ನಮ್ಮ ಯುವ ಶಕ್ತಿಯ ಪ್ರತಿಭೆ ಮತ್ತು ಜಾಣ್ಮೆ ಗಮನಾರ್ಹ: ಪ್ರಧಾನಮಂತ್ರಿ
ನಮ್ಮ ಯುವ ಶಕ್ತಿಯೇ ಭಾರತದ ಬಲ, ಹೊಸತನದ ನಮ್ಮ ಯುವಕರು, ನಮ್ಮ ತಂತ್ರಜ್ಞಾನ ಶಕ್ತಿ ಎಂದು ಇಡೀ ಜಗತ್ತೇ ಹೇಳುತ್ತಿದೆ: ಪ್ರಧಾನಮಂತ್ರಿ
ಕಳೆದ 7 ವರ್ಷಗಳಲ್ಲಿ ನಡೆದ ಎಲ್ಲಾ ಹ್ಯಾಕಥಾನ್‌ಗಳ ಅನೇಕ ಪರಿಹಾರಗಳು ಇಂದು ದೇಶದ ಜನರಿಗೆ ತುಂಬಾ ಉಪಯುಕ್ತವಾಗಿವೆ: ಪ್ರಧಾನಮಂತ್ರಿ
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದೇವೆ: ಪ್ರಧಾನಮಂತ್ರಿ
‘ಒಂದು ರಾಷ್ಟ್ರ ಒಂದು ಚಂದಾದಾರಿಕೆ’ ಯೋಜನೆಯಡಿ, ಸರ್ಕಾರವು ಪ್ರತಿಷ್ಠಿತ ನಿಯತಕಾಲಿಕಗಳ ಚಂದಾದಾರಿಕೆ ತೆಗೆದುಕೊಳ್ಳುತ್ತಿದೆ, ಇದರಿಂದಾಗಿ ಭಾರತದಲ್ಲಿ ಯಾವುದೇ ಯುವಕರು ಯಾವುದೇ ಮಾಹಿತಿಯಿಂದ ವಂಚಿತರಾಗುವುದಿಲ್ಲ: ಪ್ರಧಾನಮಂತ್ರಿ
ದೇಶಾದ್ಯಂತ 51 ನೋಡಲ್ ಕೇಂದ್ರಗಳಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024ರ ಗ್ರ್ಯಾಂಡ್ ಫಿನಾಲೆಯಲ್ಲಿ 1,300ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು ಭಾಗವಹಿಸಲಿವೆ
ಸಂಸ್ಥೆ ಮಟ್ಟದಲ್ಲಿ ಆಂತರಿಕ ಹ್ಯಾಕಥಾನ್‌ಗಳಲ್ಲಿ ಈ ವರ್ಷ 150% ಹೆಚ್ಚಳ ದಾಖಲಾಗಿದೆ, ಇದು ಇದುವರೆಗಿನ ಅತಿದೊಡ್ಡ ಆವೃತ್ತಿಯಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರ ಗ್ರ್ಯಾಂಡ್ ಫಿನಾಲೆಯ ಯುವ ನವೋದ್ಯಮಿಗಳೊಂದಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ‘ಸಬ್ಕಾ ಪ್ರಯಾಸ್’ ಪುನರುಚ್ಚಾರವನ್ನು ನೆನಪಿಸಿದರು. ಇಂದಿನ ಭಾರತವು ‘ಸಬ್ಕಾ ಪ್ರಾರ್ಥನೆ’ ಅಥವಾ ಪ್ರತಿಯೊಬ್ಬರ ಪ್ರಯತ್ನದಿಂದ ತ್ವರಿತ ಗತಿಯಲ್ಲಿ ಪ್ರಗತಿ ಹೊಂದಬಹುದು ಎಂಬುದಕ್ಕೆ ಇಂದಿನ ಸಂದರ್ಭವು ಒಂದು ಉದಾಹರಣೆಯಾಗಿದೆ. "ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ", ಯುವ ನವೋದ್ಯಮಿಗಳ ನಡುವೆ ಇರುವಾಗ ಹೊಸದನ್ನು ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ನನಗೆ ಅವಕಾಶ ಸಿಗುತ್ತದೆ. ಯುವ ನವೋದ್ಯಮಿಗಳ ಮೇಲೆ ತಮ್ಮ ನಿರೀಕ್ಷೆಗಳು ಹೆಚ್ಚಾಗಿವೆ ಎಂದ ಪ್ರಧಾನ ಮಂತ್ರಿ, ಅವರು 21ನೇ ಶತಮಾನದ ಭಾರತವನ್ನು ವಿಭಿನ್ನವಾಗಿ ನೋಡುವ ದೃಷ್ಟಿಕೋನ ಹೊಂದಿದ್ದಾರೆ. ಆದ್ದರಿಂದ, ನಿಮ್ಮ ಪರಿಹಾರಗಳು ಸಹ ವಿಭಿನ್ನವಾಗಿವೆ ಮತ್ತು ಹೊಸ ಸವಾಲು ಬಂದಾಗ, ನೀವು ಹೊಸ ಮತ್ತು ಅನನ್ಯ ಪರಿಹಾರಗಳೊಂದಿಗೆ ಬರುತ್ತೀರಿ. ಈ ಹಿಂದೆ ಹ್ಯಾಕಥಾನ್‌ಗಳ ಭಾಗವಾಗಿದ್ದುದನ್ನು ಸ್ಮರಿಸಿದ ಪ್ರಧಾನ ಮಂತ್ರಿ, ಅದರ ಫಲಿತಾಂಶಗಳಿಂದ ಎಂದಿಗೂ ನಿರಾಶೆಗೊಂಡಿಲ್ಲ. "ನೀವು ನನ್ನ ನಂಬಿಕೆಯನ್ನು ಮಾತ್ರ ಬಲಪಡಿಸಿದ್ದೀರಿ", ಹಿಂದೆ ಒದಗಿಸಿದ ಪರಿಹಾರಗಳನ್ನು ವಿವಿಧ ಸಚಿವಾಲಯಗಳಲ್ಲಿ ಬಳಸಲಾಗುತ್ತಿದೆ. ಹ್ಯಾಕಥಾನ್ ಪ್ರತಿನಿಧಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕತೆ ಹೊಂದಿರುವುದಾಗಿ ತಿಳಿಸಿದ ಅವರು, ಸಂವಾದ ಪ್ರಾರಂಭಿಸಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕಾಗಿ 'ವರ್ಚುವಲ್ ರಿಯಾಲಿಟಿ ಫ್ರೆಂಡ್' ಎಂಬ ಸಾಧನ ಅಥವಾ ಉಪಕರಣ ಅಭಿವೃದ್ಧಿಗೆ ಕೆಲಸ ಮಾಡಿದ ಶ್ರೀನಗರ ಎನ್‌ಐಟಿಯ ನೋಡಲ್ ಸೆಂಟರ್ ನ 'ಬಿಗ್ ಬ್ರೈನ್ಸ್ ಟೀಮ್'ನ ಸಯೀದಾ ಅವರೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು. ಇದು ಮೆದುಳಿನ ನರಗಳ ಬೆಳವಣಿಗೆ ಅಸಾಮರ್ಥ್ಯ ಅಥವಾ ಅಸ್ವಸ್ಥತೆ(ಆಟಿಸಂ ಸ್ಪೆಕ್ಟ್ರಂ ಡಿಸ್ ಆರ್ಡರ್) ಮತ್ತು ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ಈ ಸಾಧನ ನೆರವಾಗುತ್ತದೆ. ದಿವ್ಯಾಂಗ ಮಕ್ಕಳು ತಮ್ಮ ಸಂವಾದ, ಕಲಿಕೆ ಮತ್ತು ದೈನಂದಿನ ವರ್ತನೆ ಮತ್ತು ನಡವಳಿಕೆಗಳಿಗೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಇತ್ಯಾದಿಗಳಲ್ಲಿ ಈ ಸಾಧನವನ್ನು ಬಳಸಬಹುದು. ಇದು ದಿವ್ಯಾಂಗ 'ಸ್ನೇಹಿ'ಯಾಗಿ ಕಾರ್ಯ ನಿರ್ವಹಿಸಲಿದ್ದು,  ಸಂವಾದಾತ್ಮಕ ಕೌಶಲ್ಯವರ್ಧಕವಾಗಿ ಈ ಉಪಕರಣ ಬಳಸಬಹುದು ಎಂದು ವಿವರಿಸಿದರು. ಇದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಚಾಲಿತ ವರ್ಚುವಲ್ ರಿಯಾಲಿಟಿ ಪರಿಹಾರವಾಗಿದೆ, ಇದು ವಿಶೇಷಚೇತನರಿಗೆ ಸಹಾಯ ಮಾಡುತ್ತದೆ. ಅವರ ದಿನನಿತ್ಯದ ಚಟುವಟಿಕೆಗಳಲ್ಲಿ ಭಾಷೆ ಕಲಿಯುವುದು ಅಥವಾ ಜನರೊಂದಿಗೆ ಸಂಭಾಷಣೆ ಮಾಡುವುದು ಇತ್ಯಾದಿಗಳನ್ನು ಮಾಡಬಹುದು. ದಿವ್ಯಾಂಗ ಮಕ್ಕಳ ಸಾಮಾಜಿಕ ಜೀವನದ ಮೇಲೆ ಉಪಕರಣ ಬೀರುವ ಪ್ರಭಾವ ಕುರಿತು ಮೋದಿ ಅವರು ವಿಚಾರಿಸಿದರು. ಆಗ ಶ್ರೀಮತಿ ಸಯೀದಾ ಅವರು, ದಿವ್ಯಾಂಗರ ಸಾಮಾಜಿಕ ಸಂವಹನ ಸಮಯದಲ್ಲಿ ಯಾವುದು ಸರಿ ಅಥವಾ ತಪ್ಪು ಎಂಬುದನ್ನು ಕಲಿಯಲು ಸಾಧ್ಯವಾಗುತ್ತದೆ, ಸಾಧನದ ಸಹಾಯದಿಂದ ಜನರನ್ನು ಹೇಗೆ ಸಂಪರ್ಕಿಸಬೇಕು ಎಂಬುದನ್ನು ಸಿಮ್ಯುಲೇಟಿವ್ ಪರಿಸರದಲ್ಲಿ ನಿಜ ಜೀವನದಲ್ಲಿ ಅನ್ವಯಿಸಬಹುದು. ಭಾರತೀಯರಲ್ಲದ ಸದಸ್ಯರನ್ನು ಒಳಗೊಂಡಂತೆ ತಾಂತ್ರಿಕ ಜ್ಞಾನ ಮತ್ತು ಭೌಗೋಳಿಕ ಸ್ಥಳದ ವಿಷಯದಲ್ಲಿ ತನ್ನ 6 ಸದಸ್ಯರ ತಂಡವು ವೈವಿಧ್ಯಮಯವಾಗಿ ಕೆಲಸ ಮಾಡುತ್ತಿದೆ ಎಂದು ಸಯೀದಾ ಪ್ರಧಾನಿಗೆ ತಿಳಿಸಿದರು. ತಂಡದ ಸದಸ್ಯರಲ್ಲಿ ಯಾರಾದರೂ ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆಯೇ ಎಂದು ಶ್ರೀ ಮೋದಿ ಪ್ರಶ್ನಿಸಿದರು. ಅದಕ್ಕೆ ಸಯೀದಾ ಉತ್ತರಿಸಿ, ತಂಡದ ಸದಸ್ಯರ ಸಂಬಂಧಿಯೊಬ್ಬರು ಸ್ವಲೀನತೆ ಅಥವಾ ಮೆದುಳಿನ ನರಗಳ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ, ಅವರು ಆಟಿಸಂ ಅಥವಾ ಸ್ವಲೀನತೆಯಿಂದ ಬಳಲುತ್ತಿರುವ ಮಕ್ಕಳೊಂದಿಗೆ ವ್ಯವಹರಿಸುವ ಕೇಂದ್ರಗಳೊಂದಿಗೆ ಸಂವಾದ ನಡೆಸಿ, ಅವರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಿದ್ದಾರೆ ಎಂದು ಉತ್ತರಿಸಿದರು. 'ಬಿಗ್ ಬ್ರೈನ್ಸ್ ಟೀಮ್'ನ ಮತ್ತೊಬ್ಬ ತಂಡದ ಸದಸ್ಯ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಯೆಮೆನ್‌ನ ವಿದ್ಯಾರ್ಥಿ ಶ್ರೀ ಮೊಹಮ್ಮದ್ ಅಲಿ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಂತಹ ಉತ್ತಮ ಉಪಕ್ರಮಕ್ಕಾಗಿ ಪ್ರಧಾನ ಮಂತ್ರಿ ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಮುಂದಿನ ದಿನಗಳಲ್ಲಿ ಇಂತಹ ಮಹಾನ್ ಉಪಕ್ರಮಗಳ ಭಾಗವಾಗುವಂತೆ ಅವರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಹ್ವಾನಿಸಿದರು. ದಿವ್ಯಾಂಗ ಮಕ್ಕಳ ಅಗತ್ಯತೆಗಳು ಮತ್ತು ಕಷ್ಟಗಳನ್ನು ಅರ್ಥ ಮಾಡಿಕೊಂಡ ತಂಡವನ್ನು ಪ್ರಧಾ ನಮಂತ್ರಿ ಅಭಿನಂದಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಪ್ರತಿ ಮಗುವಿಗೆ ಬೆಳೆಯುವ ಮತ್ತು ಏಳಿಗೆಯ ಹಕ್ಕಿದೆ, ಸಮಾಜದಲ್ಲಿ ಯಾರೂ ಸಹ ಹಿಂದುಳಿಯಬಾರದು. ಅಂತಹ ಸವಾಲುಗಳನ್ನು ನಿವಾರಿಸಲು ಹೊಸ ತಂತ್ರಜ್ಞಾನ ಪರಿಹಾರಗಳು ಅಗತ್ಯ ಎಂದು ಪ್ರಧಾನಿ ಹೇಳಿದರು, ಇಂತಹ ಪರಿಹಾರವು ಲಕ್ಷಾಂತರ ಮಕ್ಕಳಿಗೆ ಸಹಾಯಕವಾಗಲಿದೆ. ಪರಿಹಾರವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದರೂ, ಜಾಗತಿಕ ಮಟ್ಟದಲ್ಲಿಯೂ ಇದು ಅಗತ್ಯವಿದೆ, ಅದರ ಪರಿಣಾಮವು ಜಾಗತಿಕವಾಗಿರುತ್ತದೆ. ಭಾರತದ ಅಗತ್ಯಗಳಿಗೆ ಸರಿಹೊಂದುವ ಪರಿಹಾರಗಳು ಜಗತ್ತಿನ ಯಾವುದೇ ದೇಶದ ಅಗತ್ಯಗಳಿಗೆ ಸಾಕಾಗುತ್ತದೆ ಎಂದು ಶ್ರೀ ಮೋದಿ ತಿಳಿಸಿದರು. 'ಬಿಗ್ ಬ್ರೈನ್ಸ್ ಟೀಮ್'ನ ಹೊಸ ಪ್ರಯತ್ನಕ್ಕಾಗಿ ಪ್ರಧಾನಿ  ಅವರು ಇಡೀ ತಂಡವನ್ನು ಅಭಿನಂದಿಸಿದರು.

ಐಐಟಿ-ಖಾರಗ್‌ಪುರ ನೋಡಲ್ ಸೆಂಟರ್‌ನ 'ಹ್ಯಾಕ್ ಡ್ರೀಮರ್ಸ್' ತಂಡದ ಮುಖ್ಯಸ್ಥರು, ಭಾರತದಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿಗಳ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೀಡಿದ ಸೈಬರ್ ಭದ್ರತೆಯ ಸಮಸ್ಯೆಯ ಹೇಳಿಕೆಯನ್ನು ಪ್ರಧಾನ ಮಂತ್ರಿ ಅವರ ಗಮನಕ್ಕೆ ತಂದರು. 2023ರಲ್ಲೇ ದೇಶದಲ್ಲಿ 73 ದಶಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳು ನಡೆದಿವೆ. ಇದು ವಿಶ್ವದಲ್ಲೇ 3ನೇ ಅತಿ ದೊಡ್ಡ ದಾಳಿಯಾಗಿದೆ. ಇದಕ್ಕಾಗಿ ನಾವು ನವೀನ ಮತ್ತು ಪರಿಮಾಣಾತ್ಮಕ ಪರಿಹಾರ ಒದಗಿಸಿದ್ದೇವೆ ಎಂದು ಪ್ರಧಾನಿಗೆ ವಿವರಿಸಿದರು. ಈ ಪರಿಹಾರವು ಪ್ರಪಂಚದಲ್ಲಿ ಬಳಸಲಾಗುವ ಬಹು ಆಂಟಿವೈರಸ್ ಎಂಜಿನ್‌ಗಳಿಗಿಂತ ಭಿನ್ನವಾಗಿದೆ, ಕಂಪ್ಯೂಟರ್ ಸಿಸ್ಟಮ್ ಅನ್ನು ಸುರಕ್ಷಿತ ವ್ಯವಸ್ಥೆಯಲ್ಲಿ ನಿರ್ವಹಿಸುವ ಮೂಲಕ ಸಮರ್ಥ ರೀತಿಯಲ್ಲಿ ವೈರಸ್‌ಗಳನ್ನು ಸಮಾನಾಂತರವಾಗಿ ಸ್ಕ್ಯಾನ್ ಮಾಡುವ ಮೂಲಕ ಆಫ್‌ಲೈನ್ ಆರ್ಕಿಟೆಕ್ಚರ್ ವಿನ್ಯಾಸ ಮತ್ತು ಥ್ರೆಡ್ ದಿಕ್ಕನ್ನು ಒದಗಿಸುತ್ತದೆ ಎಂದು ತಂಡದ ಸದಸ್ಯರೊಬ್ಬರು ವಿವರಿಸಿದರು. ಪ್ರಧಾನ ಮಂತ್ರಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ಭಾಷಣದಲ್ಲಿ ಸೈಬರ್ ವಂಚನೆಯ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಂಡರು, ಹೆಚ್ಚಿನ ಜನಸಂಖ್ಯೆಯು ಇಂತಹ ದುರುದ್ದೇಶದಿಂದ ಪ್ರಭಾವಿತವಾಗಿದೆ. ಸೈಬರ್ ಬೆದರಿಕೆಗಳು ನಿರಂತರವಾಗಿ ವೇಗವಾಗಿ ವಿಕಸನಗೊಳ್ಳುತ್ತಿರುವುದರಿಂದ ಇತ್ತೀಚಿನ ತಂತ್ರಜ್ಞಾನದೊಂದಿಗೆ ನಿರಂತರವಾಗಿ ಅಪ್‌ಗ್ರೇಡ್ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ತಿಳಿಸಿದರು. ಭಾರತವು ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿದೆ, ರಾಷ್ಟ್ರವು ವಿವಿಧ ಮಾಪಕಗಳಲ್ಲಿ ಡಿಜಿಟಲ್ ಸಂಪರ್ಕ ಹೊಂದಿದೆ ಎಂಬುದನ್ನು ಗಮನಿಸಿದ ಪ್ರಧಾನಿ, ಸೈಬರ್ ಅಪರಾಧದ ಬೆದರಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. ಆದ್ದರಿಂದ, ಸೈಬರ್ ಅಪರಾಧಕ್ಕೆ ಪರಿಹಾರಗಳು ಭಾರತದ ಭವಿಷ್ಯಕ್ಕಾಗಿ ನಿರ್ಣಾಯಕವಾಗಿವೆ ಎಂದರಲ್ಲದೆ,  ಹ್ಯಾಕಥಾನ್ ನಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಶುಭಾಶಯಗಳನ್ನು ತಿಳಿಸಿದರು, ಅಂತಹ ಪರಿಹಾರಗಳು ಸರ್ಕಾರಕ್ಕೂ ಅತ್ಯಂತ ಪ್ರಯೋಜನಕಾರಿಯಾಗಬಲ್ಲವು ಎಂದು ಹೇಳಿದರು. ಶ್ರೀ ಮೋದಿ ಅವರು ತಂಡದ ಸದಸ್ಯರ ಉತ್ಸಾಹವನ್ನು ಶ್ಲಾಘಿಸಿದರು.

