ಮೊದಲ ಕಲಾಪದಲ್ಲಿ ನಾರಿಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಪ್ರಧಾನಿ
“ಅಮೃತ ಕಾಲದ ಉದಯದಲ್ಲಿ, ಭಾರತವು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಭವಿಷ್ಯದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ’’
“ಇದು ಸಂಕಲ್ಪಗಳನ್ನು ಸಾಧಿಸಲು ನವೀಕೃತ ಉತ್ಸಾಹ ಮತ್ತು ಶಕ್ತಿಯೊಂದಿಗೆ ಹೊಸ ಪಯಣವನ್ನು ಆರಂಭಿಸುವ ಕಾಲ’’
“ಸೆಂಗೋಲ್ (ರಾಜದಂಡ) ನಮ್ಮ ಹಿಂದಿನ ಅತ್ಯಂತ ಪ್ರಮುಖ ಭಾಗದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ’’
“ಹೊಸ ಸಂಸತ್ ಕಟ್ಟಡದ ಭವ್ಯತೆಯು ಆಧುನಿಕ ಭಾರತವನ್ನು ವೈಭವಿಕರಿಸುತ್ತದೆ. ನಮ್ಮ ಎಂಜಿನಿಯರ್ ಗಳು ಮತ್ತು ಕಾರ್ಮಿಕರ ಶ್ರಮ ಬೆವರು ಇದರಲ್ಲಿ ಸೇರಿದೆ’’
“ನಾರಿಶಕ್ತಿ ವಂದನಾ ಅಧಿನಿಯಮ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತದೆ’’
“ಭವನ (ಕಟ್ಟಡ) ಬದಲಾದಂತೆ, ಭಾವ (ಭಾವನೆ)ಗಳೂ ಕೂಡ ಬದಲಾಗಬೇಕು’’
“ನಾವೆಲ್ಲರೂ ಸಂಸದೀಯ ಪರಂಪರೆಯ ಲಕ್ಷಣರೇಖೆಯನ್ನು ಪಾಲಿಸಬೇಕು’’
“ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. 2023ರ ಸೆಪ್ಟಂಬರ್ 19 ಈ ಐತಿಹಾಸಿಕ ದಿನವು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ’’
“ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಸಂಕಲ್ಪವನ್ನು ಮುಂದುವರಿಸಿಕೊಂಡು ನಮ್ಮ ಸರ್ಕಾರ ಇಂದು ಪ್ರಮುಖ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸುತ್ತಿದೆ. ಈ ಮಸೂದೆಯ ಉದ್ದೇಶ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವಿಸ್ತರಣೆ ಮಾಡುವುದಾಗಿದೆ’’ “ನಾವು ಈ ಮಸೂದೆಯನ್ನು ಶಾಸನವನ್ನಾಗಿ ಮಾಡಲು ಬದ್ಧವಾಗಿದ್ದೇವೆ ಎಂದು ನಾನು ದೇಶದ ಎಲ್ಲ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರಿಗೆ ಭರವಸೆ ನೀಡುತ್ತೇನೆ’’

ಗೌರವಾನ್ವಿತ ಸ್ಪೀಕರ್ ಸರ್

ಉದ್ಘಾಟನೆಯಾದ ನೂತನ ಸಂಸತ್ ಭವನದಲ್ಲಿ ನಡೆಯುತ್ತಿರುವ ಐತಿಹಾಸಿಕ ಲೋಕಸಭೆ ಅಧಿವೇಶನ ಇದಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರಿಗೆ ಮತ್ತು ದೇಶದ ಸಮಸ್ತ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

 

