"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆದಿ ಮಹೋತ್ಸವವು ಭಾರತದ ಬುಡಕಟ್ಟು ಪರಂಪರೆಯ ಭವ್ಯ ಚಿತ್ರಣವನ್ನು ಪ್ರಸ್ತುತಪಡಿಸುತ್ತಿದೆ"
"21 ನೇ ಶತಮಾನದ ಭಾರತವು 'ಸಬ್ಕಾ ಸಾಥ್ ಸಬ್ಕಾ ವಿಕಾಸ್" ಮಂತ್ರದೊಂದಿಗೆ ಮುನ್ನಡೆಯುತ್ತಿದೆ”
"ಬುಡಕಟ್ಟು ಸಮಾಜದ ಕಲ್ಯಾಣವು ನನಗೆ ವೈಯಕ್ತಿಕವಾದ ಸಂಬಂಧ ಮತ್ತು ಭಾವನೆಗಳ ವಿಷಯವಾಗಿದೆ"
"ನಾನು ಬುಡಕಟ್ಟು ಸಂಪ್ರದಾಯಗಳನ್ನು ಹತ್ತಿರದಿಂದ ನೋಡಿದ್ದೇನೆ, ಅವುಗಳೊಂದಿಗೆ ಬದುಕಿದ್ದೇನೆ ಮತ್ತು ಅವುಗಳಿಂದ ಬಹಳಷ್ಟು ಕಲಿತಿದ್ದೇನೆ"
"ದೇಶವು ತನ್ನ ಬುಡಕಟ್ಟು ವೈಭವದ ಬಗ್ಗೆ ಅಭೂತಪೂರ್ವ ಹೆಮ್ಮೆಯಿಂದ ಸಾಗುತ್ತಿದೆ"
"ದೇಶದ ಯಾವುದೇ ಮೂಲೆಯಲ್ಲಿರುವ ಬುಡಕಟ್ಟು ಮಕ್ಕಳ ಶಿಕ್ಷಣ ನನ್ನ ಆದ್ಯತೆಯಾಗಿದೆ"
" ಸರ್ಕಾರವು ವಂಚಿತರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದರಿಂದ ದೇಶವು ಹೊಸ ಎತ್ತರಕ್ಕೆ ಏರುತ್ತಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ರಾಷ್ಟ್ರೀಯ ಬುಡಕಟ್ಟು ಉತ್ಸವವಾದ ಆದಿ ಮಹೋತ್ಸವವನ್ನು ಉದ್ಘಾಟಿಸಿದರು. ಆದಿ ಮಹೋತ್ಸವವು ಬುಡಕಟ್ಟು ಸಂಸ್ಕೃತಿಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿದೆ ಮತ್ತು ಇದು ಬುಡಕಟ್ಟು ಸಂಸ್ಕೃತಿ, ಕರಕುಶಲತೆ, ಪಾಕಪದ್ಧತಿ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆಯ ಹುಮ್ಮಸ್ಸನ್ನು ಆಚರಿಸುತ್ತದೆ. ಇದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ ಲಿಮಿಟೆಡ್ (TRIFED) ನ ವಾರ್ಷಿಕ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ವಸ್ತುಪ್ರದರ್ಶನದ ಮಳಿಗೆಗಳನ್ನು ವೀಕ್ಷಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆದಿ ಮಹೋತ್ಸವವು ಭಾರತದ ಬುಡಕಟ್ಟು ಪರಂಪರೆಯ ಭವ್ಯವಾದ ಚಿತ್ರಣವನ್ನು ಪ್ರಸ್ತುತಪಡಿಸುತ್ತಿದೆ ಎಂದು ಹೇಳಿದರು. ಭಾರತದ ಬುಡಕಟ್ಟು ಸಮಾಜಗಳ ಪ್ರತಿಷ್ಠಿತ ಸ್ತಬ್ಧಚಿತ್ರದ ಬಗ್ಗೆ ಅವರು ಪ್ರಸ್ತಾಪಿಸಿದರು ಮತ್ತು ವಿವಿಧ ಪರಿಮಳಗಳು, ಬಣ್ಣಗಳು, ಅಲಂಕಾರಗಳು, ಸಂಪ್ರದಾಯಗಳು, ಕಲೆ ಮತ್ತು ಕಲಾ ಪ್ರಕಾರಗಳು, ಭಕ್ಷ್ಯಗಳು ಮತ್ತು ಸಂಗೀತವನ್ನು ವೀಕ್ಷಿಸುವ ಅವಕಾಶವನ್ನು ಪಡೆದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು. ಆದಿ ಮಹೋತ್ಸವವು ಭಾರತದ ವೈವಿಧ್ಯತೆ ಮತ್ತು ವೈಭವದ ಚಿತ್ರಣವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. "ಆದಿ ಮಹೋತ್ಸವವು ಅನಂತ ಆಕಾಶದಂತಿದೆ, ಇಲ್ಲಿ ಭಾರತದ ವೈವಿಧ್ಯತೆಯನ್ನು ಕಾಮನಬಿಲ್ಲಿನ ಬಣ್ಣಗಳಂತೆ ಬಿಂಬಿಸಲಾಗಿದೆ" ಎಂದು ಪ್ರಧಾನಿ ಹೇಳಿದರು. ಕಾಮನಬಿಲ್ಲಿನ ಬಣ್ಣಗಳಿಗೆ ಸಾಮ್ಯತೆಯನ್ನು ಹೇಳಿದ ಪ್ರಧಾನಮಂತ್ರಿಯವರು, ‘ಏಕ್ ಭಾರತ್ ಶ್ರೇಷ್ಠ ಭಾರತʼದ ಮಾಲೆಯಲ್ಲಿ ಅದರ ಅಸಂಖ್ಯಾತ ವೈವಿಧ್ಯಗಳನ್ನು ಪೋಣಿಸಿದಾಗ ರಾಷ್ಟ್ರದ ಶ್ರೇಷ್ಠತೆ ಮುನ್ನೆಲೆಗೆ ಬರುತ್ತದೆ ಮತ್ತು ಭಾರತವು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು. ಆದಿ ಮಹೋತ್ಸವವು ಭಾರತದ ವಿವಿಧತೆಯಲ್ಲಿ ಏಕತೆಗೆ ಶಕ್ತಿ ನೀಡುವುದರೊಂದಿಗೆ ಪರಂಪರೆಯೊಂದಿಗೆ ಅಭಿವೃದ್ಧಿಯ ಕಲ್ಪನೆಗೆ ಉತ್ತೇಜನ ನೀಡುತ್ತಿದೆ ಎಂದು ಒತ್ತಿ ಹೇಳಿದರು.

