ಒಳ್ಳೆಯ ತಿಳುವಳಿಕೆಯುಳ್ಳ ಸಮಾಜವು ನಮ್ಮೆಲ್ಲರ ಗುರಿಯಾಗಬೇಕು, ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ
ಅಗ್ರದೂತ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಮುಖವಾಗಿ ಇರಿಸಿದೆ
ಪ್ರವಾಹದ ಸಮಯದಲ್ಲಿ ಅಸ್ಸಾಂನ ಜನರ ಕಷ್ಟಗಳನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ
ಭಾರತೀಯ ಭಾಷಾ ಪತ್ರಿಕೋದ್ಯಮವು ಭಾರತೀಯ ಸಂಪ್ರದಾಯ, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟ ಮತ್ತು ಅಭಿವೃದ್ಧಿ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿದೆ
ಜನರ ಆಂದೋಲನಗಳು ಸಾಂಸ್ಕೃತಿಕ ಪರಂಪರೆ ಮತ್ತು ಅಸ್ಸಾಮಿಯ ಹೆಮ್ಮೆಯನ್ನು ರಕ್ಷಿಸಿವೆ, ಈಗ ಅಸ್ಸಾಂ ಸಾರ್ವಜನಿಕ ಸಹಭಾಗಿತ್ವದ ಸಹಾಯದಿಂದ ಹೊಸ ಅಭಿವೃದ್ಧಿ ಕಥೆಯನ್ನು ಬರೆಯುತ್ತಿದೆ
ಒಂದು ನಿರ್ದಿಷ್ಟ ಭಾಷೆಯನ್ನು ತಿಳಿದಿರುವ ಕೆಲವು ಜನರಲ್ಲಿ ಬೌದ್ಧಿಕ ಸ್ಥಳವು ಹೇಗೆ ಸೀಮಿತವಾಗಿರುತ್ತದೆ

   ಅಸ್ಸಾಂನ ಉತ್ಸಾಹೀ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಜೀ, ಸಚಿವರಾದ ಶ್ರೀ ಅತುಲ್ ಬೋರಾ ಜೀ, ಕೇಶವ್ ಮಹಾಂತ ಜೀ, ಪಿಜುಷ್ ಹಜಾರಿಕಾ ಜೀ, ಸುವರ್ಣ ಮಹೋತ್ಸವ ಆಚರಣೆ ಸಮಿತಿಯ ಅಧ್ಯಕ್ಷ ಡಾ. ದಯಾನಂದ್ ಪಾಠಕ್ ಜಿ, ಅಗ್ರದೂತ್ ನ ಮುಖ್ಯ ಸಂಪಾದಕ ಮತ್ತು ಹಿರಿಯ ಪತ್ರಕರ್ತ ಶ್ರೀ ಕನಕ್ ಸೇನ್ ದೇಕಾ ಜಿ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! 50 ವರ್ಷಗಳ ಅಂದರೆ ಐದು ದಶಕಗಳ ಸುವರ್ಣ ಪಯಣದಲ್ಲಿ ಅಸ್ಸಾಮಿ ಭಾಷೆಯಲ್ಲಿ ಈಶಾನ್ಯದ ಪ್ರಬಲ ಧ್ವನಿಯಾದ ಅಗ್ರದೂತ್ ನ ಜೊತೆಗಿರುವ ನನ್ನ ಎಲ್ಲಾ ಸ್ನೇಹಿತರು, ಪತ್ರಕರ್ತರು, ಸಿಬ್ಬಂದಿ ಮತ್ತು ಓದುಗರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಮುಂದಿನ ದಿನಗಳಲ್ಲಿ "ಅಗ್ರದೂತ್" ಹೊಸ ಎತ್ತರಕ್ಕೆ ಏರುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರಾಂಜಲ್ ಮತ್ತು ಅವರ ಯುವ
ತಂಡಕ್ಕೆ ನನ್ನ ಶುಭ ಹಾರೈಕೆಗಳು! ಈ ಸಮಾರಂಭಕ್ಕೆ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದ ಆಯ್ಕೆಯೂ ಸಹ ಈ ಕಾರ್ಯಕ್ರಮಕ್ಕೆ