 

ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯದ ಟೀಮ್ ಕೋಡ್ ಬ್ರೋ ತಂಡವು ಇಸ್ರೋ  ಒದಗಿಸಿದ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡುತ್ತಿರುವ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು - ‘ಚಂದ್ರನ ದಕ್ಷಿಣ ಧ್ರುವದಿಂದ ಗಾಢವಾದ ಚಿತ್ರಗಳನ್ನು ಹೆಚ್ಚಿಸುವ ಪರಿಹಾರ ನೀಡುವುದು ಇದಾಗಿದೆ. ತಂಡದ ಸದಸ್ಯರೊಬ್ಬರು ಪರಿಹಾರದ ಹೆಸರನ್ನು 'ಚಾಂದ್ ವಧಾನಿ' ಎಂದು ವಿವರಿಸಿದರು, ಇದು ಚಿತ್ರಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನೂ ಒಳಗೊಂಡಿದೆ. ಇದು ನೈಜ-ಸಮಯದ ಸೈಟ್ ಆಯ್ಕೆಯನ್ನು ನಿರ್ವಹಿಸುವಾಗ ಕುಳಿಗಳು ಮತ್ತು ಬಂಡೆಗಳನ್ನು ಪತ್ತೆ ಮಾಡುತ್ತದೆ. ವಿಶೇಷವಾಗಿ ಬೃಹತ್ ಬಾಹ್ಯಾಕಾಶ ಕೇಂದ್ರವಿರುವ ಅಹಮದಾಬಾದ್‌ನ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರೊಂದಿಗೆ ಸಂವಹನ ನಡೆಸಲು ಅವಕಾಶವಿದೆಯೇ ಎಂದು ಪ್ರಧಾನಿ ವಿಚಾರಿಸಿದರು. ಚಂದ್ರನ ಭೌಗೋಳಿಕ ಮತ್ತು ಪರಿಸರದ ಪರಿಸ್ಥಿತಿಗಳ ಬಗ್ಗೆ ಉತ್ತಮ ತಿಳಿವಳಿಕೆ ಪಡೆಯುವ ಬಗ್ಗೆ ಪ್ರಧಾನ ಮಂತ್ರಿ ಕೇಳಿದ ಪ್ರಶ್ನೆಗೆ ತಂಡದ ಸದಸ್ಯರೊಬ್ಬರು ಸಕಾರಾತ್ಮಕವಾಗಿ ಉತ್ತರಿಸಿದರು. ಇದು ಚಂದ್ರನ ಅನ್ವೇಷಣೆಗೆ ಸಹಾಯ ಮಾಡುತ್ತದೆ ಎಂದರು. ಮತ್ತೊಬ್ಬ ತಂಡದ ಸದಸ್ಯರು ಡಾರ್ಕ್ ನೆಟ್ ಮತ್ತು ಫೋಟೊ ನೆಟ್ ಎಂಬ 2 ಆರ್ಕಿಟೆಕ್ಚರ್‌ಗಳನ್ನು ಒಳಗೊಂಡಿರುವ ಯಂತ್ರ ಕಲಿಕೆಯ ಮಾದರಿಯ ಬಳಕೆ ಕುರಿತು ವಿವರಿಸಿದರು. ವಿಶ್ವವು ಭಾರತದ ಬಾಹ್ಯಾಕಾಶ ಪ್ರಯಾಣವನ್ನು ಭರವಸೆಯಿಂದ ನೋಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಪ್ರತಿಭಾವಂತ ಯುವಕರ ಸೇರ್ಪಡೆಯು ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನ ಶಕ್ತಿಯಲ್ಲಿ ಭಾರತವು ತನ್ನ ಪಾತ್ರವನ್ನು ವಿಸ್ತರಿಸಲಿದೆ ಎಂಬುದಕ್ಕೆ ನಮ್ಮ ಯುವ ನಾವೀನ್ಯಕಾರರು ಪುರಾವೆಯಾಗಿದ್ದಾರೆ ಎಂದರಲ್ಲದೆ, ಹ್ಯಾಕಥಾನ್ ನಲ್ಲಿ ಭಾಗವಹಿಸುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಮುಂಬೈನ ವೆಲ್ಲಿಂಗ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಅಂಡ್ ರಿಸರ್ಚ್‌ನ “ಮಿಸ್ಟಿಕ್ ಒರಿಜಿನಲ್ಸ್‌”ನ ಟೀಮ್ ಲೀಡರ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒದಗಿಸಿದ ಭದ್ರತಾ ಸವಾಲು ನಿಭಾಯಿಸುವ ಪರಿಹಾರ ಕುರಿತು ಮಾಹಿತಿ ನೀಡಿದರು, ಅಂದರೆ ಮೈಕ್ರೋ ಡಾಪ್ಲರ್ ಆಧಾರಿತ ಗುರಿ ವರ್ಗೀಕರಣವು ನಿರ್ದಿಷ್ಟ ವಸ್ತುವು ಪಕ್ಷಿ ಅಥವಾ ಡ್ರೋನ್ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ. ರಾಡಾರ್‌ನಲ್ಲಿ ಹಕ್ಕಿ ಮತ್ತು ಡ್ರೋನ್ ಒಂದೇ ರೀತಿ ಕಾಣುತ್ತವೆ, ಇವು ಸುಳ್ಳು ಎಚ್ಚರಿಕೆಗಳು ಮತ್ತು ಇತರ ಸಂಭಾವ್ಯ ಭದ್ರತಾ ಬೆದರಿಕೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ. ಮತ್ತೊಬ್ಬ ತಂಡದ ಸದಸ್ಯರು ವಿವರಗಳನ್ನು ಪರಿಶೀಲಿಸಿದರು ಮತ್ತು ಪರಿಹಾರವು ಮೈಕ್ರೋ ಡಾಪ್ಲರ್ ಸಹಿಗಳನ್ನು ಬಳಸುತ್ತದೆ ಎಂದು ವಿವರಿಸಿದರು, ಇದು ಮಾನವರಲ್ಲಿ ವಿಶಿಷ್ಟವಾದ ಫಿಂಗರ್‌ಪ್ರಿಂಟ್‌ಗಳಂತೆಯೇ ವಿಭಿನ್ನ ವಸ್ತುಗಳಿಂದ ಉತ್ಪತ್ತಿಯಾಗುವ ವಿಶಿಷ್ಟ ಮಾದರಿಗಳಾಗಿವೆ ಎಂದರು. ಪರಿಹಾರವು ವೇಗ, ದಿಕ್ಕು ಮತ್ತು ದೂರವನ್ನು ಗುರುತಿಸಬಹುದೇ ಎಂದು ಪ್ರಧಾನಿ ಅವರು ಕೇಳಿದ ಪ್ರಶ್ನೆಗೆ, ತಂಡದ ಸದಸ್ಯರೊಬ್ಬರು ಅದನ್ನು ಶೀಘ್ರದಲ್ಲೇ ಸಾಧಿಸಲಾಗುವುದು ಎಂದು ಉತ್ತರಿಸಿದರು. ಡ್ರೋನ್‌ಗಳು ವಿವಿಧ ಸಕಾರಾತ್ಮಕ ಉಪಯೋಗಗಳನ್ನು ಹೊಂದಿವೆ ಎಂದು ತಿಳಿಸಿದ ಪ್ರಧಾನಿ, ಕೆಲವು ಶಕ್ತಿಗಳು ಇತರರಿಗೆ ಹಾನಿ ಮಾಡಲು ಡ್ರೋನ್‌ಗಳನ್ನು ಬಳಸುತ್ತಿವೆ, ಇದು ಭದ್ರತಾ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು. ನೀವು ಒದಗಿಸಿದ ಪರಿಹಾರವು ಅಂತಹ ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆಯೇ ಎಂದು ಪ್ರಧಾನ ಮಂತ್ರಿ ಕೇಳಿದ ಪ್ರಶ್ನೆಗೆ, ತಂಡದ ಸದಸ್ಯರೊಬ್ಬರು ತಂತ್ರಜ್ಞಾನ ಪ್ರಕ್ರಿಯೆಯನ್ನು ವಿವರಿಸಿದರು. ಇದು ಕಾಂಪ್ಯಾಕ್ಟ್ ಪರಿಹಾರವಾಗಿದೆ, ಇದು ವೆಚ್ಚ-ಪರಿಣಾಮಕಾರಿ ಸಾಧನವಾಗಿ ಬಳಸಬಹುದಾಗಿದೆ, ಇದು ವಿಭಿನ್ನ ಪರಿಸರಗಳಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಿದರು. ಪುಲ್ವಾಮಾ ದಾಳಿಯ ನಂತರ ಆಕಾಶದಲ್ಲಿ ಶತ್ರು ಡ್ರೋನ್‌ಗಳ ಆವರ್ತನವು ವೇಗವಾಗಿ ಹೆಚ್ಚಾಯಿತು, ರಾತ್ರಿಯ ಯಾವುದೇ ಸಮಯದಲ್ಲಿ ಡ್ರೋನ್ ವಿರೋಧಿ ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗುವುದು ಎಂದು ರಾಜಸ್ಥಾನದ ಗಡಿ ಪ್ರದೇಶದಿಂದ ಬಂದಿರುವ ಮತ್ತೊಬ್ಬ ತಂಡದ ಸದಸ್ಯ ತಿಳಿಸಿದರು. ನಾಗರಿಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಕಾರಣ ಈ ಸಮಸ್ಯೆ ಹೇಳಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ದೇಶದ ವಿವಿಧ ವಲಯಗಳಲ್ಲಿ ಡ್ರೋನ್‌ಗಳ ಬಳಕೆಯನ್ನು ಪ್ರಧಾನ ಮಂತ್ರಿ ಎತ್ತಿ ತೋರಿಸಿದರು. ನಮೋ ಡ್ರೋನ್ ದೀದಿ ಯೋಜನೆಯ ಉದಾಹರಣೆ ನೀಡಿದರು. ದೇಶದ ದೂರದ ಪ್ರದೇಶಗಳಿಗೆ ಔಷಧಗಳು ಮತ್ತು ಅಗತ್ಯ ಸಾಮಗ್ರಿಗಳ ಸಾಗಣೆಗೆ ಡ್ರೋನ್‌ಗಳ ಬಳಕೆಯನ್ನು ಅವರು ಪ್ರಸ್ತಾಪಿಸಿದರು, ಆದರೆ ಶತ್ರುಗಳು ಗಡಿಯಾದ್ಯಂತ ಬಂದೂಕುಗಳು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಲು ಬಳಸುತ್ತಾರೆ. ರಾಷ್ಟ್ರೀಯ ಭದ್ರತೆಯ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಯುವ ನವೋದ್ಯಮಿಗಳು ಅತ್ಯಂತ ಗಂಭೀರತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಅವರ ಆವಿಷ್ಕಾರವು ರಕ್ಷಣಾ ತಂತ್ರಜ್ಞಾನದ ರಫ್ತಿಗೆ ಹೊಸ ಆಯಾಮಗಳನ್ನು ನೀಡಬಹುದು ಎಂದು ಹೇಳಿ,  ಪ್ರಧಾನಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು. ಗಡಿ ಪ್ರದೇಶಗಳಿಂದ ಬಂದಿರುವ ತಂಡದ ಸದಸ್ಯರಲ್ಲಿ ಒಬ್ಬರು ಸಮಸ್ಯೆಯನ್ನು ವಿವರವಾಗಿ ಅರ್ಥ ಮಾಡಿಕೊಂಡು, ಪರಿಹಾರಗಳ ಅಗತ್ಯವನ್ನು ಒಪ್ಪಿಕೊಂಡರು. ರಾಕ್ಷಸ ಡ್ರೋನ್‌ಗಳನ್ನು ಬಳಸುತ್ತಿರುವವರು ಪ್ರತಿ ದಿನವೂ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಇತ್ತೀಚಿನ ತಂತ್ರಜ್ಞಾನ ನವೀಕರಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಅವರ ಪ್ರಯತ್ನ ಮತ್ತು ಸಲಹೆಯನ್ನು ಪ್ರಧಾನಿ ಶ್ಲಾಘಿಸಿದರು.

