ತುಮಕೂರು ಕೈಗಾರಿಕಾ ಟೌನ್ಶಿಪ್ ಮತ್ತು ತುಮಕೂರಿನಲ್ಲಿ ಎರಡು ಜಲ ಜೀವನ್ ಮಿಷನ್ ಯೋಜನೆಗಳಿಗೆ ಶಂಕುಸ್ಥಾಪನೆ
"ಡಬಲ್ ಇಂಜಿನ್ ಸರ್ಕಾರವು ಕರ್ನಾಟಕವನ್ನು ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿ ಮಾಡಿದೆ"
"ನಮ್ಮ ರಕ್ಷಣಾ ಅಗತ್ಯಗಳಿಗಾಗಿ ನಾವು ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಬೇಕು"
"ದೇಶ ಮೊದಲು" ಎಂಬ ಮನೋಭಾವದಿಂದ ಯಶಸ್ಸು ಖಚಿತ"
"ಈ ಕಾರ್ಖಾನೆ ಮತ್ತು ಹೆಚ್ ಎ ಎಲ್ ನ ಹೆಚ್ಚುತ್ತಿರುವ ಶಕ್ತಿಯು ಸುಳ್ಳಿನ ವ್ಯಾಪಾರಿಗಳನ್ನು ಬಯಲುಮಾಡಿದೆ"
"ಫುಡ್ ಪಾರ್ಕ್ ಮತ್ತು ಹೆಚ್ ಎ ಎಲ್ ನಂತರ ತುಮಕೂರಿಗೆ ಕೈಗಾರಿಕಾ ಟೌನ್ಶಿಪ್ ಒಂದು ದೊಡ್ಡ ಕೊಡುಗೆಯಾಗಿದೆ, ಇದು ತುಮಕೂರು ದೇಶದ ದೊಡ್ಡ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ"
"ಡಬಲ್ ಇಂಜಿನ್ ಸರ್ಕಾರವು ಸಾಮಾಜಿಕ ಮೂಲಸೌಕರ್ಯ ಮತ್ತು ಭೌತಿಕ ಮೂಲಸೌಕರ್ಯಕ್ಕೆ ಸಮಾನ ಗಮನವನ್ನು ನೀಡುತ್ತಿದೆ"
"ಈ ಬಜೆಟ್ ಸಮರ್ಥ ಭಾರತ, ಸಂಪನ್ನ ಭಾರತ, ಸ್ವಯಂಪೂರ್ಣ ಭಾರತ, ಶಕ್ತಿಮಾನ್ ಭಾರತ, ಗತಿವಾನ್ ಭಾರತ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ"
ಈ ಬಜೆಟ್ನಲ್ಲಿ ನೀಡಿರುವ ತೆರಿಗೆ ಪ್ರಯೋಜನಗಳಿಂದಾಗಿ ಮಧ್ಯಮ ವರ್ಗದವರಲ್ಲಿ ಭಾರೀ ಹುಮ್ಮಸ್ಸು ಮೂಡಿದೆ
"ಮಹಿಳೆಯರ ಆರ್ಥಿಕ ಸೇರ್ಪಡೆಯು ಮನೆಗಳಲ್ಲಿ ಅವರ ಧ್ವನಿಯನ್ನು ಬಲಪಡಿಸುತ್ತದೆ ಮತ್ತು ಈ ಬಜೆಟ್ ಅದಕ್ಕಾಗಿ ಅನೇಕ ಅವಕಾಶಗಳನ್ನು ನೀಡಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತುಮಕೂರಿನಲ್ಲಿ ಎಚ್ ಎ ಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ತುಮಕೂರು ಕೈಗಾರಿಕಾ ಟೌನ್ಶಿಪ್ ಮತ್ತು ತುಮಕೂರಿನ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಎರಡು ಜಲ ಜೀವನ್ ಮಿಷನ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಹೆಲಿಕಾಪ್ಟರ್ ಘಟಕ  ಮತ್ತು ಸ್ಟ್ರಕ್ಚರ್ ಹ್ಯಾಂಗರ್ ಅನ್ನು ವೀಕ್ಷಿಸಿದರು ಮತ್ತು ಲಘು ಬಳಕೆಯ ಹೆಲಿಕಾಪ್ಟರ್ ಅನ್ನು ಅನಾವರಣಗೊಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ನಾಟಕವು ಸಂತರು ಮತ್ತು ಋಷಿಮುನಿಗಳ ನಾಡಾಗಿದ್ದು, ಆಧ್ಯಾತ್ಮ, ಜ್ಞಾನ ಮತ್ತು ವೈಜ್ಞಾನಿಕ ಮೌಲ್ಯಗಳ ಭಾರತೀಯ ಸಂಪ್ರದಾಯಗಳನ್ನು ಯಾವಾಗಲೂ ಬಲಪಡಿಸಿದೆ ಎಂದು ಹೇಳಿದರು. ಅವರು ತುಮಕೂರಿನ ವಿಶೇಷ ಮಹತ್ವ ಮತ್ತು ಸಿದ್ದಗಂಗಾ ಮಠದ ಕೊಡುಗೆಗಳನ್ನು ಪ್ರಸ್ತಾಪಿಸಿದರು. ಪೂಜ್ಯ ಶಿವಕುಮಾರ ಸ್ವಾಮೀಜಿಯವರು ಬಿಟ್ಟು ಹೋದ ಅನ್ನ, ಅಕ್ಷರ, ಆಶ್ರಯ ಪರಂಪರೆಯನ್ನು ಇಂದು ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಯುವಕರಿಗೆ ಉದ್ಯೋಗಾವಕಾಶಗಳು, ಗ್ರಾಮೀಣ ಸಮುದಾಯ ಮತ್ತು ಮಹಿಳೆಯರ ಸುಗಮ ಜೀವನ, ಸಶಸ್ತ್ರ ಪಡೆಗಳ ಬಲವರ್ಧನೆ ಮತ್ತು ಮೇಡ್ ಇನ್ ಇಂಡಿಯಾ ಪರಿಕಲ್ಪನೆಗೆ ಸಂಬಂಧಿಸಿದಂತೆ ನೂರಾರು ಕೋಟಿ ರೂ. ಮೌಲ್ಯದ ಅನೇಕ ಯೋಜನೆಗಳನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ ಅಥವಾ ಅಡಿಪಾಯ ಹಾಕಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. 