ಅದ್ಭುತವಾಗಿ ಹೊಂದಿಕೊಂಡಿದೆ. ಶ್ರೀಮಂತ ಶಂಕರದೇವ್ ಜೀ ಅವರು ಅಸ್ಸಾಮಿ ಕಾವ್ಯ ಮತ್ತು ಸಂಗೀತದ ಮೂಲಕ "ಏಕ್ ಭಾರತ್, ಶ್ರೇಷ್ಠ ಭಾರತ್" ಎಂಬ ಮನೋಭಾವವನ್ನು ಬಲಪಡಿಸಿದ್ದರು. ಇದೇ ಮೌಲ್ಯಗಳನ್ನು "ದೈನಿಕ್ ಅಗ್ರದೂತ್" ತನ್ನ ಪತ್ರಿಕೋದ್ಯಮದಿಂದ ಶ್ರೀಮಂತಗೊಳಿಸಿದೆ. ದೇಶದಲ್ಲಿ ಸಾಮರಸ್ಯ ಮತ್ತು ಏಕತೆಯ ಮನೋಭಾವವನ್ನು ಜೀವಂತವಾಗಿಡುವಲ್ಲಿ ನಿಮ್ಮ ಪತ್ರಿಕೆಯು ದೊಡ್ಡ ಪಾತ್ರವನ್ನು ವಹಿಸಿದೆ. ದೇಕಾ ಜೀ ಅವರ ಮಾರ್ಗದರ್ಶನದಲ್ಲಿ, ದೈನಿಕ್ ಅಗ್ರದೂತ್ ಸದಾ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಮುಖವಾಗಿರಿಸಿದೆ. ತುರ್ತುಪರಿಸ್ಥಿತಿಯ ಸಮಯದಲ್ಲಿಯೂ, ನಮ್ಮ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಾಗ, ದೈನಿಕ್ ಅಗ್ರದೂತ್ ಮತ್ತು ದೇಕಾ ಜೀ ಅವರು ಪತ್ರಿಕೋದ್ಯಮದ ಮೌಲ್ಯಗಳಲ್ಲಿ

ರಾಜಿ ಮಾಡಿಕೊಳ್ಳಲಿಲ್ಲ. ಅವರು ಅಸ್ಸಾಂನಲ್ಲಿ ಭಾರತೀಯ ಪತ್ರಿಕೋದ್ಯಮವನ್ನು
ಸಶಕ್ತಗೊಳಿಸಿದ್ದಲ್ಲದೆ, ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ಹೊಸ ತಲೆಮಾರನ್ನು ಸೃಷ್ಟಿಸಿದರು.
ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ದೈನಿಕ್ ಅಗ್ರದೂತ್ ನ ಸುವರ್ಣ ಮಹೋತ್ಸವದ ಆಚರಣೆಗಳು
ಒಂದು ಮೈಲಿಗಲ್ಲನ್ನು ತಲುಪುವುದು ಮಾತ್ರವಲ್ಲದೆ, "ಆಜಾದಿ ಕಾ ಅಮೃತ್ ಕಾಲ್" ನಲ್ಲಿ
ಪತ್ರಿಕೋದ್ಯಮ ಮತ್ತು ರಾಷ್ಟ್ರೀಯ ಕರ್ತವ್ಯಕ್ಕೆ ಪ್ರೇರಣೆಯಾಗಿವೆ.
ಸ್ನೇಹಿತರೇ,
ಕಳೆದ ಕೆಲವು ದಿನಗಳಿಂದ, ಅಸ್ಸಾಂ ಪ್ರವಾಹದ ರೂಪದಲ್ಲಿ ದೊಡ್ಡ ಸವಾಲುಗಳು ಮತ್ತು
ತೊಂದರೆಗಳನ್ನು ಎದುರಿಸುತ್ತಿದೆ. ಅಸ್ಸಾಂನ ಅನೇಕ ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನವು
ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಹಿಮಂತ ಜೀ ಮತ್ತು ಅವರ ತಂಡವು ಪರಿಹಾರ ಮತ್ತು ರಕ್ಷಣಾ
ಕಾರ್ಯಾಚರಣೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಕಾಲಕಾಲಕ್ಕೆ ನಾನು ಈ ಬಗ್ಗೆ ಅಲ್ಲಿನ ಅನೇಕ
ಜನರೊಂದಿಗೆ ಸಂವಹನ ನಡೆಸುತ್ತಲೇ ಇರುತ್ತೇನೆ. ಮುಖ್ಯಮಂತ್ರಿಗಳೊಂದಿಗೆ ಮಾತುಕತೆ
ನಡೆಯುತ್ತಿರುತ್ತದೆ. ಇಂದು, ನಾನು ಅಸ್ಸಾಮಿನ ಜನರಿಗೆ ಮತ್ತು ಅಗ್ರದೂತ್ ನ ಓದುಗರಿಗೆ ಅವರ
ಕಷ್ಟಗಳಿಂದ ಹೊರಬರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂಬ
ಭರವಸೆ ನೀಡುತ್ತೇನೆ.