 

ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ನಿರ್ವಾಣ ಒನ್ ತಂಡದ ಮುಖ್ಯಸ್ಥರು, ನದಿ ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ನದಿಯ ಪುನರುಜ್ಜೀವನ ಸುಧಾರಿಸುವ ಕುರಿತು ಜಲಶಕ್ತಿ ಸಚಿವಾಲಯವು ಒದಗಿಸಿದ ಸಮಸ್ಯೆಯ ಪರಿಹಾರ ಕುರಿತು ಪ್ರಧಾನಮಂತ್ರಿಗೆ ತಿಳಿಸಿದರು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದಿಂದ ಗಂಗಾ ನದಿಯನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ತಂಡದ ಮತ್ತೊಬ್ಬರು ಹೇಳಿದರು. ನಮಾಮಿ ಗಂಗೆ ಮತ್ತು ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಕುರಿತು ನಡೆಸಿದ ಸಂಶೋಧನೆಯ ಪರಿಣಾಮವಾಗಿ ಈ ಯೋಜನೆ ಪ್ರಾರಂಭವಾಯಿತು ಎಂದು ಅವರು ಮಾಹಿತಿ ನೀಡಿದರು. ನದಿ ದಡದಲ್ಲಿ ವಾಸಿಸುವ ಜನರ ಜೀವನಕ್ಕೆ ಸಹಾಯ ಮಾಡಲು ಲಭ್ಯವಿರುವ ಡೇಟಾ ಸಹಾಯದಿಂದ ನಿರ್ಧಾರ ಬೆಂಬಲ ವ್ಯವಸ್ಥೆಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. 38 ಪ್ರಮುಖ ಸ್ಥಳಗಳನ್ನು ಗುರುತಿಸಲಾಗಿದೆ, ಮಾತೃ ಮಾದರಿಯೊಂದಿಗೆ ಸಂವಹನ ನಡೆಸುವ ಫೆಡರೇಟೆಡ್ ಕಲಿಕೆಯ ಸಹಾಯದಿಂದ ಸ್ಥಳೀಯ ಮಾದರಿಗಳನ್ನು ರಚಿಸಲಾಗಿದೆ, ಇದರಿಂದಾಗಿ ನಿಖರತೆಯನ್ನು ಹೆಚ್ಚಿಸಲಾಗಿದೆ ಎಂದು ತಂಡದ ಮುಖ್ಯಸ್ಥರು ಮಾಹಿತಿ ನೀಡಿದರು. ಪ್ರತಿ ಪಾಲುದಾರರಿಗಾಗಿ ಸುಧಾರಿತ ಡ್ಯಾಶ್‌ಬೋರ್ಡ್ ರಚಿಸುವುದನ್ನು ಸಹ ಅವರು ಉಲ್ಲೇಖಿಸಿದರು. ಮಹಾಕುಂಭದಲ್ಲಿ ಭಾಗವಹಿಸುವವರು ನಾವೀನ್ಯತೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಪ್ರಧಾನ ಮಂತ್ರಿ ಅವರಿಗೆ ತಂಡದ ಮುಖ್ಯಸ್ಥರು, ಡೇಟಾ ವಿಶ್ಲೇಷಣೆಯು ವೈಯಕ್ತಿಕ ಮಟ್ಟದಲ್ಲಿ ಸೋಂಕು ನಿವಾರಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಉತ್ತಮ ಆರೋಗ್ಯ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಉತ್ತರಿಸಿದರು. ಕೈಗಾರಿಕಾ ತ್ಯಾಜ್ಯ ನೀರಿನ ಮೇಲ್ವಿಚಾರಣೆ, ಒಳಚರಂಡಿ ಸಂಸ್ಕರಣೆ ಮೂಲಸೌಕರ್ಯ, ಜೀವವೈವಿಧ್ಯ ನಿರ್ವಹಣೆ ಇತ್ಯಾದಿಗಳಿಗೆ ವಿವಿಧ ಪೋರ್ಟಲ್‌ಗಳನ್ನು ಒದಗಿಸುವ ಕುರಿತು ಅವರು ಮಾಹಿತಿ ನೀಡಿದರು. ಕುಡಿಯುವ ನೀರು ಸರಬರಾಜು ಸರಪಳಿಗಾಗಿ, ಮಾಲಿನ್ಯಕಾರಕಗಳ ನಿರ್ದಿಷ್ಟ ಹೆಚ್ಚಳವನ್ನು ಮಾಲಿನ್ಯಕಾರಕ ಕೈಗಾರಿಕೆಗಳು ಹಿಮ್ಮೆಟ್ಟಿಸಬಹುದು ಮತ್ತು ಅದನ್ನು ಪರಿಶೀಲಿಸಬಹುದು ಎಂದು ಅವರು ಪ್ರಧಾನಿಗೆ ತಿಳಿಸಿದರು. ಪರಿಸರ ದೃಷ್ಟಿಕೋನದಿಂದ ಯೋಜನೆಯು ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿ, ತಂಡವು ಅಂತಹ ಸೂಕ್ಷ್ಮ ವಿಷಯಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ತಂಡಕ್ಕೆ ಶುಭ ಹಾರೈಸಿದರು.

