ಭೂತಾನ್ ಪ್ರಧಾನಮಂತ್ರಿಗಳಾದ ಘನತೆವೆತ್ತ ಡಾ. ಲೋಟೆ ಶೇರಿಂಗ್ ಅವರೇ, ಭೂತಾನ್ ರಾಷ್ಟ್ರೀಯ ಅಸೆಂಬ್ಲಿ ಮತ್ತು ರಾಷ್ಟ್ರೀಯ ಪರಿಷತ್ತಿನ ಗೌರವಾನ್ವಿತ ಸದಸ್ಯರುಗಳೇ, ಭೂತಾನ್ ರಾಯಲ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳೇ ಮತ್ತು ಬೋಧಕ ವರ್ಗದವರೇ,

 

ನನ್ನ ಯುವ ಸ್ನೇಹಿತರೇ, 

 

ಕುಜೋ ಜಂಗ್ಪೋ ಲಾ. ನಮಸ್ಕಾರ್. ಈ ಬೆಳಗಿನಲ್ಲಿ ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಅದ್ಭುತ ಅನುಭವ ನೀಡಿದೆ. ನೀವೆಲ್ಲರೂ ಇಂದು ಭಾನುವಾರ ಆದರೂ ಉಪನ್ಯಾಸಕ್ಕೆ ಹಾಜರಾಗಬೇಕು ಎಂದು ಚಿಂತಿಸುತ್ತಿದ್ದೀರಿ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಆದರೆ, ನಾನು ಸಂಕ್ಷಿಪ್ತವಾಗಿ ಮತ್ತು ನಿಮಗೆಲ್ಲರಿಗೂ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಸೀಮಿತಗೊಳಿಸುತ್ತೇನೆ.

 

ಸ್ನೇಹಿತರೆ,

 

ಭೂತಾನ್ ಗೆ ಭೇಟಿ ನೀಡುವ ಯಾರೇ ಆದರೂ, ಇಲ್ಲಿನ ಪ್ರಾಕೃತಿಕ ಸೌಂದರ್ಯ, ಜನರ ಆತ್ಮೀಯತೆ ಮತ್ತು ಸರಳತೆಗೆ ಮಾರುಹೋಗುತ್ತಾರೆ. ನಿನ್ನೆ ನಾನು ಹಿಂದಿನ ಭೂತಾನ್‌ನ ವೈಭವ ಮತ್ತು ಅದರ ಆಧ್ಯಾತ್ಮಿಕ ಪರಂಪರೆಯ ಶ್ರೇಷ್ಠತೆಗೆ ಜ್ವಲಂತ ಉದಾಹರಣೆಯಾಗಿರುವ ಸೆಮ್ತೋಕ್ವಾ ಡಿ ಜೋಂಗ್ ನಲ್ಲಿದ್ದೆ,  ಈ ಭೇಟಿಯ ವೇಳೆ, ಭೂತಾನ್ ನ ವರ್ತಮಾನದ ನಾಯಕತ್ವದೊಂದಿಗೆ ಆಪ್ತವಾಗಿ ಮಾತುಕತೆ ನಡೆಸುವ ಅವಕಾಶ ದೊರೆಯಿತು. ನಾನು ಮತ್ತೊಮ್ಮೆ ಭಾರತ-ಭೂತಾನ್ ಬಾಂಧವ್ಯಕ್ಕಾಗಿ ಅವರ ಮಾರ್ಗದರ್ಶನ ಪಡೆದೆ. ಇದು ಸದಾ ಅವರ ವೈಯಕ್ತಿಕ ಕಾಳಜಿಯಿಂದ ಪ್ರಯೋಜನ ಪಡೆದಿದೆ.

ಈಗ, ಇಂದು, ನಾನು ಭೂತಾನ್ ಭವಿಷ್ಯದೊಂದಿಗೆ ಇಲ್ಲಿದ್ದೇನೆ,  ನನಗೆ ಇಲ್ಲಿನ ಚೈತನ್ಯಶೀಲತೆ ಮತ್ತು ಚೈತನ್ಯದ ಅನುಭವವಾಗುತ್ತಿದೆ. ಇವೆಲ್ಲವೂ ಇಲ್ಲಿನ ಜನರ ಮತ್ತು ಈ ಶ್ರೇಷ್ಠ ದೇಶದ ಭವಿಷ್ಯದ ಸ್ವರೂಪವನ್ನು ರೂಪಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ಭೂತಾನ್ ನ ಭೂತ, ವರ್ತಮಾನ ಅಥವಾ ಭವಿಷ್ಯವನ್ನೇ ನೋಡುತ್ತಿರಲಿ, ಸಾಮಾನ್ಯ ಮತ್ತು ಸ್ಥಿರವಾದ ಎಳೆಗಳು – ಆಳವಾದ ಆಧ್ಯಾತ್ಮಿಕತೆ ಮತ್ತು ಯುವ ಚೈತನ್ಯ ನೋಡುತ್ತಿರುತ್ತದೆ. ಇವು ನಮ್ಮ ದ್ವಿಪಕ್ಷೀಯ ಸಂಬಂಧದ ಸಾಮರ್ಥ್ಯವೂ ಆಗಿದೆ ಎಂದರು.

