ಭಾರತೀಯ ಕಂದಾಯ ಸೇವೆಯ (ಕಸ್ಟಮ್ ಮತ್ತು ಪರೋಕ್ಷ ತೆರಿಗೆಗಳು) 74 ಮತ್ತು 75 ನೇ ಬ್ಯಾಚ್ ಹಾಗು ಭೂತಾನ್ ನ ರಾಯಲ್ ಸಿವಿಲ್ ಸರ್ವಿಸ್ ನ ತರಬೇತಿ ಪಡೆಯುತ್ತಿರುವ ಅಧಿಕಾರಿಗಳೊಂದಿಗೆ ಸಂವಾದ
"ದೇಶಕ್ಕೆ ಆಧುನಿಕ ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಎನ್ಎಸಿಐಎನ್ ನ ಕಾರ್ಯ"
" ಉತ್ತಮ ಆಡಳಿತದ ದೊಡ್ಡ ಸಂಕೇತ ಶ್ರೀ ರಾಮ, ಆತ ಎನ್ಎಸಿಐಎನ್ ಗೆ ಕೂಡಾ ದೊಡ್ಡ ಪ್ರೇರಣೆಯಾಗಬಲ್ಲರು "
"ನಾವು ದೇಶಕ್ಕೆ ಜಿಎಸ್ಟಿ ರೂಪದಲ್ಲಿ ಆಧುನಿಕ ವ್ಯವಸ್ಥೆಯನ್ನು ನೀಡಿದ್ದೇವೆ ಮತ್ತು ಆದಾಯ ತೆರಿಗೆಯನ್ನು ಸರಳೀಕರಿಸಿದ್ದೇವೆ ಹಾಗು ಮುಖರಹಿತ ಮೌಲ್ಯಮಾಪನವನ್ನು ಪರಿಚಯಿಸಿದ್ದೇವೆ. ಈ ಎಲ್ಲಾ ಸುಧಾರಣೆಗಳು ದಾಖಲೆಯ ತೆರಿಗೆ ಸಂಗ್ರಹಕ್ಕೆ ಕಾರಣವಾಗಿವೆ".
"ನಾವು ಜನರಿಂದ ಏನನ್ನು ತೆಗೆದುಕೊಂಡಿದ್ದೇವೆಯೋ ಅದನ್ನು ನಾವು ಅವರಿಗೆ ಹಿಂದಿರುಗಿಸಿದ್ದೇವೆ ಮತ್ತು ಇದು ಉತ್ತಮ ಆಡಳಿತ ಮತ್ತು ರಾಮರಾಜ್ಯದ ಸಂದೇಶ"
"ಭ್ರಷ್ಟಾಚಾರದ ವಿರುದ್ಧ ಹೋರಾಟ, ಭ್ರಷ್ಟರ ವಿರುದ್ಧ ಕ್ರಮ ಸರ್ಕಾರದ ಆದ್ಯತೆಯಾಗಿದೆ"
"ಈ ದೇಶದ ಬಡವರಿಗೆ ಸಂಪನ್ಮೂಲಗಳನ್ನು ನೀಡಿದರೆ, ಅವರು ಬಡತನವನ್ನು ಸೋಲಿಸುವ ಶಕ್ತಿಯನ್ನು ಹೊಂದಿದ್ದಾರೆ"
ಈಗಿನ ಸರ್ಕಾರದ ಪ್ರಯತ್ನಗಳಿಂದ ಕಳೆದ 9 ವರ್ಷಗಳಲ್ಲಿ ಸುಮಾರು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಪಾಲಸಮುದ್ರಂನಲ್ಲಿ ರಾಷ್ಟ್ರೀಯ ಕಸ್ಟಮ್ಸ್, ಪರೋಕ್ಷ ತೆರಿಗೆ ಮತ್ತು ಮಾದಕವಸ್ತುಗಳ ಅಕಾಡೆಮಿಯ ಹೊಸ ಕ್ಯಾಂಪಸ್ಸನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ  ವಸ್ತುಪ್ರದರ್ಶನವನ್ನೂ  