For the development of the nation, prosperity of farmers is essential: PM
We saw the green & white revolution. Time has come for the blue revolution & sweet revolution: PM Modi
Along with 'Jan Andolan', 'Jal Andolan' can help us for the future: PM Modi

 

ಆಗಸ್ಟ್ 24ರ ಈ ದಿನ ಅಂದರೆ ನಿಮ್ಮ ಸಂಸ್ಥೆಯ ಸಂಸ್ಥಾಪನಾ ದಿನವನ್ನು ನೀವು ಹೆಮ್ಮೆಯ ದಿನವನ್ನಾಗಿ ಆಚರಿಸುತ್ತಿದ್ದೀರಿ.
ರಾಷ್ಟ್ರ ನಿರ್ಮಾಣದಲ್ಲಿ ‘ಬೈಫ್’ ಸಂಸ್ಥೆಯು ವಹಿಸುತ್ತಿರುವ ಪಾತ್ರಕ್ಕಾಗಿ ನಾನು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇಂದು ನಿಮ್ಮ ನಡುವೆ ಖುದ್ದಾಗಿ ಬಂದು ನಿಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರೆ, ನಿಮ್ಮ ಹೊಸ ಅನುಭವಗಳನ್ನು ಕೇಳಿದ್ದರೆ, ನಿಮ್ಮಿಂದ ಹೊಸತನ್ನು ಕಲಿತಿದ್ದರೆ ನನಗೆ ವೈಯಕ್ತಿಕವಾಗಿ ಇನ್ನೂ ಹೆಚ್ಚು ಸಂತೋಷವಾಗಿರುತ್ತಿತ್ತು.

ಕೆಲವು ವರ್ಷಗಳ ಹಿಂದೆ ನೀವು ‘ವಾಡೀ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದು ನನಗೆ ನೆನಪಿದೆ. ನವಸಾರೀ ಮತ್ತು ವಲ್ ಸಾಡ್ ಗಳಲ್ಲಿ ನಿಮ್ಮ ಕಾರ್ಯಗಳನ್ನು ಬಹಳ ಹತ್ತಿರದಿಂದ ನೋಡಿದ್ದೆ. ಆದ್ದರಿಂದ ‘ಬೈಫ್’ ಸಂಸ್ಥೆಯ ಜೊತೆ ಭಾವನಾತ್ಮಕವಾಗಿ ನಾನು ಬಹಳ ಹತ್ತಿರದವನಾಗಿದ್ದೇನೆಂದು ಭಾವಿಸುತ್ತೇನೆ. ದೇಶದ ಹಲವು ರಾಜ್ಯಗಳಲ್ಲಿ ನೀವು ಯಾವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೀರೊ, ಅದು ಒಂದು ಸಂಸ್ಥೆಯ ಪಾಲಿಗೆ ಸಂತೋಷದ ವಿಷಯವಾಗಿದೆ.

ಇಂದಿನ ಈ ಸಮಾರಂಭದಲ್ಲಿ ಕೆಲವು ಪ್ರಶಸ್ತಿಗಳನ್ನು ಸಹ ಕೊಡಲಾಗಿದೆ. ಸನ್ಮಾನ ಸ್ವೀಕರಿಸಿದವರಲ್ಲಿ ಕೆಲವು ಸ್ವಸಹಾಯ ಗುಂಪುಗಳಿದ್ದರೆ, ಇನ್ನು ಕೆಲವರಿಗೆ ವೈಯಕ್ತಿಕ ಸಾಧನೆಗಾಗಿ ಪ್ರಶಸ್ತಿ ಸಂದಿದೆ. ಇವರೆಲ್ಲ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಝಾರ್ಖಂಡ್ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಇದೇ ರೀತಿ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರಲಿ ಎಂದು ನಾನು ಅವರಿಗೆ ಹಾರೈಸುತ್ತೇನೆ.

ಜೊತೆಗಾರರೆ, ಇದೇ ವರ್ಷ ಸಾಬರಮತಿ ಆಶ್ರಮ ಸ್ಥಾಪನೆಯಾಗಿ 100 ವರ್ಷಗಳಾಗಿವೆ. ಚಂಪಾರಣ್ ಸತ್ಯಾಗ್ರಹವು ಸಹ 100 ವರ್ಷ ಪೂರೈಸಿದೆ. ಇದೇ ವರ್ಷ ಸಾರ್ವಜನಿಕ ಗಣೇಶ ಉತ್ಸವ ಆರಂಭವಾಗಿ 125 ವರ್ಷಗಳಾಗಿವೆ. ದೇಶದ ಇತಿಹಾಸದಲ್ಲಿ ಈ ಮೂರೂ ಸಹ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ತೋರಿಸಿವೆ. ಜನರ ಪಾಲುಗೊಳ್ಳುವಿಕೆಯಿಂದ ಹೇಗೆ ಸಂಕಲ್ಪ ಸಿದ್ಧಿಯಾಗುತ್ತದೆ ಎಂಬುದರ ಪ್ರತೀಕವಾಗಿವೆ.
ಜನರ ಭಾಗವಹಿಸುವಿಕೆಯಿಂದ ಜನಕಲ್ಯಾಣವಾಗುತ್ತದೆ ಎನ್ನುವ ಈ ದೃಷ್ಟಿಕೋನವು ಭಾರತೀಯ ಕೃಷಿ ಕೈಗಾರಿಕೆ ಫೌಂಡೇಶನ್ ಗೆ ಆಧಾರವೂ ಆಗಿದೆ. ಇದು ಈಗಷ್ಟೇ 50 ವಸಂತಗಳನ್ನು ಪೂರೈಸುತ್ತಿರಬಹುದು. ಆದರೆ 1946ರಲ್ಲಿ ಶ್ರೀ ಮಣಿಭಾಯ್ ಅವರು ಮಹಾತ್ಮ ಗಾಂಧೀಜಿ ಅವರ ಜೊತೆ ಉರುಲೀಕಂಚನ್ ಎಂಬ ಹಳ್ಳಿಗೆ ಹೋದಾಗಲೇ ಇದರ ಶಂಕುಸ್ಥಾಪನೆಯಾಗಿತ್ತು. ಗಾಂಧೀಜಿ ಅವರ ಪ್ರೇರಣೆಯಿಂದಲೇ ಈ ಇಡೀ ಕ್ಷೇತ್ರಕ್ಕೆ ಕಾಯಕಲ್ಪ ನೀಡಬೇಕೆಂದು ಮಣಿಭಾಯ್ ಅವರು ಸಂಕಲ್ಪ ಮಾಡಿದ್ದರು. ಗುಜರಾತ್ ನ ಗೀರ್ ನಿಂದ ಹಸುಗಳನ್ನು ಇಲ್ಲಿಗೆ ತರುವ ಮೂಲಕ ಅವರು ಇದನ್ನು ಆರಂಭಿಸಿದ್ದರು.

