ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 250 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ
"ಸುಂದರ ನಗರವಾದ ಚೆನ್ನೈನಲ್ಲಿ ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ"
"2024 ನೇ ಸಾಲಿನ ನೂತನ ವರ್ಷವನ್ನು ಸ್ವಾಗತಿಸಲು ʻಖೇಲೋ ಇಂಡಿಯಾ ಗೇಮ್ಸ್ʼ ಅತ್ಯುತ್ತಮ ಮಾರ್ಗ"
"ಚಾಂಪಿಯನ್ ಗಳನ್ನು ಸೃಷ್ಟಿಸಿದ ಭೂಮಿ ತಮಿಳುನಾಡು"
"ಭಾರತವನ್ನು ಉನ್ನತ ಕ್ರೀಡಾ ರಾಷ್ಟ್ರವನ್ನಾಗಿ ಮಾಡಲು ಮೆಗಾ ಕ್ರೀಡಾಕೂಟಗಳನ್ನು ಆಯೋಜಿಸುವುದು ಅತ್ಯಂತ ಮುಖ್ಯವಾಗಿದೆ"
"ವೀರ ಮಂಗೈ ವೇಲು ನಾಚಿಯಾರ್ ಅವರು ಮಹಿಳಾ ಶಕ್ತಿಯ ಸಂಕೇತ. ಇಂದು ಅವರ ವ್ಯಕ್ತಿತ್ವವು ಸರ್ಕಾರದ ಅನೇಕ ನಿರ್ಧಾರಗಳಲ್ಲಿ ಪ್ರತಿಬಿಂಬಿತವಾಗಿದೆ"
"ಕಳೆದ 10 ವರ್ಷಗಳಲ್ಲಿ, ಸರ್ಕಾರವು ಸುಧಾರಣೆಗಳನ್ನು ತಂದಿದೆ, ಕ್ರೀಡಾಪಟುಗಳು ದಕ್ಷ ಪ್ರದರ್ಶನ ತೋರಿದ್ದಾರೆ ಮತ್ತು ಭಾರತದಲ್ಲಿ ಇಡೀ ಕ್ರೀಡಾ ವ್ಯವಸ್ಥೆ ಪರಿವರ್ತನೆ ಕಂಡಿದೆ"
"ಇಂದು, ನಾವು ಯುವಕರು ಕ್ರೀಡೆಯತ್ತ ಬರುವವರೆಗೂ ಕಾಯುತ್ತಿಲ್ಲ, ಕ್ರೀಡೆಯನ್ನೇ ನಾವು ಯುವಕರ ಬಳಿಗೆ ಕೊಂಡೊಯ್ಯುತ್ತಿದ್ದೇವೆ"
"ಇಂದು, ಶಾಲೆಗಳು ಮತ್ತು ಕಾಲೇಜುಗಳಲ್ಲಿನ ನಮ್ಮ ಯುವಕರಿಗೆ, ಕ್ರೀಡೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವರು ವೃತ್ತಿಜೀವನ ಬಯಸಿದ್ದಾದರೆ, ಅವರ ಉತ್ತಮ ಭವಿಷ್ಯಕ್ಕೂ ಮೋದಿಯವರ ಖಾತರಿ ಇದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಚೆನ್ನೈನಲ್ಲಿ ʻಖೇಲೋ ಇಂಡಿಯಾ ಯೂತ್ ಗೇಮ್ಸ್-2023ʼರ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶ್ರೀ ಮೋದಿ ಅವರು ಚಾಲನೆ ನೀಡಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರು ಸಾಕ್ಷಿಯಾದರು. ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ ಉದ್ಘಾಟನೆಯ ಸಂಕೇತವಾಗಿ ಇಬ್ಬರು ಕ್ರೀಡಾಪಟುಗಳು ನೀಡಿದ ಕ್ರೀಡಾ ಜ್ಯೋತಿಯನ್ನು ಅಗ್ಗಿಷ್ಟಿಕೆಯ ಮೇಲೆ ಇರಿಸುವ ಮೂಲಕ ಕ್ರೀಡಾಕೂಟಕ್ಕೆ ಪ್ರಧಾನಿ ಅಧಿಕೃತ ಚಾಲನೆ ನೀಡಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻ13ನೇ ಖೇಲೋ ಇಂಡಿಯಾ ಕ್ರೀಡಾಕೂಟʼಕ್ಕೆ ಎಲ್ಲರನ್ನೂ ಸ್ವಾಗತಿಸಿದರು ಮತ್ತು 2024ನೇ ವರ್ಷವನ್ನು ಪ್ರಾರಂಭಿಸಲು ಇದು ಉತ್ತಮ ಮಾರ್ಗವಾಗಿದೆ ಎಂದರು. ಈ ಸಂದರ್ಭದಲ್ಲಿ ನೆರೆದಿರುವ ಜನರು ಯುವ ಭಾರತವನ್ನು, ನವ ಭಾರತವನ್ನು ಪ್ರತಿನಿಧಿಸುತ್ತಾರೆ, ಅವರ ಶಕ್ತಿಯು ದೇಶವನ್ನು ಕ್ರೀಡಾ ಜಗತ್ತಿನಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಬಣ್ಣಿಸಿದರು. ದೇಶದ ನಾನಾ ಭಾಗಗಳಿಂದ ಚೆನ್ನೈಗೆ ಆಗಮಿಸಿದ ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೇಮಿಗಳಿಗೆ ಅವರು ಶುಭ ಕೋರಿದರು. "ಒಟ್ಟಾರೆಯಾಗಿ, ನೀವು ʻಏಕ ಭಾರತ-ಶ್ರೇಷ್ಠ ಭಾರತʼದ ನೈಜ ಸ್ಫೂರ್ತಿಯನ್ನು ಪ್ರದರ್ಶಿಸುತ್ತೀರಿ," ಎಂದು ಅವರು ಹೇಳಿದರು. ತಮಿಳುನಾಡಿನ ಸಹೃದಯವಂತ ಜನರು, ಸುಂದರವಾದ ತಮಿಳು ಭಾಷೆ, ಅಲ್ಲಿನ ಸಂಸ್ಕೃತಿ ಮತ್ತು ಪಾಕಪದ್ಧತಿ ಕ್ರೀಡಾಪಟುಗಳಿಗೆ ತಮ್ಮ ತವರಿನಲ್ಲೇ ಇರುವ ಭಾವನೆ ಮೂಡಿಸುತ್ತದೆ ಎಂದು ಹೇಳಿದರು. ತಮಿಳುನಾಡಿನ ಆತಿಥ್ಯವು ಎಲ್ಲರ ಹೃದಯಗಳನ್ನು ಗೆಲ್ಲುತ್ತದೆ ಮತ್ತು ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ ಕ್ರೀಡಾಕೂಟವು ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ಇಲ್ಲಿ ಮಾಡಿದ ಹೊಸ ಸ್ನೇಹವು ಜೀವಿತಾವಧಿಯುದ್ದಕ್ಕೂ ಉಳಿಯುತ್ತದೆ" ಎಂದು ಶ್ರೀ ಮೋದಿ ಹೇಳಿದರು.