ಅವರು ವೀಕ್ಷಿಸಿದರು. ಪ್ರಧಾನಮಂತ್ರಿಯವರು ಭಾರತೀಯ ಕಂದಾಯ ಸೇವೆಯ (ಕಸ್ಟಮ್ ಮತ್ತು ಪರೋಕ್ಷ ತೆರಿಗೆ) 74 ಮತ್ತು 75ನೇ ಬ್ಯಾಚ್ ಗಳ ತರಬೇತಿ ನಿರತ ಅಧಿಕಾರಿಗಳು ಮತ್ತು ಭೂತಾನ್ ನ ರಾಯಲ್ ಸಿವಿಲ್ ಸರ್ವಿಸ್ ನ ತರಬೇತಿ ನಿರತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪಾಲಸಮುದ್ರಂನಲ್ಲಿ ಕಸ್ಟಮ್ಸ್, ಪರೋಕ್ಷ ತೆರಿಗೆ ಮತ್ತು ಮಾದಕವಸ್ತುಗಳ ರಾಷ್ಟ್ರೀಯ ಅಕಾಡೆಮಿಯ ಉದ್ಘಾಟನೆಗಾಗಿ  ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಪಾಲಸಮುದ್ರಂ ಪ್ರದೇಶದ ವಿಶೇಷತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ಆಧ್ಯಾತ್ಮಿಕತೆ, ರಾಷ್ಟ್ರ ನಿರ್ಮಾಣ ಮತ್ತು ಉತ್ತಮ ಆಡಳಿತದೊಂದಿಗೆ ಸಂಬಂಧ ಹೊಂದಿದೆ ಮತ್ತು ಭಾರತದ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದರು. ಪುಟ್ಟಪರ್ತಿಯಲ್ಲಿ ಶ್ರೀ ಸತ್ಯ ಸಾಯಿಬಾಬಾ ಅವರ ಜನ್ಮಸ್ಥಳವಿರುವುದನ್ನು ಪ್ರಸ್ತಾಪಿಸಿದ ಅವರು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಪದ್ಮಶ್ರೀ ಕಲ್ಲೂರು ಸುಬ್ಬರಾವ್, ಪ್ರಸಿದ್ಧ ಬೊಂಬೆಯಾಟ ಕಲಾವಿದ ದಳವಾಯಿ ಚಲಪತಿ ರಾವ್ ಅವರನ್ನು ಉಲ್ಲೇಖಿಸಿದರು. ಭವ್ಯವಾದ ವಿಜಯನಗರ ಸಾಮ್ರಾಜ್ಯದ ಉತ್ತಮ ಆಡಳಿತ ಈ ಪ್ರದೇಶದಿಂದ ಲಭಿಸಿದ ಸ್ಫೂರ್ತಿಯ ಮೂಲ ಎಂದು ಅವರು ಹೇಳಿದರು. ಎನ್ಎಸಿಐಎನ್ ನ ಹೊಸ ಕ್ಯಾಂಪಸ್ ಉತ್ತಮ ಆಡಳಿತದ ಹೊಸ ಆಯಾಮಗಳನ್ನು ಸೃಷ್ಟಿಸುತ್ತದೆ ಮತ್ತು ರಾಷ್ಟ್ರದಲ್ಲಿ ವ್ಯಾಪಾರ ಹಾಗು ಉದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