ಸ್ನೇಹಿತರೇ,
'ಭಾರತೀಯ ಭಾಷೆಗಳಲ್ಲಿ ಪತ್ರಿಕೋದ್ಯಮ'ದ ಪಾತ್ರವು ಭಾರತದ ಸಂಪ್ರದಾಯ, ಸಂಸ್ಕೃತಿ,
ಸ್ವಾತಂತ್ರ್ಯ ಹೋರಾಟ ಮತ್ತು ಅಭಿವೃದ್ಧಿಯ ಪಯಣದಲ್ಲಿ ಆದ್ಯ ಪ್ರವರ್ತಕನಂತಿದೆ.
ಪತ್ರಿಕೋದ್ಯಮದ ದೃಷ್ಟಿಯಿಂದ ಅಸ್ಸಾಂ ಒಂದು ಜಾಗೃತ ಪ್ರದೇಶವಾಗಿದೆ. ಸುಮಾರು 150
ವರ್ಷಗಳ ಹಿಂದೆ ಅಸ್ಸಾಮಿ ಭಾಷೆಯಲ್ಲಿ ಪತ್ರಿಕೋದ್ಯಮವು ಪ್ರಾರಂಭವಾಯಿತು, ಅದು
ಕಾಲಾನಂತರದಲ್ಲಿ ಅಭಿವೃದ್ಧಿ ಹೊಂದುತ್ತಾ ಹೋಯಿತು. ಅಸ್ಸಾಂ ಸ್ಥಳೀಯ ಭಾಷೆಯ
ಪತ್ರಿಕೋದ್ಯಮಕ್ಕೆ ಹೊಸ ಆಯಾಮಗಳನ್ನು ನೀಡಿದ ಅನೇಕ ಪತ್ರಕರ್ತರು ಮತ್ತು ಸಂಪಾದಕರನ್ನು
ದೇಶಕ್ಕೆ ನೀಡಿದೆ. ಇಂದಿಗೂ, ಈ ರೀತಿಯ ಪತ್ರಿಕೋದ್ಯಮವು ಸಾಮಾನ್ಯ ಜನರನ್ನು
ಸರ್ಕಾರದೊಂದಿಗೆ ಜೋಡಿಸುವಲ್ಲಿ ದೊಡ್ಡ ಸೇವೆಯನ್ನು ಮಾಡುತ್ತಿದೆ.

ಸ್ನೇಹಿತರೇ,

ದೈನಿಕ್ ಅಗ್ರದೂತ್ ನ ಕಳೆದ 50 ವರ್ಷಗಳ ಪ್ರಯಾಣವು ಅಸ್ಸಾಂನಲ್ಲಿ ನಡೆದ ಬದಲಾವಣೆಯ
ಕಥೆಯನ್ನು ವಿವರಿಸುತ್ತದೆ. ಈ ಬದಲಾವಣೆಯನ್ನು ತರುವಲ್ಲಿ ಜನಾಂದೋಲನಗಳು ಪ್ರಮುಖ ಪಾತ್ರ
ವಹಿಸಿವೆ. ಜನಾಂದೋಲನಗಳು ಸಾಂಸ್ಕೃತಿಕ ಪರಂಪರೆ ಮತ್ತು ಅಸ್ಸಾಮಿನ ಹೆಮ್ಮೆಯನ್ನು
ರಕ್ಷಿಸಿವೆ. ಈಗ ಸಾರ್ವಜನಿಕ ಸಹಭಾಗಿತ್ವದ ನೆರವಿನಿಂದ, ಅಸ್ಸಾಂ ಹೊಸ ಅಭಿವೃದ್ಧಿಯ ಕಥೆಯನ್ನು
ಬರೆಯುತ್ತಿದೆ.
