ಭರ್ವಾಡ್ ಸಮುದಾಯದ ಸೇವಾ ಸಮರ್ಪಣೆ, ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಗೋ ರಕ್ಷಣೆಯ ಬದ್ಧತೆಗೆ ಪ್ರಧಾನಮಂತ್ರಿ ಶ್ಲಾಘನೆ
ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ವಿಕಸಿತ ಭಾರತ ಕಟ್ಟುವತ್ತ ಮೊದಲ ಹೆಜ್ಜೆಯಾಗಲಿದೆ: ಪ್ರಧಾನಮಂತ್ರಿ
ಆಧುನಿಕತೆಯ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸಲು ಶಿಕ್ಷಣವೇ ಪ್ರಬಲ ಅಸ್ತ್ರ: ಪ್ರಧಾನಮಂತ್ರಿ
"ಸಬ್ ಕಾ ಪ್ರಾಯಸ್" ದೇಶದ ಬಹುದೊಡ್ಡ ಶಕ್ತಿ: ಪ್ರಧಾನಮಂತ್ರಿ

ಮಹಂತ್ ಶ್ರೀ ರಾಮ್ ಬಾಪು ಜಿ, ಸಮಾಜದ ಗೌರವಾನ್ವಿತ ಸದಸ್ಯರೆ ಮತ್ತು ಇಲ್ಲಿ ನೆರೆದಿರುವ ಲಕ್ಷಾಂತರ ಶ್ರದ್ಧಾಭಕ್ತಿಯುಳ್ಳ ಸಹೋದರ ಸಹೋದರಿಯರೆ - ನಮಸ್ಕಾರ ಮತ್ತು ಜೈ ಠಾಕುರ್!

ಮೊಟ್ಟ ಮೊದಲನೆಯದಾಗಿ, ಭರ್ವಾಡ್ ಸಮುದಾಯದ ಸಂಪ್ರದಾಯಗಳಿಗೆ, ಎಲ್ಲಾ ಗೌರವಾನ್ವಿತ ಸಂತರು ಮತ್ತು ಮಹಾಂತರಿಗೆ ಮತ್ತು ಈ ಪವಿತ್ರ ಸಂಪ್ರದಾಯ ಸಂರಕ್ಷಿಸಲು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟಿರುವ ಎಲ್ಲರಿಗೂ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಇಂದು, ನಮ್ಮ ಸಂತೋಷವು ಹಲವು ಪಟ್ಟು ಹೆಚ್ಚಾಗಿದೆ. ಈ ಬಾರಿ, ಮಹಾಕುಂಭವು ಐತಿಹಾಸಿಕ ಮಾತ್ರವಲ್ಲದೆ ನಮಗೆ ಬಹಳ ಹೆಮ್ಮೆಯ ಕ್ಷಣವೂ ಆಗಿತ್ತು. ಏಕೆಂದರೆ, ಈ ಶುಭ ಸಂದರ್ಭದಲ್ಲಿ, ಮಹಾಂತ ಶ್ರೀ ರಾಮ್ ಬಾಪು ಜಿ ಅವರಿಗೆ ಮಹಾಮಂಡಲೇಶ್ವರ ಎಂಬ ಬಿರುದು ನೀಡಲಾಗಿದೆ. ಇದು ಮಹತ್ವದ ಸಾಧನೆ ಮತ್ತು ನಮಗೆಲ್ಲರಿಗೂ ಅಪಾರ ಸಂತೋಷದ ಕ್ಷಣವಾಗಿದೆ. ರಾಮ್ ಬಾಪು ಜಿ ಮತ್ತು ನಮ್ಮ ಸಮುದಾಯದ ಎಲ್ಲಾ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಳೆದ 1 ವಾರದಲ್ಲಿ, ಭಾವನಗರದ ಪುಣ್ಯಭೂಮಿಯು ಶ್ರೀಕೃಷ್ಣನ ವೃಂದಾವನವಾಗಿ ರೂಪಾಂತರವಾದಂತೆ ಭಾಸವಾಯಿತು, ಇದನ್ನು ಇನ್ನಷ್ಟು ವಿಶೇಷವಾಗಿಸಲು, ನಮ್ಮ ಪೂಜ್ಯ ಸಹೋದರರ ಭಾಗವತ ಕಥೆಯೂ ನಡೆಯಿತು. ಭಕ್ತಿ ಹರಿಯುವ ರೀತಿ ಮತ್ತು ಜನರು ಕೃಷ್ಣನ ಪ್ರೀತಿಯಲ್ಲಿ ಮುಳುಗಿದ ರೀತಿ ನಿಜವಾಗಿಯೂ ದೈವಿಕ ವಾತಾವರಣ ಸೃಷ್ಟಿಸಿತು. ನನ್ನ ಪ್ರೀತಿಯ ಕುಟುಂಬ, ಬವಾಲಿಯಾಲಿ ಧಾಮ್ ಕೇವಲ ಧಾರ್ಮಿಕ ತಾಣವಾಗದೆ, ಇದು ಭರ್ವಾಡ್ ಸಮುದಾಯ ಮತ್ತು ಇತರ ಅನೇಕರಿಗೆ ನಂಬಿಕೆ, ಸಂಸ್ಕೃತಿ ಮತ್ತು ಏಕತೆಯ ಸಂಕೇತವಾಗಿದೆ.