 

ಇಂದು ತಿರುವಳ್ಳುವರ್ ದಿನವಾಗಿರುವುದನ್ನು  ಪ್ರಸ್ತಾಪಿಸಿದ  ಪ್ರಧಾನಮಂತ್ರಿಯವರು, ಶ್ರೇಷ್ಠ ತಮಿಳು ಋಷಿಯನ್ನು ಉಲ್ಲೇಖಿಸಿದರು ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ಕಲ್ಯಾಣಕ್ಕೆ ಕಾರಣವಾಗುವ ತೆರಿಗೆಗಳನ್ನು ಸಂಗ್ರಹಿಸುವಲ್ಲಿ ಕಂದಾಯ ಅಧಿಕಾರಿಗಳ ಪಾತ್ರವನ್ನು ಒತ್ತಿ ಹೇಳಿದರು. 

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಲೇಪಾಕ್ಷಿಯ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿ ರಂಗನಾಥ ರಾಮಾಯಣದ ಶ್ಲೋಕಗಳನ್ನು ಆಲಿಸಿದರು. ಪ್ರಧಾನಮಂತ್ರಿಯವರು ಭಕ್ತರೊಂದಿಗೆ ಭಜನಾ ಕೀರ್ತನೆಯಲ್ಲಿ ಪಾಲ್ಗೊಂಡರು. ರಾಮ ಜಟಾಯು ಸಂವಾದ  ಹತ್ತಿರದಲ್ಲೇ ನಡೆಯಿತು ಎಂಬ ನಂಬಿಕೆಯನ್ನು ಉಲ್ಲೇಖಿಸಿದ ಪ್ರಧಾನಿ, ಅಯೋಧ್ಯೆ ಧಾಮದ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಮುಂಚಿತವಾಗಿ 11 ದಿನಗಳ ವಿಶೇಷ ಅನುಷ್ಟಾನಕ್ಕೆ ಕೈಗೊಂಡಿರುವುದಾಗಿಯೂ  ತಿಳಿಸಿದರು. ಈ ಪವಿತ್ರ ಅವಧಿಯಲ್ಲಿ ದೇವಾಲಯದಲ್ಲಿ ಆಶೀರ್ವಾದ ಲಭಿಸಿದ್ದಕ್ಕಾಗಿ  ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ದೇಶದಲ್ಲಿ ರಾಮ ಭಕ್ತಿಯ ವಾತಾವರಣ ವ್ಯಾಪಿಸುತ್ತಿರುವುದನ್ನು ಗಮನಿಸಿರುವುದಾಗಿ  ಹೇಳಿದ  ಪ್ರಧಾನಮಂತ್ರಿಯವರು, ಶ್ರೀ ರಾಮನ ಪ್ರೇರಣೆ ಭಕ್ತಿಯಿಂದಾಚೆಗೆ  ವ್ಯಾಪಿಸುತ್ತಿದೆ ಎಂದರು. ಶ್ರೀ ರಾಮ ಉತ್ತಮ ಆಡಳಿತದ ಮಹಾನ್ ಸಂಕೇತವಾಗಿದ್ದು, ಆತ ಎನ್ಎಸಿಐಎನ್ ಗೆ ಕೂಡಾ  ದೊಡ್ಡ ಸ್ಫೂರ್ತಿಯಾಗಬಹುದು ಎಂದೂ ಅವರು ನುಡಿದರು.  

ಮಹಾತ್ಮಾ ಗಾಂಧಿಯವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಾಮರಾಜ್ಯದ ಚಿಂತನೆಯೇ ನಿಜವಾದ ಪ್ರಜಾಪ್ರಭುತ್ವದ ಹಿಂದಿರುವ ಕಲ್ಪನೆಯಾಗಿದೆ ಎಂದರು. ರಾಮರಾಜ್ಯ ಸಿದ್ಧಾಂತವನ್ನು ಬೆಂಬಲಿಸಲು ಮಹಾತ್ಮ ಗಾಂಧಿಯವರ ಜೀವನ ಅನುಭವವೇ ಕಾರಣ ಎಂದು ಅವರು ಎತ್ತಿ ತೋರಿಸಿದರು ಮತ್ತು ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಕೇಳುವ ಮತ್ತು ಪ್ರತಿಯೊಬ್ಬರೂ  ಅವರ ಗೌರವವನ್ನು ಪಡೆಯುವ ರಾಷ್ಟ್ರದ ಬಗ್ಗೆ ಪ್ರಧಾನ ಮಂತ್ರಿ ಮಾತನಾಡಿದರು. ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು "ಇದು ರಾಮರಾಜ್ಯದ ನಾಗರಿಕರ ಬಗ್ಗೆ ಹೇಳುತ್ತದೆ " ಎಂದರು.  "ರಾಮರಾಜ್ಯ ವಾಸಿ (ನಾಗರಿಕ), ನಿಮ್ಮ ತಲೆಯನ್ನು ಮೇಲಕ್ಕೆತ್ತಿ ನ್ಯಾಯಕ್ಕಾಗಿ ಹೋರಾಡಿ, ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ, ದುರ್ಬಲರನ್ನು ರಕ್ಷಿಸಿ, ಧರ್ಮವನ್ನು ಅತ್ಯುನ್ನತ ಮಟ್ಟದಲ್ಲಿಡಿ, ನೀವು ರಾಮರಾಜ್ಯ ವಾಸಿಗಳು" ಎಂದವರು ಹೇಳಿದರು. ರಾಮರಾಜ್ಯವನ್ನು ಪ್ರತಿಯೊಬ್ಬರೂ ತಲೆ ಎತ್ತಿ ಮತ್ತು ಘನತೆಯಿಂದ ನಡೆಯಬಹುದಾದಂತಹ, ಪ್ರತಿಯೊಬ್ಬ ನಾಗರಿಕನನ್ನು ಸಮಾನವಾಗಿ ಪರಿಗಣಿಸಲಾಗುವ, ದೀನದಲಿತರನ್ನು ರಕ್ಷಿಸುವ  ಮತ್ತು ಧರ್ಮಕ್ಕೆ ಅತ್ಯುನ್ನತ ಪ್ರಾಮುಖ್ಯತೆ ಇರುವ ನಾಲ್ಕು ಕಂಭಗಳ ಮೇಲೆ ಸ್ಥಾಪಿಸಬಹುದು ಎಂದು ಅವರು ಒತ್ತಿ ಹೇಳಿದರು. "21 ನೇ ಶತಮಾನದಲ್ಲಿ, ಈ ಆಧುನಿಕ ಸಂಸ್ಥೆಗಳ ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೊಳಿಸುವ ಆಡಳಿತಗಾರರಾಗಿ, ನೀವು ಈ ನಾಲ್ಕು ಗುರಿಗಳ ಮೇಲೆ ಗಮನ ಹರಿಸಬೇಕು ಮತ್ತು ಅವುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು" ಎಂದು ಪ್ರಧಾನಿ ಹೇಳಿದರು.