ಮಾನ್ಯ ಸ್ಪೀಕರ್ ಸರ್,

ಹೊಸ ಸದನದ ಮೊದಲ ಅಧಿವೇಶನದಲ್ಲಿ ನನಗೆ ಇಂದು ಮೊದಲು ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈ ಹೊಸ ಸಂಸತ್ತಿನ ಕಟ್ಟಡದಲ್ಲಿ ನಾನು ಎಲ್ಲಾ ಗೌರವಾನ್ವಿತ ಸಂಸತ್ತಿನ ಸದಸ್ಯರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಸಂದರ್ಭವು ಅನೇಕ ವಿಧಗಳಲ್ಲಿ ಅಭೂತಪೂರ್ವವಾಗಿದೆ. ಇದು ಸ್ವಾತಂತ್ರ್ಯದ ‘ಅಮೃತ ಕಾಲ’ದ ಮುಂಜಾನೆಯಲ್ಲಿ ಭಾರತವು ಹೊಸ ದೃಢ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತಿದೆ ಮತ್ತು ಈ ಹೊಸ ಕಟ್ಟಡದಲ್ಲಿ ತನ್ನ ಭವಿಷ್ಯ ರೂಪಿಸುತ್ತಿದೆ. ವಿಜ್ಞಾನ ಲೋಕದಲ್ಲಿ ಚಂದ್ರಯಾನ-3ರ ಅಮೋಘ ಯಶಸ್ಸು ಪ್ರತಿಯೊಬ್ಬ ನಾಗರಿಕನಲ್ಲೂ ಹೆಮ್ಮೆ ಮೂಡಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆಯ ಆಯೋಜನೆ ವಿಶ್ವ ವೇದಿಕೆಯಲ್ಲಿ ಅಪೇಕ್ಷಿತ ಪ್ರಭಾವ ತರುವ ಅವಕಾಶವಾಗಿದೆ. ಈ ಬೆಳಕು ಇಂದು ಹೊಸ ಸಂಸತ್ತಿನ ಕಟ್ಟಡದಲ್ಲಿ ಆಧುನಿಕ ಭಾರತ ಮತ್ತು ನಮ್ಮ ಪ್ರಾಚೀನ ಪ್ರಜಾಪ್ರಭುತ್ವದ ಶುಭಾರಂಭವನ್ನು ಗುರುತಿಸುತ್ತದೆ. ಇದು ಗಣೇಶ ಚತುರ್ಥಿಯ ಮಂಗಳಕರ ದಿನ ಎಂಬುದು ಸಂತಸ ಸರುವ ಕಾಕತಾಳೀಯ ಸಂದರ್ಭವಾಗಿದೆ. ಭಗವಾನ್ ಗಣೇಶನು ಮಂಗಳಕರ ಮತ್ತು ಯಶಸ್ಸಿನ ಅಧಿದೇವತೆ. ಗಣೇಶನು ಬುದ್ಧಿವಂತಿಕೆ ಮತ್ತು ಜ್ಞಾನದ ದೇವರು ಕೂಡ. ಈ ಪವಿತ್ರ ದಿನದಂದು, ನಮ್ಮ ಉದ್ಘಾಟನೆಯು ಸಂಕಲ್ಪದಿಂದ ಮತ್ತು ಹೊಸ ಆತ್ಮವಿಶ್ವಾಸದಿಂದ ಸಾಧನೆಯ ಕಡೆಗೆ ಸಾಗುವ ಪ್ರಯಾಣವಾಗಿದೆ.

ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತಿರುವಾಗ, ವಿಶೇಷವಾಗಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಲೋಕಮಾನ್ಯ ತಿಲಕರು ನೆನಪಾಗುವುದು ಸಹಜ. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ, ಲೋಕಮಾನ್ಯ ತಿಲಕ್ ಜಿ ಅವರು ರಾಷ್ಟ್ರಾದ್ಯಂತ ಸ್ವರಾಜ್ಯದ ಮನೋಭಾವವನ್ನು ಜಾಗೃತಗೊಳಿಸುವ ಸಾಧನವಾಗಿ ಗಣೇಶ ಹಬ್ಬವನ್ನು ಸ್ಥಾಪಿಸಿದರು. ಲೋಕಮಾನ್ಯ ತಿಲಕ್ ಜಿ ಅವರು ಗಣೇಶ ಹಬ್ಬದಲ್ಲಿ ಸ್ವತಂತ್ರ ಭಾರತದ ಪರಿಕಲ್ಪನೆಯನ್ನು ತುಂಬಿದರು. ಇಂದು ಗಣೇಶ ಚತುರ್ಥಿಯಂದು ನಾವು ಅವರ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತೇವೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಎಲ್ಲಾ ನಾಗರಿಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮಾನ್ಯ ಸ್ಪೀಕರ್ ಸರ್,

ಇಂದು ಸಂವತ್ಸರಿ ಹಬ್ಬವೂ ಆಗಿದೆ, ಇದು ಸ್ವತಃ ಒಂದು ಗಮನಾರ್ಹ ಸಂಪ್ರದಾಯವಾಗಿದೆ. ಈ ದಿನವನ್ನು ಕ್ಷಮೆಯ ದಿನ ಎಂದೂ ಪರಿಗಣಿಸಲಾಗುತ್ತದೆ. ನಮ್ಮ ಕಾರ್ಯಗಳು, ಮಾತುಗಳು ಮತ್ತು ಉದ್ದೇಶಗಳ ಮೂಲಕ ನಾವು ತಿಳಿದೋ ಅಥವಾ ತಿಳಿಯದೆಯೋ ನೋಯಿಸಬಹುದಾದ ಯಾರಿಗಾದರೂ ನಾವು ಹೃದಯದಿಂದ ಕ್ಷಮೆ ಕೋರಿದಾಗ 'ಮಿಚ್ಚಾಮಿ ದುಕ್ಕಡಮ್' ಎಂದು ಹೇಳುವ ದಿನವಾಗಿದೆ. ನಾನು ಕೂಡ ನಿಮ್ಮೆಲ್ಲರಿಗೂ, ಸಂಸತ್ತಿನ ಎಲ್ಲ ಸದಸ್ಯರಿಗೂ ಮತ್ತು ನನ್ನ ಹೃದಯದಿಂದ ಎಲ್ಲಾ ನಾಗರಿಕರಿಗೂ ನನ್ನ ಪ್ರಾಮಾಣಿಕ 'ಮಿಚ್ಚಾಮಿ ದುಕ್ಕಡಮ್' ಅನ್ನು ಅರ್ಪಿಸುತ್ತೇನೆ. ನಾವು ಇಂದು ಹೊಸ ಆರಂಭ ಮಾಡುತ್ತಿರುವಾಗ, ಹಿಂದಿನ ಕಹಿಯನ್ನು ಬಿಟ್ಟು ಮುಂದೆ ಸಾಗಬೇಕು. ಏಕತೆಯ ಮನೋಭಾವ, ನಮ್ಮ ನಡವಳಿಕೆ ಮತ್ತು ನಮ್ಮ ಭಾಷಣದೊಂದಿಗೆ, ನಮ್ಮ ನಿರ್ಣಯಗಳು ರಾಷ್ಟ್ರ ಮತ್ತು ಪ್ರತಿಯೊಬ್ಬ ನಾಗರಿಕರಿಗೆ ಸ್ಫೂರ್ತಿಯಾಗಬೇಕು. ಈ ಜವಾಬ್ದಾರಿಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಪೂರೈಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು.