ನಮ್ಮ ಹಳ್ಳಿಗಳಲ್ಲಿ ಇರುವ ಸಾಂಪ್ರದಾಯಿಕ ಜ್ಞಾನ ಮತ್ತು ವಿಜ್ಞಾನವನ್ನು ಆಧುನಿಕ ತಂತ್ರಜ್ಞಾನದ ಜೊತೆಗೂಡಿಸಿ ರೈತನ ಆದಾಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ನಿಮ್ಮ ಸಂಸ್ಥೆಯು ಸಾಧಿಸಿ ತೋರಿಸಿದೆ.
ಜೊತೆಗಾರರೆ, ನಮ್ಮ ಹಳ್ಳಿಗಳಲ್ಲಿ ವಾಸಿಸುವ ರೈತರು ಸಶಕ್ತರಾಗುವುದು ನಮ್ಮ ದೇಶದ ಸಮತೋಲನದ ಪ್ರಗತಿಗೆ ಬಹಳ ಅವಶ್ಯಕವಾಗಿದೆ. ಒಬ್ಬ ಸಶಕ್ತ ರೈತನಿಲ್ಲದೆ ನವಭಾರತದ ಕನಸು ಸಾಕಾರಗೊಳ್ಳುವುದಿಲ್ಲ, ಹಾಗಾಗಿ ಸರ್ಕಾರವು 2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನಿಟ್ಟು ಕೊಂಡು ಕೆಲಸ ಮಾಡುತ್ತಿದೆ. ಆದ್ದರಿಂದ ಕೃಷಿ ಯೋಜನೆಗಳನ್ನು ಜಾರಿಗೆ ತರುವ ವಿಧಾನವನ್ನು ಬದಲಿಸಿಕೊಂಡು ಅವರನ್ನು ಉತ್ಪಾದಿತ ಕೇಂದ್ರಿತರನ್ನಾಗಿಸುವುದರ ಜೊತೆಗೆ ಆದಾಯ ಕೇಂದ್ರಿತರನ್ನಾಗಿ ಸಹ ಮಾಡಲಾಗಿದೆ.

ಪ್ರಸ್ತುತ ಸರ್ಕಾರವು ಬೀಜದಿಂದ ಮಾರುಕಟ್ಟೆಯವರೆಗೆ ರೈತನ ಜೊತೆಗೇ ನಿಂತಿದೆ. ಹನಿ ಹನಿ ನೀರನ್ನೂ ಸದ್ಭಳಕೆ ಮಾಡಿಕೊಳ್ಳುವುದಕ್ಕೆ ಒತ್ತು ಕೊಡಲಾಗಿದೆ. ಸಾವಯವ ಕೃಷಿ ಮತ್ತು ಬೆಳೆ ವೈವಿಧ್ಯತೆಯನ್ನು ಹೆಚ್ಚಿಸುವುದರತ್ತ ಗಮನ ಕೊಡಲಾಗುತ್ತಿದೆ. ರೈತರು ಮಣ್ಣಿನ ಆರೋಗ್ಯದ ಮಾಹಿತಿ ಪಡೆಯುವ ಸಲುವಾಗಿ ಇದುವರೆಗೆ 9 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು (ಸಾಯಿಲ್ ಹೆಲ್ತ್ ಕಾರ್ಡ್) ವಿತರಿಸಲಾಗಿದೆ.

ಇ- ನಾಮ್ ( ಇ- ಎನ್.ಎ.ಎಮ್) ಯಡಿ ದೇಶಾದ್ಯಂತ 500ಕ್ಕೂ ಅಧಿಕ ಕೃಷಿ ಮಂಡಿಗಳಲ್ಲಿ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ‘ಪ್ರಧಾನ ಮಂತ್ರಿ ರೈತ ಸಂಪದ ಯೋಜನೆ’ ಸಹ ಆರಂಭವಾಗಿದೆ. ದೇಶದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆಯ ಸಮಸ್ಯೆಯನ್ನು ನಿಭಾಯಿಸುವುದು ಮತ್ತು ಆಹಾರ ಸಂಸ್ಕರಣೆಗೆ ಒತ್ತು ಕೊಡುವುದು ಇದರ ಉದ್ದೇಶವಾಗಿದೆ.

ಪ್ರಧಾನ ಮಂತ್ರಿ ವಿಮೆ ಯೋಜನೆಯ ಮೂಲಕ ಯಾವುದೇ ಕಾರಣಕ್ಕೆ ರೈತರ ಫಸಲು ಹಾಳಾದರೆ ಅವರ ಜೀವನಕ್ಕೆ ಆಪತ್ತು ಬಾರದಂತೆ ಎಚ್ಚರ ವಹಿಸಲಾಗಿದೆ. ರೈತರನ್ನು ಲೇವಾದೇವಿಗಳ ಹಿಡಿತದಿಂದ ಪಾರು ಮಾಡಲು ಎಲ್ಲಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ.