 

ಇಂದು ಉದ್ಘಾಟಿಸಲಾದ ಮತ್ತು ಶಂಕುಸ್ಥಾಪನೆ ನೆರವೇರಿಸಲಾದ ದೂರದರ್ಶನ ಮತ್ತು ಆಕಾಶವಾಣಿ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 1975ರಲ್ಲಿ ಪ್ರಸಾರ ಆರಂಭಿಸಿದ ʻಚನ್ನೈ ಕೇಂದ್ರʼವು ಇಂದು ಹೊಸ ಪ್ರಯಾಣವನ್ನು ಆರಂಭಿಸುತ್ತಿದೆ ಎಂದರು. 

8 ರಾಜ್ಯಗಳಲ್ಲಿ ಆರಂಭಗೊಂಡ 12 ಆಕಾಶವಾಣಿ ʻಎಫ್ಎಂʼ ಯೋಜನೆಗಳು 1.5 ಕೋಟಿ ಜನರನ್ನು ತಲುಪಲಿವೆ ಎಂದರು.

ಭಾರತದಲ್ಲಿ ಕ್ರೀಡೆಗೆ ತಮಿಳುನಾಡಿನ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಿ, ಇದು ಚಾಂಪಿಯನ್ಗಳನ್ನು ಸೃಷ್ಟಿಸಿದ ಭೂಮಿ ಎಂದರು. ಟೆನಿಸ್ ಚಾಂಪಿಯನ್ ಅಮೃತ್ ರಾಜ್ ಸಹೋದರರು, ಒಲಿಂಪಿಕ್ಸ್ನಲ್ಲಿ ಭಾರತವನ್ನು ಚಿನ್ನದ ಪದಕಕ್ಕೆ ಮುನ್ನಡೆಸಿದ ಭಾರತದ ಹಾಕಿ ನಾಯಕ ಭಾಸ್ಕರನ್, ಚೆಸ್ ಆಟಗಾರರಾದ ವಿಶ್ವನಾಥನ್ ಆನಂದ್, ಪ್ರಗ್ನಾನಂದ ಹಾಗೂ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಮರಿಯಪ್ಪನ್ ಅವರನ್ನು ಪ್ರಧಾನಿ ಉಲ್ಲೇಖಿಸಿದರು. ಇಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳು ತಮಿಳುನಾಡಿನ ನೆಲದಿಂದ ಸ್ಫೂರ್ತಿ ಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕ್ರೀಡಾಪಟುಗಳಿಗೆ ಮಾನ್ಯತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅದಕ್ಕಾಗಿ ದೇಶದಲ್ಲಿ ದೊಡ್ಡ ಕ್ರೀಡಾಕೂಟಗಳನ್ನು ನಡೆಸುವ ಉಪಯುಕ್ತತೆಯನ್ನು ಒತ್ತಿ ಹೇಳಿದರು. ʻಖೇಲೋ ಇಂಡಿಯಾʼ ಅಭಿಯಾನವು ಈ ಮೆಗಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ತಳಮಟ್ಟದ ಪ್ರತಿಭೆಗಳನ್ನು ಹುಡುಕುವ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಹೇಳಿದರು. 