ʻಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನಾವಾ ಶೇವಾ ಅಟಲ್ ಸೇತುʼ ಉದ್ಘಾಟನೆ
ʻಈಸ್ಟರ್ನ್ ಫ್ರೀವೇʼಯ ʻಆರೆಂಜ್ ಗೇಟ್ʼನಿಂದ ʻಮರೀನ್ ಡ್ರೈವ್‌ʼಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗಕ್ಕೆ ಶಂಕುಸ್ಥಾಪನೆ
ʻಎಸ್‌ಇಇಪಿಝೆಡ್‌ ಎಸ್‌ಇಝೆಡ್‌ʼನಲ್ಲಿ (SEEPZ SEZ) 'ಭಾರತ ರತ್ನಂ' ಮತ್ತು ʻಹೊಸ ಉದ್ಯಮಗಳು ಮತ್ತು ಸೇವೆಗಳ ಗೋಪುರʼ (NEST) 01ʼ ಅನ್ನು ಉದ್ಘಾಟಿಸಿದರು
ರೈಲು ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
ಉರಾನ್ ರೈಲ್ವೆ ನಿಲ್ದಾಣದಿಂದ ಖಾರ್ಕೋಪರ್‌ವರೆಗಿನ ʻಎಮುʼ ರೈಲಿನ ಆರಂಭಿಕ ಸಂಚಾರಕ್ಕೆ ಹಸಿರು ನಿಶಾನೆ
ʻನಮೋ ಮಹಿಳಾ ಸಶಕ್ತಿಕರಣ್ʼ ಅಭಿಯಾನಕ್ಕೆ ಚಾಲನೆ
ಜಪಾನ್ ಸರ್ಕಾರಕ್ಕೆ ಧನ್ಯವಾದಗಳು ಅರ್ಪಿಸಿದರು ಮತ್ತು ಶಿಂಜೋ ಅಬೆ ಅವರನ್ನು ಸ್ಮರಿಸಿದರು
"ಅಟಲ್ ಸೇತು ಉದ್ಘಾಟನೆಯು ಭಾರತದ ಮೂಲಸೌಕರ್ಯ ಪರಾಕ್ರಮಕ್ಕೆ ಉದಾಹರಣೆಯಾಗಿದೆ ಮತ್ತು 'ವಿಕಸಿತ ಭಾರತ'ದತ್ತ ದೇಶದ ಪ್ರಯಾಣವನ್ನು ಒತ್ತಿಹೇಳುತ್ತದೆ
"ನಮ್ಮ ಪಾಲಿಗೆ, ಪ್ರತಿಯೊಂದು ಯೋಜನೆಯೂ ʻನವ ಭಾರತʼದ ನಿರ್ಮಾಣಕ್ಕೆ ಮಾಧ್ಯಮವಾಗಿದೆ"
"ಅಟಲ್ ಸೇತು, ʻವಿಕಸಿತ ಭಾರತʼದ ಚಿತ್ರವನ್ನು ಪ್ರಸ್ತುತಪಡಿಸುತ್ತದೆ"
"ಈ ಹಿಂದೆ, ಬಹು ಕೋಟಿ ಹಗರಣಗಳು ಚರ್ಚೆಯ ವಿಷಯವಾಗಿದ್ದವು, ಇಂದು ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ"
"ಇತರರಿಂದ ನಿರೀಕ್ಷೆಗಳು ಅಂತ್ಯಗೊಂಡ ಕಡೆ ಮೋದಿಯವರ ʻಗ್ಯಾರಂಟಿʼ ಪ್ರಾರಂಭವಾಗುತ್ತದೆ"
" ಮಹಿಳಾ ಕಲ್ಯಾಣವು ಯಾವುದೇ ರಾಜ್ಯದಲ್ಲಿ ಯಾವುದೇ ಡಬಲ್ ಇಂಜಿನ್ ಸರ್ಕಾರದ ಅಗ್ರಗಣ್ಯ ಖಾತರಿಯಾಗಿದೆ"
"ಇಂದು, ಬಡವರ ಜೀವನವನ್ನು ಸುಧಾರಿಸಲು ಮೆಗಾ-ಅಭಿಯಾನಗಳು ಮತ್ತು ದೇಶದ ಪ್ರತಿಯೊಂದು ಮೂಲೆಯಲ್ಲಿ ಮೆಗಾ ಯೋಜನೆಗಳಿವೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ನವೀ ಮುಂಬೈನಲ್ಲಿ 12,700 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟಿನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ನವೀ ಮುಂಬೈನಲ್ಲಿ 17,840 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ʻಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನಾವಾ ಶೇವಾ ಅಟಲ್ ಸೇತುʼವನ್ನು ಉದ್ಘಾಟಿಸಿದರು. ಇಂದು