ಗೌರವಾನ್ವಿತ ಸ್ಪೀಕರ್ ಸರ್,

ಈ ಕಟ್ಟಡ ಹೊಸದು, ಇಲ್ಲಿ ಎಲ್ಲವೂ ಹೊಸದು, ಎಲ್ಲಾ ವ್ಯವಸ್ಥೆಗಳು ಹೊಸದು ಮತ್ತು ಎಲ್ಲಾ ಸಹೋದ್ಯೋಗಿಗಳು ಹೊಸ ಉಡುಪಿನಲ್ಲಿದ್ದಾರೆ. ಎಲ್ಲವೂ ಹೊಸದುದೇ, ಆದರೆ ಇದೆಲ್ಲದರ ನಡುವೆ, ಭೂತಕಾಲ ಮತ್ತು ವರ್ತಮಾನ ಸಂಪರ್ಕಿಸುವ ದೊಡ್ಡ ಪರಂಪರೆಯ ಸಂಕೇತವೂ ಇದೆ. ಇದು ಹೊಸದೇನಲ್ಲ, ಇದು ಹಳೆಯದು. ಇದು ಇಂದಿಗೂ ನಮ್ಮ ನಡುವೆ ಇರುವ ಸ್ವಾತಂತ್ರ್ಯದ ಮೊದಲ ಕಿರಣಗಳಿಗೆ ಸಾಕ್ಷಿಯಾಗಿದೆ. ಇದು ನಮ್ಮ ಶ್ರೀಮಂತ ಇತಿಹಾಸಕ್ಕೆ ನಮ್ಮನ್ನು ಸಂಪರ್ಕಿಸುತ್ತದೆ. ನಾವು ಹೊಸ ಸಂಸತ್ತಿಗೆ ಪ್ರವೇಶಿಸುತ್ತಿದ್ದಂತೆ, ಅದು ಸ್ವಾತಂತ್ರ್ಯದ ಮೊದಲ ಕಿರಣಗಳಿಗೆ ಸಾಕ್ಷಿಯಾಗಿದೆ, ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಇದು ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂ ಅವರಿಂದ ಮೊದಲು ಸ್ವೀಕರಿಸಲ್ಪಟ್ಟ ಪವಿತ್ರ ಸೆಂಗೋಲ್ ಆಗಿದೆ. ಈ ಸೆಂಗೋಲ್ ನೊಂದಿಗೆ, ಪಂಡಿತ್ ನೆಹರು ಆಚರಣೆ ಮಾಡಿದರು, ಸ್ವಾತಂತ್ರ್ಯದ ಆಚರಣೆ ಪ್ರಾರಂಭಿಸಿದರು. ಆದ್ದರಿಂದ, ಈ ಮಹತ್ವದ ಭೂತಕಾಲವು ಈ ಸೆಂಗೋಲ್‌ನೊಂದಿಗೆ ಸಂಪರ್ಕ ಹೊಂದಿದೆ. ಇದು ತಮಿಳುನಾಡಿನ ಶ್ರೇಷ್ಠ ಸಂಪ್ರದಾಯದ ಸಂಕೇತವಾಗಿದೆ, ಜತೆಗೆ ರಾಷ್ಟ್ರದ ಏಕತೆಯನ್ನು ಸಂಕೇತಿಸುತ್ತದೆ. ಪಂಡಿತ್ ನೆಹರೂ ಅವರ ಕೈಗಳನ್ನು ಅಲಂಕರಿಸಿದ ಸೆಂಗೋಲ್ ಇಂದು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ, ಮಾನ್ಯ ಸಂಸದರೆ, ಇದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನಿದೆ?