12 ʻಖೇಲೋ ಇಂಡಿಯಾʼ ಕ್ರೀಡಾಕೂಟಗಳು, ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ, ʻಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ʼ, ʻಖೇಲೋ ಇಂಡಿಯಾ ವಿಂಟರ್ ಗೇಮ್ಸ್ʼ ಮತ್ತು ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼ ಆಡಲು ಮತ್ತು ಪ್ರತಿಭೆಗಳನ್ನು ಹುಡುಕಲು ಉತ್ತಮ ಅವಕಾಶಗಳಾಗಿವೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು. ಈಗ ತಮಿಳುನಾಡು, ಚೆನ್ನೈ, ತಿರುಚ್ಚಿ, ಮದುರೈ ಮತ್ತು ಕೊಯಮತ್ತೂರಿನ ನಾಲ್ಕು ಭವ್ಯ ನಗರಗಳು ಕ್ರೀಡಾಪಟುಗಳಿಗೆ ಆತಿಥ್ಯ ವಹಿಸಲು ಸಿದ್ಧವಾಗಿವೆ ಎಂದು ಅವರು ಮಾಹಿತಿ ನೀಡಿದರು. "ಅದು ಭಾಗವಹಿಸುವವರಾಗಿರಲಿ ಅಥವಾ ಪ್ರೇಕ್ಷಕರಾಗಿರಲಿ, ಚೆನ್ನೈನ ಆಕರ್ಷಕ ಕಡಲತೀರಗಳು ಎಲ್ಲರನ್ನೂಆಕರ್ಷಿಸುತ್ತವೆ," ಎಂದು ಪ್ರಧಾನಿ ಹೇಳಿದರು. ಮದುರೈನ ಭವ್ಯವಾದ ದೇವಾಲಯಗಳು, ತಿರುಚ್ಚಿಯ ದೇವಾಲಯಗಳು ಮತ್ತು ಅಲ್ಲಿನ ಕಲೆ ಮತ್ತು ಕರಕುಶಲತೆ ಹಾಗೂ ಶ್ರಮದಾಯಕ ಪಟ್ಟಣ ಕೊಯಮತ್ತೂರಿನ ಸೆಳೆತವನ್ನು ಉಲ್ಲೇಖಿಸಿದ ಪ್ರಧಾನಿ, ತಮಿಳುನಾಡಿನ ಪ್ರತಿಯೊಂದು ಪಟ್ಟಣಗಳಲ್ಲಿನ ಅನುಭವಗಳು ಮರೆಯಲಾಗಗದಂಥವು ಎಂದು ಹೇಳಿದರು.

 

ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನಲ್ಲಿ ಭಾರತದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ 5,000ಕ್ಕೂ ಹೆಚ್ಚು ಕ್ರೀಡಾಪಟುಗಳ ನಡುವಿನ ಸ್ಪರ್ಧೆಯ ವಾತಾವರಣವು ಅನುಭವಯೋಗ್ಯವಾದುದು," ಎಂದು ಹೇಳಿದ ಪ್ರಧಾನಿ, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಮತ್ತು ಸ್ಕ್ವಾಷ್ ಅನ್ನು ಮೊದಲ ಬಾರಿಗೆ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು. ತಮಿಳುನಾಡಿನಲ್ಲಿ ಜನ್ಮತಾಳಿದ ಸಮರ ಕಲೆಯಾದ ʻಸಿಲಂಬಮ್ʼ ಅನ್ನು ಇತರ ಕ್ರೀಡೆಗಳ ಜೊತೆಗೆ ಉಲ್ಲೇಖಿಸಿದರು. "ಎಲ್ಲಾ ಕ್ರೀಡಾಪಟುಗಳ ಸಂಕಲ್ಪ, ಬದ್ಧತೆ ಮತ್ತು ನಂಬಿಕೆಯನ್ನು ಖೇಲೋ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟವು ಒಟ್ಟುಗೂಡಿಸುತ್ತದೆ. ರಾಷ್ಟ್ರವು ಕ್ರೀಡಾಪಟುಗಳ ಸಮರ್ಪಣೆ, ಆತ್ಮವಿಶ್ವಾಸ, ಎಂದಿಗೂ ಅಳಿಯದ ಅವರ ಸ್ಫೂರ್ತಿ ಮತ್ತು ಅಸಾಧಾರಣ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ," ಎಂದು ಪ್ರಧಾನಿ ಹೇಳಿದರು.