 

ನಾಗ ಲಖಾ ಠಾಕರ್ ಅವರ ಕೃಪೆಯಿಂದ, ಈ ಪವಿತ್ರ ಸ್ಥಳವು ಯಾವಾಗಲೂ ಭರ್ವಾಡ್ ಸಮುದಾಯಕ್ಕೆ ನಿಜವಾದ ಮಾರ್ಗದರ್ಶನ ಮತ್ತು ಉದಾತ್ತ ಸ್ಫೂರ್ತಿಯ ಅಪಾರ ಪರಂಪರೆ ಒದಗಿಸಿದೆ. ಇಂದು, ಈ ಪವಿತ್ರ ಸ್ಥಳದಲ್ಲಿ ಶ್ರೀ ನಾಗ ಲಖಾ ಠಾಕರ್ ದೇವಾಲಯದ ಮರುಪ್ರತಿಷ್ಠಾಪನೆಯು ನಮ್ಮ ಪಾಲಿಗೆ ಸುವರ್ಣ ಅವಕಾಶವಾಗಿದೆ. ಕಳೆದ ವಾರದಿಂದಲೂ ಭವ್ಯ ಆಚರಣೆಯ ವಾತಾವರಣ ತುಂಬಿದೆ. ಸಮುದಾಯದ ಉತ್ಸಾಹ ಮತ್ತು ಸಂಸತ ಗಮನಾರ್ಹವಾಗಿವೆ - ನಾನು ಎಲ್ಲೆಡೆಯಿಂದ ಪ್ರಶಂಸೆಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಹೃದಯದಲ್ಲಿ, ನಾನು ನಿಮ್ಮೆಲ್ಲರ ನಡುವೆ ಇರಬೇಕೆಂದು ನನಗೆ ಅನಿಸುತ್ತಿದೆ, ಆದರೆ ಸಂಸತ್ತಿನಲ್ಲಿ ನನ್ನ ಕೆಲಸಗಳ ಬದ್ಧತೆಗಳಿಂದಾಗಿ, ಅದನ್ನು ಬಿಡುವುದು ಕಷ್ಟಕರವಾಗಿದೆ. ಆದಾಗ್ಯೂ, ನಮ್ಮ ಸಾವಿರಾರು ಸಹೋದರಿಯರು ಪ್ರದರ್ಶಿಸಿದ ಭವ್ಯವಾದ 'ರಾಸ್'(ನೃತ್ಯ)ದ ಬಗ್ಗೆ ಕೇಳಿದಾಗ, ನನಗೆ ಅಪಾರ ಸಂತೋಷವಾಗುತ್ತಿದೆ - ಅವರು ನಿಜವಾಗಿಯೂ ವೃಂದಾವನವನ್ನು ಅಲ್ಲಿಯೇ ಜೀವಂತಗೊಳಿಸಿದ್ದಾರೆ!

ನಂಬಿಕೆ, ಸಂಸ್ಕೃತಿ ಮತ್ತು ಸಂಪ್ರದಾಯದ ಮಿಶ್ರಣವು ನಿಜಕ್ಕೂ ಹೃದಯಸ್ಪರ್ಶಿ ಮತ್ತು ಉತ್ತೇಜನಕಾರಿಯಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರು,  ಸಹೋದರ ಸಹೋದರಿಯರು ಈ ಸಂದರ್ಭವನ್ನು ರೋಮಾಂಚಕವಾಗಿಸಿದರು,  ತಮ್ಮ ಪ್ರದರ್ಶನಗಳ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಸಂದೇಶಗಳನ್ನು ನೀಡಿದರು. ಭಾಯಿ ಜಿ ತಮ್ಮ ಕಥೆ ಹೇಳುವ ಮೂಲಕ ತಮ್ಮ ಬುದ್ಧಿವಂತಿಕೆಯಿಂದ ನಮ್ಮನ್ನು ಬೆಳಗಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ಎಷ್ಟೇ ಬಾರಿ ನನ್ನ ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಎಂದಿಗೂ ಸಾಕಾಗುವುದಿಲ್ಲ.

ಈ ಪವಿತ್ರ ಸಂದರ್ಭದಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಮಹಾಂತ್ ಶ್ರೀ ರಾಮ್ ಬಾಪು ಜಿ ಮತ್ತು ಬವಾಲಿಯಾಲಿ ಧಾಮ್ ಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಆದಾಗ್ಯೂ, ಈ ಶುಭ ದಿನದಂದು ನಾನು ನಿಮ್ಮೆಲ್ಲರೊಂದಿಗೆ ಇರಲು ಸಾಧ್ಯವಾಗದ ಕಾರಣ ನಾನು ಕ್ಷಮೆ ಕೋರುತ್ತೇನೆ.  ಆದರೂ ನಾನು ನಿಮಗೆ ಭರವಸೆ ನೀಡುತ್ತೇನೆ, ಭವಿಷ್ಯದಲ್ಲಿ ನಾನು ಆ ಸ್ಥಳಕ್ಕೆ ಭೇಟಿ ನೀಡಿದಾಗಲೆಲ್ಲಾ, ನಾನು ಖಂಡಿತವಾಗಿಯೂ ಭಕ್ತಿಯಿಂದ ತಲೆಬಾಗಿ ನಮಿಸಲು  ಬರುತ್ತೇನೆ.