ಉದ್ಘಾಟಿಸಲಾಗುತ್ತಿರುವ ಅಭಿವೃದ್ಧಿ ಯೋಜನೆಗಳಲ್ಲಿ ರಸ್ತೆ ಮತ್ತು ರೈಲು ಸಂಪರ್ಕ, ಕುಡಿಯುವ ನೀರು, ರತ್ನಗಳು ಮತ್ತು ಆಭರಣಗಳು ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳು ಸೇರಿವೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಮಾತ್ರವಲ್ಲದೆ, 'ವಿಕಸಿತ ಭಾರತ'ದ ಸಂಕಲ್ಪಕ್ಕೂ ಐತಿಹಾಸಿಕ ದಿನವಾಗಿದೆ ಎಂದರು. "ಈ ಅಭಿವೃದ್ಧಿ ಯೋಜನೆಗಳು ಮುಂಬೈನಲ್ಲಿ ನಡೆಯುತ್ತಿದ್ದರೂ, ಇಡೀ ರಾಷ್ಟ್ರದ ಕಣ್ಣುಗಳು ಅದರತ್ತ ನೆಟ್ಟಿವೆ" ಎಂದು ಶ್ರೀ ಮೋದಿ ಹೇಳಿದರು. ಭಾರತದ ಅತಿ ಉದ್ದದ ಸಮುದ್ರ ಸೇತುವೆ - ʻಅಟಲ್ ಸೇತುʼ ಉದ್ಘಾಟನೆಯನ್ನು ಉಲ್ಲೇಖಿಸಿದ ಪ್ರಧಾನಿ, ಇದು ಭಾರತದ ಬೆಳವಣಿಗೆಯ ಬದ್ಧತೆಗೆ ಪುರಾವೆಯಾಗಿದೆ ಎಂದರು. 2016ರ ಡಿಸೆಂಬರ್ 24ರಂದು ʻಎಂಟಿಎಚ್‌ಎಲ್ ಅಟಲ್ ಸೇತುʼಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಂದಿನ ಸಂದರ್ಭವು ಸಂಕಲ್ಪದ ಮೂಲಕ ಸಾಧನೆಗೆ ಸಂಕೇತವಾಗಿದೆ ಎಂದರು. ದೊಡ್ಡ ಪ್ರಮಾಣದ ಯೋಜನೆಗಳನ್ನು ಪೂರ್ಣಗೊಳಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ನಿರ್ಲಕ್ಷ್ಯ ಮನೋಭಾವದಿಂದಾಗಿ ಈ ಹಿಂದೆ ನಾಗರಿಕರು ಹತಾಶರಾಗಿದ್ದರು ಎಂದು ಅವರು ಗಮನಸೆಳೆದರು. "ದೇಶವು ಮುಂದೆ ಸಾಗುತ್ತದೆ ಮತ್ತು ದೇಶವು ಪ್ರಗತಿ ಸಾಧಿಸುತ್ತದೆ. 2016ರಲ್ಲಿ ಮೋದಿಯವರ ಭರವಸೆಯೂ ಇದೇ ಆಗಿತ್ತು," ಎಂದು ಪ್ರಧಾನಿ ಹೇಳಿದರು. "ನಾನು ಮುಂಬೈ ನಿವಾಸಿಗಳಿಗೆ, ಛತ್ರಪತಿ ಶಿವಾಜಿಗೆ, ಮಾತೆ ಮುಂಬಾ ದೇವಿ ಹಾಗೂ ಭಗವಾನ್‌ ಸಿದ್ಧಿವಿನಾಯಕನಿಗೆ ತಲೆಬಾಗುವ ಮೂಲಕ ʻಅಟಲ್ ಸೇತುʼವನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತೇನೆ," ಎಂದು ಹೇಳಿದರು. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಅಡಚಣೆಗಳ ನಡುವೆಯೂ ʻಎಂಟಿಎಚ್ಎಲ್ ಅಟಲ್ ಸೇತುʼವನ್ನು ಸಕಾಲಕ್ಕೆ ಪೂರ್ಣಗೊಳಿಸಿದ ಬಗ್ಗೆ ಅವರು ಶ್ಲಾಘಿಸಿದರು ಮತ್ತು ಯಾವುದೇ ಅಭಿವೃದ್ಧಿ ಯೋಜನೆಯ ಉದ್ಘಾಟನೆ, ಲೋಕಾರ್ಪಣೆ ಅಥವಾ ಶಂಕುಸ್ಥಾಪನೆಯು ಬರೀ ʻಫೋಟೋ ಸೆಷೆನ್‌ʼಗೆ ಸೀಮಿತವಾಗದೆ, ಅದು ʻನವ ಭಾರತʼದ ಸೃಷ್ಟಿಗೆ ಮಾಧ್ಯಮವಾಗಿದೆ ಎಂದು ಪ್ರಧಾನಿ ಹೇಳಿದರು. "ಇಂತಹ ಪ್ರತಿಯೊಂದು ಯೋಜನೆಯೂ ಭವ್ಯ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ" ಎಂದು ಅವರು ಉದ್ಗರಿಸಿದರು.