ಎಸ್‌ಐಎಚ್‌ನ ಎಲ್ಲಾ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನ ಮಂತ್ರಿ, ಅವರೆಲ್ಲರೊಂದಿಗೆ ಮಾತನಾಡುತ್ತಿರುವುದಕ್ಕೆ ಸಂತೋಷವಾಗಿದೆ. ಭವಿಷ್ಯದ ಜಗತ್ತು ಜ್ಞಾನ ಮತ್ತು ನಾವೀನ್ಯತೆಯಿಂದ ಮುನ್ನಡೆಯಲಿದೆ, ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಯುವಕರು ಭಾರತದ ಭರವಸೆ ಮತ್ತು ಆಕಾಂಕ್ಷೆಯಾಗಿದ್ದಾರೆ. ಅವರ ದೃಷ್ಟಿಕೋನ, ಆಲೋಚನೆ ಮತ್ತು ಶಕ್ತಿ ವಿಭಿನ್ನವಾಗಿದೆ. ಎಲ್ಲರ ಗುರಿ ಒಂದೇ ಆಗಿದೆ. ಭಾರತವು ವಿಶ್ವದ ಅತ್ಯಂತ ನವೀನ, ಪ್ರಗತಿಪರ ಮತ್ತು ಸಮೃದ್ಧ ದೇಶವಾಗಬೇಕು ಎಂದು ಒತ್ತಿ ಹೇಳಿದರು. ಹೊಸತನದ ಭಾರತದ ತಂತ್ರಜ್ಞಾನ ಶಕ್ತಿಯು ಭಾರತದ ಶಕ್ತಿಯಾಗಿದೆ ಎಂಬುದನ್ನು ಇಡೀ ಜಗತ್ತು ಒಪ್ಪಿಕೊಳ್ಳುತ್ತಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ ಸ್ಪರ್ಧಿಸಿರುವ ಎಲ್ಲರಲ್ಲೂ ಭಾರತದ ಶಕ್ತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಭಾರತದ ಯುವಕರನ್ನು ಜಾಗತಿಕವಾಗಿ ಅತ್ಯುತ್ತಮವಾಗಿಸಲು ಅತ್ಯುತ್ತಮ ವೇದಿಕೆಯಾಗಿ ಮಾರ್ಪಟ್ಟಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದರು. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಪ್ರಾರಂಭವಾದಾಗಿನಿಂದ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, 2 ಲಕ್ಷ ತಂಡಗಳನ್ನು ಸೃಜಿಸಿದ್ದಾರೆ, ಸುಮಾರು 3 ಸಾವಿರ ಸಮಸ್ಯೆಗಳಿಗೆ ಕೆಲಸ ಮಾಡಿದ್ದಾರೆ. ಹ್ಯಾಕಥಾನ್‌ನಿಂದಾಗಿ ನೂರಾರು ಹೊಸ ಸ್ಟಾರ್ಟಪ್‌ಗಳು ಹುಟ್ಟಿಕೊಂಡಿವೆ, 6,400ಕ್ಕೂ ಹೆಚ್ಚು ಸಂಸ್ಥೆಗಳು ಇದರೊಂದಿಗೆ ಸಂಬಂಧ ಹೊಂದಿವೆ. 2017ರಲ್ಲಿ ವಿದ್ಯಾರ್ಥಿಗಳು 7 ಸಾವಿರಕ್ಕೂ ಹೆಚ್ಚು ಪರಿಕಲ್ಪನೆಗಳನ್ನು ಸಲ್ಲಿಸಿದ್ದರೆ, ಈ ವರ್ಷ ಈ ಪರಿಕಲ್ಪನೆಗಳ ಸಂಖ್ಯೆ 57 ಸಾವಿರಕ್ಕೂ ಹೆಚ್ಚಿದೆ. ಇದು ಭಾರತದ ಯುವಕರು ತನ್ನ ದೇಶದ ಸವಾಲುಗಳನ್ನು ಪರಿಹರಿಸಲು ಹೇಗೆ ಮುಂದೆ ಬಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಕಳೆದ 7 ಹ್ಯಾಕಥಾನ್‌ಗಳ ಅನೇಕ ಪರಿಹಾರಗಳು ಇಂದು ದೇಶದ ಜನರಿಗೆ ತುಂಬಾ ಉಪಯುಕ್ತವಾಗಿವೆ ಎಂದು ತಿಳಿಸಿದ ಪ್ರಧಾನಿ, ಹ್ಯಾಕಥಾನ್‌ಗಳು ಅನೇಕ ದೊಡ್ಡ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಿವೆ ಎಂದರಲ್ಲದೆ, 2022ರ ಹ್ಯಾಕಥಾನ್‌ ಉದಾಹರಣೆ ಉಲ್ಲೇಖಿಸಿದರು. ಯುವಕರು ಸೈಕ್ಲೋನ್‌ಗಳ ತೀವ್ರತೆ ಅಳೆಯುವ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದಾರೆ, ಅದನ್ನು ಈಗ ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ. ಒಂದು ತಂಡವು ವೀಡಿಯೊ ಜಿಯೋಟ್ಯಾಗ್ ಮಾಡುವ ಅಪ್ಲಿಕೇಶನ್ ರಚಿಸಿರುವ ಮತ್ತೊಂದು ಉದಾಹರಣೆಯನ್ನು ಪ್ರಧಾನಿ ಉಲ್ಲೇಖಿಸಿದರು. ಇದು ಡೇಟಾದ ಸುಲಭ ಸಂಗ್ರಹವನ್ನು ಖಚಿತಪಡಿಸುತ್ತದೆ, ಅದನ್ನು ಈಗ ಬಾಹ್ಯಾಕಾಶ-ಸಂಬಂಧಿತ ಸಂಶೋಧನೆಯಲ್ಲಿ ಬಳಸಲಾಗುತ್ತಿದೆ. ಮತ್ತೊಂದು ತಂಡವು ನೈಜ-ಸಮಯದ ರಕ್ತ ನಿರ್ವಹಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಿದೆ, ಅದು ನೈಸರ್ಗಿಕ ವಿಕೋಪ ಸಮಯದಲ್ಲಿ ಅಲ್ಲಿರುವ ರಕ್ತನಿಧಿಗಳ ವಿವರಗಳನ್ನು ಒದಗಿಸುತ್ತದೆ, ಇದು ಇಂದು ಎನ್ ಡಿಆರ್ ಎಫ್ ನಂತಹ ಏಜೆನ್ಸಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಹ್ಯಾಕಥಾನ್‌ನ ಮತ್ತೊಂದು ಯಶಸ್ಸಿನ ಕಥೆಯನ್ನು ಉಲ್ಲೇಖಿಸಿದ ಮೋದಿ, ಕೆಲವು ವರ್ಷಗಳ ಹಿಂದೆ, ಮತ್ತೊಂದು ತಂಡವು ದಿವ್ಯಾಂಗ ಜನರಿಗಾಗಿ ಉತ್ಪನ್ನವನ್ನು ರಚಿಸಿದ್ದು, ಇದು ಅವರ ಜೀವನದಲ್ಲಿನ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಸಾಬೀತಾಗಿದೆ. ಇಲ್ಲಿಯವರೆಗೆ ಇಂತಹ ನೂರಾರು ಯಶಸ್ವಿ ಕೇಸ್ ಸ್ಟಡಿಗಳು ಹ್ಯಾಕಥಾನ್‌ನಲ್ಲಿ ಭಾಗವಹಿಸುವ ಯುವಕರಿಗೆ ಸ್ಫೂರ್ತಿಯಾಗಿವೆ. ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ದೇಶದ ಯುವಜನತೆ ಹೇಗೆ ದೇಶದ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಹ್ಯಾಕಥಾನ್‌ಗಳು ತೋರಿಸಿವೆ. ಇದು ದೇಶದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ದೇಶದ ಅಭಿವೃದ್ಧಿಗೆ ಮಾಲೀಕತ್ವದ ಭಾವನೆ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತವಾಗಲು ದೇಶವು ಸರಿಯಾದ ಹಾದಿಯಲ್ಲಿದೆ. ಯುವಕರು ಭಾರತದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಉತ್ಸಾಹ ಮತ್ತು ಬದ್ಧತೆ ಹೊಂದಿದ್ದಾರೆ ಎಂದು ಅವರು ಶ್ಲಾಘಿಸಿದರು.