ಕರ್ನಾಟಕದ ಯುವಜನತೆಯ ಪ್ರತಿಭೆ ಮತ್ತು ನಾವೀನ್ಯವನ್ನು ಪ್ರಧಾನಿ ಶ್ಲಾಘಿಸಿದರು. ಉತ್ಪಾದನಾ ಕ್ಷೇತ್ರದ ಶಕ್ತಿಯು ಡ್ರೋನ್ನಿಂದ ತೇಜಸ್ ಯುದ್ಧ ವಿಮಾನಗಳವರೆಗಿನ ಉತ್ಪನ್ನಗಳಲ್ಲಿ ಕಾಣಿಸುತ್ತದೆ ಎಂದು ಹೇಳಿದರು. ಡಬಲ್ ಇಂಜಿನ್ ಸರ್ಕಾರವು ಕರ್ನಾಟಕವನ್ನು ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿ ಮಾಡಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ರಕ್ಷಣಾ ಅಗತ್ಯಗಳಿಗಾಗಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುವ ವಾಗ್ದಾನದೊಂದಿಗೆ 2016 ರಲ್ಲಿ ತಾವು ಅಡಿಪಾಯ ಹಾಕಿದ ಹೆಚ್ ಎ ಎಲ್ ಯೋಜನೆಯು ಇಂದು ರಾಷ್ಟ್ರಕ್ಕೆ ಸಮರ್ಪಣೆಯಾದ ನಿದರ್ಶನವನ್ನು ಪ್ರಧಾನಿ ನೀಡಿದರು.