 

ಸ್ನೇಹಿತರೇ,

 

ಭಾರತ ಮತ್ತು ಭೂತಾನ್ ನ ಜನರು ಪರಸ್ಪರ ನಂಟು ಹೊಂದಿರುವುದು ಸ್ವಾಭಾವಿಕವಾಗಿದೆ. ನಾವು ನಮ್ಮ ಭೌಗೋಳಿಕತೆಯಿಂದ ಮಾತ್ರವೇ ಆಪ್ತರಾಗಿಲ್ಲ. ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು ಅನನ್ಯ ಮತ್ತು ಆಳವಾದ ಬಾಂಧವ್ಯವನ್ನು ನಮ್ಮ ಜನ ಮತ್ತು ದೇಶದ ನಡುವೆ ಬೆಸೆದಿದೆ. ರಾಜಕುಮಾರ ಸಿದ್ಧಾರ್ಥ ಗೌತಮ ಬುದ್ಧ ಆದ ಪುಣ್ಯಭೂಮಿ ಭಾರತವಾಗಿದೆ. ಅಲ್ಲಿಂದಲೇ ಬೌದ್ಧಮತದ ಜ್ಯೋತಿ ಮತ್ತು ಆಧ್ಯಾತ್ಮಿಕ ಸಂದೇಶದ ಬೆಳಕು ವಿಶ್ವಾದ್ಯಂತ ಹಬ್ಬಿದ್ದು. ಬೌದ್ಧ ಸನ್ಯಾಸಿಗಳ, ಆಧ್ಯಾತ್ಮಿಕ ನಾಯಕರ, ವಿದ್ವಾಂಸರ ಪರಂಪರೆ ಭೂತಾನ್ ನಲ್ಲ ಉಜ್ವಲ ಬೆಳಕು ಹಚ್ಚಿದೆ. ಅವರು ಭಾರತ ಮತ್ತು ಭೂತಾನ್ ನಡುವೆ ವಿಶೇಷ ನಂಟು ಹೊಂದಿದ್ದಾರೆ.

ಇದರ ಫಲಶ್ರುತಿಯಾಗಿ, ನಮ್ಮ ಹಂಚಿಕೆಯ ಮೌಲ್ಯಗಳು ಸಮಾನವಾದ ವಿಶ್ವದೃಷ್ಟಿಯನ್ನು ರೂಪಿಸಿವೆ. ಇದನ್ನು ವಾರಾಣಸಿ ಮತ್ತು ಬೋಧಗಯಾದಲ್ಲಿ ಕಾಣಬಹುದಾಗಿದೆ.  ಡಿಜೋಂಗ್ ಮತ್ತು ಚೋರ್ಟೆನ್’ ನಲ್ಲೂ ಕಾಣಬಹುದು. ಜೊತೆಗೆ ಜನರಾಗಿ ನಾವು ಈ ಶ್ರೇಷ್ಠ ಪರಂಪರೆಯ ಭೂಮಿಯಲ್ಲಿ ಬದುಕುತ್ತಿರುವುದಕ್ಕೆ ಪುಣ್ಯ ಮಾಡಿದ್ದೇವೆ. ಜಗತ್ತಿನ ಬೇರೆ ಯಾವುದೇ ಎರಡು ರಾಷ್ಟ್ರಗಳು ಇಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಎರಡು ರಾಷ್ಟ್ರಗಳು ಇಷ್ಟು ಸ್ವಾಭಾವಿಕ ಸಹಭಾಗಿತ್ವದೊಂದಿಗೆ ತಮ್ಮ ಜನರಿಗೆ ಸಮೃದ್ಧಿ ತರಲು ಸಾಧ್ಯವಿಲ್ಲ.

 

ಸ್ನೇಹಿತರೇ,

 

ಇಂದು, ಭಾರತ ವಿಶಾಲ ವಲಯಗಳಲ್ಲಿ ಐತಿಹಾಸಿಕ ಪರಿವರ್ತನೆಗೆ ಸಾಕ್ಷಿಯಾಗಿದೆ.

 

ಭಾರತ ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣದ ವೇಗ ದುಪ್ಪಟ್ಟಾಗಿದೆ. ನಾವು ಮುಂದಿನ ಪೀಳಿಗೆಯ ಮೂಲಸೌಕರ್ಯಕ್ಕಾಗಿ 15 ಶತಕೋಟಿ ಡಾಲರ್ ಮುಡಿಪಿಟ್ಟಿದ್ದೇವೆ. ವಿಶ್ವದ ಅತಿ ದೊಡ್ಡ ಆರೋಗ್ಯ ಆರೈಕೆ ಕಾರ್ಯಕ್ರಮದ ತವರಾಗಿರುವ ಭಾರತ, ಆಯುಷ್ಮಾನ್ ಭಾರತ್  ನಿಂದ 500 ದಶಲಕ್ಷ ಭಾರತೀಯರಿಗೆ ಆರೋಗ್ಯದ ಖಾತ್ರಿ ನೀಡಿದೆ.