ರೈತರು ವ್ಯವಸಾಯಕ್ಕೆ ಸಂಬಂಧಿಸಿದ ಚಿಂತೆಗಳಿಂದ ಹೊರಬರಲು, ಅವರ ಖರ್ಚು ಕಡಿಮೆಯಾಗಲು ಮತ್ತು ಆದಾಯ ಹೆಚ್ಚಿಸಲು ಸರ್ಕಾರವು ಈ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನೀವು ನೋಡಿದ್ದೀರಿ. ನಮ್ಮ ದೇಶದ ಅನ್ನದಾತರು ಚಿಂತೆಯಿಂದ ಮುಕ್ತರಾದರೆ ದೇಶವೂ ಪ್ರಗತಿಯ ಹೊಸ ಎತ್ತರಕ್ಕೇರುತ್ತದೆ.

‘ಬೈಫ್’ ಸಂಸ್ಥೆಯು ಬಹಳ ಸೇವಾ ಮನೋಭಾವದಿಂದ ಈ ಕಾರ್ಯದಲ್ಲಿ ತೊಡಗಿದೆ. ಆದರೆ ನಾನು ನಿಮ್ಮಲ್ಲಿ ಇಂದು ಕೆಲವು ಹೊಸ ವಿಚಾರಗಳ ಬೀಜ ಬಿತ್ತಲು ಬಯಸುತ್ತೇನೆ. ಇವು ಒಬ್ಬ ತಜ್ಞರಿಗೆ ಅರ್ಪಿಸುತ್ತಿರುವ ಮನವಿಯಂತಿದೆ.ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಲಕ್ಷಾಂತರ ಮಹಿಳೆಯರನ್ನು ಬೈಫ್ ಸಂಸ್ಥೆಯು ಸಬಲೀಕರಣಗೊಳಿಸುತ್ತಿರುವುದು ನನಗೆ ತಿಳಿದಿದೆ. ಆದರೆ ಇದನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ಒಂದು ವರದಿಯ ಪ್ರಕಾರ ದೇಶದ ಪಶುಪಾಲನೆ ಕ್ಷೇತ್ರವನ್ನು ಸುಮಾರು ಶೇ.70 ಮಹಿಳೆಯರು ನಿಭಾಯಿಸುತ್ತಿದ್ದಾರೆ. ಪಶುಗಳಿಗೆ ಮೇವಿನ ವ್ಯವಸ್ಥೆ ಮಾಡುವ, ನೀರು ಕೊಡುವ, ಔಷಧಿ ನೀಡುವ, ಹೀಗೆ ಪಶುಪಾಲನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಪ್ರಮುಖವಾಗಿ ಮಹಿಳೆಯರೇ ಮಾಡುತ್ತಿದ್ದಾರೆ.

ಅಂದರೆ ಒಂದು ರೀತಿಯಲ್ಲಿ ದೇಶದ ಪಶುಪಾಲನೆಯು ಸಂಪೂರ್ಣವಾಗಿ ಮಹಿಳೆಯರ ಕೌಶಲವನ್ನು ಅವಲಂಬಿಸಿದೆ. ಆದ್ದರಿಂದ ಸ್ವಸಹಾಯ ಗುಂಪುಗಳಿಗೆ ಪಶು ವೈದ್ಯಕೀಯ ಶಿಕ್ಷಣ, ಪಶು ಸಂಶೋಧನೆ ಮುಂತಾದುವುಗಳಲ್ಲಿ ವಿಶೇಷ ತರಬೇತಿ ನೀಡುವುದು ಇಂದಿನ ಪ್ರಮುಖ ಅವಶ್ಯಕತೆಯಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಮಹಿಳೆಯರು ಪರಿಣಿತರಾದಷ್ಟೂ ದೇಶದ ಪಶುಸಂಪತ್ತು ಬಲಿಷ್ಠವಾಗುವುದು ಮತ್ತು ಮಹಿಳೆಯರಿಗೂ ಒಳ್ಳೆಯದಾಗುವುದು.‘ಬೈಫ್’ನಂತಹ ಸಂಸ್ಥೆಯು ಇದಕ್ಕಾಗಿ ಹೆಚ್ಚು ಹೆಚ್ಚು ಮಹಿಳೆಯರನ್ನು ಪ್ರೇರೇಪಿಸಬಹುದು ಮತ್ತು ಅವರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಆರಂಭಿಸಬಹುದು.

ಜೊತೆಗಾರರೆ, ನಮ್ಮ ದೇಶದಲ್ಲಿ ಪಶುಗಳಿಗೆ ಬರುತ್ತಿರುವ ರೋಗರುಜಿನಗಳಿಂದಾಗಿ ಪ್ರತಿವರ್ಷ 40 ಸಾವಿರ ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ. ಇದರಿಂದ ಪಾರಾಗಲು ಕೆಲವು ರಾಜ್ಯಗಳಲ್ಲಿ ಪಶುಗಳ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯಿಂದ ಹಿಡಿದು ಹಲ್ಲುಗಳನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಅದರೆ ಇಂತಹ ಪಶು ಆರೋಗ್ಯ ಮೇಳಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಅವಶ್ಯಕತೆಯಿದೆ. ‘ಬೈಫ್’ನಂತಹ ಸಂಸ್ಥೆಗಳು ದೇಶಾದ್ಯಂತ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪಶು ಆರೋಗ್ಯ ಮೇಳಗಳನ್ನು ಏರ್ಪಡಿಸುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸಬಹುದು.

