ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪರಿಸ್ಥಿತಿ ಹಾಗೂ ಪ್ರಸ್ತುತ ಮತ್ತು ಪ್ರಸ್ತಾವಿತ ಪರಿಹಾರ ಕ್ರಮಗಳನ್ನು ಪರಾಮರ್ಶಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭದ್ರತಾ ವಿಷಯಗಳ ಸಂಪುಟ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಪುಟ ಕಾರ್ಯದರ್ಶಿಯವರು ಜಾಗತಿಕ ಪರಿಸ್ಥಿತಿ ಮತ್ತು ಭಾರತ ಸರ್ಕಾರದ ಎಲ್ಲಾ ಸಂಬಂಧಿತ ಸಚಿವಾಲಯಗಳು/ಇಲಾಖೆಗಳು ಇದುವರೆಗೆ ಕೈಗೊಂಡಿರುವ ಮತ್ತು ಯೋಜಿಸುತ್ತಿರುವ ಪರಿಹಾರ ಕ್ರಮಗಳ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿದರು. ಕೃಷಿ, ರಸಗೊಬ್ಬರ, ಆಹಾರ ಭದ್ರತೆ, ಪೆಟ್ರೋಲಿಯಂ, ವಿದ್ಯುತ್, ಎಂ ಎಸ್ ಎಂ ಇ ಗಳು, ರಫ್ತುದಾರರು, ಹಡಗು ಸಾರಿಗೆ, ವ್ಯಾಪಾರ, ಹಣಕಾಸು, ಪೂರೈಕೆ ಸರಪಳಿಗಳು ಮತ್ತು ಎಲ್ಲಾ ಬಾಧಿತ ವಲಯಗಳಲ್ಲಿ ನಿರೀಕ್ಷಿತ ಪರಿಣಾಮ ಮತ್ತು ಅದನ್ನು ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ದೇಶದ ಒಟ್ಟಾರೆ ಸ್ಥೂಲ ಆರ್ಥಿಕ ಸನ್ನಿವೇಶ ಮತ್ತು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಆರ್ಥಿಕತೆಯ ಮೇಲೆ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಕಾಲೀನ ಅವಧಿಯಲ್ಲಿ ಗಮನಾರ್ಹ ಪರಿಣಾಮ ಬೀರಲಿದೆ. ಭಾರತದ ಮೇಲೆ ಇದರ ಪ್ರಭಾವವನ್ನು ಅಂದಾಜಿಸಲಾಯಿತು ಮತ್ತು ತಕ್ಷಣದ ಹಾಗೂ ದೀರ್ಘಕಾಲೀನ ಪ್ರತಿರೋಧಕ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಆಹಾರ, ಇಂಧನ ಮತ್ತು ಇಂಧನ ಭದ್ರತೆ ಸೇರಿದಂತೆ ಜನಸಾಮಾನ್ಯರ ನಿರ್ಣಾಯಕ ಅಗತ್ಯಗಳ ಲಭ್ಯತೆಯ ಬಗ್ಗೆ ವಿವರವಾದ ಮೌಲ್ಯಮಾಪನ ಮಾಡಲಾಯಿತು. ಅಗತ್ಯ ವಸ್ತುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಕಾಲೀನ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ರೈತರ ಮೇಲಾಗುವ ಪರಿಣಾಮ ಮತ್ತು ಮುಂಗಾರು ಹಂಗಾಮಿಗೆ ಅವರಿಗೆ ಅಗತ್ಯವಿರುವ ರಸಗೊಬ್ಬರದ ಅವಶ್ಯಕತೆಯನ್ನು ಅಂದಾಜಿಸಲಾಯಿತು. ರಸಗೊಬ್ಬರಗಳ ಸಮರ್ಪಕ ದಾಸ್ತಾನು ಕಾಯ್ದುಕೊಳ್ಳಲು ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಕ್ರಮಗಳು ಸಕಾಲಿಕ ಲಭ್ಯತೆ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುತ್ತವೆ. ಭವಿಷ್ಯದಲ್ಲಿ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರಗಳ ಪರ್ಯಾಯ ಮೂಲಗಳ ಬಗ್ಗೆಯೂ ಚರ್ಚಿಸಲಾಯಿತು.
