"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಉದ್ದೇಶದ ಐಕಮತ್ಯ ಮತ್ತು ಕ್ರಿಯೆಯ ಏಕತೆಯ ಅಗತ್ಯವನ್ನು ಸೂಚಿಸುತ್ತದೆ"
"ವಿಶ್ವ ಯುದ್ಧದ ನಂತರದ ಜಾಗತಿಕ ಆಡಳಿತವು ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವ ಮತ್ತು ಸಾಮಾನ್ಯ ಹಿತಾಸಕ್ತಿ ವಿಷಯಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಎರಡೂ ಉದ್ದೇಶಗಳಲ್ಲಿ ವಿಫಲವಾಗಿದೆ"
"ಯಾವುದೇ ಗುಂಪು ತನ್ನ ನಿರ್ಧಾರಗಳಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗುವವರ ಅಭಿಪ್ರಾಯವನ್ನು ಕೇಳದೆ ಜಾಗತಿಕ ನಾಯಕತ್ವವನ್ನು ಪಡೆಯಲು ಸಾಧ್ಯವಿಲ್ಲ"
"ಭಾರತದ ಜಿ-20 ಅಧ್ಯಕ್ಷತೆಯು ಗ್ಲೋಬಲ್‌ ಸೌತ್‌ (ಆರ್ಥಿಕವಾಗಿ ಹಿಂದುಳಿದ ದೇಶಗಳು) ಗೆ ಧ್ವನಿ ನೀಡಲು ಪ್ರಯತ್ನಿಸಿದೆ"
“ನಾವು ಒಟ್ಟಾಗಿ ಪರಿಹರಿಸಲಾಗದ ಸಮಸ್ಯೆಗಳ ನಿರ್ಣಯಗಳು ಪರಿಹರಿಸಬಹುದಾದ ಮಾರ್ಗಗಳಿಗೆ ಅಡ್ಡಿಯಾಗಲು ಬಿಡಬಾರದು”
"ಒಂದೆಡೆ ಬೆಳವಣಿಗೆ ಮತ್ತು ದಕ್ಷತೆ ಮತ್ತು ಇನ್ನೊಂದೆಡೆ ಸ್ಥಿತಿಸ್ಥಾಪಕತ್ವದ ನಡುವೆ ಸೂಕ್ತ ಸಮತೋಲನವನ್ನು ಸಾಧಿಸಲು ಜಿ-20 ನಿರ್ಣಾಯಕ ಪಾತ್ರವನ್ನು ಹೊಂದಿದೆ"

ವಿದೇಶಾಂಗ ಮಂತ್ರಿಗಳೇ, ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೇ, ಗೌರವಾನ್ವಿತರೇ, 

ಜಿ-20ರ ವಿದೇಶಾಂಗ ಸಚಿವರ ಸಭೆಗೆ ನಾನು ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಭಾರತವು ತನ್ನ ಜಿ-20ರ ಅಧ್ಯಕ್ಷ ಸ್ಥಾನದಿಂದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಘೋಷವಾಕ್ಯವನ್ನು ಆಯ್ಕೆ ಮಾಡಿದೆ. ಈ ಘೋಷವಾಕ್ಯವು ಉದ್ದೇಶದ ಏಕತೆ ಮತ್ತು ಕ್ರಿಯೆಯ ಏಕತೆಯ ಅಗತ್ಯವನ್ನು ಸೂಚಿಸುತ್ತದೆ. ಸಾಮಾನ್ಯ ಮತ್ತು ದೃಢವಾದ ಉದ್ದೇಶಗಳನ್ನು ಸಾಧಿಸಲು ಒಗ್ಗೂಡುವ ಈ ಮನೋಭಾವವನ್ನು ಇಂದಿನ ಈ ಸಭೆ ಪ್ರತಿಬಿಂಬಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಗೌರವಾನ್ವಿತರೇ,