 

ನನ್ನ ಪ್ರೀತಿಯ ಕುಟುಂಬ ಸದಸ್ಯರೆ,

ಭರ್ವಾಡ್ ಸಮುದಾಯ ಮತ್ತು ಬವಾಲಿಯಾಲಿ ಧಾಮದೊಂದಿಗಿನ ನನ್ನ ಸಂಪರ್ಕವು ಬಹಳ ಹಿಂದಿನಿಂದಲೂ ಇದೆ. ಭರ್ವಾಡ್ ಸಮುದಾಯದ ಸೇವಾ ಮನೋಭಾವ, ಪ್ರಕೃತಿಯ ಮೇಲಿನ ಅವರ ಪ್ರೀತಿ ಮತ್ತು ಗೋಸೇವೆಯ ಮೇಲಿನ ಅವರ ಭಕ್ತಿಯನ್ನು ಕೇವಲ ಪದಗಳಲ್ಲಿ ಹೇಳುವುದು ಕಷ್ಟ. ನಮ್ಮ ಬಾಯಲ್ಲಿ ಯಾವಾಗಲೂ ಬರುವ ಒಂದು ನುಡಿಗಟ್ಟು ಹೀಗಿದೆ:

नगा लाखा नर भला,

पच्छम धरा के पीर।

खारे पानी मीठे बनाये,

सूकी सूखी नदियों में बहाये नीर।

(ನಾಗ ಲಖ, ಉದಾತ್ತ ವ್ಯಕ್ತಿ,

ಪಶ್ಚಿಮ ಭೂಮಿಯ ಸಂತ.

ಅವರು ಉಪ್ಪುನೀರನ್ನು ಸಿಹಿಗೊಳಿಸಿದರು,

ಮತ್ತು ಹರಿಯುವ ತೊರೆಗಳನ್ನು ಒಣಗಿದ ನದಿಗಳಿಗೆ ತಂದರು.)

ಇವು ಕೇವಲ ಪದಗಳಲ್ಲ. ಆ ಕಾಲದಲ್ಲೂ ಸಹ ನಿಸ್ವಾರ್ಥ ಸೇವೆ ಮತ್ತು ಅಸಾಧ್ಯವಾದುದನ್ನು ಸಾಧಿಸುವ ಸಾಮರ್ಥ್ಯ (ಗುಜರಾತಿ ಭಾಷೆಯಲ್ಲಿ ಹೇಳುವಂತೆ, नेवा के पानी मोभे लगा लिए ಅಂದರೆ, ಬತ್ತಿದ ಬಾವಿಯಿಂದ ನೀರು ಸೇದುವುದು) ಅವರ ಕಾರ್ಯಗಳಲ್ಲಿ ಗೋಚರಿಸುತ್ತಿದ್ದವು. ಅವರು ಇಟ್ಟ ಪ್ರತಿಯೊಂದು ಹೆಜ್ಜೆಯೂ ಸೇವೆಯ ಪರಿಮಳ ಹರಡಿತು, ಶತಮಾನಗಳ ನಂತರವೂ ಜನರು ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ - ಅದುವೇ ಒಂದು ದೊಡ್ಡ ಸಾಧನೆ. ಪೂಜ್ಯ ಇಸು ಬಾಪು ಅವರ ನಿಸ್ವಾರ್ಥ ಸೇವೆಯನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಅವರ ಸಮರ್ಪಣೆಯನ್ನು ನಾನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ಗುಜರಾತ್‌ಗೆ ಬರ ಹೊಸದಲ್ಲ. 10 ವರ್ಷಗಳಲ್ಲಿ 7 ವರ್ಷಗಳ ಕಾಲ ಗುಜರಾತ್ ಅನ್ನು ಬರಗಾಲ ಅಪ್ಪಳಿಸುತ್ತಿದ್ದ ಸಮಯವಿತ್ತು. ಗುಜರಾತ್‌ನಲ್ಲಿ, "ಏನು ಬೇಕಾದರೂ ಮಾಡಿ, ಆದರೆ ಧಂಧುಕಾದಲ್ಲಿ(ಬರಪೀಡಿತ ಪ್ರದೇಶ) ನಿಮ್ಮ ಮಗಳನ್ನು ಮದುವೆಯಾಗಬೇಡಿ" ಎಂದು ಹೇಳಲಾಗುತ್ತಿತ್ತು. (ಗುಜರಾತಿಯಲ್ಲಿ: बंदूके देजो पण धंधूके न देता, ಅಂದರೆ "ಧಂಧುಕಾದಲ್ಲಿ ನಿಮ್ಮ ಮಗಳನ್ನು ಮದುವೆ ಮಾಡುವುದಕ್ಕಿಂತ ಅವಳನ್ನು ಗುಂಡಿಕ್ಕಿ ಕೊಲ್ಲುವುದು ಉತ್ತಮ"). ಈ ಮಾತು ಅಸ್ತಿತ್ವದಲ್ಲಿತ್ತು, ಏಕೆಂದರೆ ಧಂಧುಕಾ ಆಗಾಗ್ಗೆ ತೀವ್ರ ಬರಗಾಲದಿಂದ ಬಳಲುತ್ತಿತ್ತು. ಧಂಧುಕಾ ಮತ್ತು ರಣಪುರ್ ಸಹ ಕುಡಿಯುವ ನೀರಿಗಾಗಿ ಪರಾದಾಡುತ್ತಿದ್ದ ಸ್ಥಳಗಳಾಗಿದ್ದವು. ಆ ಸಮಯದಲ್ಲಿ, ಪೂಜ್ಯ ಇಸು ಬಾಪು ಅವರ ನಿಸ್ವಾರ್ಥ ಸೇವೆ ಸ್ಪಷ್ಟವಾಗಿತ್ತು. ಅವರು ಬಳಲುತ್ತಿರುವ ಜನರಿಗೆ ಸೇವೆ ಸಲ್ಲಿಸಿದ ರೀತಿ ಇಂದಿಗೂ ಸ್ಮರಣೀಯವಾಗಿದೆ. ನಾನು ಮಾತ್ರವಲ್ಲ, ಇಡೀ ಗುಜರಾತ್ ರಾಜ್ಯವು ಅವರ ಕೆಲಸವನ್ನು ದೈವಿಕವೆಂದು ಪರಿಗಣಿಸುತ್ತದೆ. ಜನರು ಅವರ ಕೊಡುಗೆಗಳನ್ನು ಹೊಗಳುವುದನ್ನು ನಿಲ್ಲಿಸುವುದಿಲ್ಲ. ಅದು ಅಲೆಮಾರಿ ಸಮುದಾಯಗಳಿಗೆ ಸೇವೆ ಸಲ್ಲಿಸುವುದಿರಲಿ, ಅವರ ಮಕ್ಕಳಿಗೆ ಶಿಕ್ಷಣ ಖಚಿತಪಡಿಸುವುದಿರಲಿ, ಪರಿಸರ ಕಾರಣಗಳಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದಿರಲಿಲ್ಲಿ ಅಥವಾ ಗಿರ್ ಹಸುಗಳನ್ನು ನೋಡಿಕೊಳ್ಳುವುದಿರಲಿ, ಅವರು ಮಾಡಿದ ಎಲ್ಲ ಸೇವೆಯಲ್ಲಿ ಅವರ ಬದ್ಧತೆಯನ್ನು ಕಾಣಬಹುದು. ಅವರ ಕೆಲಸದ ಮೂಲಕ, ನಿಸ್ವಾರ್ಥ ಸೇವೆಯ ಆಳವಾದ ಬೇರೂರಿರುವ ಸಂಪ್ರದಾಯವನ್ನು ನಾವು ಸ್ಪಷ್ಟವಾಗಿ ನೋಡಬಹುದು.