 

ಭಾರತವು ಜಗತ್ತಿನಲ್ಲೇ ಅತ್ಯಂತ ಅಲ್ಪದರದಲ್ಲಿ ಡಾಟಾ ಸಂಪರ್ಕ ನೀಡುವ ರಾಷ್ಟ್ರವಾಗಿದ್ದು, ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರ ಸಬಲೀಕರಣ ಮಾಡುತ್ತಿದೆ. ಭಾರತವು ವಿಶ್ವದ ಅತಿ ದೊಡ್ಡ ನವೋದ್ಯಮ ವಾತಾವರಣದ ತವರಾಗಿದೆ. ಭಾರತದಲ್ಲಿ ನಾವಿನ್ಯತೆಯನ್ನು ತರಲು ಇದು ಶ್ರೇಷ್ಠ ಸಮಯವಾಗಿದೆ! ಇವು ಮತ್ತು ಇತರ ಹಲವು ಪರಿವರ್ತನೆಗಳು ಭಾರತದ ಯುವಜನರ ಮೇರು ಆಶಯಗಳಾಗಿವೆ.

 

ಸ್ನೇಹಿತರೇ,

 

ಇಂದು, ನಾನು ಭೂತಾನ್ ನ ಉತ್ತಮ ಮತ್ತು ಉಜ್ವಲ ಯುವಜನರೊಂದಿಗೆ ನಿಂತಿದ್ದೇನೆ. ಗೌರವಾನ್ವಿತ ದೊರೆ ನಿನ್ನೆ ನನಗೆ ಅವರು ನಿಮ್ಮೊಂದಿಗೆ ನಿಯಮಿತವಾಗಿ ಸಂವಾದ ನಡೆಸುವುದಾಗಿ ಮತ್ತು ಹಿಂದಿನ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಿದ್ದಾಗಿ ಹೇಳಿದರು, ಭೂತಾನ್‌ನ ಭವಿಷ್ಯದ ನಾಯಕರು, ನಾವೀನ್ಯಕಾರರು, ವ್ಯಾಪಾರಸ್ಥರು, ಕ್ರೀಡಾ ಪಟುಗಳು, ಕಲಾವಿದರು ಮತ್ತು ವಿಜ್ಞಾನಿಗಳು ಹೊರಹೊಮ್ಮುವುದು ನಿಮ್ಮೆಲ್ಲರಿಂದಲೇ.

 

ಕೆಲವೇ ದಿನಗಳ ಹಿಂದೆ, ನನ್ನ ಉತ್ತಮ ಸ್ನೇಹಿತ, ಪ್ರಧಾನಮಂತ್ರಿ ಡಾಕ್ಟರ್ ಶೇರಿಂಗ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದು ನನ್ನ ಹೃದಯ ತಟ್ಟಿತು. ಆ ಪೋಸ್ಟ್ ನಲ್ಲಿ ಅವರು,  ಎಕ್ಸಾಮ್ ವಾರಿಯರ್ಸ್ ಬಗ್ಗೆ ಉಲ್ಲೇಖಿಸಿದ್ದರು, ಮತ್ತು ಈಗಷ್ಟೇ ಒಬ್ಬ ವಿದ್ಯಾರ್ಥಿ ಆ ಪುಸ್ತಕದ ಬಗ್ಗೆ ಉಲ್ಲೇಖಿಸಿದ. ಎಕ್ಸಾಮ್ ವಾರಿಯರ್ಸ್ ಒತ್ತಡವಿಲ್ಲದೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಕುರಿತಾದುದಾಗಿದೆ. ಪ್ರತಿಯೊಬ್ಬರೂ ಶಾಲೆ, ಕಾಲೇಜುಗಳಲ್ಲಿ ಮತ್ತು ಬದುಕೆಂಬ ದೊಡ್ಡ ಶಾಲಾ ಕೊಠಡಿಯಲ್ಲಿ ಪರೀಕ್ಷೆ ಎದುರಿಸುತ್ತಾರೆ. ನಾನು ಕೆಲವೊಂದು ವಿಚಾರ ಹೇಳಲೇ? ಎಕ್ಸಾಮ್ ವಾರಿಯರ್ಸ್ ನಲ್ಲಿ ನಾನು ಬರೆದಿರುವ ಬಹುತೇಕ ವಿಚಾರಗಳಲ್ಲಿ ಭಗವಾನ್ ಬುದ್ಧರ ಬೋಧನೆಗಳ ಪ್ರಭಾವ ಇದೆ. ಅದರಲ್ಲೂ ಧನಾತ್ಮಕತೆಯ ಮಹತ್ವ, ಭಯದಿಂದ ಹೊರಬಹುವುದು ಮತ್ತು ಪ್ರಸಕ್ತ ಸನ್ನಿವೇಶದಲ್ಲೇ ಆಗಲೀ, ಪ್ರಕೃತಿ ಮಾತೆಯೊಂದಿಗೇ ಆಗಲಿ ಒಮ್ಮತದಿಂದ ಬಾಳುವುದರ ಮೇಲಿದೆ. ನೀವು ಈ ಶ್ರೇಷ್ಠ ಭೂಮಿಯಲ್ಲಿ ಜನಿಸಿದ್ದೀರಿ. 