ಬಹುಪಕ್ಷೀಯತೆಯು ಇಂದು ಬಿಕ್ಕಟ್ಟಿನಲ್ಲಿದೆ ಎಂಬುದನ್ನು ನಾವೆಲ್ಲರೂ ಒಪ್ಪಲೇಬೇಕು. ಎರಡನೆಯ ಮಹಾಯುದ್ಧದ ನಂತರ ರಚಿಸಲಾದ ಜಾಗತಿಕ ಆಡಳಿತದ ಆಯಕಟ್ಟು ಎರಡು ಕಾರ್ಯಗಳನ್ನು ಪೂರೈಸಬೇಕಾಗಿತ್ತು. ಮೊದಲನೆಯದು, ಸ್ಪರ್ಧಾತ್ಮಕ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಮೂಲಕ ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವುದು. ಎರಡನೆಯದು, ಸಾಮಾನ್ಯ ಹಿತಾಸಕ್ತಿಗಳ ವಿಷಯಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಬೆಳೆಸುವುದು. ಕಳೆದ ಕೆಲವು ವರ್ಷಗಳ ಅನುಭವದಿಂದ ಹೇಳುವುದಾದರೆ, ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗ, ಭಯೋತ್ಪಾದನೆ ಮತ್ತು ಯುದ್ಧಗಳು ಜಾಗತಿಕ ಆಡಳಿತವು ತನ್ನ ಎರಡೂ ಆದೇಶಗಳಲ್ಲಿ ವಿಫಲವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಈ ವೈಫಲ್ಯದ ದುರಂತ ಪರಿಣಾಮಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಅನೇಕ ವರ್ಷಗಳ ಪ್ರಗತಿಯ ನಂತರವೂ, ನಾವು ಇಂದು ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಹಿಮ್ಮುಖವಾಗಿ ಸಾಗುವ ಅಪಾಯದಲ್ಲಿದ್ದೇವೆ. ಅನೇಕ ಅಭಿವೃದ್ಧಿಶೀಲ ದೇಶಗಳು ತಮ್ಮ ಜನರಿಗೆ ಆಹಾರ ಮತ್ತು ಇಂಧನ ಭದ್ರತೆಯನ್ನು ಒದಗಿಸುವ ಪ್ರಯತ್ನದಲ್ಲಿ ಸಾಲಗಳೊಂದಿಗೆ ಹೋರಾಡುತ್ತಿವೆ. ಶ್ರೀಮಂತ ದೇಶಗಳಿಂದ ಉಂಟಾಗುವ ಜಾಗತಿಕ ತಾಪಮಾನ ಏರಿಕೆಯಿಂದ ಅವು ಹೆಚ್ಚು ಪರಿಣಾಮವನ್ನು ಅನುಭವಿಸುತ್ತಿವೆ. ಇದಕ್ಕೆಂದೇ ಭಾರತದ ಜಿ-20 ಪ್ರೆಸಿಡೆನ್ಸಿಯಲ್ಲಿ ನಾವು ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡಲು ಪ್ರಯತ್ನಿಸಿದ್ದೇವೆ. ಯಾವುದೇ ಗುಂಪು ತನ್ನ ನಿರ್ಧಾರಗಳಿಂದ ಹೆಚ್ಚು ಪ್ರಭಾವಿತರಾದವರ ಮಾತನ್ನು ಕೇಳದೆ ಜಾಗತಿಕ ನಾಯಕತ್ವವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ.

ಗೌರವಾನ್ವಿತರೇ,
ಆಳವಾದ ಜಾಗತಿಕ ವಿಭಜಿತ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೇವೆ. ವಿದೇಶಾಂಗ ಸಚಿವರಾಗಿ, ನಿಮ್ಮ ಚರ್ಚೆಗಳು ಇಂದಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದ ಪ್ರಭಾವಿತವಾಗುವುದು ಸ್ವಾಭಾವಿಕವಾಗಿದೆ. ಈ ಉದ್ವಿಗ್ನತೆಯನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ನಾವೆಲ್ಲರೂ ನಮ್ಮ-ನಮ್ಮ ನಿಲುವು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇವೆ. ಆದಾಗ್ಯೂ, ವಿಶ್ವದ ಪ್ರಮುಖ ಆರ್ಥಿಕತೆಗಳಾಗಿ, ಈಗ ಪ್ರಸ್ತುತ ಇಲ್ಲಿ ಉಪಸ್ಥಿತಿಯಲ್ಲಿಲ್ಲದವರ ಬಗ್ಗೆಯೂ ನಮಗೆ ಜವಾಬ್ದಾರಿ ಇದೆ. ಬೆಳವಣಿಗೆ, ಅಭಿವೃದ್ಧಿ, ಆರ್ಥಿಕ ಸ್ಥಿತಿಸ್ಥಾಪಕತ್ವ, ವಿಪತ್ತು ಸ್ಥಿತಿಸ್ಥಾಪಕತ್ವ, ಆರ್ಥಿಕ ಸ್ಥಿರತೆ, ಬಹುರಾಷ್ಟ್ರೀಯ ಅಪರಾಧ, ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಆಹಾರ ಮತ್ತು ಇಂಧನ ಭದ್ರತೆಯ ಸವಾಲುಗಳನ್ನು ಸರಾಗಗೊಳಿಸಲು ಜಗತ್ತು ಜಿ-20ನ್ನು ನೋಡುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ, ಜಿ-20 ಒಮ್ಮತವನ್ನು ನಿರ್ಮಿಸುವ ಮತ್ತು ದೃಢವಾದ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ನಾವು ಒಟ್ಟಾಗಿ ಪರಿಹರಿಸಲಾಗದ ಸಮಸ್ಯೆಗಳು ನಾವೆಲ್ಲರೂ ಒಟ್ಟಿಗೆ ಪರಿಹರಿಸಬಹುದಾದ ಸಮಸ್ಯೆಗಳ ಹಾದಿಯಲ್ಲಿ ಬರಲು ಬಿಡಬಾರದು. ನೀವು ಗಾಂಧಿ ಮತ್ತು ಬುದ್ಧನ ಜನ್ಮಭೂಮಿಯಲ್ಲಿ ಭೇಟಿಯಾಗುತ್ತಿರುವಿರಿ. ನಮ್ಮನ್ನು ವಿಭಜಿಸುವ ವಿಷಯಗಳ ಬಗ್ಗೆ ಅಲ್ಲದೆ, ನಮ್ಮೆಲ್ಲರನ್ನೂ ಒಗ್ಗೂಡಿಸುವ ವಿಷಯದ ಮೇಲೆ ಕೇಂದ್ರೀಕರಿಸಲು ನೀವು ಭಾರತದ ನಾಗರಿಕ ನೀತಿಗಳಿಂದ ಸ್ಫೂರ್ತಿ ಪಡೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ.

