ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳಲ್ಲಿ ಮುಂಬರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್ ಥ್ರೋ ಉದ್ಘಾಟನೆ
ಅಂತಾರಾಷ್ಟ್ರೀಯ ಮ್ಯೂಸಿಯಂ ಎಕ್ಸ್ ಪೋದ ಲಾಂಛನ, ವಸ್ತುಸಂಗ್ರಹಾಲಯದಲ್ಲಿ ಒಂದು ದಿನ- ಗ್ರಾಫಿಕ್ ಕಾದಂಬರಿ, ಭಾರತೀಯ ವಸ್ತುಸಂಗ್ರಹಾಲಯಗಳ ಡೈರೆಕ್ಟರಿ, ಕರ್ತವ್ಯ ಪಥದ ಪಾಕೆಟ್ ನಕ್ಷೆ ಮತ್ತು ಮ್ಯೂಸಿಯಂ ಕಾರ್ಡ್ ಗಳ ಅನಾವರಣ
"ವಸ್ತುಸಂಗ್ರಹಾಲಯವು ಭೂತಕಾಲದಿಂದ ಸ್ಫೂರ್ತಿಯನ್ನು ಪಡೆದು, ಭವಿಷ್ಯದ ಬಗ್ಗೆ ಕರ್ತವ್ಯದ ಪ್ರಜ್ಞೆಯನ್ನು ನೀಡುತ್ತದೆ"
"ದೇಶದಲ್ಲಿ ಹೊಸ ಸಾಂಸ್ಕೃತಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ"
"ಪ್ರತಿ ರಾಜ್ಯ ಮತ್ತು ಸಮಾಜದ ಪ್ರತಿಯೊಂದು ವರ್ಗದ ಪರಂಪರೆಯೊಂದಿಗೆ ಸ್ಥಳೀಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯಗಳನ್ನು ಸಂರಕ್ಷಿಸಲು ಸರ್ಕಾರದಿಂದ ವಿಶೇಷ ಅಭಿಯಾನ"
"ತಲೆಮಾರುಗಳಿಂದ ಸಂರಕ್ಷಿಸಲಾದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ಈಗ ಪ್ರಪಂಚದಾದ್ಯಂತ ಭಗವಾನ್ ಬುದ್ಧನ ಅನುಯಾಯಿಗಳನ್ನು ಒಗ್ಗೂಡಿಸುತ್ತಿವೆ"
"ನಮ್ಮ ಪರಂಪರೆಯು ವಿಶ್ವ ಏಕತೆಯ ಮುನ್ನುಡಿಯಾಗಬಹುದು"
"ಐತಿಹಾಸಿಕ ಮಹತ್ವದ ವಿಷಯಗಳನ್ನು ಸಂರಕ್ಷಿಸುವ ಮನಃಸ್ಥಿತಿಯನ್ನು ಸಮಾಜದಲ್ಲಿ ಮೂಡಿಸಬೇಕು"
"ಕುಟುಂಬಗಳು, ಶಾಲೆಗಳು, ಸಂಸ್ಥೆಗಳು ಮತ್ತು ನಗರಗಳು ತಮ್ಮದೇ ಆದ ವಸ್ತುಸಂಗ್ರಹಾಲಯಗಳನ್ನು ಹೊಂದಿರಬೇಕು"
ಇಂದಿನ ಪ್ರಯತ್ನಗಳು ಯುವ ಪೀಳಿಗೆಗೆ ತಮ್ಮ ಪರಂಪರೆಯ ಬಗ್ಗೆ ಹೆಚ್ಚು ಪರಿಚಯ ಮಾಡಿಕೊಡುತ್ತವೆ ಎಂಬ ಭರವಸೆಯನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ದೇಶದ ಎಲ್ಲ ಮಾಜಿ ಪ್ರಧಾನಮಂತ್ರಿಗಳ ಆಡಳಿತಾವಧಿ ಮತ್ತು ಕೊಡುಗೆಗಳಿಗೆ ಸಮರ್ಪಿತವಾದ ಪ್ರಧಾನಮಂತ್ರಿ ಸಂಗ್ರಾಹಾಲಯದ ಬಗ್ಗೆಯೂ ಅವರು ಉಲ್ಲೇಖಿಸಿದರು ಮತ್ತು ಈ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡುವಂತೆ ಅತಿಥಿಗಳನ್ನು ವಿನಂತಿಸಿದರು.
