ರಾಜ್ಯಸಭೆಯ ಉಪಸಭಾಪತಿಯಾಗಿ ಐತಿಹಾಸಿಕ ಮೂರನೇ ಅವಧಿಗೆ ಆಯ್ಕೆಯಾದ ಶ್ರೀ ಹರಿವಂಶ್ ಅವರಿಗೆ ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಐತಿಹಾಸಿಕ ಸತತ ಮೂರನೇ ಅವಧಿಗೆ ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದ ಶ್ರೀ ಹರಿವಂಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಐತಿಹಾಸಿಕ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಇದು ಶ್ರೀ ಹರಿವಂಶ್ ಅವರ ಮೇಲಿನ ಸದನದ ಆಳವಾದ ನಂಬಿಕೆ ಮತ್ತು ಸಂಸ್ಥೆಗೆ ಅವರು ತಂದಿರುವ ಅಮೂಲ್ಯ ಅನುಭವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವುದು ಅವರ ಅನುಭವ, ಎಲ್ಲರನ್ನೂ ಒಳಗೊಳ್ಳುವ ವಿಧಾನ ಮತ್ತು ಅವರ ಘನತೆಯ ಕಾರ್ಯ ಶೈಲಿಗೆ ಸದನದಿಂದ ಅನುಮೋದನೆಯ ಮುದ್ರೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ಅವರ ಜನ್ಮ ದಿನಾಚರಣೆಯೊಂದಿಗೆ ಹೊಂದಿಕೆಯಾಗುವ ಏಪ್ರಿಲ್ 17ರ ವಿಶೇಷ ಮಹತ್ವವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಚಂದ್ರಶೇಖರ್ ಅವರೊಂದಿಗಿನ ಶ್ರೀ ಹರಿವಂಶ್ ಅವರ ನಿಕಟ ಸಂಬಂಧದ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪಸಭಾಪತಿ ತಮ್ಮ ರಾಜಕೀಯ ಪಯಣದುದ್ದಕ್ಕೂ ಅವರ ಒಡನಾಡಿಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಅವರ ಜೀವನದ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ ಎಂದು ವಿವರಿಸಿದರು. “ಚಂದ್ರ ಶೇಖರ್ ಜಿ ಅವರ ಜನ್ಮ ವಾರ್ಷಿಕೋತ್ಸವದಂದು ನಿಮ್ಮ ಮೂರನೇ ಅವಧಿಯನ್ನು ಆರಂಭಿಸುತ್ತಿರುವುದು ಈ ಸಂದರ್ಭವನ್ನು ಮತ್ತಷ್ಟು ವಿಶೇಷ ಮತ್ತು ಅರ್ಥಪೂರ್ಣವಾಗಿಸುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಶ್ರೀ ಹರಿವಂಶ್ ಅವರ ಪತ್ರಿಕೋದ್ಯಮದ ವಿಶಿಷ್ಟ ವೃತ್ತಿಜೀವನವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ, ಉನ್ನತ ಗುಣಮಟ್ಟ ಮತ್ತು ಪ್ರಭಾವಶಾಲಿ ಬರವಣಿಗೆಗೆ ಅವರ ಬದ್ಧತೆಯನ್ನು ಶ್ಲಾಘಿಸಿದರು. ಗುಜರಾತ್‌ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿಯೂ ಸಹ ಅವರು ಶ್ರೀ ಹರಿವಂಶ್ ಅವರ ಲೇಖನಗಳನ್ನು ನಿಯಮಿತವಾಗಿ ಓದುತ್ತಿದ್ದರು ಎಂದು ಪ್ರಧಾನಮಂತ್ರಿ ಹಂಚಿಕೊಂಡರು. ಅದು ಆಳವಾದ ಅಧ್ಯಯನ ಮತ್ತು ದೃಢ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. “ಅವರ ಬರವಣಿಗೆಯಲ್ಲಿ ತೀಕ್ಷ್ಣವಾದ ಮೊನಚುಗಳಿದ್ದವು, ಆದರೆ ಅವರ ಮಾತು ಮತ್ತು ನಡವಳಿಕೆ ಸದಾ ಸೌಮ್ಯ ಮತ್ತು ವಿನಯಶೀಲವಾಗಿತ್ತು’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಶ್ರೀ ಹರಿವಂಶ್ ಅವರ ಪತ್ರಿಕೋದ್ಯಮ ದಿನಗಳಲ್ಲಿ 'ಹಮಾರಾ ಸಂಸದ್ ಕೈಸಾ ಹೋ' (ನಮ್ಮ ಸಂಸತ್ ಸದಸ್ಯರು ಹೇಗಿರಬೇಕು) ಎಂಬ ಅಂಕಣ ಸರಣಿಯ ಮೂಲಕ ಅವರ ಪ್ರವರ್ತಕ ಕಾರ್ಯವನ್ನು ಎತ್ತಿ ತೋರಿಸಿದ್ದರು ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಉಲ್ಲೇಖಿಸಿದರು. ಅವರ ಈ ಅನುಭವದ ಮೌಲ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಭಯ ಸದನಗಳ ಹೊಸ ಸಂಸತ್ ಸದಸ್ಯರು ಸಂಸದೀಯ ನಡವಳಿಕೆ, ಘನತೆ ಮತ್ತು ಜವಾಬ್ದಾರಿಗಳ ಕುರಿತು ಶ್ರೀ ಹರಿವಂಶ್ ಅವರ ಒಳನೋಟಗಳಿಂದ ಅಪಾರವಾಗಿ ಕಲಿತುಕೊಳ್ಳಬಹುದು ಎಂದು ಸೂಚಿಸಿದರು. “ಬಹುಶಃ ಅವರು ಒಂದು ದಿನ ಈ ಕುರ್ಚಿಯನ್ನು ಅಲಂಕರಿಸುತ್ತಾರೆ ಎಂದು ಆಗ ಅವರಿಗೆ ತಿಳಿದಿರಲಿಲ್ಲ, ಆದರೆ ಅವರ ಬರಹಗಳು ಈ ವಿಷಯವನ್ನು ಗಮನಾರ್ಹವಾಗಿ ಒಳಗೊಂಡಿವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಶ್ರೀ ಹರಿವಂಶ್ ಅವರ ಸಮಯಪಾಲನೆ, ಶಿಸ್ತುಬದ್ಧ ಜೀವನ ಮತ್ತು ಕರ್ತವ್ಯಗಳ ಬಗೆಗಿನ ಗಂಭೀರತೆಯಿಂದಾಗಿ ಅವರು ಎಲ್ಲರೂ ಒಪ್ಪುವಂತಹ ವ್ಯಕ್ತಿತ್ವದ ಹಿಂದಿನ ಪ್ರಮುಖ ಅಂಶಗಳಾಗಿ ಅನುಕರಣೀಯ ವ್ಯಕ್ತಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. ರಾಜ್ಯಸಭಾ ಸದಸ್ಯರಾದಾಗಿನಿಂದ ಶ್ರೀ ಹರಿವಂಶ್ ಅವರು ಸದನದಲ್ಲಿ ಪೂರ್ಣ ಸಮಯದ ಉಪಸ್ಥಿತಿಯನ್ನು ಕಾಯ್ದುಕೊಂಡಿದ್ದಾರೆ, ಪೀಠದ ಅಧ್ಯಕ್ಷತೆ ವಹಿಸದಿದ್ದರೂ ಸಹ ಅಧಿವೇಶನಗಳಿಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದರು.  ”ಇದು ಅವರ ಜವಾಬ್ದಾರಿಗಳ ಬಗ್ಗೆ ಅವರ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮಗೆಲ್ಲರಿಗೂ ಇದು ಒಂದು ಮಾದರಿಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.