ಇಂದು ಸಶಸ್ತ್ರ ಪಡೆಗಳು ಬಳಸುತ್ತಿರುವ ನೂರಾರು ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳು ಭಾರತದಲ್ಲಿಯೇ ತಯಾರಾಗುತ್ತಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. "ಸುಧಾರಿತ ಆಕ್ರಮಣಕಾರಿ ರೈಫಲ್ಗಳಿಂದ ಟ್ಯಾಂಕ್ಗಳು, ವಿಮಾನವಾಹಕ ನೌಕೆಗಳು, ಹೆಲಿಕಾಪ್ಟರ್ಗಳು, ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳವರೆಗೆ ಭಾರತ ಎಲ್ಲವನ್ನೂ ತಯಾರಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಏರೋಸ್ಪೇಸ್ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು, ಕಳೆದ 8-9 ವರ್ಷಗಳಲ್ಲಿ ಈ ವಲಯದಲ್ಲಿ ಮಾಡಿದ ಹೂಡಿಕೆಯು 2014 ಕ್ಕಿಂತ ಮೊದಲು 15 ವರ್ಷಗಳಲ್ಲಿ ಮಾಡಿದ ಹೂಡಿಕೆಗಿಂತ ಐದು ಪಟ್ಟು ಹೆಚ್ಚು ಎಂದು ಪ್ರಧಾನಿ ಹೇಳಿದರು. ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳು ನಮ್ಮ ಸಶಸ್ತ್ರ ಪಡೆಗಳಿಗೆ ಮಾತ್ರ ಪೂರೈಕೆಯಾಗುತ್ತಿಲ್ಲ, ಬದಲಿಗೆ 2014 ರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಕ್ಷಣಾ ರಫ್ತು ಕೂಡ ಹಲವುಪಟ್ಟು ಬೆಳೆದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಘಟಕದಲ್ಲಿ ನೂರಾರು ಹೆಲಿಕಾಪ್ಟರ್ಗಳನ್ನು ತಯಾರಿಸಲಾಗುವುದು ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಇದು 4 ಲಕ್ಷ ಕೋಟಿ ರೂ.ಮೌಲ್ಯದ ವ್ಯವಹಾರಗಳಿಗೆ ಕಾರಣವಾಗುತ್ತದೆ. ಇಂತಹ ತಯಾರಿಕಾ ಘಟಕಗಳನ್ನು ಸ್ಥಾಪಿಸಿದಾಗ, ಅದು ಸಶಸ್ತ್ರ ಪಡೆಗಳನ್ನು ಮಾತ್ರ ಬಲಪಡಿಸುವುದಿಲ್ಲ, ಜೊತೆಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ತುಮಕೂರಿನ ಹೆಲಿಕಾಪ್ಟರ್ ತಯಾರಿಕಾ ಘಟಕದ ಸಮೀಪವಿರುವ ಸಣ್ಣ ಉದ್ಯಮಗಳು ಸಬಲೀಕರಣಗೊಳ್ಳುತ್ತವೆ ಎಂದು ಪ್ರಧಾನಿ ಹೇಳಿದರು.

ಎಚ್ ಎ ಎಲ್ ಹೆಸರಿನಲ್ಲಿ ಸರ್ಕಾರವನ್ನು ಗುರಿಯಾಗಿಸಿ ಇತ್ತೀಚೆಗೆ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಸುಳ್ಳು ಎಷ್ಟೇ ದೊಡ್ಡದಾಗಿದ್ದರೂ, ಆಗಾಗ್ಗೆ ಅಥವಾ ಹೆಚ್ಚು ಬಾರಿ ಹೇಳಿದರೂ, ಸತ್ಯದ ಮುಂದೆ ಯಾವಾಗಲೂ ಸೋಲುತ್ತದೆ ಎಂದು ಹೇಳಿದರು. ಈ ಕಾರ್ಖಾನೆ ಮತ್ತು ಎಚ್ ಎ ಎಲ್ ನ ಹೆಚ್ಚುತ್ತಿರುವ ಶಕ್ತಿಯು ಸುಳ್ಳಿನ ವ್ಯಾಪಾರಿಗಳನ್ನು ಬಯಲುಮಾಡಿದೆ. ವಾಸ್ತವ ಸ್ವತಃ ಮಾತನಾಡುತ್ತಿದೆ ಎಂದು ಅವರು ಹೇಳಿದರು. ಇಂದು ಅದೇ ಎಚ್ ಎ ಎಲ್ ಭಾರತೀಯ ಸಶಸ್ತ್ರ ಪಡೆಗಳಿಗೆ ಆಧುನಿಕ ತೇಜಸ್ ಅನ್ನು ತಯಾರಿಸುತ್ತಿದೆ ಮತ್ತು ಜಾಗತಿಕ ಆಕರ್ಷಣೆಯ ಕೇಂದ್ರವಾಗಿದೆ ಮತ್ತು ರಕ್ಷಣಾ ವಲಯದಲ್ಲಿ ಭಾರತದ ಆತ್ಮನಿರ್ಭರತೆಯನ್ನು ಹೆಚ್ಚಿಸುತ್ತಿದೆ ಎಂದರು.