 

ನನ್ನ ಪ್ರೀತಿಯ ಕುಟುಂಬ ಸದಸ್ಯರೆ,

ಭರ್ವಾಡ ಸಮುದಾಯವು ಎಂದಿಗೂ ಕಠಿಣ ಪರಿಶ್ರಮ ಮತ್ತು ತ್ಯಾಗದಿಂದ ಹಿಂದೆ ಸರಿದಿಲ್ಲ - ಅವರು ಸದಾ ಕಾಲವೂ ಮುಂಚೂಣಿಯಲ್ಲಿದ್ದಾರೆ. ನಾನು ನಿಮ್ಮ ನಡುವೆ ಬಂದಾಗಲೆಲ್ಲಾ ನಾನು ಪ್ರಾಮಾಣಿಕವಾಗಿ ಮಾತನಾಡಿದ್ದೇನೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಾನು ಒಮ್ಮೆ ಭರ್ವಾಡ ಸಮುದಾಯಕ್ಕೆ ಕೋಲುಗಳನ್ನು ಹೊತ್ತೊಯ್ಯುವ ಯುಗ ಮುಗಿದಿದೆ ಎಂದು ಹೇಳಿದ್ದೆ - ನೀವು ಸಾಕಷ್ಟು ಸಮಯದಿಂದ ಕೋಲುಗಳನ್ನು ಹೊತ್ತುಕೊಂಡಿದ್ದೀರಿ, ಆದರೆ ಈಗ ಲೇಖನಿಯ ಯುಗ. ಇಂದು ಗುಜರಾತ್‌ನಲ್ಲಿ ನನ್ನ ಸೇವೆಯ ವರ್ಷಗಳಲ್ಲಿ, ಭರ್ವಾಡ ಸಮುದಾಯದ ಹೊಸ ಪೀಳಿಗೆಯು ಈ ಬದಲಾವಣೆಯನ್ನು ಸ್ವೀಕರಿಸಿದೆ ಎಂದು ನಾನು ಹೆಮ್ಮೆಯಿಂದ ಹೇಳಲೇಬೇಕು. ಮಕ್ಕಳು ಈಗ ಅಧ್ಯಯನ ಮಾಡುತ್ತಿದ್ದಾರೆ, ಪ್ರಗತಿ ಹೊಂದುತ್ತಿದ್ದಾರೆ. ಮೊದಲು ನಾನು "ಕೋಲು ಕೆಳಗಿಟ್ಟು ಪೆನ್ನು ಎತ್ತಿಕೊಳ್ಳಿ" ಎಂದು ಹೇಳುತ್ತಿದ್ದೆ. ಈಗ, ನಾನು ಹೇಳುತ್ತೇನೆ, "ನನ್ನ ಹೆಣ್ಣು ಮಕ್ಕಳ ಕೈಯಲ್ಲಿ ಕಂಪ್ಯೂಟರ್‌ಗಳು ಸಹ ಇರಬೇಕು." ಈ ಬದಲಾಗುತ್ತಿರುವ ಕಾಲದಲ್ಲಿ, ನಾವು ಬಹಳಷ್ಟು ಸಾಧಿಸಬಹುದು - ಇದು ನಮಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಸಮುದಾಯವು ಪ್ರಕೃತಿಯ ರಕ್ಷಕ. ನೀವು ನಿಜವಾಗಿಯೂ "ಅತಿಥಿ ದೇವೋ ಭವ"(ಅತಿಥಿ ದೇವರು) ಎಂಬ ಮನೋಭಾವ ಜೀವಂತಗೊಳಿಸಿದ್ದೀರಿ. ನಮ್ಮ ಗ್ರಾಮೀಣ ಮತ್ತು ಬಲ್ವಾ ಸಮುದಾಯಗಳ ಸಂಪ್ರದಾಯಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ವೃದ್ಧಾಶ್ರಮಗಳಲ್ಲಿ ಭರ್ವಾಡ ಸಮುದಾಯದ ಹಿರಿಯರನ್ನು ನೀವು ಕಾಣುವುದಿಲ್ಲ. ಅವರ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬಗಳ ಪರಿಕಲ್ಪನೆ ಮತ್ತು ಹಿರಿಯರ ಸೇವೆಯನ್ನು ದೇವರ ಸೇವೆ ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವುದಿಲ್ಲ - ಅವರು ಅವರನ್ನು ನೋಡಿಕೊಳ್ಳುತ್ತಾರೆ. ಈ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ರವಾನಿಸುವುದು ಗಮನಾರ್ಹ ಸಾಧನೆಯಾಗಿದೆ. ತಲೆಮಾರುಗಳಿಂದ, ಭರ್ವಾಡ ಸಮುದಾಯದ ನೈತಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಬಲಪಡಿಸುವ ಪ್ರಯತ್ನಗಳು ನಡೆದಿವೆ.