ಇಂದಿನ ಕಾಲಘಟ್ಟದಲ್ಲಿ ದೇಶದ ಆಕಾಂಕ್ಷೆಗಳಲ್ಲಿರುವ ಪ್ರತಿಯೊಂದು ಸವಾಲಿನ ಬಗ್ಗೆಯೂ ಆಲೋಚಿಸುವ ಅಗತ್ಯವಿದೆ. ಪ್ರತಿಯೊಂದು ವಲಯದಲ್ಲಿಯೂ ನಮ್ಮ ಅಭ್ಯಾಸಗಳಲ್ಲಿ ಉದಾತ್ತ ಚಿಂತನೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಹ್ಯಾಕಥಾನ್‌ನ ವಿಶೇಷತೆಯನ್ನು ಎತ್ತಿ ಹಿಡಿದ ಪ್ರಧಾನಿ, ಅದರ ಪ್ರಕ್ರಿಯೆಯು ಉತ್ಪನ್ನದ ಜೊತೆಗೆ ಮುಖ್ಯವಾಗಿದೆ. ಕೇವಲ ಸರ್ಕಾರವೇ ದೇಶದ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳುತ್ತಿದ್ದ ಒಂದು ಕಾಲವಿತ್ತು. ಆದರೆ ಇಂದು ಇಂತಹ ಹ್ಯಾಕಥಾನ್‌ಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಾರ್ಗದರ್ಶಕರನ್ನು ಸಹ ಪರಿಹಾರಕ್ಕೆ ಸಂಪರ್ಕಿಸಲಾಗುತ್ತಿದೆ. ಇದು ಭಾರತದ ಹೊಸ ಆಡಳಿತ ಮಾದರಿಯಾಗಿದೆ ಮತ್ತು 'ಸಬ್ಕಾ ಪ್ರಯಾಸ್' ಈ ಮಾದರಿಯ ಜೀವ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ದೇಶದ ಮುಂದಿನ 25 ವರ್ಷಗಳ ಪೀಳಿಗೆಯು ಭಾರತದ ಅಮೃತ ಪೀಳಿಗೆಯಾಗಿದೆ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಜವಾಬ್ದಾರಿ ಯುವಜನರ ಮೇಲಿದೆ.  ಸರಿಯಾದ ಸಮಯದಲ್ಲಿ ಅಗತ್ಯವಿರುವ ಪ್ರತಿಯೊಂದು ಸಂಪನ್ಮೂಲವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರವು ವಿವಿಧ ವಯೋಮಾನದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ, ಮುಂದಿನ ಪೀಳಿಗೆಗಾಗಿ 10 ಸಾವಿರಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ತೆರೆಯಲಾಗಿದೆ. ಶಾಲೆಗಳಲ್ಲಿ ನಾವೀನ್ಯತೆಗಾಗಿ ದೇಶವು ಸಂಪನ್ಮೂಲಗಳನ್ನು ಪಡೆಯುತ್ತದೆ. ಈ ಪ್ರಯೋಗಾಲಯಗಳು ಈಗ ಹೊಸ ಪ್ರಯೋಗಗಳ ಕೇಂದ್ರವಾಗುತ್ತಿವೆ. ಒಂದು ಕೋಟಿಗೂ ಹೆಚ್ಚು ಮಕ್ಕಳಿಂದ ಸಂಶೋಧನೆ ನಡೆಯುತ್ತಿದೆ. 14 ಸಾವಿರಕ್ಕೂ ಹೆಚ್ಚಿನ ಪ್ರಧಾನಮಂತ್ರಿ ಶ್ರೀ ಶಾಲೆಗಳು 21ನೇ ಶತಮಾನದ ಕೌಶಲ್ಯಗಳ ಮೇಲೆ ಕಾರ್ಯ ನಿರ್ವಹಿಸುತ್ತಿವೆ, ವಿದ್ಯಾರ್ಥಿಗಳ ನವೀನ ಚಿಂತನೆಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರವು ಕಾಲೇಜು ಮಟ್ಟದಲ್ಲಿ ಇನ್ ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಿದೆ. ಸುಧಾರಿತ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಯೋಗಾಲಯಗಳನ್ನು ಪ್ರಾಯೋಗಿಕ ಕಲಿಕೆಗೆ ಬಳಸಲಾಗುತ್ತಿದೆ. ಜತೆಗೆ, ಯುವಕರ ಪ್ರಶ್ನೆಗಳನ್ನು ಪರಿಹರಿಸಲು ಜಿಜ್ಞಾಸಾ ವೇದಿಕೆ ರಚಿಸಲಾಗಿದೆ, ಅಲ್ಲಿ ಅವರು ನೇರವಾಗಿ ವಿಜ್ಞಾನಿಗಳನ್ನು ಸಂಪರ್ಕಿಸಲು ಮತ್ತು ಮಾತನಾಡಲು ಅವಕಾಶವಿದೆ.

 

