ಆಗಸ್ಟ್ 31, 2025 ರಂದು ಟಿಯಾಂಜಿನ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್.ಸಿ.ಒ.) ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಶ್ರೀ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾದರು.
2024ರ ಅಕ್ಟೋಬರ್ ನಲ್ಲಿ ಕಜಾನ್ ನಲ್ಲಿ ಕಳೆದ ಬಾರಿ ನಡೆದ ಸಭೆಯ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿನ ಸ್ಥಿರವಾದ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಎರಡೂ ದೇಶಗಳು ಅಭಿವೃದ್ಧಿ ಪಾಲುದಾರರೇ ಹೊರತು ಪ್ರತಿಸ್ಪರ್ಧಿಗಳಲ್ಲ ಮತ್ತು ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು ಎಂದು ಅವರು ಪುನರುಚ್ಚರಿಸಿದರು. ಭಾರತ ಮತ್ತು ಚೀನಾ ಪರಸ್ಪರ ಗೌರವ, ಪರಸ್ಪರ ಆಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆಯ ಆಧಾರದ ಮೇಲೆ ಸ್ಥಿರವಾದ ಸಂಬಂಧ ಮತ್ತು ಸಹಕಾರವನ್ನು ಹೊಂದಿವೆ ಎಂದು ಅವರು ಹೇಳಿದರು, ಇದು 21 ನೇ ಶತಮಾನದ ಪ್ರವೃತ್ತಿಗಳಿಗೆ ಅನುಗುಣವಾಗಿ ಎರಡೂ ದೇಶಗಳ ಮತ್ತು ಒಟ್ಟಾರೆಯಾಗಿ ಏಷ್ಯಾದ ಅಭಿವೃದ್ಧಿಗೆ ಅವಶ್ಯಕವಾಗಿದೆ.

ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಮಹತ್ವವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಕಳೆದ ವರ್ಷ ಸೈನ್ಯವನ್ನು ಯಶಸ್ವಿಯಾಗಿ ಹಿಂತೆಗೆದಿರುವುದು ಹಾಗು ಅಂದಿನಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಇಬ್ಬರೂ ನಾಯಕರು ತೃಪ್ತಿಯನ್ನು ವ್ಯಕ್ತಪಡಿಸಿದರು. ದ್ವಿಪಕ್ಷೀಯ ಸಂಬಂಧಗಳು ಮತ್ತು ಎರಡೂ ದೇಶಗಳ ಜನರ ದೀರ್ಘಕಾಲೀನ ಹಿತಾಸಕ್ತಿಗಳು ಮುಖ್ಯವೆಂದು ಅವರು ಹೇಳಿದರು. ರಾಜಕೀಯ ದೃಷ್ಟಿಕೋನದಿಂದ ಗಡಿ ಸಮಸ್ಯೆಗೆ ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳುವ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು. ಈ ತಿಂಗಳ ಆರಂಭದಲ್ಲಿ ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳು ತಮ್ಮ ಮಾತುಕತೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಇಬ್ಬರೂ ನಾಯಕರು ಗುರುತಿಸಿದರು. ನಿರಂತರ ಪ್ರಯತ್ನಗಳನ್ನು ಬೆಂಬಲಿಸಲು ಅವರು ಒಪ್ಪಿಕೊಂಡರು.
ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಪ್ರವಾಸಿ ವೀಸಾ ಪ್ರಕ್ರಿಯೆಯ ಪುನರಾರಂಭದೊಂದಿಗೆ, ನೇರ ವಿಮಾನಗಳು ಮತ್ತು ವೀಸಾ ಸೌಲಭ್ಯಗಳ ಮೂಲಕ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸುವ ಅಗತ್ಯವನ್ನು ಇಬ್ಬರೂ ನಾಯಕರು ಗಮನಿಸಿದರು. ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳಲ್ಲಿ, ಜಾಗತಿಕ ವ್ಯಾಪಾರವನ್ನು ಬಲಪಡಿಸುವಲ್ಲಿ ಎರಡೂ ದೇಶಗಳ ಆರ್ಥಿಕತೆಗಳ ಪಾತ್ರವನ್ನು ಅವರು ಗುರುತಿಸಿದರು. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸಲು ಮತ್ತು ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ರಾಜಕೀಯವಾಗಿ ಮತ್ತು ಕಾರ್ಯತಂತ್ರವಾಗಿ ಪ್ರಯತ್ನಗಳನ್ನು ಮುಂದುವರಿಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು.