ರಾಮರಾಜ್ಯದ ತೆರಿಗೆ ವ್ಯವಸ್ಥೆಯ ಬಗ್ಗೆ ಸ್ವಾಮಿ ತುಳಸೀದಾಸ್ ಅವರ ವಿವರಣೆಯನ್ನೂ ಪ್ರಧಾನಿ ಉಲ್ಲೇಖಿಸಿದರು. ರಾಮಚರಿತ ಮಾನಸವನ್ನು ಪ್ರಸ್ತಾಪಿಸಿದ  ಪ್ರಧಾನಮಂತ್ರಿಯವರು, ತೆರಿಗೆಯ ಕಲ್ಯಾಣದ ಅಂಶವನ್ನು ಎತ್ತಿ ತೋರಿಸಿದರು ಮತ್ತು ಜನರಿಂದ ಪಡೆದ ತೆರಿಗೆಯ ಪ್ರತಿ ಪೈಸೆಯೂ ಸಮೃದ್ಧಿಯನ್ನು ಉತ್ತೇಜಿಸಲು ಜನರ ಕಲ್ಯಾಣಕ್ಕೆ ಹೋಗುತ್ತದೆ ಎಂದು ಹೇಳಿದರು. ಇದನ್ನು ಮತ್ತಷ್ಟು ವಿವರಿಸಿದ ಪ್ರಧಾನ ಮಂತ್ರಿ ಶ್ರೀ  ಮೋದಿ, ಕಳೆದ 10 ವರ್ಷಗಳಲ್ಲಿ ತೆರಿಗೆ ಸುಧಾರಣೆಗಳ ಬಗ್ಗೆಯೂ  ಮಾತನಾಡಿದರು. ಹಿಂದಿನ ಕಾಲದ ಅನೇಕ, ಪಾರದರ್ಶಕವಲ್ಲದ ತೆರಿಗೆ ವ್ಯವಸ್ಥೆಗಳನ್ನು ಅವರು ನೆನಪಿಸಿಕೊಂಡರು. "ನಾವು ದೇಶಕ್ಕೆ ಜಿಎಸ್ಟಿ ರೂಪದಲ್ಲಿ ಆಧುನಿಕ ವ್ಯವಸ್ಥೆಯನ್ನು ನೀಡಿದ್ದೇವೆ ಮತ್ತು ಆದಾಯ ತೆರಿಗೆಯನ್ನು ಸರಳೀಕರಿಸಿದ್ದೇವೆ ಮತ್ತು ಮುಖರಹಿತ ಮೌಲ್ಯಮಾಪನವನ್ನು ಪರಿಚಯಿಸಿದ್ದೇವೆ. ಈ ಎಲ್ಲ ಸುಧಾರಣೆಗಳು ದಾಖಲೆಯ ತೆರಿಗೆ ಸಂಗ್ರಹಕ್ಕೆ ಕಾರಣವಾಗಿವೆ", ಎಂದು ಪ್ರಧಾನಿ ಹೇಳಿದರು. 'ನಾವು ವಿವಿಧ ಯೋಜನೆಗಳ ಮೂಲಕ ಜನರ ಹಣವನ್ನು ಹಿಂದಿರುಗಿಸುತ್ತಿದ್ದೇವೆ' ಎಂದು ಅವರು ಹೇಳಿದರು. ಐಟಿ ವಿನಾಯಿತಿ ಮಿತಿಯನ್ನು 2 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2014 ರ ನಂತರದ ತೆರಿಗೆ ಸುಧಾರಣೆಗಳು ನಾಗರಿಕರಿಗೆ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಉಳಿತಾಯಕ್ಕೆ ಕಾರಣವಾಗಿವೆ. ದೇಶದಲ್ಲಿ ತೆರಿಗೆದಾರರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಏಕೆಂದರೆ ಅವರ ತೆರಿಗೆ ಹಣವನ್ನು ಉತ್ತಮ ಕೆಲಸಕ್ಕೆ  ಬಳಸಲಾಗುತ್ತಿರುವ ಬಗ್ಗೆ  ಅವರಿಗೆ  ಸಂತೋಷವಿದೆ ಎಂದು ಅವರು ಹೇಳಿದರು. "ನಾವು ಜನರಿಂದ ಏನನ್ನು ತೆಗೆದುಕೊಂಡಿದ್ದೇವೆಯೋ ಅದನ್ನು ಜನರಿಗೆ ಹಿಂದಿರುಗಿಸಿದ್ದೇವೆ ಮತ್ತು ಇದು ಉತ್ತಮ ಆಡಳಿತ ಮತ್ತು ರಾಮರಾಜ್ಯದ ಸಂದೇಶವಾಗಿದೆ" ಎಂದು ಅವರು ಹೇಳಿದರು.