 

 ಆದ್ದರಿಂದ, ಈ ಗುಣಲಕ್ಷಣಗಳು ನಿಮಗೆ ಸಹಜವಾಗಿ ಬಂದಿವೆ ಮತ್ತು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಿವೆ. ನಾನು ಚಿಕ್ಕವನಿದ್ದಾಗ, ಈ ಗುಣಲಕ್ಷಣಗಳ ಹುಡುಕಾಟವು ನನ್ನನ್ನು ಹಿಮಾಲಯಕ್ಕೆ ಕರೆದೊಯ್ಯಿತು! ಈ ಪುಣ್ಯಭೂಮಿಯ ಮಕ್ಕಳಾಗಿ, ನಮ್ಮ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನೀವು ಕೊಡುಗೆ ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ.

 

ಹೌದು ನಮ್ಮ ಮುಂದೆ ಸವಾಲುಗಳಿವೆ. ಆದರೆ, ಪ್ರತಿಯೊಂದು ಸವಾಲನ್ನು ಮೆಟ್ಟಿನಿಲ್ಲಲು ನಾವಿನ್ಯಪೂರ್ಣವಾದ ಪರಿಹಾರವನ್ನು ಹುಡುಕಬಲ್ಲ ಯುವ ಮನಸ್ಸುಗಳೂ ನಮ್ಮೊಂದಿಗಿವೆ. ಹೀಗಾಗಿ ಯಾವುದೇ ಮಿತಿ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.

 

ನಾನು ನಿಮ್ಮೆಲ್ಲರಿಗೂ ಹೇಳ ಬಯಸುತ್ತೇನೆ – ಈಗ ಯುವಕರಾಗಿರುವುದಕ್ಕಿಂತ ಉತ್ತಮ ಸಮಯ ನಿಮಗೆ ಇರಲು ಸಾಧ್ಯವಿಲ್ಲ! ಜಗತ್ತು ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ, ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ನಿಜವಾದ ಗುರಿ ಹುಡುಕಿ ಮತ್ತು ಅದನ್ನು ಪೂರ್ಣ ಉತ್ಸಾಹದಿಂದ ಮುಂದುವರಿಸಿ.

 

ಸ್ನೇಹಿತರೇ,

 

ಜಲ ವಿದ್ಯುತ್ ಮತ್ತು ಇಂಧನ ಕ್ಷೇತ್ರದಲ್ಲಿನ ಭಾರತ-ಭೂತಾನ್ ಸಹಕಾರ ಅನುಪಮವಾದ್ದು. ಈ ಶಕ್ತಿ ಮತ್ತು ಇಂಧನದ ಬಾಂಧವ್ಯದ ನಿಜವಾದ ಮೂಲ ನಮ್ಮ ಜನರು. ಹೀಗಾಗಿ ಜನರೇ ಮೊದಲು ಮತ್ತು ನಮ್ಮ ಬಾಂಧವ್ಯದಲ್ಲಿ ಜನರೇ ಕೇಂದ್ರಬಿಂದುವಾಗಿರುತ್ತಾರೆ. ನನ್ನ ಈ ಭೇಟಿಯ ಫಲಶ್ರುತಿಯಲ್ಲಿ ನನಗೆ ಇದು ಸ್ಪಷ್ಟವಾಗಿ ಗೋಚರಿಸಿದೆ. ಸಾಂಪ್ರದಾಯಿಕ ವಲಯದ ಸಹಕಾರದಿಂದಾಚೆ ಹೋದರೆ, ನಾವು ಹೊಸ ಮುಂಚೂಣಿಯಲ್ಲಿನ ಸಹಕಾರವನ್ನು ಬಯಸುತ್ತೇವೆ, ಅದು ಶಾಲೆಯಿಂದ ಬಾಹ್ಯಾಕಾಶದವರೆಗೆ, ಡಿಜಿಟಲ್ ಪಾವತಿಯಿಂದ ಹಿಡಿದು ಪ್ರಕೃತಿವಿಕೋಪ ನಿರ್ವಹಣೆಯವರೆಗೆ ಸಾಗುತ್ತದೆ. ಈ ಎಲ್ಲ ವಲಯದಲ್ಲಿ ನಮ್ಮ ಸಹಕಾರದ ನೇರ ಪರಿಣಾಮ ನಿಮ್ಮಂಥ ಯುವ ಸ್ನೇಹಿತರ ಮೇಲಾಗು ತ್ತದೆ. ಇದಕ್ಕಾಗಿ ನಾನು ಕೆಲವು ಉದಾಹರಣೆಗಳನ್ನು ಕೊಡಲು ಇಚ್ಛಿಸುತ್ತೇನೆ. ಇಂದಿನ ದಿನ ಮತ್ತು ಯುಗದಲ್ಲಿ, ವಿದ್ವಾಂಸರನ್ನು ಮತ್ತು ಶಿಕ್ಷಣ ತಜ್ಞರನ್ನು ಎಲ್ಲೆಗಳನ್ನು ಮೀರಿ ಸಂಪರ್ಕಿಸುವುದು ಬಹಳ ಮುಖ್ಯ, ಇದರಿಂದಾಗಿ ನಮ್ಮ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪ್ರತಿಭೆ ಅವರನ್ನು ವಿಶ್ವದ ಅತ್ಯುತ್ತಮ ವ್ಯಕ್ತಿಗಳೊಂದಿಗೆ ಸಮನಾಗಿ ನಿಲ್ಲಿಸುತ್ತದೆ. ಭಾರತದ ರಾಷ್ಟ್ರೀಯ ಜ್ಞಾನ ಜಾಲ ಮತ್ತು ಭೂತಾನದ ಡ್ರಕ್ರೆನ್ ನಡುವಿನ ಸಹಕಾರವು ನಿನ್ನೆ ಸಾಕಾರಗೊಂಡಿದೆ, ಅದು ಈ ಉದ್ದೇಶವನ್ನು ಈಡೇರಿಸುತ್ತದೆ.