21ನೇ ಶತಮಾನದ ಭಾರತವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ದೂರ ಪ್ರದೇಶ ಎಂದು ಪರಿಗಣಿಸಿದ್ದನ್ನು ಈಗ, ಸರ್ಕಾರ ತಾನಾಗಿಯೇ ಮುಂದೆ ಹೋಗಿ ದೂರಪ್ರದೇಶ ಮತ್ತು ನಿರ್ಲಕ್ಷಿತ ಪ್ರದೇಶವನ್ನು ಮುಖ್ಯವಾಹಿನಿಗೆ ತರುತ್ತಿದೆ ಎಂದು ಪ್ರಧಾನಿ ಹೇಳಿದರು. ಆದಿ ಮಹೋತ್ಸವದಂತಹ ಕಾರ್ಯಕ್ರಮಗಳು ನಾಡಿನಲ್ಲಿ ಆಂದೋಲನವಾಗಿ ಮಾರ್ಪಟ್ಟಿದ್ದು, ಹಲವು ಕಾರ್ಯಕ್ರಮಗಳಲ್ಲಿ ತಾವೂ ಪಾಲ್ಗೊಂಡಿರುವುದಾಗಿ ಅವರು ಹೇಳಿದರು. "ಬುಡಕಟ್ಟು ಸಮಾಜದ ಕಲ್ಯಾಣವು ನನ್ನ ವೈಯಕ್ತಿಕ ಸಂಬಂಧ ಮತ್ತು ಭಾವನೆಗಳ ವಿಷಯವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು, ತಾವು ಸಾಮಾಜಿಕ ಕಾರ್ಯಕರ್ತನಾಗಿದ್ದ ದಿನಗಳಲ್ಲಿ ಬುಡಕಟ್ಟು ಸಮುದಾಯಗಳೊಂದಿಗಿನ ನಿಕಟ ಸಂಬಂಧವನ್ನು ಸ್ಮರಿಸಿದರು. "ನಾನು ನಿಮ್ಮ ಸಂಪ್ರದಾಯಗಳನ್ನು ಹತ್ತಿರದಿಂದ ನೋಡಿದ್ದೇನೆ, ಅವುಗಳೊಂದಿಗೆ ಬದುಕಿದ್ದೇನೆ ಮತ್ತು ಅವುಗಳಿಂದ ಕಲಿತಿದ್ದೇನೆ" ಎಂದು ಪ್ರಧಾನಮಂತ್ರಿ ಹೇಳಿದರು, ತಮ್ಮ ಜೀವನದ ಪ್ರಮುಖ ವರ್ಷಗಳನ್ನು ಉಮರ್ಗಾಮ್‌ ನಿಂದ ಅಂಬಾಜಿವರೆಗಿನ ಬುಡಕಟ್ಟು ಪ್ರದೇಶದಲ್ಲಿ ಕಳೆದಿದ್ದನ್ನು ಅವರು ನೆನಪಿಸಿಕೊಂಡರು. ಬುಡಕಟ್ಟು ಜನಾಂಗದ ಜೀವನವು ದೇಶ ಮತ್ತು ಅದರ ಸಂಪ್ರದಾಯಗಳ ಬಗ್ಗೆ ನನಗೆ ಸಾಕಷ್ಟು ಕಲಿಸಿದೆ ಎಂದು ಪ್ರಧಾನಿ ತಿಳಿಸಿದರು.