ಫುಡ್ ಪಾರ್ಕ್ ಮತ್ತು ಎಚ್ ಎ ಎಲ್ ನಂತರ ಕೈಗಾರಿಕಾ ಟೌನ್ಶಿಪ್ ತುಮಕೂರಿಗೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ಪ್ರಧಾನಿ ಹೇಳಿದರು, ಇದು ತುಮಕೂರನ್ನು ದೇಶದ ದೊಡ್ಡ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಮುಂಬೈ-ಚೆನ್ನೈ ಹೆದ್ದಾರಿ, ಬೆಂಗಳೂರು ವಿಮಾನ ನಿಲ್ದಾಣ, ತುಮಕೂರು ರೈಲು ನಿಲ್ದಾಣ, ಮಂಗಳೂರು ಬಂದರಿನ ಮೂಲಕ ಬಹುಮಾದರಿ ಸಂಪರ್ಕ ಕಲ್ಪಿಸುವ ಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ಪ್ಲಾನ್ ಅಡಿಯಲ್ಲಿ ಟೌನ್ಶಿಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಡಬಲ್ ಇಂಜಿನ್ ಸರ್ಕಾರವು ಭೌತಿಕ ಮೂಲಸೌಕರ್ಯದಂತೆಯೇ ಸಾಮಾಜಿಕ ಮೂಲಸೌಕರ್ಯಕ್ಕೂ ಸಮಾನವಾದ ಗಮನವನ್ನು ನೀಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ವರ್ಷದ ಬಜೆಟ್ ಮೇಲೆ ಬೆಳಕು ಚೆಲ್ಲಿದ ಅವರು, ಜಲ ಜೀವನ್ ಮಿಷನ್ಗೆ ಬಜೆಟ್ನಲ್ಲಿ ಕಳೆದ ವರ್ಷಕ್ಕಿಂತ 20,000 ಕೋಟಿ ರೂ.ಗಳಷ್ಟು ಅನುದಾನವನ್ನು ಹೆಚ್ಚಿಸಲಾಗಿದೆ ಎಂದರು. ಈ ಯೋಜನೆಯ ಬಹು ದೊಡ್ಡ ಫಲಾನುಭವಿಗಳು ತಮ್ಮ ಮನೆಗಳಿಗೆ ನೀರು ತರಲು ಬಹಳ ದೂರ ನಡೆಯಬೇಕಿದ್ದ ತಾಯಂದಿರು ಮತ್ತು ಸಹೋದರಿಯರು ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಯೋಜನೆಯ ವ್ಯಾಪ್ತಿ 3 ಕೋಟಿ ಗ್ರಾಮೀಣ ಕುಟುಂಬಗಳಿಂದ 11 ಕೋಟಿ ಗ್ರಾಮೀಣ ಕುಟುಂಬಗಳಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು. ಡಬಲ್ ಇಂಜಿನ್ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದ ಪ್ರಧಾನಿ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಅನುಕೂಲವಾಗುವ ಭದ್ರಾ ಮೇಲ್ದಂಡೆ ಯೋಜನೆಗೆ 5,500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು. ಮಳೆನೀರನ್ನು ಅವಲಂಬಿಸಿರುವ  ರೈತರಿಗೆ ಆಗುವ ಲಾಭಗಳ ಬಗ್ಗೆಯೂ ಪ್ರಧಾನಿಯವರು ಗಮನ ಸೆಳೆದರು.

ಈ ವರ್ಷದ ಮಧ್ಯಮ ವರ್ಗ ಸ್ನೇಹಿ ಬಜೆಟ್ ‘ವಿಕಸಿತ ಭಾರತʼದ ಪ್ರತಿಯೊಬ್ಬರ ಪ್ರಯತ್ನಗಳಿಗೆ ಬಲ ನೀಡಲಿದೆ ಎಂದು ಪ್ರಧಾನಿ ಹೇಳಿದರು. ಈ ಬಜೆಟ್ ಸಮರ್ಥ ಭಾರತ, ಸಂಪನ್ನ ಭಾರತ, ಸ್ವಯಂಪೂರ್ಣ ಭಾರತ, ಶಕ್ತಿಮಾನ್ ಭಾರತ, ಗತಿವಾನ್ ಭಾರತ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದೊಂದು ಜನಪ್ರಿಯವಾದ, ಎಲ್ಲರನ್ನೂ ಒಳಗೊಳ್ಳುವ ಬಜೆಟ್ ಆಗಿದ್ದು, ಇದು  ಎಲ್ಲರನ್ನೂ ತಲುಪುತ್ತದೆ ಎಂದು ಪ್ರಧಾನಿ ಹೇಳಿದರು. ಕೃಷಿಯಲ್ಲಿ ವಂಚಿತರು, ಯುವಕರು ಮತ್ತು ಮಹಿಳೆಯರಿಗೆ ಬಜೆಟ್ನ ಪ್ರಯೋಜನಗಳ ಕುರಿತು ಅವರು ವಿವರಿಸಿದರು. ನಾವು ನಿಮ್ಮ ಅಗತ್ಯಗಳು, ನಿಮಗೆ ಒದಗಿಸಬೇಕಾದ ನೆರವು ಮತ್ತು ನಿಮ್ಮ ಆದಾಯ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದ್ದೇವೆ ಅವರು ಹೇಳಿದರು.