 

ರಸ್ತೆಗಳು, ರೈಲ್ವೆ, ಮೆಟ್ರೋ ಮತ್ತು ನೀರು ಮತ್ತು ವ್ಯಾಪಾರ ಸಂಬಂಧಿತ ಮೂಲಸೌಕರ್ಯ ಕ್ಷೇತ್ರಗಳಲ್ಲಿನ ಇಂದಿನ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದಾಗ ಈ ಬಹುತೇಕ ಯೋಜನೆಗಳನ್ನು ಪ್ರಾರಂಭಿಸಲಾಯಿತು ಎಂದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ನೇತೃತ್ವದ ತಂಡದ ಪ್ರಯತ್ನಗಳನ್ನು ಶ್ರೀ ಮೋದಿ ಶ್ಲಾಘಿಸಿದರು. 

ಕಾರ್ಯಕ್ರಮದಲ್ಲಿ ಮಹಿಳೆಯರ ಉಪಸ್ಥಿತಿ ಮತ್ತು ಆಶೀರ್ವಾದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ ಪ್ರಧಾನಿ, "ಹೆಣ್ಣುಮಕ್ಕಳು ಮತ್ತು ಸಹೋದರಿಯರ ಸಬಲೀಕರಣಕ್ಕೆ ಮೋದಿ ನೀಡಿದ ಖಾತರಿಯನ್ನು ಮಹಾರಾಷ್ಟ್ರ ಸರ್ಕಾರವು ಮುಂದುವರಿಸುತ್ತಿದೆ" ಎಂದು ಹೇಳಿದರು. ʻಮುಖ್ಯಮಂತ್ರಿ ಮಹಿಳಾ ಸಶಕ್ತೀಕರಣʼ ಅಭಿಯಾನ, ʻನಾರಿ ಶಕ್ತಿದೂತ್ʼ ತಂತ್ರಾಂಶ ಮತ್ತು ʻಲೇಕ್ ಲಡ್ಕಿ ಯೋಜನೆʼಯಂತಹ ಯೋಜನೆಗಳು ಆ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನಗಳಾಗಿವೆ ಎಂದು ಅವರು ಗಮನಸೆಳೆದರು. "ಮಹಿಳೆಯರೊಂದಿಗೆ ಮುಂದೆ ಬರುವುದು ಮತ್ತು ʻವಿಕಸಿತ ಭಾರತʼಕ್ಕಾಗಿ ಆಂದೋಲನವನ್ನು ಮುನ್ನಡೆಸುವುದು ಬಹಳ ನಿರ್ಣಾಯಕವಾದುದು. ನಮ್ಮ ತಾಯಿ ಮತ್ತು ಸಹೋದರಿಯರ ಹಾದಿಯಲ್ಲಿನ ಪ್ರತಿಯೊಂದು ಅಡೆತಡೆಗಳನ್ನು ತೊಡೆದುಹಾಕಿ, ಅವರ ಜೀವನವನ್ನು ಸುಲಭಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ," ಎಂದು ಪ್ರಧಾನಿ ಹೇಳಿದರು. ʻಉಜ್ವಲʼ, ʻಆಯುಷ್ಮಾನ್ ಕಾರ್ಡ್ʼ, ʻಜನ್ ಧನ್ʼ ಖಾತೆಗಳು, ʻಪಿಎಂ ಆವಾಸ್ʼ ಅಡಿಯಲ್ಲಿ ಶಾಶ್ವತ ಮನೆಗಳು, ʻಮಾತೃವಂದನಾʼ, 26 ವಾರಗಳ ಹೆರಿಗೆ ರಜೆ ಮತ್ತು ʻಸುಕನ್ಯಾ ಸಮೃದ್ಧಿʼ ಖಾತೆಗಳಂತಹ ಯೋಜನೆಗಳನ್ನು ಅವರು ಪಟ್ಟಿ ಮಾಡಿದರು. " ಮಹಿಳಾ ಕಲ್ಯಾಣವು ಯಾವುದೇ ರಾಜ್ಯದಲ್ಲಿ ಯಾವುದೇ ಡಬಲ್ ಎಂಜಿನ್ ಸರ್ಕಾರದ ಪ್ರಮುಖ ಖಾತರಿಯಾಗಿದೆ," ಎಂದು ಅವರು ಹೇಳಿದರು.

ʻಅಟಲ್ ಸೇತುʼ ಸಮುದ್ರ ಸೇತುವೆಯು ತನ್ನ ಗಾತ್ರ, ಪ್ರಯಾಣದ ಸುಗಮತೆ, ಅದಕ್ಕಾಗಿ ಕೆಲಸ ಮಾಡಿದ ಎಂಜಿನಿಯರ್‌ಗಳು ಮತ್ತು ಅದರ ಅಗಾಧತೆಯಿಂದಾಗಿ ಪ್ರತಿಯೊಬ್ಬರಲ್ಲೂ ಹೆಮ್ಮೆ ತುಂಬುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯಲ್ಲಿ ಬಳಸಲಾದ ಉಕ್ಕಿನಿಂದ 4 ʻಹೌರಾ ಸೇತುವೆʼಗಳು ಮತ್ತು 6 ʻಸ್ವಾತಂತ್ರ್ಯದ ಪ್ರತಿಮೆʼಗಳನ್ನು (ಸ್ಟ್ಯಾಚೂ ಆಫ್‌ ಲಿಬರ್ಟಿ) ನಿರ್ಮಿಸಬಹುದು ಎಂದು ಅವರು ಮಾಹಿತಿ ನೀಡಿದರು. ಪ್ರಧಾನಮಂತ್ರಿಯವರು ಜಪಾನ್ ಸರ್ಕಾರದ ನೆರವಿಗೆ ಧನ್ಯವಾದ ಅರ್ಪಿಸಿದರು ಮತ್ತು ಪ್ರಧಾನಮಂತ್ರಿ ಶಿಂಜೋ ಅಬೆ ಅವರನ್ನು ಸ್ಮರಿಸಿದರು. "ಈ ಸೇತುವೆಯ ನಿರ್ಮಾಣವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಾವು ನಿರ್ಧರಿಸಿದ್ದೆವು," ಎಂದು ಪಿಎಂ ಮೋದಿ ನೆನಪಿಸಿಕೊಂಡರು.