ಸಂತ ತಿರುವಳ್ಳುವರ್ ಅವರನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸಂತ ತಿರುವಳ್ಳುವರ್ ಅವರು ತಮ್ಮ ಬರಹಗಳ ಮೂಲಕ ಯುವಕರಿಗೆ ಸ್ಫೂರ್ತಿ ನೀಡಿದರು ಮತ್ತು ಅವರಿಗೆ ಮಾರ್ಗದರ್ಶನ ನೀಡಿದರು ಎಂದರು. ಮಹಾನ್ ಸಂತನನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪ್ರತಿಕೂಲ ಪರಿಸ್ಥಿತಿಯಲ್ಲಿ ಬಲಶಾಲಿಯಾಗಿ ಉಳಿಯುವ ಅವರ ಬೋಧನೆಯನ್ನು ಉಲ್ಲೇಖಿಸಿದರು. ʻಖೇಲೋ ಇಂಡಿಯಾʼ ಲೋಗೋ ಕೂಡ ಅವರ ಚಿತ್ರವನ್ನು ಹೊಂದಿದೆ ಎಂದರು. ವೀರಮಂಗೈ ವೇಲು ನಾಚಿಯಾರ್ ಈ ಕ್ರೀಡಾಕೂಟದ ಲಾಂಛನವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, "ನಿಜ ಜೀವನದ ವ್ಯಕ್ತಿಯನ್ನು ಲಾಂಛನವಾಗಿ ಆಯ್ಕೆ ಮಾಡಿರುವುದು ಅಭೂತಪೂರ್ವವಾಗಿದೆ. ವೀರ ಮಂಗೈ ವೇಲು ನಾಚಿಯಾರ್ ಅವರು ಮಹಿಳಾ ಶಕ್ತಿಯ ಸಂಕೇತವಾಗಿದ್ದಾರೆ. ಇಂದು ಅವರ ವ್ಯಕ್ತಿತ್ವವು ಸರ್ಕಾರದ ಅನೇಕ ನಿರ್ಧಾರಗಳಲ್ಲಿ ಪ್ರತಿಬಿಂಬಿತವಾಗಿದೆ. ಅವರ ಸ್ಫೂರ್ತಿಯೊಂದಿಗೆ, ಸರ್ಕಾರವು ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. 20 ಕ್ರೀಡೆಗಳಲ್ಲಿ ಮಹಿಳಾ ಲೀಗ್ಗಳು ಮತ್ತು 'ದಸ್ ಕಾಸ್ ದಮ್' ನಂತಹ ಉಪಕ್ರಮಗಳು ಮಹಿಳಾ ಕ್ರೀಡಾಪಟುಗಳ ಕ್ರೀಡಾ ಪರಾಕ್ರಮವನ್ನು ಪ್ರದರ್ಶಿಸುವ ಅವಕಾಶಗಳಾಗಿವೆ ಎಂದು ಪ್ರಧಾನಿ ಹೇಳಿದರು.

2014ರ ನಂತರ ಕ್ರೀಡೆಗಳಲ್ಲಿ ಭಾರತದ ಇತ್ತೀಚಿನ ಯಶಸ್ಸಿನ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ, ʻಏಷ್ಯನ್ ಗೇಮ್ಸ್ʼ ಮತ್ತು ಪ್ಯಾರಾ ಗೇಮ್ಸ್ನಲ್ಲಿ ಐತಿಹಾಸಿಕ ಸಾಧನೆ ಹಾಗೂ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಪದಕಗಳ ಹೊಸ ದಾಖಲೆಯನ್ನು ಉಲ್ಲೇಖಿಸಿದರು. ಈ ಯಶಸ್ಸು ರಾತ್ರೋರಾತ್ರಿ ಬಂದಿದ್ದಲ್ಲ. ಕ್ರೀಡಾಪಟುಗಳು ಈ ಹಿಂದೆಯೂ ಭಾವೋದ್ಧೀಪ್ತರಾಗಿದ್ದರು ಎಂದು ಹೇಳಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ ಸರ್ಕಾರದಿಂದ ಅವರಿಗೆ ಎಲ್ಲಾ ರೀತಿಯ ಉತ್ತೇಜನ ಮತ್ತು ಬೆಂಬಲ ದೊರೆತಿದೆ ಎಂದರು. "ಕಳೆದ 10 ವರ್ಷಗಳಲ್ಲಿ, ಸರ್ಕಾರವು ಸುಧಾರಣೆಗಳನ್ನು ತಂದಿದೆ, ಕ್ರೀಡಾಪಟುಗಳು ದಕ್ಷ ಪ್ರದರ್ಶನ ತೋರಿದ್ದಾರೆ ಮತ್ತು ಭಾರತದಲ್ಲಿ ಇಡೀ ಕ್ರೀಡಾ ವ್ಯವಸ್ಥೆ ಪರಿವರ್ತನೆಗೊಂಡಿದೆ," ಎಂದು ಪ್ರಧಾನಿ ಹೇಳಿದರು. ದೇಶದ ಸಾವಿರಾರು ಕ್ರೀಡಾಪಟುಗಳಿಗೆ ಮಾಸಿಕ 50,000 ರೂ.ಗಳ ಬೆಂಬಲವನ್ನು ಒದಗಿಸುವ ʻಖೇಲೋ ಇಂಡಿಯಾʼ ಅಭಿಯಾನ ಮತ್ತು 2014ರಲ್ಲಿ ಪ್ರಾರಂಭಿಸಲಾದ ʻಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ʼ(ಟಾಪ್ಸ್) ಉಪಕ್ರಮವನ್ನು ಅವರು ಉಲ್ಲೇಖಿಸಿದರು. ಇದು ಉನ್ನತ ಕ್ರೀಡಾಪಟುಗಳಿಗೆ ತರಬೇತಿ, ಅಂತರರಾಷ್ಟ್ರೀಯ ಮಾನ್ಯತೆ ಮತ್ತು ದೊಡ್ಡ ಕ್ರೀಡಾಕೂಟಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. "ಈ ವರ್ಷ ನಡೆಯಲಿರುವ ʻಪ್ಯಾರಿಸ್ ಒಲಿಂಪಿಕ್ಸ್ʼ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲೆ ಭಾರತದ ಗುರಿ ಇರುವುದರಿಂದ, ಟಾಪ್ಸ್ ಉಪಕ್ರಮದ ಅಡಿಯಲ್ಲಿ ಕ್ರೀಡಾಪಟುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ," ಎಂದು ಅವರು ಹೇಳಿದರು.