ಇಂದು ತರಬೇತಿಯ ಹೊರತಾಗಿ ಯುವಕರಿಗೆ ಸ್ಟಾರ್ಟಪ್ ಇಂಡಿಯಾ ಅಭಿಯಾನದ ಮೂಲಕ ಆರ್ಥಿಕ ಸಹಾಯ ನೀಡಲಾಗುತ್ತಿದೆ, ತೆರಿಗೆ ವಿನಾಯಿತಿಯನ್ನೂ ನೀಡಲಾಗುತ್ತಿದೆ. ಅವರ ವ್ಯವಹಾರ ಸ್ಥಾಪಿಸಲು 20 ಲಕ್ಷ ರೂ.ವರೆಗಿನ ಮುದ್ರಾ ಸಾಲ ವ್ಯವಸ್ಥೆ ಮಾಡಲಾಗಿದೆ. ಹೊಸ ಕಂಪನಿಗಳಿಗಾಗಿ ದೇಶಾದ್ಯಂತ ತಂತ್ರಜ್ಞಾನ ಪಾರ್ಕ್‌ಗಳು ಮತ್ತು ಹೊಸ ಐಟಿ ಹಬ್‌ಗಳನ್ನು ನಿರ್ಮಿಸಲಾಗುತ್ತಿದೆ. ಜತೆಗೆ, ಸರ್ಕಾರವು 1 ಲಕ್ಷ ಕೋಟಿ ರೂಪಾಯಿ ಮೊತ್ತದ ಸಂಶೋಧನಾ ನಿಧಿ ಸ್ಥಾಪಿಸಿದೆ. ಯುವಕರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವಾಗ ಅವರ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ಸರ್ಕಾರ ಅವರ ಜತೆಗೆ ನಿಂತಿದೆ. ಹ್ಯಾಕಥಾನ್‌ಗಳು ಕೇವಲ ಔಪಚಾರಿಕ ಕಾರ್ಯಕ್ರಮವಾಗಿರದೆ, ನಮ್ಮ ಯುವಕರಿಗೆ ಹೊಸ ಅವಕಾಶಗಳನ್ನು ನೀಡುತ್ತಿದೆ, ಇದು ತಮ್ಮ ಜನಪರ ಆಡಳಿತದ ಮಾದರಿಯ ಭಾಗವಾಗಿ ಶಾಶ್ವತ ಸಂಸ್ಥೆಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಭಾರತವನ್ನು ಆರ್ಥಿಕ ಸೂಪರ್ ಪವರ್ ಆಗಿ ಇರಿಸಲು ಉದಯೋನ್ಮುಖ ವಲಯಗಳ ಮೇಲೆ ಗಮನ ಕೇಂದ್ರೀಕರಿಸುವ ಮಹತ್ವವಿದೆ. ಒಂದು ದಶಕದ ಹಿಂದೆ ಉತ್ತಮವಾಗಿ ಅಭಿವೃದ್ಧಿ ಹೊಂದದ ಡಿಜಿಟಲ್ ವಿಷಯ ರಚನೆ ಮತ್ತು ಗೇಮಿಂಗ್‌ನಂತಹ ಕ್ಷೇತ್ರಗಳು ಈಗ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಈ ವಲಯಗಳು ಹೊಸ ವೃತ್ತಿ ಮಾರ್ಗಗಳನ್ನು ತೆರೆಯುತ್ತಿವೆ, ಯುವಜನರಿಗೆ ಅನ್ವೇಷಿಸಲು ಮತ್ತು ಪ್ರಯೋಗ ಮಾಡಲು ಅವಕಾಶಗಳನ್ನು ನೀಡುತ್ತಿವೆ. ಸುಧಾರಣೆಗಳಿಂದ ಅಡೆತಡೆಗಳನ್ನು ನಿವಾರಿಸುವ ಮೂಲಕ ಸರ್ಕಾರವು ಯುವಕರ ಕುತೂಹಲ ಮತ್ತು ಕನ್ವಿಕ್ಷನ್ ಅನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ. ವಿಷಯ ಸೃಷ್ಟಿಕರ್ತರ ಪ್ರಯತ್ನಗಳು ಮತ್ತು ಸೃಜನಶೀಲತೆ ಗುರುತಿಸುವ ಉದ್ದೇಶದಿಂದ ಇತ್ತೀಚೆಗೆ ರಾಷ್ಟ್ರೀಯ ಸೃಷ್ಟಿಕರ್ತರ ಪ್ರಶಸ್ತಿಯನ್ನು ಉಲ್ಲೇಖಿಸಲಾಗಿದೆ. ಖೇಲೋ ಇಂಡಿಯಾದಂತಹ ಉಪಕ್ರಮಗಳೊಂದಿಗೆ ಕ್ರೀಡೆಯನ್ನು ಕಾರ್ಯಸಾಧ್ಯವಾದ ವೃತ್ತಿಜೀವನದ ಆಯ್ಕೆಯಾಗಿ ಉತ್ತೇಜಿಸುವ ಸರ್ಕಾರದ ಪ್ರಯತ್ನಗಳು ಮುಂದುವರಿದಿವೆ. ಟಾಪ್ಸ್ ಯೋಜನೆಯು ಕ್ರೀಡಾಪಟುಗಳಿಗೆ ಗ್ರಾಮ ಮಟ್ಟದ ಪಂದ್ಯಾವಳಿಗಳಿಂದ ಒಲಿಂಪಿಕ್ಸ್‌ವರೆಗೆ ಪ್ರಮುಖ ಸ್ಪರ್ಧೆಗಳಿಗೆ ಸಿದ್ಧರಾಗಲು ಸಹಾಯ ಮಾಡುತ್ತದೆ. ಇದಲ್ಲದೆ, ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ ಈಗಾಗಲೇ ಗೇಮಿಂಗ್ ಭರವಸೆಯ ವೃತ್ತಿ ಆಯ್ಕೆಯಾಗಿ ಹೊರಹೊಮ್ಮುವುದರೊಂದಿಗೆ ಪ್ರಭಾವ ಬೀರುತ್ತಿದೆ.

ಒಂದು ರಾಷ್ಟ್ರ-ಒಂದು ಚಂದಾದಾರಿಕೆ ಯೋಜನೆ ಪ್ರಾರಂಭಿಸುವ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಪ್ರಧಾನಿ ಎತ್ತಿ ಹಿಡಿದರು, ಇದು ಜಾಗತಿಕ ಪ್ರಶಂಸೆ ಗಳಿಸಿದೆ. ಈ ಉಪಕ್ರಮವು ಭಾರತದ ಯುವಕರು, ಸಂಶೋಧಕರು ಮತ್ತು ನವೋದ್ಯಮಿಗಳಿಗೆ ಅಂತಾರಾಷ್ಟ್ರೀಯ ನಿಯತಕಾಲಿಕಗಳಿಗೆ ಪ್ರವೇಶ ಒದಗಿಸುತ್ತದೆ, ಯಾವುದೇ ಯುವಕರು ಮೌಲ್ಯಯುತವಾದ ಮಾಹಿತಿಯಿಂದ ವಂಚಿತರಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಈ ಯೋಜನೆಯಡಿ, ಸರ್ಕಾರವು ಪ್ರತಿಷ್ಠಿತ ನಿಯತಕಾಲಿಕಗಳಿಗೆ ಚಂದಾದಾರರಾಗುತ್ತಿದೆ, ಜ್ಞಾನದ ವ್ಯಾಪಕ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ. ಹ್ಯಾಕಥಾನ್‌ಗಳಲ್ಲಿ ಭಾಗವಹಿಸುವವರಿಗೆ ಇದು ಪ್ರಯೋಜನ ತರುತ್ತದೆ. ವಿಶ್ವದ ಅತ್ಯುತ್ತಮ ಮನಸ್ಸುಗಳೊಂದಿಗೆ ಸ್ಪರ್ಧಿಸಲು ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವ ವಿಶಾಲ ಗುರಿ ಹೊಂದಿದೆ. ಸರ್ಕಾರದ ಧ್ಯೇಯೋದ್ದೇಶವು ಯುವಜನರ ದೃಷ್ಟಿಗೆ ಹೊಂದಿಕೆಯಾಗುತ್ತದೆ. ಅವರು ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಮೂಲಸೌಕರ್ಯವನ್ನು ಒದಗಿಸುತ್ತದೆ ಎಂದು ಖಚಿತಪಡಿಸಿದರು.

ಕುಟುಂಬ ಸದಸ್ಯರ ರಾಜಕೀಯ ಹಿನ್ನೆಲೆ ಇಲ್ಲದ 1 ಲಕ್ಷ ಯುವಕರನ್ನು ದೇಶದ ರಾಜಕೀಯದಲ್ಲಿ ತರುವ ತಮ್ಮ ಘೋಷಣೆ ಪುನರುಚ್ಚರಿಸಿದ ಶ್ರೀ ಮೋದಿ, ಇದು ಭಾರತದ ಭವಿಷ್ಯಕ್ಕಾಗಿ ಅನಿವಾರ್ಯವಾಗಿದೆ. ಈ ದಿಕ್ಕಿನಲ್ಲಿ ವಿಭಿನ್ನ ಮಾರ್ಗಗಳನ್ನು ರೂಪಿಸಲಾಗುತ್ತಿದೆ . 2025ರ ಜನವರಿಯಲ್ಲಿ "ವಿಕಸಿತ ಭಾರತ ಯುವ ನಾಯಕರ ಸಂವಾದ" ನಡೆಯಲಿದೆ ಎಂದು ಮೋದಿ ಘೋಷಿಸಿದರು, ಅಲ್ಲಿ ದೇಶಾದ್ಯಂತದ ಕೋಟಿಗಟ್ಟಲೆ ಯುವಕರು ಭಾಗವಹಿಸುತ್ತಾರೆ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ತಮ್ಮ ಆಲೋಚನೆ ಮತ್ತು ಪರಿಕಲ್ಪನೆಗಳನ್ನು ನೀಡುತ್ತಾರೆ. ಯುವಕರು ಮತ್ತು ಅವರ ಆಲೋಚನೆಗಳನ್ನು ಆಯ್ಕೆ ಮಾಡಲಾಗುವುದು. ಸ್ವಾಮಿ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ ಜನವರಿ 11-12ರಂದು ಹೊಸದಿಲ್ಲಿಯಲ್ಲಿ ಯುವ ನಾಯಕರ ಸಂವಾದ ಆಯೋಜಿಸಲಾಗುವುದು. ದೇಶ ಮತ್ತು ವಿದೇಶದ ಗಣ್ಯ ವ್ಯಕ್ತಿಗಳೊಂದಿಗೆ ತಾವೂ ಸಹ ಇದರಲ್ಲಿ ಭಾಗವಹಿಸುವುದಾಗಿ ಘೋಷಿಸಿದ ಮೋದಿ, ಎಸ್‌ಐಎಚ್‌ನೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಯುವಕರು "ವಿಕಸಿತ ಭಾರತ ಯುವ ನಾಯಕರ ಸಂವಾದ"ಕ್ಕೆ ಸೇರುವಂತೆ ಒತ್ತಾಯಿಸಿದರು. ಇದು ರಾಷ್ಟ್ರ ನಿರ್ಮಾಣಕ್ಕೆ ಸೇರಲು ಮತ್ತೊಂದು ಉತ್ತಮ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ ಭಾಗವಹಿಸುವವರಿಗೆ ಮುಂಬರುವ ಸಮಯ ಮತ್ತು ಅವಕಾಶವನ್ನು ಜವಾಬ್ದಾರಿಯುತಯಾಗಿ ನೋಡುವಂತೆ ಮೋದಿ ಪ್ರೋತ್ಸಾಹಿಸಿದರು. ಭಾರತದ ಸವಾಲುಗಳನ್ನು ಪರಿಹರಿಸುವುದು ಮಾತ್ರವಲ್ಲದೆ,  ಜಾಗತಿಕ ಸಮಸ್ಯೆಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ತಂಡಗಳನ್ನು ಒತ್ತಾಯಿಸಿದರು. ಮುಂದಿನ ಹ್ಯಾಕಥಾನ್‌ನಲ್ಲಿ ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸುವ ಉದಾಹರಣೆಗಳಿವೆ ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದರು. ರಾಷ್ಟ್ರದ ನಂಬಿಕೆಯೊಂದಿಗೆ ನಾವೀನ್ಯಕಾರರು ಮತ್ತು ಸಮಸ್ಯೆ ಪರಿಹಾರಕಾರರ ಸಾಮರ್ಥ್ಯಗಳಲ್ಲಿ ಹೆಮ್ಮೆ ಹೊಂದಿದ್ದೇನೆ. ಅವರಿಗೆ ಯಶಸ್ಸನ್ನು ಬಯಸುತ್ತೇನೆ ಮತ್ತು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಹಿನ್ನೆಲೆ