 

"ಅಟಲ್ ಸೇತುವೆಯು 2014ರಲ್ಲಿ ಇಡೀ ರಾಷ್ಟ್ರವು ಹೊಂದಿದ್ದ ಆಕಾಂಕ್ಷೆಗಳ ಸಾಕಾರತೆಯಾಗಿದೆ," ಎಂದು ಪ್ರಧಾನಿ ಬಣ್ಣಿಸಿದರು. 2014ರ ಚುನಾವಣೆಗೂ ಮುನ್ನ ರಾಯಗಢ ಕೋಟೆಗೆ ಭೇಟಿ ನೀಡಿ ಶಿವಾಜಿಯ ಸಮಾಧಿ ಬಳಿ ಸಮಯ ಕಳೆದಿದ್ದನ್ನು ಸ್ಮರಿಸಿದ ಪ್ರಧಾನಿಯವರು, 10 ವರ್ಷಗಳ ಹಿಂದೆ ಕೈಗೊಂಡ ಕನಸುಗಳು ಮತ್ತು ಸಂಕಲ್ಪಗಳು ಇಂದು ನನಸಾಗಿವೆ ಎಂದರು. "ಅಟಲ್ ಸೇತು ಈ ನಂಬಿಕೆಯ ಪ್ರತಿಬಿಂಬವಾಗಿದೆ ಮತ್ತು ಇದು ʻವಿಕಸಿತ ಭಾರತʼದ ಚಿತ್ರವನ್ನು ಪ್ರಸ್ತುತಪಡಿಸುತ್ತದೆ" ಎಂದು ಅವರು ಹೇಳಿದರು. ʻಎಂಎಚ್‌ಟಿಎಲ್‌ ಅಟಲ್ ಸೇತುʼ ಯುವಕರಲ್ಲಿ ಹೊಸ ನಂಬಿಕೆಗಳನ್ನು ಹುಟ್ಟುಹಾಕುತ್ತದೆ ಎಂದು ಒತ್ತಿ ಹೇಳಿದರು. "ವಿಕಸಿತ ಭಾರತ ಎಲ್ಲರಿಗೂ ಸೇವೆಗಳು ಮತ್ತು ಸಮೃದ್ಧಿಯನ್ನು ಒಳಗೊಂಡಿರುತ್ತದೆ. ಅದು ವೇಗ ಮತ್ತು ಪ್ರಗತಿಯನ್ನು ಹೊಂದಿರುತ್ತದೆ, ಅದು ಜಗತ್ತನ್ನು ಹತ್ತಿರ ತರುತ್ತದೆ. ವಿಕಸಿತ ಭಾರತದಲ್ಲಿ ಜೀವನ ಮತ್ತು ಜೀವನೋಪಾಯವು ಅಭಿವೃದ್ಧಿ ಹೊಂದುತ್ತಲೇ ಇರುತ್ತವೆ. ಅಟಲ್ ಸೇತುವಿನ ಸಂದೇಶವೂ ಇದೇ ಆಗಿದೆ,", ಎಂದು ಪ್ರಧಾನಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಪರಿವರ್ತನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, 2014ರ ಹಿಂದಿನ ಭಾರತವನ್ನು ನೆನಪಿಸಿಕೊಂಡಾಗ ಪರಿವರ್ತನೆಗೊಂಡ ಭಾರತದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದರು. "ಈ ಹಿಂದೆ, ಸಾವಿರಾರು ಕೋಟಿ ಹಗರಣಗಳು ಚರ್ಚೆಯ ವಿಷಯವಾಗಿದ್ದವು, ಇಂದು ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಪೂರ್ಣಗೊಳಿಸುವ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ," ಎಂದು ಶ್ರೀ ಮೋದಿ ಉದ್ಗರಿಸಿದರು. ಈಶಾನ್ಯದಲ್ಲಿ ಪೂರ್ಣಗೊಂಡ ʻಭೂಪೇನ್ ಹಜಾರಿಕಾ ಸೇತುʼ ಮತ್ತು ʻಬೋಗಿಬೀಲ್ ಸೇತುವೆʼಗಳು, ʻಅಟಲ್ ಸುರಂಗʼ ಹಾಗೂ ʻಚೆನಾಬ್ ಸೇತುವೆʼ; ಹಲವು ಎಕ್ಸ್‌ಪ್ರೆಸ್ ಹೆದ್ದಾರಿಗಳು, ಆಧುನಿಕ ರೈಲ್ವೆ ನಿಲ್ದಾಣಗಳು, ʻಪೂರ್ವ ಮತ್ತು ಪಶ್ಚಿಮ ಸರಕು ಕಾರಿಡಾರ್ʼ; ʻವಂದೇ ಭಾರತ್ʼ, ʻಅಮೃತ್ ಭಾರತ್ʼ, ʻನಮೋ ಭಾರತ್ʼ ರೈಲುಗಳು ಹಾಗೂ ಹೊಸ ವಿಮಾನ ನಿಲ್ದಾಣಗಳ ಉದ್ಘಾಟನೆಯ ಉದಾಹರಣೆಗಳನ್ನು ಪ್ರಧಾನಿ ಪಟ್ಟಿ ಮಾಡಿದರು.

 