ಸರ್ಕಾರದ ನೆರವು ಪಡೆಯುವುದು ಕಷ್ಟಪಡುವ ಸಮಾಜದ ವರ್ಗವನ್ನು ಸಬಲೀಕರಣಗೊಳಿಸಲು 2014 ರಿಂದ ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ಒತ್ತಿ ಹೇಳಿದರು. ಸರಕಾರದ ಯೋಜನೆಗಳು ಅವರನ್ನು ತಲುಪಲಿಲ್ಲ ಅಥವಾ ಅದನ್ನು ಮಧ್ಯವರ್ತಿಗಳಿಂದ ಲೂಟಿಯಾದವು ಎಂದ ಪ್ರಧಾನಿಯವರು, ತಮ್ಮ ಸರ್ಕಾರವು ಈ ಹಿಂದೆ ಸೌಲಭ್ಯಗಳಿಂದ ವಂಚಿತರಾಗಿದ್ದ ಪ್ರತಿಯೊಂದು ವರ್ಗಕ್ಕೂ ನೀಡಿದ ಸಹಾಯವನ್ನು ಎತ್ತಿ ತೋರಿಸಿದರು. ‘ನೌಕರ-ಕಾರ್ಮಿಕ’ ವರ್ಗಕ್ಕೆ ಇದೇ ಮೊದಲ ಬಾರಿಗೆ ಪಿಂಚಣಿ ಮತ್ತು ವಿಮೆ ಸೌಲಭ್ಯ ದೊರೆತಿದೆ ಎಂದು ಪ್ರಧಾನಿ ಹೇಳಿದರು. ಸಣ್ಣ ರೈತರಿಗೆ ಸಹಾಯ ಮಾಡಲು ಆರಂಭಿಸಿದ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಮತ್ತು ಬೀದಿ ಬದಿ ವ್ಯಾಪಾರಿಗಳು ಪಡೆದ ಸಾಲಗಳ ಬಗ್ಗೆ ಪ್ರಸ್ತಾಪಿಸಿದರು. ಈ ಬಾರಿಯ ಬಜೆಟ್ ಕೂಡ ಅದೇ ಮನೋಭಾವವನ್ನು ಮುಂದುವರಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ವಿಕಾಸ್ ಯೋಜನೆಯು ಕುಶಲಕರ್ಮಿಗಳು ಅಥವಾ ವಿಶ್ವಕರ್ಮರಾದ ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಶಿಲ್ಪಿ, ಗಾರೆಕೆಲಸದವ, ಬಡಗಿ ಮತ್ತು ಇತರರು ತಮ್ಮ ಕೈಗಳು ಮತ್ತರು ಉಪಕರಣಗಳ ಕೌಶಲ್ಯದಿಂದ ಏನನ್ನಾದರೂ ನಿರ್ಮಿಸುವವರಿಗೆ ಅವಕಾಶ ನೀಡುತ್ತದೆ ಮತ್ತು ಅವರ ಕಲೆ ಮತ್ತು ಕೌಶಲ್ಯಗಳನ್ನು ಮತ್ತಷ್ಟು ಉತ್ಕೃಷ್ಟಗೊಳಿಸುತ್ತದೆ ಎಂದರು.

ವಂಚಿತರು ಮತ್ತು ಬಡವರಿಗೆ ಸಹಾಯ ಮಾಡುವ ಅನೇಕ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಉಚಿತ ಪಡಿತರಕ್ಕಾಗಿ ಸರ್ಕಾರ 4 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಬಡವರ ವಸತಿಗಾಗಿ ಹಿಂದೆಂದೂ ಕಾಣದ 70 ಸಾವಿರ ಕೋಟಿ ರೂ. ಒದಗಿಸಲಾಗಿದೆ ಎಂದರು.

