ಕುಶಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದೆಲ್ಲೆಡೆ ಇರುವ ಬೌದ್ಧ ಸಮಾಜದ ಭಕ್ತಿಗೆ ನೀಡಿರುವ ಗೌರವವಾಗಿದೆ: ಪ್ರಧಾನ ಮಂತ್ರಿ ಬಣ್ಣನೆ
“ಭಗವಾನ್ ಬುದ್ಧ ನಡೆದಾಡಿದ, ಆತನ ಗಾಢ ಪ್ರಭಾವವಿರುವ ಸ್ಥಳಗಳಿಗೆ ಉತ್ತಮ ಸಂಚಾರ ಸಂಪರ್ಕ ಅಭಿವೃದ್ಧಿಪಡಿಸಲು, ಬುದ್ಧನ ಅಪಾರ ಅನುಯಾಯಿಗಳು, ಭಕ್ತರಿಗೆ ಸಂಚಾರ ಸೌಲಭ್ಯ ಕಲ್ಪಿಸಲು ವಿಶೇಷ ಗಮನ ನೀಡಲಾಗಿದೆ”
“ಉಡಾನ್ ಯೋಜನೆ ಅಡಿ 900ಕ್ಕಿಂತ ಅಧಿಕ ಹೊಸ ವೈಮಾನಿಕ ಮಾರ್ಗಗಳ ಅಭಿವೃದ್ಧಿಗೆ ಅನುಮೋದನೆ, 350 ಮಾರ್ಗಗಳಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭ, 50ಕ್ಕಿಂತ ಅಧಿಕ ಹೊಸ ಏರ್ ಪೋರ್ಟ್ ಸೇವಾ ಕಾರ್ಯಾಚರಣೆ ಆರಂಭ”
“ಕುಶಿನಗರ್ ವಿಮಾನ ನಿಲ್ದಾಣಕ್ಕೆ ಮುನ್ನ ಉತ್ತರಪ್ರದೇಶದಲ್ಲಿ 8 ಹೊಸ ಏರ್ ಪೋರ್ಟ್ ಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಲಕ್ನೋ, ವಾರಾಣಸಿ ಮತ್ತು ಕುಶಿನಗರ್ ನಂತರ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿ. ಅಯೋಧ್ಯ, ಅಲಿಘರ್, ಅಝಾಮ್ ಘರ್, ಚಿತ್ರಕೂಟ್, ಮೊರದಾಬಾದ್ ಮತ್ತು ಶ್ರವಸ್ತಿ ಏರ್ ಪೋರ್ಟ್ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿ”
“ಏರ್ ಇಂಡಿಯಾ ಅಭಿವೃದ್ಧಿ ನಿರ್ಧಾರವು ಭಾರತದ ವೈಮಾನಿಕ ರಂಗಕ್ಕೆ ಹೊಸ ಶಕ್ತಿ ನೀಡಲಿದೆ”
“ಇತ್ತೀಚೆಗೆ ಅನಾವರಣಗೊಳಿಸಿದ ಡ್ರೋನ್ ನೀತಿಯಿಂದಾಗಿ ಕೃಷಿಯಿಂದ ಆರೋಗ್ಯ ವಲಯದವರೆಗೆ, ವಿಕೋಪಗಳ ನಿರ್ವಹಣೆಯಿಂದ ರಕ್ಷಣಾ ಕ್ಷೇತ್ರದವರೆಗೆ ಜೀವನ ಬದಲಾವಣೆಯ ಪರಿವರ್ತನೆಗಳು ಆಗಲಿವೆ”