ಭಾರತ ಮತ್ತು ಚೀನಾ ಕಾರ್ಯತಂತ್ರದ ಸ್ವಾಯತ್ತತೆಯನ್ನು ಅನುಸರಿಸುತ್ತವೆ ಮತ್ತು ಅವರ ಸಂಬಂಧಗಳನ್ನು ಮೂರನೇ ದೇಶದ ದೃಷ್ಟಿಕೋನದಿಂದ ನೋಡಬಾರದು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಭಯೋತ್ಪಾದನೆ ನಿಗ್ರಹ ಮತ್ತು ನ್ಯಾಯಯುತ ವ್ಯಾಪಾರದಂತಹ ಬಹುಪಕ್ಷೀಯ ವಿಷಯಗಳ ಬಗ್ಗೆ ಹಾಗೂ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಬಗ್ಗೆ ಸಾಮಾನ್ಯ ನೆಲೆಯನ್ನು ವಿಸ್ತರಿಸುವುದು ಅಗತ್ಯ ಎಂದು ಇಬ್ಬರೂ ನಾಯಕರು ಹೇಳಿದರು.
ಚೀನಾದ ಎಸ್.ಸಿ.ಒ. ಅಧ್ಯಕ್ಷತೆ ಮತ್ತು ಟಿಯಾಂಜಿನ್ ನಲ್ಲಿ ನಡೆಯುವ ಶೃಂಗಸಭೆಗೆ ಪ್ರಧಾನಮಂತ್ರಿ ಅವರು ಬೆಂಬಲ ವ್ಯಕ್ತಪಡಿಸಿದರು. 2026ರಲ್ಲಿ ಭಾರತ ಆಯೋಜಿಸಲಿರುವ ಬ್ರಿಕ್ಸ್ ಶೃಂಗಸಭೆಗೆ ಅವರು ಅಧ್ಯಕ್ಷ ಕ್ಸಿ ಅವರನ್ನು ಆಹ್ವಾನಿಸಿದರು. ಆಹ್ವಾನಕ್ಕಾಗಿ ಅಧ್ಯಕ್ಷ ಕ್ಸಿ ಅವರು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ಚೀನಾದ ಬೆಂಬಲವನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರು ಚೀನಾ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋದ ಸ್ಥಾಯಿ ಸಮಿತಿಯ ಸದಸ್ಯ ಶ್ರೀ ಕೈ ಕಿ ಅವರನ್ನು ಸಹ ಭೇಟಿಯಾದರು. ಪ್ರಧಾನಮಂತ್ರಿ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಶ್ರೀ ಕೈ ಕಿ ಅವರೊಂದಿಗೆ ಹಂಚಿಕೊಂಡರು ಮತ್ತು ದೃಷ್ಟಿಕೋನವನ್ನು ಸಫಲಗೊಳಿಸುವಲ್ಲಿ ಅವರ ಬೆಂಬಲವನ್ನು ಕೋರಿದರು. ಇಬ್ಬರು ನಾಯಕರ ನಡುವಿನ ಒಮ್ಮತಕ್ಕೆ ಅನುಗುಣವಾಗಿ ದ್ವಿಪಕ್ಷೀಯ ವಿನಿಮಯವನ್ನು ವಿಸ್ತರಿಸಲು ಮತ್ತು ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಚೀನಾದ ಕಡೆಯವರು ಸಿದ್ಧರಿದ್ದಾರೆ ಎಂದು ಶ್ರೀ ಕೈ ಪುನರುಚ್ಚರಿಸಿದರು.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Had a fruitful meeting with President Xi Jinping in Tianjin on the sidelines of the SCO Summit. We reviewed the positive momentum in India-China relations since our last meeting in Kazan. We agreed on the importance of maintaining peace and tranquility in border areas and… pic.twitter.com/HBYS5lhe9d
— Narendra Modi (@narendramodi) August 31, 2025
在天津上海合作组织峰会期间,我与习近平主席举行了富有成果的会晤。我们回顾了自上次喀山会晤以来印中关系的积极发展势头。我们一致认为保持边境地区的和平与安宁十分重要,并重申了在相互尊重、互利共赢和相互体谅的基础上加强合作的承诺。 pic.twitter.com/ughJElPTMW
— Narendra Modi (@narendramodi) August 31, 2025