 

ರಾಮರಾಜ್ಯದಲ್ಲಿ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ರಾಷ್ಟ್ರಕ್ಕೆ ಭಾರಿ ನಷ್ಟವನ್ನುಂಟುಮಾಡುವ ಯೋಜನೆಗಳನ್ನು ಸ್ಥಗಿತಗೊಳಿಸಿ, ವಿಳಂಬಗೊಳಿಸಿ ಮತ್ತು ಬೇರೆಡೆಗೆ ತಿರುಗಿಸುವ  ಮೂಲಕ ರಾಷ್ಟ್ರಕ್ಕೆ ಭಾರೀ ಪ್ರಮಾಣದ ನಷ್ಟವನ್ನುಂಟುಮಾಡುತ್ತಿದ್ದ ಹಿಂದಿನ ಸರ್ಕಾರದ ಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ, ಅಂತಹ ಪ್ರವೃತ್ತಿಗಳ ವಿರುದ್ಧ ಎಚ್ಚರಿಕೆ ನೀಡುವ  ಭಗವಾನ್ ರಾಮನ ಮತ್ತು ಭರತನ ನಡುವಣ ಸಂಭಾಷಣೆಯ ಹೋಲಿಕೆಯನ್ನು ನೀಡಿದರು.  "ನೀವು ಕಡಿಮೆ ವೆಚ್ಚದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ ಎಂಬ ಬಗ್ಗೆ ನನಗೆ ದೃಢ ವಿಶ್ವಾಸವಿದೆ. ಮತ್ತು ಸಮಯವನ್ನು ವ್ಯರ್ಥ ಮಾಡದೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತೀರಿ ಎಂಬ ಬಗ್ಗೆಯೂ  ನನಗೆ ವಿಶ್ವಾಸವಿದೆ" ಎಂದು ಹೇಳಿದ  ಅವರು  ಕಳೆದ 10 ವರ್ಷಗಳಲ್ಲಿ, ಪ್ರಸ್ತುತ ಸರ್ಕಾರವು ವೆಚ್ಚವನ್ನು ಮನಸ್ಸಿನಲ್ಲಿಟ್ಟುಕೊಂಡಿದೆ ಮತ್ತು ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಒತ್ತು ನೀಡಿದೆ ಎಂದೂ  ಒತ್ತಿ ಹೇಳಿದರು.