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಬೃಹತ್ ಅಭಿವೃದ್ಧಿ ಯೋಜನೆಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ʻಬಾಲಾ ಸಾಹೇಬ್ ಠಾಕ್ರೆ ಸಮೃದ್ಧಿ ಮಹಾಮಾರ್ಗʼದ ಉದ್ಘಾಟನೆ ಮತ್ತು ʻನವೀ ಮುಂಬೈ ವಿಮಾನ ನಿಲ್ದಾಣʼ ಮತ್ತು ʻಕರಾವಳಿ ರಸ್ತೆ ಯೋಜನೆʼಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಉಲ್ಲೇಖಿಸಿದರು. ಪ್ರಯಾಣದ ಸುಗಮತೆಯನ್ನು ಮತ್ತಷ್ಟು ಹೆಚ್ಚಿಸಲು ʻಈಸ್ಟರ್ನ್ ಫ್ರೀವೇʼಯ ʻಆರೆಂಜ್ ಗೇಟ್ʼ ಅನ್ನು ʻಮರೀನ್ ಡ್ರೈವ್ʼಗೆ ಸಂಪರ್ಕಿಸುವ ಭೂಗತ ರಸ್ತೆ ಸುರಂಗದ ಬಗ್ಗೆ ಅವರು ಉಲ್ಲೇಖಿಸಿದರು. "ಶೀಘ್ರದಲ್ಲೇ, ಮುಂಬೈ ತನ್ನ ಮೊದಲ ಬುಲೆಟ್ ರೈಲನ್ನು ಪಡೆಯಲಿದೆ" ಎಂದು ಅವರು ಹೇಳಿದರು. "ದೆಹಲಿ-ಮುಂಬೈ ಆರ್ಥಿಕ ಕಾರಿಡಾರ್ ಮಹಾರಾಷ್ಟ್ರವನ್ನು ಮಧ್ಯ ಮತ್ತು ಉತ್ತರ ಭಾರತದೊಂದಿಗೆ ಸಂಪರ್ಕಿಸುತ್ತದೆ. ಮಹಾರಾಷ್ಟ್ರವನ್ನು ತೆಲಂಗಾಣ, ಛತ್ತೀಸ್‌ಗಢ ಮತ್ತು ಇತರ ನೆರೆಯ ರಾಜ್ಯಗಳೊಂದಿಗೆ ಸಂಪರ್ಕಿಸಲು ಪ್ರಸರಣ ಮಾರ್ಗ ಜಾಲಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ತೈಲ ಮತ್ತು ಅನಿಲ ಕೊಳವೆ ಮಾರ್ಗ, ಔರಂಗಾಬಾದ್ ಕೈಗಾರಿಕಾ ನಗರ, ನವೀ ಮುಂಬೈ ವಿಮಾನ ನಿಲ್ದಾಣ ಮತ್ತು ಶೇಂದ್ರ-ಬಿಡ್ಕಿನ್ ಕೈಗಾರಿಕಾ ಪಾರ್ಕ್‌ನ ದೊಡ್ಡ ಯೋಜನೆಗಳು ಮಹಾರಾಷ್ಟ್ರದ ಆರ್ಥಿಕತೆಗೆ ಹೊಸ ಪ್ರಚೋದನೆ ನೀಡಲಿವೆ,ʼʼ ಎಂದು ಹೇಳಿದರು.

ತೆರಿಗೆದಾರರ ಹಣವನ್ನು ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ವಿವರಿಸಿದ ಪ್ರಧಾನಿ, ಈ ಹಿಂದೆ ಈ ಹಣದ ದುರ್ಬಳಕೆ ಹೇಗೆ ಆಗುತ್ತಿತ್ತೆಂದು ಹೋಲಿಕೆ ಮಾಡಿದರು. ಐದು ದಶಕಗಳ ಹಿಂದೆ ಪ್ರಾರಂಭವಾದ ಮತ್ತು ಪ್ರಸ್ತುತ ಸರ್ಕಾರದಿಂದ ಪೂರ್ಣಗೊಂಡ ʻನಿಲ್ವಾಂಡೆ ಅಣೆಕಟ್ಟುʼ ಯೋಜನೆ  ಬಗ್ಗೆ ಅವರು ಉಲ್ಲೇಖಿಸಿದರು. ಉರಾನ್-ಖಾರ್ಕೋಪರ್ ರೈಲ್ವೆ ಮಾರ್ಗದ ಕೆಲಸವನ್ನು 3 ದಶಕಗಳ ಹಿಂದೆ ಪ್ರಾರಂಭಿಸಲಾಯಿತು, ಡಬಲ್ ಎಂಜಿನ್ ಸರ್ಕಾರವು ಈ ಕಾಮಗಾರಿಗೆ ವೇಗ ನೀಡಿದ್ದು, ಮೊದಲ ಹಂತವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಅಂತೆಯೇ, ನವೀ ಮುಂಬೈ ಮೆಟ್ರೋ ಯೋಜನೆಯ ಮೊದಲ ಹಂತವು ದೀರ್ಘ ವಿಳಂಬದ ನಂತರ ಪೂರ್ಣಗೊಂಡಿದೆ. ʻಅಟಲ್ ಸೇತುʼ ಕೂಡ 5-6 ದಶಕಗಳಿಂದ ಯೋಜನೆಯ ಹಂತದಲ್ಲಿತ್ತು ಎಂದು ಅವರು ಮಾಹಿತಿ ನೀಡಿದರು. ʻಅಟಲ್‌ ಸೇತುʼಗೆ ಹೋಲಿಸಿದರೆ 5 ಪಟ್ಟು ಸಣ್ಣ ಯೋಜನೆಯಾದ ʻಬಾಂದ್ರಾ-ವರ್ಲಿ ಸೀಲಿಂಕ್ʼ ಯೋಜನೆಯ ನಿರ್ಮಾಣಕ್ಕೆ  10 ವರ್ಷಗಳಿಗಿಂತ ಹೆಚ್ಚು ಸಮಯ ಹಿಡಿದಿದ್ದು, ಅದರ ವೆಚ್ಚವೂ ಸಹ 4-5 ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ʻಅಟಲ್ ಸೇತುʼ ನಿರ್ಮಾಣಕ್ಕೆ ಸುಮಾರು 17,000 ಕಾರ್ಮಿಕರು ಮತ್ತು 1500 ಎಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ. ಸಾರಿಗೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಅಟಲ್ ಸೇತು ಈ ಪ್ರದೇಶದ ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ಬಲಪಡಿಸುವುದರ ಜೊತೆಗೆ, ವ್ಯಾಪಾರ ಮತ್ತು ಜೀವನವನ್ನು ಸುಗಮಗೊಳಿಸುತ್ತದೆ," ಎಂದು ಅವರು ಹೇಳಿದರು.