 

ಇದು, ನಮ್ಮ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು, ಆರೋಗ್ಯ ಆರೈಕೆ ಮತ್ತು ಕೃಷಿ ಸಂಸ್ಥೆಗಳ ನಡುವೆ, ಸುರಕ್ಷಿತವಾದ ಮತ್ತು ತ್ವರಿತ ಸಂಪರ್ಕವನ್ನು ಒದಗಿಸುತ್ತದೆ. ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.

 

 ಸ್ನೇಹಿತರೇ, ಮತ್ತೊಂದು ಉದಾಹರಣೆ ಬಾಹ್ಯಾಕಾಶದ ಮುಂಚೋಣಿಯದಾಗಿದೆ. ಈ ಕ್ಷಣದಲ್ಲಿ, ಭಾರತದ ಎರಡನೇ ಚಂದ್ರಯಾನ, ಚಂದ್ರಯಾನ್ -2 ಪ್ರಗತಿಯಲ್ಲಿದೆ. 2022 ರ ಹೊತ್ತಿಗೆ ನಾವು ಭಾರತೀಯ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯನ ಸಹಿತ ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದ್ದೇವೆ. ಇದೆಲ್ಲವೂ ಭಾರತದ ಸ್ವಂತ ಸಾಧನೆಗಳಾಗಿವೆ. ನಮಗೆ ಬಾಹ್ಯಾಕಾಶ ಕಾರ್ಯಕ್ರಮ ರಾಷ್ಟ್ರೀಯ ಹೆಮ್ಮೆಯ ವಿಚಾರವಷ್ಟೇ ಅಲ್ಲ. ಇದು ರಾಷ್ಟ್ರದ ಅಭಿವೃದ್ಧಿ ಮತ್ತು ಜಾಗತಿಕ ಸಹಕಾರಕ್ಕೆ ಪ್ರಮುಖ ಸಾಧನವಾಗಿದೆ.

 

ಸ್ನೇಹಿತರೆ,

 

ನಿನ್ನೆ ಪ್ರಧಾನಮಂತ್ರಿ ಶೇರಿಂಗ್ ಮತ್ತು ನಾನು ದಕ್ಷಿಣ ಏಷ್ಯಾ ಉಪಗ್ರಹದ ಥಿಂಪು ಭೂ ನಿಲ್ದಾಣವನ್ನು ಉದ್ಘಾಟಿಸುವ ಮೂಲಕ ನಮ್ಮ ಬಾಹ್ಯಾಕಾಶ ಸಹಕಾರವನ್ನು ವಿಸ್ತರಿಸಿದೆವು. ಬಾಹ್ಯಾಕಾಶದ ಮೂಲಕ ಟೆಲಿ ಮೆಡಿಸಿನ್, ದೂರ ಶಿಕ್ಷಣ, ಸಂಪನ್ಮೂಲ ಪತ್ತೆ, ಹವಾಮಾನ ಮುನ್ಸೂಚನೆ ಮತ್ತು ಪ್ರಕೃತಿ ವಿಕೋಪದ ಎಚ್ಚರಿಕೆ ದೂರದ ಪ್ರದೇಶಗಳಿಗೂ ತಲುಪುತ್ತದೆ. ಇನ್ನೂ ಸಂತಸದ ಸಂಗತಿ ಎಂದರೆ, ಭೂತಾನದ ಯುವ ವಿಜ್ಞಾನಿಗಳು ಭೂತಾನದ ಸ್ವಂತ ಸಣ್ಣ ಉಪಗ್ರಹಗಳ ಉಡಾವಣೆಗಾಗಿ ವಿನ್ಯಾಸ ಮಾಡಲು ಭಾರತಕ್ಕೆ ಆಗಮಿಸಿ ಕಾರ್ಯ ನಿರ್ವಹಿಸಬಹುದು. ಶೀಘ್ರವೇ ಒಂದು ದಿನ ನಿಮ್ಮಲ್ಲಿ ನೇಕರು ವಿಜ್ಞಾನಿಗಳು, ಎಂಜಿನಿಯರುಗಳು ಮತ್ತು ನಾವಿನ್ಯದಾರರಾಗುತ್ತೀರಿ ಎಂಬ ವಿಶ್ವಾಸ ನನಗಿದೆ.