ಸಂಸದೀಯ ಕರ್ತವ್ಯಗಳನ್ನು ಮೀರಿ, ವಿಶೇಷವಾಗಿ ಯುವಕರೊಂದಿಗೆ ಶ್ರೀ ಹರಿವಂಶ್ ಅವರ ಗಮನಾರ್ಹ ಸಾರ್ವಜನಿಕ ಒಳಗೊಳ್ಳುವಿಕೆಯ ಬಗ್ಗೆ ಪ್ರಧಾನಮಂತ್ರಿ ಗಮನ ಸೆಳೆದರು. ಆಕರ್ಷಕ ಅಂಕಿ ಅಂಶಗಳನ್ನು ಹಂಚಿಕೊಂಡ ಅವರು, 2018 ರಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶ್ರೀ ಹರಿವಂಶ್ ದೇಶಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ 350ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆಂದು ಬಹಿರಂಗಪಡಿಸಿದರು. ”ಇದು ಯುವಜನರೊಂದಿಗೆ ಸಂಪರ್ಕ ಸಾಧಿಸುವುದು, ವಿಷಯಗಳನ್ನು ಸಿದ್ಧಪಡಿಸುವುದು ಮತ್ತು ವಿಕಸಿತ ಭಾರತದ ದೂರದೃಷ್ಟಿಯತ್ತ ಅವರನ್ನು ಪ್ರೇರೇಪಿಸುವ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಬಗ್ಗೆ ಉಪಸಭಾಧ್ಯಕ್ಷರು ನೀಡಿರುವ ಹೆಚ್ಚಿನ ಗಮನ ಹರಿಸಿವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಭಾರತವು ಮೊದಲೇ ಅಪೇಕ್ಷಿತ ವೇಗದಲ್ಲಿ ಏಕೆ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ರಾಷ್ಟ್ರವು ಈಗ ಯಾವ ಅವಕಾಶಗಳನ್ನು ಹೊಂದಿದೆ ಎಂಬುದನ್ನು ವಿವರಿಸಲು ಶ್ರೀ ಹರಿವಂಶ್ ಐತಿಹಾಸಿಕ ಉಲ್ಲೇಖಗಳನ್ನು ಬಳಸುತ್ತಾರೆ ಎಂದು ಹೇಳಿದರು. ಎರಡು ಮತ್ತು ಮೂರನೇ ದರ್ಜೆ ನಗರಗಳಲ್ಲಿ ಸಾಹಿತ್ಯ ಉತ್ಸವಗಳಲ್ಲಿ ಶ್ರೀ ಹರಿವಂಶ್ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಇದು ಸಮಾಜದ ವಿವಿಧ ವರ್ಗಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಸ್ಫೂರ್ತಿ ನೀಡುತ್ತದೆ ಪ್ರಧಾನಮಂತ್ರಿ ತಿಳಿಸಿದರು.