ಶ್ರೀ ಅನ್ನ ಮತ್ತು ಇತರ ಧಾನ್ಯಗಳ ಪಯಣದ ಕುರಿತು ಕೂಡ ಹೊಸ ವಸ್ತುಸಂಗ್ರಹಾಲಯಗಳನ್ನು ರೂಪಿಸಬಹುದು ಎಂದು ಅವರು ಸಲಹೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋ 2023 ಅನ್ನು ಉದ್ಘಾಟಿಸಿದರು. ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳಲ್ಲಿ ಮುಂಬರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್ ಥ್ರೋವನ್ನು ಅವರು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಟೆಕ್ನೋ ಮೇಳ, ಸಂರಕ್ಷಣಾ ಪ್ರಯೋಗಾಲಯ ಮತ್ತು ವಸ್ತುಪ್ರದರ್ಶನಗಳಲ್ಲಿ ವಾಕ್ ಥ್ರೂ ನಡೆಸಿದರು. 'ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ' ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ 47 ನೇ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋವನ್ನು ಆಯೋಜಿಸಲಾಗಿದೆ.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೆ, ಅಂತಾರಾಷ್ಟ್ರೀಯ ಮ್ಯೂಸಿಯಂ ಎಕ್ಸ್ ಪೋ ಸಂದರ್ಭದಲ್ಲಿ ತಂತ್ರಜ್ಞಾನದ ಸೇರ್ಪಡೆಯೊಂದಿಗೆ ಇತಿಹಾಸದ ವಿವಿಧ ಅಧ್ಯಾಯಗಳು ಜೀವಂತವಾಗುತ್ತಿವೆ ಎಂದರು. ನಾವು ವಸ್ತುಸಂಗ್ರಹಾಲಯವನ್ನು ಪ್ರವೇಶಿಸಿದಾಗ ನಾವು ಭೂತಕಾಲದೊಂದಿಗೆ ತೊಡಗಿಕೊಳ್ಳುತ್ತೇವೆ ಮತ್ತು ವಸ್ತುಸಂಗ್ರಹಾಲಯವು ಸತ್ಯ ಮತ್ತು ಪುರಾವೆ ಆಧಾರಿತ ವಾಸ್ತವತೆಯನ್ನು ಪ್ರಸ್ತುತಪಡಿಸುತ್ತದೆ ಮತ್ತು ಇದು ಭೂತಕಾಲದಿಂದ ಸ್ಫೂರ್ತಿ ಪಡೆದು ಮತ್ತು ಭವಿಷ್ಯದ ಬಗ್ಗೆ ಕರ್ತವ್ಯದ ಪ್ರಜ್ಞೆಯನ್ನು ನೀಡುತ್ತದೆ ಎಂದು ಅವರು ಹೇಳಿದರು. ಇಂದಿನ ಧ್ಯೇಯವಾಕ್ಯ 'ಸುಸ್ಥಿರತೆ ಮತ್ತು ಯೋಗಕ್ಷೇಮ' ಇಂದಿನ ವಿಶ್ವದ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ಈ ಕಾರ್ಯಕ್ರಮವನ್ನು ಇನ್ನಷ್ಟು ಪ್ರಸ್ತುತಗೊಳಿಸುತ್ತದೆ ಎಂದು ಅವರು ಹೇಳಿದರು.   ಇಂದಿನ ಪ್ರಯತ್ನಗಳು ಯುವ ಪೀಳಿಗೆಗೆ ತಮ್ಮ ಪರಂಪರೆಯ ಬಗ್ಗೆ ಹೆಚ್ಚು ಪರಿಚಯ ಮಾಡಿಕೊಡುತ್ತವೆ ಎಂಬ ಭರವಸೆಯನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.