ಮಾನ್ಯ ಸ್ಪೀಕರ್ ಸರ್,

ಹೊಸ ಸಂಸತ್ ಕಟ್ಟಡದ ಭವ್ಯತೆಯು ಆಧುನಿಕ ಭಾರತದ ವೈಭವವನ್ನು ಸಂಕೇತಿಸುತ್ತದೆ. ನಮ್ಮ ಕಾರ್ಮಿಕರು, ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ಇದಕ್ಕೆ ತಮ್ಮ ಬೆವರು ಹರಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಅವರು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ. ಕಟ್ಟಡ ನಿರ್ಮಾಣ ನಡೆಯುತ್ತಿರುವಾಗ, ಈ ಕಾರ್ಮಿಕರನ್ನು ಭೇಟಿ ಮಾಡಲು ನನಗೆ ಆಗಾಗ್ಗೆ ಅವಕಾಶ ಸಿಕ್ಕಿತ್ತು, ವಿಶೇಷವಾಗಿ ಅವರ ಆರೋಗ್ಯದ ಬಗ್ಗೆ. ಅಂತಹ ಸವಾಲಿನ ಸಮಯದಲ್ಲೂ ಅವರು ಈ ಭವ್ಯವಾದ ಕನಸನ್ನು ನನಸಾಗಿಸಿದರು. ಇಂದು, ನಾವೆಲ್ಲರೂ ಆ ಕಾರ್ಮಿಕರು, ಸಿಬ್ಬಂದಿ ಮತ್ತು ಇಂಜಿನಿಯರ್‌ಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ, ಏಕೆಂದರೆ ಅವರ ಕೊಡುಗೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ. 30,000ಕ್ಕೂ ಹೆಚ್ಚು ಕಾರ್ಮಿಕರು ಈ ಭವ್ಯವಾದ ಕಟ್ಟಡ ಕಟ್ಟಲು ದಣಿವರಿಯದೆ ಬೆವರು ಹರಿಸಿದ್ದಾರೆ. ಇದು ಮುಂದಿನ ಹಲವು ತಲೆಮಾರುಗಳಿಗೆ ಮಹತ್ತರವಾದ ಕೊಡುಗೆಯಾಗಲಿದೆ.

ಸನ್ಮಾನ್ಯ ಶ್ರೀ ಸ್ಪೀಕರ್ ಸರ್,

ಆ ಎಲ್ಲಾ ಕೆಲಸಗಾರರಿಗೆ ನನ್ನ ನಮನಗಳನ್ನು ಸಲ್ಲಿಸುವಾಗ, ಹೊಸ ಸಂಪ್ರದಾಯ ಪ್ರಾರಂಭವಾಗಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ, ಅದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಈ ಸದನದಲ್ಲಿ ಡಿಜಿಟಲ್ ಪುಸ್ತಕಗಳನ್ನು ಇಡಲಾಗಿದೆ. ಈ ಡಿಜಿಟಲ್ ಪುಸ್ತಕವು ಆ ಎಲ್ಲ ಕಾರ್ಮಿಕರ ಸಂಪೂರ್ಣ ಮಾಹಿತಿ(ಪ್ರೊಫೈಲ್‌)ಗಳನ್ನು ಒಳಗೊಂಡಿದೆ, ಇದರಿಂದಾಗಿ ಭವಿಷ್ಯದ ಪೀಳಿಗೆಗೆ ಭಾರತದ ಯಾವ ಭಾಗದಿಂದ ಬಂದರು? ಅವರ ಬೆವರು ಈ ಭವ್ಯವಾದ ಕಟ್ಟಡ ನಿರ್ಮಾಣಕ್ಕೆ ಹೇಗೆ ಕೊಡುಗೆ ನೀಡಿದೆ ಎಂಬುದು ಎಂಬುದು ತಿಳಿಯುತ್ತದೆ. ಇದೊಂದು ಹೊಸ ಆರಂಭ, ಶುಭಾರಂಭ ಮತ್ತು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಈ ಸಂದರ್ಭದಲ್ಲಿ, 1.4 ಶತಕೋಟಿ ನಾಗರಿಕರ ಪರವಾಗಿ ಮತ್ತು ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯದ ಪರವಾಗಿ ನಾನು ಈ ಎಲ್ಲಾ ದಣಿವರಿಯದ ಕಾರ್ಮಿಕರಿಗೆ ವಂದಿಸುತ್ತೇನೆ.

ಮಾನ್ಯ ಸ್ಪೀಕರ್ ಸರ್,

ನಮ್ಮ ದೇಶದಲ್ಲಿ ಈ ಸಂಸ್ಕೃತ ನುಡಿಯನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ: ‘ಯದ್ ಭಾವಂ ತದ್ ಭವತಿ’ ಅಂದರೆ ನಮ್ಮ ಉದ್ದೇಶಗಳು ನಮ್ಮ ಕ್ರಿಯೆಗಳನ್ನು ರೂಪಿಸುತ್ತವೆ. ಆದ್ದರಿಂದ, ನಮ್ಮ ಉದ್ದೇಶಗಳಂತೆಯೇ, ಫಲಿತಾಂಶಗಳೂ ಸಹ. ನಾವು ಹೊಸ ಉದ್ದೇಶಗಳೊಂದಿಗೆ ಹೊಸ ಸಂಸತ್ತಿಗೆ ಪ್ರವೇಶಿಸಿದ್ದೇವೆ. ನಮ್ಮೊಳಗಿನ ಅದೇ ಉದ್ದೇಶಗಳು ನಮ್ಮನ್ನು ಸ್ವಾಭಾವಿಕವಾಗಿ ರೂಪಿಸಲು ಮುಂದುವರಿಯುತ್ತವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಕಟ್ಟಡವು ಬದಲಾಗಿದೆ ಮತ್ತು ನಮ್ಮ ಅಭಿವ್ಯಕ್ತಿಗಳು ಬದಲಾಗುವುದನ್ನು ನಾನು ನೋಡಲು ಬಯಸುತ್ತೇನೆ. ನಮ್ಮ ಭಾವನೆಗಳು ಸಹ ಬದಲಾಗಬೇಕು.