ಸ್ನೇಹಿತರೇ,

ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವವು ಒಂದು ಬಳುವಳಿಯಾಗಿ ಬಂದಿದೆ, ಏಕೆಂದರೆ ಇಲ್ಲಿ
ಚಿಂತನೆ, ಚರ್ಚೆಗಳು ಮತ್ತು ಮಾತುಕತೆಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು
ಸಾಧ್ಯವಾಗುವಂತಹ ಒಂದು ಮಾರ್ಗವಿದೆ. ಮಾತುಕತೆ ನಡೆದರೆ, ಅಲ್ಲೊಂದು ಪರಿಹಾರ
ಲಭಿಸುತ್ತದೆ. ಮಾತುಕತೆಯ ಮೂಲಕ ಸಾಧ್ಯತೆಗಳು ವಿಸ್ತರಿಸುತ್ತ ಹೋಗುತ್ತವೆ. ಆದ್ದರಿಂದ,
ಭಾರತೀಯ ಪ್ರಜಾಪ್ರಭುತ್ವದಲ್ಲಿ ಜ್ಞಾನ ಪ್ರವಾಹದ ಜೊತೆಗೆ, ಮಾಹಿತಿಯ ಪ್ರವಾಹವೂ
ನಿರಂತರವಾಗಿ ಮತ್ತು ಅವಿರತವಾಗಿ ಹರಿಯುತ್ತಿರುತ್ತದೆ. ಈ ಸಂಪ್ರದಾಯವನ್ನು ಮುಂದುವರಿಸಲು
ಅಗ್ರದೂತ್ ಒಂದು ಪ್ರಮುಖ ಮಾಧ್ಯಮವಾಗಿದೆ.
ಸ್ನೇಹಿತರೇ,
ಇಂದು ನಾವು ಪ್ರಪಂಚದ ಯಾವುದೇ ಭಾಗದಲ್ಲಿ ವಾಸಿಸುತ್ತಿದ್ದರೂ, ನಮ್ಮ ಮಾತೃಭಾಷೆಯಲ್ಲಿ
ಪ್ರಕಟವಾಗುವ ಸುದ್ದಿಪತ್ರಿಕೆಯು ನಮಗೆ ಮನೆಯಲ್ಲಿ ಇರುವ ಭಾವನೆಯನ್ನು ಮೂಡಿಸುತ್ತದೆ.
ಅಸ್ಸಾಮೀ ಭಾಷೆಯಲ್ಲಿ ದೈನಿಕ್ ಅಗ್ರದೂತ್ ಹಿಂದೆ ದ್ವೈಸಾಪ್ತಾಹಿಕವಾಗಿ ಪ್ರಕಟವಾಗುತ್ತಿತ್ತು
ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಅದು ಅಲ್ಲಿಂದ ತನ್ನ ಪ್ರಯಾಣವನ್ನು ಪ್ರಾರಂಭ ಮಾಡಿತು.
ಈಗ ಅದು ದಿನಪತ್ರಿಕೆಯಾಗಿ ಮಾರ್ಪಟ್ಟಿದೆ. ಮತ್ತು ಈಗ ಇದು ಇ-ಕಾಗದದ ರೂಪದಲ್ಲಿ ಆನ್
ಲೈನ್ ನಲ್ಲಿಯೂ ಲಭ್ಯವಿದೆ. ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ನೀವು ಅಸ್ಸಾಂ
ಮತ್ತು ಅಸ್ಸಾಂನ ಸುದ್ದಿಯೊಂದಿಗೆ ಸಂಪರ್ಕದಲ್ಲಿರಬಹುದು.
ಈ ಪತ್ರಿಕೆಯ ಅಭಿವೃದ್ಧಿಯ, ಬೆಳವಣಿಗೆಯ ಪ್ರಯಾಣವು ನಮ್ಮ ದೇಶದ ಪರಿವರ್ತನೆ ಮತ್ತು ಡಿಜಿಟಲ್
ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಡಿಜಿಟಲ್ ಇಂಡಿಯಾ ಇಂದು 'ಸ್ಥಳೀಯ ಸಂಪರ್ಕ'ದ ಪ್ರಬಲ
ಮಾಧ್ಯಮವಾಗಿ ಮಾರ್ಪಟ್ಟಿದೆ. ಇಂದು ಆನ್ ಲೈನ್ ಪತ್ರಿಕೆಯನ್ನು ಓದುವ ವ್ಯಕ್ತಿಗೆ ಆನ್ ಲೈನ್ ಪಾವತಿ

ಮಾಡುವುದು ಹೇಗೆಂದು ತಿಳಿದಿದೆ. ದೈನಿಕ್ ಅಗ್ರದೂತ್ ಮತ್ತು ನಮ್ಮ ಮಾಧ್ಯಮಗಳು ಅಸ್ಸಾಂ ಮತ್ತು
ದೇಶದ ಈ ಪರಿವರ್ತನೆಗೆ ಸಾಕ್ಷಿಯಾಗಿವೆ.