ಗೌರವಾನ್ವಿತರೇ,

ಇತ್ತೀಚಿನ ದಿನಗಳಲ್ಲಿ, ನಾವು ಶತಮಾನದ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗವನ್ನು ನೋಡಿದ್ದೇವೆ. ನೈಸರ್ಗಿಕ ವಿಪತ್ತುಗಳಲ್ಲಿ ಸಾವಿರಾರು ಜೀವಗಳನ್ನು ಕಳೆದುಕೊಂಡವರನ್ನು ನಾವು ನೋಡಿದ್ದೇವೆ. ಒತ್ತಡದ ಸಮಯದಲ್ಲಿ ಜಾಗತಿಕ ಪೂರೈಕೆ ಸರಪಳಿಗಳು ಮುರಿದುಬೀಳುವುದನ್ನು ನಾವು ನೋಡಿದ್ದೇವೆ. ಸ್ಥಿರ ಆರ್ಥಿಕತೆಗಳು ಇದ್ದಕ್ಕಿದ್ದಂತೆ ಸಾಲ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಮುಳುಗಿರುವುದನ್ನು ನಾವು ನೋಡಿದ್ದೇವೆ. ಈ ಅನುಭವಗಳು ನಮ್ಮ ಸಮಾಜದಲ್ಲಿ, ನಮ್ಮ ಆರ್ಥಿಕತೆಗಳಲ್ಲಿ, ನಮ್ಮ ಆರೋಗ್ಯ ವ್ಯವಸ್ಥೆಗಳಲ್ಲಿ ಮತ್ತು ನಮ್ಮ ಮೂಲಸೌಕರ್ಯಗಳಲ್ಲಿ ಸ್ಥಿತಿಸ್ಥಾಪಕತ್ವದ ಅಗತ್ಯವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಒಂದು ಕಡೆ ಬೆಳವಣಿಗೆ ಮತ್ತು ದಕ್ಷತೆ ಮತ್ತು ಮತ್ತೊಂದೆಡೆ ಸ್ಥಿತಿಸ್ಥಾಪಕತ್ವದ ನಡುವೆ ಸರಿಯಾದ ಸಮತೋಲನವನ್ನು ಕಂಡುಹಿಡಿಯುವಲ್ಲಿ ಜಿ20 ನಿರ್ಣಾಯಕ ಪಾತ್ರ ವಹಿಸುತ್ತದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ ನಾವು ಈ ಸಮತೋಲನವನ್ನು ಹೆಚ್ಚು ಸುಲಭವಾಗಿ ಕಾಪಾಡಿಕೊಳ್ಳಬಹುದು. ಅದಕ್ಕಾಗಿಯೇ ನಿಮ್ಮ ಸಭೆ ಬಹಳ ಮುಖ್ಯವಾಗಿದೆ. ನಿಮ್ಮ ಸಾಮೂಹಿಕ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಇಂದಿನ ಸಭೆಯು ಮಹತ್ವಾಕಾಂಕ್ಷೆಯ, ಅಂತರ್ಗತ, ಕ್ರಿಯಾ ಆಧಾರಿತವಾಗಿರುತ್ತದೆ ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿ ಬೆಳೆಯುತ್ತದೆ ಎಂದು ನನಗೆ ಖಾತ್ರಿಯಿದೆ.

ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಿಮ್ಮ ಈ ಸಭೆಯು ಫಲಪ್ರದವಾಗಿರಲೆಂದು ನಿಮಗೆ ಶುಭ ಹಾರೈಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
FPOs’ sales rise via commodity exchanges in FY26

Media Coverage

FPOs’ sales rise via commodity exchanges in FY26
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಮೇ 2026
May 11, 2026

Society Above Politics: PM Modi’s Call for a Stronger, Self-Reliant & Sacred Bharat