ಇಂದಿನ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸುವ ಮುನ್ನ ಮ್ಯೂಸಿಯಂಗೆ ತಾವು ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಮ್ಯೂಸಿಯಂಗೆ  ಭೇಟಿ ನೀಡುವವರ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರಲು ನೆರವಾದ ಯೋಜನೆ ಮತ್ತು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ಶ್ಲಾಘಿಸಿದರು. ಇಂದಿನ ಸಂದರ್ಭವು ಭಾರತದ ವಸ್ತುಸಂಗ್ರಹಾಲಯಗಳ ಜಗತ್ತಿಗೆ ಒಂದು ದೊಡ್ಡ ತಿರುವು ನೀಡಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.

 

ಗುಲಾಮಗಿರಿಯ ಅವಧಿಯಲ್ಲಿ ಈ ನೆಲದ ಹೆಚ್ಚಿನ ಪರಂಪರೆ ಅಳಿಯಿತು ಎಂದು ಒತ್ತಿ ಹೇಳಿದ ಅವರು, ನೂರಾರು ವರ್ಷಗಳಿಂದ ಕಾಪಿಟ್ಟ ಪ್ರಾಚೀನ ಹಸ್ತಪ್ರತಿಗಳು ಮತ್ತು ಗ್ರಂಥಾಲಯಗಳು ಸುಟ್ಟುಹೋದವು ಎಂದು ಪ್ರಧಾನಮಂತ್ರಿ ತಿಳಿಸಿದರು. ಇದು ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಪರಂಪರೆಗೆ ಆದ ನಷ್ಟವಾಗಿದೆ ಎಂದು ಒತ್ತಿ ಹೇಳಿದರು. ನಾಗರಿಕರಲ್ಲಿನ ಅರಿವಿನ ಕೊರತೆಯು ಇನ್ನೂ ದೊಡ್ಡ ಪರಿಣಾಮವನ್ನು ಉಂಟುಮಾಡಿದ್ದು, ನೆಲದಲ್ಲಿ ದೀರ್ಘಕಾಲದಿಂದ ಕಳೆದುಹೋದ ಪರಂಪರೆಯನ್ನು ಪುನರುಜ್ಜೀವಗೊಳಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ನಂತರದ ಪ್ರಯತ್ನಗಳ ಕೊರತೆ ಕುರಿತು ಅವರು ವಿಷಾದಿಸಿದರು. ಆಜಾದಿ ಕಾ ಅಮೃತ್ ಕಾಲದ ಸಂದರ್ಭದಲ್ಲಿ ದೇಶವು ಕೈಗೊಂಡ 'ಪಂಚ ಪ್ರಾಣ್' ಅಥವಾ ಐದು ನಿರ್ಣಯಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, 'ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತ' ಮತ್ತು ದೇಶದ ಹೊಸ ಸಾಂಸ್ಕೃತಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಒತ್ತಿ ಹೇಳಿದರು. ಈ ಪ್ರಯತ್ನಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ದೇಶದ ಸಾವಿರ ವರ್ಷಗಳ ಪರಂಪರೆಯನ್ನು ಕಾಣಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿ ರಾಜ್ಯ ಮತ್ತು ಸಮಾಜದ ವರ್ಗದ ಪರಂಪರೆಯೊಂದಿಗೆ ಸ್ಥಳೀಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯಗಳನ್ನು ಸಂರಕ್ಷಿಸಲು ಸರ್ಕಾರ ವಿಶೇಷ ಅಭಿಯಾನವನ್ನು ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಅಮರಗೊಳಿಸಲು ಹತ್ತು ವಿಶೇಷ ವಸ್ತುಸಂಗ್ರಹಾಲಯಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು, ಇದು ಬುಡಕಟ್ಟು ವೈವಿಧ್ಯದ ನೋಟವನ್ನು ಒದಗಿಸುವ ವಿಶ್ವದ ಅತ್ಯಂತ ವಿಶಿಷ್ಟ ಉಪಕ್ರಮಗಳಲ್ಲಿ ಒಂದಾಗಿದೆ ಎಂದರು. ಈ ನೆಲದ ಪರಂಪರೆಯನ್ನು ಸಂರಕ್ಷಿಸುವ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಯಾತ್ರೆ ನಡೆಸಿದ ದಾಂಡಿ ಮಾರ್ಗ ಮತ್ತು ಉಪ್ಪಿನ ಕಾನೂನನ್ನು ಉಲ್ಲಂಘಿಸಿದ ಸ್ಥಳದಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಉಲ್ಲೇಖಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಸ್ಥಳವನ್ನು ದೆಹಲಿಯ ನಂ.5 ಅಲಿಪೋರ್ ರಸ್ತೆಯಲ್ಲಿ ರಾಷ್ಟ್ರೀಯ ಸ್ಮಾರಕವಾಗಿ ಪುನರಭಿವೃದ್ಧಿ ಮಾಡುವುದರ ಜೊತೆಗೆ ಅವರು ಜನಿಸಿದ ಮೋವ್, ಅವರು ವಾಸಿಸಿದ್ದ ಲಂಡನ್, ಅವರು ದೀಕ್ಷೆ ಪಡೆದ ನಾಗ್ಪುರ ಮತ್ತು ಇಂದು ಅವರ ಸಮಾಧಿ ಇರುವ ಮುಂಬೈನ ಚೈತ್ಯ ಭೂಮಿ ಸೇರಿದಂತೆ ಅವರ ಜೀವನಕ್ಕೆ ಸಂಬಂಧಿಸಿದ ಪಂಚ ತೀರ್ಥಗಳ ಅಭಿವೃದ್ಧಿ ಕುರಿತು ಅವರು ಉಲ್ಲೇಖಿಸಿದರು. ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆ, ಪಂಜಾಬ್ ನ ಜಲಿಯನ್ ವಾಲಾಬಾಗ್ ನಲ್ಲಿರುವ ವಸ್ತುಸಂಗ್ರಹಾಲಯ, ಗುಜರಾತ್ ನ ಗೋವಿಂದ್ ಗುರುಜಿ ಅವರ ಸ್ಮಾರಕ, ವಾರಾಣಸಿಯ ಮನ್ ಮಹಲ್ ವಸ್ತುಸಂಗ್ರಹಾಲಯ ಮತ್ತು ಗೋವಾದ ಕ್ರಿಶ್ಚಿಯನ್ ಆರ್ಟ್ ಮ್ಯೂಸಿಯಂನ ಉದಾಹರಣೆಗಳನ್ನು ಅವರು ನೀಡಿದರು. ದೆಹಲಿಯಲ್ಲಿ ದೇಶದ ಎಲ್ಲ ಮಾಜಿ ಪ್ರಧಾನಮಂತ್ರಿಗಳ ಆಡಳಿತಾವಧಿ ಮತ್ತು ಕೊಡುಗೆಗಳಿಗೆ ಸಮರ್ಪಿತವಾದ ಪ್ರಧಾನಮಂತ್ರಿ ಸಂಗ್ರಾಹಾಲಯದ ಬಗ್ಗೆಯೂ ಅವರು ಉಲ್ಲೇಖಿಸಿದರು ಮತ್ತು ಈ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡುವಂತೆ ಅತಿಥಿಗಳನ್ನು ವಿನಂತಿಸಿದರು.