ಸ್ನೇಹಿತರೇ,
ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಲೇಬೇಕಾದ ಒಂದು
ಪ್ರಶ್ನೆಯಿದೆ. ಒಂದು ನಿರ್ದಿಷ್ಟ ಭಾಷೆಯನ್ನು ಬಲ್ಲ ಕೆಲವೇ ಜನರಿಗಾಗಿ ಬೌದ್ಧಿಕ ಸ್ಥಳಾವಕಾಶವನ್ನು
ಏಕೆ ಸೀಮಿತಗೊಳಿಸಬೇಕು? ಈ ಪ್ರಶ್ನೆಯು ಕೇವಲ ಭಾವನೆಗಳ ಬಗ್ಗೆ ಮಾತ್ರವಲ್ಲ, ವೈಜ್ಞಾನಿಕ
ತರ್ಕದ ಬಗ್ಗೆಯೂ ಇದೆ. ಸುಮ್ಮನೆ ಊಹಿಸಿಕೊಳ್ಳಿ! ಭಾರತವು ಶತಮಾನಗಳಿಂದ ಜ್ಞಾನ,
ಆವಿಷ್ಕಾರ, ಹೊಸ ಆಲೋಚನೆಗಳು ಒಳಗೊಂಡ ಪರಂಪರೆಯನ್ನು ಹೊಂದಿದ್ದರೂ ಸಹ ಕಳೆದ
ಮೂರು ಕೈಗಾರಿಕಾ ಕ್ರಾಂತಿಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಏಕೆ ಹಿಂದುಳಿಯಿತು?
ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ನಾವು ಭಾರತೀಯ ಭಾಷೆಗಳಲ್ಲಿ ಈ ಸಂಪತ್ತನ್ನು
ಹೊಂದಿದ್ದೆವು. ವಸಾಹತುಶಾಹಿಯ ದೀರ್ಘಾವಧಿಯಲ್ಲಿ ಭಾರತೀಯ ಭಾಷೆಗಳ ವಿಸ್ತರಣೆಗೆ
ಅಡ್ಡಿಯುಂಟಾಯಿತು, ಮತ್ತು ಆಧುನಿಕ ವಿಜ್ಞಾನ, ಜ್ಞಾನ ಮತ್ತು ಸಂಶೋಧನೆಯು ಕೇವಲ ಕೆಲವು
ಭಾಷೆಗಳಿಗೆ ಮಾತ್ರ ಸೀಮಿತವಾಯಿತು. ಭಾರತದ ಒಂದು ದೊಡ್ಡ ಭಾಗಕ್ಕೆ ಆ ಭಾಷೆಗಳಿಗೆ ಅಥವಾ
ಆ ಜ್ಞಾನಕ್ಕೆ ಪ್ರವೇಶಾವಕಾಶ ಲಭ್ಯವಾಗದೇ ಹೋಯಿತು. ಅಂದರೆ, ಬುದ್ಧಿಯ ಪರಿಣತಿಯ
ವ್ಯಾಪ್ತಿಯು ಕುಗ್ಗುತ್ತಲೇ ಹೋಯಿತು, ಇದರಿಂದಾಗಿ ಆವಿಷ್ಕಾರ ಮತ್ತು ಅನ್ವೇಷಣೆಗಳ ಅವಕಾಶ
ಕೂಡಾ ಸೀಮಿತವಾಯಿತು.
21 ನೇ ಶತಮಾನದಲ್ಲಿ, ಜಗತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಚಲಿಸುತ್ತಿರುವಾಗ, ಭಾರತವು
ಜಗತ್ತನ್ನು ಮುನ್ನಡೆಸಲು ಒಂದು ದೊಡ್ಡ ಅವಕಾಶವನ್ನು ಹೊಂದಿದೆ. ನಮ್ಮ ದತ್ತಾಂಶ (ಡೇಟಾ) ಶಕ್ತಿ
ಮತ್ತು ಡಿಜಿಟಲ್ ಸೇರ್ಪಡೆಯು ನಮಗೆ ಈ ಅವಕಾಶವನ್ನು ಸೃಷ್ಟಿ ಮಾಡಿದೆ. ಭಾಷಾ ಅಡೆತಡೆಗಳ
ಕಾರಣದಿಂದಾಗಿ ಯಾವುದೇ ಭಾರತೀಯರು ಉತ್ತಮ ಮಾಹಿತಿ, ಅತ್ಯುತ್ತಮ ಜ್ಞಾನ, ಅತ್ಯುತ್ತಮ
ಕೌಶಲ್ಯ ಮತ್ತು ಉತ್ತಮ ಅವಕಾಶಗಳಿಂದ ವಂಚಿತರಾಗಬಾರದು ಎಂಬುದನ್ನು
ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ.