1994ರಲ್ಲಿ ಶ್ರೀ ಹರಿವಂಶ್ ಅವರ ಮೊದಲ ಅಮೆರಿಕ ಭೇಟಿಯ ಕುತೂಹಲಕಾರಿ ಘಟನೆಯನ್ನು ಪ್ರಧಾನಮಂತ್ರಿ ಹಂಚಿಕೊಂಡರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಕಾರ, ಆ ಅಭಿವೃದ್ಧಿ ಹೊಂದಿದ ದೇಶದಲ್ಲಿ ನೀವು ಏನು ನೋಡಲು ಬಯಸುತ್ತೀರಿ ಎಂದು ಕೇಳಿದಾಗ, ಶ್ರೀ ಹರಿವಂಶ್ ಅವರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ್ದರು. ಅಂತಹ ಪ್ರಗತಿಗೆ ಯಾವ ರೀತಿಯ ಶಿಕ್ಷಣ ಮತ್ತು ಸಂಸ್ಕೃತಿಯು ಅನುವು ಮಾಡಿಕೊಟ್ಟಿತು ಎಂಬುದನ್ನು ಅರ್ಥಮಾಡಿಕೊಳ್ಳಲು. "ಆ ಪ್ರವಾಸದ ಸಮಯದಲ್ಲಿ ಅವರು ತಮ್ಮ ಸಂಪೂರ್ಣ ವಿವೇಚನಾ ಸಮಯವನ್ನು ಅಮೆರಿಕಾದ ವಿಶ್ವವಿದ್ಯಾಲಯಗಳನ್ನು ಅಧ್ಯಯನ ಮಾಡಲು ವ್ಯಯಿಸಿದರು, ಇದು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶೈಕ್ಷಣಿಕ ಶ್ರೇಷ್ಠತೆಗೆ ಅವರ ಆಳವಾದ ಬದ್ಧತೆ ಪ್ರತಿಬಿಂಬಿಸುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಇತರೆ ಸಂಸದರಿಗೆ ಮಾದರಿಯಾಗಿರುವ ಶ್ರೀ ಹರಿವಂಶ್ ಅವರು ಎಂಪಿಲಾಡ್ಸ್ (MPLADS) (ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ) ನಿಧಿಯ ಅನುಕರಣೀಯ ಬಳಕೆಯನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಉಪಾಧ್ಯಕ್ಷರು ಸ್ಥಾಪಿಸಿದ ವಿವಿಧ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ಪ್ರಧಾನಮಂತ್ರಿ ವಿವರಿಸಿ, ಅದರಲ್ಲಿ ಐಐಟಿ ಪಾಟ್ನಾದಲ್ಲಿ ಅಳಿವಿನಂಚಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ, ಬಿಹಾರದ ಪ್ರದೇಶಗಳ ಭೂಕಂಪನ ದುರ್ಬಲತೆಯನ್ನು ಪರಿಗಣಿಸಿ ಭೂಕಂಪ ಎಂಜಿನಿಯರಿಂಗ್ ಕೇಂದ್ರ ಮತ್ತು ಮಣ್ಣಿನ ಸವಕಳಿ ಸಮಸ್ಯೆಗಳನ್ನು ಪರಿಹರಿಸಲು ಪಾಟ್ನಾದ ಆರ್ಯಭಟ ಜ್ಞಾನ ವಿಶ್ವವಿದ್ಯಾಲಯದಲ್ಲಿ ನದಿ ಅಧ್ಯಯನ ಕೇಂದ್ರ ಸೇರಿವೆ ಎಂದರು. ”ದೀರ್ಘಕಾಲದ ಪರಿಣಾಮಕ್ಕಾಗಿ ಎಂಪಿಲಾಡ್ಸ್ ನಿಧಿಗಳನ್ನು ಕೇಂದ್ರೀಕೃತ ದಿಕ್ಕಿನಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ’’ ಎಂದು ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು.