ದೇಶವು ತನ್ನ ಬುಡಕಟ್ಟು ವೈಭವದ ಬಗ್ಗೆ ಅಭೂತಪೂರ್ವ ಹೆಮ್ಮೆಯಿಂದ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ವಿದೇಶಿ ಗಣ್ಯರಿಗೆ ತಾವು ನೀಡುವ ಉಡುಗೊರೆಗಳಲ್ಲಿ ಬುಡಕಟ್ಟು ಉತ್ಪನ್ನಗಳು ಹೆಮ್ಮೆಯ ಸ್ಥಾನವನ್ನು ಕಂಡುಕೊಂಡಿವೆ ಎಂದು ಪ್ರಧಾನಿ ತಿಳಿಸಿದರು. ಬುಡಕಟ್ಟು ಸಂಪ್ರದಾಯವನ್ನು ಭಾರತವು ಜಾಗತಿಕ ವೇದಿಕೆಗಳಲ್ಲಿ ಭಾರತೀಯ ಹೆಮ್ಮೆ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿ ಪ್ರಸ್ತುತಪಡಿಸುತ್ತದೆ. ಬುಡಕಟ್ಟು ಜನಾಂಗದವರ ಜೀವನ ವಿಧಾನದಲ್ಲಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಗೆ ಭಾರತವು ಪರಿಹಾರಗಳನ್ನು ಹೇಳುತ್ತದೆ ಎಂದು ಪ್ರಧಾನಿ ಹೇಳಿದರು. ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದ ಬುಡಕಟ್ಟು ಸಮುದಾಯವು ಬಹಳಷ್ಟು ಸ್ಫೂರ್ತಿ ಮತ್ತು ಕಲಿಕೆಯನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಬುಡಕಟ್ಟು ಉತ್ಪನ್ನಗಳಿಗೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಬುಡಕಟ್ಟು ಉತ್ಪನ್ನಗಳು ಗರಿಷ್ಠ ಮಾರುಕಟ್ಟೆಯನ್ನು ತಲುಪಬೇಕು ಮತ್ತು ಅವುಗಳ ಮನ್ನಣೆ ಮತ್ತು ಬೇಡಿಕೆ ಹೆಚ್ಚಾಗಬೇಕು ಎಂದು ಅವರು ಹೇಳಿದರು. ಬಿದಿರಿನ ಉದಾಹರಣೆಯನ್ನು ನೀಡಿದ ಪ್ರಧಾನಿಯವರು, ಹಿಂದಿನ ಸರ್ಕಾರವು ಬಿದಿರು ಕೊಯ್ಲು ಮತ್ತು ಬಳಕೆಯನ್ನು ನಿಷೇಧಿಸಿತ್ತು. ಆದರೆ ಪ್ರಸ್ತುತ ಸರ್ಕಾರವು ಬಿದಿರನ್ನು ಹುಲ್ಲಿನ ವರ್ಗಕ್ಕೆ ಸೇರಿಸಿ ನಿಷೇಧವನ್ನು ರದ್ದುಗೊಳಿಸಿದೆ ಎಂದು ಹೇಳಿದರು. ವನ್ ಧನ್ ಮಿಷನ್ ಕುರಿತು ವಿವರಿಸಿದ ಪ್ರಧಾನಿ, ವಿವಿಧ ರಾಜ್ಯಗಳಲ್ಲಿ 3000 ಕ್ಕೂ ಹೆಚ್ಚು ವನ್ ಧನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಸುಮಾರು 90 ಕಿರು ಅರಣ್ಯ ಉತ್ಪನ್ನಗಳನ್ನು ಎಂಎಸ್‌ಪಿ ವ್ಯಾಪ್ತಿಗೆ ತರಲಾಗಿದೆ, ಇದು 2014 ರ ಸಂಖ್ಯೆಗೆ ಹೋಲಿಸಿದರೆ 7 ಪಟ್ಟು ಹೆಚ್ಚು. ಅದೇ ರೀತಿ, ದೇಶದಲ್ಲಿ ಬೆಳೆಯುತ್ತಿರುವ ಸ್ವಸಹಾಯ ಗುಂಪುಗಳ ಜಾಲವು ಬುಡಕಟ್ಟು ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 80 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಲ್ಲಿ 1.25 ಕೋಟಿ ಬುಡಕಟ್ಟು ಸದಸ್ಯರಿದ್ದಾರೆ ಎಂದು ಅವರು ಹೇಳಿದರು.