ಅದಕ್ಕಾಗಿಯೇ ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ಭಾಷೆಗಳ ಅಧ್ಯಯನವನ್ನು
ಪ್ರೋತ್ಸಾಹಿಸಿದ್ದೇವೆ. ಆಯಾ ಮಾತೃಭಾಷೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರದೇಶದ
ಅಗತ್ಯಗಳನ್ನು ಮನಗಾಣಬಲ್ಲರು, ಅಲ್ಲಿಯ ಜನರ ಆಶೋತ್ತರಗಳನ್ನು ಅರಿತುಕೊಳ್ಳಬಲ್ಲರು.

ಇದಕ್ಕೆ ಅವರು ಬಳಿಕ ಆಯ್ಕೆ ಮಾಡುವ ವೃತ್ತಿ ಯಾವುದೇ ಅಡ್ಡಿಯನ್ನು ಅಥವಾ ಮಿತಿಯನ್ನುಂಟು
ಮಾಡಲಾರದು. ಇದಲ್ಲದೆ, ಈಗ ನಾವು ವಿಶ್ವದ ಅತ್ಯುತ್ತಮ ವಿಷಯ ಸಾಹಿತ್ಯವನ್ನು ಭಾರತೀಯ
ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ರಾಷ್ಟ್ರೀಯ
ಭಾಷಾ ಭಾಷಾಂತರ ಮಿಷನ್ ಕುರಿತಂತೆ ಕಾರ್ಯನಿರತರಾಗಿದ್ದೇವೆ.
ಪ್ರತಿಯೊಬ್ಬ ಭಾರತೀಯನೂ ತನ್ನ ಸ್ವಂತ ಭಾಷೆಯಲ್ಲಿ ಜ್ಞಾನ ಮತ್ತು ಮಾಹಿತಿಯ ಬೃಹತ್
ಭಂಡಾರವಾಗಿರುವ ಅಂತರ್ಜಾಲವನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು
ನಾವು ಪ್ರಯತ್ನಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಭಾಶಿನಿ ವೇದಿಕೆಯನ್ನು ಕೇವಲ ಎರಡು ದಿನಗಳ
ಹಿಂದೆ ಪ್ರಾರಂಭಿಸಲಾಗಿದೆ. ಇದು ಭಾರತೀಯ ಭಾಷೆಗಳ ಏಕೀಕೃತ ಭಾಷಾ ಇಂಟರ್ಫೇಸ್ ಆಗಿದ್ದು,
ಪ್ರತಿಯೊಬ್ಬ ಭಾರತೀಯರನ್ನು ಅಂತರ್ಜಾಲಕ್ಕೆ ಸುಲಭವಾಗಿ ಸಂಪರ್ಕಿಸುವ ಪ್ರಯತ್ನವಾಗಿದೆ,
ಇದರಿಂದ ಅವನು / ಅವಳು ಮಾತೃಭಾಷೆಯಲ್ಲಿ ಮಾಹಿತಿ, ಜ್ಞಾನ, ಸರ್ಕಾರ, ಸರ್ಕಾರಿ ಸೌಲಭ್ಯಗಳ
ಈ ಆಧುನಿಕ ಮೂಲದೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದು ಮತ್ತು ಸಂಪರ್ಕ
ಸಾಧಿಸಲು ಸಾಧ್ಯವಾಗುತ್ತದೆ.
ಕೋಟ್ಯಂತರ ಭಾರತೀಯರಿಗೆ ಅವರ ಮಾತೃಭಾಷೆಯಲ್ಲಿ ಅಂತರ್ಜಾಲ ಲಭ್ಯವಾಗುವಂತೆ
ಮಾಡುವುದು ಸಾಮಾಜಿಕ ಮತ್ತು ಆರ್ಥಿಕ ಈ ಎರಡೂ ಅಂಶಗಳಿಂದಲೂ ಬಹಳ ಮುಖ್ಯವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಇದು ದೇಶದ ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸುವ 'ಏಕ್ ಭಾರತ್,
ಶ್ರೇಷ್ಠ ಭಾರತ್' ಎಂಬ ಮನೋಭಾವವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದ
ಪ್ರಯಾಣ ಮಾಡುವುದಕ್ಕೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು
ಸಹಾಯವಾಗುತ್ತದೆ.