 

ಸ್ನೇಹಿತರೇ,

 

ಶತಮಾನಗಳಿಂದ, ಶಿಕ್ಷಣ ಮತ್ತು ಕಲಿಕೆ ಭಾರತ ಮತ್ತು ಭೂತಾನ್ ನಡುವೆ ಕೇಂದ್ರಬಿಂದುವಾಗಿವೆ. ಹಿಂದಿನ ಕಾಲದಲ್ಲಿ, ಬೌದ್ಧ ಬೋಧಕರು ಮತ್ತು ವಿದ್ವಾಂಸರು ನಮ್ಮ ಜನರ ನಡುವಿನ ಕಲಿಕೆಯ ಸೇತುವನ್ನು ನಿರ್ಮಿಸಿದರು. ಇದು ಬೆಲೆಕಟ್ಟಲಾಗದ ಪರಂಪರೆಯಾಗಿದೆ. ಇದನ್ನು ನಾವು ಸಂರಕ್ಷಿಸಿ ಉತ್ತೇಜಿಸಬೇಕು. ಹೀಗಾಗಿಯೇ ಭೂತಾನ್‌ನಿಂದ ಬೌದ್ಧಧರ್ಮದ ಹೆಚ್ಚಿನ ವಿದ್ಯಾರ್ಥಿಗಳನ್ನು ನಳಂದ ವಿಶ್ವವಿದ್ಯಾಲಯದಂತಹ ಸಂಸ್ಥೆಗಳಿಗೆ ನಾವು ಸ್ವಾಗತಿಸುತ್ತೇವೆ – ಐತಿಹಾಸಿಕ ಜಾಗತಿಕ ಕಲಿಕೆಯ ತಾಣ ಮತ್ತು ಬೌದ್ಧ ಸಂಪ್ರದಾಯಗಳು, ಇದು ಸಾವಿರದ ಐನೂರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಸ್ಥಳದಲ್ಲಿಯೇ ಪುನಶ್ಚೇತನಗೊಂಡಿದೆ. ನಮ್ಮ ಈ ಕಲಿಕೆಯ ನಂಟು ಆಧುನಿಕ ಮತ್ತು ಪುರಾತನ ಎರಡೂ ಆಗಿದೆ. 20ನೇ ಶತಮಾನದಲ್ಲಿ, ಹಲವು ಭಾರತೀಯರು ಭೂತಾನ್ ಗೆ ಶಿಕ್ಷಕರಾಗಿ ಬಂದರು. ಹಳೆಯ ತಲೆಮಾರಿನ ಹೆಚ್ಚಿನ ಭೂತಾನ್ ನಾಗರಿಕರು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಕನಿಷ್ಠ ಒಬ್ಬ ಭಾರತೀಯ ಶಿಕ್ಷಕರಿಂದ ಕಲಿತಿದ್ದರು. ಅವರಲ್ಲಿ ಕೆಲವರನ್ನು ಕಳೆದ ವರ್ಷ ಘನತೆವೆತ್ತ ದೊರೆ ಗೌರವಿಸಿದ್ದರು, ಈ ಉದಾರತೆಗೆ ನಾವು ಕೃತಜ್ಞರಾಗಿರುತ್ತೇವೆ.

 

ಸ್ನೇಹಿತರೆ,

 

ಯಾವುದೇ ಸಂದರ್ಭದಲ್ಲಿ, ಭೂತಾನದ ನಾಲ್ಕು ಸಾವಿರ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಬಹುದು. ಈ ಸಂಖ್ಯೆ ಇನ್ನೂ ಹೆಚ್ಚಬಹುದು. ನಾವು ನಮ್ಮ ದೇಶವನ್ನು ಅಭಿವೃದ್ಧಿಯತ್ತ ನಡೆಸಿದಾಗ, ನಾವು ಸದಾ ಬದಲಾಗುತ್ತಿರುವ ತಾಂತ್ರಿಕ ಭೂರಮೆಯೊಂದಿಗೆ ವೇಗವನ್ನು ಉಳಿಸಿಕೊಳ್ಳಬೇಕು. ಆದ್ದರಿಂದ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲಿ ನಾವು ಸಹಕರಿಸುವುದು ಮುಖ್ಯವಾಗುತ್ತದೆ.

 

ನಾವು ನಿನ್ನೆ ಭಾರತದ ಪ್ರಮುಖ ಐಐಟಿಗಳು ಮತ್ತು ಈ ಪ್ರತಿಷ್ಠಿತ ವಿಶ್ವವಿದ್ಯಾಲಯದ ನಡುವೆ ಹೊಸ ಅಧ್ಯಾಯ ಆರಂಭಿಸಿದೆವು ಎಂಬ ಸಂತಸ ನನಗಿದೆ. ಇದು ಹೆಚ್ಚು ಸಹಯೋಗದ ಕಲಿಕೆ ಮತ್ತು ಸಂಶೋಧನೆಗೆ ಇಂಬು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

 