ಮಧ್ಯಮ ವರ್ಗದವರಿಗೆ ಅನುಕೂಲವಾಗುವ ಬಜೆಟ್ ಅವಕಾಶಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಆದಾಯ ತೆರಿಗೆಯಲ್ಲಿನ ತೆರಿಗೆ ಪ್ರಯೋಜನಗಳನ್ನು ವಿವರಿಸಿದರು. 7 ಲಕ್ಷ ರೂ.ವರೆಗಿನ ಆದಾಯದ ಮೇಲಿನ ಶೂನ್ಯ ಆದಾಯ ತೆರಿಗೆಯಿಂದಾಗಿ ಮಧ್ಯಮ ವರ್ಗದವರಲ್ಲಿ ಹೆಚ್ಚಿನ ಉತ್ಸಾಹ ಮೂಡಿದೆ. ವಿಶೇಷವಾಗಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು, ಹೊಸ ಉದ್ಯೋಗ, ಹೊಸ ವ್ಯಾಪಾರ ಹೊಂದಿರುವವರ ಖಾತೆಗೆ ಪ್ರತಿ ತಿಂಗಳು ಹೆಚ್ಚಿನ ಹಣ ಬರುತ್ತದೆ ಎಂದು ಅವರು ಹೇಳಿದರು. ಅದೇ ರೀತಿ, ಠೇವಣಿ ಮಿತಿಯನ್ನು 15 ಲಕ್ಷದಿಂದ 30 ಲಕ್ಷ ರೂ.ಗೆ ದ್ವಿಗುಣಗೊಳಿಸಿರುವುದು ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರಿಗೆ ಸಹಾಯ ಮಾಡುತ್ತದೆ. ರಜೆ ನಗದೀಕರಣದ ಮೇಲಿನ ತೆರಿಗೆ ರಿಯಾಯಿತಿಯು ಈ ಹಿಂದೆ ಇದ್ದ 3 ಲಕ್ಷಕ್ಕೆ ಹೋಲಿಸಿದರೆ ಈಗ 25 ಲಕ್ಷ ರೂ.ವರೆಗೆ ಇದೆ ಎಂದು ಅವರು ಹೇಳಿದರು.

ಮಹಿಳೆಯರ ಆರ್ಥಿಕ ಒಳಗೊಳ್ಳುವಿಕೆಯ ಪ್ರಾಮುಖ್ಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮಹಿಳೆಯರ ಆರ್ಥಿಕ ಸೇರ್ಪಡೆಯು ಮನೆಗಳಲ್ಲಿ ಅವರ ಧ್ವನಿಯನ್ನು ಬಲಪಡಿಸುತ್ತದೆ ಮತ್ತು ಮನೆಯ ನಿರ್ಧಾರಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಈ ಬಜೆಟ್ನಲ್ಲಿ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು  ಬ್ಯಾಂಕ್ ಖಾತೆಗೆ ಹೆಚ್ಚಾಗಿ‌ ಸೇರಲು ನಾವು ದೊಡ್ಡ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಗಳನ್ನು ಪ್ರಾರಂಭಿಸಿದ್ದೇವೆ ಎಂದರು. ಸುಕನ್ಯಾ ಸಮೃದ್ಧಿ, ಮುದ್ರಾ, ಜನ್-ಧನ್ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಗಳ ನಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದೊಂದು ದೊಡ್ಡ ಉಪಕ್ರಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಡಿಜಿಟಲ್ ತಂತ್ರಜ್ಞಾನ ಅಥವಾ ಸಹಕಾರಿ ಸಂಸ್ಥೆಗಳನ್ನು ವಿಸ್ತರಿಸುವ ಮೂಲಕ ರೈತರಿಗೆ ಪ್ರತಿ ಹಂತದಲ್ಲೂ ನೆರವು ನೀಡುವುದರಿಂದ ಈ ಬಜೆಟ್ನ ಗರಿಷ್ಠ ಗಮನವು ಗ್ರಾಮೀಣ ಆರ್ಥಿಕತೆಯ ಮೇಲೆ ಇದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ರೈತರಿಗೆ, ಪಶುಪಾಲಕರಿಗೆ ಮತ್ತು ಮೀನುಗಾರರಿಗೆ ಅನುಕೂಲವಾಗಲಿದ್ದು, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕಬ್ಬು ಸಹಕಾರ ಸಂಘಗಳನ್ನು ಸ್ಥಾಪಿಸಲು ಸಹಾಯವಾಗುತ್ತದೆ ಎಂದು ಹೇಳಿದರು. ಅನೇಕ ಹೊಸ ಸಹಕಾರಿ ಸಂಘಗಳನ್ನು ಸಹ ರಚಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹಕ್ಕಾಗಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಇದರಿಂದ ಸಣ್ಣ ರೈತರೂ ಕೂಡ ತಮ್ಮ ಧಾನ್ಯಗಳನ್ನು ಸಂಗ್ರಹಿಸಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಸಹಜ ಕೃಷಿಯ ಮೂಲಕ ಸಣ್ಣ ರೈತರ ವೆಚ್ಚವನ್ನು ಕಡಿಮೆ ಮಾಡಲು ಸಾವಿರಾರು ಸಹಾಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಕರ್ನಾಟಕದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ, ಸಿರಿಧಾನ್ಯಗಳಿಗೆ ‘ಶ್ರೀ ಅನ್ನ’ಎಂಬ ಗುರುತನ್ನು ನೀಡಿದ ದೇಶವು  ಅದೇ ನಂಬಿಕೆಯನ್ನು ಮುಂದುವರಿಸುತ್ತಿದೆ ಎಂದು ಹೇಳಿದರು. ಈ ಬಾರಿಯ ಬಜೆಟ್ನಲ್ಲಿ ಸಿರಿಧಾನ್ಯ ಉತ್ಪಾದನೆಗೆ ಒತ್ತು ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ಕರ್ನಾಟಕದ ಸಣ್ಣ ರೈತರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಎ. ನಾರಾಯಣಸ್ವಾಮಿ ಮತ್ತು ಕರ್ನಾಟಕ ಸರ್ಕಾರದ ಸಚಿವರು ಉಪಸ್ಥಿತರಿದ್ದರು.