ಗೋಸ್ವಾಮಿ ತುಳಸಿದಾಸ್ ಅವರನ್ನು ಮತ್ತೊಮ್ಮೆ ಉಲ್ಲೇಖಿಸಿದ ಪಿಎಂ ಮೋದಿ, ಬಡವರನ್ನು ಬೆಂಬಲಿಸುವ ಮತ್ತು ಅರ್ಹರಲ್ಲದವರನ್ನು ದೂರೀಕರಿಸುವ  ವ್ಯವಸ್ಥೆಯನ್ನು ರಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕಳೆದ 10 ವರ್ಷಗಳಲ್ಲಿ 10 ಕೋಟಿ ನಕಲಿ ಹೆಸರುಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು. "ಇಂದು, ಪ್ರತಿ ಪೈಸೆಯೂ ಅರ್ಹ ಫಲಾನುಭವಿಯ ಬ್ಯಾಂಕ್ ಖಾತೆಗೆ ತಲುಪುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ" ಎಂದು ಅವರು ಹೇಳಿದರು.

 

ಪ್ರಸ್ತುತ ಸರ್ಕಾರದ ಪ್ರಯತ್ನಗಳಿಂದ ಕಳೆದ 9 ವರ್ಷಗಳಲ್ಲಿ ಸುಮಾರು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ನೀತಿ ಆಯೋಗ ನಿನ್ನೆ ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಬಗ್ಗೆ ರಾಷ್ಟ್ರಕ್ಕೆ ಮಾಹಿತಿ ನೀಡಿದ ಪ್ರಧಾನಿ ಮೋದಿ, ಈ ನಂಬಿಕೆಯ ಸಕಾರಾತ್ಮಕ ಫಲಿತಾಂಶಗಳನ್ನು ರಾಷ್ಟ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಲ್ಲಿ ಕಾಣಬಹುದು ಎಂದು ಒತ್ತಿ ಹೇಳಿದರು. ಇದನ್ನು ಐತಿಹಾಸಿಕ ಮತ್ತು ಅಭೂತಪೂರ್ವ ಸಾಧನೆ ಎಂದು ಬಣ್ಣಿಸಿದ ಪ್ರಧಾನಿ, ವಿಶೇಷವಾಗಿ ದಶಕಗಳಿಂದ ಬಡತನ ನಿರ್ಮೂಲನೆಗಾಗಿ ಘೋಷಣೆಗಳನ್ನು ಹಾಕುತ್ತಿರುವ  ರಾಷ್ಟ್ರದಲ್ಲಿ, 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈ ಸರಕಾರ ಬಡವರ ಕಲ್ಯಾಣಕ್ಕಾಗಿ ನೀಡಿದ  ಆದ್ಯತೆಯ ಫಲಿತಾಂಶ ಇದಾಗಿದೆ ಎಂದು ಹೇಳಿದರು. ಈ ದೇಶದ ಬಡವರಿಗೆ ಸಾಧನಗಳು ಮತ್ತು ಸಂಪನ್ಮೂಲಗಳನ್ನು ನೀಡಿದರೆ ಬಡತನವನ್ನು ಸೋಲಿಸುವ ಸಾಮರ್ಥ್ಯವಿದೆ ಎಂಬ ನಂಬಿಕೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. "ಇದು ಇಂದು ವಾಸ್ತವವಾಗುತ್ತಿರುವುದನ್ನು ನಾವು ನೋಡಬಹುದು" ಎಂದು ಅವರು ಹೇಳಿದರು. ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಸರ್ಕಾರ ಹಣ ಖರ್ಚು ಮಾಡಿದೆ ಮತ್ತು ಬಡವರಿಗೆ ಸೌಲಭ್ಯಗಳನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು. "ಬಡವರ ಸಾಮರ್ಥ್ಯವನ್ನು ಬಲಪಡಿಸಿದಾಗ ಮತ್ತು ಸೌಲಭ್ಯಗಳನ್ನು ಒದಗಿಸಿದಾಗ, ಅವರು ಬಡತನದಿಂದ ಹೊರಬರಲು ಪ್ರಾರಂಭಿಸಿದರು" ಎಂದು ಅವರು ಹೇಳಿದರು, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ ಮೊದಲು ಇದು ಮತ್ತೊಂದು ಒಳ್ಳೆಯ ಸುದ್ದಿ ಎಂದೂ ಅವರು ನುಡಿದರು. "ಭಾರತದಲ್ಲಿ ಬಡತನವನ್ನು ಕಡಿಮೆ ಮಾಡಬಹುದು, ಇದು ಪ್ರತಿಯೊಬ್ಬರಲ್ಲೂ ಹೊಸ ನಂಬಿಕೆಯನ್ನು ತುಂಬುತ್ತದೆ ಮತ್ತು ದೇಶದ ವಿಶ್ವಾಸವನ್ನು ಹೆಚ್ಚಿಸುತ್ತದೆ" ಎಂದು ಅವರು ಹೇಳಿದರು. ನವ-ಮಧ್ಯಮ ವರ್ಗದ ಹೆಚ್ಚಳ  ಮತ್ತು ಮಧ್ಯಮ ವರ್ಗದ ಪ್ರಸರಣವು ಬಡತನದ ಇಳಿಕೆಗೆ ಕಾರಣವಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ  ಮೋದಿ ಹೇಳಿದರು. ಆರ್ಥಿಕತೆಯ ಜಗತ್ತಿನಲ್ಲಿ ಜನರು ನವ-ಮಧ್ಯಮ ವರ್ಗದ ಬೆಳವಣಿಗೆಯ ಸಾಮರ್ಥ್ಯವನ್ನು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅವರ ಕೊಡುಗೆಯನ್ನು ಅರಿತುಕೊಂಡಿದ್ದಾರೆ ಎಂದರು. "ಅಂತಹ ಪರಿಸ್ಥಿತಿಯಲ್ಲಿ, ಎನ್ಎಸಿಐಎನ್ ತನ್ನ ಜವಾಬ್ದಾರಿಯನ್ನು ಹೆಚ್ಚು ಗಂಭೀರತೆಯಿಂದ ಪೂರೈಸಬೇಕು ಎಂದೂ ಅವರು ನುಡಿದರು.