ಜಗತ್ತಿನ ಯಾವುದೇ ಭಾಗದಲ್ಲಿ, ನೀವು ಭೂತಾನ್‌ ನೊಂದಿಗೆ ಯಾವರೀತಿ ನಂಟು ಹೊಂದಿದ್ದೀರಿ ಎಂಬ ಪ್ರಶ್ನೆಯನ್ನು ನಾವು ಕೇಳಿದರೆ, ಉತ್ತರವು ಒಟ್ಟು ರಾಷ್ಟ್ರೀಯ ಸಂತೋಷದ ಪರಿಕಲ್ಪನೆಯಾಗಿರುತ್ತದೆ. ನನಗೆ ಅಚ್ಚರಿ ಎನಿಸುವುದಿಲ್ಲ. ಭೂತಾನ್ ಸಂತಸದ ಸಾರವನ್ನು ಅರ್ಥಮಾಡಿಕೊಂಡಿದೆ. ಭೂತಾನ್ ಸೌಹಾರ್ದತೆ, ಸಹಾನುಭೂತಿ ಮತ್ತು ಒಗ್ಗೂಡಿ ಬಾಳುವ ಸ್ಫೂರ್ತಿಯನ್ನು ಅರಿತಿದೆ. ನಿನ್ನೆ ನನ್ನನ್ನು ಸ್ವಾಗತಿಸಲು ಬೀದಿಗಳಲ್ಲಿ ಸಾಲುಗಟ್ಟಿದ ನಿಂತಿದ್ದ ಮಕ್ಕಳಿಂದ ಈ ಉತ್ಸಾಹವು ಹೊರಹೊಮ್ಮುತ್ತದೆ. ಅವರ ನಗುವನ್ನು ನಾನು ಸದಾ ಸ್ಮರಿಸುತ್ತೇನೆ.

 

ಸ್ನೇಹಿತರೆ,  

 

ಸ್ವಾಮಿ ವಿವೇಕಾನಂದರು ಹೇಳುತ್ತಾರೆ “ಪ್ರತಿಯೊಂದು ದೇಶಕ್ಕೂ ಹೇಳಲು ಒಂದು ಸಂದೇಶವಿರುತ್ತದೆ, ಪೂರೈಸುವ ಉದ್ದೇಶವಿರುತ್ತದೆ, ಸಾಧಿಸಲು ಒಂದು ಗುರಿ ಇರುತ್ತದೆ”. ಮಾನವತೆಗೆ ಭೂತಾನ್ ಸಂದೇಶ ಎಂದರೆ ಸಂತೋಷ. ಸೌಹಾರ್ದತೆಯಿಂದ ಸಂತಸದ ಸಿಂಚನ ಆಗುತ್ತದೆ. ಜಗತ್ತು ಸಂತಸದೊಂದಿಗೆ ಹೆಚ್ಚಿನದನ್ನು ಮಾಡಬಹುದು. ಸಂತೋಷ, ಬುದ್ದಿಹೀನ ದ್ವೇಷದ ಮೇಲೆ ಮೇಲುಗೈ ಸಾಧಿಸುತ್ತದೆ. ಜನರು ಸಂತೋಷವಾಗಿದ್ದರೆ, ಸಾಮರಸ್ಯ ಇರುತ್ತದೆ, ಎಲ್ಲಿ ಸಾಮರಸ್ಯವಿರುತ್ತದೆಯೋ ಅಲ್ಲಿ, ಶಾಂತಿ ಇರುತ್ತದೆ. ಈ ಶಾಂತಿ ಸುಸ್ಥಿರ ಅಭಿವೃದ್ಧಿಯ ಮೂಲಕ ಸಮಾಜ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಸಂಪ್ರದಾಯಗಳು ಮತ್ತು ಪರಿಸರದೊಂದಿಗಿನ ತಾಕಲಾಟದಲ್ಲೂ ಅಭಿವೃದ್ಧಿಯನ್ನು ಹೆಚ್ಚಾಗಿ ಕಾಣುವ ಕಾಲದಲ್ಲಿ, ಭೂತಾನ್‌ನಿಂದ ಜಗತ್ತು ಕಲಿಯಬೇಕಾದದ್ದು ಸಾಕಷ್ಟಿದೆ. ಇಲ್ಲಿ, ಅಭಿವೃದ್ಧಿ, ಪರಿಸರ ಮತ್ತು ಸಂಸ್ಕೃತಿ ಭಿನ್ನವಾಗಿಲ್ಲ ಬದಲಾಗಿ ಒಟ್ಟಾಗಿವೆ. ಜಲ ಸಂರಕ್ಷಣೆಯೇ ಆಗಿರಲಿ ಅಥವಾ ಸುಸ್ಥಿರ ಕೃಷಿಯೇ ಅಗಿರಲಿ ಅಥವಾ ನಮ್ಮ ಸಮಾಜವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಮಾಡುವುದೇ ಇರಲಿ ನಮ್ಮ ಯುವಜನರ ಸೃಜನಶೀಲತೆ, ಚೈತನ್ಯ ಮತ್ತು ಬದ್ಧತೆಯೊಂದಿಗೆ ನಮ್ಮ ರಾಷ್ಟ್ರಗಳು ಸುಸ್ಥಿರ ಪ್ರಗತಿಗಾಗಿ ಅಗತ್ಯವಾದ್ದೆಲ್ಲವನ್ನೂ ಸಾಧಿಸಬಹುದು.  