 

"ಇಂದು, ನಾವು ಯುವಕರು ಕ್ರೀಡೆಯತ್ತ ಬರುವುದನ್ನು ಕಾಯುತ್ತಿಲ್ಲ, ಬದಲಿಗೆ ನಾವೇ ಕ್ರೀಡೆಯನ್ನು ಯುವಕರ ಬಳಿಗೆ ಕೊಂಡೊಯ್ಯುತ್ತಿದ್ದೇವೆ," ಎಂದು ಪ್ರಧಾನಿ ಹೇಳಿದರು. ʻಖೇಲೋ ಇಂಡಿಯಾʼದಂತಹ ಅಭಿಯಾನಗಳು ಗ್ರಾಮೀಣ, ಬಡ, ಬುಡಕಟ್ಟು ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ಯುವಕರ ಕನಸುಗಳನ್ನು ಸಾಕಾರಗೊಳಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು. ʻಲೋಕಲ್ ಫಾರ್ ವೋಕಲ್ʼ ಮಂತ್ರದ ಭಾಗವಾಗಿ ಸ್ಥಳೀಯ ಪ್ರತಿಭೆಗಳನ್ನು ಪ್ರದರ್ಶಿಸುವುದು ಸೇರಿದಂತೆ, ಸ್ಥಳೀಯ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡುವ ತಮ್ಮ ಪ್ರಯತ್ನಗಳನ್ನು ಪ್ರಧಾನಿ ಪುನರುಚ್ಚರಿಸಿದರು. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಅವರು ಗಮನಸೆಳೆದರು. ಡಿಯುನಲ್ಲಿ ಇತ್ತೀಚೆಗೆ ನಡೆದ ʻಬೀಚ್ ಕ್ರೀಡಾಕೂಟʼವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, 1600 ಕ್ರೀಡಾಪಟುಗಳು ಭಾಗವಹಿಸಿದ 8 ಸಾಂಪ್ರದಾಯಿಕ ಭಾರತೀಯ ಕ್ರೀಡೆಗಳನ್ನು ಒಳಗೊಂಡ ಈ ಕ್ರೀಡಾಕೂಟಗಳು ಕರಾವಳಿ ನಗರಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ, ಏಕೆಂದರೆ ಈ ಕ್ರೀಡೆಗಳು ʻಬೀಚ್ ಕ್ರೀಡೆʼ ಮತ್ತು ಕ್ರೀಡಾ ಪ್ರವಾಸೋದ್ಯಮದ ಹೊಸ ಪ್ರವೃತ್ತಿಯನ್ನು ಪ್ರಾರಂಭಿಸಿವೆ ಎಂದು ಹೇಳಿದರು.