ಸ್ನೇಹಿತರೇ,
ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ಭಾಗವು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು
ಜೀವವೈವಿಧ್ಯತೆಯ ದೃಷ್ಟಿಯಿಂದ ಬಹಳ ಶ್ರೀಮಂತವಾಗಿದೆ. ಆದರೂ, ಈ ಇಡೀ ಪ್ರದೇಶವನ್ನು
ಆಗಬೇಕಾದಷ್ಟು ಪ್ರಮಾಣದಲ್ಲಿ ಅನ್ವೇಷಣೆ ಮಾಡಲಾಗಿಲ್ಲ. ಭಾಷೆ ಮತ್ತು ಸಂಗೀತದ ರೂಪದಲ್ಲಿ
ಅಸ್ಸಾಂ ಹೊಂದಿರುವ ಶ್ರೀಮಂತ ಪರಂಪರೆಯು ದೇಶ ಮತ್ತು ಪ್ರಪಂಚವನ್ನು ತಲುಪಬೇಕು. ಕಳೆದ

8 ವರ್ಷಗಳಿಂದ, ಅಸ್ಸಾಂ ಮತ್ತು ಇಡೀ ಈಶಾನ್ಯವನ್ನು ಆಧುನಿಕ ಸಂಪರ್ಕದೊಂದಿಗೆ ಬೆಸೆಯಲು
ಅಭೂತಪೂರ್ವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದರೊಂದಿಗೆ, ಭಾರತದ ಬೆಳವಣಿಗೆಯ
ಕಥನದಲ್ಲಿ ಅಸ್ಸಾಂ ಮತ್ತು ಈಶಾನ್ಯ ಭಾರತದ ಪಾತ್ರವು ನಿರಂತರವಾಗಿ ವೃದ್ಧಿಸುತ್ತಿದೆ. ಈಗ ಈ
ಪ್ರದೇಶವು ಭಾಷೆಗಳ ದೃಷ್ಟಿಯಿಂದ ಡಿಜಿಟಲ್ ಸಂಪರ್ಕ ಹೊಂದಿದ್ದರೆ, ಆಗ ಅಸ್ಸಾಂನ ಸಂಸ್ಕೃತಿ,
ಬುಡಕಟ್ಟು ಸಂಪ್ರದಾಯ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ.
ಸ್ನೇಹಿತರೇ,
ಆದ್ದರಿಂದ, ಡಿಜಿಟಲ್ ಇಂಡಿಯಾದ ಅಂತಹ ಪ್ರತಿಯೊಂದು ಪ್ರಯತ್ನದ ಬಗ್ಗೆ ನಮ್ಮ ಓದುಗರಿಗೆ
ಅರಿವು ಮೂಡಿಸಬೇಕು ಎಂದು ನಾನು 'ಅಗ್ರದೂತ್' ನಂತಹ ದೇಶದ ಎಲ್ಲಾ ಸ್ಥಳೀಯ ಭಾಷಾ
ಪತ್ರಿಕೋದ್ಯಮ ಸಂಸ್ಥೆಗಳಿಗೆ ವಿಶೇಷ ವಿನಂತಿಯನ್ನು ಮಾಡಲು ಬಯಸುತ್ತೇನೆ. ಭಾರತದ
ತಂತ್ರಜ್ಞಾನ ಭವಿಷ್ಯವನ್ನು ಶ್ರೀಮಂತಗೊಳಿಸಲು ಮತ್ತು ಸಶಕ್ತಗೊಳಿಸಲು ಪ್ರತಿಯೊಬ್ಬರ ಪ್ರಯತ್ನದ
ಅಗತ್ಯವಿದೆ. ಸ್ವಚ್ಛ ಭಾರತ ಅಭಿಯಾನದಂತಹ ಆಂದೋಲನಗಳಲ್ಲಿ ನಮ್ಮ ಮಾಧ್ಯಮಗಳು
ನಿರ್ವಹಿಸಿದ ಸಕಾರಾತ್ಮಕ ಪಾತ್ರವನ್ನು ಇಂದಿಗೂ ದೇಶ ಮತ್ತು ವಿಶ್ವದಾದ್ಯಂತ ಶ್ಲಾಘಿಸಲಾಗುತ್ತಿದೆ.