 

ಒಂದು ದೇಶವು ತನ್ನ ಪರಂಪರೆಯನ್ನು ಸಂರಕ್ಷಿಸಲು ಪ್ರಾರಂಭಿಸಿದಾಗ ಅದು ಇತರ ದೇಶಗಳೊಂದಿಗೆ ನಿಕಟತೆಗೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ತಲೆಮಾರುಗಳಿಂದ ಸಂರಕ್ಷಿಸಲಾದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಉದಾಹರಣೆಗಳನ್ನು ನೀಡಿದ ಅವರು, ಈಗ ವಿಶ್ವದಾದ್ಯಂತ ಭಗವಾನ್ ಬುದ್ಧನ ಅನುಯಾಯಿಗಳನ್ನು ಇದು ಒಗ್ಗೂಡಿಸುತ್ತಿದೆ ಎಂದರು.  ಕಳೆದ ಬುದ್ಧ ಪೂರ್ಣಿಮೆಯಂದು ಮಂಗೋಲಿಯಾಕ್ಕೆ ನಾಲ್ಕು ಪವಿತ್ರ ಅವಶೇಷಗಳನ್ನು ಕಳುಹಿಸಿದ್ದನ್ನು, ಶ್ರೀಲಂಕಾದಿಂದ ಕುಶಿನಗರಕ್ಕೆ ಪವಿತ್ರ ಅವಶೇಷಗಳು ಆಗಮಿಸಿದ್ದನ್ನು ಅವರು ಉಲ್ಲೇಖಿಸಿದರು. ಅಂತೆಯೇ, ಗೋವಾದ ಸೇಂಟ್ ಕೆಟೆವನ್ ಅವರ ಪರಂಪರೆ ಭಾರತದೊಂದಿಗೆ ಸುರಕ್ಷಿತವಾಗಿದೆ ಮತ್ತು ಅವಶೇಷಗಳನ್ನು ಅಲ್ಲಿಗೆ ಕಳುಹಿಸಿದಾಗ ಜಾರ್ಜಿಯಾದಲ್ಲಿನ ಉತ್ಸಾಹವನ್ನು ಸ್ಮರಿಸಿದರು. "ನಮ್ಮ ಪರಂಪರೆಯು ವಿಶ್ವ ಏಕತೆಗೆ ಮುನ್ನುಡಿಯಾಗಿದೆ" ಎಂದು ಅವರು ಹೇಳಿದರು.