ಸಂಸತ್ತು ರಾಷ್ಟ್ರೀಯ ಸೇವೆಯ ಅತ್ಯುನ್ನತ ಸಂಸ್ಥೆಯಾಗಿದೆ. ಇದು ರಾಜಕೀಯ ಪಕ್ಷಗಳ ಕಲ್ಯಾಣಕ್ಕಾಗಿ ಅಲ್ಲ, ಆದರೆ ನಮ್ಮ ಸಂವಿಧಾನ ಶಿಲ್ಪಿಗಳು ಕಲ್ಪಿಸಿರುವಂತೆ, ರಾಷ್ಟ್ರದ ಕಲ್ಯಾಣಕ್ಕಾಗಿ ಮಾತ್ರ ಸಂಸತನ್ನು ಸ್ಥಾಪಿಸಲಾಗಿದೆ. ಸಂಸತ್ತಿನ ಹೊಸ ಕಟ್ಟಡದಲ್ಲಿ ನಾವೆಲ್ಲರೂ ಸಂವಿಧಾನದ ಆಶಯದೊಂದಿಗೆ ನಮ್ಮ ಮಾತು, ಆಲೋಚನೆ ಮತ್ತು ನಡವಳಿಕೆಗೆ ಒತ್ತು ನೀಡಬೇಕು. ಶ್ರೀ ಸಭಾಧ್ಯಕ್ಷರೇ, ನಿನ್ನೆ ಮತ್ತು ಇಂದು ಸಂಸದರ ವರ್ತನೆಗೆ ಸಂಬಂಧಿಸಿದಂತೆ ನೀವು ಸ್ಪಷ್ಟವಾಗಿ ಮತ್ತು ಪರೋಕ್ಷವಾಗಿ ಹೇಳಿದ್ದೀರಿ. ಈ ಸದನದ ನಾಯಕರಾಗಿ ನಿಮ್ಮ ನಿರೀಕ್ಷೆಗಳನ್ನು ಈಡೇರಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ರಾಷ್ಟ್ರವು ನಮ್ಮನ್ನು ಗಮನಿಸುತ್ತಿರುವಂತೆ ನಾವು ಶಿಸ್ತನ್ನು ಅನುಸರಿಸುತ್ತೇವೆ. ನಿಮ್ಮ ನಿರ್ದೇಶನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ.

ಮಾನ್ಯ ಶ್ರೀ ಸ್ಪೀಕರ್ ಸರ್,

ಚುನಾವಣೆ ಇನ್ನೂ ದೂರವಿದೆ. ಈ ಸಂಸತ್ತಿನಲ್ಲಿ ನಮಗೆ ಉಳಿದಿರುವ ಸಮಯವು ಯಾರು ಖಜಾನೆ ಸಾಲಿನಲ್ಲಿ ಕೂರಬೇಕು ಮತ್ತು ಯಾರು ವಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಲು ಅರ್ಹರು ಎಂಬುದನ್ನು ನಮ್ಮ ನಡವಳಿಕೆಗಳೇ ನಿರ್ಧರಿಸುತ್ತವೆ. ಖಜಾನೆಯ ಬೆಂಚ್‌ಗಳಲ್ಲಿ ಯಾರು ಕುಳಿತುಕೊಳ್ಳಬೇಕು ಮತ್ತು ವಿರೋಧ ಪಕ್ಷದ ಬೆಂಚುಗಳಲ್ಲಿ ಯಾರು ಕುಳಿತುಕೊಳ್ಳಬೇಕು ಎಂಬುದನ್ನು ನಡವಳಿಕೆ ನಿರ್ಧರಿಸುತ್ತದೆ. ಮುಂದಿನ ದಿನಗಳಲ್ಲಿ ದೇಶವು ಈ ವ್ಯತ್ಯಾಸವನ್ನು ನೋಡುತ್ತದೆ. ರಾಜಕೀಯ ಪಕ್ಷಗಳ ನಡವಳಿಕೆಯನ್ನು ದೇಶವೇ ನಿರ್ಣಯಿಸುತ್ತದೆ ಎಂದು ನಾನು ನಂಬುತ್ತೇನೆ.