ಎಲ್ಲಾ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನುಗಳ ಸಮರ್ಪಕ ಪೂರೈಕೆಯು ಭಾರತದಲ್ಲಿ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲಾಯಿತು.
ರಾಸಾಯನಿಕಗಳು, ಫಾರ್ಮಾಸೂಟಿಕಲ್ಸ್, ಪೆಟ್ರೋಕೆಮಿಕಲ್ಸ್ ಮತ್ತು ಇತರ ಕೈಗಾರಿಕಾ ವಲಯಗಳಿಗೆ ಅಗತ್ಯವಿರುವ ಆಮದು ಮೂಲಗಳನ್ನು ವೈವಿಧ್ಯಗೊಳಿಸಲು ಹಲವಾರು ಕ್ರಮಗಳನ್ನು ಚರ್ಚಿಸಲಾಯಿತು. ಅದೇ ರೀತಿ ಭಾರತೀಯ ಸರಕುಗಳನ್ನು ಉತ್ತೇಜಿಸಲು ಮುಂದಿನ ದಿನಗಳಲ್ಲಿ ಹೊಸ ರಫ್ತು ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
ವಿವಿಧ ಸಚಿವಾಲಯಗಳು ಪ್ರಸ್ತಾಪಿಸಿದ ಹಲವಾರು ಕ್ರಮಗಳನ್ನು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಮುಂಬರುವ ದಿನಗಳಲ್ಲಿ ಸಿದ್ಧಪಡಿಸಲಾಗುವುದು ಮತ್ತು ಜಾರಿಗೆ ತರಲಾಗುವುದು.
ʼಸಂಪೂರ್ಣ ಸರ್ಕಾರʼದ ದೃಷ್ಟಿಕೋನದೊಂದಿಗೆ ಸಮರ್ಪಿತವಾಗಿ ಕೆಲಸ ಮಾಡಲು ಸಚಿವರು ಮತ್ತು ಕಾರ್ಯದರ್ಶಿಗಳ ಗುಂಪನ್ನು ರಚಿಸುವಂತೆ ಪ್ರಧಾನಮಂತ್ರಿ ನಿರ್ದೇಶನ ನೀಡಿದರು. ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಕೆಲಸ ಮಾಡುವಂತೆ ವಲಯವಾರು ಗುಂಪುಗಳಿಗೆ ಪ್ರಧಾನಮಂತ್ರಿ ಸೂಚಿಸಿದರು.
ಈ ಸಂಘರ್ಷವು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯಾಗಿದೆ ಮತ್ತು ಇಡೀ ಜಗತ್ತು ಯಾವುದೋ ಒಂದು ರೂಪದಲ್ಲಿ ಇದರಿಂದ ಬಾಧಿತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಈ ಸಂಘರ್ಷದ ಪರಿಣಾಮದಿಂದ ನಾಗರಿಕರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ನಾಗರಿಕರಿಗೆ ಅನಾನುಕೂಲತೆಯನ್ನು ಕನಿಷ್ಠಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಎಲ್ಲಾ ಅಂಗಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಪ್ರಧಾನಮಂತ್ರಿ ಸೂಚಿಸಿದರು. ಪ್ರಮುಖ ಸರಕುಗಳ ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಡೆಯದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಸೂಕ್ತ ಸಮನ್ವಯ ಸಾಧಿಸುವಂತೆ ಪ್ರಧಾನಮಂತ್ರಿ ಸೂಚನೆ ನೀಡಿದರು.
Chaired a meeting of the CCS to review the mitigating measures in the wake of the ongoing conflict in West Asia.
— Narendra Modi (@narendramodi) March 22, 2026
We had extensive discussions on short, medium and long term measures, including ensuring continued availability of fertilisers for farmers, diversifying import… pic.twitter.com/a0SQoGf39e