ಚಂದ್ರಗುಪ್ತ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ವ್ಯಾಪಾರ ಇನ್ಕ್ಯುಬೇಷನ್ ಮತ್ತು ಇನ್ನೋವೇಶನ್ ಸೆಂಟರ್ ಮತ್ತು ಮಗಧ್ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ ಸೇರಿದಂತೆ ಶ್ರೀ ಹರಿವಂಶ್ ಅವರು ಹಣಕಾಸು ನೆರವು ನೀಡಿದ ಇತರ ಉಪಕ್ರಮಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ನಗರಕ್ಕೆ ಸ್ಥಳಾಂತರದ ಹೊರತಾಗಿಯೂ ಉಪ ಸಭಾಪತಿಯವರು ತಮ್ಮ ಹಳ್ಳಿಯ ಬೇರುಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, “ಹರಿವಂಶ್ ಜಿ ತಮ್ಮ ಹಳ್ಳಿಯೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದಾರೆ ಮತ್ತು ಅವರ ಸಮುದಾಯದ ಸಂತೋಷ ಮತ್ತು ದುಃಖಗಳಿಗೆ ನಿರಂತರವಾಗಿ ಕೊಡುಗೆ ನೀಡುತ್ತಾರೆ’’ ಎಂದು ಹೇಳಿದರು.