 

"ಇಂದು, ಭಾರತವು ಎರಡು ರಂಗಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸುತ್ತಿದೆ," ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಒಂದೆಡೆ, ಬಡವರ ಜೀವನೋಪಾಯವನ್ನು ಸುಧಾರಿಸಲು ಸರ್ಕಾರ ಮೆಗಾ ಅಭಿಯಾನಗಳನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ದೇಶದ ಪ್ರತಿಯೊಂದು ಭಾಗದಲ್ಲೂ ಪ್ರಮುಖ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ʻಅಟಲ್ ಪಿಂಚಣಿ ಯೋಜನೆʼ ಮತ್ತು ʻಅಟಲ್ ಸೇತುʼ, ʻಆಯುಷ್ಮಾನ್ ಭಾರತ್ʼ ಯೋಜನೆ ಮತ್ತು ʻವಂದೇ ಭಾರತ್ʼ-ʻಅಮೃತ್ ಭಾರತ್ʼ ರೈಲುಗಳು, ʻಪಿಎಂ ಕಿಸಾನ್ ಸ್ವನಿಧಿʼ ಮತ್ತು ʻಪಿಎಂ ಗತಿಶಕ್ತಿʼ ಯೋಜನೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಜನಸಾಮಾನ್ಯರ ಕುರಿತಾಗಿ ಸರ್ಕಾರದ ಉದ್ದೇಶ ಮತ್ತು ನಿಷ್ಠೆಯನ್ನು ಪ್ರಧಾನಿ ಪುನರುಚ್ಛರಿಸಿದರು. ಆದರೆ ಹಿಂದಿನ ಸರ್ಕಾರಗಳ ಉದ್ದೇಶಗಳು ಅಧಿಕಾರದ ಹಪಹಪಿಯಿಂದ ಕೂಡಿದ್ದವು. ಸಾಮಾನ್ಯ ಜನರಿಗಿಂತ ಹೆಚ್ಚಾಗಿ ತಮ್ಮ ಸ್ವಂತ ಕುಟುಂಬಗಳ ಮೇಲೆ ಆ ಸರ್ಕಾರಗಳು ಗಮನ ಕೇಂದ್ರೀಕರಿಸಿದವು ಎಂದು ವಿಷಾದ ವ್ಯಕ್ತಪಡಿಸಿದರು. ಅಭಿವೃದ್ಧಿಯ ಕೊರತೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, 2014ಕ್ಕೆ ಮುಂಚಿನ 10 ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ ಕೇವಲ 12 ಲಕ್ಷ ಕೋಟಿ ರೂ.ಗಳ ಬಜೆಟ್ ನೀಡಲಾಗಿತ್ತು. ಪ್ರಸ್ತುತ ಸರ್ಕಾರದ 10 ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ 44 ಲಕ್ಷ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಕೇಂದ್ರ ಸರ್ಕಾರ ಸುಮಾರು 8 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ ಅಥವಾ ಅವುಗಳ ಕೆಲಸ ಪ್ರಗತಿಯಲ್ಲಿದೆ. ಈ ಮೊತ್ತವು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ," ಎಂದು ಅವರು ಹೇಳಿದರು.

ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ಉಲ್ಲೇಖಿಸಿದ ಪ್ರಧಾನಿ, "ಇತರರಿಂದ ನಿರೀಕ್ಷೆಗಳು ಎಲ್ಲಿ ಕೊನೆಗೊಳ್ಳುತ್ತವೆಯೋ ಅಲ್ಲಿ ಮೋದಿಯವರ ಭರವಸೆ ಪ್ರಾರಂಭವಾಗುತ್ತದೆ," ಎಂದು ಹೇಳಿದರು. ಸ್ವಚ್ಛತೆ, ಶಿಕ್ಷಣ, ವೈದ್ಯಕೀಯ ನೆರವು ಮತ್ತು ಆದಾಯ ಗಳಿಕೆಗೆ ಸಂಬಂಧಿಸಿದ ಯೋಜನೆಗಳು ಮಹಿಳೆಯರಿಗೆ ಹೆಚ್ಚು ಪ್ರಯೋಜನವನ್ನು ನೀಡಿವೆ ಎಂದು ಅವರು ಉಲ್ಲೇಖಿಸಿದರು. ʻಪಿಎಂ ಜನೌಷಧ ಕೇಂದ್ರʼಗಳು, ʻಸ್ವನಿಧಿʼ, ʻಪಿಎಂ ಆವಾಸ್ʼ ಮತ್ತು ಸ್ವಸಹಾಯ ಗುಂಪುಗಳು 'ಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸುತ್ತಿವೆ. 2 ಕೋಟಿ 'ಲಕ್ಷಾಧಿಪತಿ  ದೀದಿ'ಯರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮಹಾರಾಷ್ಟ್ರ ಸರ್ಕಾರದ ಯೋಜನೆಗಳು ಸಹ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಹೇಳಿದರು. "ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಡಬಲ್ ಎಂಜಿನ್ ಸರ್ಕಾರವು ಇದೇ ಸಮರ್ಪಣಾಭಾವದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮಹಾರಾಷ್ಟ್ರವು ಅಭಿವೃದ್ಧಿ ಹೊಂದಿದ ಭಾರತದ ಬಲವಾದ ಆಧಾರಸ್ತಂಭವಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ,ʼʼಎಂದು ಪ್ರಧಾನಿ ಮೋದಿ ಹೇಳಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಅಟಲ್ ಬಿಹಾರಿ ವಾಜಪೇಯಿ ಸೇತು - ನಾವಾ ಶೇವಾ ಅಟಲ್ ಸೇತು