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರ ಪ್ರದೇಶದ ಕುಶಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಡೀ ವಿಶ್ವದ ಬೌದ್ಧ ಸಮಾಜದ ಭಕ್ತಿಯ ಕೇಂದ್ರ ಬಿಂದುವಾಗಿ ಭಾರತ ಹೊರಹೊಮ್ಮಿದೆ. ಇಂದು ಲೋಕಾರ್ಪಣೆ ಮಾಡಿರುವ ಕುಶಿನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೌಲಭ್ಯವು ವಿಶ್ವಾದ್ಯಂತ ನೆಲೆಸಿರುವ ಬೌದ್ಧ ಸಮಾಜದ ಭಕ್ತಿಗೆ ನೀಡಿರುವ ಉನ್ನತ ಗೌರವವಾಗಿದೆ. ಜ್ಞಾನೋದಯ(ಮನ ಪರಿವರ್ತನೆ)ದಿಂದ ಹಿಡಿದು ಮಹಾಪರಿನಿರ್ವಾಣದವರೆಗೆ ಈ ನೆಲ ಭಗವಾನ್ ಬುದ್ಧನ  ಕರ್ಮಭೂಮಿಯಾಗಿದೆ. ಅತ್ಯಂತ ಮಹತ್ವಪೂರ್ಣವಾದ ಈ ಪ್ರದೇಶವು ಇಂದು ಇಡೀ ವಿಶ್ವಕ್ಕೆ ನೇರ ವೈಮಾನಿಕ ಸಂಪರ್ಕ ಕಲ್ಪಿಸುತ್ತಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಭಗವಾನ್ ಬುದ್ಧ ಹೆಜ್ಜೆ ತುಳಿದ, ಆತನ ಗಾಢ ಪ್ರಭಾವವಿರುವ ಎಲ್ಲ ಸ್ಥಳಗಳಲ್ಲಿ ಉತ್ತಮ ಸಂಪರ್ಕ ಸೌಲಭ್ಯ ಅಭಿವೃದ್ಧಿಪಡಿಸಲು ಮತ್ತು ಬುದ್ಧನ ಭಕ್ತರು ಮತ್ತು ಅನುಯಾಯಿಗಳಿಗೆ ಉತ್ತಮ ಸಂಪರ್ಕ ಸೌಲಭ್ಯ ಸೃಜಿಸಲು ಕೇಂದ್ರ ಸರ್ಕಾರ ವಿಶೇಷ ಗಮನ ನೀಡಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಕುಶಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶ್ರೀಲಂಕಾದ ವಿಮಾನ ಮತ್ತು ನಿಯೋಗವನ್ನು ಅವರು ಸ್ವಾಗತಿಸಿದರು. ಮಹರ್ಷಿ ವಾಲ್ಮೀಖಿ ಜಯಂತಿ ಅಂಗವಾಗಿ ಮಹಾಕವಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ, ದೇಶವು ಸಬ್ಕಾ ಸಾಥ್ ಮತ್ತು ಸಬ್ಕಾ ಪ್ರಯಾಸ್ ನೆರವಿನೊಂದಿಗೆ ಸಬ್ಕಾ ವಿಕಾಸ್ ರಾಜಮಾರ್ಗ(ಪಥ)ದಲ್ಲಿ ಮುನ್ನಡೆಯುತ್ತಿದೆ ಎಂದರು. “ಕುಶಿನಗರದ ಅಭಿವೃದ್ಧಿಯು ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ” ಎಂದು ತಿಳಿಸಿದರು.

ಧರ್ಮವೇ ಇರಲಿ, ಮನರಂಜನೆಯೇ ಇರಲಿ, ವಿರಾಮವೇ ಇರಲಿ, ಪ್ರವಾಸೋದ್ಯಮದ ಎಲ್ಲಾ ಆಯಾಮಗಳಿಗೆ ಆಧುನಿಕ ಮೂಲಸೌಕರ್ಯ ಅಗತ್ಯ. ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಪರಿಸರ ಖಾತ್ರಿಪಡಿಸಬೇಕಾದರೆ ರೈಲು ಮಾರ್ಗ, ರಸ್ತೆ, ವೈಮಾನಿಕ ಮಾರ್ಗ, ಜಲಮಾರ್ಗ, ಹೋಟೆಲ್ ಗಳು, ಆಸ್ಪತ್ರೆಗಳು, ಅಂತರ್ಜಾಲ ಸಂಪರ್ಕ, ಸ್ವಚ್ಛತೆ, ಒಳಚರಂಡಿ ಸಂಸ್ಕರಣೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸಬೇಕು. “ಇವೆಲ್ಲವುಗಳಿಗೆ ಅಂತರ್ ಸಂಪರ್ಕ ಕಲ್ಪಿಸಬೇಕು. ಈ ಎಲ್ಲಾ ಕೆಲಸಗಳನ್ನು ಏಕಕಾಲದಲ್ಲಿ ಮಾಡಬೇಕು. 21ನೇ ಶತಮಾನದಲ್ಲಿ ಭಾರತವು ಇದೇ ಕಾರ್ಯ ವಿಧಾನದಲ್ಲಿ ಮುನ್ನಡೆಯುತ್ತಿದೆ” ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಮಹತ್ವಾಕಾಂಕ್ಷಿ ಉಡಾನ್ ಯೋಜನೆ ಅಡಿ, ಕಳೆದ ಕೆಲವೇ ವರ್ಷಗಳಲ್ಲಿ 900ಕ್ಕಿಂತ ಹೆಚ್ಚಿನ ಹೊಸ ವೈಮಾನಿಕ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅವುಗಳ ಪೈಕಿ, 350ಕ್ಕಿಂತ ಹೆಚ್ಚಿನ ಮಾರ್ಗಗಳಲ್ಲಿ ಈಗಾಗಲೇ ವೈಮಾನಿಕ ಕಾರ್ಯಾಚರಣೆ ಆರಂಭವಾಗಿದೆ. ಈ ಮುನ್ನ ವೈಮಾನಿಕ ಸಂಚಾರವೇ ಇಲ್ಲದಿದ್ದ ಕಡೆ 50ಕ್ಕಿಂತ ಹೆಚ್ಚಿನ ಏರ್ ಪೋರ್ಟ್ ಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಪ್ರಧಾನ ಮಂತ್ರಿ ವಿವರ ನೀಡಿದರು.