ಕೆಂಪು ಕೋಟೆಯ ಕೊತ್ತಲಗಳಿಂದ ತಮ್ಮ ಸಬ್ಕಾ ಪ್ರಯಾಸ್ ಕರೆಯನ್ನು ಭಗವಾನ್ ರಾಮನ ಜೀವನದೊಂದಿಗೆ ವಿವರಿಸುವ ಮೂಲಕ ಪಿಎಂ ಮೋದಿ ಅದನ್ನು ಮತ್ತಷ್ಟು ವಿವರಿಸಿದರು. ರಾವಣನ ವಿರುದ್ಧದ ಹೋರಾಟದಲ್ಲಿ ಶ್ರೀ ರಾಮನು ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಬಳಸಿದ್ದನ್ನು ಮತ್ತು ಅವುಗಳನ್ನು ಬೃಹತ್ ಶಕ್ತಿಯಾಗಿ ಪರಿವರ್ತಿಸಿದ್ದನ್ನು ಅವರು ನೆನಪಿಸಿಕೊಂಡರು. ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳುವಂತೆ ಅಧಿಕಾರಿಗಳಿಗೆ ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು ಮತ್ತು ದೇಶದ ಆದಾಯ ಹಾಗು  ಹೂಡಿಕೆಯನ್ನು ಹೆಚ್ಚಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸಾಮೂಹಿಕ ಪ್ರಯತ್ನಗಳನ್ನು ಕೈಗೊಳ್ಳುವಂತೆ  ಕರೆ ನೀಡಿದರು.