ನಿಮ್ಮ ಸಂಸ್ಥೆಯು ಈಗಾಗಲೇ 15 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ ಮತ್ತು ನಿಮ್ಮ ಸಾಮರ್ಥ್ಯವನ್ನು ಇಡೀ ದೇಶಕ್ಕೆ ವಿಸ್ತರಿಸುವ ಅಗತ್ಯವಿದೆ ಎಂಬ ಕಾರಣಕ್ಕೆ ನಾನು ನಿಮ್ಮಲ್ಲಿ ವಿಶೇಷವಾಗಿ ಮನವಿ ಮಾಡುತ್ತಿದ್ದೇನೆ. ದೇಶದ ಈಶಾನ್ಯ ರಾಜ್ಯಗಳು ಸಹ ‘ಬೈಫ್’ ತಮ್ಮ ನೆಲದಲ್ಲಿ ಹೆಜ್ಜೆ ಇಡಲಿ ಎಂದು ಕಾಯುತ್ತಿವೆ. ದೇಶದ ಈಶಾನ್ಯ ರಾಜ್ಯಗಳನ್ನು ನಾನು ‘ಅಷ್ಟಲಕ್ಷ್ಮಿ’ಯರು ಎಂದು ಕರೆಯುತ್ತೇನೆ. ಅಲ್ಲಿ ಸಾವಯವ ಕೃಷಿಯ ಸಾಧ್ಯತೆಗಳು ಬಹಳ ಇವೆ. ನಿಮ್ಮ ಅನುಭವಗಳಿಂದ ಅವರಿಗೆ ವಿಶೇಷ ಪ್ರಯೋಜನ ದೊರಕಬಹುದು.

ಇದೇ ರೀತಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಕೃಷಿಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಾವಿರಾರು ಪ್ರಭೇದಗಳಿವೆ. ವಿಶ್ವದೆಲ್ಲೆಡೆ ಇವುಗಳಿಗೆ ಬೇಡಿಕೆಯಿದೆ. ಆದರೆ ಬೇಡಿಕೆ ಮತ್ತು ಪೂರೈಕೆಯ ನಡುವೆ ಬಹಳ ಅಂತರವಿದೆ. ಸರ್ಕಾರ, ಪ್ರಗತಿಪರ ರೈತರು ಮತ್ತು ಬೈಫ್ ನಂತಹ ಸಂಸ್ಥೆಗಳು ಈ ಕೃಷಿಯ ಜೊತೆಗೆ ಇವುಗಳನ್ನು ಮಾರುಕಟ್ಟೆಗೆ ಪೂರೈಸುವುದು ಹೇಗೆಂದು ಸಂಪೂರ್ಣ ಮಾಹಿತಿ ನೀಡುವ ಕಾರ್ಯವನ್ನು ಮಾಡಬಹುದು.

ಜೊತೆಗಾರರೆ, ನಮ್ಮ ದೇಶವು ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಗಳಿಂದ ಪರಿಚಿತವಾಗಿದೆ. ನೀಲಿ ಕ್ರಾಂತಿಯ ಮೂಲಕ ನಮ್ಮ ಮೀನುಗಾರ ಸೋದರರ ಜೀವನದಲ್ಲಿ ಬದಲಾವಣೆ ತರುವ, ಸಿಹಿ ಕ್ರಾಂತಿ ಅಂದರೆ ಜೇನು ಸಾಕಾಣಿಕೆ ಮತ್ತು ಜೇನು ಉತ್ಪಾದನೆಯ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆಯಾಗಿದೆ. ಹಸಿರು ಕ್ರಾಂತಿ, ಶ್ವೇತ ಕ್ರಾಂತಿಯ ಜೊತೆಗೆ ಈಗ ನಾವು ನೀಲಿ ಕ್ರಾಂತಿ, ಸಿಹಿ ಕ್ರಾಂತಿ ಮತ್ತು ಜಲ ಕ್ರಾಂತಿಯನ್ನು ಸಹ ಸೇರಿಸುವುದಕ್ಕೆ ಕೆಲಸ ಮಾಡುತ್ತಿದ್ದೇವೆ. ಕೃಷಿಯೆಂದರೆ ಕೇವಲ ಗೋದಿ, ಧಾನ್ಯಗಳು ಮತ್ತು ಸಾಸಿವೆಯಂತಹವನ್ನು ಬೆಳೆಯುವುದಲ್ಲ. ಸಾಂಪ್ರದಾಯಿಕ ಕೃಷಿಯ ಜೊತೆಗೆ ಕೃಷಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳತ್ತಲೂ ಗಮನ ಕೊಡಲಾಗುತ್ತದೆ. ಇವು ರೈತರ ಆದಾಯ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಉದಾಹರಣೆಗೆ ಜೇನು ಸಾಕಣೆಯನ್ನೇ ತೆಗೆದುಕೊಳ್ಳಿ. ಒಂದು ಸಂಶೋಧನೆಯ ಪ್ರಕಾರ ಸಾಂಪ್ರದಾಯಿಕ ಕೃಷಿ ಮಾಡುತ್ತಿರುವ ರೈತ 50 ಜೇನುಗೂಡುಗಳ ಸಣ್ಣದೊಂದು ಯೂನಿಟ್ ಹಾಕಿಕೊಂಡು ಪ್ರತಿವರ್ಷ ಎರಡು ಲಕ್ಷ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ಗಳಿಸಬಹುದು. ಜೇನುಗಳು ಜೇನುತುಪ್ಪ ನೀಡುವುದರ ಜೊತೆಗೆ ಪರಾಗಸ್ಪಶ್ಪ ಕ್ರಿಯೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ.

ಜೇನು ಸಾಕಣೆ, ಮೀನು ಸಾಕಾಣಿಕೆ, ಕಬ್ಬು ಬೆಳೆಯ ಉಳಿಕೆಯಿಂದ ಇಥೆನಾಲ್ ಉತ್ಪಾದಿಸುವುದು ಹೀಗೆ ಇವೆಲ್ಲವುಗಳಿಂದ ಸಮಾಜದ ಬೇಡಿಕೆಯನ್ನು ಪೂರೈಸಬಹುದು. ಆದ್ದರಿಂದ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿರುವ ರೈತರು ಇಂತಹ ಉಪ ಆದಾಯಗಳತ್ತ ಗಮನ ಹರಿಸುವಂತೆ ಜಾಗೃತಿ ಮೂಡಿಸುವ ಮತ್ತು ಅವರಿಗೆ ಸಹಾಯ ಮಾಡುವ ಕೆಲಸವನ್ನು ‘ಬೈಫ್’ ಸಂಸ್ಥೆ ಚೆನ್ನಾಗಿ ಮಾಡಬಲ್ಲದು.
ಜೊತೆಗಾರರೆ, ಮಹಾರಾಷ್ಟ್ರದ ವಿದರ್ಭ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಆಂಧ್ರ ಪ್ರದೇಶದ ಕೆಲವು ಭಾಗಗಳು, ಉತ್ತರ ಪ್ರದೇಶದ ಬುಂದೇಲ್ ಖಂಡ್ ನಂತಹ ಕ್ಷೇತ್ರಗಳಲ್ಲಿ ರೈತರು ನೀರಿನ ಕೊರತೆಯಿಂದ ಸಂಕಷ್ಟಕೊಳ್ಳಗಾಗಿದ್ದಾರೆ.