ಭಾರತದ ಯುವ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡುವ ಮತ್ತು ರಾಷ್ಟ್ರವು ಜಾಗತಿಕ ಕ್ರೀಡಾ ಪರಿಸರ ವ್ಯವಸ್ಥೆಯ ಪ್ರಮುಖ ಕೇಂದ್ರವಾಗುವ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ಒತ್ತಿ ಹೇಳಿದರು. "ಆದ್ದರಿಂದ, 2029ರಲ್ಲಿ ʻಯೂತ್ ಒಲಿಂಪಿಕ್ಸ್ʼ ಮತ್ತು 2036ರಲ್ಲಿ ʻಒಲಿಂಪಿಕ್ʼ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ," ಎಂದು ಪ್ರಧಾನಿ ಹೇಳಿದರು. ಕ್ರೀಡೆ ಕೇವಲ ಮೈದಾನಕ್ಕೆ ಸೀಮಿತವಾಗಿಲ್ಲ, ಅದು ಯುವಕರಿಗೆ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬೃಹತ್ ಆರ್ಥಿಕತೆಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ತಮ್ಮ ʻಗ್ಯಾರಂಟಿʼಯನ್ನು ಪುನರುಚ್ಚರಿಸಿದರು. ಕಳೆದ 10 ವರ್ಷಗಳಲ್ಲಿ ಕ್ರೀಡಾ ಆರ್ಥಿಕತೆಯ ಪಾಲನ್ನು ಹೆಚ್ಚಿಸಲು ಮತ್ತು ಕ್ರೀಡಾ ಸಂಬಂಧಿತ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಕ್ರೀಡಾ ವೃತ್ತಿಪರರನ್ನು ಪೋಷಿಸಲು ಕೌಶಲ್ಯ ಅಭಿವೃದ್ಧಿ ಹಾಗೂ ದೇಶದಲ್ಲಿ ಕ್ರೀಡಾ ಸಲಕರಣೆಗಳ ಉತ್ಪಾದನೆ ಮತ್ತು ಸೇವೆಗಳ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.  ದೇಶದಲ್ಲಿ ಕ್ರೀಡಾ ವಿಜ್ಞಾನ, ನಾವೀನ್ಯತೆ, ಉತ್ಪಾದನೆ, ಕ್ರೀಡಾ ತರಬೇತಿ, ಕ್ರೀಡಾ ಮನೋವಿಜ್ಞಾನ ಮತ್ತು ಕ್ರೀಡಾ ಪೋಷಣೆಗೆ ಸಂಬಂಧಿಸಿದ ವೃತ್ತಿಪರರಿಗೆ ಸರ್ಕಾರ ವೇದಿಕೆಯನ್ನು ಒದಗಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ ಹಲವು ವರ್ಷಗಳಲ್ಲಿ ಭಾರತದ ಮೊದಲ ʻರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯʼ ಸ್ಥಾಪನೆ, ʻಖೇಲೋ ಇಂಡಿಯಾʼ ಅಭಿಯಾನದ ಅಡಿಯಲ್ಲಿ ದೇಶದಲ್ಲಿ 300ಕ್ಕೂ ಹೆಚ್ಚು ಪ್ರತಿಷ್ಠಿತ ಅಕಾಡೆಮಿಗಳ ರಚನೆ; 1,000 ʻಖೇಲೋ ಇಂಡಿಯಾ ಕೇಂದ್ರʼಗಳು ಮತ್ತು 30ಕ್ಕೂ ಹೆಚ್ಚು ʻಉತ್ಕೃಷ್ಟತಾ ಕೇಂದ್ರʼಗಳ ಸ್ಥಾಪನೆಯನ್ನು ಅವರು ಉಲ್ಲೇಖಿಸಿದರು. ದೇಶದ ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯಲ್ಲಿ, ಬಾಲ್ಯದಲ್ಲಿಯೇ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಕ್ರೀಡೆಯನ್ನು ಮುಖ್ಯ ಪಠ್ಯಕ್ರಮದ ಒಂದು ಭಾಗವಾಗಿ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

 

ಭಾರತದ ಕ್ರೀಡಾ ಉದ್ಯಮದ ಮೌಲ್ಯವು ಒಂದು ಲಕ್ಷ ಕೋಟಿ ರೂಪಾಯಿಗಳಿಗೆ ಬೆಳೆಯುವ ನಿರೀಕ್ಷೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕ್ರೀಡೆಯ ಬಗ್ಗೆ ಹೊಸ ಜಾಗೃತಿ ಮತ್ತು ಪ್ರಸಾರ, ಕ್ರೀಡಾ ಸಲಕರಣೆಗಳು, ಕ್ರೀಡಾ ಪ್ರವಾಸೋದ್ಯಮ ಮತ್ತು ಕ್ರೀಡಾ ಉಡುಪು ವ್ಯವಹಾರದಲ್ಲಿ ಬೆಳವಣಿಗೆಯನ್ನು ಉಲ್ಲೇಖಿಸಿದರು. ದೇಶದ ವಿವಿಧ ಭಾಗಗಳಲ್ಲಿ ಕ್ರೀಡಾ ಸಲಕರಣೆಗಳಿಗಾಗಿ ಉತ್ಪಾದನಾ ಕ್ಲಸ್ಟರ್ ಗಳನ್ನು ರಚಿಸುವ ನಿಟ್ಟಿನಲ್ಲಿ ಸರ್ಕಾರ  ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ʻಖೇಲೋ ಇಂಡಿಯಾʼ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕ್ರೀಡಾ ಮೂಲಸೌಕರ್ಯಗಳು ಉತ್ತಮ ಉದ್ಯೋಗದ ಮೂಲವಾಗುತ್ತಿವೆ ಎಂದು ಪ್ರಧಾನಿ ಗಮನಸೆಳೆದರು. ವಿವಿಧ ಕ್ರೀಡಾ ಲೀಗ್ ಗಳು ಸಹ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. "ಇಂದು, ಶಾಲೆಗಳು ಮತ್ತು ಕಾಲೇಜುಗಳಲ್ಲಿನ ನಮ್ಮ ಯುವಕರು, ಕ್ರೀಡೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸಿದ್ದಾದರೆ, ಅವರ ಉತ್ತಮ ಭವಿಷ್ಯಕ್ಕೂ ಮೋದಿಯವರ ಖಾತರಿ ಇದೆ," ಎಂದು ಪ್ರಧಾನಿ ಹೇಳಿದರು.