ಬುಡಕಟ್ಟು ಯುವಕರಿಗೆ ಬುಡಕಟ್ಟು ಕಲೆಗಳು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರದ ಕ್ರಮಗಳನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ವರ್ಷದ ಬಜೆಟ್ ಅನ್ನು ಉದಾಹರಿಸಿದ ಪ್ರಧಾನಿಯವರು, ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು, ಈ ಯೋಜನೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಅವರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಬೆಂಬಲದ ಜೊತೆಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

"ಬುಡಕಟ್ಟು ಮಕ್ಕಳು ದೇಶದ ಯಾವುದೇ ಮೂಲೆಯಲ್ಲಿರಲಿ, ಅವರ ಶಿಕ್ಷಣ ಮತ್ತು ಅವರ ಭವಿಷ್ಯ ನನ್ನ ಆದ್ಯತೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. 2004-2014ರ ನಡುವೆ 80 ಇದ್ದ ಏಕಲವ್ಯ ಮಾದರಿ ವಸತಿ ಶಾಲೆಗಳ ಸಂಖ್ಯೆಯು 2014ರಿಂದ 2022ರವರೆಗೆ 500 ಶಾಲೆಗಳಿಗೆ 5 ಪಟ್ಟು ಹೆಚ್ಚಾಗಿವೆ. ಈಗಾಗಲೇ 400ಕ್ಕೂ ಹೆಚ್ಚು ಶಾಲೆಗಳು ಕಾರ್ಯಾರಂಭ ಮಾಡಿದ್ದು, ಸುಮಾರು 1 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ವರ್ಷದ ಬಜೆಟ್ ಈ ಶಾಲೆಗಳಿಗೆ 38 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಘೋಷಿಸಿದೆ. ಬುಡಕಟ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ದ್ವಿಗುಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಭಾಷೆಯ ಅಡೆತಡೆಯಿಂದಾಗಿ ಬುಡಕಟ್ಟು ಯುವಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಯುವಕರು ತಮ್ಮ ಮಾತೃಭಾಷೆಯಲ್ಲಿ ಕಲಿಯುವ ಹೊಸ ಶಿಕ್ಷಣ ನೀತಿಯ ಬಗ್ಗೆ ಬೆಳಕು ಚೆಲ್ಲಿದರು. "ನಮ್ಮ ಬುಡಕಟ್ಟು ಮಕ್ಕಳು ಮತ್ತು ಯುವಜನರು ಅವರದೇ ಭಾಷೆಯಲ್ಲಿ ಅಧ್ಯಯನ ಮಾಡಿ ಪ್ರಗತಿ ಸಾಧಿಸುವುದು ಈಗ ವಾಸ್ತವವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಸರ್ಕಾರ ವಂಚಿತರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದರಿಂದ ದೇಶವು ಹೊಸ ಎತ್ತರಕ್ಕೆ ಏರುತ್ತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಕಟ್ಟ ಕಡೆಯಲ್ಲಿ ನಿಂತಿರುವ ವ್ಯಕ್ತಿಗೆ ದೇಶ ಆದ್ಯತೆ ನೀಡಿದಾಗ ಪ್ರಗತಿಯ ಹಾದಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಬುಡಕಟ್ಟು ಜನಾಂಗವನ್ನು ಬಹುಪಾಲು ಗುರಿ ಪ್ರದೇಶಗಳಾಗಿ ಹೊಂದಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳ ಯೋಜನೆಯನ್ನು ಉಲ್ಲೇಖಿಸುವ ಮೂಲಕ ಪ್ರಧಾನಮಂತ್ರಿ ಇದನ್ನು ವಿವರಿಸಿದರು. 2014 ಕ್ಕೆ ಹೋಲಿಸಿದರೆ ಈ ವರ್ಷದ ಬಜೆಟ್‌ನಲ್ಲಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾದ ಬಜೆಟ್ ಅನ್ನು 5 ಪಟ್ಟು ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು ಮತ್ತು “ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದಿಂದಾಗಿ ಯುವಕರು ಪ್ರತ್ಯೇಕತಾವಾದದ ಬಲೆಯಲ್ಲಿ ಸಿಲುಕಿದ್ದರು. ಈಗ ಇಂಟರ್ನೆಟ್ ಮತ್ತು ಮೂಲಸೌಕರ್ಯದ ಮೂಲಕ ಮುಖ್ಯವಾಹಿನಿಯೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಇದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ನ ತೊರೆಯಾಗಿದ್ದು, ಇದು ದೇಶದ ದೂರದ ಪ್ರದೇಶಗಳ ಪ್ರತಿಯೊಬ್ಬ ನಾಗರಿಕರನ್ನು ತಲುಪುತ್ತಿದೆ. ಇದು ಆದಿ ಮತ್ತು ಆಧುನಿಕತೆಯ ಸಂಗಮದ ಧ್ವನಿಯಾಗಿದ್ದು, ಅದರ ಮೇಲೆ ನವಭಾರತದ ಮಹಾಸೌಧವು ನಿಲ್ಲುತ್ತದೆ ಎಂದು ಅವರು ಹೇಳಿದರು.