ಅದೇ ರೀತಿಯಲ್ಲಿ, 'ಅಮೃತ ಮಹೋತ್ಸವ'ದ ಸಮಯದಲ್ಲಿ ದೇಶದ ಸಂಕಲ್ಪಗಳನ್ನು ಈಡೇರಿಸುವಲ್ಲಿ
ಪಾಲ್ಗೊಳ್ಳುವ ಮೂಲಕ, ನೀವು ಅದಕ್ಕೆ ಹೊಸ ದಿಕ್ಕು ಮತ್ತು ಹೊಸ ಶಕ್ತಿಯನ್ನು ನೀಡಬಹುದು.
ಅಸ್ಸಾಂನಲ್ಲಿ ನೀರಿನ ಸಂರಕ್ಷಣೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಈ
ದಿಕ್ಕಿನಲ್ಲಿ, ದೇಶವು ಪ್ರಸ್ತುತ ಅಮೃತ ಸರೋವರ ಅಭಿಯಾನವನ್ನು ಮುನ್ನಡೆಸುತ್ತಿದೆ. ದೇಶವು ಪ್ರತಿ
ಜಿಲ್ಲೆಯಲ್ಲಿ 75 ಅಮೃತ್ ಸರೋವರ್ ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಅಗ್ರದೂತ್ ನ ಸಹಾಯದಿಂದ, ಅಸ್ಸಾಮಿನಲ್ಲಿ ಅದರೊಂದಿಗೆ ಸಂಬಂಧ ಹೊಂದಿರದಂತಹ
ಯಾವುದೇ ವ್ಯಕ್ತಿ ಇರಲಾರರು ಎಂಬ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಪ್ರತಿಯೊಬ್ಬರ
ಪ್ರಯತ್ನಗಳು ಇದಕ್ಕೆ ಹೊಸ ವೇಗವನ್ನು ನೀಡಬಲ್ಲವು.
ಅದೇ ರೀತಿಯಲ್ಲಿ, ಅಸ್ಸಾಂನ ಸ್ಥಳೀಯ ಜನರು ಮತ್ತು ನಮ್ಮ ಬುಡಕಟ್ಟು ಸಮಾಜವು ಸ್ವಾತಂತ್ರ್ಯ
ಹೋರಾಟದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಮಾಧ್ಯಮ ಸಂಸ್ಥೆಯಾಗಿ, ಈ ಭವ್ಯವಾದ
ಗತಕಾಲವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬಹುದು. ಕಳೆದ
50 ವರ್ಷಗಳಿಂದ ಅಗ್ರದೂತ್ ಸಮಾಜದೊಳಗಿನ ಇಂತಹ ಸಕಾರಾತ್ಮಕ ಪ್ರಯತ್ನಗಳಲ್ಲಿ

ಶಕ್ತಿಯನ್ನು ತುಂಬುವ ಕರ್ತವ್ಯವನ್ನು ಮಾಡುತ್ತಿದ್ದು, ಅದನ್ನು ಮುಂದಿನ ಅನೇಕ ದಶಕಗಳವರೆಗೆ
ಮುಂದುವರಿಸಿಕೊಂಡು ಹೋಗುತ್ತದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಇದು ಅಸ್ಸಾಮಿನ ಜನರ
ಮತ್ತು ಅಸ್ಸಾಮಿನ ಸಂಸ್ಕೃತಿಯ ಅಭಿವೃದ್ಧಿಯಲ್ಲಿ ನಾಯಕನಂತೆ ಕೆಲಸ ಮಾಡುವುದನ್ನು
ಮುಂದುವರಿಸಲಿದೆ.
ಉತ್ತಮ ತಿಳುವಳಿಕೆಯುಳ್ಳ, ಮಾಹಿತಿಪೂರ್ಣ ಸಮಾಜ ನಮ್ಮ ಗುರಿಯಾಗಿರಬೇಕು! ಈ ದಿಸೆಯಲ್ಲಿ
ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಈ ಸುವರ್ಣ ಪ್ರಯಾಣಕ್ಕಾಗಿ ಮತ್ತೊಮ್ಮೆ ನಾನು ನಿಮಗೆ
ಶುಭ ಹಾರೈಸುತ್ತೇನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಹೃತ್ಪೂರ್ವಕ ಶುಭಾಶಯಗಳನ್ನು
ಕೋರುತ್ತೇನೆ!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

Media Coverage

"Overwhelmed By The Warmth": PM Modi Receives Grand Welcome In Uzbekistan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಆಗಸ್ಟ್ 2026
August 29, 2026

New India, New Speed, New Stage: Missiles, Medals, Multilateralism under PM Modi