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್(ಎಸ್ಐಎಚ್)ನ 7ನೇ ಆವೃತ್ತಿಯು 2024 ಡಿಸೆಂಬರ್  11ರಂದು ರಾಷ್ಟ್ರವ್ಯಾಪಿ 51 ನೋಡಲ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಯಿತು. ಸಾಫ್ಟ್‌ವೇರ್ ಆವೃತ್ತಿಯು 36 ಗಂಟೆಗಳ ಕಾಲ ತಡೆರಹಿತವಾಗಿ ಸಾಗುತ್ತದೆ, ಆದರೆ ಹಾರ್ಡ್‌ವೇರ್ ಆವೃತ್ತಿಯು 2024 ಡಿಸೆಂಬರ್ 11ರಿಂದ 15ರವರೆಗೆ ಮುಂದುವರಿಯುತ್ತದೆ. ಹಿಂದಿನ ಆವೃತ್ತಿಗಳಂತೆ, ವಿದ್ಯಾರ್ಥಿ ತಂಡಗಳು ಸಚಿವಾಲಯಗಳು ಅಥವಾ ಇಲಾಖೆಗಳು ನೀಡಿದ ಸಮಸ್ಯೆ ಹೇಳಿಕೆಗಳ ಮೇಲೆ ಕೆಲಸ ಮಾಡುತ್ತವೆ. ಕೈಗಾರಿಕೆಗಳು ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ವಲಯಗಳಿಗೆ ಲಿಂಕ್ ಮಾಡಲಾದ ಯಾವುದೇ 17 ಥೀಮ್‌ಗಳ ವಿರುದ್ಧ ವಿದ್ಯಾರ್ಥಿ ನಾವೀನ್ಯತೆ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದು. ಈ ವಲಯಗಳೆಂದರೆ - ಆರೋಗ್ಯ ರಕ್ಷಣೆ, ಪೂರೈಕೆ ಸರಪಳಿ ಮತ್ತು ಲಾಜಿಸ್ಟಿಕ್ಸ್, ಸ್ಮಾರ್ಟ್ ತಂತ್ರಜ್ಞಾನಗಳು, ಪರಂಪರೆ ಮತ್ತು ಸಂಸ್ಕೃತಿ, ಸುಸ್ಥಿರತೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ನೀರು, ಕೃಷಿ ಮತ್ತು ಆಹಾರ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ವಿಪತ್ತು ನಿರ್ವಹಣೆ.

ಈ ವರ್ಷದ ಆವೃತ್ತಿಯ ಕೆಲವು ಆಸಕ್ತಿದಾಯಕ ಸಮಸ್ಯೆ ಹೇಳಿಕೆಗಳಲ್ಲಿ ಇಸ್ರೋ ಪ್ರಸ್ತುತಪಡಿಸಿದ 'ಚಂದ್ರನ ಮೇಲೆ ಗಾಢವಾದ ಪ್ರದೇಶಗಳ ಚಿತ್ರಗಳನ್ನು ಹೆಚ್ಚಿಸುವುದು', ಜಲಶಕ್ತಿ ಸಚಿವಾಲಯ ಪ್ರಸ್ತುತಪಡಿಸಿದ  'ಕೃತಕ ಬುದ್ಧಿಮತ್ತೆ, ಉಪಗ್ರಹ ಡೇಟಾ, ಐಒಟಿ ಮತ್ತು ಡೈನಾಮಿಕ್ ಮಾದರಿಗಳನ್ನು ಬಳಸಿಕೊಂಡು ನೈಜ-ಸಮಯದ ಗಂಗಾ ನೀರಿನ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಅಭಿವೃದ್ಧಿಪಡಿಸುವುದು', ಮತ್ತು ಆಯುಷ್ ಸಚಿವಾಲಯ ಪ್ರಸ್ತುತಪಡಿಸಿದ ಎಐನೊಂದಿಗೆ ಸಂಯೋಜಿಸಲ್ಪಟ್ಟ ಸ್ಮಾರ್ಟ್ ಯೋಗ ಮ್ಯಾಟ್ ಅಭಿವೃದ್ಧಿಪಡಿಸುವುದು ಆಗಿದೆ.

ಈ ವರ್ಷ 54 ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ಪಿಎಸ್‌ಯುಗಳು ಮತ್ತು ಕೈಗಾರಿಕೆಗಳಿಂದ 250ಕ್ಕೂ ಹೆಚ್ಚು ಸಮಸ್ಯೆ ಹೇಳಿಕೆಗಳನ್ನು ಸಲ್ಲಿಸಲಾಗಿದೆ. ಇನ್‌ಸ್ಟಿಟ್ಯೂಟ್ ಮಟ್ಟದ ಆಂತರಿಕ ಹ್ಯಾಕಥಾನ್‌ಗಳಲ್ಲಿ 150% ಹೆಚ್ಚಳ ದಾಖಲಾಗಿದೆ, ಎಸ್ಐಎಚ್ 2023ರಲ್ಲಿ ಇದ್ದ 900ರಿಂದ 2024ರಲ್ಲಿ ಸುಮಾರು 2,247ಕ್ಕೆ ಬೆಳೆಯುತ್ತಿದೆ, ಇದು ಇದುವರೆಗಿನ ಅತಿದೊಡ್ಡ ಆವೃತ್ತಿಯಾಗಿದೆ. ಸಂಸ್ಥೆ ಮಟ್ಟದಲ್ಲಿ ಎಸ್ಐಎಚ್ 2024ರಲ್ಲಿ 86,000ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ, ಸುಮಾರು 49,000 ವಿದ್ಯಾರ್ಥಿ ತಂಡಗಳನ್ನು(ಪ್ರತಿ ತಂಡ 6 ವಿದ್ಯಾರ್ಥಿಗಳು ಮತ್ತು 2 ಮಾರ್ಗದರ್ಶಕರನ್ನು ಒಳಗೊಂಡಿರುತ್ತದೆ) ರಾಷ್ಟ್ರೀಯ ಮಟ್ಟದ ಸುತ್ತಿಗೆ ಈ ಸಂಸ್ಥೆಗಳಿಂದ ಶಿಫಾರಸು ಮಾಡಲಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
On Puri’s Grand Road, a devotee’s submission

Media Coverage

On Puri’s Grand Road, a devotee’s submission
NM on the go

Nm on the go

Always be the first to hear from the PM. Get the App Now!
...
Prime Minister speaks with the Amir of Qatar
July 16, 2026
PM conveys heartfelt condolences on the passing of the Father Amir of Qatar
PM recalls the Father Amir’s visionary leadership and his contribution to strengthening India-Qatar relations
The two leaders reaffirm their resolve to carry forward the Father Amir’s legacy

Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.

Prime Minister conveyed his heartfelt condolences on the passing of H.H. Sheikh Hamad bin Khalifa Al Thani, the Father Amir of Qatar.

Recalling the Father Amir’s significant contributions as the chief architect of modern Qatar, Prime Minister paid tribute to his visionary leadership, and recalled his pivotal role in strengthening India-Qatar relations over the years as well as his deep affection for India and the Indian community in Qatar.

The Amir of Qatar thanked Prime Minister for his call and conveyed his appreciation for the words of support in this difficult hour.

The two leaders reaffirmed their resolve to carry forward the Father Amir’s legacy and further strengthen the India-Qatar Strategic Partnership and people-to-people ties.

They agreed to remain in close touch.