ಮುಂದಿನ ಪೀಳಿಗೆಗಾಗಿ ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ವಸ್ತುಸಂಗ್ರಹಾಲಯಗಳು ಸಕ್ರಿಯವಾಗಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ವಸ್ತುಸಂಗ್ರಹಾಲಯಗಳು ಭೂಮಿಯು ಎದುರಿಸಿದ ಅನೇಕ ವಿಪತ್ತುಗಳ ಕುರುಹುಗಳನ್ನು ಸಂರಕ್ಷಿಸಬಹುದು ಮತ್ತು ಪ್ರಸ್ತುತಪಡಿಸಬಹುದು ಮತ್ತು ಭೂಮಿಯ ಬದಲಾಗುತ್ತಿರುವ ಮುಖದ ಪರಿಚಯವನ್ನು ಸಹ ಮಾಡಿಸಬಹುದು ಎಂದು ಅವರು ಸಲಹೆ ನೀಡಿದರು.

 

ಎಕ್ಸ್ ಪೋದ ಗ್ಯಾಸ್ಟ್ರೋನಮಿಕ್ ವಿಭಾಗದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತದ ಪ್ರಯತ್ನಗಳಿಂದಾಗಿ ಆಯುರ್ವೇದ ಮತ್ತು ಶ್ರೀ ಅನ್ನ ಸಿರಿಧಾನ್ಯಗಳ ಬೆಳೆಯುತ್ತಿರುವ ಅಸ್ಮಿತೆಯ ಬಗ್ಗೆ ಮಾತನಾಡಿದರು. ಶ್ರೀ ಅನ್ನ ಮತ್ತು ಇತರ ಧಾನ್ಯಗಳ ಪಯಣದ ಕುರಿತು ಕೂಡ ಹೊಸ ವಸ್ತುಸಂಗ್ರಹಾಲಯಗಳನ್ನು ರೂಪಿಸಬಹುದು ಎಂದು ಅವರು ಸಲಹೆ ನೀಡಿದರು.


ಐತಿಹಾಸಿಕ ಮಹತ್ವದ ವಿಷಯಗಳನ್ನು ಸಂರಕ್ಷಿಸುವುದು ದೇಶದ ಸ್ವರೂಪವಾದಾಗ ಇದೆಲ್ಲವೂ ಸಾಧ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಇದನ್ನು ಹೇಗೆ ಸಾಧಿಸಬಹುದು ಎಂಬುದನ್ನು ಅವರು ವಿವರಿಸಿದರು. ಪ್ರತಿಯೊಂದು ಕುಟುಂಬವು ತಮ್ಮದೇ ಆದ ಕುಟುಂಬದ ವಸ್ತುಸಂಗ್ರಹಾಲಯವನ್ನು ರಚಿಸಬೇಕು ಎಂದು ಅವರು ಸಲಹೆ ನೀಡಿದರು. ಇಂದಿನ ಸರಳ ವಿಷಯಗಳು ಮುಂದಿನ ಪೀಳಿಗೆಗೆ ಭಾವನಾತ್ಮಕ ಆಸ್ತಿಯಾಗುತ್ತವೆ ಎಂದು ಅವರು ಹೇಳಿದರು. ಶಾಲೆಗಳು ಮತ್ತು ಇತರ ಸಂಸ್ಥೆಗಳು ತಮ್ಮದೇ ಆದ ವಸ್ತುಸಂಗ್ರಹಾಲಯಗಳನ್ನು ರಚಿಸುವಂತೆ ಅವರು ಪ್ರೇರೇಪಿಸಿದರು. ನಗರ ವಸ್ತುಸಂಗ್ರಹಾಲಯಗಳನ್ನು ರಚಿಸುವಂತೆ ಅವರು ನಗರಗಳಿಗೆ ಕೋರಿದರು. ಇದು ಭವಿಷ್ಯದ ಪೀಳಿಗೆಗೆ ಭಾರಿ ಐತಿಹಾಸಿಕ ಸಂಪತ್ತನ್ನು ಸೃಷ್ಟಿಸುತ್ತದೆ ಎಂದರು.