ಮಾನ್ಯ ಸ್ಪೀಕರ್ ಸರ್,

ನಮ್ಮ ಧರ್ಮಗ್ರಂಥಗಳಲ್ಲಿ ‘ಸಮ್ಮಿಚ, ಸಬ್ರತಾ, ಋತಬಾ ಬಾಚನ್ಮ ಬದತ’ ಅಂದರೆ ನಾವೆಲ್ಲರೂ ಒಟ್ಟಾಗಿ ಸೇರಿ ಹಂಚಿತ ಸಂಕಲ್ಪದೊಂದಿಗೆ ಅರ್ಥಪೂರ್ಣ ಮತ್ತು ಫಲಪ್ರದ ಸಂವಾದದಲ್ಲಿ ತೊಡಗಬೇಕು ಎಂದು ಹೇಳಲಾಗಿದೆ. ಇಲ್ಲಿ ನಮ್ಮ ಆಲೋಚನೆಗಳು ಭಿನ್ನವಾಗಿರಬಹುದು, ನಮ್ಮ ಚರ್ಚೆಗಳು ಬದಲಾಗಬಹುದು, ಆದರೆ ನಮ್ಮ ನಿರ್ಣಯಗಳು ಯಾವಾಗಲೂ ಒಂದಾಗಿರುತ್ತವೆ. ಆದ್ದರಿಂದ, ಈ ಏಕತೆ ಕಾಪಾಡಿಕೊಳ್ಳಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುವುದನ್ನು ಮುಂದುವರಿಸಬೇಕು.

ಮಾನ್ಯ ಸ್ಪೀಕರ್ ಸರ್,

ರಾಷ್ಟ್ರದ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ಮಹತ್ವದ ಸಂದರ್ಭಗಳಲ್ಲಿ ನಮ್ಮ ಸಂಸತ್ತು ಈ ಉತ್ಸಾಹದಿಂದ ಕೆಲಸ ಮಾಡಿದೆ. ಯಾರೂ ಯಾವುದೇ ನಿರ್ದಿಷ್ಟ ಗುಂಪಿಗೆ ಸೇರಿದವರಲ್ಲ. ಎಲ್ಲರೂ ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಈ ಹೊಸ ಆರಂಭದೊಂದಿಗೆ ಮತ್ತು ಈ ಸುಂದರ ಪರಿಸರದಲ್ಲಿ ನಾವು ಈ ಒಟ್ಟಾರೆ ಭಾವನೆಯನ್ನು ಸಾಧ್ಯವಾದಷ್ಟು ಬಲಪಡಿಸುತ್ತೇವೆ, ಇವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಸಂಸದೀಯ ಸಂಪ್ರದಾಯಗಳನ್ನು ಗೌರವಿಸಬೇಕು ಮತ್ತು ಸ್ಪೀಕರ್ ಅವರ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸಬೇಕು.

ಮಾನ್ಯ ಸ್ಪೀಕರ್ ಸರ್,

ಪ್ರಜಾಪ್ರಭುತ್ವದಲ್ಲಿ, ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ತರಲು ರಾಜಕೀಯ, ನೀತಿಗಳು ಮತ್ತು ಅಧಿಕಾರ ಪ್ರಮುಖ ಸಾಧನಗಳಾಗಿವೆ. ಅದು ಬಾಹ್ಯಾಕಾಶ ಅಥವಾ ಕ್ರೀಡೆ, ಸ್ಟಾರ್ಟಪ್‌ಗಳು ಅಥವಾ ಸ್ವ-ಸಹಾಯ ಗುಂಪುಗಳಾಗಿರಬಹುದು, ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಮಹಿಳೆಯರ ಶಕ್ತಿಯನ್ನು ಜಗತ್ತು ನೋಡುತ್ತಿದೆ. ಜಿ-20 ಅಧ್ಯಕ್ಷತೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಚರ್ಚೆಯನ್ನು ವಿಶ್ವಾದ್ಯಂತ ಸ್ವಾಗತಿಸಲಾಗುತ್ತಿದೆ ಮತ್ತು ಅಂಗೀಕರಿಸಲಾಗಿದೆ. ಕೇವಲ ಮಹಿಳಾ ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಸಾಕಾಗುವುದಿಲ್ಲ ಎಂದು ಜಗತ್ತು ಒಪ್ಪಿಕೊಳ್ಳುತ್ತದೆ. ನಾವು ಮಾನವ ಅಭಿವೃದ್ಧಿಯ ಪಯಣದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಮತ್ತು ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ಹೊಸ ಗಮ್ಯಸ್ಥಾನಗಳನ್ನು ತಲುಪಲು ಬಯಸಿದರೆ, ನಾವು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಜಿ-20 ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ.

ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಪ್ರತಿಯೊಂದು ಯೋಜನೆಗಳು ಮಹಿಳಾ ನಾಯಕತ್ವದ ಕಡೆಗೆ ಅರ್ಥಪೂರ್ಣ ಹೆಜ್ಜೆಗಳನ್ನು ಇಟ್ಟಿವೆ. ಹಣಕಾಸಿನ ಸೇರ್ಪಡೆ(ಒಳಗೊಳ್ಳುವಿಕೆ) ಗಮನದಲ್ಲಿಟ್ಟುಕೊಂಡು, ನಾವು ಜನ್ ಧನ್ ಯೋಜನೆ ಪ್ರಾರಂಭಿಸಿದ್ದೇವೆ. 50 ಕೋಟಿಗಿಂತ ಹೆಚ್ಚಿನ ಫಲಾನುಭವಿಗಳ ಪೈಕಿ ಹೆಚ್ಚಿನವರು ಮಹಿಳಾ ಖಾತೆದಾರರಾಗಿದ್ದಾರೆ. ಇದು ಗಮನಾರ್ಹ ಬದಲಾವಣೆ ಮತ್ತು ಸ್ವತಃ ಹೊಸ ನಂಬಿಕೆಯಾಗಿದೆ. ಮುದ್ರಾ ಯೋಜನೆ ಆರಂಭಿಸಿದಾಗ 10 ಲಕ್ಷ ರೂಪಾಯಿವರೆಗೆ ಯಾವುದೇ ಬ್ಯಾಂಕ್ ಗ್ಯಾರಂಟಿ ಇಲ್ಲದೆ ಸಾಲ ನೀಡಿದ್ದು, ಅಲ್ಲೂ ಫಲಾನುಭವಿಗಳಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿರುವುದು ದೇಶಕ್ಕೆ ಹೆಮ್ಮೆ ತಂದಿದೆ. ಇಡೀ ರಾಷ್ಟ್ರವು ಮಹಿಳಾ ಉದ್ಯಮಿಗಳ ಪ್ರವರ್ಧಮಾನಕ್ಕೆ ಸಾಕ್ಷಿಯಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಮಹಿಳೆಯರಲ್ಲಿ ಆಸ್ತಿ ದಾಖಲೆಗಳ ಗರಿಷ್ಠ ನೋಂದಣಿ ಕಂಡಿತು, ಅವರನ್ನು ಆಸ್ತಿಯ ಮಾಲೀಕರನ್ನಾಗಿ ಮಾಡಿದೆ.

ಮಾನ್ಯ ಸ್ಪೀಕರ್ ಸರ್,

ಪ್ರತಿಯೊಂದು ರಾಷ್ಟ್ರದ ಅಭಿವೃದ್ಧಿ ಪಯಣದಲ್ಲಿ, ಇಂದು ನಾವು ಹೊಸ ಇತಿಹಾಸ ನಿರ್ಮಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳುವ ಕ್ಷಣಗಳು ಬರುತ್ತವೆ.

ಗೌರವಾನ್ವಿತ ಶ್ರೀ ಸ್ಪೀಕರ್ ಸರ್,

ನೂತನ ಸದನದ ಮೊದಲ ಅಧಿವೇಶನದ ಉದ್ಘಾಟನಾ ಭಾಷಣದಲ್ಲಿ, ಈ ಕ್ಷಣ, ಸಂವತ್ಸರಿ, ಗಣೇಶ ಚತುರ್ಥಿಯ ದಿನವು ಇತಿಹಾಸ ಸೃಷ್ಟಿಸುವ ಸಮಯ ಎಂದು ನಾನು ಅತ್ಯಂತ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಈ ಕ್ಷಣ ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ಮಹಿಳಾ ಮೀಸಲಾತಿ ಕುರಿತು ಹಲವು ವರ್ಷಗಳಿಂದ ಚರ್ಚೆ, ಸಂವಾದಗಳು ನಡೆಯುತ್ತಲೇ ಇವೆ. ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಹಲವು ಬಾರಿ ಪ್ರಯತ್ನಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಮೊದಲ ಬಾರಿಗೆ 1996ರಲ್ಲಿ ಪರಿಚಯಿಸಲಾಯಿತು. ಅಟಲ್ ಜಿ ಅವರ ಅಧಿಕಾರಾವಧಿಯಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಹಲವು ಬಾರಿ ಮಂಡಿಸಲಾಯಿತು, ಆದರೆ ಅದನ್ನು ಅಂಗೀಕರಿಸಲು ನಮಗೆ ಸಂಸದರ ಬೆಂಬಲದ ಸಂಖ್ಯೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಎಂಬಂತೆ, ಆ ಕನಸು ಇನ್ನೂ ನನಸಾಗಿಲ್ಲ. ಮಹಿಳೆಯರಿಗೆ ಹಕ್ಕುಗಳನ್ನು ನೀಡುವ, ಮಹಿಳೆಯರ ಶಕ್ತಿಯನ್ನು ಬಳಸಿಕೊಳ್ಳುವ ಉದಾತ್ತ ಕಾರ್ಯಕ್ಕಾಗಿ ದೇವರು ನನ್ನನ್ನು ಆಯ್ಕೆ ಮಾಡಿರಬಹುದು.