ಹೊಸ ಸಂಸತ್ತಿನ ಕಟ್ಟಡ ನಿರ್ಮಾಣದ ಸಮಯದಲ್ಲಿ ಶ್ರೀ ಹರಿವಂಶ್ ಅವರೊಂದಿಗೆ ಕಾರ್ಯನಿರ್ವಹಿಸಿದ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಅವರ ಸಹಯೋಗ ಎಷ್ಟು ಮೌಲ್ಯಯುತವಾಗಿತ್ತು ಎಂಬುದನ್ನು ವಿವರಿಸಿದರು. ಚರ್ಚೆಯ ಎರಡು ದಿನಗಳಲ್ಲಿ ಶ್ರೀ ಹರಿವಂಶ್ ಅವರು ಹೆಸರಿಸುವ ಸಮಾರಂಭಗಳು, ಕೊಠಡಿಗಳನ್ನು ಗುರುತಿಸುವುದು, ಕಲಾ ಗ್ಯಾಲರಿಗಳು ಮತ್ತು ವಿವಿಧ ದ್ವಾರಗಳಿಗೆ ಹೇಗೆ ಕಲ್ಪನೆಗಳನ್ನು ಪರಿಪೂರ್ಣಗೊಳಿಸುತ್ತಿದ್ದರು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿಕೊಂಡರು. “ಸಂಸತ್ ಭವನದ ನಿರ್ಮಾಣದ ಸಮಯದಲ್ಲಿ ಒಟ್ಟಾಗಿ ಕೆಲಸ ಮಾಡುವುದು ಅತ್ಯಂತ ಆನಂದದಾಯಕ ಮತ್ತು ಉತ್ಪಾದಕ ಅನುಭವವಾಗಿತ್ತು’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ರಾಜ್ಯ ಶಾಸನ ಸಭೆಗಳು, ವಿಧಾನ ಪರಿಷತ್ತುಗಳು ಮತ್ತು ಅವುಗಳ ಅಧ್ಯಕ್ಷತೆ ವಹಿಸುವ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ಸಹಾಯ ಮಾಡುವಲ್ಲಿ ಶ್ರೀ ಹರಿವಂಶ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಜಾಗತಿಕವಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಬಲವಾದ ಪ್ರಭಾವ ಬೀರುವಲ್ಲಿ ಕಾಮನ್‌ವೆಲ್ತ್ ಸಂಸದೀಯ ಸಂಘದಲ್ಲಿ ಅವರ ಸಕ್ರಿಯ ಪಾತ್ರವನ್ನು ಶ್ಲಾಘಿಸಿದರು. 21ನೇ ಶತಮಾನದ ಎರಡನೇ ತ್ರೈಮಾಸಿಕದಲ್ಲಿ ಸದನದ ನಿರ್ಣಾಯಕ ಪಾತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಮತ್ತು ಪೀಠಾಸೀನಾಧಿಕಾರಿಗಳ ಮಹತ್ವದ ಜವಾಬ್ದಾರಿಯನ್ನು ಒತ್ತಿ ಹೇಳುವ ಮೂಲಕ ಶ್ರೀ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How India, Australia clinched Uranium deal

Media Coverage

How India, Australia clinched Uranium deal
NM on the go

Nm on the go

Always be the first to hear from the PM. Get the App Now!
...
Prime Minister expresses grief over loss of lives due to boat capsizing in South 24 Parganas district of West Bengal
July 13, 2026
Prime Minister announces ex-gratia

The Prime Minister, Shri Narendra Modi has expressed deep grief over the loss of lives due to the capsizing of a boat in the South 24 Parganas district of West Bengal.

The Prime Minister conveyed his thoughts to the bereaved families in this hour of grief and prayed for the speedy recovery of the injured.

The Prime Minister announced that an ex-gratia of Rs. 2 lakh from the Prime Minister’s National Relief Fund (PMNRF) would be given to the next of kin of each deceased. The injured would be given Rs. 50,000.

The Prime Minister’s Office posted on X;

“The loss of lives due to the capsizing of a boat in the South 24 Parganas district of West Bengal is deeply painful. My thoughts are with the bereaved families in this hour of grief. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”