ಸ್ನೇಹಿತರೆ,

 

ಭೂತಾನ್ ಗೆ ಕಳೆದ ಬಾರಿ ನಾನು ಭೇಟಿ ನೀಡಿದ ವೇಳೆ, ಪ್ರಜಾಪ್ರಭುತ್ವದ ದೇವಾಲಯ ಭೂತಾನ್ ಸಂಸತ್ತಿಗೆ ಭೇಟಿ ನೀಡುವ ಗೌರವ ಸಿಕ್ಕಿತ್ತು. ಇಂದು, ಕಲಿಕೆಯ ಈ ದೇಗುಲಕ್ಕೆ ಭೇಟಿ ನೀಡುವ ಗೌರವ ಪಡೆದಿದ್ದೇನೆ. ಇಂದು ಸಭಿಕರಲ್ಲಿ ಭೂತಾನ್ ಸಂಸತ್ತಿನ ಗೌರವಾನ್ವಿತ ಸದಸ್ಯರೂ ಇದ್ದಾರೆ. ಅವರೆಲ್ಲ ಉಪಸ್ಥಿತಿಗೆ ನಾನು ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ. ಪ್ರಜಾಪ್ರಭುತ್ವ ಮತ್ತು ಶಿಕ್ಷಣ ನಮಗೆ ಮುಕ್ತವಾಗಿರುವ ಗುರಿ ನೀಡುತ್ತದೆ. ಒಂದರ ಹೊರತು ಮತ್ತೊಂದು ಪರಿಪೂರ್ಣವಾಗಲು ಸಾಧ್ಯವಿಲ್ಲ. ಎರಡೂ ನಮ್ಮ ಪೂರ್ಣ ಸಾಮರ್ಥ್ಯದ ಮತ್ತು ಉತ್ತಮ ಕಾರ್ಯ ಸಾಧನೆಗೆ ನೆರವಾಗುತ್ತವೆ. ಈ ಕಲಿಕಾ ಪೀಠ ಮತ್ತೊಮ್ಮೆ ನಮ್ಮ ಪ್ರಶ್ನಿಸಿ ತಿಳಿವ ಮನೋಭಾವವನ್ನು ಮುಕ್ತಗೊಳಿಸುತ್ತದೆ ಮತ್ತು ನಮ್ಮೊಳಗಿನ ವಿದ್ಯಾರ್ಥಿಯನ್ನು ಜೀವಂತವಾಗಿರಿಸುತ್ತದೆ.

 

 ಈ ಪ್ರಯತ್ನಗಳಲ್ಲಿ ಭೂತಾನ್ ಔನ್ನತ್ಯ ಪಡೆಯುತ್ತಿದ್ದಂತೆ, ನಿಮ್ಮ 130 ಕೋಟಿ ಭಾರತೀಯ ಸ್ನೇಹಿತರು ನಿಮ್ಮನ್ನು ಕೇವಲ ಹೆಮ್ಮೆ ಮತ್ತು ಸಂತೋಷದಿಂದಷ್ಟೇ ನೋಡಿ ಹುರಿದುಂಬಿಸುವುದಿಲ್ಲ. ಜೊತೆಗೆ ನಿಮ್ಮೊಂದಿಗೆ ಪಾಲುದಾರರಾಗುತ್ತಾರೆ, ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ನಿಮ್ಮಿಂದ ಕಲಿಯುತ್ತಾರೆ. ಈ ಮಾತುಗಳೊಂದಿಗೆ, ನಾನು ಭೂತಾನ್ ರಾಯಲ್ ವಿಶ್ವವಿದ್ಯಾಲಯದ ಕುಲಪತಿಗಳಾದ ಘನತೆವೆತ್ತ ದೊರೆ, ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಬೋಧಕವರ್ಗದವರಿಗೆ ಮತ್ತು ಯುವ ಮಿತ್ರರಾದ ನಿಮ್ಮೆಲ್ಲರಿಗೂ  ಧನ್ಯವಾದ ಅರ್ಪಿಸುತ್ತೇನೆ.

 

ನೀವೆಲ್ಲರೂ ನಿಮ್ಮ ಆಮಂತ್ರಣದೊಂದಿಗೆ ನನ್ನನ್ನು ಗೌರವಿಸಿದ್ದೀರಿ ಮತ್ತು ನನಗಾಗಿ ಇಷ್ಟೊಂದು ಸಮಯ, ಗಮನ ಮತ್ತು ವಾತ್ಸಲ್ಯವನ್ನು ನೀಡಿದ್ದೀರಿ. ನಾನು ಅತೀವ ಆನಂದ ಮತ್ತು ನಿಮ್ಮೆಲ್ಲರ ಧನಾತ್ಮಕ ಚೈತನ್ಯದೊಂದಿಗೆ ತವರಿಗೆ ಮರಳುತ್ತೇನೆ.

  

ತುಂಬಾ ತುಂಭಾ ಧನ್ಯವಾದಗಳು.

  

ತಶಿ ದೆಲೇಕ್! 

 

 

 

 

 

 

 

 

 

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Slovak nationals welcome PM Modi with Vande Mataram, folk dance performances

Media Coverage

Slovak nationals welcome PM Modi with Vande Mataram, folk dance performances
NM on the go

Nm on the go

Always be the first to hear from the PM. Get the App Now!
...
Prime Minister reaffirms commitment to building next-generation infrastructure for Viksit Bharat
June 16, 2026

The Prime Minister, Shri Narendra Modi has said that the last decade has witnessed record infrastructure upgrading. He has reiterated the Government’s commitment to building next-generation infrastructure for the people of the nation to realise the vision of a Viksit Bharat.

In a post on X, the Prime Minister said:

“The last decade has witnessed record infrastructure upgrading. We are committed to building next-generation infrastructure for the people of our nation to realise our vision of a Viksit Bharat.

#12YearsOfNayaBharatNirman”