ನಮ್ಮ ಸಮಾಜವು ತನ್ನ ಸಂಪ್ರದಾಯಗಳನ್ನು ಉಳಿಸಿಕೊಂಡು ಆಧುನಿಕತೆಯತ್ತ ವೇಗವಾಗಿ ಮುನ್ನಡೆಯುತ್ತಿರುವುದನ್ನು ನೋಡಿ ನನಗೆ ಅಪಾರ ತೃಪ್ತಿ ಸಿಕ್ಕಿದೆ. ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವುದು ಸಹ ಒಂದು ಉತ್ತಮ ಸೇವೆಯಾಗಿದೆ. ನಮ್ಮ ಸಮುದಾಯವನ್ನು ಆಧುನಿಕತೆಯೊಂದಿಗೆ ಸಂಪರ್ಕಿಸುವುದು ಮತ್ತು ಪ್ರಪಂಚದೊಂದಿಗೆ ಸಂಯೋಜಿಸಲು ಅವಕಾಶಗಳನ್ನು ಸೃಷ್ಟಿಸುವುದು ಸಹ ಒಂದು ನಿರ್ಣಾಯಕ ಜವಾಬ್ದಾರಿಯಾಗಿದೆ. ಈಗ, ನಮ್ಮ ಹೆಣ್ಣು ಮಕ್ಕಳು ಕ್ರೀಡೆಯಲ್ಲೂ ಶ್ರೇಷ್ಠತೆ ಸಾಧಿಸುವುದನ್ನು ನಾನು ನೋಡಲು ಬಯಸುತ್ತೇನೆ. ನಾವು ಈ ಗುರಿಯತ್ತ ಕೆಲಸ ಮಾಡಬೇಕು. ಇದು ಕೂಡ ಒಂದು ಉತ್ತಮ ಸೇವೆಯಾಗಿದೆ. ನಾನು ಗುಜರಾತ್‌ನಲ್ಲಿದ್ದಾಗ, ಖೇಲ್ ಮಹಾಕುಂಭ (ಕ್ರೀಡಾ ಉತ್ಸವ)ದಲ್ಲಿ ಯುವತಿಯರು ಶಾಲೆಗೆ ಹೋಗುವುದನ್ನು ಮತ್ತು ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವುದನ್ನು ನಾನು ನೋಡಿದೆ. ದೇವರು ಅವರಿಗೆ ವಿಶೇಷ ಶಕ್ತಿಯನ್ನು ನೀಡಿದ್ದಾನೆ. ಹಾಗಾಗಿ, ನಾವು ಅವರ ಪ್ರಗತಿಯತ್ತಲೂ ಗಮನ ಹರಿಸಬೇಕು. ನಾವು ನಮ್ಮ ಜಾನುವಾರುಗಳ ಬಗ್ಗೆ ಕಾಳಜಿ ವಹಿಸುತ್ತೇವೆ - ನಮ್ಮ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದರೆ, ಅವುಗಳ ಆರೋಗ್ಯ ಖಚಿತಪಡಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಈಗ, ನಾವು ನಮ್ಮ ಮಕ್ಕಳ ಬಗ್ಗೆ ಅದೇ ಸಮರ್ಪಣೆ ಮತ್ತು ಕಾಳಜಿ ಹೊಂದಿರಬೇಕು. ಬವಾಲಿಯಾಲಿ ಧಾಮ್ ಪಶುಸಂಗೋಪನೆಯಲ್ಲಿ, ವಿಶೇಷವಾಗಿ ಗಿರ್ ಹಸು ತಳಿ ಸಂರಕ್ಷಿಸುವಲ್ಲಿ ಉತ್ತಮ ಸಾಧನೆ ಮಾಡಿದೆ, ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಇಂದು, ಗಿರ್ ಹಸುವನ್ನು ವಿಶ್ವಾದ್ಯಂತ ಪ್ರಶಂಸಿಸಲಾಗುತ್ತಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೆ,