ಉತ್ತರ ಪ್ರದೇಶದ ವೈಮಾನಿಕ ರಂಗದ ಅಭಿವೃದ್ಧಿ ಕುರಿತು ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ, ರಾಜ್ಯದಲ್ಲಿ ವೈಮಾನಿಕ ಸಂಪರ್ಕ ಸ್ಥಿರವಾಗಿ ಸುಧಾರಣೆ ಕಾಣುತ್ತಿದೆ. ಕುಶಿನಗರ್ ಏರ್ ಪೋರ್ಟ್ ಗಿಂತ ಮುನ್ನವೇ ಉತ್ತರಪ್ರದೇಶದಲ್ಲಿ 8 ವಿಮಾನ ನಿಲ್ದಾಣಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಲಕ್ನೋ, ವಾರಾಣಸಿ ಮತ್ತು ಕುಶಿನಗರ್ ವಿಮಾನ ನಿಲ್ದಾಣಗಳ ನಂತರ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದೆ. ಅದಲ್ಲದೆ, ಅಯೋಧ್ಯ, ಅಲಿಘರ್, ಅಝಾಮ್ ಘರ್, ಚಿತ್ರಕೂಟ, ಮೊರದಾಬಾದ್ ಮತ್ತು ಶ್ರವಸ್ತಿ ಏರ್ ಪೋರ್ಟ್ ಯೋಜನೆಗಳ ಕಾಮಗಾರಿಗಳು ಸಹ ನಡೆಯುತ್ತಿವೆ ಎಂದು ನರೇಂದ್ರ ಮೋದಿ ತಿಳಿಸಿದರು.

ಏರ್ ಇಡಿಯಾ ಅಭಿವೃದ್ಧಿಗೆ ಕೇಂದ್ರ ಸರಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಈ ಕ್ರಮದಿಂದ ದೇಶದ ವೈಮಾನಿಕ ಕ್ಷೇತ್ರವನ್ನು ವೃತ್ತಿಪರವಾಗಿ ನಡೆಸಲು, ಅನುಕೂಲಗಳು ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ಸಹಾಯಕವಾಗಲಿದೆ ಎಂದರು. “ಕೇಂದ್ರದ ನಿರ್ಧಾರವು  ಭಾರತದ ವೈಮಾನಿಕ ರಂಗಕ್ಕೆ ಹೊಸ ಶಕ್ತಿ ನೀಡಲಿದೆ. ರಕ್ಷಣಾ ಕ್ಷೇತ್ರದ ವೈಮಾನಿಕ ನೆಲೆಯನ್ನು ನಾಗರಿಕ ಬಳಕೆಗಾಗಿ ಮುಕ್ತಗೊಳಿಸಿರುವುದು ಪ್ರಮುಖ ಸುಧಾರಣಾ ಕ್ರಮಗಳಲ್ಲಿ ಒಂದಾಗಿದೆ” ಎಂದು ನರೇಂದ್ರ ಮೋದಿ ತಿಳಿಸಿದರು. ಈ ಸುಧಾರಣಾ ಕ್ರಮದಿಂದ ಹಲವಾರು ವೈಮಾನಿಕ ಮಾರ್ಗಗಳ ಅಂತರ ತಗ್ಗಲಿದೆ. ಇತ್ತೀಚೆಗೆ ಪ್ರಕಟಿಸಿದ ಡ್ರೋನ್ ನೀತಿಯು ಕೃಷಿಯಿಂದ ಆರೋಗ್ಯ ರಂಗದವರೆಗೆ, ವಿಪತ್ತುಗಳ ನಿರ್ವಹಣೆಯಿಂದ ಹಿಡಿದು ರಕ್ಷಣಾ  ಕ್ಷೇತ್ರದವರೆಗೆ ಜೀವನ ಬದಲಾವಣೆಯ ಪರಿವರ್ತನೆಗಳನ್ನು ತರಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಇತೀಚೆಗೆ ಅನಾವರಣಗೊಳಿಸಿದ ಪ್ರಧಾನ ಮಂತ್ರಿ ಗತಿಶಕ್ತಿ –ರಾಷ್ಟ್ರೀಯ ಸಮಗ್ರ ಯೋಜನೆ(ಮಾಸ್ಟರ್ ಪ್ಲಾನ್)ಯು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಜತೆಗೆ, ರೈಲು, ವಿಮಾನ, ರಸ್ತೆ ಮಾರ್ಗ ಸೇರಿದಂತೆ ಎಲ್ಲ ರೂಪದ ಸಾರಿಗೆ ವ್ಯವಸ್ಥೆಗಳು ಪರಸ್ಪರ ಬೆಂಬಲ ನೀಡುವುದನ್ನು ಖಾತ್ರಿಪಡಿಸುವ ಜತೆಗೆ, ಅವುಗಳ ಸೇವಾ ಸಾಮರ್ಥ್ಯ ಹೆಚ್ಚಳವನ್ನು ಖಚಿತಪಡಿಸಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
One of the world’s first canal-top solar projects placed a 750-meter solar array above an Indian irrigation canal, generating clean power while saving an estimated 9 million liters of water each year

Media Coverage

One of the world’s first canal-top solar projects placed a 750-meter solar array above an Indian irrigation canal, generating clean power while saving an estimated 9 million liters of water each year
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಜುಲೈ 2026
July 17, 2026

Green Trains, Private Rockets & Global Partnerships — PM Modi’s New India is Playing to Win