ನಗರ ಸಾರಿಗೆ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುವ ಮೂಲಕ ನಾಗರಿಕರ 'ಸುಗಮ ಸಂಚಾರ'ವನ್ನು ಸುಧಾರಿಸುವುದು ಪ್ರಧಾನಿಯವರ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿ, ʻಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼ(ಎಂಟಿಎಚ್ಎಲ್) ಅನ್ನು ಈಗ 'ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನಾವಾ ಶೇವಾ ಅಟಲ್ ಸೇತು' ಎಂದು ಹೆಸರಿಸಲಾಗಿದೆ. ಈ ಸೇತುವೆಗೆ ಪ್ರಧಾನಮಂತ್ರಿಯವರು 2016ರ ಡಿಸೆಂಬರ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

 

ʻಅಟಲ್ ಸೇತುʼವನ್ನು ಒಟ್ಟು 17,840 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 21.8 ಕಿ.ಮೀ ಉದ್ದದ 6 ಪಥದ ಸೇತುವೆಯಾಗಿದ್ದು, ಸಮುದ್ರದ ಮೇಲೆ ಸುಮಾರು 16.5 ಕಿ.ಮೀ ಉದ್ದ ಮತ್ತು ಭೂಮಿಯ ಮೇಲೆ  ಸುಮಾರು 5.5 ಕಿ.ಮೀ ಉದ್ದವಿದೆ. ಇದು ಭಾರತದ ಅತಿ ಉದ್ದದ ಸೇತುವೆ ಮತ್ತು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಇದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಜೊತೆಗೆ ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರಿನ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.

ಇತರ ಅಭಿವೃದ್ಧಿ ಯೋಜನೆಗಳು

ʻಈಸ್ಟರ್ನ್ ಫ್ರೀವೇʼಯ ʻಆರೆಂಜ್ ಗೇಟ್ʼನಿಂದ ʻಮರೀನ್ ಡ್ರೈವ್ʼಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. 9.2 ಕಿ.ಮೀ ಉದ್ದದ ಈ ಸುರಂಗವನ್ನು 8700 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ಮುಂಬೈನಲ್ಲಿ ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಾಗಲಿದ್ದು, ʻಆರೆಂಜ್ ಗೇಟ್ʼ ಮತ್ತು ʻಮರೈನ್ ಡ್ರೈವ್ʼ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಪ್ರಧಾನಮಂತ್ರಿಯವರು ʻಸೂರ್ಯʼ ಪ್ರಾದೇಶಿಕ ಬೃಹತ್ ಕುಡಿಯುವ ನೀರಿನ ಯೋಜನೆಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 1975 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಮಹಾರಾಷ್ಟ್ರದ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡುತ್ತದೆ, ಸುಮಾರು 14 ಲಕ್ಷ ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 'ಉರಾನ್-ಖಾರ್ಕೋಪರ್ ರೈಲ್ವೆ ಮಾರ್ಗದ 2 ನೇ ಹಂತ'ದ ಸಮರ್ಪಣೆಯೂ ಇದರಲ್ಲಿ ಸೇರಿದೆ. ನೆರೂಲ್/ಬೇಲಾಪುರದಿಂದ ಖಾರ್ಕೋಪರ್ ನಡುವೆ ಚಲಿಸುವ ಉಪನಗರ ಸೇವೆಗಳನ್ನು ಈಗ ಉರಾನ್‌ವರೆಗೆ ವಿಸ್ತರಿಸಲಾಗುವುದರಿಂದ ನವೀ ಮುಂಬೈಗೆ ಸಂಪರ್ಕ ಸುಧಾರಿಸಲಿದೆ. ಉರಾನ್ ರೈಲ್ವೆ ನಿಲ್ದಾಣದಿಂದ ಖಾರ್ಕೋಪರ್ ವರೆಗಿನ ʻಎಮುʼ ರೈಲಿನ ಆರಂಭಿಕ ಸಂಚಾರಕ್ಕೂ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು.

 

ರಾಷ್ಟ್ರಕ್ಕೆ ಸಮರ್ಪಿಸಲಾದ ಇತರ ರೈಲು ಯೋಜನೆಗಳಲ್ಲಿ ಥಾಣೆ-ವಾಶಿ / ಪನ್ವೇಲ್ ಟ್ರಾನ್ಸ್-ಹಾರ್ಬರ್ ಮಾರ್ಗದಲ್ಲಿ 'ದಿಘಾ ಗಾಂವ್' ಹೊಸ ಉಪನಗರ ನಿಲ್ದಾಣ; ಖಾರ್ ರಸ್ತೆ ಮತ್ತು ಗೋರೆಗಾಂವ್ ರೈಲ್ವೆ ನಿಲ್ದಾಣದ ನಡುವಿನ ಹೊಸ 6ನೇ ಮಾರ್ಗ ಸೇರಿವೆ. ಈ ಯೋಜನೆಗಳು ಮುಂಬೈನ ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ.