ಸಹೋದರ ಸಹೋದರಿಯರೆ, ನಾವು ಬೇರೆಯಲ್ಲ, ನಾವೆಲ್ಲರೂ ಒಡನಾಡಿಗಳು. ನಾವು ಯಾವಾಗಲೂ ಒಂದೇ ಕುಟುಂಬದ ಸದಸ್ಯರು ಎಂದು ನನಗೆ ಅನಿಸಿದೆ. ನಾನು ಯಾವಾಗಲೂ ನಿಮ್ಮೊಂದಿಗೆ ಕುಟುಂಬದ ಸದಸ್ಯನಾಗಿ ಇದ್ದೇನೆ. ಇಂದು ಬವಾಲಿಯಾಲಿ ಧಾಮದಲ್ಲಿ ನೆರೆದಿರುವ ಲಕ್ಷಾಂತರ ಜನರನ್ನು ನಾನು ನೋಡುತ್ತಿದ್ದಂತೆ, ನಿಮ್ಮಿಂದ ಏನನ್ನಾದರೂ ಕೇಳುವ ಹಕ್ಕು ನನಗಿದೆ ಎಂದು ನನಗೆ ಅನಿಸುತ್ತದೆ. ನಾನು ನಿಮ್ಮಿಂದ ಏನನ್ನಾದರೂ ಕೇಳಲು ಬಯಸುತ್ತೇನೆ ಮತ್ತು ನೀವು ನನ್ನನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ ಎಂಬ ನಂಬಿಕೆಯಿಂದ ನಾನು ವಿನಂತಿಸುತ್ತಿದ್ದೇನೆ. ನಾವು ಈಗಿರುವಂತೆಯೇ ಇರಲು ಸಾಧ್ಯವಿಲ್ಲ - ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ನಾವು ಒಂದು ದೊಡ್ಡ ಹೆಜ್ಜೆ ಇಡಬೇಕು, ಕೆಲಸ ಮಾಡಬೇಕು. ನಿಮ್ಮ ಬೆಂಬಲವಿಲ್ಲದೆ ನನ್ನ ಕೆಲಸ ಅಪೂರ್ಣವಾಗಿ ಉಳಿಯುತ್ತದೆ. ಈ ಗುರಿಗಾಗಿ ಇಡೀ ಸಮುದಾಯವು ಒಟ್ಟಾಗಿ ಬರಬೇಕು. ನಾನು ಒಮ್ಮೆ ಕೆಂಪುಕೋಟೆಯಿಂದ 'ಸಬ್ಕಾ ಪ್ರಯಾಸ್'(ಸಾಮೂಹಿಕ ಪ್ರಯತ್ನ) ಎಂದು ಒತ್ತಿ ಹೇಳಿದ್ದನ್ನು ನೀವು ನೆನಪಿಸಿಕೊಳ್ಳಬಹುದು. 'ಸಬ್ಕಾ ಪ್ರಯಾಸ್' ನಮ್ಮ ದೊಡ್ಡ ಶಕ್ತಿ. 'ವಿಕಸಿತ ಭಾರತ'ದತ್ತ ಮೊದಲ ಹೆಜ್ಜೆ ನಮ್ಮ ಹಳ್ಳಿಗಳ ಅಭಿವೃದ್ಧಿಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಕೃತಿ ಮತ್ತು ಜಾನುವಾರುಗಳಿಗೆ ಸೇವೆ ಸಲ್ಲಿಸುವುದು ನಮ್ಮ ಪವಿತ್ರ ಕರ್ತವ್ಯ. ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಕೈಗೊಳ್ಳಬೇಕಾದ ಇನ್ನೊಂದು ಪ್ರಮುಖ ಕಾರ್ಯವಿದೆ. ಭಾರತ ಸರ್ಕಾರವು ಕಾಲಬಾಯಿ ರೋಗವನ್ನು ಎದುರಿಸಲು ಸಂಪೂರ್ಣವಾಗಿ ಉಚಿತ ಕಾರ್ಯಕ್ರಮವನ್ನು ನಡೆಸುತ್ತಿದೆ - ಈ ರೋಗವನ್ನು ನಾವು ನಮ್ಮ ಸ್ಥಳೀಯ ಭಾಷೆಯಲ್ಲಿ ಖುರ್ಪಕ-ಮುಹ್ಪಕ ಎಂದು ಕರೆಯುತ್ತೇವೆ. ನಮ್ಮ ಜಾನುವಾರುಗಳನ್ನು ಸಂಪೂರ್ಣವಾಗಿ ರಕ್ಷಿಸಲು, ನಿಯಮಿತ ಲಸಿಕೆ ಹಾಕುವುದು ಅತ್ಯಗತ್ಯ. ಇದು ಕರುಣಾಳು ಕಾರ್ಯವಾಗಿದೆ, ಸರ್ಕಾರವು ಈ ಲಸಿಕೆಗಳನ್ನು ಉಚಿತವಾಗಿ ನೀಡುತ್ತದೆ. ನಮ್ಮ ಎಲ್ಲಾ ಸಮುದಾಯದ ಜಾನುವಾರುಗಳು ನಿಯಮಿತವಾಗಿ ಈ ಲಸಿಕೆಯನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ನಮಗೆ ಶ್ರೀಕೃಷ್ಣನ ನಿರಂತರ ಆಶೀರ್ವಾದ ಸಿಗುತ್ತದೆ ಮತ್ತು ನಮ್ಮ ಜಾನುವಾರುಗಳು ನಮ್ಮ ಸಹಾಯಕ್ಕೆ ಬರುತ್ತವೆ.