ಸರ್ಕಾರದ ವತಿಯಿಂದ ನೀರಿನ ಕೊರತೆಯನ್ನು ದೂರ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯಡಿ ಇಂತಹ 99 ಯೋಜನೆಗಳನ್ನು ಹಾಕಿಕೊಂಡಿದ್ದರೂ ಬಹಳ ಸಮಯದಿಂದ ಅಪೂರ್ಣವಾಗಿ ಉಳಿದಿದ್ದವು. ಇವುಗಳಲ್ಲಿ 21 ಯೋಜನೆಗಳು ಈ ವರ್ಷ ಪೂರ್ತಿಯಾಗುತ್ತಿವೆ. ಇದರ ಜೊತೆಜೊತೆಗೆ ಪ್ರತಿ ಹನಿಯನ್ನೂ ನಾವು ಸದ್ಭಳಕೆ ಮಾಡಿಕೊಳ್ಳುವುದಕ್ಕೆ ಒತ್ತು ಕೊಡುತ್ತಿದ್ದೇವೆ. ಹನಿ ನೀರಾವರಿ, ಸೂಕ್ಷ್ಮ ನೀರಾವರಿ ಮತ್ತು ಬೆಳೆ ವೈವಿಧ್ಯತೆ ಸಹ ಇದರಲ್ಲಿ ಸೇರುತ್ತದೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶೇಕಡಾ 60ಕ್ಕಿಂತ ಹೆಚ್ಚು ಹಣವನ್ನು ಸರ್ಕಾರವು ಜಲ ಸಂರಕ್ಷಣೆ ಮತ್ತು ನೀರಿನ ವ್ಯವಸ್ಥೆಗಾಗಿಯೇ ಖರ್ಚು ಮಾಡುತ್ತಿದೆ.

ಆದರೆ ಸೋದರ ಮತ್ತು ಸೋದರಿಯರೆ, ರೈತರು ನಮ್ಮ ಈ ಪ್ರಯತ್ನಗಳೊಂದಿಗೆ ಕೈಜೋಡಿಸುವವರೆಗೆ ನಮಗೆ ಇದರಲ್ಲಿ ಯಶಸ್ಸು ಸಿಗುವುದಿಲ್ಲ. ಇಂದಿನ ಈ ಕಾರ್ಯಕ್ರಮಕ್ಕೆ ಹಿವರೇ ಬಾಜಾರ್ ನಿಂದ ಶ್ರೀ ಪೋಪಟ್ ರಾವ್ ಪವಾರ್ ಸಹ ಬಂದಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಒಬ್ಬರು ಮತ್ತೊಬ್ಬರ ಜೊತೆಗೂಡಿ, ಪರಸ್ಪರರ ಹಿತವನ್ನು ಗಮನದಲ್ಲಿಟ್ಟುಕೊಂಡು ನೀರಿನ ಸದ್ಭಳಕೆಯನ್ನು ಯಾವ ರೀತಿ ಮಾಡಬಹುದು ಮತ್ತು ಇದರಿಂದ ನಮ್ಮ ನೀರಿನ ಬಳಕೆಯ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಮತ್ತು ನಮ್ಮ ಅಂತರ್ಜಲವನ್ನು ಸುಸ್ಥಿರ ವಿಧಾನದ ಮೂಲಕ ಹೇಗೆ ಬಳಸಬಹುದು ಎಂಬುದಕ್ಕೆ ಹಿವರೇ ಬಾಜಾರ್ ಒಂದು ಉತ್ತಮ ಉದಾಹರಣೆಯಾಗಿದೆ. ‘ಬೈಫ್’ ಕೆಲಸ ಮಾಡುತ್ತಿರುವ ಗ್ರಾಮಗಳಲ್ಲಿ ‘ಜನಾಂದೋಲನ ಮತ್ತು ಜನಾಂದೋಲನ’ದ ಗುರಿಯನ್ನು ಮುಟ್ಟುತ್ತದೆ ಎಂದು ನನಗೆ ಭರವಸೆಯಿದೆ.

ಇವಲ್ಲದೆ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ಮತ್ತು ಬ್ಯಾಂಕುಗಳಿಂದಲೇ ಸಾಲ ಪಡೆಯಲು ಪ್ರೋತ್ಸಾಹಿಸಿಯೂ ಈ ಪ್ರದೇಶಗಳ ರೈತರ ಜೀವನವನ್ನು ಸುಲಭಗೊಳಿಸುವಲ್ಲಿ ನೀವು ನೆರವಾಗಬಹುದು.
ಸೋದರ ಮತ್ತು ಸೋದರಿಯರೆ, ರಾಷ್ಟ್ರ ಸಂತ ತುಕ್ ಡೋಜಿ ಮಹಾರಾಜ್ ಅವರು ‘ಗ್ರಾಮಗೀತ’ ದಲ್ಲಿ ಹೀಗೆ ಬರೆದಿದ್ದಾರೆ-

“ಗ್ರಾಮಸುಧಾರಣೇಚಾ ಮೂಲಮಂತ್ರ್, ಸಜ್ಜವಾರಿನೀ ವ್ಹಾವೇ ಎಕತ್ರ್
ಸಂಘಟನ್ ಹೇವಿ ಶಕ್ತಿಚೇ ಸೂತ್ರ್, ಗ್ರಾಮರಾಜ್ಯ್ ನಿರ್ಮಾಣ್ ಕರೀ