ಕಳೆದ 8-9 ವರ್ಷಗಳಲ್ಲಿ ಬುಡಕಟ್ಟು ಸಮಾಜದ ಪಯಣದ ಬಗ್ಗೆ ಗಮನ ಸೆಳೆದ ಪ್ರಧಾನಿ, ದೇಶವು ಸಮಾನತೆ ಮತ್ತು ಸಾಮರಸ್ಯಕ್ಕೆ ಆದ್ಯತೆ ನೀಡುತ್ತಿರುವ ಬದಲಾವಣೆಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು. ಭಾರತ ಸ್ವಾತಂತ್ರ್ಯದ 75 ವರ್ಷಗಳಲ್ಲಿ ದೇಶದ ನಾಯಕತ್ವವು ಬುಡಕಟ್ಟು ಮಹಿಳೆಯ ಕೈಯಲ್ಲಿರುವುದು ಇದೇ ಮೊದಲು ಎಂದು ಅವರು ಹೇಳಿದರು. ಅವರು ರಾಷ್ಟ್ರಪತಿ  ಉನ್ನತ ಹುದ್ದೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಆದಿವಾಸಿಗಳ ಇತಿಹಾಸಕ್ಕೆ ದೇಶದಲ್ಲಿ ಪ್ರಥಮ ಬಾರಿಗೆ ಅರ್ಹವಾದ ಮನ್ನಣೆ ದೊರೆತಿದೆ ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮಾಜದ ಕೊಡುಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇತಿಹಾಸದ ಪುಟಗಳಲ್ಲಿ ತ್ಯಾಗ ಮತ್ತು ಶೌರ್ಯದ ಅದ್ಭುತ ಅಧ್ಯಾಯಗಳನ್ನು ಮುಚ್ಚಿಡಲು ದಶಕಗಳಿಂದ ನಡೆದ ಪ್ರಯತ್ನಗಳ ಬಗ್ಗೆ ವಿಷಾದಿಸಿದರು. ಗತಕಾಲದ ಈ ಮರೆತುಹೋದ ಅಧ್ಯಾಯಗಳನ್ನು ಮುನ್ನೆಲೆಗೆ ತರಲು ಅಮೃತ ಮಹೋತ್ಸವದಲ್ಲಿ ರಾಷ್ಟ್ರವು ಹೆಜ್ಜೆ ಇಟ್ಟಿದೆ ಎಂದ ಪ್ರಧಾನಮಂತ್ರಿ, ಮೊದಲ ಬಾರಿಗೆ, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು ದೇಶವು ಜನಜಾತೀಯ ಗೌರವ ದಿವಸ ಆಚರಿಸಲು ಪ್ರಾರಂಭಿಸಿದೆ ಎಂದರು. ಜಾರ್ಖಂಡ್‌ನ ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾಗೆ ಮೀಸಲಾಗಿರುವ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸುವ ಅವಕಾಶವನ್ನು ನೆನಪಿಸಿಕೊಂಡ ಅವರು, ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳು ವಿವಿಧ ರಾಜ್ಯಗಳಲ್ಲಿ ಆರಂಭವಾಗುತ್ತಿವೆ ಎಂದರು. ಇದು ಮೊದಲ ಬಾರಿಗೆ ನಡೆಯುತ್ತಿದ್ದರೂ, ಮುಂದಿನ ಹಲವು ತಲೆಮಾರುಗಳವರೆಗೆ ಅದರ ಪ್ರಭಾವ ಗೋಚರಿಸುತ್ತದೆ ಮತ್ತು ಅನೇಕ ಶತಮಾನಗಳವರೆಗೆ ದೇಶಕ್ಕೆ ಸ್ಫೂರ್ತಿ ಮತ್ತು ನಿರ್ದೇಶನವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

ನಾವು ನಮ್ಮ ಭೂತಕಾಲವನ್ನು ರಕ್ಷಿಸಬೇಕು, ವರ್ತಮಾನದಲ್ಲಿ ನಮ್ಮ ಕರ್ತವ್ಯ ಪ್ರಜ್ಞೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಮತ್ತು ಭವಿಷ್ಯಕ್ಕಾಗಿ ನಮ್ಮ ಕನಸುಗಳನ್ನು ನನಸಾಗಿಸಬೇಕು, ಈ ಸಂಕಲ್ಪವನ್ನು ಸಾಧಿಸಲು ಆದಿ ಮಹೋತ್ಸವದಂತಹ ಕಾರ್ಯಕ್ರಮಗಳು ಪ್ರಬಲ ಮಾಧ್ಯಮವಾಗಿವೆ ಎಂದು ಪ್ರಧಾನಿ ಹೇಳಿದರು. ಅಭಿಯಾನವು ಜನಾಂದೋಲನವಾಗಬೇಕು ಎಂದು ಒತ್ತಿ ಹೇಳಿದ ಅವರು ವಿವಿಧ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕರೆ ನೀಡಿದರು.

ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಶತಮಾನಗಳಿಂದಲೂ ಸಿರಿಧಾನ್ಯಗಳು ಬುಡಕಟ್ಟು ಜನಾಂಗದವರ ಆಹಾರದ ಭಾಗವಾಗಿವೆ ಎಂದು ಹೇಳಿದರು. ಇಲ್ಲಿನ ಉತ್ಸವದ ಆಹಾರ ಮಳಿಗೆಗಳಲ್ಲಿ ಶ್ರೀ ಅನ್ನದ ರುಚಿ ಮತ್ತು ಪರಿಮಳವಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬುಡಕಟ್ಟು ಪ್ರದೇಶಗಳ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಏಕೆಂದರೆ ಇದು ಜನರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದಲ್ಲದೆ ಬುಡಕಟ್ಟು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದರು. ಪ್ರತಿಯೊಬ್ಬರ ಪ್ರಯತ್ನದಿಂದ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀಮತಿ ರೇಣುಕ್ ಸಿಂಗ್ ಸುರುಟಾ ಮತ್ತು ಶ್ರೀ ಬಿಶ್ವೇಶ್ವರ ತುಡು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಡಾ ಭಾರತಿ ಪ್ರವೀಣ್ ಪವಾರ್ ಮತ್ತು ಟ್ರೈಫೆಡ್‌ ಅಧ್ಯಕ್ಷ ಶ್ರೀ ರಾಮಸಿಂಹ ರಥ್ವಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶದ ಬುಡಕಟ್ಟು ಜನಸಂಖ್ಯೆಯ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಮಂತ್ರಿಯವರು ಮುಂಚೂಣಿಯಲ್ಲಿದ್ದಾರೆ ಮತ್ತು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳಿಗೆ ಸೂಕ್ತ ಗೌರವವನ್ನು ನೀಡುತ್ತಿದ್ದಾರೆ. ಬುಡಕಟ್ಟು ಸಂಸ್ಕೃತಿಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ರಾಷ್ಟ್ರೀಯ ಬುಡಕಟ್ಟು ಉತ್ಸವವಾದ ‘ಆದಿ ಮಹೋತ್ಸವ’ವನ್ನು ಉದ್ಘಾಟಿಸಿದರು.

ಆದಿ ಮಹೋತ್ಸವವು ಬುಡಕಟ್ಟು ಸಂಸ್ಕೃತಿ, ಕರಕುಶಲತೆ, ಪಾಕಪದ್ಧತಿ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆಯ ಹುರುಪನ್ನು ಆಚರಿಸುತ್ತದೆ, ಇದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ ಲಿಮಿಟೆಡ್ (TRIFED) ನ ವಾರ್ಷಿಕ ಕಾರ್ಯಕ್ರಮವಾಗಿದೆ. ಫೆಬ್ರವರಿ 16 ರಿಂದ 27 ರವರೆಗೆ ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವು 200 ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೇಶದಾದ್ಯಂತದ ಬುಡಕಟ್ಟು ಜನಾಂಗದ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯನ್ನು ಪ್ರದರ್ಶಿಸುತ್ತದೆ. ಸುಮಾರು 1000 ಬುಡಕಟ್ಟು ಕುಶಲಕರ್ಮಿಗಳು ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕರಕುಶಲ ವಸ್ತುಗಳು, ಕೈಮಗ್ಗ, ಕುಂಬಾರಿಕೆ, ಆಭರಣಗಳು ಮುಂತಾದ ಸಾಮಾನ್ಯ ಆಕರ್ಷಣೆಗಳೊಂದಿಗೆ 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲಾಗುತ್ತದೆ. ಮಹೋತ್ಸವದಲ್ಲಿ ಬುಡಕಟ್ಟು ಜನಾಂಗದವರು ಬೆಳೆದ ಶ್ರೀ ಅನ್ನವನ್ನು ಪ್ರದರ್ಶಿಸಲು ವಿಶೇಷ ಗಮನ ನೀಡಲಾಗುತ್ತದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
With HPV vaccine rollout, AIIMS oncologist says it’s the beginning of the end for cervical cancer in India

Media Coverage

With HPV vaccine rollout, AIIMS oncologist says it’s the beginning of the end for cervical cancer in India
NM on the go

Nm on the go

Always be the first to hear from the PM. Get the App Now!
...
Prime Minister congratulates Jammu and Kashmir team on their first-ever Ranji Trophy victory
February 28, 2026

The Prime Minister has congratulated the Jammu and Kashmir team for their first-ever Ranji Trophy win.

The Prime Minister stated that this historic triumph reflects the remarkable grit, discipline, and passion of the team. Highlighting that it is a proud moment for the people of Jammu and Kashmir, he noted that the victory underscores the growing sporting passion and talent in the region.

The Prime Minister expressed hope that this feat will inspire many young athletes to dream big and play more.

The Prime Minister shared on X post;

"Congratulations to the Jammu and Kashmir team for their first ever Ranji Trophy win! This historic triumph reflects remarkable grit, discipline and passion of the team. It is a proud moment for the people of Jammu and Kashmir and it highlights the growing sporting passion and talent there. May this feat inspire many young athletes to dream big and play more."