ನಮ್ಮ ಸರ್ಕಾರ ಕೈಗೊಂಡ ಮತ್ತೊಂದು ಪ್ರಮುಖ ಉಪಕ್ರಮವೆಂದರೆ, ಜಾನುವಾರು ಸಾಕಣೆದಾರರಿಗೆ ಆರ್ಥಿಕ ನೆರವು ನೀಡುವುದು. ಈ ಹಿಂದೆ, ರೈತರಿಗೆ ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ಲಭ್ಯವಿತ್ತು, ಆದರೆ ಈಗ ನಾವು ಜಾನುವಾರು ಸಾಕಣೆದಾರರಿಗೂ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಿದ್ದೇವೆ. ಈ ಕ್ರೆಡಿಟ್ ಕಾರ್ಡ್‌ನೊಂದಿಗೆ, ಜಾನುವಾರು ಮಾಲೀಕರು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದ ಸಾಲಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಸ್ಥಳೀಯ ಹಸು ತಳಿಗಳನ್ನು ಸಂರಕ್ಷಿಸಲು ಮತ್ತು ವಿಸ್ತರಿಸಲು ರಾಷ್ಟ್ರೀಯ ಗೋಕುಲ್ ಮಿಷನ್ ಪ್ರಗತಿಯಲ್ಲಿದೆ. ನಿಮಗೆ ನನ್ನ ವಿನಮ್ರ ವಿನಂತಿ ಇದು, ನಾನು ದೆಹಲಿಯಲ್ಲಿ ಈ ಉಪಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೆ ನೀವು ಅವುಗಳ ಲಾಭ ಪಡೆಯದಿದ್ದರೆ, ಏನರ್ಥ? ನೀವು ಈ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯಬೇಕು. ಹಾಗೆ ಮಾಡುವುದರಿಂದ, ಲಕ್ಷಾಂತರ ಪ್ರಾಣಿಗಳು ಮತ್ತು ಜೀವಿಗಳ ಆಶೀರ್ವಾದವನ್ನು ನಾನು ಪಡೆಯುತ್ತೇನೆ. ಆದ್ದರಿಂದ, ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ.

ನಾನು ಈ ಹಿಂದೆ ಉಲ್ಲೇಖಿಸಿರುವ ಮತ್ತು ಇಂದು ಪುನರಾವರ್ತಿಸುವ ಇನ್ನೊಂದು ಪ್ರಮುಖ ವಿಷಯವೆಂದರೆ, ಸಸಿ ನೆಡುವ ಮಹತ್ವ. ಈ ವರ್ಷ, ನಾನು ವಿಶ್ವಾದ್ಯಂತ ಪ್ರಶಂಸಿಸಲ್ಪಟ್ಟ ಅಭಿಯಾನ ಪ್ರಾರಂಭಿಸಿದೆ: 'ಏಕ್ ಪೇಢ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ 1 ಮರ). ನಿಮ್ಮ ತಾಯಿ ಜೀವಂತವಾಗಿದ್ದರೆ, ಅವರ ಸಮ್ಮುಖದಲ್ಲಿ ಒಂದು ಸಸಿ ನೆಡಿ. ಅವರು ನಿಧನರಾಗಿದ್ದರೆ, ಅವರ ನೆನಪಿಗಾಗಿ 1 ಸಸಿ ನೆಡಿ, ಅವರ ಛಾಯಾಚಿತ್ರವನ್ನು ಅದರ ಮುಂದೆ ಇರಿಸಿ. ಭರ್ವಾಡ ಸಮುದಾಯವು ಬಲವಾದ, ದೀರ್ಘಕಾಲ ಬದುಕುವ ಹಿರಿಯರಿಗೆ ಹೆಸರುವಾಸಿಯಾಗಿದೆ, ಅವರಲ್ಲಿ ಹಲವರು 90ರಿಂದ 100 ವರ್ಷಗಳ ಕಾಲ ಬದುಕುತ್ತಾರೆ. ನಾವು ಅವರಿಗೆ ಸೇವೆ ಸಲ್ಲಿಸಲು ಹೆಮ್ಮೆಪಡುತ್ತೇವೆ. ಈಗ ನಮ್ಮ ತಾಯಂದಿರ ಹೆಸರಿನಲ್ಲಿ ಸಸಿಗಳನ್ನು ನೆಡುವುದರಲ್ಲಿ ನಾವು ಹೆಮ್ಮೆಪಡಬೇಕು. ನಾವು ಭೂಮಿ ತಾಯಿಗೆ ಹಾನಿ ಮಾಡಿದ್ದೇವೆ ಎಂದು ಒಪ್ಪಿಕೊಳ್ಳಬೇಕು, ನಾವು ನೀರನ್ನು ಹೊರತೆಗೆದಿದ್ದೇವೆ, ರಾಸಾಯನಿಕಗಳನ್ನು ಸೇರಿಸಿದ್ದೇವೆ, ಅವಳ ಬಾಯಾರಿಕೆಯನ್ನು ಬಿಟ್ಟಿದ್ದೇವೆ ಮತ್ತು ಅವಳ ಮಣ್ಣನ್ನು ವಿಷಪೂರಿತಗೊಳಿಸಿದ್ದೇವೆ. ಭೂಮಿ ತಾಯಿಯ ಆರೋಗ್ಯ ಮರುಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇದಕ್ಕಾಗಿ, ಜಾನುವಾರು ಗೊಬ್ಬರವು ನಮ್ಮ ಭೂಮಿಗೆ ಸಂಪತ್ತಿನಂತೆ. ಅದು ಮಣ್ಣನ್ನು ಪೋಷಿಸುತ್ತದೆ ಮತ್ತು ಬಲಪಡಿಸುತ್ತದೆ. ಅದಕ್ಕಾಗಿಯೇ ನೈಸರ್ಗಿಕ ಕೃಷಿ ನಿರ್ಣಾಯಕವಾಗಿದೆ. ಭೂಮಿ ಹೊಂದಿರುವವರು ಮತ್ತು ಅವಕಾಶ ಹೊಂದಿರುವವರು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕು. ಗುಜರಾತ್ ರಾಜ್ಯಪಾಲ ಆಚಾರ್ಯ ಅವರು ನೈಸರ್ಗಿಕ ಕೃಷಿ ಉತ್ತೇಜಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ, ನಿಮ್ಮೆಲ್ಲರಿಗೂ ನನ್ನ ವಿನಂತಿ ಏನೆಂದರೆ, ನಮ್ಮಲ್ಲಿ ಯಾವುದೇ ಭೂಮಿ ಇದೆಯೋ ಅದು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ನಾವು ನೈಸರ್ಗಿಕ ಕೃಷಿಯತ್ತ ಗಮನ ಹರಿಸಬೇಕು, ಭೂಮಿ ತಾಯಿಗೆ ಸೇವೆ ಸಲ್ಲಿಸಬೇಕು.