ಅಂದರೆ ಗ್ರಾಮ ಸುಧಾರಣೆಯು ಮೂಲಮಂತ್ರವಾಗಿದೆ. ಎಲ್ಲ ಜನರೂ ಒಗ್ಗಟ್ಟಾಗಿ, ಸಂಘಟನಾ ಶಕ್ತಿಯೊಂದಿಗೆ ಕೆಲಸ ಮಾಡಬೇಕು. ಆಗಲೇ ಗ್ರಾಮ ರಾಜ್ಯದ ನಿರ್ಮಾಣವಾಗುವುದು. ಇದೇ ಮಂತ್ರವನ್ನು ಮಹಾತ್ಮಾ ಗಾಂಧೀಜಿಯವರು ನೀಡಿದ್ದರು, ಇದನ್ನೇ ಮಣಿಭಾಯ್ ದೇಸಾಯಿ ಅವರು ಪಾಲಿಸಿದರು. ಇಂದು ನಿಮ್ಮ ಸಂಸ್ಥೆಯ ಸಂಘಟನಾ ಶಕ್ತಿಯಿಂದ ಗ್ರಾಮಗಳ ವಿಕಾಸದ ಹೊಸ ಬಾಗಿಲು ತೆರೆಯಬಹುದು. ನಾವು ನಮ್ಮ ಹಳ್ಳಿಗಳ ಕುರಿತು ಹೆಮ್ಮೆ ಪಡುವಂತೆ, ಹಳ್ಳಿಯ ಜನರು ಸಂಸ್ಥಾಪನಾ ದಿನವನ್ನು ಆಚರಿಸುವಂತೆ, ಒಂದು ಹೊಸ ದೃಷ್ಟಿಕೋನದ ಮೂಲಕ ಅದನ್ನು ಮುನ್ನಡೆಸುವ ಅವಶ್ಯಕತೆಯಿದೆ. ನೀವು 80 ಸಾವಿರ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದೀರಿ. ಈ ಹಳ್ಳಿಗಳ ನೇತೃತ್ವವನ್ನು ಒಂದು ಹೊಸ ದೃಷ್ಟಿಕೋನದೊಂದಿಗೆ ಮುನ್ನಡೆಸಬೇಕು. ಇದೇ ನವಭಾರತದ ನಿರ್ಮಾಣದ ಒಂದು ಮಾಧ್ಯಮವಾಗುತ್ತದೆ.

ಜೊತೆಗಾರರೆ, ಕೃಷಿಯಲ್ಲಿ ಬಳಸುವ ಒಳಸುರಿಗಳ ಖರ್ಚು ಕಡಿಮೆ ಮಾಡಲು ಸರ್ಕಾರವು ಸತತವಾಗಿ ಪ್ರಯತ್ನಿಸುತ್ತಿದೆ. ಇಂದು ಮಣ್ಣಿನ ಆರೋಗ್ಯ ನಿರ್ವಹಣೆಯಿಂದ, ಮಣ್ಣಿನ ಆರೋಗ್ಯ ಕಾರ್ಡ್ ನಿಂದ, ಯೂರಿಯಾಗೆ ಬೇವು ಲೇಪಿಸುತ್ತಿರುವುದರಿಂದ, ಹನಿ ನೀರಾವರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ರೈತರು ಕೃಷಿಗಾಗಿ ಮಾಡುವ ಖರ್ಚು ಕಡಿಮೆಯಾಗಿದೆ. ಸೋಲಾರ್ ಪಂಪ್ ಗಳನ್ನು ಹೆಚ್ಚು ಹೆಚ್ಚಾಗಿ ಬಳಸುವುದರಿಂದ ಸಹ ರೈತರು ಡೀಸಲ್ ಗಾಗಿ ಮಾಡುವ ಖರ್ಚು ಉಳಿಯುತ್ತದೆ. ಈ ಆಧುನಿಕ ತಂತ್ರಜ್ಞಾನಗಳ ಉಪಯೋಗದಿಂದ ಇಳುವರಿ ಸಹ ಹೆಚ್ಚಾಗಿದೆ. ಈ ವಿಷಯದಲ್ಲಿ ‘ಬೈಫ್’ ನ ಅನುಭವ ಸಹ ಹಳೆಯದು. ಆದ್ದರಿಂದ ಕೃಷಿಯಲ್ಲಿ ಒಳಸುರಿಗಳ ಖರ್ಚು ಕಡಿಮೆ ಮಾಡಲು ಇನ್ನೂ ಏನೇನು ಮಾಡಬಹುದು ಎಂಬ ವಿಷಯದಲ್ಲಿ ನಿಮ್ಮ ಸಲಹೆಗಳಿಗೆ ಸದಾ ಸ್ವಾಗತವಿದೆ. ನೀವು ಹೆಚ್ಚು ಹೆಚ್ಚು ರೈತರನ್ನು ಈ ಅಭಿಯಾನದಲ್ಲಿ ತೊಡಗಿಸಿದಷ್ಟೂ ರೈತರಿಗೆ ಉಳಿತಾಯವಾಗುತ್ತದೆ ಮತ್ತು ಆದಾಯ ಹೆಚ್ಚುತ್ತದೆ.