ಹಿನ್ನೆಲೆ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರಕ್ಕೆ ಮತ್ತೊಂದು ಹೆಜ್ಜೆಯಾಗಿ ತುಮಕೂರಿನ ಹೆಚ್ ಎ ಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಪ್ರಧಾನಿಯವರು ದೇಶಕ್ಕೆ ಸಮರ್ಪಿಸಿದರು. ಇದರ ಅಡಿಪಾಯವನ್ನು 2016 ರಲ್ಲಿ ಪ್ರಧಾನ ಮಂತ್ರಿಯವರು ನೆರವೇರಿಸಿದ್ದರು. ಇದು ಹೊಸ ಗ್ರೀನ್ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯಾಗಿದ್ದು, ಇದು ಹೆಲಿಕಾಪ್ಟರ್ಗಳನ್ನು ನಿರ್ಮಿಸುವ ಸಾಮರ್ಥ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವಾಗಿದೆ ಮತ್ತು ಆರಂಭದಲ್ಲಿ ಲಘು ಬಳಕೆಯ ಹೆಲಿಕಾಪ್ಟರ್ಗಳನ್ನು (ಎಲ್ ಯು ಹೆಚ್) ತಯಾರಿಸುತ್ತದೆ. ಎಲ್ ಯು ಹೆಚ್ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ವರ್ಗದ, ಒಂದು ಇಂಜಿನ್ ಹೊಂದಿರುವ ವಿವಿಧೋದ್ದೇಶ ಬಳಕೆಯ ಹೆಲಿಕಾಪ್ಟರ್ ಆಗಿದ್ದು, ಹೆಚ್ಚಿನ ಕುಶಲತೆಯ ವೈಶಿಷ್ಟ್ಯಗಳನ್ನು ಹೊಂದಿದೆ ಲಘು ಯುದ್ಧ ಹೆಲಿಕಾಪ್ಟರ್ಗಳು (ಎಲ್ ಸಿ ಹೆಚ್) ಮತ್ತು ಇಂಡಿಯನ್ ಮಲ್ಟಿರೋಲ್ ಹೆಲಿಕಾಪ್ಟರ್ (ಐ ಎಂ ಆರ್ ಹೆಚ್) ನಂತಹ ಇತರ ಹೆಲಿಕಾಪ್ಟರ್ಗಳನ್ನು ತಯಾರಿಸಲು ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲಾಗುವುದು. ಈ ಕಾರ್ಖಾನೆಯನ್ನು ಭವಿಷ್ಯದಲ್ಲಿ ಎಲ್ ಸಿ ಹೆಚ್, ಎಲ್ ಯು ಹೆಚ್, ಸುಧಾರಿತ ನಾಗರಿಕ ಲಘು ಹೆಲಿಕಾಪ್ಟರ್ (ಎ ಲ್ ಹೆಚ್) ಮತ್ತು ಐ ಎಂ ಆರ್ ಹೆಚ್ ನ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆಗೆ ಸಹ ಬಳಸಲಾಗುತ್ತದೆ. ಈ ಕಾರ್ಖಾನೆಯಿಂದ ನಾಗರಿಕ ಲಘು ಬಳಕೆಯ ಹೆಲಿಕಾಪ್ಟರ್ಗಳ ಸಂಭಾವ್ಯ ರಫ್ತುಗಳನ್ನು ಸಹ ಮಾಡಲಾಗುತ್ತದೆ. ಈ ಸೌಲಭ್ಯವು ಭಾರತಕ್ಕೆ ತನ್ನ ಸಂಪೂರ್ಣ ಹೆಲಿಕಾಪ್ಟರ್ಗಳ ಅಗತ್ಯವನ್ನು ಸ್ಥಳೀಯವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ ಮತ್ತು ಭಾರತದಲ್ಲಿ ಹೆಲಿಕಾಪ್ಟರ್ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಕ್ರಿಯಗೊಳಿಸುವ ಹೆಗ್ಗಳಿಕೆಯನ್ನು ಪಡೆಯುತ್ತದೆ. ಕಾರ್ಖಾನೆಯು ಇಂಡಸ್ಟ್ರಿ 4.0 ಮಾನದಂಡಗಳ ತಯಾರಿಕಾ ಸೌಲಭ್ಯಗಳನ್ನು ಹೊಂದಿದೆ. ಮುಂದಿನ 20 ವರ್ಷಗಳಲ್ಲಿ, ತುಮಕೂರು ಘಟಕದಿಂದ 3-15 ಟನ್ಗಳ ವರ್ಗದಲ್ಲಿ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್ಗಳನ್ನು ತಯಾರಿಸಲು ಹೆಚ್ ಎ ಎಲ್ ಯೋಜಿಸುತ್ತಿದೆ. ಇದರಿಂದ ಈ ಪ್ರದೇಶದಲ್ಲಿ ಸುಮಾರು 6000 ಜನರಿಗೆ ಉದ್ಯೋಗ ದೊರೆಯಲಿದೆ.