"ಭಾರತವು ಕ್ರೀಡೆಯಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಅಲೆಗಳನ್ನು ಸೃಷ್ಟಿಸುತ್ತಿದೆ" ಎಂದು ಹೇಳಿದ ಪ್ರಧಾನಿ, ನವ ಭಾರತವು ಹಳೆಯ ದಾಖಲೆಗಳನ್ನು ಮುರಿಯಲು ಮತ್ತು ಹೊಸ ದಾಖಲೆಯನ್ನು ಸೃಷ್ಟಿಸಲು ಪ್ರಾರಂಭಿಸಿದೆ ಎಂದು ಒತ್ತಿ ಹೇಳಿದರು. ಭಾರತದ ಯುವಜನರ ಸಾಮರ್ಥ್ಯ, ಅವರ ನಂಬಿಕೆ, ದೃಢನಿಶ್ಚಯ, ಮಾನಸಿಕ ಶಕ್ತಿ ಮತ್ತು ಗೆಲ್ಲುವ ಬಯಕೆಯ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು. ಇಂದಿನ ಭಾರತವು ಬೃಹತ್ ಗುರಿಗಳನ್ನು ಹೊಂದಬಲ್ಲದು ಮತ್ತು ಅವುಗಳನ್ನು ಸಾಧಿಸಬಲ್ಲದು ಎಂದು ಅವರು ಹೇಳಿದರು. ನೂತನ ವರ್ಷವು ಹೊಸ ದಾಖಲೆಗಳ ಸೃಷ್ಟಿಗೆ ಸಾಕ್ಷಿಯಾಗಲಿದೆ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಹೊಸ ಸಾಧನೆಗಳಿಗೆ ಸಾಕ್ಷಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ನೀವು ಮುಂದುವರಿಯಬೇಕು, ಏಕೆಂದರೆ ಆಗ ಭಾರತವೂ ನಿಮ್ಮೊಂದಿಗೆ ಮುಂದುವರಿಯುತ್ತದೆ. ಒಗ್ಗೂಡಿ, ಗೆಲ್ಲಿರಿ ಮತ್ತು ದೇಶವನ್ನು ಗೆಲ್ಲುವಂತೆ ಮಾಡಿ. ʻಖೇಲೋ ಇಂಡಿಯಾ ಯೂತ್ ಗೇಮ್ಸ್-2023ʼ ಆರಂಭವಾಗಿದೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ,", ಎಂದು ಹೇಳಿದ ಪ್ರಧಾನಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

 

ತಮಿಳುನಾಡು ರಾಜ್ಯಪಾಲ ಶ್ರೀ ಆರ್.ಎನ್.ರವಿ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ.ಸ್ಟಾಲಿನ್; ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್; ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಹಾಗೂ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ತಳಮಟ್ಟದ ಕ್ರೀಡಾ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ಅಚಲ ಬದ್ಧತೆಯು ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನ ಆರಂಭಕ್ಕೆ ದಾರಿ ಮಾಡಿತು. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 6ನೇ ʻಖೇಲೋ ಇಂಡಿಯಾ ಯೂತ್ ಗೇಮ್ಸ್-2023ʼರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮುಖ್ಯ ಅತಿಥಿಯಾಗಿದ್ದರು. ದಕ್ಷಿಣ ಭಾರತದಲ್ಲಿ ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ ನಡೆಯುತ್ತಿರುವುದು ಇದೇ ಮೊದಲು. 2024ರ ಜನವರಿ 19ರಿಂದ 31ರವರೆಗೆ ತಮಿಳುನಾಡಿನ ನಾಲ್ಕು ನಗರಗಳಾದ ಚೆನ್ನೈ, ಮದುರೈ, ತಿರುಚ್ಚಿ ಮತ್ತು ಕೊಯಮತ್ತೂರುಗಳಲ್ಲಿ ಕ್ರೀಡಾಕೂಟ ನಡೆಯಲಿದೆ.