ಜೊತೆಗಾರರೆ, ಕಸದಿಂದ ರಸ ತಯಾರಿಸುವುದು ಸಹ ಇಂದಿನ ಅವಶ್ಯಕತೆಯಾಗಿದೆ ಮತ್ತು ಭವಿಷ್ಯದ ಸವಾಲುಗಳೊಂದಿಗೆ ಸೇರಿಕೊಂಡಿದೆ. ಕೃಷಿ ಉಳಿಕೆಗಳನ್ನು ಮರುಬಳಕೆ ಮಾಡುವ ಕೆಲಸವಾಗಬೇಕು, ಸಾವಯವ ಗೊಬ್ಬರ ತಯಾರಿಸುವ ಕೆಲಸವಾಗಬೇಕು. ಇದರಿಂದಲೂ ರೈತರ ಆದಾಯ ಹೆಚ್ಚುತ್ತದೆ ಮತ್ತು ಇಡೀ ಹಳ್ಳಿಗೆ ಇದರ ಲಾಭ ಸಿಗುತ್ತದೆ. ಪ್ರಸ್ತುತ ಕೃಷಿಯಲ್ಲಿ ಯಾವುದೇ ಪದಾರ್ಥವೂ ವ್ಯರ್ಥವಲ್ಲ, ಪ್ರತಿಯೊಂದು ವಸ್ತುವನ್ನು ಬಳಸಬಹುದು, ಅದು ಆದಾಯ ತಂದುಕೊಡಬಲ್ಲದು. ಇದೇ ರೀತಿ ಹಳ್ಳಿಗಳಲ್ಲಿ ಸೌರಶಕ್ತಿಗೆ ಪ್ರೋತ್ಸಾಹ ನೀಡಿ ಸಹ ಸಂಪೂರ್ಣ ಹಳ್ಳಿಯನ್ನು ವಿದ್ಯುತ್ ವಿಷಯದಲ್ಲಿ ಸ್ವಾವಲಂಬಿಯಾಗಿಸಬಹುದು. ಜಮೀನುಗಳ ಮೂಲೆಗಳಲ್ಲಿ ಲಭ್ಯವಿರುವ ಜಾಗಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲು, ವಿದ್ಯುತ್ ತಯಾರಿಸಲು ಸಹ ರೈತರನ್ನು ಪ್ರೋತ್ಸಾಹಿಸಬಹುದು. ದೇಶಾದ್ಯಂತ ಹಾಲಿನ ಸಹಕಾರಿ ಸಂಘಗಳು ಇರುವಂತೆಯೇ ಸೋಲಾರ್ ಸಹಕಾರಿ ಸಂಘಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು, ಅದನ್ನು ಮಾಡಬಹುದು.

ಜೊತೆಗಾರರೆ, ಹಳ್ಳಿಗಳಲ್ಲಿಯೂ ಸರಿಸುಮಾರು ಪ್ರತಿಯೊಂದು ಮನೆಯ ಮೇಲೂ ಒಂದು ಸಣ್ಣ ಛತ್ರಿ ಇರುವುದನ್ನು ನೀವು ನೋಡಿರಬಹುದು. ಇದು ಡಿಜಿಟಲ್ ತಂತ್ರಜ್ಞಾನವಾಗಿದ್ದು, ಎಲ್ಲವನ್ನೂ ಸುಲಭಗೊಳಿಸಿದೆ. ಮೊದಲು ಒಂದೆರಡು ಚಾನೆಲ್ ಗಳಷ್ಟೇ ಬರುತ್ತಿದ್ದವು. ಈಗ ನೂರಿನ್ನೂರು ಚಾನೆಲ್ ಗಳು ಬರುತ್ತಿವೆ. ರಿಮೊಟ್ ಈಗ ಅವರಿಗೆ ಬಹಳ ಕಷ್ಟದ ಉಪಕರಣವೇನೂ ಅಲ್ಲ. ಎರಡು ಮೂರು ವರ್ಷದ ಮಗು ಸಹ ರಿಮೊಟ್ ನಿಂದ ಚಾನೆಲ್ ಬದಲಿಸುತ್ತದೆ.

ತಂತ್ರಜ್ಞಾನವನ್ನು ಹೀಗೆ ನಮ್ಮದಾಗಿಸಿಕೊಳ್ಳುವುದರಿಂದ ದೇಶದಲ್ಲಿ ಡಿಜಿಟಲ್ ಗ್ರಾಮದ ಕಲ್ಪನೆಯನ್ನು ಸಾಕಾರಗೊಳಿಸಬಹುದು. ಸಾಲದಿಂದ ಹಿಡಿದು ವಿದ್ಯಾರ್ಥಿ ವೇತನದವರೆಗೆ ಎಲ್ಲ ಅರ್ಜಿಗಳನ್ನು ಆನ್ ಲೈನ್ ನಲ್ಲಿ ತುಂಬಿಸುವ, ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನದಿಂದ ಶಿಕ್ಷಣ ನೀಡುವ, ಆರೋಗ್ಯ ಸೇವೆ ನೀಡುವ, ಹೀಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆಚ್ಚಾಗಿ ವ್ಯವಹಾರ ನಡೆಸುವ ಗ್ರಾಮಗಳಾಗಬೇಕು.