ತುಮಕೂರು ಕೈಗಾರಿಕಾ ಟೌನ್ಶಿಪ್ನ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ, ತುಮಕೂರಿನಲ್ಲಿ ಮೂರು ಹಂತಗಳಲ್ಲಿ 8,484 ಎಕರೆಗಳಲ್ಲಿರುವ ಕೈಗಾರಿಕಾ ಟೌನ್ಶಿಪ್ ಅಭಿವೃದ್ಧಿಯನ್ನು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ನ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಎರಡು ಜಲ ಜೀವನ್ ಮಿಷನ್ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. 430 ಕೋಟಿ ರೂ. ವೆಚ್ಚದಲ್ಲಿ ತಿಪಟೂರು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಾರಿಗೊಳಿಸಲಾಗುವುದು. ಚಿಕ್ಕನಾಯಕನಹಳ್ಳಿ ತಾಲೂಕಿನ 147 ಜನವಸತಿಗಳಿಗೆ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಯೋಜನೆಗಳು ಈ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಅನುಕೂಲ ಕಲ್ಪಿಸುತ್ತವೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
e-Jagriti: Reimagining consumer justice for a Digital India

Media Coverage

e-Jagriti: Reimagining consumer justice for a Digital India
NM on the go

Nm on the go

Always be the first to hear from the PM. Get the App Now!
...
Prime Minister greets President of the United States on the 250th anniversary of the United States' independence
July 04, 2026

The Prime Minister, Shri Narendra Modi, extended greetings to the President of the United States, Mr. Donald J. Trump, and the people of the United States on the historic occasion of the 250th anniversary of the country's independence. Shri Modi underscored the enduring strength of the India–United States partnership. He noted that the relationship between the two democracies extends beyond a strategic partnership and is anchored in shared values of democracy, the rule of law and faith in the limitless potential of their people.

The Prime Minister posted on X:

On behalf of 1.4 billion Indians, I extend my warmest congratulations to President Trump and the people of the United States on the historic 250th anniversary of your Independence.

India and the United States share more than a strategic partnership. Our shared belief in democracy, rule of law and the limitless potential of our people make our friendship a force for global good.

May the next 250 years bring even greater prosperity, peace and progress for America and take the India-US partnership to new heights.

@POTUS
@realDonaldTrump