ಮತ್ತೊಮ್ಮೆ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ನಿನ್ನೆಯಷ್ಟೇ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಅದಕ್ಕಾಗಿಯೇ ಇಂದು ಸೆಪ್ಟೆಂಬರ್ 19, ಇತಿಹಾಸದಲ್ಲಿ ಅಮರವಾಗಲಿದೆ. ಮಹಿಳೆಯರು ವೇಗವಾಗಿ ಪ್ರಗತಿ ಹೊಂದುತ್ತಿರುವ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕತ್ವದ ಪಾತ್ರಗಳನ್ನು ವಹಿಸುತ್ತಿರುವ ಈ ಸಮಯದಲ್ಲಿ, ನಮ್ಮ ತಾಯಂದಿರು, ಸಹೋದರಿಯರು, ನಮ್ಮ ಮಹಿಳಾ ಶಕ್ತಿಯು ನೀತಿ ನಿರೂಪಣೆ ಮತ್ತು ನೀತಿ ರೂಪಿಸುವಲ್ಲಿ ಹೆಚ್ಚಿನ ಕೊಡುಗೆ ನೀಡುವುದು ಬಹಳ ಮುಖ್ಯ. ಅವರು ಕೇವಲ ಕೊಡುಗೆ ನೀಡಬಾರದು, ಆದರೆ ಮಹತ್ವದ ಪಾತ್ರಗಳನ್ನು ನಿರ್ವಹಿಸಬೇಕು.

ಇಂದು, ಈ ಐತಿಹಾಸಿಕ ಸಂದರ್ಭದಲ್ಲಿ, ಹೊಸ ಸಂಸತ್ ಕಟ್ಟಡದಲ್ಲಿ ವ್ಯವಹಾರದ ಮೊದಲ ಆದೇಶವಾಗಿ, ನಾವು ದೇಶದಲ್ಲಿ ಬದಲಾವಣೆಯ ಹೊಸ ಯುಗಕ್ಕೆ ಕರೆ ನೀಡಿದ್ದೇವೆ. ರಾಷ್ಟ್ರದ ಸ್ತ್ರೀಶಕ್ತಿಗೆ ಪ್ರವೇಶದ ಹೊಸ ಬಾಗಿಲುಗಳನ್ನು ತೆರೆದಿದ್ದೇವೆ. ಎಲ್ಲ ಸಂಸದರು ಹೊಸ ಬಾಗಿಲು ತೆರೆಯಲಿ. ಈ ನಿರ್ಣಾಯಕ ನಿರ್ಧಾರದಿಂದ ಪ್ರಾರಂಭಿಸಿ, ನಮ್ಮ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿಗೆ ತನ್ನ ಬದ್ಧತೆ ಮುಂದುವರೆಸುತ್ತಾ, ಇಂದು ಪ್ರಮುಖ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸುತ್ತಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ವಿಸ್ತರಿಸುವುದು ಈ ಮಸೂದೆಯ ಗುರುತರ ಉದ್ದೇಶವಾಗಿದೆ. ನಾರಿಶಕ್ತಿ ವಂದನಾ ಅಧಿನಿಯಮದ ಮೂಲಕ ನಮ್ಮ ಪ್ರಜಾಪ್ರಭುತ್ವವು ಬಲಿಷ್ಠವಾಗುತ್ತದೆ ಮತ್ತು ಸದೃಢವಾಗುತ್ತದೆ.

ನಾರಿಶಕ್ತಿ ವಂದನಾ ಅಧಿನಿಯಮಕ್ಕಾಗಿ ನಾನು ನಮ್ಮ ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮಸೂದೆಯನ್ನು ಕಾನೂನಾಗಿ ಪರಿವರ್ತಿಸಲು ನಾವು ಬದ್ಧರಾಗಿದ್ದೇವೆ ಎಂದು ನಾನು ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಭರವಸೆ ನೀಡುತ್ತೇನೆ. ಸದನದಲ್ಲಿರುವ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಶ್ರದ್ಧಾಪೂರ್ವಕವಾಗಿ ವಿನಂತಿಸುತ್ತೇನೆ, ನಾವು ಈ ಮಂಗಳಕರ ಆರಂಭ ಮಾಡಿದಾಗ, ಈ ಪವಿತ್ರ ಉಪಕ್ರಮವು, ಈ ಮಸೂದೆಯು ಕಾನೂನಾದಾಗ, ಅದರ ಬಲವು ಹಲವು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ, ಈ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲು ಸಹಾಯ ಮಾಡಿದ ಉಭಯ ಸದನಗಳ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಹೊಸ ಸದನದ ಮೊದಲ ಅಧಿವೇಶನದಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Industry experts laud India-US trade deal, call it win-win for economy, markets

Media Coverage

Industry experts laud India-US trade deal, call it win-win for economy, markets
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam emphasising the Power of Self-Confidence in Building a Developed India
February 03, 2026

Prime Minister Shri Narendra Modi today shared a Sanskrit Subhashitam emphasizing the transformative role of self-confidence in realizing the vision of a developed India.

In a post on X, he wrote:

"आत्मविश्वास वह शक्ति है, जिसके बल पर सब कुछ संभव है। विकसित भारत के सपने को साकार करने में देशवासियों की यही शक्ति बहुत काम आने वाली है।

श्रीर्मङ्गलात् प्रभवति प्रागल्भ्यात् सम्प्रवर्धते।

दाक्ष्यात् तु कुरुते मूलं संयमात् प्रतितिष्ठति॥ "