 

ಆಂಧ್ರಪ್ರದೇಶದ ರಾಜ್ಯಪಾಲ ಶ್ರೀ ಎಸ್.ಅಬ್ದುಲ್ ನಜೀರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷ ಶ್ರೀ ಸಂಜಯ್ ಕುಮಾರ್ ಅಗರ್ವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ನಾಗರಿಕ ಸೇವಾ ಸಾಮರ್ಥ್ಯ ವರ್ಧನೆಯ ಮೂಲಕ ಆಡಳಿತವನ್ನು ಸುಧಾರಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಒಂದು ಹೆಜ್ಜೆಯಾಗಿ, ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಪಾಲಸಮುದ್ರಂನಲ್ಲಿ ರಾಷ್ಟ್ರೀಯ ಕಸ್ಟಮ್ಸ್, ಪರೋಕ್ಷ ತೆರಿಗೆ ಮತ್ತು ಮಾದಕವಸ್ತುಗಳ ಅಕಾಡೆಮಿಯ (ಎನ್ಎಸಿಐಎನ್) ಹೊಸ ಅತ್ಯಾಧುನಿಕ ಕ್ಯಾಂಪಸ್ಸನ್ನು ಪರಿಕಲ್ಪನೆ ಮಾಡಿ ನಿರ್ಮಿಸಲಾಗಿದೆ. 500 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಅಕಾಡೆಮಿಯು ಪರೋಕ್ಷ ತೆರಿಗೆ (ಕಸ್ಟಮ್ಸ್, ಕೇಂದ್ರ ಅಬಕಾರಿ ಮತ್ತು ಸರಕು ಮತ್ತು ಸೇವಾ ತೆರಿಗೆ) ಮತ್ತು ಮಾದಕವಸ್ತು ನಿಯಂತ್ರಣ ಆಡಳಿತ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಗಾಗಿ ಭಾರತ ಸರ್ಕಾರದ ಅತ್ಯುನ್ನತ ಸಂಸ್ಥೆಯಾಗಿದೆ. ರಾಷ್ಟ್ರಮಟ್ಟದ ವಿಶ್ವ ದರ್ಜೆಯ ತರಬೇತಿ ಸಂಸ್ಥೆಯು ಭಾರತೀಯ ಕಂದಾಯ ಸೇವೆ (ಕಸ್ಟಮ್ ಮತ್ತು ಪರೋಕ್ಷ ತೆರಿಗೆಗಳು) ಮತ್ತು ಕೇಂದ್ರ ಸಂಬಂಧಿತ ಸೇವೆಗಳು, ರಾಜ್ಯ ಸರ್ಕಾರಗಳು ಮತ್ತು ಪಾಲುದಾರ ರಾಷ್ಟ್ರಗಳ ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ.

ಈ ಹೊಸ ಕ್ಯಾಂಪಸ್ ಸೇರ್ಪಡೆಯೊಂದಿಗೆ, ಎನ್ಎಸಿಐಎನ್ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಗಾಗಿ ಆಗ್ಮೆಂಟೆಡ್ & ವರ್ಚುವಲ್ ರಿಯಾಲಿಟಿ, ಬ್ಲಾಕ್ಚೈನ್ ಜೊತೆಗೆ ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಂತಹ ಹೊಸ ಯುಗದ ತಂತ್ರಜ್ಞಾನಗಳ ಬಳಕೆಯ ಮೇಲೆ ಗಮನ ಹರಿಸುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Total Urea stocks currently at 61.14 LMT, up from 55.22 LMT in March 2025

Media Coverage

Total Urea stocks currently at 61.14 LMT, up from 55.22 LMT in March 2025
NM on the go

Nm on the go

Always be the first to hear from the PM. Get the App Now!
...
Prime Minister reflects on the immense power of devotion during Navratri
March 22, 2026

Prime Minister Shri Narendra Modi today shared his reflections on the spiritual significance of Navratri, emphasizing the profound energy and strength derived from devotion to the Mother Goddess.

The Prime Minister observed that there is immense power in the devotion to the Mother, noting that the worship of Devi Maa fills the hearts of devotees with positive energy. On this occasion, Shri Modi also shared a devotional hymn dedicated to the Goddess..

The Prime Minister wrote on X:
"माता की भक्ति में विराट शक्ति है। देवी मां की वंदना से श्रद्धालुओं का मन सकारात्मक ऊर्जा से भर जाता है।"