ʻಸಾಂತಾಕ್ರೂಜ್ ವಿದ್ಯುನ್ಮಾನ ರಫ್ತು ಸಂಸ್ಕರಣಾ ವಲಯ - ವಿಶೇಷ ಆರ್ಥಿಕ ವಲಯʼದಲ್ಲಿ (ಎಸ್ಇಇಪಿಜೆಡ್ ಎಸ್ಇಝಡ್) ರತ್ನ ಮತ್ತು ಆಭರಣ ವಲಯಕ್ಕಾಗಿ 'ಭಾರತ ರತ್ನಂ' (ಮೆಗಾ ಕಾಮನ್ ಫೆಸಿಲಿಟೇಶನ್ ಸೆಂಟರ್-ಸಿಎಫ್‌ಸಿ) ಅನ್ನು ಪ್ರಧಾನಿ ಉದ್ಘಾಟಿಸಿದರು. ಇದು 3ಡಿ ಮೆಟಲ್ ಪ್ರಿಂಟಿಂಗ್ ಸೇರಿದಂತೆ ವಿಶ್ವದಲ್ಲಿ ಲಭ್ಯವಿರುವ  ಅತ್ಯುತ್ತಮ ಯಂತ್ರಗಳನ್ನು ಹೊಂದಿದ್ದು, ಇಂಥಹ ಮೊದಲ ಘಟಕವಾಗಿದೆ. ಇದು ವಿಶೇಷ ಚೇತನ ವಿದ್ಯಾರ್ಥಿಗಳು ಸೇರಿದಂತೆ ಈ ವಲಯದ ಕಾರ್ಮಿಕರ ಕೌಶಲ್ಯಕ್ಕಾಗಿ ತರಬೇತಿ ಶಾಲೆಯನ್ನು ಹೊಂದಿರುತ್ತದೆ. ಮೆಗಾ ʻಸಿಎಫ್‌ಸಿʼಯು ರತ್ನ ಮತ್ತು ಆಭರಣ ವ್ಯಾಪಾರಕ್ಕೆ ಸಂಬಂಧಿಸಿದಂತೆ ರಫ್ತು ಕ್ಷೇತ್ರವನ್ನು ಪರಿವರ್ತಿಸುತ್ತದೆ ಮತ್ತು ದೇಶೀಯ ಉತ್ಪಾದನೆಗೂ ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ʻಎಸ್ಇಇಪಿಝಡ್-ಎಸ್ಇಝಡ್‌ʼನಲ್ಲಿ ʻಹೊಸ ಉದ್ಯಮಗಳು ಮತ್ತು ಸೇವೆಗಳ ಗೋಪುರ(ಎನ್ಇಎಸ್ಟಿ)-01ʼ ಅನ್ನು ಸಹ ಉದ್ಘಾಟಿಸಿದರು. ಇದು ಪ್ರಾಥಮಿಕವಾಗಿ ರತ್ನ ಮತ್ತು ಆಭರಣ ವಲಯದ ಘಟಕಗಳಿಗೆ ಮೀಸಲಾಗಿದ್ದು, ಇದನ್ನು ಅಸ್ತಿತ್ವದಲ್ಲಿರುವ ʻಸ್ಟ್ಯಾಂಡರ್ಡ್ ಡಿಸೈನ್ ಫ್ಯಾಕ್ಟರಿ-1ʼ ರಿಂದ ಸ್ಥಳಾಂತರಿಸಲಾಗುವುದು. ದೊಡ್ಡ ಪ್ರಮಾಣದ ಉತ್ಪಾದನೆಗಾಗಿ ಮತ್ತು ಉದ್ಯಮದ ಬೇಡಿಕೆಗೆ ಅನುಗುಣವಾಗಿ ಹೊಸ ಗೋಪುರವನ್ನು ವಿನ್ಯಾಸಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻನಮೋ ಮಹಿಳಾ ಸಶಕ್ತಿಕರಣ್ʼ ಅಭಿಯಾನಕ್ಕೆ ಚಾಲನೆ ನೀಡಿದರು. ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಉದ್ಯಮಶೀಲತೆ ಅಭಿವೃದ್ಧಿಗೆ ತಮ್ಮನ್ನು ಒಡ್ಡಿಕೊಳ್ಳಲು ಅವಕಾಶ ನೀಡುವ ಮೂಲಕ ಮಹಾರಾಷ್ಟ್ರ ರಾಜ್ಯದಲ್ಲಿ ಮಹಿಳೆಯರನ್ನು ಸಶಕ್ತಗೊಳಿಸುವ ಗುರಿಯನ್ನು ಈ ಅಭಿಯಾನವು ಹೊಂದಿದೆ. ಈ ಅಭಿಯಾನದಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳ ಸಂಯೋಜನೆ ಮತ್ತು ಶೇ. 100 ಅನುಷ್ಠಾನ ಪ್ರಯತ್ನವನ್ನು ಸಹ ಕೈಗೊಳ್ಳಲಾಗುವುದು.

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi Praises Farmers For Taking India's Rich Mango Heritage To Global Markets

Media Coverage

PM Modi Praises Farmers For Taking India's Rich Mango Heritage To Global Markets
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting the virtues of firm resolve, self-control, and wisdom
June 02, 2026

Prime Minister Shri Narendra Modi today shared a Sanskrit Subhashitam, observing that firm resolve and self-control are the powers that make even the most difficult paths easy. Shri Modi highlighted that today, our youth are continuously engaged in nation-building with this very resolve.

The Prime Minister posted on X:

"दृढ़ निश्चय और आत्म-संयम वह शक्ति है, जो कठिन से कठिन राह को भी आसान बना देती है। आज हमारे युवा साथी इसी संकल्प के साथ राष्ट्र निर्माण में निरंतर जुटे हुए हैं।

निश्चित्य यः प्रक्रमते
नान्तर्वसति कर्मणः।

अबन्ध्यकालो वश्यात्मा
स वै पण्डित उच्यते॥"

A person who begins a task after careful deliberation and with firm resolve, who never leaves it unfinished, who uses time wisely and who maintains complete control over their senses, such a person alone is truly wise.