ಪ್ರಿಯ ಸಹೋದರ ಮತ್ತು ಸಹೋದರಿಯರೆ,

ಮತ್ತೊಮ್ಮೆ, ನಾನು ಭರ್ವಾಡ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ, ನಾಗಾ ಲಖಾ ಠಾಕರ್ ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಬವಾಲಿಯಾಲಿ ಧಾಮ್‌ನೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಸಮೃದ್ಧಿ ಮತ್ತು ಪ್ರಗತಿ ಸಿಗಲಿ, ಇದು ಠಾಕರ್ ಅವರ ಪಾದಗಳಿಗೆ ಎರಗಿ ನಾನು ಪ್ರಾರ್ಥಿಸುತ್ತಿದ್ದೇನೆ. ನಮ್ಮ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಶಿಕ್ಷಣ ಪಡೆದು ಪ್ರಗತಿ ಹೊಂದುವುದನ್ನು ಮತ್ತು ನಮ್ಮ ಸಮುದಾಯವು ಬಲವಾಗಿ ಬೆಳೆಯುವುದನ್ನು ನೋಡುವುದಕ್ಕಿಂತ ಹೆಚ್ಚಿನದನ್ನು ನಾವು ಏನು ಕೇಳಬಹುದು? ಈ ಶುಭ ಸಂದರ್ಭದಲ್ಲಿ, ಭಾಯಿ ಅವರ ಮಾತುಗಳನ್ನು ಗೌರವಿಸೋಣ ಮತ್ತು ನಮ್ಮ ಸಮುದಾಯವು ತನ್ನ ಶಕ್ತಿ ಉಳಿಸಿಕೊಂಡು ಆಧುನಿಕತೆಯತ್ತ ಸಾಗುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಅವುಗಳನ್ನು ಮುಂದಕ್ಕೆ ಕೊಂಡೊಯ್ಯೋಣ. ನನಗೆ ನಿಜವಾಗಿಯೂ ಅಪಾರ ಸಂತೋಷವಾಗಿದೆ. ನಾನು ಖುದ್ದಾಗಿ ಬರಲು ಸಾಧ್ಯವಾದರೆ, ಅದು ಇನ್ನೂ ಹೆಚ್ಚಿನ ಸಂತೋಷ ತರುತ್ತಿತ್ತು.

ಜೈ ಠಾಕರ್!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Commendable performance of India’s marine exports amid uncertain times

Media Coverage

Commendable performance of India’s marine exports amid uncertain times
NM on the go

Nm on the go

Always be the first to hear from the PM. Get the App Now!
...
Prime Minister congratulates Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog
May 02, 2026

Prime Minister Shri Narendra Modi has congratulated Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog.

The Prime Minister noted that their rich experience and deep understanding of various issues will greatly strengthen policymaking. Shri Modi expressed confidence that their contributions will help drive innovation and growth across sectors. He also wished them a very productive and impactful tenure ahead.

The Prime Minister posted on X:

"Congratulations to Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog. Their rich experience and deep understanding of various issues will greatly strengthen policy making. I am confident their contributions will help drive innovation and growth across sectors. Wishing them a very productive and impactful tenure ahead."