ಡಿಜಿಟಲ್ ಗ್ರಾಮದ ಈ ಕಲ್ಪನೆಯನ್ನು ಸಾಕಾರಗೊಳಿಸಲು ಸರ್ಕಾರವು ದೇಶದ ಪ್ರತಿಯೊಂದು ಪಂಚಾಯತ್ ನಲ್ಲೂ ಆಪ್ಟಿಕಲ್ ಫೈಬರ್ ಅಳವಡಿಸಲು ಕ್ರಮ ಕೈಗೊಳ್ಳುತ್ತಿದೆ. ಆದರೆ ಸಾಧನೆ, ಸಲಕರಣೆಗಳನ್ನು ಹೊಂದಿಸಿದರಷ್ಟೇ ಸಾಲುವುದಿಲ್ಲ. ಅವುಗಳನ್ನು ಬಳಸುವುದಕ್ಕೆ ಜನರು ಸಮರ್ಥರಾಗುವಂತೆ ಮಾಡುವ ಕೆಲಸವನ್ನು ನಿಮ್ಮಂತಹ ಸಂಸ್ಥೆಗಳು ಮಾಡಬಹುದು. ಆದ್ದರಿಂದ ನಿಮ್ಮ ಸಂಸ್ಥೆಯು ಪ್ರತಿವರ್ಷ ಕಡಿಮೆಯೆಂದರೆ 500 ಹಳ್ಳಿಗಳನ್ನು ಕಡಿಮೆ ಹಣದಿಂದ ವ್ಯವಹಾರ ನಡೆಸುವ ಹಳ್ಳಿಗಳನ್ನಾಗಿ ಪರಿವರ್ತಿಸುತ್ತೇವೆಂದು ಸಂಕಲ್ಪ ಮಾಡಲು ಸಾಧ್ಯವೇ? 500 ಹಳ್ಳಿಗಳನ್ನು ನೀವು ಕಡಿಮೆ ಹಣದಿಂದ ಅಂದರೆ ಡಿಜಿಟಲ್ ತಂತ್ರಜ್ಞಾನದ ಮೂಲಕ ವ್ಯವಹಾರ ನಡೆಸುವಂತೆ ಬದಲಾಯಿಸುವುದರಿಂದ ಸುತ್ತಮುತ್ತಲಿನ ಒಂದೆರಡು ಸಾವಿರ ಹಳ್ಳಿಗಳೂ ಸಾಮೂಹಿಕ ಕ್ರಿಯೆಯ ರೀತಿಯಲ್ಲಿ ತೊಡಗಿಕೊಂಡು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹಬ್ಬುತ್ತಾ ಹೋಗುತ್ತದೆ. ಜೊತೆಗಾರರೆ, ಮಹಾತ್ಮಾ ಗಾಂಧೀಜಿ ಅವರು ಸಹ ಹಳ್ಳಿಗಳನ್ನು ಸಶಕ್ತಗೊಳಿಸಿಯೇ ದೇಶವನ್ನು ಸದೃಢಗೊಳಿಸುವ ಮಂತ್ರ ಜಪಿಸಿದ್ದರು. ಆ ಮಂತ್ರವನ್ನೇ ಜಪಿಸುತ್ತಾ ‘ಬೈಫ್’ನ ಸೇವಾ ಮನೋಭಾವವು ಲಕ್ಷಾಂತರ ರೈತರ ಜೀವನವನ್ನು ಬದಲಾಯಿಸಿದೆ, ಅವರಿಗೆ ಸ್ವಂತ ಉದ್ಯೋಗ ಮಾಡುವುದನ್ನು ಕಲಿಸಿದೆ. ಸಂಕಲ್ಪವನ್ನು ಮಾಡಿ ಅದರಿಂದ ಸಿದ್ಧಿ ಪಡೆಯುವುದು ಹೇಗೆಂಬುದಕ್ಕೆ ಸಾಕ್ಷಾತ್ ಉದಾಹರಣೆ ನಿಮ್ಮ ಸಂಸ್ಥೆಯಾಗಿದೆ.

ನಿಮ್ಮ ಮುಂದೆ ನಾನಿಟ್ಟಿರುವ ವಿಚಾರಗಳು, ಅದರೊಂದಿಗೆ ಸೇರಿದ ಕೆಲವು ಹೊಸ ಸಂಕಲ್ಪಗಳನ್ನು ಮಾಡಿ ಎಂಬುದು ನನ್ನ ಮನವಿಯಾಗಿದೆ. 2022ರಲ್ಲಿ ನಮ್ಮ ದೇಶವು ಸ್ವತಂತ್ರಗೊಂಡು 75 ವರ್ಷಗಳಾಗಿರುತ್ತದೆ. ಆಗ ನಿಮ್ಮ ಸಂಕಲ್ಪಗಳ ಸಿದ್ಧಿಯಿಂದ ದೇಶದ ಕೋಟ್ಯಾಂತರ ರೈತರಿಗೆ ಯಶಸ್ಸಿನ ಸಿದ್ಧಿ ದೊರಕಲಿದೆ.

ಧನ್ಯವಾದಗಳು!!!

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian public relations industry pegged to reach ₹4,500 cr by 2030: Report

Media Coverage

Indian public relations industry pegged to reach ₹4,500 cr by 2030: Report
NM on the go

Nm on the go

Always be the first to hear from the PM. Get the App Now!
...
Prime Minister’s visit to Indonesia, Australia and New Zealand
July 03, 2026

At the invitation of the President of the Republic of Indonesia, H.E. Mr. Prabowo Subianto, Prime Minister Shri Narendra Modi will pay a visit to Indonesia from 6-8 July, 2026. This will be Prime Minister’s fourth visit to Indonesia and his first bilateral visit since the elevation of India-Indonesia ties to the level of Comprehensive Strategic Partnership in May 2018. During the visit, Prime Minister will hold bilateral discussions with President Prabowo and review the progress made in the partnership. In Jakarta, Prime Minister will address a large gathering of the Indian Diaspora. India and Indonesia share historical and warm people-to-people ties. In keeping with these special bonds, Prime Minister will visit the Prambanan Temple complex at Yogyakarta, a prominent UNESCO world heritage site in Indonesia.

From Indonesia, at the invitation of the Prime Minister of Australia, the Honourable Anthony Albanese MP, Prime Minister will travel to Melbourne from 8-10 July, 2026. In Melbourne, Prime Minister will hold bilateral discussions with Prime Minister Albanese. He will also call on the Governor General of Australia, the Honourable Ms Sam Mostyn AC. During his visit, Prime Minister will also participate in the India-Australia CEOs Forum, where he will address a gathering of top business leaders from both countries. Prime Minister will also address a large gathering of the Indian Diaspora, who constitute a strong pillar of the India-Australia relationship.

From Melbourne, at the invitation of the Prime Minister of New Zealand, Rt Honourable Christopher Luxon, Prime Minister will travel to Auckland for a state visit from 10-11 July, 2026. This will be the first state visit of an Indian Prime Minister to New Zealand in four decades. In Auckland, Prime Minister will hold bilateral discussions with Prime Minister Luxon and review the entire gamut of the bilateral relationship, which has seen significant progress in the last two years, especially in the areas of trade and commerce and defence. While in Auckland, Prime Minister will also interact with prominent business and sports personalities. In a reflection of the strong people-to-people ties that exist between India and New Zealand, Prime Minister will address a large gathering of the Indian Diaspora during the visit.