 

ಕ್ರೀಡಾಕೂಟದ ಲಾಂಛನ ವೀರ ಮಂಗೈ. ವೀರ ಮಂಗೈ ಎಂದು ಪ್ರೀತಿಯಿಂದ ಕರೆಯಲ್ಪಡುವ ರಾಣಿ ವೇಲು ನಾಚಿಯಾರ್ ಅವರು ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಸಮರ ಸಾರಿದ ಭಾರತೀಯ ರಾಣಿ. ಈ ಲಾಂಛನವು ಭಾರತೀಯ ಮಹಿಳೆಯರ ಶೌರ್ಯ ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ, ಮಹಿಳಾ ಶಕ್ತಿಯ ಸಾಮರ್ಥ್ಯವನ್ನು ಸಾಕಾರಗೊಳಿಸುತ್ತದೆ. ಕ್ರೀಡಾಕೂಟದ ಲಾಂಛನವು ಕವಿ ತಿರುವಳ್ಳುವರ್ ಅವರ ಚಿತ್ರವನ್ನು ಒಳಗೊಂಡಿದೆ.

ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನ ಈ ಆವೃತ್ತಿಯಲ್ಲಿ 13 ದಿನಗಳ ಕಾಲ 15 ಸ್ಥಳಗಳಲ್ಲಿ 26 ಕ್ರೀಡಾ ವಿಭಾಗಗಳು, 275ಕ್ಕೂ ಹೆಚ್ಚು ಸ್ಪರ್ಧೆಗಳು ಮತ್ತು 1 ಡೆಮೊ ಕ್ರೀಡೆಯಲ್ಲಿ ಒಟ್ಟು 5600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.  ಕ್ರೀಡಾಕೂಟದ 26 ಕ್ರೀಡಾ ವಿಭಾಗಗಳು ವೈವಿಧ್ಯಮಯವಾಗಿದ್ದು ಫುಟ್ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಮುಂತಾದ ಸಮಕಾಲೀನ ಕ್ರೀಡೆಗಳ ಜೊತೆಗೆ ಕಲರಿಪಯಟ್ಟು, ಗಟ್ಕಾ, ಥಂಗ್ ತಾ, ಕಬಡ್ಡಿ ಮತ್ತು ಯೋಗಾಸನಗಳ ಸಾಂಪ್ರದಾಯಿಕ ಕ್ರೀಡೆಗಳನ್ನೂ ಒಳಗೊಂಡಿವೆ. ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ʻಸಿಲಂಬಮ್ʼ ಅನ್ನು ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ ಇತಿಹಾಸದಲ್ಲಿ ಮೊದಲ ಬಾರಿಗೆ ʻಡೆಮೊʼ ಕ್ರೀಡೆಯಾಗಿ ಪರಿಚಯಿಸಲಾಗುತ್ತಿದೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 250 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ʻಡಿಡಿ ತಮಿಳುʼ ಆಗಿ ʻನವೀಕರಿಸಿದ ಡಿಡಿ ಪೊಧಿಗೈʼ ವಾಹಿನಿಗೆ ಚಾಲನೆ; 8 ರಾಜ್ಯಗಳಲ್ಲಿ 12 ಆಕಾಶವಾಣಿ ʻಎಫ್ಎಂʼ ಯೋಜನೆಗಳು; ಜಮ್ಮು ಮತ್ತು ಕಾಶ್ಮೀರದಲ್ಲಿ 4 ʻದೂರದರ್ಶನʼ ಟ್ರಾನ್ಸ್‌ಮಿಟರ್ಗಳು ಇದರಲ್ಲಿ ಸೇರಿವೆ. ಇದಲ್ಲದೆ, ಪ್ರಧಾನಮಂತ್ರಿಯವರು 12 ರಾಜ್ಯಗಳಲ್ಲಿ 26 ಹೊಸ ʻಎಫ್ಎಂʼ ಟ್ರಾನ್ಸ್ಮಿಟರ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Womaniya' initiative of GeM, sees 27.6% growth, Rs 28,000 crore contracts awarded to women MSEs

Media Coverage

Womaniya' initiative of GeM, sees 27.6% growth, Rs 28,000 crore contracts awarded to women MSEs
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Katihar, Bihar
April 11, 2026
PM announces ex-gratia from PMNRF

Prime Minister Shri Narendra Modi today expressed profound grief over the tragic mishap in Katihar, Bihar, describing the incident as extremely painful.

The Prime Minister extended his heartfelt condolences to the families who have lost their loved ones and prayed for the earliest recovery of those who sustained injuries. Shri Modi further announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased, noting that Rs. 50,000 would be provided to those injured in the accident.

The Prime Minister wrote on X:

"The mishap in Katihar, Bihar, is extremely painful. Condolences to those who have lost their loved ones. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000."