ವಸ್ತುಸಂಗ್ರಹಾಲಯಗಳು ಯುವಕರಿಗೆ ವೃತ್ತಿಜೀವನದ ಆಯ್ಕೆಯಾಗುತ್ತಿವೆ ಎಂದು ಅವರು ಉಲ್ಲೇಖಿಸಿದರು. ಈ ಯುವಕರನ್ನು ನಾವು ಕೇವಲ ವಸ್ತುಸಂಗ್ರಹಾಲಯದ ಕೆಲಸಗಾರರಾಗಿ ನೋಡಬಾರದು, ಆದರೆ ಜಾಗತಿಕ ಸಾಂಸ್ಕೃತಿಕ ಕ್ರಿಯೆಯ ಮಾಧ್ಯಮವಾಗಬಲ್ಲ ಇತಿಹಾಸ ಮತ್ತು ವಾಸ್ತುಶಿಲ್ಪದಂತಹ ವಿಷಯಗಳಿಗೆ ಸಂಬಂಧಿಸಿದ ಯುವಕರಾಗಿ ನೋಡಬೇಕು ಎಂದು ಅವರು ಹೇಳಿದರು. ಈ ಯುವಕರು ರಾಷ್ಟ್ರದ ಪರಂಪರೆಯನ್ನು ವಿದೇಶಕ್ಕೆ ಕೊಂಡೊಯ್ಯುವಲ್ಲಿ ಮತ್ತು ಅವರಿಂದ ತಮ್ಮ ಗತಕಾಲದ ಬಗ್ಗೆ ಕಲಿಯುವಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತಾರೆ ಎಂದು ಅವರು ಹೇಳಿದರು.

 

ಕಲಾತ್ಮಕ ಕರಕುಶಲ ವಸ್ತುಗಳ ಕಳ್ಳಸಾಗಣೆ ಮತ್ತು ಸ್ವಾಧೀನದ ಸಾಮೂಹಿಕ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತದಂತಹ ಪ್ರಾಚೀನ ಸಂಸ್ಕೃತಿಗಳನ್ನು ಹೊಂದಿರುವ ದೇಶಗಳು ನೂರಾರು ವರ್ಷಗಳಿಂದ ಇದರೊಂದಿಗೆ ಹೋರಾಡುತ್ತಿವೆ ಎಂದರು. ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಅನೇಕ ಕಲಾಕೃತಿಗಳನ್ನು ಅನೈತಿಕ ರೀತಿಯಲ್ಲಿ ದೇಶದಿಂದ ಹೊರಗೆ ಒಯ್ಯಲಾಗಿದೆ ಎಂದು ಅವರು ಗಮನಸೆಳೆದರು ಮತ್ತು ಅಂತಹ ಕುಕೃತ್ಯಗಳನ್ನು ಕೊನೆಗೊಳಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಕೋರಿದರು. ವಿಶ್ವದಲ್ಲಿ ಭಾರತದ ಖ್ಯಾತಿ ಹೆಚ್ಚುತ್ತಿರುವುದರ ನಡುವೆ ವಿವಿಧ ದೇಶಗಳು ಭಾರತದ ಪರಂಪರೆಯನ್ನು ಮರಳಿಸಲು ಪ್ರಾರಂಭಿಸಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಬನಾರಸ್ ನಿಂದ ಕಳವು ಮಾಡಲಾದ ತಾಯಿ ಅನ್ನಪೂರ್ಣೆಯ ಪ್ರತಿಮೆ, ಗುಜರಾತ್ ನಿಂದ ಕದ್ದಿದ್ದ ಮಹಿಷಾಸುರಮರ್ದಿನಿ ಪ್ರತಿಮೆ, ಚೋಳ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾದ ನಟರಾಜನ ವಿಗ್ರಹಗಳು ಮತ್ತು ಗುರು ಹರ್ ಗೋವಿಂದ್ ಸಿಂಗ್ ಜಿ ಅವರ ಹೆಸರಿನಿಂದ ಅಲಂಕರಿಸಲಾದ ಖಡ್ಗದ ಉದಾಹರಣೆಗಳನ್ನು ಅವರು ನೀಡಿದರು. ಸ್ವಾತಂತ್ರ್ಯಾನಂತರದ ಹಲವು ದಶಕಗಳಲ್ಲಿ 20 ಕ್ಕಿಂತ ಕಡಿಮೆ ಪ್ರಾಚೀನ ಕಲಾಕೃತಿಗಳನ್ನು ದೇಶಕ್ಕೆ ತರಲಾಗಿತ್ತು, ಆದರೆ ಕಳೆದ 9 ವರ್ಷಗಳಲ್ಲಿ ಸುಮಾರು 240 ಪ್ರಾಚೀನ ಕಲಾಕೃತಿಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಭಾರತಕ್ಕೆ ಮರಳಿ ತರಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಈ 9 ವರ್ಷಗಳಲ್ಲಿ ಭಾರತದಿಂದ ಸಾಂಸ್ಕೃತಿಕ ಕಲಾಕೃತಿಗಳ ಕಳ್ಳಸಾಗಣೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಈ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವಂತೆ ಶ್ರೀ ಮೋದಿ ಅವರು ವಿಶ್ವದಾದ್ಯಂತದ ಕಲಾ ರಸಿಕರಿಗೆ, ವಿಶೇಷವಾಗಿ ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದವರಿಗೆ ಮನವಿ ಮಾಡಿದರು. "ಯಾವುದೇ ದೇಶದ ಯಾವುದೇ ವಸ್ತುಸಂಗ್ರಹಾಲಯದಲ್ಲಿ ಅನೈತಿಕವಾಗಿ ಅಲ್ಲಿಗೆ ತಲುಪಿದಂತಹ ಯಾವುದೇ ಕಲಾಕೃತಿ ಇರಬಾರದು ಎಂದರು. ನಾವು ಇದನ್ನು ಎಲ್ಲ ವಸ್ತುಸಂಗ್ರಹಾಲಯಗಳಿಗೆ ನೈತಿಕ ಬದ್ಧತೆಯನ್ನಾಗಿ ಮಾಡಬೇಕು", ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. "ನಾವು ನಮ್ಮ ಪರಂಪರೆಯನ್ನು ಸಂರಕ್ಷಿಸುತ್ತೇವೆ ಮತ್ತು ಹೊಸ ಪರಂಪರೆಯನ್ನು ಸೃಷ್ಟಿಸುತ್ತೇವೆ" ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಲೌವ್ರೆ ಅಬುಧಾಬಿಯ ನಿರ್ದೇಶಕರಾದ ಶ್ರೀ ಮ್ಯಾನುಯೆಲ್ ರಬಾಟೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹಿನ್ನೆಲೆ
ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ 47 ನೇ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು (ಐಎಂಡಿ) ಆಚರಿಸಲು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋವನ್ನು ಆಯೋಜಿಸಲಾಗಿದೆ. ಈ ವರ್ಷದ ಐಎಂಡಿ ಧ್ಯೇಯವಾಕ್ಯ 'ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ' ಎಂಬುದಾಗಿದೆ. ಮ್ಯೂಸಿಯಂ ಎಕ್ಸ್ ಪೋವನ್ನು ಮ್ಯೂಸಿಯಂ ವೃತ್ತಿಪರರೊಂದಿಗೆ ಸಮಗ್ರ ಸಂವಾದವನ್ನು ಪ್ರಾರಂಭಿಸಲು ವಿನ್ಯಾಸಗೊಳಿಸಲಾಗಿದೆ, ಇದು ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಂಸ್ಕೃತಿಕ ಕೇಂದ್ರಗಳಾಗಿ ವಿಕಸನಗೊಳ್ಳಲು ಅನುವು ಮಾಡಿಕೊಡುತ್ತದೆ.

ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳಲ್ಲಿ ಮುಂಬರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್ ಥ್ರೂ ಉದ್ಘಾಟಿಸಿದರು. ಈ ವಸ್ತುಸಂಗ್ರಹಾಲಯವು ಭಾರತದ ವರ್ತಮಾನದ ಸ್ವರೂಪಕ್ಕೆ ಕೊಡುಗೆ ನೀಡಿದ, ಭಾರತದ ಗತಕಾಲಕ್ಕೆ ಸಂಬಂಧಿಸಿದ ಐತಿಹಾಸಿಕ ಘಟನೆಗಳು, ವ್ಯಕ್ತಿಗಳು, ಆಲೋಚನೆಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುವ ಮತ್ತು ಪ್ರದರ್ಶಿಸುವ ಸಮಗ್ರ ಪ್ರಯತ್ನವಾಗಿದೆ.

ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋದ ಲಾಂಛನ, ವಸ್ತುಸಂಗ್ರಹಾಲಯದಲ್ಲಿ ಒಂದು ದಿನ- ಗ್ರಾಫಿಕ್ ಕಾದಂಬರಿ, ಭಾರತೀಯ ವಸ್ತುಸಂಗ್ರಹಾಲಯಗಳ ಡೈರೆಕ್ಟರಿ, ಕರ್ತವ್ಯ ಪಥದ ಪಾಕೆಟ್ ನಕ್ಷೆ ಮತ್ತು ವಸ್ತುಸಂಗ್ರಹಾಲಯ ಕಾರ್ಡ್ ಗಳನ್ನು ಅನಾವರಣಗೊಳಿಸಿದರು.

ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋದ ಲಾಂಛನವು ಚನ್ನಪಟ್ಟಣ ಕಲಾ ಶೈಲಿಯಲ್ಲಿ ಮರದಿಂದ ಮಾಡಿದ ನರ್ತಿಸುವ ಬಾಲೆಯ ಸಮಕಾಲೀನ ಆವೃತ್ತಿಯಾಗಿದೆ. ಗ್ರಾಫಿಕ್ ಕಾದಂಬರಿಯು ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಮಕ್ಕಳ ಗುಂಪನ್ನು ಚಿತ್ರಿಸುತ್ತದೆ, ಅಲ್ಲಿ ಅವರು ವಸ್ತುಸಂಗ್ರಹಾಲಯದಲ್ಲಿ ಲಭ್ಯವಿರುವ ವಿವಿಧ ವೃತ್ತಿ ಅವಕಾಶಗಳ ಬಗ್ಗೆ ಕಲಿಯುತ್ತಾರೆ. ಭಾರತೀಯ ವಸ್ತುಸಂಗ್ರಹಾಲಯಗಳ ಡೈರೆಕ್ಟರಿ ಎಂಬುದು ಭಾರತೀಯ ವಸ್ತುಸಂಗ್ರಹಾಲಯಗಳ ಸಮಗ್ರ ಸಮೀಕ್ಷೆಯಾಗಿದೆ. ಕರ್ತವ್ಯ ಪಥದ ಪಾಕೆಟ್ ನಕ್ಷೆಯು ವಿವಿಧ ಸಾಂಸ್ಕೃತಿಕ ತಾಣಗಳು ಮತ್ತು ಸಂಸ್ಥೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ಇದು ಅಪ್ರತಿಮ ಸ್ಮಾರಕ ಮಾರ್ಗಗಳ ಇತಿಹಾಸವನ್ನು ಸಹ ಪರಿಶೋಧಿಸುತ್ತದೆ. ಮ್ಯೂಸಿಯಂ ಕಾರ್ಡ್ ಗಳು ದೇಶಾದ್ಯಂತದ ಅಪ್ರತಿಮ ವಸ್ತುಸಂಗ್ರಹಾಲಯಗಳ ಸಚಿತ್ರ  ಹೊಂದಿರುವ 75 ಕಾರ್ಡ್ ಗಳ ಗುಂಪಾಗಿದೆ, ಮತ್ತು ಇದು ಎಲ್ಲ ವಯಸ್ಸಿನ ಜನರಿಗೆ ವಸ್ತುಸಂಗ್ರಹಾಲಯಗಳನ್ನು ಪರಿಚಯಿಸುವ ನವೀನ ಮಾರ್ಗವಾಗಿದೆ ಮತ್ತು ಪ್ರತಿ ಕಾರ್ಡ್ ವಸ್ತುಸಂಗ್ರಹಾಲಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮವು ವಿಶ್ವದಾದ್ಯಂತದ ಸಾಂಸ್ಕೃತಿಕ ಕೇಂದ್ರಗಳು ಮತ್ತು ವಸ್ತುಸಂಗ್ರಹಾಲಯಗಳ ಅಂತಾರಾಷ್ಟ್ರೀಯ ನಿಯೋಗಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ 

The programme witnessed the participation of international delegations from cultural centers and museums from across the world.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's first privately developed orbital rocket Vikram-1 set for maiden launch on July 18

Media Coverage

India's first privately developed orbital rocket Vikram-1 set for maiden launch on July 18
NM on the go

Nm on the go

Always be the first to hear from the PM. Get the App Now!
...
Prime Minister speaks with the Amir of Qatar
July 16, 2026
PM conveys heartfelt condolences on the passing of the Father Amir of Qatar
PM recalls the Father Amir’s visionary leadership and his contribution to strengthening India-Qatar relations
The two leaders reaffirm their resolve to carry forward the Father Amir’s legacy

Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.

Prime Minister conveyed his heartfelt condolences on the passing of H.H. Sheikh Hamad bin Khalifa Al Thani, the Father Amir of Qatar.

Recalling the Father Amir’s significant contributions as the chief architect of modern Qatar, Prime Minister paid tribute to his visionary leadership, and recalled his pivotal role in strengthening India-Qatar relations over the years as well as his deep affection for India and the Indian community in Qatar.

The Amir of Qatar thanked Prime Minister for his call and conveyed his appreciation for the words of support in this difficult hour.

The two leaders reaffirmed their resolve to carry forward the Father Amir’s legacy and further strengthen the India-Qatar Strategic Partnership and people-to-people ties.

They agreed to remain in close touch.