses gratitude to the brave soldiers for their extraordinary courage and commitment towards securing India.

The Prime Minister noted that their valour in the face of the most formidable conditions will forever remain a source of national pride. He observed that their unwavering patriotism and devotion to duty will continue to inspire generations.

In a post on X, the Prime Minister shared:

"On Kargil Vijay Diwas, our nation expresses gratitude to the brave soldiers for their extraordinary courage and commitment towards securing India. Their valour in the face of the most formidable conditions will forever remain a source of national pride. Their unwavering patriotism and devotion to duty will continue to inspire generations."